Thursday, 22 November 2018

#### ಹಾಸ್ಯಪ್ರಜ್ಞೆ ####


~~~~ ಎಂ. ಗಣಪತಿ ಕಾನುಗೋಡು.

ಬದುಕಿನ ಅಗತ್ಯಗಳಲ್ಲಿ ಹಾಸ್ಯಪ್ರಜ್ನೆಯೂ ಒಂದು. ಹಾಸ್ಯ ಮನುಷ್ಯನ ಮಾನಸಿಕ ದುಗುಡಗಳನ್ನು ದೂರ ಸರಿಸುತ್ತದೆ. ಆದರೆ ಆ ಹಾಸ್ಯ ವ್ಯಂಗ್ಯವಾಗಿರಬಾರದು. ಇನ್ನೊಬ್ಬರಿಗೆ ನೋವನ್ನು ತರುವಂತಿರಬಾರದು.
ಕೆಲವರಿಗೆ ಹಾಸ್ಯ ಪ್ರಜ್ಞೆ ಚೆನ್ನಾಗಿರುತ್ತದೆ. ಹಾಸ್ಯ ಮಾಡುವುದೂ ಒಂದು ಕಲೆ. ಆ ಕಲೆ ಕೆಲವರಲ್ಲಿ ಮಾತ್ರ ಇರುತ್ತದೆ. ಇನ್ನು ಕೆಲವರಿಗೆ ಹಾಸ್ಯ ಅರ್ಥವಾಗುತ್ತದೆ,ಅದನ್ನು ಅನುಭವಿಸಿ ಖುಷಿಯಾಗುತ್ತಾರೆ. ಆದರೆ ಅವರಿಗೆ ಹಾಸ್ಯ ಮಾಡುವ ಚಾಕಚಕ್ಯತೆ ಇರುವುದಿಲ್ಲ. ಮಾತಿನಲ್ಲಿ ಜಡಕಿಲ್ಲದೆ. ವ್ಯಂಗ್ಯವಿಲ್ಲದೆ, ಇನ್ನೊಬ್ಬರ ಮನಸ್ಸಿಗೆ ಸುಲಭವಾಗಿ ನಾಟುವ ಹಾಗೆ ಮೋಡಿ ಹರಿಸಿ ನಗಿಸಬಲ್ಲ ಶಕ್ತಿ ಕೆಲವರಿಗೆ ಮಾತ್ರ ಇರುತ್ತದೆ.
ಇನ್ನು ಕೆಲವರಿಗೆ ಹಾಸ್ಯಪ್ರಜ್ನೆಯೇ ಇರುವುದಿಲ್ಲ. ಅಂಥವರಿಗೆ ಹಾಸ್ಯ ಅರ್ಥವಾಗುವುದೂ ಇಲ್ಲ. ಹಾಸ್ಯದ ಹೊಯಿಲನ್ನು ಹರಿಸಲು ಹೇಗೂ ಬರುವುದಿಲ್ಲ. ಆದರೆ ಮಾತನ್ನು ಅಪಾರ್ಥ ಮಾಡಿಕೊಂಡು ಮತ್ತೊಬ್ಬರು ಮಾಡುವ ಹಾಸ್ಯದಿಂದ ಅಂಥವರು ಮುನಿಸಿಕೊಳ್ಳುವುದು, ತಪ್ಪಾಗಿ ಭಾವಿಸುವುದೂ ಇದೆ. ಕೆಲವೊಮ್ಮೆ ಜಗಳಕ್ಕೆ ತಿರುಗುವುದೂ ಇದೆ.
ಹಾಸ್ಯದ ಪ್ರವೃತ್ತಿ ಸ್ವಲ್ಪ ಕಷ್ಟವೇ. ಏಕೆಂದರೆ ಕೆಲವರಿಗೆ ಅದು ಅರ್ಥವಾಗುವುದಿಲ್ಲ ಎಂದಾದರೆ , ಅರ್ಥವಾಗುವ ಇನ್ನು ಕೆಲವರಿಗೆ ಆ ಹೊತ್ತಿಗೆ ಯಾವುದೋ ಕಾರಣದಿಂದ ಮನಸ್ಸು ಕೆಟ್ಟಿರುತ್ತದೆ. ಅಂಥಹ ಸನ್ನಿವೇಶಗಳಲ್ಲಿ ಹಾಸ್ಯದ ಚಟಾಕಿ ಹಾರಿಸುವವನು ಎದುರು ವ್ಯಕ್ತಿಯಿಂದ ಬೈಸಿಕೊಳ್ಳುವ ಸಾಧ್ಯತೆ ಹೆಚ್ಚು.
ಹಾಸ್ಯ ಮಾಡುವ ಪ್ರವೃತ್ತಿ ಇರುವವರು ಎದುರಿನ ಮಂದಿ ತಿರುಗಿ ಸಣ್ಣ ಮಾತನ್ನಾಡಿದರೆ ಬೇಸರಿಸಬಾರದು. ಹಾಗೆ ಬೇಸರ ಮಾಡಿಕೊಳ್ಳುವುದಾದರೆ ಹಾಸ್ಯ ಮಾಡಿ ಮತ್ತೊಬ್ಬರಿಗೆ ಸಂತೋಷವನ್ನು ದೊರಕಿಸಿಕೊಡುವ ಜನ ಇಲ್ಲವಾಗುತ್ತಾರೆ.

No comments:

Post a Comment

Note: only a member of this blog may post a comment.