Monday 18 December 2017

#### ಖಾಂಡವವನ ದಹನವಾದದ್ದು ಏಕೆ ? ####



ಖಾಂಡವವನ ಇಂದ್ರನ ಒಡೆತನದ ಒಂದು ಉದ್ಯಾನವನ. ಅದು ಅಗ್ನಿಯಿಂದ ಸುಟ್ಟು ಬೂದಿಯಾಯಿತು. ಒಮ್ಮೆ ವರುಣಲೋಕದಲ್ಲಿ ಹನ್ನೆರಡು ವರ್ಷಗಳ ಕಾಲ ಒಂದು ಯಜ್ಞ ನಡೆಯಿತು. ಅಷ್ಟೊಂದು ದೀರ್ಘಕಾಲ ನಿರಂತರವಾಗಿ ಅಗ್ನಿಗೆ ಹವಿಸ್ಸನ್ನು ನೀಡಲಾಯಿತು. ಇದರಿಂದಾಗಿ ಅಗ್ನಿಗೆ ಜೀರ್ಣ ಶಕ್ತಿಯು ಕುಗ್ಗಿ ಅಜೀರ್ಣವಾಯಿತು.
ಅಶ್ವಿನೀದೇವತೆಗಳು ದೇವತೆಗಳಿಗೆ ಫ್ಯಾಮಿಲಿ ಡಾಕ್ಟರು. ಸರಿ, ಅಗ್ನಿದೇವನು ತನ್ನ indigestion ಬಗ್ಯೆ ಅವರಲ್ಲಿ ಸಲಹೆಯನ್ನು ಕೇಳಿದ. ಆಗ ಅಶ್ವಿನೀದೇವತೆಗಳು ಖಾಂಡವವನದಲ್ಲಿ ಅಜೀರ್ಣವನ್ನು ಹೋಗಲಾಡಿಸುವಂಥಹ ಉತ್ತಮ ಗಿಡಮೂಲಿಕೆಗಳಿವೆ, ಅವುಗಳನ್ನು ಸೇವಿಸಿದರೆ ಅಗ್ನಿಮಾಂದ್ಯ ಕಡಿಮೆಯಾಗುತ್ತದೆ ಎಂದು ತಮ್ಮ ವೈದ್ಯಕೀಯ ಸಲಹೆ ಕೊಟ್ಟರು.
ಖಾಂಡವವನವನ್ನು ಪ್ರವೇಶಿಸುವುದು ಅಷ್ಟು ಸುಲಭದ ಕೆಲಸ ಅಲ್ಲ. ಅದು ಶಕ್ತಿವಂತನಾದ ಇಂದ್ರನ ಹಕ್ಕುದಾರಿಕೆಯಲ್ಲಿ ಇರುವಂಥಹದ್ದು. ಅದಕ್ಕಾಗಿ ಅಗ್ನಿಯು ಸಹಾಯ ಬೇಡಲು ಕೃಷ್ಣಾರ್ಜುನರಲ್ಲಿಗೆ ಹೋದ. ಬೆಂಕಿಯ ರೂಪದಲ್ಲಿಯೇ ಹೋದರೆ ಅವರು ತನ್ನ ದಗೆಯ ಎದುರು ನಿಲ್ಲಲು ಸಾಧ್ಯವಾಗುವುದಿಲ್ಲವಲ್ಲ. ಅದಕ್ಕಾಗಿ ಬ್ರಾಹ್ಮಣ ವೇಷದಿಂದ ಅವರಲ್ಲಿಗೆ ಹೋದ. ತಾನು ಬೆಂಕಿಯ ರೂಪದಲ್ಲಿ ಖಾಂಡವವನದಲ್ಲಿರುವ ಗಿಡಮೂಲಿಕೆಗಳನ್ನು ಸೇವಿಸುವಾಗ ಇಂದ್ರನು ಆತಂಕಪಡಿಸಿದರೆ ತನಗೆ ರಕ್ಷಣೆ ಕೊಡಬೇಕೆಂದು ಅವರಲ್ಲಿ ನಿವೇದಿಸಿ ಸಮ್ಮತಿ ಪಡೆದುಕೊಂಡ.
ಅದರಂತೆ ಅಗ್ನಿದೇವನು ಖಾಂಡವವನದಲ್ಲಿರುವ ತನ್ನ ಅಜೀರ್ಣ ನಿವಾರಕ ಗಿಡಮೂಲಿಕೆಗಳನ್ನು ಭುಂಜಿಸಲು ಶುರುಮಾಡಿದಾಗ ಸಹಜವಾಗಿ ಆ ವನ ಸುಡುವಂತಾಯಿತು. ಹೀಗೆ ಹದಿನೈದು ದಿನಗಳ ಕಾಲ [ ಒಂದು ಅಭಿಪ್ರಾಯ ] , ಇಪ್ಪತ್ತೊಂದು ದಿನಗಳ ಕಾಲ [ ಮತ್ತೊಂದು ಅಭಿಪ್ರಾಯ ] ಆ ವನವನ್ನು ಅಗ್ನಿಯು ದಹಿಸಿದ.
ಆಗ ಸಿಟ್ಟಿಗೆದ್ದ ಇಂದ್ರ ಅಗ್ನಿಯ ಮೇಲೆ ಯುದ್ಧಕ್ಕೆ ಬಂದ. ಅಗ್ನಿಯ ರಕ್ಷಣೆಗಾಗಿ ಮಾತುಕೊಟ್ಟಿದ್ದ ಅರ್ಜುನ ಇಂದ್ರನನ್ನು ಪ್ರತಿ ಯುದ್ಧ ಕೊಟ್ಟು ಸೋಲಿಸಿಬಿಟ್ಟ. ಬೆಂಕಿಯನ್ನು ನಂದಿಸುವುದಕ್ಕಾಗಿ ಇಂದ್ರನು ಮಳೆಯನ್ನೂ ಸುರಿಸಿದ. ಆಗ ಅರ್ಜುನನು ಶರಪಂಜರದಿಂದ ಆ ಮಳೆಯು ಅಗ್ನಿಯ ಮೇಲೆ ಬೀಳದಂತೆ ಮಾಡಿದ .
ಈ ಸನ್ನಿವೇಶದಲ್ಲಿ ಮಧ್ಯೆ ಬರುವ ಬೇರೆ ಒಂದೆರಡು ವಿಚಾರಗಳು ಇಲ್ಲಿ ಅನಗತ್ಯ.
ಅಂತೂ ಕೊನೆಗೆ ಇಂದ್ರನು ಕೃಷ್ಣಾರ್ಜುನರಲ್ಲಿಗೆ ಬಂದು ರಾಜಿ ಮಾಡಿಕೊಂಡು ಹೋದ. ಖಾಂಡವವನದಲ್ಲಿರುವ ಗಿಡಮೂಲಿಕೆಗಳನ್ನು ಯಶಸ್ವಿಯಾಗಿ ಸೇವಿಸಿ ಅಗ್ನಿದೇವನು ತನ್ನ ಅಜೀರ್ಣದ ಜಾಡ್ಯವನ್ನು ನಿವಾರಿಸಿಕೊಂಡ. ಇದು ಇಂದ್ರನ ಖಾಂಡವವನ ದಹನ -- ಅಗ್ನಿದೇವನ ಅಗ್ನಿಮಾಂದ್ಯ ಹರಣ.

~~~~~ ಎಂ. ಗಣಪತಿ ಕಾನುಗೋಡು.
ತಾರೀಖು : 16 -- 12 --2017.

Monday 6 November 2017

@@@ ರಾಮಾ ನಿನಗೆ ಎಲ್ಲರೂ ಸಮಾನರೇ ಅಲ್ಲವೇ ?. @@@


[ ಅಕ್ಬರ ಮತ್ತು ಬೀರಬಲ್ಲನ ಕಥೆಗಳು ]
~~~ ಎಂ. ಗಣಪತಿ ಕಾನುಗೋಡು.
ಅಕ್ಕಸಾಲಿಯೊಬ್ಬ ತನ್ನ ಮಗನಿಗೆ ತಮ್ಮ ಕಸುಬನ್ನು ಹೇಳಿಕೊಡುವ ಮೊದಲು ಅದರ ಮೂಲ ಗುಟ್ಟನ್ನು ಹೇಳಿಕೊಟ್ಟಿದ್ದ. ಯಾರೇ ಬಂಗಾರದ ಒಡವೆಯನ್ನು ಮಾಡಿಸಲು ತಮ್ಮ ಹತ್ತಿರ ಬಂದರೂ ಅದರಲ್ಲಿ ಸ್ವಲ್ಪ ಬಂಗಾರವನ್ನು ಕದಿಯಲೇಬೇಕು. ಇದು ವೃತ್ತಿ ಧರ್ಮ ಎಂದು ಹೇಳಿಕೊಟ್ಟಿದ್ದ. ಅವನ ಪ್ರಕಾರ ಇದು ಆ ಕಸುಬಿನ ಮೂಲಗುಟ್ಟು.
ತನಗೆ ವಯಸ್ಸಾಗಿ ಮಗನಿಗೆ ಅಂಗಡಿಯ ದಂಧೆಯನ್ನು ವಹಿಸಿಕೊಟ್ಟಿದ್ದ. ಆದರೂ ಮೇಲು ಹುಶಾರಿಗಾಗಿ ಅಂಗಡಿಯ ಮೂಲೆಯಲ್ಲಿ ಕುಳಿತುಕೊಂಡು ಮಗನ ವಹಿವಾಟನ್ನು ಗಮನಿಸುತ್ತಿದ್ದ. ತನ್ನ ಮಗ ಯಾರದ್ದೇ ಕೆಲಸಕ್ಕೆ ಅವರಿಂದ ಬಂಗಾರ ಪಡೆದು ಕೆಲಸ ಶುರುಮಾಡಿದ ಕೂಡಲೇ " ರಾಮ ರಾಮಾ ನಿನ್ನ ಕೆಲಸವನ್ನು ಮಾಡು " ಎಂದು ಮಗನಿಗೆ ಬಂಗಾರವನ್ನು ಹೊಡೆದುಕೊಳ್ಳುವ ನೆನಪನ್ನು ಸಾಂಕೇತಿಕವಾಗಿ ನೆನಪು ಮಾಡಿಕೊಡುತ್ತಿದ್ದ.
ಒಂದು ದಿನ ಅವನ ಮಗಳೇ ಒಡವೆ ಮಾಡಿಸಲಿಕ್ಕಾಗಿ ಅವನಲ್ಲಿಗೆ ಗಂಡನ ಮನೆಯಿಂದ ಬಂಗಾರವನ್ನು ತಂದು ಕೊಟ್ಟಳು. ತನ್ನ ತಮ್ಮ ತನಗೆ ಯಾವುದೇ ವಂಚನೆ ಇಲ್ಲದೆ ಕೆಲಸ ಮಾಡಿಕೊಡುತ್ತಾನೆ ಎನ್ನುವುದು ಅವಳ ನಂಬಿಕೆ. ತನ್ನ ಬಂಗಾರವನ್ನು ತಮ್ಮನಿಗೆ ಕೊಟ್ಟು ಕೆಲಸವನ್ನು ನೋಡುತ್ತಾ ಎದುರಿಗೇ ಕುಳಿತುಕೊಂಡಿದ್ದಳು. ಅಕ್ಕನ ಬಂಗಾರವನ್ನು ಬೆಂಕಿಗೆ ಹಾಕಿ ಕರಗಿಸಲಿಕ್ಕೆ ಮಗ ಅಕ್ಕಸಾಲಿ ಪ್ರಾರಂಭಿಸಿದ.
ಮೂಲೆಯಲ್ಲಿ ಕುಳಿತಿರುವ ತಂದೆಯ ಎಂದಿನ ಮಾತು ಪ್ರಾರಂಭವಾಯಿತು. " ರಾಮ ರಾಮಾ ನಿನ್ನ ಕೆಲಸವನ್ನು ಮಾಡು. ರಾಮಾ ನಿನಗೆ ಎಲ್ಲರೂ ಸಮಾನರೇ ಅಲ್ಲವೇ ? " ಎಂದು ಹೇಳಿದ. ಹೀಗೆ ಬಹಳ ಹೊತ್ತಾಯಿತು. ತನ್ನ ಮಾತನ್ನು ಮಗ ಗಮನಿಸಿದನೋ ಇಲ್ಲವೋ ಎಂದು ತಂದೆಯು ಪದೇ ಪದೇ ಅದೇ ಮಾತನ್ನು ಹೇಳತೊಡಗಿದ. ಆಗ ಮಗನಿಗೆ ಸಿಟ್ಟು ಬಂದು ಹೇಳಿಯೇಬಿಟ್ಟ.
" ಅಪ್ಪಾ, ಯಾಕೆ ಸುಮ್ಮನೆ ರಾಮ ರಾಮಾ ಎಂದು ಬಡಿದುಕೊಳ್ಳುತ್ತೀ. ರಾಮ ಲಂಕೆಯನ್ನು ಸುಲಿಗೆಮಾಡಿ ಬಹಳ ಸಮಯ ಆಯಿತು " ಎಂದು ಸಂಕೇತದ ಉತ್ತರವನ್ನು ಕೊಟ್ಟ.
.....................................................................................................
ನನ್ನ ಅನಿಸಿಕೆ : ' ಅಕ್ಕನ ಬಂಗಾರವಾದರೂ ಅಕ್ಕಸಾಲಿ ಅಕ್ಕಿಯಷ್ಟು ಬಂಗಾರವನ್ನು ಹೊಡೆಯುತ್ತಾನೆ ' ಎಂಬುದು ಹಳೆಯ ಗಾದೆ. ಇದರ ಅರ್ಥ ಯಾವುದೇ ವ್ಯವಹಾರಸ್ಥನೂ ಯಾರಿಂದಲಾದರೂ ತನ್ನ ಲಾಭವನ್ನು ಪಡೆಯದೇ ಇರುವುದಿಲ್ಲ ಎನ್ನುವ ವಾಸ್ತವಿಕ ಸತ್ಯ. ಯಾವುದೇ ಉದ್ಯೋಗದಲ್ಲಿಯೂ ಯಾರ ದಾಕ್ಷಿಣ್ಯಕ್ಕೆ ಒಳಗಾಗದೆ ಹಾಗಂತ ಅವರ ಮನಸ್ಸಿಗೆ ನೋವಾಗದಂತೆ ತನ್ನ ಪ್ರಯೋಜನವನ್ನು ಉಳಿಸಿಕೊಳ್ಳಬೇಕು, ಹೀಗೆ ತನ್ನ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು, ಅಂಥಹ ವೃತ್ತಿ ನೈಪುಣ್ಯತೆಯನ್ನು ಹೊಂದಿರಬೇಕು ಎನ್ನುವುದು ಈ ಕಥೆಯ ಸಂದೇಶ.
ತಾರೀಖು : 5 - 11 - 2015

ಯೋಗ ಪಟು ಕುಮಾರ ಚಂದನ್ K. R


ಕುಮಾರ ಚಂದನ್ K. R. ನಮ್ಮ ಊರಿನ ಯೋಗ ಚೆನ್ನಿಗ, ಕೀರ್ತಿಮುಕುಟ , 16 ವರ್ಷದ, PUC ಅಭ್ಯಾಸ ಮಾಡುತ್ತಿರುವ ಬಾಲಕ. ನಮ್ಮ ಊರಿನ ಮತ್ತೋರ್ವ ಯೋಗ ಪಟು ಸಂಧ್ಯಾ ಎಂ.ಎಸ್. ಇವಳ ಯೋಗಾಸನ ಹವ್ಯಾಸದ ಜೊತೆಗಾರ. ಶ್ರೀ ರಾಘವೇಂದ್ರ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಇವರ ಹೆಮ್ಮೆಯ ಪುತ್ರ.

ರಾಜ್ಯದ ಮತ್ತು ಅಂತರ ರಾಜ್ಯದ ಹಲವಾರು ಕಡೆಗಳಲ್ಲಿ ಯೋಗದ ವಿವಿಧ ಪ್ರಬೇಧಗಳನ್ನು ಪ್ರದರ್ಶಿಸಿ ಸೈ ಎನ್ನಿಸಿಕೊಂಡಿದ್ದಾನೆ. 2016 ಸಾಲಿನಲ್ಲಿ ಅಂದರೆ ಕಳೆದ ವರ್ಷ S G F I [ School Game Federation of India ] ಎನ್ನುವ ರಾಷ್ಟ್ರ ಮಟ್ಟದ ಸಂಸ್ಥೆಯು ನಡೆಸಿದ ಮತ್ತು Yoga Federation of India ಎನ್ನುವ ಮತ್ತೊಂದು ರಾಷ್ಟ್ರ ಮಟ್ಟದ ಸಂಸ್ಥೆಯು ನಡೆಸಿದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಿ ಅವಾರ್ಡನ್ನು ಪಡೆದಿರುತ್ತಾನೆ.

ಯೋಗಾಸನದಲ್ಲಿ ಹಲವಾರು ಬಗೆಗಳಿವೆ. ಎಲ್ಲವೂ ದಿನ ನಿತ್ಯ ಅಭ್ಯಾಸ ಮತ್ತು ಸಾಧನೆಯಿಂದಲೇ ದಕ್ಕಬೇಕಾದದ್ದು. ಇನ್ನು ಕೆಲವೊಂದು ಬಹಳ ಕಷ್ಟದ್ದು -- ಸಾಮಾನ್ಯ ಸಾಧನೆಗೆ ದಕ್ಕದ್ದಲ್ಲ. ಶರೀರವನ್ನು ಸಮತೋಲನದಲ್ಲಿಡಬೇಕಾದದ್ದೂ ಒಂದು ಇದರ ಸರ್ಕಸ್. ಮುಕ್ತಹಸ್ತ, ವೃಶ್ಚಿಕ , ಮುಕ್ತಹಸ್ತ-ಪದ್ಮ-ವೃಶ್ಚಿಕ , ಮುಕ್ತಹಸ್ತ- ದ್ವಿಪಾದ- ವಾಮದೇವ, ಮುಕ್ತಹಸ್ತ- ದೀಪ-ವೃಶ್ಚಿಕ, [ ಇವು ಮೂರು ಆಸನಗಳ ಸಂಯೋಗ ], ತ್ರಿಪುರಾಸನ, ತ್ರಿವಿಕ್ರಮಾಸನ, ನಟರಾಜ ಆಸನ, ಪಕ್ಷಾಸನ, ಗಂಡಬೇರುಂಡ, ಶಕುನ ಹೀಗೆ ಯೋಗದ ಹಲವಾರು ಆಸನಗಳಲ್ಲಿ ಪ್ರಸಿದ್ಧನಾಗಿದ್ದಾನೆ. ಈ ಪ್ರತಿಯೊಂದು ಆಸನಕ್ಕೂ ಅದರದ್ದೇ ಆದ ಅರ್ಥ, ಮನುಷ್ಯನ ಮಾನಸಿಕ ಮತ್ತು ದೈಹಿಕ ಚಿಕಿತ್ಸೆಯ ಉಪಯೋಗ , ಸೂಕ್ಷ್ಮ ತಂತ್ರಗಳು ಇವೆ.

'Yoga Federation of India '  ಸಂಸ್ಥೆಯವರು ತಾರೀಖು 24 -11 -2017 ರಂದು  ದೆಹಲಿಯಲ್ಲಿ ನಡೆಸಿದ  2017 ನೇ ಸಾಲಿನ  ಯೋಗಾಸನಾ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾನೆ. ಅದರಲ್ಲಿ ವಿಜೇತನಾಗಿ ಅಂತರ ರಾಷ್ಟ್ರದ ಯೋಗಾಸನಾ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಈ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲೂ ವಿಜೇತನಾಗಿ ಏಸಿಯನ್  ಯೋಗ ಫೆಡರೇಶನ್ ( ASIAN  YOGA  FEDERATION ) ನಡೆಸುವ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಇದರಲ್ಲಿ ವಿಜೇತನಾದರೆ  ಎಸಿಯನ್ ಕಪ್ ದೊರೆಯುತ್ತದೆ ಅನ್ನುವುದು ವಿಶೇಷ ಸಂಗತಿ.

S G F I ಸಂಸ್ಥೆಯು  ತಾರೀಖು 11 - 11  - 2017  ರಂದು  ಛತ್ತೀಸಗಡದಲ್ಲಿ ನಡೆಸಿದ  2017  ಸಾಲಿನ  ರಾಷ್ಟ್ರ ಮಟ್ಟದ ಯೋಗಾಸನಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುತ್ತಾನೆ. ಅಲ್ಲದೆ  ಅದರಲ್ಲಿಯೂ ವಿಜೇತನಾಗಿರುತ್ತಾನೆ ಎನ್ನುವುದು ಮತ್ತೊಂದು ಹೆಮ್ಮೆಯ ಸಂಗತಿ.

ಕಳೆದ ಜೂನ್ ತಿಂಗಳಿನಲ್ಲಿ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯದ ಆಯುಶ್ ಇಲಾಖೆಯವರು ಮೈಸೂರಿನಲ್ಲಿ ನಡೆಸಿದ 2017 -- 18 ಸಾಲಿನ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾನೆ.
ಹೊರ ರಾಜ್ಯಗಳಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಎರಡು ಸಲ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾನೆ.

ಕಳೆದ ವರ್ಷ ಅಂತರ ರಾಷ್ಟ್ರ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದರೂ 10 ನೆ ತರಗತಿಯ ಅಭ್ಯಾಸದ ಒತ್ತಡ ಇದ್ದ ಕಾರಣ ಆ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ಎಲ್ಲಾ ಸ್ಪರ್ಧೆಗಳಲ್ಲಿ ಆತ ಭಾಗವಸಿದ್ದುದರ ವಿಶೇಷವೆಂದರೆ ಆ ಸ್ಪರ್ಧೆ ಕೇವಲ 14 ವರುಷದಿಂದ 17 ವರ್ಷದ ಮಕ್ಕಳಿಗೆ ಮಾತ್ರ ಎನ್ನುವುದು. ಈ ಚಿಕ್ಕ ವಯಸ್ಸಿನಲ್ಲಿ ಇಂಥಹ ಸಾಧನೆ ಅವನದು ಎನ್ನುವುದು ಪ್ರಶಂಸನಾರ್ಹ.

ಯೋಗಾಸನದ ಪ್ರತಿಭೆಯನ್ನು ಪರಿಗಣಿಸಿ ಅವನನ್ನು ಅನೇಕ ಕಡೆ ಸನ್ಮಾನಿಸಲಾಗಿದೆ..
ಈ ತನಕ ಚಿನ್ನದ ಪದಕ 16, ಬೆಳ್ಳಿಯ ಪದಕ 6, ಕಂಚಿನ ಪದಕ 2 ಸೇರಿ ಒಟ್ಟು 24 ವಿಶೇಷ ಪದಕಗಳು, ನೂರಾರು ಪ್ರಶಸ್ತಿ ಪತ್ರಗಳನ್ನು ಕುಮಾರ ಚಂದನ್ ಯೋಗಾಸನದ ಹೆಗ್ಗಳಿಕೆಯಲ್ಲಿ ಬಾಚಿಕೊಂಡಿದ್ದಾನೆ. ಪಡೆದ ಸ್ಮರಣಿಕೆಗಳು ನೂರಾರು, ಸನ್ಮಾನ ಪತ್ರಗಳು ಹಲವಾರು. ಇವೆಲ್ಲದರ ಜೊತೆಗೆ 'ಯೋಗ ರತ್ನ' ಎನ್ನುವ ಬಿರುದು ಕೂಡಾ ಅವನ ಸಾಹಸಕ್ಕೆ ಸಂದಿದೆ.

ಇಂದು ಸಾಗರದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಗರ ಕನ್ನಡ ಸಾಹಿತ್ಯ ಪರಿಷತ್ತಿನವರು ಮತ್ತು ನಮ್ಮ ಊರಿನಲ್ಲಿ ತ್ರಿವೇಣಿ ಮಹಿಳಾ ಮಂಡಳಿಯವರು ಕುಮಾರಿ ಸಂಧ್ಯಾ ಮತ್ತು ಕುಮಾರ ಚಂದನ್ ಅವರನ್ನು ಯೋಗಾಸನ ಪ್ರತಿಭೆಗಳೆಂದು ಗುರುತಿಸಿ ಸನ್ಮಾನಿಸಿದ್ದಾರೆ.


ಯೋಗಾಸನದಲ್ಲಿ ಇಷ್ಟೆಲ್ಲಾ ಹೆಗ್ಗಳಿಕೆಯನ್ನು ಹೊಂದಿದ ಕುಮಾರ ಚಂದನ್ K. R. ನಮ್ಮ ಊರಿನ ಮಗ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.


ತಾರೀಖು : 12 - 05 - 2017.
ಕನ್ನಡ ರಾಜ್ಯೋತ್ಸವದ ದಿನ.






ಯೋಗಾಸನ ಪಟು ಎಂ. ಎಸ. ಸಂಧ್ಯಾ

ನಮ್ಮ ಊರಿನ ಹದಿ ಹರೆಯದ ಚೆಲುವೆ , ಕೀರ್ತಿ ಪತಾಕೆ, ಯೋಗಾಸನ ಪಟು ಎಂ. ಎಸ. ಸಂಧ್ಯಾ. ಶ್ರೀ ಶ್ರೀಧರಮೂರ್ತಿ ಮತ್ತು ಶ್ರೀಮತಿ ಸುಧಾ ಇವರ ಹೆಮ್ಮೆಯ ಪುತ್ರಿ.
ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಈಗ ಅಂತರ ರಾಷ್ಟ್ರ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಪ್ರಾಥಮಿಕ 9 ನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ 14 ವರ್ಷದ ಹಸುಳೆ. ನಾಲ್ಕು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು ಅಭ್ಯಾಸಕ್ಕೂ ಮೀರಿ ವಿವಿಧ ಯೋಗ ಪ್ರಭೇಧಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದ ಹೊರಗೆ ಹಲವಾರು ಕಡೆ ಪ್ರದರ್ಶಿಸಿದ ವಿಶೇಷ ಪ್ರತಿಭೆ. .
ರಾಷ್ಟ್ರ ಮಟ್ಟಕ್ಕೆ ಮತ್ತು ಹೊರ ರಾಜ್ಯ ವಲಯದಲ್ಲಿ ಕರ್ನಾಟಕವನ್ನು ಮೂರು ಸಾರಿ ಪ್ರತಿನಿಧಿಸಿ ಎಲ್ಲಾ ಕಡೆಯಿಂದಲೂ ಬಂಗಾರದ ಪದಕ, ಪ್ರಶಸ್ತಿ ಪತ್ರಗಳನ್ನು ಕರ್ನಾಟಕ ರಾಜ್ಯಕ್ಕೆ, ನಮ್ಮ ಊರಿಗೆ ಬಾಚಿ ತಂದ ಹೆಮ್ಮೆಯ ಬಾಲೆ.
ಯೋಗ ಫೆಡರೇಶನ್ ಆಫ್ ಇಂಡಿಯಾ ಮಟ್ಟದ ಯೋಗ ಸ್ಪರ್ಧೆ ಮತ್ತು ರಾಜ್ಯ ಮಟ್ಟದ ಫೆಡರೇಶನ್ ಯೋಗ ಸ್ಪರ್ಧೆಯಲ್ಲಿ ಉನ್ನತ ಸ್ಥಾನವನ್ನು ಗಳಿಸಿಕೊಂಡಿದ್ದಾಳೆ.
ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಭಾರತ ರಾಷ್ಟ್ರ ಮಟ್ಟದ S G F T competition ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ವೈಯುಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಪಡೆದ ಏಕೈಕ ವಿದ್ಯಾರ್ಥಿನಿ.
ಪ್ರಸ್ತುತ ಏಶಿಯನ್ ಫೆಡರೇಶನ್ ಕಪ್ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಸುತ್ತಿದ್ದಾಳೆ.
ಒಂದು ದಿಕ್ಕಿನಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿನಿಯಾಗಿದ್ದರೆ ಮತ್ತೊಂದು ದಿಕ್ಕಿನಲ್ಲಿ ಕೆಲವು ಮಕ್ಕಳಿಗೆ ಯೋಗವನ್ನು ಕಲಿಸುತ್ತಿರುವ ಯೋಗ ಗುರುವಾಗಿದ್ದಾಳೆ.
ಸುಮಾರು 65 ಬಂಗಾರದ ಪದಕಗಳು, 2 ಬೆಳ್ಳಿ, 2 ಕಂಚಿನ ಪದಕಗಳು, ನೂರಾರು ಸ್ಮರಣಿಕೆಗಳು ಅವಳ ಮಡಿಲಿಗೆ, ಅಲ್ಲ, ನಮ್ಮ ಊರಿನ ಮಡಿಲಿಗೆ ಅವಳಿಂದಾಗಿ ಸೇರಿವೆ.
ಯೋಗರತ್ನ, ಯೋಗದ ಧ್ರುವತಾರೆ, ಚಿನ್ನದ ಹುಡುಗಿ, ಮಲೆನಾಡು ಯೋಗ ಕುಮಾರಿ, ಯೋಗ ಕುಮಾರಿ, ಎರಡು ಸಾರಿ ಚಾಂಪಿಯನ್ ಆಫ್ ಚಾಂಪಿಯನ್ ಬಿರುದು ಇವು ಆಕೆ ಪಡೆದ ಬಿರುದಾವಳಿಗಳು ಮತ್ತು ಪ್ರಶಸ್ತಿಗಳು.
ಹಲವಾರು ಸನ್ಮಾನಗಳು, ಸನ್ಮಾನ ಪತ್ರಗಳು ಅವಳಿಗೆ ಸಂದಿವೆ. ಇಂದು ಸಂಜೆ ನಮ್ಮ ಊರಿನ ತ್ರಿವೇಣಿ ಮಹಿಳಾಮಂಡಳಿಯವರು ಆಕೆಯನ್ನು ಗ್ರಾಮಸ್ಥರ ಎದುರು ಸನ್ಮಾನಿಸಿ ತಮಗೆ ಗೌರವ ತಂದುಕೊಂಡಿದ್ದಾರೆ. ಈ ಹೆಮ್ಮೆಯ ಪುತ್ರಿ ಎಂ. ಎಸ್. ಸಂಧ್ಯಾ ನಮ್ಮ ಊರಿನ ಮಗಳು ಎನ್ನುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ. ಇವಳ ಜೊತೆಗೆ ಅದೇ ಮಟ್ಟದಲ್ಲಿ ಯೋಗ ಪ್ರದರ್ಶನದಲ್ಲಿ ನಮ್ಮ ಊರಿನ ಮತ್ತೊಂದು ಪ್ರತಿಭೆ ಕುಮಾರ ಚಂದನ ಕೆ. ಆರ್.[ 16 ವರ್ಷ ]. ಅದರ ಮಾಹಿತಿಯನ್ನು ಪ್ರತ್ಯೇಕ ತಿಳಿಸಲಾಗುತ್ತದೆ.
( 1- November - 2017 - M Ganapathi Kangod)




Monday 2 October 2017

%%%%% ಹೆಣದ ಹಿಂದೆ ಜನ ಕ್ಯೂನಲ್ಲಿ ಸಾಗುತಿದ್ದುದು ತಮ್ಮ ಸರದಿಗೋ ?. %%%%%


~~~~~ ಎಂ. ಗಣಪತಿ. ಕಾನುಗೋಡು.
ಮೊನ್ನೆ ನಮ್ಮ ಹತ್ತಿರದ ನಗರದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಒಂದು ಹೆಣವನ್ನು ಹೊತ್ತು ಒಯ್ಯುತ್ತಿದ್ದರು. ಅದರ ಮುಂದೆ ಸತ್ತವನ ಮೊಮ್ಮಗ ಮಡಿಕೆಯಲ್ಲಿ ಅಗ್ನಿಯನ್ನು ಹಿಡಿದು ಸಾಗುತ್ತಿದ್ದ. ಅವನ ಹಿಂದೆ ಅವನು ಸಾಕಿದ ನಾಯಿ ಅವನನ್ನೇ ಹಿಂಬಾಲಿಸುತ್ತಿತ್ತು.
ಸಂಬಂಧಿಕರು ಒಂದು ಗುಂಪಾಗಿ ದುಃಖದಿಂದ ಹೆಣದ ಹಿಂದೆ ನಡೆದು ಹೋಗುತ್ತಿದ್ದರು. ಅವರ ಹಿಂದೆ ಸುಮಾರು ಹತ್ತು ಹದಿನೈದು ಜನ ' ಕ್ಯೂ ' ನಲ್ಲಿ ಖುಷಿಯಿಂದ ನಗುಮುಖದಿಂದಲೇ ಅವರನ್ನು ಹಿಂಬಾಲಿಸುತ್ತಿದ್ದರು.
ಶ್ಮಶಾನವನ್ನು ತಲುಪಬೇಕಿದ್ದರೆ ನಗರದ ಮಧ್ಯೆಯೇ ಸುಮಾರು ದೂರ ಹೆಣ ಸಾಗಬೇಕಾಗಿತ್ತು. ದಾರಿಯಲ್ಲಿ ಓಡಾಡುತ್ತಿದ್ದ ಜನ, ಅಂಗಡಿ ಮುಂಗಟ್ಟಿನಲ್ಲಿ ಇದ್ದ ಜನ, ಅಲ್ಲಲ್ಲಿ ಮನೆಯ ಮುಂದೆ ನಿಂತ ಜನ ಹೀಗೆ ಈ ದೃಶ್ಯವನ್ನು ನೋಡಿದವರಿಗೆ ಇದು ಒಂದು ಥರ ಕುತೂಹಲವೆನ್ನಿಸಿತು. ಏಕೆಂದರೆ ಒಂದಷ್ಟು ಮಂದಿ ದುಃಖದಿಂದ ಹೆಣವನ್ನು ಸುತ್ತುವರಿದುಕೊಂಡು ಗುಂಪಾಗಿ ಹೋಗುತ್ತಿದ್ದಾರೆ. ಇನ್ನು ಕೆಲವರು ಅವರ ಹಿಂದೆ ಸಾಲಾಗಿ ಸಂತೋಷದಿಂದ ಮುನ್ನೆಡೆಯುತ್ತಿದ್ದಾರೆ. ಏನಿದು..... ?, ಏನಿರಬಹುದು ..........?, ತಾವೂ ಸಾವಿನಲ್ಲಿ ಸತ್ತವನನ್ನು ಅನುಸರಿಸಲು ಅಷ್ಟು ಸಂತೋಷದಿಂದ ಸರದಿಯಲ್ಲಿ ಮುಂದೆ ನುಗ್ಗುತ್ತಿದ್ದಾರಾ ? ಎಂದು ಹಲವು ಬಗೆಯಲ್ಲಿ ಯೋಚಿಸ ಹತ್ತಿದರು.
ಇದಿಷ್ಟಕ್ಕೂ ನಡುನಡುವೆ ಆಗಾಗ ಒಬ್ಬೊಬ್ಬರಾಗಿಯೇ ಹೊರಗಿನಿಂದ ಬಂದು ' ಇವರು ಸತ್ತದ್ದು ಹೇಗೆ ? ಎಂದು ಗುಟ್ಟಾಗಿ ಅಗ್ನಿಯನ್ನು ಹಿಡಿದುಕೊಂಡ ಮೊಮ್ಮಗನ ಕಿವಿಯಲ್ಲಿ ಪ್ರಶ್ನೆ ಮಾಡುತ್ತಿದ್ದರು. ಅದಕ್ಕೆ ಅವನು ಏನನ್ನೋ ಗುಟ್ಟಾಗಿಯೇ ಉತ್ತರವನ್ನು ಕೊಡುತ್ತಿದ್ದ. ಹಾಗೆಯೇ ತಕ್ಷಣ ಆ ವ್ಯಕ್ತಿ ಹಿಂದಿನ ' ಕ್ಯೂ ' ನಲ್ಲಿ ಸೇರಿಕೊಳ್ಳುತ್ತಿದ್ದ. ಆ ' ಕ್ಯೂ' ಉದ್ದ ಬೆಳೆದದ್ದು ಹೀಗೆಯೇ.
ನಾನು ಹೇಗೋ ಆ ಸಂದರ್ಭಕ್ಕೆ ಅಲ್ಲಿಗೆ ಹೋಗಿದ್ದೆ. ನನಗೂ ಈ ದೃಶ್ಯವನ್ನು ನೋಡಿ ಕುತೂಹಲ ಕೆರಳಿತು. ಆ ಮೊಮ್ಮಗನ ಕಿವಿಯಲ್ಲಿ ಅವರೇನು ಕೇಳುತ್ತಿದ್ದಾರೆ, ಅದಕ್ಕೆ ಅವನೇನು ಉತ್ತರವನ್ನು ಕೊಡುತ್ತಿದ್ದಾನೆ, ಹಾಗೆ ಕೇಳಿಸಿಕೊಂಡವರು ತಕ್ಷಣ ' ಕ್ಯೂ ' ನಲ್ಲಿ ಏಕೆ ಸೇರಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ನನ್ನನ್ನು ಇನ್ನಷ್ಟು ಕುತೂಹಲಕ್ಕೀಡು ಮಾಡಿತು.
ಅಷ್ಟೊತ್ತಿಗೆ ಮತ್ತೊಬ್ಬ ಬಂದು ಆ ಮೊಮ್ಮಗನ ಕಿವಿ ಕಚ್ಚಲು ಶುರುಮಾಡಿದ. ವಿಷಯ ತಿಳಿದುಕೊಳ್ಳಲು ಈ ಸಮಯಕ್ಕೆ ಮೊಮ್ಮಗನ ಪಕ್ಕಕ್ಕೆ ಸೇರಿಕೊಂಡಿದ್ದ ನಾನು ಅವರಿಬ್ಬ ಗುಟ್ಟಿನ ಸಂಭಾಷಣೆಗೆ ಕಿವಿಯನ್ನು ಕೊಟ್ಟೆ. ಅದನ್ನು ಕೇಳಿ ನನಗೆ ತಲೆಯೇ ಕೆಟ್ಟು ಹೋಯಿತು. ಏಕೆ ?.
ಅವನ ಪ್ರಶ್ನೆ ಮತ್ತು ಮೊಮ್ಮಗನ ಉತ್ತರ ಹೀಗಿತ್ತು.
" ಇವರು ಸತ್ತದ್ದು ಹೇಗೆ ? ".
" ಮೊನ್ನೆ ನಾನು ಸಾಕಿದ ಈ ನಾಯಿ ನನ್ನ ಅಜ್ಜನನ್ನು ಕಚ್ಚಿತು. ಅದು ಕಚ್ಚಿ ಎರಡೇ ದಿನಗಳಲ್ಲಿ ನನ್ನ ಅಜ್ಜ ಸತ್ತು ಹೋದ ".
" ಹಾಗಾದರೆ ನಿನ್ನ ನಾಯಿಯನ್ನು ನನಗೆ ಒಂದು ವಾರದ ಮಟ್ಟಿಗೆ ಬಾಡಿಗೆಗೆ ಕೊಡು. ಅದಕ್ಕೆ ಬಾಡಿಗೆಯಾಗಿ ಒಂದು ಲಕ್ಷ ರುಪಾಯಿ ಕೊಡುತ್ತೇನೆ ".
ಅದಕ್ಕೆ ಉತ್ತರ ಪಡೆದವನು ತನ್ನ ಮೊದಲಿನವರಂತೆ ತಕ್ಷಣ ' ಕ್ಯೂ ' ನಲ್ಲಿ ಹೋಗಿ ನಿಂತದ್ದೂ ಆಯಿತು.
ಹಾಗಾದರೆ ಮೊಮ್ಮಗ ಹೇಳಿದ್ದೇನು ?.
" ಅದಕ್ಕಿಂತಲೂ ಹೆಚ್ಚು ಕೊಡುತ್ತೇನೆ ಎಂದು ಕೇಳಿದವರು ನಿಮಗಿಂತ ಮುಂಚೆ ' ಕ್ಯೂ ' ನಲ್ಲಿ ಇದ್ದಾರೆ. ಆದ್ದರಿಂದ ನಿಮಗೇ ತಕ್ಷಣವೇ ಕೊಡಲು ಸಾಧ್ಯವಿಲ್ಲ. ಬೇಕೇಬೇಕೆಂದಿದ್ದರೆ ಅದಕ್ಕಿಂತ ಹೆಚ್ಚು ಕೊಡಬೇಕು, ' ಕ್ಯೂ ' ನಲ್ಲಿ ಕಾಯಿರಿ. ".
ತಾರೀಖು : 23 - 9 - 2015 .
ವಿಷಯದ ಕೃಪೆ : ಸುಧಾ ವಾರಪತ್ರಿಕೆ.

#### ರಾಮಾಯಣದಲ್ಲಿ ಹನುಮಂತನನ್ನು ಸೃಷ್ಟಿಸಿದವರು ಯಾರು ?. ಹನುಮಂತ ರಾಮನ ಬಂಟನಾದದ್ದು ಹೇಗೆ ? ####


ಮೇರು ಪರ್ವತದಲ್ಲಿ ಕೇಸರಿ ಎನ್ನುವ ವಾನರ ರಾಜ ಮತ್ತು ಆತನ ಹೆಂಡತಿ ಅಂಜನೆಗೆ ಮಗನಾಗಿ ಹುಟ್ಟಿದವ ಹನುಮಂತ. ಮಕ್ಕಳಾಗದಿದ್ದಾಗ ಅವರು ತಮ್ಮ ಕುಲದೇವರಾದ ವಾಯುದೇವರನ್ನು ಕುರಿತು ಪ್ರಾರ್ಥಿಸಿ ವಾಯುವಿನ ಅನುಗ್ರಹದಿಂದ ಹನುಮಂತನನ್ನು ಪಡೆದರು. ಕೇಸರಿಯ ಮಗನಾದ್ದರಿಂದ ಕೆಸರಿನಂದನ, ಅಂಜನೆಯ ಮಗನಾದ್ದರಿಂದ ಆಂಜನೇಯ, ವಾಯುವಿಗೆ ಮರುತ್ ಎನ್ನುವ ಹೆಸರಿರುವುದರಿಂದ ಮಾರುತಿ ಎನ್ನುವ ಹೆಸರುಗಳು ಬಂತು.
ಹನುಮಂತ ಬಂಟನಾಗಿಲ್ಲ. ಆತ ರಾಜನ -- ವಾನರ ರಾಜನ -- ಮಗ. ಹನುಮಂತ ಸುಗ್ರೀವನ ಮಂತ್ರಿಯೂ ಹೌದು. ಆದ್ದರಿಂದ ಆತ ಬಂಟನಲ್ಲ. ರಾಮನು ಯಾರೆಂದು ಪರೀಕ್ಷಿಸಲು, ತಿಳಿದುಕೊಳ್ಳಲು ಸುಗ್ರೀವನ ಆದೇಶದ ಮೇರೆಗೆ ಹನುಮಂತ ರಾಮನ ಹತ್ತಿರ ಬಂದಿದ್ದ. ವಟುವಿನ ವೇಷ ಧರಿಸಿ ರಾಮನ ಬಳಿ ಹೋದಾಗ ರಾಮನ ತೇಜಸ್ಸು, ಮಾತು, ಗಾಂಭೀರ್ಯ ಎಲ್ಲವನ್ನು ನೋಡಿ ಹನುಮಂತ ಮರುಳಾಗಿಬಿಟ್ಟ. ಹೀಗಾಗಿ ರಾಮನ ಬಾಲಿ ಇರಲು ಇಚ್ಛಿಸಿದರಾಮನೇ ಹೇಳುತ್ತಾನೆ ' ಹನುಮಂತ ತನ್ನ ಮಿತ್ರ, ಆತ ಮಾಡಿದ ಸಹಾಯವನ್ನು ತೀರಿಸಲಿಕ್ಕಾಗುವುದಿಲ್ಲ, ನಾನು ಅವನಿಗೆ ಋಣಿ ' ಎಂದಿದ್ದಾನೆ. ಆದರೆ ಹನುಮಂತನೇ ತಾನು ರಾಮನ ದಾಸ ಎಂದುಕೊಳ್ಳುತ್ತಾನೆ. ಆದ್ದರಿಂದ ಹನುಮಂತ ಬಂಟನಲ್ಲ. ಸ್ವಇಚ್ಹೆಯಿಂದ ರಾಮನ ಆಪ್ತ ತಾನು ಎಂದು ಹೇಳಿಕೊಳ್ಳುತ್ತಾನೆ.
~~~~ ಸತ್ಯದರ್ಶನ ಖ್ಯಾತಿಯ ಡಾ.ಪಾವಗಡ ಪ್ರಕಾಶರಾವ್ [ ಸತ್ಯಪ್ರಕಾಶ -- 2 ].

-ಎಂ ಗಣಪತಿ , ಕಾನುಗೋಡು 

ಹೀಗೆ ಸುಮ್ಮನೆ,

ಈಗ ಬೀಳುತ್ತಿರುವುದು 'ಹಸ್ತೆ' ಮಳೆ. [ 27 - 9 - 2017 ರಿಂದ 10 - 10 - 2017 ] ಇದು ಹನಿಯಿಕ್ಕಬೇಕು.ದುಮ್ಮೆದ್ದು ಹೊಯ್ಯಬಾರದು ಎಂದು ಎಂದಿನ ಅಭಿಪ್ರಾಯ. ' ಹಸ್ತೆ ಹನುಕಿ ಚಿತ್ತೆ ಬರಸಿ ಸತಿ ದುಮ್ಮೆದ್ದು ಹೊಯ್ದಾಗ ಸಮೃದ್ಧಿಯಾಗುವುದು ' ಎಂದು ಬಲ್ಲವರ ಮಾತು. ಆಗ ಬೆಳೆ,ಫಸಲು ಚೆನ್ನಾಗಿ ಆಗುತ್ತದೆ. ಕಾಳು ಚೆನ್ನಾಗಿ ತುಂಬುತ್ತದೆ. ವಜನ ಬರುತ್ತದೆ. ಅಡಕೆಯೂ ಫಸಲು ತುಂಬಿಬರುತ್ತದೆ ಎನ್ನುತ್ತಾರೆ. ಫಸಲು ಗುತ್ತಿಗೆ ಹಿಡಿಯುವವರು ಇದನ್ನೆಲ್ಲಾ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಈಗ ಭತ್ತದ ಬೆಳೆ ಕೋಲು ಹೊಡೆಯಾಗಿರುತ್ತದೆ. ಅಂದರೆ ಅದು ತೆನೆಯಾಗಿ ಇನ್ನೂ ಅದರ ಎಲೆಗಳ ಸುತ್ತ ಮುಚ್ಚಿಕೊಂಡಿರುತ್ತದೆ. ಮೇಲ್ಭಾಗ ತೆರೆದುಕೊಂಡಿರುತ್ತದೆ. ಜೋರು ಮಳೆಯಾದರೆ ಅದರೊಳಗೆ ನೀರು ಮೀರಿ ಹೊಕ್ಕು ಭತ್ತ ಜೋಳ್ಳಾಗುತ್ತದೆ. ಹಸ್ತೆ ಮಳೆ ಅದಕ್ಕೆ ಆತಂಕ ಮಾಡದೆ ಬೆಳೆಯ ಸಮೃದ್ಧಿಗೆ ಪೂರಕವಾಗುತ್ತದೆ. ಚಿತ್ತೆ ಮಳೆ [೧೧-೧೦-೨೦೧೭ ರಿಂದ ೨೩-೧೦-೨೦೧೭ ] ಬರಸಬೇಕು.ಅದು ಬಂದರೆ ಬೆಳೆಗಳಿಗೆ ಹುಳು ಬೀಳುತ್ತದೆ. ಆ ಹುಳುವನ್ನು ನಿವಾರಿಸಲು ವಿಶಾಖೆ ಮಳೆ ಬೀಳಬೇಕು [೭-೧೧-೨೦೧೭ ರಿಂದ ೧೮-೧೧-೨೦೧೭] 'ಸ್ವಾತಿ ' ಮಳೆ [೨೪-೧೦-೨೦೧೭ ರಿಂದ ೬-೧೧-೨೦೧೭ ] ಚೆನ್ನಾಗಿ ಬರಬೇಕು. ಸ್ವಾತಿ ಮಳೆಯ ನೀರಿನಿಂದ ಹಾಲನ್ನು ಹೆಪ್ಪಿಡುತ್ತಾರೆ. ಅದು ಮರುದಿನ ಮೊಸರಾಗುತ್ತದೆ. ಒಂದು ಲೀಟರು ಹಾಲಿಗೆ ಸುಮಾರು ಐವತ್ತು ಮಿ. ಲೀ. ಸ್ವಾತಿ ನೀರು ಬೇಕಾಗಬಹುದು. ಹಳೆ ಮಜ್ಜಿಗೆಯನ್ನು ತೆಗೆದು ಹೊಸ ಮೊಸರನ್ನು ಮಾಡುವ ಈ ಕ್ರಮ ಬಹಳ ಹಿಂದಿನಿಂದ ಬಂದ ಸಂಪ್ರದಾಯ. ~~~~ ಎಂ.ಗಣಪತಿ ಕಾನುಗೋಡು.

ದಿವಂಗತ ಶಿರೂರು ವೆಂಕಮ್ಮ.

ದಿವಂಗತ ಶಿರೂರು ವೆಂಕಮ್ಮ. ನನ್ನ ತಾಯಿಯ ಚಿಕ್ಕಮ್ಮ. ನನ್ನ ಪ್ರೀತಿಯ ಅಜ್ಜಿ. ಚಿಕ್ಕ ವಯಸ್ಸಿನಲ್ಲಿ ಗಂಡ ಮತ್ತು ಏಕ ಮಾತ್ರ ಮಗನನ್ನು ಕಳೆದುಕೊಂಡವಳು. ಅತಿ ಬಡತನ, ಶಿಥಿಲವಾದ ಸಣ್ಣ ಮನೆ. ಕಷ್ಟದ ಸ್ಥಿತಿಯಲ್ಲಿ ಚಿಕ್ಕವಯಸ್ಸಿನ ವಿಧವಾ ಸೊಸೆ ಮತ್ತು ಆರು ಮಂದಿ ಚಿಕ್ಕ ಮೊಮ್ಮಕ್ಕಳನ್ನು ಬೆಳಸಿ ಮುನ್ನಡೆಸಿದವಳು. ತನ್ನ ಮನೆಯವರನ್ನಲ್ಲದೆ ನಮ್ಮೆಲ್ಲರನ್ನೂ ಬಹಳವಾಗಿ ಪ್ರೀತಿಸಿದವಳು. ಅಕ್ಕಿಯ ಡಬ್ಬ ಖಾಲಿಯಾದರೂ ಅವಳ ಮನೆಗೆ ನೆಂಟರು ಖಾಲಿಯಾಗುತ್ತಿರಲಿಲ್ಲ. ಅದಕ್ಕೆ ಕಾರಣ ಅವಳು ಜನರಿಗೆ ತೋರಿಸುತ್ತಿದ್ದ ಪ್ರೀತಿ, ವಾತ್ಸಲ್ಯ. ನೆಂಟರಿಗೆ ಅನ್ನ ಮಾಡಿ ಬಡಿಸಿ ತಾನು ಮತ್ತು ಮನೆಯವರು ಗುಟ್ಟಾಗಿ ಗಂಜಿ ಸುರಿದದ್ದು ಹಲವು ಬಾರಿ. ಅನೇಕ ಕಾಹಿಲೆಗಳಿಗೆ ಹಳ್ಳಿ ಔಷಧವನ್ನೂ ಕೊಡುತ್ತಿದ್ದಳು. ಆಕೆ ನಮ್ಮನ್ನು ಬಿಟ್ಟು ಹೋಗಿ 35 ವರುಷಗಳಾದುವು. ಈಗ ಅವಳ ಆರೂ ಮೊಮ್ಮಕ್ಕಳು -- ಗಂಡು ಮಕ್ಕಳು, ಹೆಣ್ಣು ಮಕ್ಕಳು ಸುಖವಾಗಿದ್ದಾರೆ. ಅದಕ್ಕೆ ಅವಳ ಪಾಲನಾ ತಪಸ್ಸು ಕಾರಣ. ನಮ್ಮೆಲ್ಲರ ಸಿರಿ ಸೊಬಗನ್ನು ನೋಡಲು ಅವಳಿಲ್ಲ ಎನ್ನುವುದೇ ನಮ್ಮೆಲ್ಲರ ಕೊರತೆ. ಅವಳಿಗೆ ಸಾಷ್ಟಾಂಗ ನಮಸ್ಕಾರ. ಫೋಟೋ ಕೃಪೆ : ಶ್ರೀ H.N.ಶ್ರೀಧರ ಹೆಗಡೆ ಮಂಕಳಲೆ
Image may contain: 1 person, close-up

#### ಭಾನು -- ಭೂಮಿ ####


ಎಲ್ಲಿಯ ಭಾನು ಎಲ್ಲಿಯ ಭೂಮಿ
ದಿಗಿಲು ತಂದಿದೆ ದಿಗಂತದ ಬೆಳಕು.
ಸಮುದ್ರವಸನೆಯತ್ತ ರವಿ ಕಿರಣ 
ರಜನಿಗದೋ ಚಿನ್ನದ ತಿಲಕ
ದಿನಕರನ ನೇರ ನೋಟದ ಭಾಸ.
ನೀರಿನುದ್ದಕೂ ಮಿನುಗುವ ಸೆರಗು
ಪರಿ ಸಾರುತಿದೆ ದಾರಿ ದೀಪದಂತೆ.
ತಂಪಿನ ಜಲಕೆ ಬೆಳ್ಳಿಯ ಪ್ರಭಾವಳಿ.
.............................................
ಚಿತ್ತಾರ ಸಾರುತಿದೆ ನೀತಿಯೊಂದ.
ನೀರ ತಟದಲಿನ ಮರವಿಂಗಿಸಿ ದಾಹವ
ಸೊಂಪಿನ ಸಕಲ ಸಮೃದ್ಧಿಯ ನಡುವೆ.
ಬತ್ತಿ ಕಾಷ್ಟವಾದುದು ಫಲ ಬಿಡದೆ ಬರೆ.
ಏಕೋ ಒಣಗಿ ಬರಡಾದುದು ಸೊರಗಿ.
ವಿಧಿ ಬಿಡಲಿಲ್ಲ ಅದು ಪಡೆದ ಪಾಡು.
~~~~~~~~~~~~~~~~~~~~~
ಎಂ ಗಣಪತಿ ಕಾನುಗೋಡು

Photography by : Sharada Hegde
Image may contain: twilight, sky, outdoor and nature

#### ದಡ್ಡನಿಗೆ ಒಂದು ಕಡೆ. ಬುದ್ಧಿವಂತನಿಗೆ ಮೂರು ಕಡೆ. ####


ಹಳ್ಳಿಯ ಊರಿನ ಒಂದು ಕಾಲು ದಾರಿಯಲ್ಲಿ ರಾತ್ರಿ ಒಬ್ಬ ದಡ್ಡ ನಡೆದುಕೊಂಡು ಹೋಗುತ್ತಿದ್ದ. ಅವನ ಕಾಲಿಗೆ ಏನೂ ಮೆತ್ತನ ವಸ್ತು ತಾಗಿದಂತಾಯಿತು. ಅದು ಏನೋ , ಯಂತದೋ ಎಂದು ರಸ್ತೆಗೆ ಅಂಗಾಲಿನಿಂದ ವರೆಸಿ ಮುಂದೆ ಹೊರಟು ಹೋದ. ಸ್ವಲ್ಪ ಹೊತ್ತು ತಡೆದು ಅದೇ ದಾರಿಯಲ್ಲಿ ಬುದ್ಧಿವಂತನೊಬ್ಬ ನಡೆದು ಬಂದ. ಅವನ ಕಾಲಿಗೂ ಅದು ಸ್ವಲ್ಪ ತಾಗಿತು. ಅರರೆ ಇದು ಏನಿರಬಹುದೆಂದು ಅಂಗಾಲಿನಲ್ಲಿಯೇ ಆಚೀಚೆ ನೆಲಕ್ಕೆ ತೀಡಿ ನೋಡಿದ. ಅಂಗಾಲಿಗೆಲ್ಲಾ ತಣ್ಣಗೆ ಆಯಿತೇ ವಿನಃ ಅದು ಏನೆಂದು ತಿಳಿಯಲಿಲ್ಲ. ಆಗ ಕೈಗೆ ಒರೆಸಿಕೊಂಡು ಬೆರಳುಗಳಿಂದ ತಿಕ್ಕಿ ನೋಡಿದ. ಆಗಲೂ ಹೊಳೆಯಲಿಲ್ಲ. ಆಗ ನೋಡಿಯೇ ಬಿಡೋಣವೆಂದು ಮೂಸಿ ನೋಡಿದ. ಅದು ಮೂಗಿಗೂ ಸಾಕಷ್ಟು ತಾಗಿತು. ಕೊನೆಗೆ ನೋಡಿದರೆ ಥೂ, ಪೂ, ಅದು ಪಾಯಖಾನೆ, ಯಾರೋ ನಡುದಾರಿಯಲ್ಲಿ ರಸ್ತೆಯಲ್ಲಿ ಹೇತು ಹೋಗಿದ್ದರು.
ನೀತಿ : ಹೆಚ್ಚು ವಿಚಾರಿಸದೆ ಮುಂದೆ ನಡೆದ ದಡ್ಡನಿಗೆ ಒಂದೇ ಕಡೆ ಸ್ವಲ್ಪ ಹೊಲಸಾಯಿತು. ಬಹಳ ವಿಚಾರ ಮಾಡಲು ಹೊರಟ ಬುದ್ಧಿವಂತನಿಗೆ -- ಕಾಲು, ಕೈ ಮತ್ತು ಮೂಗು -- ಹೀಗೆ ಮೂರು ಕಡೆ ಬಹಳ ಹೊಲಸಾಯಿತು.

31/Augus/2017

Monday 14 August 2017

## ಆಗಸ್ಟ್ ಹದಿನೈದರ ಸ್ವಾತಂತ್ರ್ಯ ಏನು, ಎತ್ತ ? ##


                                                                                        ~~~~~ ಎಂ. ಗಣಪತಿ. ಕಾನುಗೋಡು.


ಆಗಸ್ಟ್ ಹದಿನೈದರ ಸ್ವಾತಂತ್ರ್ಯ ಕೇವಲ ರಾಜಕೀಯ ಸ್ವಾತಂತ್ರ್ಯವಷ್ಟೆ. ಪರಕೀಯರ ಆಡಳಿತದಿಂದ ಮುಕ್ತವಾಗಿ ಸ್ವದೇಶಿಯರ ಆಡಳಿತಕ್ಕೆ ನಾಂದಿ ಹಾಡಿದ ಒಂದು ಮಹತ್ಕಾರ್ಯ. ಈ ರಾಜಕೀಯ ಸ್ವಾತಂತ್ರ್ಯವನ್ನು ಸಾಕಾರಗೊಳಿಸಲು ಭಾರತೀಯರ ಬದುಕಿನ ಎಲ್ಲ ಮಜಲುಗಳು ಆಯಾ ಕ್ಷೇತ್ರದಲ್ಲಿ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಬೇಕು. ನಮಗೆ ರಾಜಕೀಯ ಸ್ವಾತಂತ್ರ್ಯ ಬಂದು 60 ವರುಷಗಳಲ್ಲಿ ಅವು ಇನ್ನೂ ಸಾಧನೆಯಾಗಿಲ್ಲ.

ನಮ್ಮ ದೇಶದಲ್ಲಿ ರಾಜಕೀಯ ಸ್ವಾತಂತ್ರ ಬಂದು ಮೂರು ವರುಷಗಳಲ್ಲಿ ಅಂದರೆ 1950 ರಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಆಯಿತು. ವ್ಯಕ್ತಿಯೊಬ್ಬ ಪ್ರಭುವಾಗಬೇಕಿದ್ದರೆ, ವ್ಯಕ್ತಿಗಳ ಸಮೂಹ ಪ್ರಭುತ್ವವನ್ನು ಸಾಧಿಸಬೇಕೆಂದಿದ್ದರೆ ಅಲ್ಲಿ ಒಳಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ಮತ್ತು ವ್ಯಕ್ತಿಗಳ ಸಮೂಹವು ತನ್ನ ಬದುಕಿನ ಎಲ್ಲ ಆಯಾಮಗಳಲ್ಲಿ ಸ್ವಾಯತ್ತತೆ ಮತ್ತು ಪೂರ್ಣತೆ -- ಒಮ್ಮೆ ಪರಿಪೂರ್ಣತೆ ಆಗದಿದ್ದರೂ ಕೂಡಾ -- ಯನ್ನು ಹೊಂದಬೇಕು. ಆಗ ಮಾತ್ರ ಅವರಿಗೆ ಸ್ವಾತಂತ್ರವನ್ನು ಅನುಭವಿಸುವ ಯೋಗ್ಯತೆ ಬರುತ್ತದೆ. ಆರ್ಥಿಕ ಸ್ವಾಯತ್ತತೆಯನ್ನು ಹೊಂದದ ಮತದಾರ ಇಂದು ಚುನಾವಣೆಯಲ್ಲಿ ಒಂದು ನೂರು ರುಪಾಯಿಗೂ ಚುನಾವಣೆಗೆ ಸ್ಪರ್ಧಿಸಿದವನ ಎದುರು ಕೈ ಚಾಚುತ್ತಿದ್ದಾನೆ. ಆಗ ಯೋಗ್ಯತೆ ಇದ್ದವನನ್ನು ಚುನಾಯಿಸುವ ಸಂದರ್ಭವೆಲ್ಲಿ ಬಂತು ?. ಇದು ಒಂದು ಉದಾಹರಣೆ ಅಷ್ಟೆ. ಹೀಗೆ ಸ್ವತಂತ್ರ ಭಾರತದ ಪ್ರಜಾಪ್ರಭುಗಳೆನ್ನಿಸಿಕೊಂಡವರ ಬದುಕಿನ ಪ್ರತಿಯೊಂದು ಆಯಾಮದ ಗತಿಯೂ ಇಷ್ಟೇ. ನಾವು ಎಲ್ಲಿಯವರೆಗೆ ಯೋಗ್ಯತೆಯನ್ನು ಗಳಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ದಾಷ್ಟ್ಯರ ದಾಸರಾಗಿಯೇ ಉಳಿಯಬೇಕು. ಅಂದು ಪರಕೀಯರ ದಾಸರಾಗಿ. ಇಂದು ಸ್ವದೇಶಿಯರ ದಾಸರಾಗಿ. ಅಷ್ಟೆ.

ತಾರೀಖು 14 - 8 - 2017