Monday 10 June 2013

ಮಾಯವಾದ ಕಟ್ಟೆ ಪಂಚಾಯಿತಿ


                                                                                                   -ಎಂ. ಗಣಪತಿ ಕಾನುಗೋಡು
ಒಂದು ಕಾಲದಲ್ಲಿ ಕಟ್ಟೆ ಪಂಚಾಯಿತಿ ಎಂದರೆ ಹಳ್ಳಿಗಳಲ್ಲಿ ಒಂದು ಜನ ಸಂಪರ್ಕ ಕೇಂದ್ರ. ಪ್ರತಿ ಊರಿನಲ್ಲಿ ದಿನನಿತ್ಯ ಯಾರದ್ದಾದರೊಂದು ಮನೆಯ ಜಗುಲಿಯ ಮೇಲೆ ಅಥವಾ ಅಂದು ಇರುತ್ತಿದ್ದ ಹೆಬ್ಬಾಗಿಲ ಅಗಲ-ಉದ್ದನೆಯ ಕಟ್ಟೆಯ ಮೇಲೆ ಊರಿನ ಕೆಲವು ಜನ ಸೇರಿ ಮಾತನಾಡಿಕೊಳ್ಳುವುದೇ ಕಟ್ಟೆ ಪಂಚಾಯಿತಿ. 
ಪ್ರತಿನಿತ್ಯ ಸಂಜೆ ಕೇರಿ ಮನೆಯ ಹಲವಾರು ಜನ ಯಾರದ್ದಾದರೊಂದು ಮನೆಯ ಕಟ್ಟೆಯ ಮೇಲೆ ಜಮಾಯಿಸುತ್ತಿದ್ದರು. ಪ್ರತಿನಿತ್ಯ ಇಂಥವರ ಮನೆಯ ಕಟ್ಟೆಯೇ ಎನ್ನುವಂತಿಲ್ಲ. ಸಂಜೆ ತನಕ ಕೃಷಿ ಕೆಲಸ. ನಂತರ ವಿಶ್ರಾಂತಿಯಲ್ಲಿ ಅಲ್ಲಲ್ಲಿ ಕೆಲವು ಜನರ ಸೇರ್ಪಡೆ. ಇದರಲ್ಲಿ ವಯಸ್ಕರದ್ದು, ಯುವಕರದ್ದು, ಹೆಂಗಸರದ್ದು (ಇವರದ್ದು ಯಾರದ್ದಾದರೊಂದು ಮನೆಯೊಳಗೆ) ಹೀಗೆ ಬೇರೆ ಬೇರೆ ಕಟ್ಟೆ ಪಂಚಾಯಿತಿಗಳು ಇರುತ್ತಿದ್ದವು. 
ಇದು ಬಹಳ ಹಿಂದಿನ ಕತೆಯಲ್ಲ. ಸುಮಾರು 25 ವರ್ಷಗಳ ಹಿಂದಿನ ಕಾಲದ ಪ್ರಸ್ತಾಪ ಅಷ್ಟೆ. ಆಗ ಹಳ್ಳಿಗಳಲ್ಲಿ ಇಷ್ಟೊಂದು ಟಿವಿಯ ಅಬ್ಬರವಿರುವುದಿಲ್ಲ. ಸ್ಥಿರ, ಚರ ದೂರವಾಣಿಗಳಿರಲಿಲ್ಲ. ಹಾಗಂತ ನ್ಯೂಸ್ ಬರುವ ಸಮಯವಾಗಿದ್ದರೆ ಟ್ರಾನ್ಸಿಸ್ಟರ್ ಕೂಡಾ ಕಟ್ಟೆಗೆ ಬರುತ್ತಿತ್ತು – ದೇಶದ ಸುದ್ಧಿ ಆಲಿಸಲಿಕ್ಕೆ. ಈಗಿನಂತೆ ದಿನಕ್ಕೆ ಒಂದೆರಡು ಸಾರಿ ಪೇಟೆಗೆ ಹೋಗುವ ಅಭ್ಯಾಸವಿರುವುದಿಲ್ಲ. ತಾಲ್ಲೂಕು ಮುಖ್ಯ ಕೇಂದ್ರದಲ್ಲಿ ನಡೆಯುವ ಸಂತೆ ದಿನವಷ್ಟೆ ಕೆಲವರು ಪೇಟೆಗೆ ಹೋಗುತ್ತಿದ್ದರು. ಒಟ್ಟಾರೆ ಹೊರಗಿನ ಸಂಪರ್ಕ ಹಳ್ಳಿಯ ಜನರಿಗೆ ಬಹಳ ಸಿಮೀತವಾಗಿತ್ತು. 
ಅಂತಹ ಕಾಲದಲ್ಲಿ ಕಟ್ಟೆ ಪಂಚಾಯಿತಿ ಒಂದು ಸಾರ್ವಜನಿಕ ಸಂಪರ್ಕ ವಾಹಿನಿಯಂತೆ ಪಾತ್ರ ವಹಿಸುತ್ತಿತ್ತು. ಊರಿನಲ್ಲಿ, ತಾಲ್ಲೂಕಿನಲ್ಲಿ ದೇಶದಲ್ಲಿ ನಡೆಯುತ್ತಿದ್ದ ಆಗು ಹೋಗುಗಳ ಪ್ರಸ್ತಾಪ, ಚರ್ಚೆ, ಹೊಸ ವಿಚಾರಗಳ ಬಗ್ಗೆ ಪರಸ್ಪರ ವಿನಿಮಯ, ವಧೂವರರ ಮಾಹಿತಿ, ಕೃಷಿ ಮಾರುಕಟ್ಟೆಗಳ ಧಾರಣೆಯ ಮಾಹಿತಿ, ಅನೇಕ ವಿಷಯಗಳ ರಂಜನೆ, ಬೇರೆ ಬೇರೆ ಮಾಹಿತಿಗಳ ಮಂಡನೆ, ಅವುಗಳ ಮನವರಿಕೆ ಇವೆಲ್ಲ ಅಲ್ಲಿ ನಡೆಯುತ್ತಿದ್ದವು. ಊರ ಹೊರಗೆ ಹೋಗಿ ಬಂದವರು ಹೊರಗಿನ ಸಮಾಚಾರವನ್ನು ಊರಿನ ಜನರಿಗೆ ತಿಳಿಸುವುದು ಊರಿನ ಜನರ ಸ್ನೇಹ ವರ್ಧನೆ ಒಬ್ಬರಿಗೊಬ್ಬರ ಮೇಲೆ ಇರುವ ಸಣ್ಣಪುಟ್ಟ ದ್ವೇಷಗಳನ್ನು ಅಲ್ಲಿ ಹೇಳುವುದು, ಅದಕ್ಕೆ ಅಲ್ಲಿ ಕುಳಿತಿರುವ ಯಾರಾದರೂ ಹಿರಿಯರಿಂದ ಅದರ ಚಿಕಿತ್ಸೆ ಇವೆಲ್ಲಾ ಅಲ್ಲಿ ನಡೆಯುತ್ತಿದ್ದವು. 
ಆದರೆ ಇಂದು ಹಳ್ಳಿಗಳ ಪರಿಸ್ಥಿತಿ ಹಾಗಿಲ್ಲ. ತಮ್ಮ ವಿಶ್ರಾಂತಿ ವೇಳೆಯಲ್ಲಿ ಎಲ್ಲರೂ ಟಿವಿ ಮುಂದೆ ಕುಳಿತಿರುತ್ತಾರೆ. ದೂರವಾಣಿಗಳಿಂದ ಹೊರ ಪ್ರಪಂಚದ ಸಂಪರ್ಕದಲ್ಲಿರುತ್ತಾರೆ. ಮನೆ ಮನೆಗೆ ಬೈಕು, ಅಲ್ಲಲ್ಲಿ ಕಾರುಗಳಿರುವುದರಿಂದ ದಿನನಿತ್ಯ ಪೇಟೆ ಓಡಾಟ. ಹಳ್ಳಿಯ ಜನರ ಬದುಕು ಕೂಡಾ ಹಾಗೆಯೇ ಆಗಿದೆ. 25 ವರ್ಷಗಳ ಹಿಂದಿನಷ್ಟು ಸರಳ, ಸೀಮಿತವಾಗಿಲ್ಲ. ಜಂಜಾಟ ಹೆಚ್ಚಿದೆ. ಯಾರಿಗೂ ಊರಿನಲ್ಲಿ ಪ್ರತಿನಿತ್ಯ ಇರಲಿ ತಿಂಗಳಿಗೊಮ್ಮೆಯೂ ಒಬ್ಬರೊನ್ನಬ್ಬರು ಭೇಟಿಯಾಗಲು ಪುರಸೊತ್ತಿಲ್ಲ. ಟಿವಿ, ಫೋನ್ ಮುಂತಾದ ಆಧುನಿಕ ಉಪಕರಣಗಳು, ಜನರ ಸಂಕೀರ್ಣ ಜೀವನ ಹಳ್ಳಿಗಳ ಕಟ್ಟೆ ಪಂಚಾಯಿತಿಯನ್ನು ಇಲ್ಲವಾಗಿಸಿವೆ. ಅಲ್ಲಿನ ಜನರ ಪ್ರಾಥಮಿಕ ಸಂಬಂಧಗಳು ಮರೆಯಾಗುತ್ತಿವೆ. ನಗರಗಳಲ್ಲಿ ಒಂದೇ ಮನೆಯ ಎರಡು ಪೋರ್ಷನ್‍ಗಳಲ್ಲಿ ಜನ ವಾಸಿಸುತ್ತಾರೆ. ಆದರೆ ಒಬ್ಬರ ಸಂಪರ್ಕ ಮತ್ತೊಬ್ಬರಿಗೆ ಇರುವುದಿಲ್ಲ. ಹಳ್ಳಿಗಳಲ್ಲಿಯೂ ಈಗ ಹೆಚ್ಚುಕಡಿಮೆ ಇದೇ ಪಾಡು. 
ಮಲೆನಾಡಿನಲ್ಲಿ 10-20 ಮನೆಗಳಿದ್ದ ಊರಿನ ಜನ, ಬಯಲು ನಾಡಿನಲ್ಲಿ 100-200 ಮನೆಗಳಿದ್ದ ಒಂದು ಊರಿನ ಜನ ಅನೇಕ ವಿಚಾರಗಳಲ್ಲಿ ಒಂದೇ ಮನೆಯವರಾಗಿರುತ್ತಿದ್ದರು. ಕಟ್ಟೆ ಪಂಚಾಯಿತಿಯ ಮಹತ್ವ ಇದ್ದದ್ದೇ ಅಲ್ಲಿ. ಈಗ ಮುಂದುವರೆದ ಜೀವನ ಕ್ರಮದಲ್ಲಿ ಒಂದೇ ಮನೆಯಲ್ಲಿ ಹಲವು ಮನಸ್ಸುಗಳಿವೆ. ಅಷ್ಟೇ ಏಕೆ ಒಂದೇ ವ್ಯಕ್ತಿಯ ಮನಸ್ಸು ಹಲವು ಕಡೆ ಓಡುತ್ತಿದೆ. ಅದಕ್ಕೆ ಲಗಾಮು ಹಾಕಲು ಕಟ್ಟೆ ಪಂಚಾಯಿತಿಯ ಹಿರಿಯರು, ತಿಳಿದವರು ಈಗ ಇಲ್ಲ. 

ಎಂ. ಗಣಪತಿ M.A.. ಕಾನುಗೋಡು
 ಅಂಚೆ : ಬಿ.ಮಂಚಾಲೆ-577431
 ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
 ಮೊ.: 9481968771
 E-mail: mgkangod.blogspot.com

1 comment:

  1. Counter argument: People are becoming focused towards solving their problem instead of commenting on others (in katte panchayati). Its good to get involved in productive work than kalavara/ beli vyajya..... Let the life be busy and productive in terms of money/ education/ career.

    ReplyDelete

Note: only a member of this blog may post a comment.