Monday 15 December 2014

ಕಳ್ಳನನ್ನು ಕಂಡುಹಿಡಿದ ಕುರುಡ


ಸಂತೆಯ ದಿನ ಪೇಟೆಯ ರಸ್ತೆ ಪಕ್ಕದಲ್ಲಿ ಕುರುಡನೊಬ್ಬ ಬೇಡುತ್ತಿದ್ದ. ' ನೋಡಿ ಸರ್ .. ಕಣ್ಣಿಲ್ಲ , ಕುರುಡ , ದಯವಿಟ್ಟು ಧರ್ಮ ನೀಡಿ ಸರ್ ' ಎಂದು ವಿನೀತ ಧ್ವನಿಯಲ್ಲಿ ಬೇಡುತ್ತಲೇ ಇದ್ದ. ಒಂದೇ ಥರ ಅಲ್ಲ. ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದ. ದಾರಿಯಲ್ಲಿ ಸಾಗುವವರು ಅವನ ಕೇಳಿಕೆಗೆ ಮನಸೋತು ಎರಡು, ಐದು, ಹತ್ತು ರುಪಾಯಿ... ಹೀಗೆ.. ಹೀಗೆ ಹಾಕಿ ಹೋಗುತ್ತಿದ್ದರು. ಯಾರೋ ಒಬ್ಬ ಧಾರಾಳಿ ಐವತ್ತು ರೂಪಾಯಿನ ನೋಟೊಂದನ್ನು ಹಾಕಿ ಹೋದದ್ದು ಅಲ್ಲಿಯೇ ಸಾಗುತಿದ್ದ ನನ್ನ ಕಣ್ಣಿಗೆ ಬಿತ್ತು.
ನನಗೂ ಏಕೋ ಅವನೆಡೆಗೆ ಮನಸ್ಸು ಹೋಯಿತು. ನನ್ನಲ್ಲಿ ಚಿಲ್ಲರೆ ಇಲ್ವಲ್ಲಪ್ಪಾ ಎಂದೆ. 'ನೋಟು ಹಾಕಿ ಚಿಲ್ಲರೆ ತೆಕ್ಕೊಳ್ಳಿ ಸ್ವಾಮಿ' ಎಂದ. ನಾನು ಒಂದು ನೋಟನ್ನು ಹಾಕಿ ಚಿಲ್ಲರೆಯೆಂದು ಮತ್ತೊಂದು ನೋಟನ್ನು ತೆಗೆಯುವುದರಲ್ಲಿದ್ದೆ. ಅಷ್ಟು ಹೊತ್ತಿಗೆ ತಟ್ಟನೆ ಆತ ನನ್ನ ಕೈ ಹಿಡಿದುಕೊಂಡು ಬಿಟ್ಟ. ' ಏನ್ರೀ.... ನೋಡಲಿಕ್ಕೆ ದೊಡ್ಡ ಸಂಭಾವಿತರ ಹಾಗೆ ಸರಿಯಾಗಿ ಕಾಣುತ್ತಿದ್ದೀರಿ. ಏನೋ ಕಣ್ಣಿಲ್ಲ ಕುರುಡ ಅಂತ ಬಿಕ್ಷೆ ಬೇಡೋಕೆ ಕುಂತುಕೊಂಡರೆ ನನಗೇ ಮೋಸ ಮಾಡ್ತೀರಲ್ಲ. ಮೊದಲು ಇಡ್ರೀ ಅದನ್ನ.' ಎಂದು ನನ್ನನ್ನು ಜೋರಿನ ಧ್ವನಿಯಲ್ಲಿ ಕಣ್ಣು ಬಿಟ್ಟು ಹೆದರಿಸಿದ. ಅವನ ಗಲಾಟೆ ಕೇಳಿ ಸಂತೆಗೆ ಬಂದ ಜನ ನಮ್ಮಿಬ್ಬರನ್ನು ಕುತೂಹಲದಿಂದ ಸುತ್ತುವರಿದರು. ಗುಜು ಗುಜು ಗಲಭೆ ಶುರುವಾಯಿತು. ನಾನೂ ಮರ್ಯಾದೆ ಉಳಿಸಿಕೊಳ್ಳಬೇಕಲ್ಲ !. ' ಯಾಕಪ್ಪ.. ಧರ್ಮ ನೀಡಲಿಕ್ಕೆ ಬಂದರೆ ಹಾಗೆ ಗದರಿಸುತ್ತೀಯೆ' ಎಂದೆ.
" ಏನ್ರೀ ನೀವು ಮನುಷ್ಯರಾ... ಚಿಲ್ಲರೆಯಿಲ್ಲ ಎಂದು ಹೇಳಿ ಐದು ರುಪಾಯಿ ನೋಟು ಹಾಕಿ ಐವತ್ತು ರುಪಾಯಿ ನೋಟು ತೆಗಿತಿದ್ದೀರಲ್ಲಾ " ಎಂದು ಎಲ್ಲರೆದುರು ಕೂಗಾಡಿಬಿಟ್ಟ.

Friday 5 December 2014

ನಮ್ಮ ವಿವಾಹ ಸಂಸ್ಕಾರದ ವಿಧಿ - ವಿಧಾನಗಳು


ಪ್ರಸ್ತುತಿ : ಎಂ.ಗಣಪತಿ ಕಾನುಗೋಡು.


ವಿವಾಹ ಸಂಸ್ಕಾರವೂ ಬ್ರಾಹ್ಮಣನಿಗೆ ಆಗಬೇಕಾದ ಹದಿನಾರು ಸಂಸ್ಕಾರಗಳಲ್ಲಿ ಹದಿನೈದನೆಯದು. ನಮ್ಮ ವಿವಾಹ ಸಂಸ್ಕಾರದಲ್ಲಿ ಇಪ್ಪತ್ತೊಂದು ವಿಧಿ - ವಿಧಾನಗಳಿವೆ. ಅವುಗಳ ಹೆಸರನ್ನು ಮಾತ್ರ ಇಲ್ಲಿ ಪ್ರಸ್ಥಾಪಿಸಲಾಗಿದೆ. ಇದರ ಜೊತೆಜೊತೆಯಾಗಿ, ಇದಕ್ಕೆ ಪೂರಕವಾಗಿ ಸುಮಂಗಲೆಯರು ನಡೆಸುವ ಪದ್ಧತಿಗಳೂ ಅನೇಕ ಇವೆ. ಅವುಗಳನ್ನು ಈಗ ಪ್ರಸ್ಥಾಪಿಸಲಾಗುತ್ತಿಲ್ಲ.
1 . ವರಾಗಮನ. 2 . ವಾಗ್ದಾನ 3 . ಮಧುಪರ್ಕ 4 . ನಿರೀಕ್ಷೆ 5 . ಕನ್ಯಾದಾನ 6 . ಅಕ್ಷತಾರೋಹಣ ಮತ್ತು ಮಾಂಗಲ್ಯಧಾರಣೆ 7 . ಪಾಣಿಗ್ರಹಣ 8 . ಸಪ್ತಪದಿ 9 . ವಿವಾಹ ಹೋಮ 10 . ಅಶ್ಮಾರೋಹಣ [ ವಧುವು ಅರಳನ್ನು ಸಮರ್ಪಿಸುತ್ತ ಹೋಮಕುಂಡವನ್ನು ಪ್ರದಕ್ಷಿಣೆ ಮಾಡುವುದು.] 11 . ವ್ರತಗ್ರಹಣ ಹೋಮ 12 . ಔಪಾಸನ ಹೋಮ 13 . ಆರುಂಧತೀ [ಅರುಂಧತೀ ಎನ್ನುವುದು ವಾಡಿಕೆಯಲ್ಲಿದೆ] ಮತ್ತು ಧ್ರುವನಕ್ಷತ್ರದರ್ಶನ 14 . ಚತುರ್ಥೀ [ ಪಕ್ವ] ಹೋಮ 15 . ವ್ರತವಿಸರ್ಜನ ಹೋಮ 16 . ಉಪಸಂವೇಶನ 17 ಸ್ಥಾಲೀಪಾಕ ಹೋಮ 18 . ಓಕುಳಿ 19 . ಸಮಾರೋಪಣ 20 .ವಧೂಪ್ರವೇಶ 21 . ಗೃಹಸ್ಥಾಶ್ರಮ ವಿಧಿ
ತಾರೀಖು : 04 - 12 -2014
ಮಾಹಿತಿಯ ಕೃಪೆ : ವಿದ್ವಾನ್ ಹೇರಂಭ. ಆರ್. ಭಟ್ಟ ಅಗ್ಗೆರೆ. [ಅವರ ' ಸನಾತನ ಸಂಸ್ಕಾರಗಳು ' ಪುಸ್ತಕದಿಂದ]

ಒಂದು ಚಿಂತನೆ :


ಎಡ ವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಳ್ಳುವುದು ಗಂಡಸಿಗೆ ಬಹಳ ಕಷ್ಟ.
ಕಾರಣ :
+ ಅವನು ತನ್ನ ಜೀವನದಲ್ಲಿ ಪ್ರತಿಯೊಂದಕ್ಕೂ ಹೆಂಡತಿಯನ್ನೇ ಅವಲಂಬಿಸಿರುತ್ತಾನೆ. ಹೆಂಡತಿ ಹಾಗಲ್ಲ. ತನ್ನ ದಿನನಿತ್ಯದ ಬೇಕುಗಳಿಗೆಲ್ಲಾ ತನ್ನನ್ನೇ ಅವಲಂಬಿಸಿರುತ್ತಾಳೆ.
+ ಹೆಂಡತಿ ತನ್ನ ಗಂಡನನ್ನು ಆಶಿಸಿ ಸಲಹಿದ ಹಾಗೆ ಮಕ್ಕಳು ತಂದೆಯನ್ನು ಅಷ್ಟೊಂದು ಆಶೆಪಡುವುದಿಲ್ಲ. ತಾಯಿಯ ವಿಚಾರದಲ್ಲಿ ಹಾಗಲ್ಲ. ಮಕ್ಕಳು ಅವಳನ್ನು ತಂದೆಗಿಂತ ಹೆಚ್ಚಿನ ಪ್ರೀತಿಯಿಂದ ನೋಡುತ್ತಾರೆ.
+ ಗಂಡಸು ಸಂಸಾರದೊಳಗಿನ ಕೆಲಸಗಳಲ್ಲಿ ಭಾಗಿಯಾಗುವುದು ಕಡಿಮೆ. ಹೆಂಗಸು ಹಾಗಲ್ಲ. ಅವಳು ಮಗ,ಸೊಸೆ, ಮೊಮ್ಮಕ್ಕಳ ಮೇಲೆ ಮೈಮುಟ್ಟಿ ಕಾಳಜಿ ವಹಿಸುತ್ತಾಳೆ. ಹಾಗಾಗಿಯೇ ಅವಳನ್ನು ಕುಟುಂಬದ ಸದಸ್ಯರು ಅಶೆಪಡುತ್ತಾರೆ. ಗಂಡಸಿನ ಚಹರೆ ಹಾಗಲ್ಲ.
+ ಹಣ ಕಾಸಿನ ನೆರವನ್ನು ಜೀವಂತ ಇದ್ದಾಗ ಗಂಡ ಹೆಂಗಸಿಗೆ ನೀಡಿರುತ್ತಾನೆ. ನಂತರ ಮಕ್ಕಳು ಅವಳಿಗೆ ಆ ನೆರವನ್ನು ನೀಡುತ್ತಾರೆ.[ ಈಗಿನ ಸ್ತ್ರೀ ದುಡಿಮೆಯ ಸನ್ನಿವೇಶ ಒಂದು ಅಪವಾದ]. ಈ ಮೂಲಭೂತ ವ್ಯವಸ್ಥೆಯಿಂದಾಗಿ ಹೆಂಗಸು ' ಪಡೆದುಕೊಳ್ಳುವ ' ಸ್ವಭಾವವನ್ನು ರೂಡಿಸಿಕೊಂಡಿರುತ್ತಾಳೆ. ಗಂಡಸು ವಯಸ್ಸಾಗುತ್ತಾ ಬಂದಂತೆಲ್ಲಾ ಎಲ್ಲದಕ್ಕೂ ಕುಟುಂಬದ ಇತರ ಸದಸ್ಯರನ್ನು ಅವಲಂಬಿಸುವುದು ಅನಿವಾರ್ಯ. ಆಗ ಅವನಿಗೆ ಅನಾಥ ಪ್ರಜ್ಞೆ ಮೂಡುತ್ತದೆ. ಹೆಂಗಸಿಗೆ ಹಾಗಾಗುವುದಿಲ್ಲ. ಏಕೆಂದರೆ ಅವಳು ಆ ಸ್ವಭಾವವನ್ನು ತನ್ನ ಜೀವನದ ಪ್ರಾರಂಭದಿಂದಲೇ ರೂಢಿಸಿಕೊಂಡಿರುತ್ತಾಳೆ.
+ ಒಮ್ಮೆ ಗಂಡಸಿಗೆ ಕುಟುಂಬದ ಇತರ ಸದಸ್ಯರಿಂದ ಒಳ್ಳೆಯ ಸ್ಪಂದನ ಸಿಕ್ಕರೂ ಕೂಡ ಅವು ಯಾವುದೂ ತನ್ನ ಹೆಂಡತಿಯಿಂದ ದೊರಕಿದಷ್ಟು ಮನಸ್ಸಿಗೆ ಸಮಾಧಾನವಾಗುವುದಿಲ್ಲ.


ತೀರ್ಮಾನ :
ಹಾಗಾಗಿ ಗಂಡನಾದವನು ಹೆಂಡತಿಗೆ " ದೀರ್ಘ ಸುಮಂಗಲೀ ಭವ " ಎಂದು ಹಾರೈಸುವುದು ಅನಿವಾರ್ಯ. 


krupe : M Ganapathi Kangod
5/Dec/2014

Wednesday 26 November 2014

ಬಾ ಲ ಗ್ರ ಹ

 ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.
ಬಾಲಗ್ರಹವೂ ಒಂದು ವಿಧದ ಮೂರ್ಛೆರೋಗ. ಇದಕ್ಕೆ ಇಂಗ್ಲಿಷ್ ನಲ್ಲಿ Febrile convulsion ಎನ್ನುತ್ತಾರೆ. ಇದು ಆರು ತಿಂಗಳಿನಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣುವ ಮೂರ್ಛೆ. ಮಕ್ಕಳಿಗೆ ಆಗಲಿ ಅಥವ ದೊಡ್ಡವರಿಗೆ ಆಗಲಿ ಈ ರೋಗವು ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ವ್ಯತ್ಯಾಸದಿಂದ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಬದಲಾವಣೆಗಳಿಂದ ಕಾಣಿಸಿಕೊಳ್ಳುತ್ತದೆ. ಈ ದೋಷದಿಂದ ಮೆದುಳಿನ ಪ್ರಕ್ರಿಯೆಯಲ್ಲಿ ಬದಲಾವಣೆಯುಂಟಾಗಿ ಮೂರ್ಛೆ ಬರುತ್ತದೆ.
ಬಾಲಗ್ರಹ ಇರುವ ಮಕ್ಕಳಲ್ಲಿ ಜ್ವರ ಬಂದಾಗ ಮಾತ್ರ ಮೂರ್ಛೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಐದು, ಆರು ವರ್ಷಗಳ ನಂತರ ಇಂಥಹ ಮಕ್ಕಳಲ್ಲಿ ಈ ಕಾಯಿಲೆ ನಿಂತು ಹೋಗುತ್ತದೆ. ಜ್ವರ ಬಂದಾಗ ಸೂಕ್ತ ಆರೈಕೆ ಮಾಡುವುದರಿಂದ ಇಂಥಹ ಬಾಲಗ್ರಹ ಬಾಧೆಯನ್ನು ತಪ್ಪಿಸಬಹುದು.
ಬಾಲಗ್ರಹದ ಬಾಧೆ ಸಾಮಾನ್ಯ ಮಟ್ಟದಲ್ಲಿ ಇರುವ ಮಕ್ಕಳಿಗೆ ಸಾಂದರ್ಭಿಕ ಔಷಧ ಸೇವನೆ ಸಾಕು. ಸತತವಾದ ಔಷಧ ಸೇವನೆಯ ಅಗತ್ಯವಿರುವುದಿಲ್ಲ. ಆದರೆ ಕೆಲವು ಮಕ್ಕಳಿಗೆ ಈ ತೊಂದರೆ ತೀವ್ರ ಪ್ರಮಾಣದಲ್ಲಿ ಇರುತ್ತದೆ. ಇಂಥಹ ತೀವ್ರ ಪ್ರಮಾಣದ ಬಾಲಗ್ರಹಕ್ಕೆ ಇಂಗ್ಲಿಷ್ ನಲ್ಲಿ Complex febrile seizures ಎನ್ನುತ್ತಾರೆ. ಇಂಥಹ ರೋಗಪೀಡಿತ ಮಕ್ಕಳಿಗೆ ಮಾತ್ರ ಸತತವಾಗಿ ಎರಡು ವರ್ಷ ಔಷಧದ ಸೇವನೆಯು ಅಗತ್ಯವಾಗಿರುತ್ತದೆ. ಯಾವುದಕ್ಕೂ ಇಂಥಹ ರೋಗಬಾಧಿತ ಮಗುವನ್ನು ಕೂಡಲೆ ನರರೋಗತಜ್ಞರಿಂದ ತಪಾಸಣೆಗೊಳಿಸಬೇಕು.
ಮೂರ್ಛೆ ಬಂದಾಗ ಮಗುವಿನ ಪೋಷಕರು ಗಾಬರಿಗೊಳ್ಳದೆ ಶಾಂತಿಯಿಂದ ಇರಬೇಕು. ಇದು ಮಾರಕ ರೋಗವಲ್ಲ ಎನ್ನುವುದನ್ನು ಅರಿತಿರಬೇಕು. ಮೂರ್ಛೆ ಬಂದ ಕೂಡಲೆ ಮಗುವನ್ನು ಮಗ್ಗುಲಾಗಿ ಮಲಗಿಸಬೇಕು. ಅದು ಧರಿಸಿದ ಬಟ್ಟೆಯನ್ನು ಸಡಿಲಗೊಳಿಸಬೇಕು. ಅದಕ್ಕೆ ಚೆನ್ನಾಗಿ ಗಾಳಿ, ಬೆಳಕು ಸಿಗುವಂತೆ ನೋಡಿಕೊಳ್ಳಬೇಕು. ಅಂಥಹ ಸಂದರ್ಭದಲ್ಲಿ ಮಗುವಿನ ಶರೀರವನ್ನು ಬಾಗಿಸುವುದಾಗಲಿ, ಅದರ ಒದ್ದಾಟದ ಚಲನೆಯನ್ನು ಬಲಾತ್ಕಾರವಾಗಿ ನಿಲ್ಲಿಸುವುದಾಗಲಿ ಮಾಡಕೂಡದು. ಅದು ಹಲ್ಲು ಕಚ್ಚಿಹಿಡಿಯಬಾರದೆಂದು ಅಥವ ನಾಲಿಗೆ ಕಚ್ಚಬಾರದೆಂದು ಬಾಯಿಗೆ ಚಮಚವನ್ನೋ, ಇನ್ನಾವುದೋ ವಸ್ತುವನ್ನು ಬಾಯೊಳಗೆ ಅಡ್ಡ ಇಡಬಾರದು. ಅಂಥಹ ಸಂದರ್ಭದಲ್ಲಿ ಮಗುವಿನ ಹತ್ತಿರ ಅಪಾಯಕಾರಿ ವಸ್ತುಗಳನ್ನು ಇಡಬಾರದು. ಮಗುವಿಗೆ ಪೂರ್ಣ ಪ್ರಜ್ಞೆ ಬರುವ ತನಕ ಕುಡಿಯಲು ಅಥವ ತಿನ್ನಲು ಏನನ್ನೂ ಕೊಡಬಾರದು. ಮೂರ್ಛೆ ಬಂದಾಗ ಮುಖದ ಎದುರಿಗೆ ಚಿಟಿಕೆ ಹಾಕುವುದು, ಕೈಗೆ ಕಬ್ಬಿಣ ಹಿಡಿಸುವುದು, ಈರುಳ್ಳಿ ಅಥವ ಚಪ್ಪಲಿಯನ್ನು ಮಗುವಿನ ಮೂಗಿಗೆ ಹಿಡಿದು ಮೂಸಿಸುವ ಪ್ರಯತ್ನ ಮಾಡುವುದು ಇತ್ಯಾದಿ ಕ್ರಿಯೆಗಳಿಂದ ಮಗು ಎಚ್ಚರಗೊಳ್ಳುತ್ತದೆ ಎಂಬುದು ಮೂಢನಂಬಿಕೆಯೇ ವಿನಃ ವೈಜ್ಞಾನಿಕ ಆಧಾರಿತವಲ್ಲ.
ತಾರೀಖು : 26 - 11 - 2014
ಮಾಹಿತಿಯ ಕೃಪೆ : ಡಾ|| ಎ .ಶಿವರಾಮಕೃಷ್ಣ .ನರರೋಗತಜ್ಞರು. ಶಿವಮೊಗ್ಗ. [ಅವರ " ಮೆದುಳಿನ ಕಾಯಿಲೆಗಳು " -- ಪುಸ್ತಕದಿಂದ ].

ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು

ಇಂದಿನ ತೀವ್ರಗಾಮಿ ಚಲನೆಯ ಸಮಾಜದಲ್ಲಿ ಯುವತಿಯರು ಯುವಕರಿಗೆ ಸರಿಸಮನಾಗಿ ವಿದ್ಯಾರ್ಹತೆ, ಸ್ವಂತ ದುಡಿದು ಹಣ ಗಳಿಸಬೇಕೆನ್ನುವ ಹಪಾಹಪಿ, ಗಂಡಿನ ಆಧಾರವಿಲ್ಲದೆ ಒಬ್ಬಂಟಿಯಾಗಿ ಮುನ್ನುಗ್ಗುವ ದಾಷ್ಟ್ಯ ...... ಈ ಎಲ್ಲವನ್ನು ಹೊಂದಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಿನ ಭಾಗದ ಯುವತಿಯರಿಗೆ ಜೀವನೋಪಾಯಕ್ಕಾಗಿ ಹಿಂದಿನಂತೆ ಪುರುಷನನ್ನು ಅವಲಂಬಿಸುವ ಅಗತ್ಯವಿಲ್ಲ. ಇದಕ್ಕೆಲ್ಲ ಕಾರಣ ಅವರು ಹೊಂದಿರುವ ಆರ್ಥಿಕ ಸ್ವಾವಲಂಬನೆ.
ಇಲ್ಲಿ ಒಂದು ಪ್ರಶ್ನೆ ಇದೆ. ಪುರುಷನಿಗೆ ಆಗಲಿ ಮಹಿಳೆಗೆ ಆಗಲಿ, ಹಣವೊಂದೇ ಜೀವನದ ಏಕಮೇವ ಪೂರೈಕೆಯೇ? ಅಲ್ಲ. ಬದುಕಿನ ಅನೇಕ " ಬೇಕು " ಗಳಲ್ಲಿ ಹಣವು ಒಂದು ಅಷ್ಟೆ. ಆದರೆ ಹಣವೊಂದರಿಂದಲೇ ಬದುಕಿನ ಎಲ್ಲ ಬಯಕೆಗಳನ್ನು ನಿಭಾಯಿಸಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯನ ಅನೇಕ " ಬೇಕು " [ Wants ] ಗಳಲ್ಲಿ ಒಂದು ಹೆಣ್ಣಿಗೆ ಒಂದು ಗಂಡು, ಒಂದು ಗಂಡಿಗೆ ಒಂದು ಹೆಣ್ಣು ಬೇಕು ಎನ್ನುವುದು ಪ್ರಮುಖ. ಈ 'ಬೇಕು' ಅನೇಕ ಕಾರಣಗಳಿಂದ ಒಂದು ಅಗತ್ಯ. ಇದರಿಂದಾಗಿಯೇ ' ವಿವಾಹದ ಪರಿಕಲ್ಪನೆ ' ಹುಟ್ಟಿಕೊಂಡಿದ್ದು.
ಇವತ್ತಿನ ದುಡಿಮೆಯ ಸುಪತ್ತಿಗೆಯಲ್ಲಿ ಆ ಕ್ಸೇತ್ರದಲ್ಲಿರುವ ಎಲ್ಲ ಯುವಜನರಿಗೂ ಹಣದ ಜಲದ ಬುಗ್ಗೆ [ Foutain ] ಅವರ ಅಂಗೈಯಲ್ಲೇ ಇದೆ. ಈ ಅಮಲಿನಲ್ಲಿ ದಾಂಪತ್ಯದ ಬಾಂಧವ್ಯ ಬಹುತೇಕ ಯುವಜನರಲ್ಲಿ ಶಿಥಿಲವಾಗುತ್ತಿದೆ. ಯಾರಿಗೆ ಯಾರೂ ಕೇರ್ ಮಾಡುವ ಸ್ಥಿತಿಯಲ್ಲಿಲ್ಲ. ಏಕೆಂದರೆ ತನ್ನ ಹೊಟ್ಟೆಗೆ ಯಾರೂ ಏನು ದುಡಿದು ಹಾಕುವ ಅನಿವಾರ್ಯತೆ ಇಲ್ಲ. ಹಣದ ಎದುರು ಬದುಕಿನ ಉಳಿದ ಎಲ್ಲಾ 'ಬೇಕು 'ಗಳು ಅವರಿಗೆ ಈಗ ಗೋಚರಿಸುವುದಿಲ್ಲ.
ಇದರ ಪರಿಣಾಮ ವಿಚ್ಚೇದನ . ನಂತರ ತನ್ನ ಮಾತನ್ನೇ ಕೇಳುವಂಥಹ ಸಂಗಾತಿಗಾಗಿ ಶೋಧನೆ, ಅಂಥಹವರು ಸಿಕ್ಕಿದರೆ ತನ್ನ ಕರಾರುಗಳನ್ನು ಮುಂಚೆಯೇ ಮಂಡಿಸಿ ಅದು ಓ. ಕೆ . ಆದರೆ ನಂತರ ಮದುವೆ. ಆ ಮದುವೆಯಿಂದಾದ ದಾಂಪತ್ಯವೂ ಸಾಪ್ರದಾಯಿಕವಾದುದಲ್ಲ. ಅದು " Get together " ಮಾದರಿ. ಇದೇ ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು.
ಒಮ್ಮೆ ವಿಚ್ಚೇದನವಾಗದಿದ್ದರೂ ಬಹು ದಂಪತಿಗಳಲ್ಲಿ ಸಾಮರಸ್ಯವಿರುವುದಿಲ್ಲ. ಅದು ಶಿಥಿಲ ದಾಂಪತ್ಯ. ಪರಸ್ಪರ ಭಿನ್ನಾಭಿಪ್ರಾಯ, ಬದ್ಧತೆಯ ಕೊರತೆ, ಯಾರಿಗೆ ಯಾರೂ ಸೋಲುವುದಿಲ್ಲ. ಪರಸ್ಪರರ ಮೇಲೆ ಮಕ್ಕಳನ್ನೇ ಅಸ್ತ್ರವನ್ನಾಗಿ ಪ್ರಯೋಗಿಸುವುದು, ಮಕ್ಕಳಲ್ಲಿಯೂ ತಂದೆ ಅಥವಾ ತಾಯಿಯ ಮೇಲೆ ದ್ವೇಷ ಹುಟ್ಟುವಂತೆ ಪರಸ್ಪರರು ಮಾಡುವುದು, ಇದರಿಂದಾಗಿ ಮಕ್ಕಳ ಭವಿಷ್ಯ ಅಧೋಗತಿಗೆ ಹೋಗುವುದು ಮುಂತಾದುವು ಇಂಥಹ ಶಿಥಿಲ ದಾಂಪತ್ಯದಲ್ಲಿ ಕಂಡು ಬರುತ್ತವೆ.
ಗಂಡು - ಹೆಣ್ಣು ಜೊತೆಗಿರಬೇಕು ಎಂದರೆ ಮದುವೇನೆ ಆಗಬೇಕಾ ?. ಏನೂ ಮಾಡ್ಕೊಳ್ಳದೆ ಸುಮ್ಮನೆ ಕೂಡಿಕೊಂಡಿದ್ದರೆ ಆಗಲ್ವಾ ?. ಗಂಡು ಮತ್ತು ಹೆಣ್ಣು ಸರಿಸಮಾನವಾಗಿ ಕೈತುಂಬಾ ಹಣವನ್ನು ಕಿವುಚುವ ಇಂದಿನ ಕಾಲದಲ್ಲಿ, ಎಲ್ಲರೂ ಅಲ್ಲದಿದ್ದರೂ, ಬಹಳ ಹೆಣ್ಣು - ಗಂಡುಗಳು ತಮ್ಮಲ್ಲಿಯೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳು ಇವು.
ಈ ಗೋಜಲಿನಲ್ಲಿ ವರ್ಷಗಳು ಉರುಳುತ್ತವೆ. ಯೌವನವೂ ಅದರ ಜೊತೆಗೆ ಸಾಗುತ್ತಿರುತ್ತದೆ. ಮುಪ್ಪು ಹತ್ತಿರ ಬಂದಿರುತ್ತದೆ. ಹುಳಿ ಮುಪ್ಪಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮರವಂತೂ ಮುಪ್ಪಾಗುತ್ತದೆ. ಯುವಕ ತನ್ನ ಹಳೆತನಕ್ಕೆ ತಲುಪಿ ಚರ್ಮ ಸುಕ್ಕುಗಟ್ಟುತ್ತಿರುವುದನ್ನು ಅನುಭವಿಸುತ್ತಾನೆ. ಯುವತಿಗೆ ಮುಟ್ಟು ಸಾವರಿಸುವ ಹಂತ ಬಂದಿರುತ್ತದೆ.
ಈ ಹಂತದಲ್ಲಿ ಬದುಕಿನ ವಾಸ್ತವಾಂಶ ಅರಿವಿಗೆ ಬರುತ್ತದೆ. ಈ ಸಮಯದಲ್ಲಿ ಮನುಷ್ಯನ ಬಯಕೆಗಳನ್ನು ನಿಭಾಯಿಸಿಕೊಳ್ಳಲು ' ಹಣ ' ವೊಂದೇ ಸಾಲದು. ಜೀವನದಲ್ಲಿ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಬೇಕು. ಅದರಂತೆಯೇ ಕೌಟುಂಬಿಕ ಜೀವನದಲ್ಲಿ ಒಂದು ಹೆಣ್ಣಿಗೆ ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಭೌತಿಕ ಅವಲಂಬನೆ ಎನ್ನುವುದು ಒಂದು ಅನಿವಾರ್ಯ ಸಂಗತಿ. ಸರಿಯಾದ ದಾಂಪತ್ಯವನ್ನು ರೂಪಿಸಿಕೊಳ್ಳಬೇಕು. ಬದ್ಧತೆ, ಒಡಂಬಡಿಕೆ, ನೆಮ್ಮದಿ, ಸುಗಮ ಸಾಂಗತ್ಯ ಇರಬೇಕು ಎಂದು ಅರಿವಾಗುವುದು. ಈ ಸೌಹಾರ್ದತೆಯಲ್ಲಿ ಸಂಸಾರ, ಮಕ್ಕಳು .... ಇವನ್ನೆಲ್ಲ ರೂಪಿಸಿಕೊಳ್ಳಬೇಕಾಗಿತ್ತು, ತಾವು ತಮ್ಮ ದಾಂಪತ್ಯದ ಪ್ರಥಮದಲ್ಲಿ ಮಕ್ಕಳನ್ನು ಹೊಂದಿ ನಾವು ಪೋಷಿಸಬೇಕಾಗಿತ್ತು. ತಮ್ಮ ಸುಗಮ ದಾಂಪತ್ಯದ ಮಾತ್ರದಿಂದ ಮಾಡಿದ ಪೋಷಣೆಯಿಂದ ಬೆಳೆದ ಮಕ್ಕಳು ಸಮರ್ಥರಾಗಿ ಇಳಿವಯಸ್ಸಿನಲ್ಲಿ ತಮಗೆ ಪೋಷಕರಾಗಲು ಸಾಧ್ಯವಾಗಿತ್ತು ಎಂಬ ಪ್ರಜ್ಞೆ ಕಾಲ ಮೀರಿದ ಮೇಲೆ ಅವರಿಗೆ ಬರುತ್ತದೆ. ಅಲ್ಲಿಯವರೆಗೂ ಯೌವನದ ಅವಧಿ ಅಲ್ಪ, ಅದು ಬೇಗ ಕಳೆದುಹೋಗುತ್ತದೆ, ಯಾವುದಕ್ಕೂ ಕಾಲವನ್ನೇ ಅನುಸರಿಸಿಕೊಂಡು ಜೀವನದ ಮಿತ ವಿಸ್ತಾರವನ್ನು ಅರಿತು ಮುನ್ನಡೆಯಬೇಕು ಎಂಬ ಸತ್ಯವನ್ನು ಗಮನಿಸುವ ಗೋಜಿಗೆ ಅವರು ಹೋಗಿರುವುದಿಲ್ಲ. ಈ ಸತ್ಯಗಳನ್ನು ತಿಳಿಯುವ ಹೊತ್ತಿಗೆ ಅವರಿಗೆ ಹಲ್ಲು ಬೀಳುವ ಕಾಲ ಬಂದಿರುತ್ತದೆ.
ಆದ್ದರಿಂದ " ಮದುವೆ " ಎನ್ನುವುದು ಹೆಣ್ಣು ಮತ್ತು ಗಂಡು ಈ ಎರಡು ಜೀವಗಳನ್ನು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಹೃದಯ ಪೂರ್ವಕವಾಗಿ ಬೆಸೆಯುವಂಥಹ ಒಂದು ವಿಶೇಷ ಘಟನೆ. ಇದು ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಪರಸ್ಪರ ಪರಿಪೂರ್ಣ ಸಮರ್ಪಣೆ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಬೇಕು. ಕೇವಲ "JUST GET TOGETHER " ಪದ್ಧತಿಯಲ್ಲಿ ಇದು ಸಾಧ್ಯವಾಗುವುದಿಲ್ಲ. ಸಾಂಪ್ರದಾಯಿಕ ಮದುವೆಯ ಮಹತ್ವ ಇರುವುದೇ ಇಲ್ಲಿ. ಅದನ್ನು ಹರಿದುಕೊಂಡು ಹದ್ದು ಮೀರಿದರೆ ಈಗಾಗಲೇ ಹೇಳಿದ ಗೊಂದಲಗಳನ್ನು ಅನುಭವಿಸಬೇಕಾಗುತ್ತದೆ.
ಮಾಡಿಕೊಂಡ ಮದುವೆಯನ್ನು ಮುರಿದುಕೊಂಡು ಇದಕ್ಕಿಂತ ಒಳ್ಳೆಯ ಸಂಗಾತಿಯನ್ನು ಪಡೆಯುತ್ತೇನೆ ಎಂದು ಕನವರಿಸಿ ಮತ್ತೊಬ್ಬನನ್ನು \ ಮತ್ತೊಬ್ಬಳನ್ನು ಕಟ್ಟಿಕೊಂಡರೆ ಸಾಂಗತ್ಯವನ್ನು ಪ್ರಯತ್ನ ಪೂರ್ವಕವಾಗಿ ನಿರ್ಮಿಸಿಕೊಳ್ಳದಿದ್ದರೆ ಅಲ್ಲಿಯೂ ದುರಂತವೇ.
ಇದ್ದಲ್ಲಿಯೇ ಕಾಡಿ ಕೂಡಿಕೊಂಡು ಹೋಗದವರು ಎಲ್ಲಿಯೂ ಹೊಂದಿಕೊಳ್ಳಲು ಕಷ್ಟಸಾಧ್ಯ. ಏಕೆಂದರೆ ಮನುಷ್ಯನ ಮನಸ್ಸು ಮತ್ತು ಸ್ವಭಾವ ಹೇಗಿರುತ್ತದೆಯೆಂದರೆ ಮತ್ತೊಬ್ಬನಿಗೆ ನಾವು ಹೊಂದಿಕೊಂಡು ಮುಂದೆ ಸಾಗಬೇಕೇ ವಿನಃ ಮತ್ತೊಬ್ಬನು ನಮಗೆ ಎಂದೂ, ಎಲ್ಲಿಯೂ, ಹೇಗೂ ಹೊಂದಿಕೊಳ್ಳುವುದಿಲ್ಲ.
~~~~~~ ಎಂ.ಗಣಪತಿ ಕಾನುಗೋಡು.
ತಾರೀಖು : 12 - 11 - 2014

ಮೂರ್ಛೆರೋಗ


ಪ್ರಸ್ತುತಿ : ಎಂ.ಗಣಪತಿ ಕಾನುಗೋಡು.
ಮೂರ್ಛೆರೋಗಕ್ಕೆ ವಿಶೇಷವಾದ ಗಮನ ಮತ್ತು ಚಿಕಿತ್ಸೆ ಬೇಕಾಗುತ್ತದೆ. ಇದಕ್ಕೆ ನರರೋಗ ತಜ್ಞರಿಂದ ಸಲಹೆಯನ್ನು ಪಡೆಯಬೇಕಾಗುತ್ತದೆ.
ಮೂರ್ಛೆರೋಗ ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ವ್ಯತ್ಯಾಸದಿಂದ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಬದಲಾವಣೆಗಳಿಂದ ಕಾಣಿಸಿಕೊಳ್ಳುತ್ತದೆ.ಈ ದೋಷದಿಂದ ಮೆದುಳಿನ ಪ್ರಕ್ರಿಯೆಯಲ್ಲಿ ಬದಲಾವಣೆಯುಂಟಾಗಿ ಮೂರ್ಛೆ ಬರುತ್ತದೆ.
ಪ್ರಥಮ ಚಿಕಿತ್ಸೆ :
ಮೂರ್ಛೆರೋಗ ಬಂದ ವ್ಯಕ್ತಿಯನ್ನು ಬಾಗಿಸುವುದಾಗಲಿ, ಅವರ ತಕ್ಷಣದ ಚಲನೆಗಳನ್ನು ನಿಯಂತ್ರಿಸುವುದಾಗಲಿ, ಅವರ ಬಾಯಿಗೆ ಯಾವುದಾದರೂ ವಸ್ತುಗಳನ್ನು ಅಡ್ಡ ಇಡುವುದಾಗಲೀ ಮಾಡಕೂಡದು. ಅವರನ್ನು ಒಂದೆಡೆ ಮಲಗಿಸಿ ಚೆನ್ನಾಗಿ ಗಾಳಿ, ಬೆಳಕು ಅವನಿಗೆ ಸಿಗುವಂತೆ ನೋಡಿಕೊಳ್ಳಬೇಕು. ಆ ವ್ಯಕ್ತಿಯ ಉಸಿರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶಾಂತತೆಯನ್ನು ಕಾಯ್ದುಕೊಳ್ಳಬೇಕು. ಯಾರೂ ಗಾಬರಿಯಾಗಿ ಆ ವ್ಯಕ್ತಿಯನ್ನು ಸುತ್ತುಗಟ್ಟಬಾರದು. ಅಪಾಯಕಾರಿ ವಸ್ತುಗಳನ್ನು ದೂರವಿರಿಸಿ ಧರಿಸಿದ ಬಟ್ಟೆಯನ್ನು ಸಡಿಲಿಸಬೇಕು. ಕೆಳಗೆ ಬೀದ್ದ ವ್ಯಕ್ತಿಯನ್ನು ಮಗ್ಗುಲಾಗಿ ಮಲಗಿಸಿ ತಲೆಯ ಕೆಳಗೆ ಮೆತ್ತನೆಯ ದಿಂಬನ್ನು ಇರಿಸಬೇಕು. ಸಾಧ್ಯವಾದಸ್ಟು ಮಟ್ಟಿಗೆ ಎಷ್ಟು ನಿಮಿಷ ಮೂರ್ಛೆ ಇತ್ತು ಎಂಬುದನ್ನು ಕರಾರುವಾಕ್ಕಾಗಿ ಗಮನಿಸಬೇಕು. ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಮೂರ್ಛೆ ತಾನಾಗಿಯೇ ನಿಲ್ಲುತ್ತದೆ. ಅಲ್ಲಿಯವರೆಗೆ ಸುತ್ತಲಿದ್ದವರು ಶಾಂತಿಯಿಂದ ಆ ವ್ಯಕ್ತಿಯನ್ನು ಮತ್ತು ಮೂರ್ಛೆ ನಿಲ್ಲುವ ಸಮಯವನ್ನು ಕಾಯಬೇಕು. ಆ ವ್ಯಕ್ತಿಗೆ ಪೂರ್ಣ ಪ್ರಜ್ಞೆ ಬರುವ ತನಕ ಕುಡಿಯಲು ಅಥವ ತಿನ್ನಲು ಏನನ್ನೂ ಕೊಡಬಾರದು. ಮೂರ್ಛೆ ಬಂದಾಗ ಚಿಟಿಕೆ ಹಾಕುವುದು,ಕೈಗೆ ಕಬ್ಬಿಣ ಹಿಡಿಸುವುದು, ಈರುಳ್ಳಿ ಅಥವ ಚಪ್ಪಲಿಯನ್ನು ಮೂಸಿಸುವುದು ಇತ್ಯಾದಿಗಳನ್ನು ಮಾಡಬಾರದು.ಇವುಗಳಿಂದ ಆ ವ್ಯಕ್ತಿಯು ಎಚ್ಚರಗೊಳ್ಳುತ್ತಾನೆಂಬುದು ಮೂಢನಂಬಿಕೆಯಷ್ಟೆ
ಐದು ನಿಮಿಷಗಳಲ್ಲಿ ಮೂರ್ಛೆ ನಿಲ್ಲದಿದ್ದಲ್ಲಿ ರೋಗಿಯನ್ನು ವ್ಯವಸ್ತಿತವಾಗಿ ವೈದ್ಯರ ಬಳಿ ಕೊಂಡೊಯ್ಯಬೇಕು. ಇದು ಅತಿ ಮುಖ್ಯ.
ಈ ರೋಗ ಹಲವಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ.ಮೂರ್ಛೆಯ ಲಕ್ಷಣಗಳನ್ನು ಗಮನಿಸಿ ಇದನ್ನು ಎರಡು ವಿಧಗಳನ್ನಾಗಿ ವಿಂಗಡಿಸಲಾಗಿದೆ.
1 .ಪೂರ್ಣ ಪ್ರಮಾಣದ ಮೂರ್ಛೆ :
ಮೆದುಳಿಗೆ ಪೂರ್ಣಪ್ರಮಾಣದಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ದೋಷದಿಂದ ಈ ರೀತಿ ಮೂರ್ಛೆ ಸಂಭವಿಸುತ್ತದೆ. ಇಂಥಹವರಲ್ಲಿ ರೋಗದ ಬಗ್ಯೆ ಯಾವುದೇ ತರಹದ ಮುನ್ಸೂಚನೆ ಕಾಣುವುದಿಲ್ಲ. ಈ ರೀತಿಯ ಪೂರ್ಣ ಪ್ರಮಾಣದ ಮೂರ್ಛೆರೋಗದಲ್ಲಿಯೂ ಸುಮಾರು ನಾಲ್ಕು ವಿಧಗಳಿವೆ. A ) .Toniclonic seizure . B ) .Absence seizure . C ) .Myoclonic seizure . D ) .Atonic seizure .
2 . ಪಾರ್ಶ್ವಿಕ ಮೂರ್ಛೆ :
ಮೆದುಳಿನ ಯಾವುದಾದರೂ ಒಂದು ಭಾಗದಲ್ಲಿ ಮಾತ್ರ ವಿದ್ಯುತ್ ತರಂಗಗಳ ದೋಷ ಉಂಟಾಗುವುದರಿಂದ ಇದು ಸಂಭವಿಸುತ್ತದೆ. ಈ ತರಹದ ಮೂರ್ಛೆರೋಗ ಇರುವವರಿಗೆ ಮೂರ್ಛೆ ಬರುವ ಮೊದಲು ಮುನ್ಸೂಚನೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ಕೆಲವು ರೋಗಿಗಳಿಗೆ ಮುನ್ಸೂಚನೆಯ ಅರಿವಾಗದಿದ್ದರೂ ಅವರನ್ನು ಗಮನಿಸುತ್ತಿರುವವರು ಮುನ್ಸೂಚನೆಯನ್ನು ಗಮನಿಸಲು ಸಾಧ್ಯವಾಗುತ್ತದೆ. ಈ ತರಹದ ಪಾರ್ಶ್ವಿಕ ಮೂರ್ಛೆಯಲ್ಲಿ ಎರಡು ವಿಧಗಳಿವೆ.
A ) ಸರಳ ಪಾರ್ಶ್ವಿಕ ಮೂರ್ಛೆ. B ) ಮಿಶ್ರ ಪಾರ್ಶ್ವಿಕ ಮೂರ್ಛೆ.
ಮೂರ್ಛೆರೋಗವನ್ನು ಮತ್ತು ಅದರ ಬಗೆಯನ್ನು ಕೇವಲ ರೋಗ ಲಕ್ಷಣಗಳಿಂದ ಮಾತ್ರ ನಿರ್ಧರಿಸಲಾಗುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯಲ್ಲಿ ಮೂರ್ಛೆರೋಗದ ಲಕ್ಷಣ ಕಂಡಾಗ ಜೊತೆಯಲ್ಲಿದ್ದವರು ಗಾಬರಿಯಾಗದೆ ಆ ಸಂದರ್ಭದಲ್ಲಿ ಆವ್ಯಕ್ತಿಯಲ್ಲಿ ಕಂಡುಬರುವ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದನ್ನು ವೈದ್ಯರ ಹತ್ತಿರ ವಿವರಿಸಿದರೆ ಅದು ಮೂರ್ಛೆರೋಗವೋ, ಹೌದಾದರೆ ಅದು ಯಾವ ಬಗೆಯದು ಎಂದು ವೈದ್ಯರು ನಿರ್ಧರಿಸಲು ಸುಲಭವಾಗುತ್ತದೆ. ಇಂದಿನ ಮೊಬೈಲ್ ಯುಗದಲ್ಲಿ ಅ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಕಂಡುಬರುವ ಬದಲಾವಣೆಗಳನ್ನು ಚಿತ್ರೀಕರಿಸಿ ವೈದ್ಯರಿಗೆ ತೋರಿಸುವುದರಿಂದ ರೋಗದ ಖಚಿತತೆಯನ್ನು ನಿರ್ಣಯಿಸಲು ಸಹಾಯವಾಗುತ್ತದೆ.
ಮೂರ್ಛೆ ರೋಗಿಗಳಲ್ಲಿ ಕಾಯಿಲೆಗೆ ಕಾರಣವನ್ನು ಪತ್ತೆ ಹಚ್ಚಲು ಮತ್ತು ಆ ರೋಗ ಯಾವ ತರಹದ್ದೆಂದು ಗುರುತಿಸಲು ಕೆಲವು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಅವೆಂದರೆ 1 .ರಕ್ತ ಪರೀಕ್ಷೆ. 2 .ಇ. ಇ. ಜಿ. 3 . ಮೆದುಳಿನ ಸ್ಕ್ಯಾನಿಂಗ್ 4 . C . S . F Analysis .
ಮೂರ್ಛೆರೋಗಕ್ಕೆ ಸಂಬಂಧಿಸಿದ ವೈದ್ಯರ ಸಲಹೆಯಂತೆ ಸೂಕ್ತ ಔಷಧ ಸೇವನೆ ಮುಖ್ಯವಾದ ಚಿಕಿತ್ಸೆ. ಔಷಧಗಳಿಂದ ರೋಗ ಹತೋಟಿಗೆ ಬಾರದವರಲ್ಲಿ [ ಇದು ಅತಿ ಕಡಿಮೆ ] ಅಂಥಹ ರೋಗಿಗಳಿಗೆ ಶಸ್ತ್ರಚಿಕಿತ್ಸೆಯಿಂದ ರೋಗವನ್ನು ಹತೋಟಿಗೆ ತರಬಹುದು.
ಈ ಕಾಯಿಲೆಯು ಯಾವುದೇ ವಯಸ್ಸಿನಲ್ಲಾದರೂ ಕಾಣಬಹುದು. ಇದು ಮಕ್ಕಳಲ್ಲಿ ಸ್ವಲ್ಪ ಹೆಚ್ಚು. ಹಾಗೆಂದು ಬಾಲಗ್ರಹದ ವಿಚಾರ ಬೇರೆ.ಅದನ್ನೂ ತಕ್ಕ ಚಿಕಿತ್ಸೆಯಿಂದ ಗುಣಮಾಡಬಹುದು. ವೃಧ್ಯಾಪ್ಯದಲ್ಲಿ ಈ ಕಾಯಿಲೆ ಸ್ವಲ್ಪ ಕಡಿಮೆ. ಇದು ಅಂಟುರೋಗವಲ್ಲ. ಈ ರೋಗವಿದ್ದವರು ಈಜುವುದು, ವಾಹನ ಚಾಲನೆ ಮುಂತಾದುವುದರಲ್ಲಿ ಜಾಗರೂಕರಾಗಿರಬೇಕು. ಕೆಲವು ವಿಧದ ಮೂರ್ಛೆರೋಗಗಳು ಆನುವಂಶಿಕವಾಗಿ ಬರಬಹುದು. ಆದರೆ ಹೆಚ್ಚಿನ ಪ್ರಸಂಗಗಳಲ್ಲಿ ಇದು ಅನುವಂಶಿಕವಲ್ಲ ಎಂಬುದು ಮುಖ್ಯ. ಈ ರೋಗದಿಂದ ಬಳಲುವ ಎಲ್ಲರೂ ಸಮಾಜದ ಎಲ್ಲರಂತೆ ಜೀವನ ನಡೆಸಬಹುದು. ಮುಖ್ಯವಾಗಿ ಹೇಳುವುದಾದರೆ ಈ ರೋಗವಿರುವ ಗರ್ಭಿಣಿ ಸ್ತ್ರೀಯರು, ಬಾಣಂತಿಯರು ಕೂಡ ವೈದ್ಯರ ಸಲಹೆಯಂತೆ ಮಾತ್ರೆ ಸೇವನೆ ಮಾಡುತ್ತ ಇದ್ದರೆ, ಆ ಸಂದರ್ಭದಲ್ಲಿ ಅನುಸರಿಸಬೇಕಾದ ವೈದ್ಯರ ಸಲಹೆಯನ್ನು ಪಾಲಿಸಿದರೆ ಎಲ್ಲರಂತೆ ಇರಬಹುದು
ಮೂರ್ಛೆರೋಗವಿದ್ದವರು ಪಾಲಿಸಬೇಕಾದ ಅಂಶಗಳು. :
+ ಈ ರೋಗವಿದ್ದವರು ಸಂಬಂಧಿಸಿದ ವೈದ್ಯರ ಸಲಹೆಯ ಪ್ರಕಾರವೇ ಔಷಧವನ್ನು ಸೇವಿಸುವುದರಲ್ಲಿ ತಪ್ಪಬಾರದು. + ಕ್ರಮ ತಪ್ಪದೆ ಪ್ರತಿನಿತ್ಯ ಔಷಧವನ್ನು ಸೇವಿಸಬೇಕು.
+ ವೈದ್ಯರ ಸೂಚನೆಯಿಲ್ಲದೆ ಔಷಧವನ್ನು ಮತ್ತು ಅದರ ಪ್ರಮಾಣವನ್ನು ಬಲಿಸಬಾರದು.
+ ಯಾವುದೇ ಕಾರಣಕ್ಕೂ ವೈದ್ಯರು ಸಲಹೆ ಮಾಡಿದ ಮಾತ್ರೆಗಳನ್ನು ದಿಢೀರನೆ ನಿಲ್ಲಿಸಬಾರದು. ಹೀಗೆ ಮಾಡಿದಲ್ಲಿ ಮೂರ್ಛೆರೋಗ ಮರುಕಳಿಸುವ ಸಾಧ್ಯತೆ ಇದೆ. ಅಲ್ಲದೆ ಹಾಗೆ ಬರುವ ರೋಗ ಇನ್ನೂ ತೀವ್ರ ಸ್ವರೂಪದ್ದಾಗಬಹುದು.
ತಾರೀಖು :25 - 11 - 2014
ಮಾಹಿತಿಯ ಕೃಪೆ : ಡಾ ||. ಎ. ಶಿವರಾಮಕೃಷ್ಣ . ನರರೋಗತಜ್ಞರು. ಶಿವಮೊಗ್ಗ. [ ಅವರ "ಮೆದುಳಿನ ಕಾಯಿಲೆಗಳು" -- ಪುಸ್ತಕದಿಂದ ]

Monday 17 November 2014

ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು

~~~~~~ ಎಂ.ಗಣಪತಿ. ಕಾನುಗೋಡು
ಇಂದಿನ ತೀವ್ರಗಾಮಿ ಚಲನೆಯ ಸಮಾಜದಲ್ಲಿ ಯುವತಿಯರು ಯುವಕರಿಗೆ ಸರಿಸಮನಾಗಿ ವಿದ್ಯಾರ್ಹತೆ, ಸ್ವಂತ ದುಡಿದು ಹಣ ಗಳಿಸಬೇಕೆನ್ನುವ ಹಪಾಹಪಿ, ಗಂಡಿನ ಆಧಾರವಿಲ್ಲದೆ ಒಬ್ಬಂಟಿಯಾಗಿ ಮುನ್ನುಗ್ಗುವ ದಾಷ್ಟ್ಯ ...... ಈ ಎಲ್ಲವನ್ನು ಹೊಂದಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಿನ ಭಾಗದ ಯುವತಿಯರಿಗೆ ಜೀವನೋಪಾಯಕ್ಕಾಗಿ ಹಿಂದಿನಂತೆ ಪುರುಷನನ್ನು ಅವಲಂಬಿಸುವ ಅಗತ್ಯವಿಲ್ಲ. ಇದಕ್ಕೆಲ್ಲ ಕಾರಣ ಅವರು ಹೊಂದಿರುವ ಆರ್ಥಿಕ ಸ್ವಾವಲಂಬನೆ.
ಇಲ್ಲಿ ಒಂದು ಪ್ರಶ್ನೆ ಇದೆ. ಪುರುಷನಿಗೆ ಆಗಲಿ ಮಹಿಳೆಗೆ ಆಗಲಿ, ಹಣವೊಂದೇ ಜೀವನದ ಏಕಮೇವ ಪೂರೈಕೆಯೇ? ಅಲ್ಲ. ಬದುಕಿನ ಅನೇಕ " ಬೇಕು " ಗಳಲ್ಲಿ ಹಣವು ಒಂದು ಅಷ್ಟೆ. ಆದರೆ ಹಣವೊಂದರಿಂದಲೇ ಬದುಕಿನ ಎಲ್ಲ ಬಯಕೆಗಳನ್ನು ನಿಭಾಯಿಸಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯನ ಅನೇಕ " ಬೇಕು " [ Wants ] ಗಳಲ್ಲಿ ಒಂದು ಹೆಣ್ಣಿಗೆ ಒಂದು ಗಂಡು, ಒಂದು ಗಂಡಿಗೆ ಒಂದು ಹೆಣ್ಣು ಬೇಕು ಎನ್ನುವುದು ಪ್ರಮುಖ. ಈ 'ಬೇಕು' ಅನೇಕ ಕಾರಣಗಳಿಂದ ಒಂದು ಅಗತ್ಯ. ಇದರಿಂದಾಗಿಯೇ ' ವಿವಾಹದ ಪರಿಕಲ್ಪನೆ ' ಹುಟ್ಟಿಕೊಂಡಿದ್ದು.
ಇವತ್ತಿನ ದುಡಿಮೆಯ ಸುಪತ್ತಿಗೆಯಲ್ಲಿ ಆ ಕ್ಸೇತ್ರದಲ್ಲಿರುವ ಎಲ್ಲ ಯುವಜನರಿಗೂ ಹಣದ ಜಲದ ಬುಗ್ಗೆ [ Foutain ] ಅವರ ಅಂಗೈಯಲ್ಲೇ ಇದೆ. ಈ ಅಮಲಿನಲ್ಲಿ ದಾಂಪತ್ಯದ ಬಾಂಧವ್ಯ ಬಹುತೇಕ ಯುವಜನರಲ್ಲಿ ಶಿಥಿಲವಾಗುತ್ತಿದೆ. ಯಾರಿಗೆ ಯಾರೂ ಕೇರ್ ಮಾಡುವ ಸ್ಥಿತಿಯಲ್ಲಿಲ್ಲ. ಏಕೆಂದರೆ ತನ್ನ ಹೊಟ್ಟೆಗೆ ಯಾರೂ ಏನು ದುಡಿದು ಹಾಕುವ ಅನಿವಾರ್ಯತೆ ಇಲ್ಲ. ಹಣದ ಎದುರು ಬದುಕಿನ ಉಳಿದ ಎಲ್ಲಾ 'ಬೇಕು 'ಗಳು ಅವರಿಗೆ ಈಗ ಗೋಚರಿಸುವುದಿಲ್ಲ.
ಇದರ ಪರಿಣಾಮ ವಿಚ್ಚೇದನ . ನಂತರ ತನ್ನ ಮಾತನ್ನೇ ಕೇಳುವಂಥಹ ಸಂಗಾತಿಗಾಗಿ ಶೋಧನೆ, ಅಂಥಹವರು ಸಿಕ್ಕಿದರೆ ತನ್ನ ಕರಾರುಗಳನ್ನು ಮುಂಚೆಯೇ ಮಂಡಿಸಿ ಅದು ಓ. ಕೆ . ಆದರೆ ನಂತರ ಮದುವೆ. ಆ ಮದುವೆಯಿಂದಾದ ದಾಂಪತ್ಯವೂ ಸಾಪ್ರದಾಯಿಕವಾದುದಲ್ಲ. ಅದು " Get together " ಮಾದರಿ. ಇದೇ ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು.
ಒಮ್ಮೆ ವಿಚ್ಚೇದನವಾಗದಿದ್ದರೂ ಬಹು ದಂಪತಿಗಳಲ್ಲಿ ಸಾಮರಸ್ಯವಿರುವುದಿಲ್ಲ. ಅದು ಶಿಥಿಲ ದಾಂಪತ್ಯ. ಪರಸ್ಪರ ಭಿನ್ನಾಭಿಪ್ರಾಯ, ಬದ್ಧತೆಯ ಕೊರತೆ, ಯಾರಿಗೆ ಯಾರೂ ಸೋಲುವುದಿಲ್ಲ. ಪರಸ್ಪರರ ಮೇಲೆ ಮಕ್ಕಳನ್ನೇ ಅಸ್ತ್ರವನ್ನಾಗಿ ಪ್ರಯೋಗಿಸುವುದು, ಮಕ್ಕಳಲ್ಲಿಯೂ ತಂದೆ ಅಥವಾ ತಾಯಿಯ ಮೇಲೆ ದ್ವೇಷ ಹುಟ್ಟುವಂತೆ ಪರಸ್ಪರರು ಮಾಡುವುದು, ಇದರಿಂದಾಗಿ ಮಕ್ಕಳ ಭವಿಷ್ಯ ಅಧೋಗತಿಗೆ ಹೋಗುವುದು ಮುಂತಾದುವು ಇಂಥಹ ಶಿಥಿಲ ದಾಂಪತ್ಯದಲ್ಲಿ ಕಂಡು ಬರುತ್ತವೆ.
ಗಂಡು - ಹೆಣ್ಣು ಜೊತೆಗಿರಬೇಕು ಎಂದರೆ ಮದುವೇನೆ ಆಗಬೇಕಾ ?. ಏನೂ ಮಾಡ್ಕೊಳ್ಳದೆ ಸುಮ್ಮನೆ ಕೂಡಿಕೊಂಡಿದ್ದರೆ ಆಗಲ್ವಾ ?. ಗಂಡು ಮತ್ತು ಹೆಣ್ಣು ಸರಿಸಮಾನವಾಗಿ ಕೈತುಂಬಾ ಹಣವನ್ನು ಕಿವುಚುವ ಇಂದಿನ ಕಾಲದಲ್ಲಿ, ಎಲ್ಲರೂ ಅಲ್ಲದಿದ್ದರೂ, ಬಹಳ ಹೆಣ್ಣು - ಗಂಡುಗಳು ತಮ್ಮಲ್ಲಿಯೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳು ಇವು.
ಈ ಗೋಜಲಿನಲ್ಲಿ ವರ್ಷಗಳು ಉರುಳುತ್ತವೆ. ಯೌವನವೂ ಅದರ ಜೊತೆಗೆ ಸಾಗುತ್ತಿರುತ್ತದೆ. ಮುಪ್ಪು ಹತ್ತಿರ ಬಂದಿರುತ್ತದೆ. ಹುಳಿ ಮುಪ್ಪಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮರವಂತೂ ಮುಪ್ಪಾಗುತ್ತದೆ. ಯುವಕ ತನ್ನ ಹಳೆತನಕ್ಕೆ ತಲುಪಿ ಚರ್ಮ ಸುಕ್ಕುಗಟ್ಟುತ್ತಿರುವುದನ್ನು ಅನುಭವಿಸುತ್ತಾನೆ. ಯುವತಿಗೆ ಮುಟ್ಟು ಸಾವರಿಸುವ ಹಂತ ಬಂದಿರುತ್ತದೆ.
ಈ ಹಂತದಲ್ಲಿ ಬದುಕಿನ ವಾಸ್ತವಾಂಶ ಅರಿವಿಗೆ ಬರುತ್ತದೆ. ಈ ಸಮಯದಲ್ಲಿ ಮನುಷ್ಯನ ಬಯಕೆಗಳನ್ನು ನಿಭಾಯಿಸಿಕೊಳ್ಳಲು ' ಹಣ ' ವೊಂದೇ ಸಾಲದು. ಜೀವನದಲ್ಲಿ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಬೇಕು. ಯಾರೂ ಪರಿಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ಅದರ ಪೂರೈಕೆಗಾಗಿ ಮತ್ತೊಬ್ಬರನ್ನು ಅವಲಂಬಿಸುವುದು ಅಗತ್ಯ. ಅದರಂತೆಯೇ ಕೌಟುಂಬಿಕ ಜೀವನದಲ್ಲಿ ಒಂದು ಹೆಣ್ಣಿಗೆ ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಭೌತಿಕ ಅವಲಂಬನೆ ಎನ್ನುವುದು ಒಂದು ಅನಿವಾರ್ಯ ಸಂಗತಿ. ಸರಿಯಾದ ದಾಂಪತ್ಯವನ್ನು ರೂಪಿಸಿಕೊಳ್ಳಬೇಕು. ಬದ್ಧತೆ, ಒಡಂಬಡಿಕೆ, ನೆಮ್ಮದಿ, ಸುಗಮ ಸಾಂಗತ್ಯ ಇರಬೇಕು ಎಂದು ಅರಿವಾಗುವುದು. ಈ ಸೌಹಾರ್ದತೆಯಲ್ಲಿ ಸಂಸಾರ, ಮಕ್ಕಳು .... ಇವನ್ನೆಲ್ಲ ರೂಪಿಸಿಕೊಳ್ಳಬೇಕಾಗಿತ್ತು, ತಾವು ತಮ್ಮ ದಾಂಪತ್ಯದ ಪ್ರಥಮದಲ್ಲಿ ಮಕ್ಕಳನ್ನು ಹೊಂದಿ ನಾವು ಪೋಷಿಸಬೇಕಾಗಿತ್ತು. ತಮ್ಮ ಸುಗಮ ದಾಂಪತ್ಯದ ಮಾತ್ರದಿಂದ ಮಾಡಿದ ಪೋಷಣೆಯಿಂದ ಬೆಳೆದ ಮಕ್ಕಳು ಸಮರ್ಥರಾಗಿ ಇಳಿವಯಸ್ಸಿನಲ್ಲಿ ತಮಗೆ ಪೋಷಕರಾಗಲು ಸಾಧ್ಯವಾಗಿತ್ತು ಎಂಬ ಪ್ರಜ್ಞೆ ಕಾಲ ಮೀರಿದ ಮೇಲೆ ಅವರಿಗೆ ಬರುತ್ತದೆ. ಅಲ್ಲಿಯವರೆಗೂ ಯೌವನದ ಅವಧಿ ಅಲ್ಪ, ಅದು ಬೇಗ ಕಳೆದುಹೋಗುತ್ತದೆ, ಯಾವುದಕ್ಕೂ ಕಾಲವನ್ನೇ ಅನುಸರಿಸಿಕೊಂಡು ಜೀವನದ ಮಿತ ವಿಸ್ತಾರವನ್ನು ಅರಿತು ಮುನ್ನಡೆಯಬೇಕು ಎಂಬ ಸತ್ಯವನ್ನು ಗಮನಿಸುವ ಗೋಜಿಗೆ ಅವರು ಹೋಗಿರುವುದಿಲ್ಲ. ಈ ಸತ್ಯಗಳನ್ನು ತಿಳಿಯುವ ಹೊತ್ತಿಗೆ ಅವರಿಗೆ ಹಲ್ಲು ಬೀಳುವ ಕಾಲ ಬಂದಿರುತ್ತದೆ.
ಆದ್ದರಿಂದ " ಮದುವೆ " ಎನ್ನುವುದು ಹೆಣ್ಣು ಮತ್ತು ಗಂಡು ಈ ಎರಡು ಜೀವಗಳನ್ನು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಹೃದಯ ಪೂರ್ವಕವಾಗಿ ಬೆಸೆಯುವಂಥಹ ಒಂದು ವಿಶೇಷ ಘಟನೆ. ಇದು ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಪರಸ್ಪರ ಪರಿಪೂರ್ಣ ಸಮರ್ಪಣೆ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಬೇಕು. ಕೇವಲ "JUST GET TOGETHER " ಪದ್ಧತಿಯಲ್ಲಿ ಇದು ಸಾಧ್ಯವಾಗುವುದಿಲ್ಲ. ಸಾಂಪ್ರದಾಯಿಕ ಮದುವೆಯ ಮಹತ್ವ ಇರುವುದೇ ಇಲ್ಲಿ. ಅದನ್ನು ಹರಿದುಕೊಂಡು ಹದ್ದು ಮೀರಿದರೆ ಈಗಾಗಲೇ ಹೇಳಿದ ಗೊಂದಲಗಳನ್ನು ಅನುಭವಿಸಬೇಕಾಗುತ್ತದೆ.
ಮಾಡಿಕೊಂಡ ಮದುವೆಯನ್ನು ಮುರಿದುಕೊಂಡು ಇದಕ್ಕಿಂತ ಒಳ್ಳೆಯ ಸಂಗಾತಿಯನ್ನು ಪಡೆಯುತ್ತೇನೆ ಎಂದು ಕನವರಿಸಿ ಮತ್ತೊಬ್ಬನನ್ನು \ ಮತ್ತೊಬ್ಬಳನ್ನು ಕಟ್ಟಿಕೊಂಡರೆ ಸಾಂಗತ್ಯವನ್ನು ಪ್ರಯತ್ನ ಪೂರ್ವಕವಾಗಿ ನಿರ್ಮಿಸಿಕೊಳ್ಳದಿದ್ದರೆ ಅಲ್ಲಿಯೂ ದುರಂತವೇ.
ಇದ್ದಲ್ಲಿಯೇ ಕಾಡಿ ಕೂಡಿಕೊಂಡು ಹೋಗದವರು ಎಲ್ಲಿಯೂ ಹೊಂದಿಕೊಳ್ಳಲು ಕಷ್ಟಸಾಧ್ಯ. ಏಕೆಂದರೆ ಮನುಷ್ಯನ ಮನಸ್ಸು ಮತ್ತು ಸ್ವಭಾವ ಹೇಗಿರುತ್ತದೆಯೆಂದರೆ ಮತ್ತೊಬ್ಬನಿಗೆ ನಾವು ಹೊಂದಿಕೊಂಡು ಮುಂದೆ ಸಾಗಬೇಕೇ ವಿನಃ ಮತ್ತೊಬ್ಬನು ನಮಗೆ ಎಂದೂ, ಎಲ್ಲಿಯೂ, ಹೇಗೂ ಹೊಂದಿಕೊಳ್ಳುವುದಿಲ್ಲ.

Wednesday 29 October 2014

@ ಮನೆ ಮದ್ದು : ಬಾಳೆಹಣ್ಣು ಉಪಯೋಗ

~~~~~~~~ ಸಂಗ್ರಹ : ಎಂ.ಗಣಪತಿ.ಕಾನುಗೋಡು.
ಸುಲಭ ಬೆಲೆಯಲ್ಲಿ ಎಲ್ಲರ ಕೈಗೂ ದೊರಕುವ ಫಲ ಬಾಳೆಹಣ್ಣು. ಇದರ ಸಿಪ್ಪೆಗೆ ಕ್ರಿಮಿ, ಕೀಟಗಳ ನಿರೋಧಕ ಶಕ್ತಿ ಇದೆ. ಆದ್ದರಿಂದ ಕ್ರಿಮಿ ಈ ಹಣ್ಣನ್ನು ಭೇದಿಸಿ ಒಳಹೋಗಲಾರದು. ಒಮ್ಮೆ ಒಳಕ್ಕೆ ಹೋದರೂ ಬಾಳೆಹಣ್ಣಿನ ತಿರುಳು ಕ್ರಿಮಿನಾಶಕ ಶಕ್ತಿಯನ್ನು ಪಡೆದಿದೆ. ಯಾವುದೇ ಕಾರಣಕ್ಕೂ ಇದನ್ನು ಫ್ರಿಜ್ ನಲ್ಲಿ ಇಡಬಾರದು.
ಉಪಯೋಗ :
+ ಬಾಳೆಹಣ್ಣು ಎ, ಬಿ, ಸಿ ಮತ್ತು ಬಿ 6 ಜೀವಸತ್ವದಿಂದ ಸಮೃದ್ಧವಾಗಿದೆ.
+ ಬಾಳೆಹಣ್ಣಿನಲ್ಲಿ ಡೆಕ್ಸ್ ಟ್ರಿನ್ ಇದೆ. ಇದು ಜೀರ್ಣಶಕ್ತಿಗೆ ನೆರವಾಗುತ್ತದೆ. ದೇಹದ ತೂಕವೂ ಹೆಚ್ಚಾಗುತ್ತದೆ. ಆದ್ದರಿಂದ ಇದು ಉತ್ತಮ ಆಹಾರ.
+ ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಮತ್ತು ಒಂದು ಲೋಟ ಹಾಲು ಸಣ್ಣ ಮಕ್ಕಳ ಒಂದು ದಿನದ ಪರಿಪೂರ್ಣ ಆಹಾರವಾಗುತ್ತದೆ.
+ ಹಾಲು ಮತ್ತು ಜೇನುತುಪ್ಪದೊಡನೆ ಬಾಳೆಹಣ್ಣನ್ನು ಎಳೆಮಕ್ಕಳಿಗೆ ಕೊಡುವುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ರಕ್ತ ಪುಷ್ಟಿಯಾಗುತ್ತದೆ.
+ ಎಲುಬು ರೋಗಗಳಿಂದ ನರಳುತ್ತಿರುವ ಮಕ್ಕಳಿಗೆ ಬಾಳೆಹಣ್ಣು ಉತ್ತಮ ಆಹಾರ.
+ ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಬಾಳೆಹಣ್ಣನ್ನು ಸೇವಿಸಿದರೆ ಎದೆನೋವು ಮತ್ತು ಕೆಮ್ಮು ಕಡಿಮೆಯಾಗುತ್ತದೆ. ಆದರೆ ಉಷ್ಣ ಪ್ರಕೃತಿಯವರು ಒಣಕೆಮ್ಮು ಇದ್ದರೆ ಸ್ವಲ್ಪ ಪ್ರಯೋಗಿಸಿ ತಿನ್ನುವುದು ಅನುಕೂಲ. ಏಕೆಂದರೆ ಜೇನುತುಪ್ಪ ಉಷ್ಣಪ್ರೇರಿತವಾದದ್ದು. ಸಕ್ಕರೆಯೂ ಸ್ವಲ್ಪ ಉಷ್ಣವೇ. ಜೋನಿ ಬೆಲ್ಲ ತಂಪು. ಆದರೆ ಅಚ್ಚಿನ ಬೆಲ್ಲ ಉಷ್ಣ.
+ ಊಟದ ನಂತರ ಪ್ರತಿದಿನ ರಾತ್ರಿ ಬಾಳೆಹಣ್ಣನ್ನು ಹಾಲಿನೊಂದಿಗೆ ಸೇವಿಸಿದರೆ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಗಂಧಕ ಮತ್ತು ಕಬ್ಬಿಣದ ಅಂಶವಿರುವುದರಿಂದ ಬಲವರ್ಧಕವೂ ಮತ್ತು ವೀರ್ಯವರ್ಧಕವೂ ಆಗಿದೆ.
+ ಗರ್ಭಿಣಿಯರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ರಕ್ತಪುಷ್ಟಿ ಹೆಚ್ಚಾಗುತ್ತದೆ. ಅಲ್ಲದೆ ಹೆರಿಗೆಯೂ ಬಹುಸುಲಭವಾಗಿ ಆಗುತ್ತದೆ.
+ ಪ್ರತಿದಿನವೂ ಕ್ರಮವಾಗಿ ಬಾಳೆಹಣ್ಣನ್ನು ತಿನ್ನುವುದರಿಂದ ಮೈಯಲ್ಲಿನ ಮಾಂಸ ವೃದ್ಧಿಯಾಗುತ್ತದೆ. ಹೀಗೆ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದರಲ್ಲಿರುವ ನಾರಿನ ಅಂಶವು ಮಲಬದ್ಧತೆಯ ನಿವಾರಣೆಗೆ ಸಹಕಾರಿ.
+ ಬಾಳೆಹಣ್ಣಿನ ತಿರುಳನ್ನು ಹಸುವಿನ ಹಾಲಿನಲ್ಲಿ ಚೆನ್ನಾಗಿ ಅರೆದು [ಮೆದ್ದು] ಅದಕ್ಕೆ ಬಾಳೆಹೂವಿನ ರಸ ಸೇರಿಸಿ ಸುಮಾರು ಐವತ್ತು ದಿನಗಳ ಕಾಲ ಪ್ರತಿದಿನ ಒಂದು ಚಮಚ ಸೇವಿಸಿದರೆ ಶರೀರದ ತೂಕ ಇಳಿಯುತ್ತದೆ. ಸ್ಥೂಲಕಾಯರು ತೆಳ್ಳಗಾಗುತ್ತಾರೆ.
+ ಬಾಳೆಹಣ್ಣನ್ನು ಮೊಸರಿನಲ್ಲಿ ಕಿವಿಚಿಕೊಂಡು ತಿಂದರೆ ಕಣ್ಣು ಉರಿ, ಅಂಗಾಲು ಉರಿ ಶಾಂತವಾಗುವುದು.ಮತ್ತು ಮಲಬದ್ಧತೆಯು ನಿವಾರಣೆಯಾಗುವುದು. ಕರುಳಿನ ತೊಂದರೆಗಳು ನಿವಾರಣೆಯಾಗುತ್ತವೆ.
+ ಗಾಂಜಾ, ಆಫೀಮು ಸೇವಿಸಿ ಉಂಟಾಗಿರುವ ಹಾನಿಯನ್ನು ನಿವಾರಿಸಲು ಬಾಳೆದಿಂಡಿನ ರಸವನ್ನು ಸೇವಿಸಬೇಕು. [ ಬಂಗೀಪಾನಕದ ಅಮಲನ್ನು ಇಳಿಸಲು ಇದು ಅನುಕೂಲ ]
+ ಬಾಳೆ ಎಳೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಭಿಕ್ಕಳಿಕೆ ದೂರವಾಗುತ್ತದೆ.
+ ಮೈನೆರೆದ ಹುಡುಗಿಯರಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ಬಾಳೆಹೂವಿನ ರಸವನ್ನು ಮೊಸರಿನಲ್ಲಿ ಕೊಡುವುದರಿಂದ ಬಹುಬೇಗ ಗುಣವಾಗುತ್ತದೆ.
+ ಬಾಳೆಕಾಯಿಯನ್ನು ಬಿಸಿಬೂದಿಯಲ್ಲಿ ಸುಟ್ಟು ತಿನ್ನುವುದರಿಂದ ರಕ್ತಭೇದಿ ತಕ್ಷಣ ನಿಲ್ಲುತ್ತದೆ
+ ಉಪವಾಸವಿದ್ದು ದೇಹವು ದಣಿದಿದ್ದರೆ ಒಂದು ಬಾಳೆಹಣ್ಣು ತಿಂದರೆ ಸಾಕು. ಅದರಲ್ಲಿರುವ ಗ್ಲೂಕೋಸ್, ಸಕ್ಕರೆ ಅಂಶವು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.
+ ಅನಿಮೀಯಾದಿಂದ ನರಳುತ್ತಿರುವವರಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುವಂತೆ ಮತ್ತು ಬೆಳಗ್ಯಿನ ಸುಸ್ತನ್ನು ಕಡಿಮೆ ಮಾಡಲು ಇದು ಸಹಕಾರಿ.
+ ಮಾನಸಿಕ ಒತ್ತಡದಿಂದ ನರಳುತ್ತಿದ್ದರೂ ಸಹ ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ಮನಸ್ಸಿಗೆ ರಿಲ್ಯಾಕ್ಸ್ ದೊರೆಯುತ್ತದೆ. ಬಾಳೆಹಣ್ಣಿನಲ್ಲಿರುವ ಬಿ 6 ಜೀವಸತ್ವವು ನಮ್ಮ ಮನಸ್ಸು ಉಲ್ಲಾಸದಿಂದ ಇರುವಂತೆ ಮಾಡುತ್ತದೆ.
+ ಸೊಳ್ಳೆ ಕಚ್ಚಿದ ಭಾಗಕ್ಕೆ ಬಾಳೆಹಣ್ಣನ್ನು ಉಜ್ಜಿದರೆ ನವೆ ಮತ್ತು ಉರಿ ಕಡಿಮೆಯಾಗುತ್ತದೆ.
ತಾರೀಖು : 29 - 10 - 2014
ಮಾಹಿತಿಯ ಕೃಪೆ : ನುರಿತ ನಾಟಿ ವೈದ್ಯರು.

Thursday 23 October 2014

ಮೈಗ್ರೇನ್ ತಲೆನೋವು ಎಂದರೆ ಏನು ? ಹೇಗೆ ? ಏಕೆ ?.

                                                       

                                                           ಸಂಗ್ರಹ : ಎಂ. ಗಣಪತಿ. ಕಾನುಗೋಡು.


ಮೈಗ್ರೇನ್  [ Mygraine ] ಎನ್ನುವುದು ತಲೆನೋವಿನ ಒಂದು ಪ್ರಾಕಾರ. ಇದು ಇರುವವರಿಗೆ ತಲೆನೋವು ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಆಯಾಸದ ಸಂದರ್ಭಗಳಲ್ಲಿ ಕಂಡುಬರುತ್ತದೆ.

ಹಾಗೆಂದು ಎಲ್ಲಾ ತಲೆನೋವುಗಳೂ ಮೈಗ್ರೇನ್ ಅಲ್ಲ. ದೃಷ್ಟಿದೋಷ, ನೆಗಡಿಗೆ ಸಂಬಂಧಿಸಿದ ತೊಂದರೆಗಳು, ಜ್ವರ ಇತ್ಯಾದಿ ಕಾರಣಗಳಿಂದಲೂ ತಲೆನೋವು ಬರುತ್ತದೆ. ಆದರೆ ಅದು ಮೈಗ್ರೇನ್ ಅಲ್ಲ. ಆದರೆ ಮೈಗ್ರೇನ್ ತಲೆನೋವು ಅತ್ಯಂತ ಸಾಮಾನ್ಯವಾದದ್ದು.

ಮೈಗ್ರೇನ್ ಎಂದರೇನು ?.

ಕೆಲವು ಕಾರಣಗಳಿಂದ ಒಂದು ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ತಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕಸಿತವಾಗುತ್ತದೆ.ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳು ಉದ್ರೇಕಗೊಂಡು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದೇ ಮೈಗ್ರೇನ್.

ಇದರ ಲಕ್ಷಣಗಳು :-

ಈ ತರಹೆಯ ನೋವು ತಲೆಯ ಯಾವ ಭಾಗದಲ್ಲಾದರೂ ಕಾಣಿಸಿಕೊಳ್ಳಬಹುದು  ಹಾಗೂ  ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಕೆಲವರಿಗೆ ಕೇವಲ ಕಣ್ಣಿನ ಸುತ್ತ ಮಾತ್ರವೇ ಕಾಣಿಸಿಕೊಳ್ಳಬಹುದು. ಕೆಲವರಿಗೆ ಹಿಂಭಾಗದಲ್ಲಿ ಕುತ್ತಿಗೆಯವರೆಗೂ ನೋವು ಕಾಣಿಸಿಕೊಳ್ಳಬಹುದು. ಹೆಚ್ಚಾಗಿ, ತೀವ್ರವಾದ ತಲೆನೋವು ತಲೆಯ ಎಡ ಅಥವಾ ಬಲ ಭಾಗದಲ್ಲಿ ಇರುತ್ತದೆ.

ಈ ಮೇಲಿನ ಲಕ್ಷಣಗಳಲ್ಲದೆ ವಾಂತಿ, ಹೊಟ್ಟೆ ತೊಳಸಿದಂತೆ ಆಗುವುದು, ತಲೆ ಸುತ್ತಿದಂತೆ ಆಗುವುದು,  ಕೆಲವರಿಗೆ  ಹೆಚ್ಚು ಶಬ್ದ, ವಾಸನೆ, ಬೆಳಕುಗಳಿಂದ ಅಸಹನೆ ಹೆಚ್ಚಾಗಬಹುದು, ಮಾತನಾಡಲು ಕಷ್ಟವಾಗಬಹುದು, ಕೈ ಅಥವಾ ಕಾಲು ಮರಗಟ್ಟಿದ / ಬಿಗಿಯಾದ ಅನುಭವವಾಗಬಹುದು. Classic Migraine ಎಂಬ ರೀತಿಯಲ್ಲಿ  ತಲೆನೋವು ಬರುವ ಮುನ್ನ ದೃಷ್ಟಿ ಮಂಜಾದಂತೆ, ಮಿಂಚಿದಂತೆ ಅಥವಾ ಬಣ್ಣ ಬಣ್ಣದ ಅಲೆಗಳು ಕಾಣಿಸಿದಂತೆ ಸಹ ಆಗಬಹುದು.

ಇದಕ್ಕೆ ನಿರ್ಧಿಷ್ಟ ಕಾರಣವನ್ನು ಹೇಳಲಾಗದಿದ್ದರೂ ಈ ಕೆಲವು ಸಾಮಾನ್ಯ ಕಾರಣಗಳನ್ನು ಹೇಳಬಹುದು.

1  ಹೆಚ್ಚು ಕೆಲಸದಿಂದಾಗಿ ಮಾನಸಿಕ ಒತ್ತಡ ಇರುವ ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇದು ಸಾಮಾನ್ಯ. ಅವರಿಗೆ ದಿನದ ಹೆಚ್ಚುಕಾಲ  ಒತ್ತಡದ ಕೆಲಸ ಮತ್ತು ನಿದ್ರೆ ಕಡಿಮೆ, ಅನಿಯಮಿತ ಆಹಾರದ ಸೇವನೆ ಇರುತ್ತದೆ.

2 . ಮಾನಸಿಕ ಒತ್ತಡಗಳಾದ ಕೋಪ,ಚಿಂತೆ, ಖಿನ್ನತೆ,ಗಾಬರಿಗಳಿಂದ ತಲೆನೋವು ಉದ್ರೇಕವಾಗಬಹುದು.

3 .ಆಹಾರ ಸೇವನೆಯಿಂದ ವ್ಯತ್ಯಾಸವಾದ ಹಸಿವೆ, ಮದ್ಯ ಸೇವನೆ, ಕಡಿಮೆ ನೀರು ಕುಡಿಯುವುದರಿನ್ದಲೂ ತಲೆನೋವು ಉದ್ರೇಕವಾಗುತ್ತದೆ.

4 . ನಿದ್ರೆ ಮಾತ್ರೆ ಸೇವನೆ,  ಬಿ. ಪಿ.,  ಹಲ್ಲು ನೋವು, ಕಣ್ಣಿನ ತೊಂದರೆ, ತಂಬಾಕು ಅಥವಾ ಸಿಗರೇಟು ಸೇವನೆ, ಗರ್ಭನಿರೋಧಕ ಮಾತ್ರೆ, ಮೂಗಿನ ಉಸಿರಾಟದ ತೊಂದರೆ, ಸಂಸ್ಕರಿಸದ ಆಹಾರ ಸೇವನೆ, ಅತಿ ಮುಖ್ಯವಾಗಿ ನಿದ್ರಾಹೀನತೆ ಮುಂತಾದುವುಗಳಿಂದ ಸಹ ತಲೆನೋವು ಉದ್ರೇಕಗೊಳ್ಳಬಹುದು.

5 . ಹೆಚ್ಚು ಕಾಲ ಬಿಸಿಲಿನಲ್ಲಿ ಇರುವುದು, ದೀರ್ಘಕಾಲ ಪ್ರಯಾಣ ಮಾಡುವುದು, ಮದುವೆ ಅಥವಾ ಇತರೆ ಗಲಾಟೆ ಇರುವ ಸಮಾರಂಭದಲ್ಲಿ ಹೆಚ್ಚು ಹೊತ್ತು ಭಾಗವಹಿಸುವುದು, ಕೆಲವರಿಗೆ  ಹೆಚ್ಚಾಗಿ ಓದುವುದು, ಹೆಚ್ಚು ಕಾಲ ಸಿನೆಮಾ / ಟಿ. ವಿ, ನೋಡುವುದು ಇವುಗಳಿಂದ ತಲೆನೋವು ಉದ್ರೇಕಗೊಳಬಹುದು.

6 . ಕೆಲವು ಸ್ತ್ರೀಯರಿಗೆ ಋತುಚಕ್ರದ ಏರುಪೇರುಗಳಿಂದ ತಲೆನೋವು ಉದ್ರೇಕಗೊಳ್ಳಬಹುದು.

ಒಟ್ಟಿನಲ್ಲಿ ಈ ಕಾರಣಗಳು ಒಬ್ಬರಿಗಿಂತ ಮತ್ತೊಬ್ಬರಿಗೆ ವ್ಯತ್ಯಾಸವಾಗುತ್ತವೆ.

ಮೈಗ್ರೇನ್ ನ ನಿವಾರಣೆ :-

1 . ಮೈಗ್ರೇನ್ ತಲೆನೋವು ಬಂದಾಗ ಕೆಲವರಿಗೆ ಯಾವುದಾದರೂ ನೋವು ನಿವಾರಕ ಮಾತ್ರೆಯನ್ನು [ Pain killer ] ತೆಗೆದುಕೊಂಡರೆ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗುತ್ತದೆ.

2 . ಇನ್ನು ಕೆಲವರಿಗೆ ಏನನ್ನೂ ಉಪಯೋಗಿಸದೆ ನಿಷ್ಯಬ್ದವಾದ ಕೊಠಡಿಯಲ್ಲಿ ಕೆಲವು ಕಾಲ ವಿಶ್ರಾಂತಿ ತೆಗೆದುಕೊಳ್ಳುವುದರಿಂದಲೇ ತಲೆನೋವು ಕಡಿಮೆಯಾಗುತ್ತದೆ.

3 . ಇದಲ್ಲದೆ ಜೀವನ ಶೈಲಿಯನ್ನ್ನು ಬದಲಾಯಿಸಿಕೊಳ್ಳುವುದರಿಂದ ಈ ತೆರನ ತಲೆನೋವನ್ನು ನಿಯಂತ್ರಿಸಿಕೊಳ್ಳಬಹುದು. ಅ ) ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು. ಬ ) ನಿತ್ಯ ವ್ಯಾಯಾಮ. ಕ ) ಸರಿಯಾದ ಊಟದ ಕ್ರಮ. ಪೌಷ್ಟಿಕ ಆಹಾರದ ಸೇವನೆ. ಡ ) ತಂಬಾಕು, ಮದ್ಯ ಸೇವನೆಯಿಂದ ದೂರ ಇರುವುದು. ಕಾಫಿ ಕುಡಿಯುವುದನ್ನು ಕಡಿಮೆ ಮಾಡುವುದು. ಇ ) ಜೀವನದ ಬಗ್ಯೆ ಸಕಾರಾತ್ಮಕ ಮನೋಭಾವ.


ಮೈಗ್ರೇನ್ ತಲೆನೋವಿಗೆ ಹೆಚ್ಚಿನ ಚಿಕಿತ್ಸೆ :-

---  ಮೈಗ್ರೇನ್ ತಲೆನೋವಿಗೆ ಶಾಶ್ವತ ಪರಿಹಾರ ಇಲ್ಲ. ಆದರೆ ಈ ತರಹೆಯ ತಲೆನೋವನ್ನು ಅದಕ್ಕೆ ಸಂಬಂಧಿಸಿದ ಔಷಧಗಳನ್ನು ಉಪಯೋಗಿಸುವುದರಿಂದ ಸಾಕಷ್ಟು ನಿಯಂತ್ರಿಸಬಹುದು.

---  ಮೈಗ್ರೇನ್ ನಿವಾರಣ ಔಷಧಗಳಲ್ಲಿ ಎರಡು ತರಹೆಗಳಿರುತ್ತವೆ. ಒಂದು ನೋವು ಬಂದಾಗ ಮಾತ್ರ ಉಪಯೋಗಿಸುವ ಔಷಧಗಳು. ಮೈಗ್ರೇನ್ ತಲೆನೋವು ತಿಂಗಳಿಗೆ 4 - 6 ಕ್ಕಿಂತ ಕಡಿಮೆ ಸಾರಿ ಬರುತ್ತಿದ್ದರೆ ಆ ದಿನಗಳಲ್ಲಿ ಮಾತ್ರ ನೋವು ನಿವಾರಕ ಮಾತ್ರೆ ಉಪಯೋಗಿಸುತ್ತಿದ್ದರೆ ಸಾಕು.

---  ಆದರೆ ಅದು ತಿಂಗಳಲ್ಲಿ ನಾಲ್ಕಾರು ಭಾರಿಗಿಂತಲೂ ಹೆಚ್ಚು ಬರುತ್ತಿದ್ದರೆ ಅದನ್ನು ತಡೆಗಟ್ಟುವ ಔಷಧವನ್ನು ನಿತ್ಯವೂ ಕೆಲವು ವಾರಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ.ಇದರಿಂದ ತಲೆನೋವು ಬರುವ ಶೀಘ್ರತೆ ಹಾಗೂ ತೀವ್ರತೆ ಕಡಿಮೆಯಾಗುತ್ತದೆ.

ಹೆಚ್ಚುವರಿ ಪರೀಕ್ಷೆಗಳು :-

ಮೈಗ್ರೇನ್ ತಲೆನೋವನ್ನು ಖಚಿತಪಡಿಸುವ ಪರೀಕ್ಸ್ಶೆಗಳಿಲ್ಲ ಎನ್ನುವ ಅಭಿಪ್ರಾಯವೂ ಇದೆ. ಆದರೆ ಇಂಥಹ ತೊಂದರೆಗಳಿಗೆ C . T .scan , ಕ್ಷ ಕಿರಣ , ರಕ್ತ ಪರೀಕ್ಷೆ ಮುಂತಾದುವುಗಳನ್ನು ಮಾಡಿಸಬೇಕಾಗುತ್ತದೆ.ಈ ಬಗ್ಗ್ಯೆ ವೈದ್ಯರು ತಲೆನೋವಿನ ವಿವರ ಹಾಗೂ ಸಂಪೂರ್ಣ ಪರೀಕ್ಷೆಗಳನ್ನು ಮಾಡಿದ ನಂತರ ಸಲಹೆ ಮತ್ತು ಚಿಕಿತ್ಸೆಯಯನ್ನು ನೀಡುತ್ತಾರೆ. ಆದರೆ ಕನ್ನಡಕ ಉಪಯೋಗಿಸುವುದರಿಂದ ಈ ರೀತಿಯ ತಲೆನೋವು ಹೋಗುವುದಿಲ್ಲ.

~~~~~ ಸಂಗ್ರಹಿಸಿ ಪ್ರಸ್ತುತಪಡಿಸಿದವರು : ಎಂ.ಗಣಪತಿ. ಕಾನುಗೋಡು.
                                                 
                                                   ತಾರೀಖು : 23 - 10 - 2014

ಮಾಹಿತಿಯ ಕೃಪೆ : ' ಆರೋಗ್ಯದತ್ತ ನಮ್ಮ ಪಯಣ ' ಪುಸ್ತಕ. ಸಂಗ್ರಹ : ಹುಲಿಕಲ್ ನಟರಾಜ್

ಸೂಚನೆ : ಇದು ಸಾಮಾನ್ಯ ತಿಳಿವಳಿಕೆಗಾಗಿ ಮಾತ್ರ. ಕರಾರುವಾಕ್ಕು ಮಾಹಿತಿಗೆ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸತಕ್ಕದ್ದು.

Wednesday 22 October 2014

ಮಾಹಿತಿಗಳು :-

ಮಾಹಿತಿಗಳು :-
@ ಭಾರತದ ಅತ್ಯಂತ ಹಳೆ ಎಂಜಿನಿಯರಿಂಗ್ ಕಂಪನಿ 1788 ರಲ್ಲಿ ಕಲ್ಕತ್ತಾದಲ್ಲಿ ಸ್ಥಾಪನೆಗೊಂಡ ಜೆಸೋಫ಼್ ಅಂಡ್ ಕಂಪನಿ ಲಿಮಿಟೆಡ್.
@ ಕೆಂಪಿರುವೆ ಒಂದು ಗೂಡಿನಲ್ಲಿ ಸುಮಾರು 5 ,00 ,000 ಗಳಷ್ಟು ಇರುವೆಗಳಿರುತ್ತವೆ.
@ ಗೂಬೆಗಳ ಸಮೂಹಕ್ಕೆ ಪಾರ್ಲಿಮೆಂಟ್ ಎಂದು ಹೇಳುತ್ತಾರೆ.
@ ಮನುಷ್ಯನ ಹೃದಯ ಪ್ರತಿ ವರ್ಷ 1 . 5 ಮಿಲಿಯನ್ ಲೀಟರ್ ರಕ್ತವನ್ನು ಹೊರಹಾಕುತ್ತದೆ.
@ " India " ಎಂಬುದು ಭಾರತಕ್ಕೆ ಗ್ರೀಕ್ ಮೂಲದಿಂದ ಬಂದ ಹೆಸರು.
@ ಭಾರತವನ್ನು ಹಿಂದೂಸ್ತಾನ ಎಂದು ಕರೆದವರು ಮಹಮ್ಮದೀಯರು.
@ ಬಿರುಗಾಳಿಯ ಒಟ್ಟು ಶಕ್ತಿಯು 1000 ಅಣುಬಾಂಬುಗಳಿಗೆ ಸಮ.
@ ಹಕ್ಕಿಗಳಿಗೆ ಬೆವರಿನ ಗ್ರಂಥಿ ಇರುವುದಿಲ್ಲ.
@ ವಿಶ್ವದ ಅತ್ಯಂತ ಹಳೆಯ ಗ್ರಂಥ ಋಗ್ವೇದ.
@ಜಿರಳೆಗಳು ಆಹಾರವಿಲ್ಲದೆ ಒಂದು ತಿಂಗಳು ಇರಬಲ್ಲುದು.

ಮನೆ ಮದ್ದು :-() ನಿಂಬೆ ಹಣ್ಣಿನ ಉಪಯೋಗ :-


* ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದರೆ ಒಂದು ಲೋಟ ಬಿಸಿನೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಪೂರ್ತಿ ಹಿಂಡಿ ಅರ್ಧ ಟೀ ಚಮಚ ಅಡಿಗೆ ಸೋಡಾ ಸೇರಿಸಿ ಸೇವಿಸಿದರೆ ಶೀಘ್ರವೇ ಗುಣವಾಗುತ್ತದೆ.
* ನಿಂಬೆ ಹಣ್ಣಿನ ರಸದಲ್ಲಿ ಸಕ್ಕರೆ ಕಲಸಿ ಸ್ವಲ್ಪ ಸ್ವಲ್ಪವೇ ಕುಡಿಯುತ್ತಿದ್ದರೆ ವಾಂತಿ ನಿಲ್ಲುವುದು.
* ಸ್ವಲ್ಪ ಉಪ್ಪು ಬೆರೆಸಿದ ನೀರಿಗೆ ನಿಂಬೆ ಹಣ್ಣಿನ ರಸವನ್ನು ಮಿಶ್ರಮಾಡಿ ದಿನಕ್ಕೆ ಮೂರು ಭಾರಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
*ಮಧ್ಯಮ ಗಾತ್ರದ ನಿಂಬೆ ಹಣ್ಣಿನ ರಸವನ್ನು ಸೇವಿಸುವುದರಿಂದ ಹುಳಿತೇಗು ಕಡಿಮೆಯಾಗುವುದು.
* ಒಂದು ನಿಂಬೆ ಹಣ್ಣಿನ ರಸ ತೆಗೆದು ಅದಕ್ಕೆ ರಸದ ಅರ್ಧ ಭಾಗದಷ್ಟು ಹರಳೆಣ್ಣೆಯನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ನುಲುಯುವಿಕೆ ಮತ್ತು ಸಂಕಟ ನಿವಾರಣೆಯಾಗುತ್ತದೆ.
* ಆಗತಾನೆ ಹಿಂಡಿದ ಒಂದು ಲೋಟ ಹಸುವಿನ ನೊರೆಹಾಲಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ತಕ್ಷಣ ಕುಡಿಯಬೇಕು. ಹೀಗೆ ಒಂದು ಹತ್ತು ದಿನಗಳವರೆಗೆ ಸೇವಿಸಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.
* ರಸಭರಿತವಾದ 30 ನಿಂಬೆ ಹಣ್ಣುಗಳನ್ನು ಎರಡು ಭಾಗವಾಗಿ ಕತ್ತರಿಸಿ ಅದಕ್ಕೆ ಅಡಿಗೆ ಉಪ್ಪನ್ನು ತುಂಬಿ 15 ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಈ ಹೋಳುಗಳನ್ನು ಚೆನ್ನಾಗಿ ಕುಟ್ಟಿ ಚೂರ್ಣ ತಯಾರಿಸಿ ಪ್ರತಿದಿನ ಬೆಳಿಗ್ಯೆ ಹಸಿದ ಹೊಟ್ಟೆಯಲ್ಲಿ ಒಂದು ಚಮಚ ಚೂರ್ಣವನ್ನು ಸೇವಿಸಬೇಕು.ಈ ಕ್ರಮವನ್ನು ಒಂದು ತಿಂಗಳು ಕಾಲ ನಡೆಸಿದರೆ ರಕ್ತದ ಒತ್ತಡ ನಿವಾರಣೆಯಾಗುತ್ತದೆ.
* ಒಂದು ದೊಡ್ಡ ಲೋಟ ತಣ್ಣೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ದಿನಕ್ಕೆ ಒಂದು ಸಾರಿಯಂತೆ ಒಂದು ವಾರ ಸೇವಿಸಿದರೆ ಎದೆ ಉರಿ ಸಂಪೂರ್ಣ ಕಡಿಮೆಯಾಗುತ್ತದೆ.
* ಕಬ್ಬಿನ ಹಾಲಿಗೆ ಎಳನೀರು,ಶುಂಠಿ ರಸ, ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಚೆನ್ನಾಗಿ ಆಗುತ್ತದೆ.
~~~~~~~ ಮಾಹಿತಿ ಕೃಪೆ.----- ಒಬ್ಬ ಪ್ರಸಿದ್ಧ ಗಿಡಮೂಲಿಕೆ ಔಷಧ ಪಂಡಿತರು.

ನಿತ್ಯದ ಮದ್ದು :-ಜೇನುತುಪ್ಪ :


ಜೇನುತುಪ್ಪ ಅಂಗಡಿಗಳಲ್ಲಿ ದೊರಕುವುದು ಸಾಮಾನ್ಯವಾಗಿ ಶುದ್ಧ ಜೇನುತುಪ್ಪ ಅಲ್ಲ. ಕೆಲವು ನಿದರ್ಶನಗಳಲ್ಲಿ ಅವು ಜೇನುತುಪ್ಪವೇ ಅಲ್ಲ. ಎಸ್ಸೆನ್ಸ್ ಮಿಶ್ರಿತ ಸಕ್ಕರೆ ಪಾಕ. ಶುದ್ಧ ಜೇನುತುಪ್ಪವಾದರೆ ಒಂದು ಲೀಟರ್ ಬಾಟಲಿಗೆ 1400 ಗ್ರಾಂಸ್ ತುಪ್ಪ ಇರಬೇಕು [ ಕನಿಷ್ಠ ].ಅಂದರೆ 1 : 1 .4 . ಈಗ ಹಳ್ಳಿಗಳಲ್ಲಿ [ ನಮ್ಮ ನೆಂಟರ ಮನೆಯದಾದರೂ ] ಪೆಟ್ಟಿಗೆ ಜೇನು ಒಂದು ಕೆ.ಜಿ.ಗೆ 325 ರು.ನಿಂದ 350 ರು.ವರೆಗೂ ಧರ ಇದೆ. ಪೇಟೆಯಲ್ಲಿ ಒಂದು ಲೀಟರ್ ಬಾಟಲಿಯಲ್ಲಿ ಒಂದು ಕೆ.ಜಿ.ಎಂದು ಜೇನುತುಪ್ಪ ಮಾರುತ್ತಾರೆ. ಅದೂ ನೂರೈವತ್ತು ರುಪಾಯಿಯಿಂದ ಇನ್ನೂರರ ಧಾರಣೆಯಲ್ಲಿ ಒಂದು ಕೆ.ಜಿ.ಗೆ !. ಹೇಗೆ ? ನಾವು ಖರೀದಿಸುವ ಮುನ್ನ ಯೋಚಿಸಿಕೊಳ್ಳಬೇಕು. ಅಂಟುವಾಳ ಹೂವಿನ ಸೀಸನ್ ನಲ್ಲಿ ತಯಾರಾದ ಜೇನುತುಪ್ಪ ಔಷಧದ ದೃಷ್ಟಿಯಿಂದ ಒಳ್ಳೆಯದು. ರುಚಿಯಲ್ಲಿ ಸ್ವಲ್ಪ ಕಿರುಕಹಿ ಇರುತ್ತದೆ.
ಬಳಕೆ :
@ . ಸುಟ್ಟ ಘಾಯಕ್ಕೆ ತಕ್ಷಣ ಜೇನುತುಪ್ಪ ಸವರುವುದರಿಂದ ಉರಿ ಶಾಂತವಾಗುತ್ತದೆ ಮತ್ತು ಘಾಯ ಶೀಘ್ರವೇ ಮಾಯಲು ಅನುಕೂಲವಾಗುತ್ತದೆ. ಆದರೆ ಸುಟ್ಟ ತಕ್ಷಣ ಆ ಜಾಗಕ್ಕೆ ಖಂಡಿತ ತಣ್ಣೀರನ್ನು ಮುಟ್ಟಿಸಬಾರದು. ಒಮ್ಮೆ ಕೊಬ್ಬರಿ ಎಣ್ಣೆ ಸವರಿದರೂ ಒಳ್ಳೆಯದೇ.
@ ಹುಳುಕಡ್ಡಿ ,ಇಸುಬು ಮುಂತಾದ ಚರ್ಮರೋಗಗಳಿಗೆ ಜೇನುತುಪ್ಪ ಸವರುವುದರಿಂದ ಗುಣಮುಖವಾಗುತ್ತದೆ.
@ ಬಾಯಿಯ ಹುಣ್ಣು ನಿವಾರಿಸಲು ದಿನಕ್ಕೆ ನಾಲ್ಕು ಭಾರಿ ಜೇನುತುಪ್ಪವನ್ನು ಹಚ್ಚಬೇಕು.
@ ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಭೋಗಶಕ್ತಿಯಲ್ಲಿ ವೃದ್ಧಿಯಾಗುತ್ತದೆ. ಸ್ವಪ್ನ ಸ್ಖಲನವಾಗುವ ಸಾಧ್ಯತೆ ಇರುವುದಿಲ್ಲ.
@ ವಸಡುಗಳು ಊದಿಕೊಂಡು ಹಲ್ಲು ನೋವು ಉಂಟಾದರೆ ಜೇನುತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ದಿನಾ ನಾಲ್ಕಾರು ಭಾರಿ ಇಟ್ಟುಕೊಂಡರೆ ಹಲ್ಲು ನೋವು ಮತ್ತು ಒಸಡಿನ ಊತ ಕಡಿಮೆಯಾಗುತ್ತದೆ.
@ ಜೇನುತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.
@ ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಕೊಟ್ಟರೆ ರೋಗನಿರೋಧಕ ಶಕ್ತಿ ಬರುತ್ತದೆ.
@ ದಢೂತಿ ಶರೀರದವರು ನಾಲ್ಕು ಟೀ ಚಮಚದಷ್ಟು ಜೇನುತುಪ್ಪವನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ಶಾರೀರಿಕ ತೂಕವು ಕಡಿಮೆಯಾಗಿ ನರಗಳು ಚೇತರಿಸಿಕೊಳ್ಳುತ್ತವೆ.
@ ಮೂರು ಟೀ ಚಮಚ ಜೇನುತುಪ್ಪವನ್ನು ರಾತ್ರಿ ಊಟವಾದ ನಂತರ ಮಲಗುವ ಮುಂಚೆ ಸೇವಿಸುತ್ತಾ ಬಂದರೆ ಬಹುಮೂತ್ರ ರೋಗ ನಿವಾರಣೆಯಾಗುತ್ತದೆ
@ ಮಧುಮೇಹ ರೋಗಿಗಳು ಮತ್ತು ಕ್ಷಯರೋಗಿಗಳು ಜೇನುತುಪ್ಪ ಸೇವಿಸುವುದರಿಂದ ಆರೋಗ್ಯದ ಸುಧಾರಣೆಯಾಗುತ್ತದೆ.
@ ಎಳೆಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ಹನಿ ಜೇನುತುಪ್ಪವನ್ನು ಬೆರಸಿ ಕುಡಿಸಬೇಕು. ದಿನಕ್ಕೆ ಎರಡು ಭಾರಿ ಕುಡಿಸಿದರೆ ಮೂರೇ ದಿನಗಳಲ್ಲಿ ಗಮನಾರ್ಹ ಬೆಳವಣಿಗೆಯಾಗಿ ಗುಣಮುಖವಾಗುವುದು.
@ ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ಎರಡು ಟೀ ಚಮಚ [ 10 ಮಿಲಿ ] ಜೇನುತುಪ್ಪ ಮತ್ತು ಕಾಲು ಲೋಟ ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಅದಕ್ಕೆ ಐದು ಹನಿ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯಬೇಕು. ಇದರಿಂದ ಕೊಲೆಸ್ಟರಾಲ್ ಮತ್ತು ದೇಹದ ತೂಕ ಕಡಿಮೆಯಾಗುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ಆಯಾಸ ಕಡಿಮೆಯಾಗುತ್ತದೆ.ದೈಹಿಕ ಶಕ್ತಿ ಹೆಚ್ಚುತ್ತದೆ. ಆದರೆ ಜೇನುತುಪ್ಪ ಬಹಳ ಉಷ್ಣ ವಸ್ತು. ಉಷ್ಣ ಪ್ರಕೃತಿಯವರು ಇದನ್ನು ಸೇವಿಸುತ್ತಿರುವಾಗ ಆದಷ್ಟು ಶರೀರಕ್ಕೆ ತಂಪು ಕೊಡುವ ಪದಾರ್ಥವನ್ನು ಸತತವಾಗಿ ಸೇವಿಸುತ್ತಿರಬೇಕು.
~~~~~~~~~ ಮಾಹಿತಿ ಕೃಪೆ : ಪ್ರಸಿದ್ಧ ನಾಟಿ ವೈದ್ಯರು.

*^*^*^* ಬಹುಮತಕ್ಕೆ ಅರ್ಥ ಬರುವುದು ಯಾವಾಗ ? ಹೇಗೆ ? ^*^*^*^*

ಬಹುಮತದ ಪರಿಕಲ್ಪನೆ ನಮಗಿರುವುದು ರಾಜಕಾರಣದಲ್ಲಿ ಇಲ್ಲವೇ ಹೆಚ್ಚೆಂದರೆ ಸಂಘ ಸಂಸ್ಥೆಗಳಲ್ಲಿ. ಆದರೆ ಬಹುಮತದ ಕಲ್ಪನೆ ಒಂದು ಸಂಸಾರದಿಂದ ಪ್ರಾರಂಭವಾಗಿ ವಿಶ್ವಸಂಸ್ಥೆಯವರೆಗಿನ ಎಲ್ಲಾ ಹಂತದ ಸಮೂಹಕ್ಕೂ ಅನ್ವಯಿಸುತ್ತದೆ.
ಯಾವುದೇ ನಿರ್ಣಯ ಇಂದು ಪ್ರಾತಿನಿಧಿಕ ವ್ಯವಸ್ಥೆಯಲ್ಲಿ ಬಹುಮತದ ಆಧಾರವನ್ನು ಅವಲಂಬಿಸಿದೆ. ಯಾವುದೇ ವಿಚಾರಕ್ಕೆ ನಿರ್ಣಯಕ್ಕೆ ಬರುವಾಗ ಆ ಸಮೂಹದ ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಕೇಳಲಾಗುತ್ತದೆ. ಮಂಡಿಸಿದ ವಿಚಾರದ ಕುರಿತು ಬಂದ ಹೆಚ್ಚು ಸದಸ್ಯ ಬಣದ ಅಭಿಪ್ರಾಯಕ್ಕೆ ಮನ್ನಣೆ ಕೊಡಲಾಗುತ್ತದೆ. ಅಂದರೆ ಒಂದು ಸಮೂಹದಲ್ಲಿ ಹೆಚ್ಚು ಮಂದಿ ಹೇಳಿದ್ದು ಸರಿಯಾಗಿರುತ್ತದೆ ಎನ್ನುವುದು ಈ ವಿಷಯದ ಹಿನ್ನಲೆಯಲ್ಲಿ ಇರುವ ಭಾವನೆ.
ಹೀಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ಬಹುಮತ ಬಣದ ಪ್ರತಿ ವ್ಯಕ್ತಿಯು ತನ್ನ ಸ್ವಂತ ಬುದ್ಧಿ, ತರ್ಕ, ವಿವೇಚನೆ , ಅನುಭವ, ಮಂಡಿಸಿದ ವಿಚಾರದ ಅಂತ್ಯ-ಅಪಾರ ಹಾಗೂ ಅದರ ಹಾಸು ಹೊಕ್ಕು ಇವುಗಳ ಜಿಜ್ಞಾಸೆ ..... ಹೀಗೆ ಇಂತಹ ಅಭಿಪ್ರಾಯವನ್ನು ಪ್ರಚುರಪಡಿಸುವಲ್ಲಿ ಬಳಸಿಕೊಳ್ಳಬೇಕಾದ ಅಂಶಗಳನ್ನು ಎಷ್ಟರ ಮಟ್ಟಿಗೆ ಪ್ರಯೋಗಿಸಿದ್ದಾನೆ ಎನ್ನುವುದು ಮುಖ್ಯ. ಆದರೆ ಇಂದು ಎಲ್ಲ ಪ್ರಕರಣಗಳಲ್ಲೂ ಪ್ರತಿ ವ್ಯಕ್ತಿಯು ಇಂಥಹ ಯಾವುದೇ ಪ್ರಕ್ರಿಯೆಯನ್ನು ಪ್ರಾಕೃತಗೊಳಿಸದೆ ತನ್ನ ನಿರ್ಲಿಪ್ತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಸಭೆಯಲ್ಲಿ ಪಡೆಯುವಂಥಹ ನಿರ್ಣಯವಂತೂ ಕೇವಲ ಚಪ್ಪಾಳೆ ಅಥವಾ ಧ್ವನಿಮತವನ್ನು ಆಧರಿಸಿರುತ್ತದೆ. ಇಲ್ಲಿ ' ಸಮೂಹ ಸನ್ನಿ ' ಬಹಳಷ್ಟು ತನ್ನ ಪ್ರಭಾವವನ್ನು ಬೀರುತ್ತದೆ.
ಯಾವುದೇ ವ್ಯಕ್ತಿಯು ತನ್ನ ಅಭಿಪ್ರಾಯ ಮಂಡನೆಯಲ್ಲಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ತನಗಿಂತ ಮೊದಲು ಅಥವ ತನ್ನ ಜೊತೆಗೆ ಹೆಚ್ಚು ಮಂದಿ ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೊ ಅದಕ್ಕೆ ಸ್ವರಗೂಡಿಸುತ್ತಾನೆ. ಸರ್ಕಾರ ಕೆಲವೊಮ್ಮೆ ಕಾಯಿದೆಯನ್ನು ಮಾಡುವ ಮುನ್ನ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಆಗ ಎಷ್ಟು ಮಂದಿ ಹೀಗೆ ಸ್ವತಂತ್ರ, ವಿವೇಚನಾಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ?. ಶಾಸನ ಸಭೆಯಲ್ಲಿ ಎಷ್ಟು ಮಂದಿ ಹೀಗೆ ನಡೆದುಕೊಳ್ಳುತ್ತಾರೆ?.ಸಂಘ,ಸಂಸ್ಥೆಯಲ್ಲಿ ಎಷ್ಟು ಮಂದಿ ಈ ಪರಿಧಿಯನ್ನು ಅನುಸರಿಸುತ್ತಾ
ಯಾವಾಗ ಒಂದು ಸಮೂಹದ ಸದಸ್ಯರು ಕ್ರಮವಾಗಿ ತಮ್ಮ ಮತವನ್ನು ಚಲಾಯಿಸುವುದಿಲ್ಲವೋ ಆಗ ಅದು ಒಂದು ಪ್ರಾತಿನಿಧಿಕ ಪ್ರಸಿದ್ಧವಾಗುವುದಿಲ್ಲ. ಇಂದು ಎಲ್ಲಾ ಬಹುಮತಗಳು ಜವಾಬ್ದಾರಿ ರಹಿತವಾದದ್ದು ಮತ್ತು 'ಸಮೂಹಸನ್ನಿ' ಯಿಂದ, ಅನೇಕ ರೀತಿಯ ಆಮಿಷಗಳು, ಒತ್ತಡಗಳ ಪ್ರಭಾವಗಳಿಂದ ಆವರಿಸಲ್ಪಟ್ಟಿದ್ದು . ಇಂತಹ ಬಹುಮತದ ಆಧಾರಿತ ನಿರ್ಣಯಗಳೂ ಅಷ್ಟೇ ಅರ್ಥರಹಿತವಾದದ್ದು. ಹಾಗೆಯೇ ಅಪಾಯಕರವೂ ಹೌದು.
~~~~~~~ ಎಂ. ಗಣಪತಿ. ಕಾನುಗೋಡು.

ತಾರೀಖು : 20 . 10 .2014

Tuesday 21 October 2014

ಹಬ್ಬದ ಹಾಡು / ಬಿಂಗಿ ಪದ್ಯ / ಅಂಟಿಕೆ ಪಂಟಿಕೆ . :-

35 minutes ago

ಹಬ್ಬದ ಹಾಡು / ಬಿಂಗಿ ಪದ್ಯ / ಅಂಟಿಕೆ ಪಂಟಿಕೆ . :-

ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೋ....... ಹೊಯ್ .......... ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೋ ........ ಹೊಯ್ ........


ಬಲೀಂದ್ರನ ಹಾಡು.

ಬಲ್ಲೇಳು ಬಲೀಂದ್ರನು ರಾಜಾ ಬಂದನು ತನ್ನ ರಾಜ್ಯಕೆ ತಾ ||ಪ ||

ಬಲ್ಲೇಳು ಬಲೀಂದ್ರ ಬಲವಿದ್ದು ಬರುವಾಗ ಕಲ್ಲೊಡನೆ ಮಳೆಯೇ ಕರೆದಾವೋ |

ಬಲ್ಲೇಳು ಬಲೀಂದ್ರ ಕರೆದಾವೋ ಈ ಊರ ಹುಲ್ಲ ಗುಡ್ಡೆಲ್ಲ ಚಿಗುರ್ಯಾವೋ |

ಬರಡು ಗುಡ್ದೆಲ್ಲಾ ಚಿಗುರ್ಯಾವೋ ಈ ಊರ ಬರಡು ಬೆಟ್ಟೆಲ್ಲಾ ಹಯನಾವೋ | [ಎರಡು ಸಾರಿ ]

ಹಂಡೆ ಹಂಡೆಯನೂರು ಹಂಡೆಯ ಕರೇದೂರು ಹಂಡೆಕಾಯುವರಾಂಗಾಯನೂರು |

ಹಂಡೆ ಕಾಯುವರೊಂದು ಮೇಲೂರು ನಮ್ಮಮ್ಮ ಹಂಡೆಯ ತೆಗೆದೊಂದು ಹೊರಗಿಡೆ | [ಎರಡು ಸಾರಿ ]

ಕವುಲೆ ಕವುಲೆನೂರು ಕವುಲೆಯ ಕರೆದೋರು ಕವುಲೆಯ ಕಾಯುವರಾ ಒಂದಯನೂರು |

ಕವುಲೆಯ ಕಾಯುವರಾ ಒಂದೈನೂರು ನಮ್ಮಮ್ಮ ಕೌಳಿಗೆ ತೆಗೆದೊಂದ್ ಹೊರಗಿಡೇ|

ಕೌಳಿಗೆ ತೆಗೆದೊಂದ್ ಹೊರಗಿಡೆ ನಮ್ಮಮ್ಮ ಕೌಳಿಗೆ ತುಂಬಾ ಹಾಲ ಕರೆದೊಯ್ಯೋ |

ಹಾಲ ಕರೆದು ಪಾಯಸ ಮಾಡಿ ಬಲ್ಲಾಳ ಬಲೀಂದ್ರಗೆ ಸೊಗಸೂಟೊ | [ಸೊಗಸಾದ ಊಟ ಎಂದು ಅರ್ಥ]

ಬಲ್ಲೇಳು ಬಲೀಂದ್ರನು ರಾಜ ಬಂದನು ತನ್ನ ರಾಜ್ಯಕೆ ತಾ ||

[ ಇಲ್ಲಿ ಪ್ರತಿ ಸಾಲಿನ ಹಾಡಿನ ನಂತರ " ಬಲ್ಲೇಳು ...................ತನ್ನ ರಾಜ್ಯಕೆ ತಾ " ಎನ್ನುವ ಪಲ್ಲವಿಯ chorus ನ್ನು ಹೇಳಿಕೊಳ್ಳಬೇಕು. ]

ಅರಿಕೆ:- ಜನಪದರಲ್ಲಿ ಕಣೋಪಕರಣವಾಗಿ ಬಂದ ಈ ಜಾನಪದ ಹಾಡುಗಳಲ್ಲಿ ಶಬ್ದವ್ಯತ್ಯಯಗಳಿರುವುದು ಸಹಜ. ಸಾಧ್ಯವಿದ್ದಷ್ಟನ್ನು ಸರಿಪಡಿಸಿದ್ದೇನೆ. ಉಳಿದಿದ್ದನ್ನು ಬಲ್ಲವರು ಸರಿಪಡಿಸಿಕೊಳ್ಳಬೇಕು. ಇನ್ನು ಇದರಲ್ಲಿ ಪ್ರಾದೇಶಿಕ ಭಿನ್ನತೆ ಇದ್ದುದನ್ನು ಗಮನಿಸಬೇಕು. ಕೆಲವು ಕಡೆ " ಬಲ್ಲಾಳ" ಎನ್ನುತ್ತಾರೆ. " ಡ್ವಮ್ಸಾಲ್ ಹೊಡಿರಣ್ಣ " ಎನ್ನುತ್ತಾರೆ.

~~~~~~~~ ಸಂಗ್ರಹಿಸಿ ಪ್ರಸ್ತುತಪಡಿಸಿದವರು : ಎಂ.ಗಣಪತಿ. ಕಾನುಗೋಡು .
ತಾರೀಖು : 21 -10 -2014

Tuesday 16 September 2014

ಹಾವು ಕಚ್ಚಿದ ಬಗ್ಯೆ ಮಾಹಿತಿ :


ತಾರೀಖು:೨೪-೬-೨೦೧೪

ಮಾಹಿತಿಯ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಗೆಣಸಿನಕುಣಿ. ಸಾಗರ.ಶಿವಮೊಗ್ಗ ಜಿಲ್ಲೆ. ಸರ್ಪವಿಷ ಪರಿಹಾರಕರು ಹಾಗೂ ನಾಟಿ ವೈದ್ಯರು.

ಒಂದನೇ ಕಂತು :

ಸರ್ಪ ವಿಷವನ್ನು ಸಿದ್ಧಿಸಿದ ಮಂತ್ರದಿಂದಲೂ, ಬೇರೆ ಹಾವಿನ ವಿಷವನ್ನು ಗಿಡಮೂಲಿಕೆ,ವನಸ್ಪತಿಗಳಿಂದ ಚಿಕಿತ್ಸೆ ಮಾಡಲಾಗುತ್ತದೆ. ಕಚ್ಚಬಹುದಾದ ಹಾವುಗಳಲ್ಲಿ ಸಾಮಾನ್ಯ ಹಾವುಗಳು, ನಾಗರ ಹಾವುಗಳು ಮತ್ತು ಮಂಡಲದ ಹಾವುಗಳು ಎಂದು ಮೂರು ರೀತಿಯಾಗಿ ವಿಂಗಡಿಸಬಹುದು.

ಸಾಮಾನ್ಯ ಹಾವು ಕಚ್ಚಿದಾಗ ಕಾಣುವ ಗುರುತುಗಳು :
೧. ಎರಡು ಹಲ್ಲುಗಳ ಗುರುತು ಕಂಡು ಬರುತ್ತವೆ.
೨. ಅರ್ಧ ಇಂಚು ಅಥವಾ ಮುಕ್ಕಾಲು ಇಂಚು ಅಂತರದಲ್ಲಿ ಸೂಜಿ ಚುಚ್ಚಿದಂತೆ ಎರಡೂ ಕಡೆ ರಕ್ತ ಬರುತ್ತಿರುತ್ತದೆ.
೩. ಕಚ್ಚಿದ ಸ್ಥಳದಲ್ಲಿ ಸುತ್ತ ಬಣ್ಣ ಬದಲಾಗುತ್ತದೆ.
೪. ಹಾವಿನ ವಿಷ ಮನುಷ್ಯನ ದೇಹಕ್ಕೆ ಸೇರಿದಾಗ ನರಮಂಡಲದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
೫. ರಕ್ತ ಕೆಡುತ್ತದೆ ಮತ್ತು ಹೆಪ್ಪುಗಟ್ಟುತ್ತದೆ.
೫. ಹೃದಯಕ್ರಿಯೆ ಮಂದವಾಗುತ್ತದೆ.

ನಾಗರ ಹಾವು ಕಚ್ಚಿದಾಗ ಕಂಡು ಬರುವ ಲಕ್ಷಣಗಳು. :

೧. ಕಚ್ಚಿದ ಸ್ಥಳದಲ್ಲಿ ನೋವು ಅಥವಾ ಉರಿ ಕಾಣಿಸಿಕೊಳ್ಳುತ್ತದೆ.
೨. ಕಚ್ಚಿದ ಸ್ಥಳದಲ್ಲಿ ಬಣ್ಣ ಬದಲಾಗುತ್ತದೆ.
೩. ಮೈ ಜಡವಾಗುತ್ತದೆ.
೪. ಮೈ ಬೆವರುತ್ತದೆ.
೫. ನೋಟ ಮಸುಕಾಗುತ್ತದೆ ಅಥವಾ ಮಂಜಾಗುತ್ತದೆ.
೬. ನಾಲಿಗೆಯು ರುಚಿಯನ್ನು ಕಳೆದುಕೊಳ್ಳುತ್ತದೆ, ದಪ್ಪವಾಗುತ್ತದೆ.
೭. ಬಾಯಾರಿಕೆ ಉಂಟಾಗುತ್ತದೆ.
೮. ಬಾಯಲ್ಲಿ ನೊರೆ ಬರುತ್ತದೆ.
೯.ಜ್ಞಾನ ತಪ್ಪುತ್ತದೆ.
೧೦. ಕೊನೆಯಲ್ಲಿ ಮರಣ ಸಂಭವಿಸುತ್ತದೆ.

ಈ ಮೇಲಿನ ಲಕ್ಷಣಗಳು ಹಂತ ಹಂತವಾಗಿ ಕಂಡು ಬರುತ್ತವೆ. ನಾಗರ ಹಾವು ಕಚ್ಚಿದ ತೀಕ್ಷ್ಣತೆ, ಕಚ್ಚಿದ ಸ್ಥಳ,ಹಾವು ಬಿಡುವ ವಿಷದ ಪ್ರಮಾಣವನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ಮೇಲಿನ ಪರಿಣಾಮಗಳು ತೀವ್ರತೆಯನ್ನು ಪಡೆಯುತ್ತವೆ.

ಮಂಡಲದ ಹಾವು ಕಚ್ಚಿದಾಗ ಕಂಡು ಬರುವ ಲಕ್ಷಣಗಳು. :

೧. ಕಚ್ಚಿದ ಸ್ಥಳದಲ್ಲಿ ಒಂದೇ ಸಮನೆ ಉರಿಯಲು ಪ್ರಾರಂಭಿಸುತ್ತದೆ.
೨. ಕಚ್ಚಿದ ಸ್ಥಳದಲ್ಲಿ ಊದಿಕೊಳ್ಳಲು ಪ್ರಾರಂಭವಾಗುತ್ತದೆ.
೩. ಕಚ್ಚಿದ ಜಾಗದಲ್ಲಿ ರಕ್ತ ಮತ್ತು ಕೀವು ಬರುತ್ತದೆ.
೪. ಕಚ್ಚಿದ ಸ್ಥಳದಲ್ಲಿ ಗುಳ್ಳೆಗಳು ಎದ್ದು ಒಡೆಯುತ್ತದೆ.
೫. ಕೆಲವು ವೇಳೆ ಮಲ,ಮೂತ್ರದಲ್ಲಿ ರಕ್ತ ಬರುತ್ತದೆ.

ಈ ಮೇಲಿನ ಲಕ್ಷಣಗಳು ಹಂತ ಹಂತವಾಗಿ ಕಂಡು ಬರುತ್ತವೆ. ಈ ರೀತಿಯ ಮಂಡಲದ ಹಾವು ಕಚ್ಚಿದ ವ್ಯಕ್ತಿಗೆ ಒಂದು ದಿನದಿಂದ ಇಪತ್ತು ದಿನಗಳೊಳಗೆ ಸಾವು ಸಂಭವಿಸುವ ಸಾಧ್ಯತೆ ಇದೆ.

[ ಮುಂದಿನ ಕಂತಿನಲ್ಲಿ ಹಾವು ಕಚ್ಚಿದವರಿಗೆ ಪ್ರಥಮ ಚಿಕಿತ್ಸೆಯ ಮಾಹಿತಿಯನ್ನು ಓದಿ ]
-===============================================================================

ಹಾವು ಕಚ್ಚಿದ ಬಗ್ಯೆ ಮಾಹಿತಿ :

ತಾರೀಖು : ೨೫ - ೬ - ೨೦೧೪

ಮಾಹಿತಿ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಅಂಚೆ ಮತ್ತು ಊರು :ಗೆಣಸಿನಕುಣಿ. -೫೭೭೪೫೩. ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ. ಸರ್ಪವಿಷ ಪರಿಹಾರಕರು ಹಾಗೂ ನಾಟಿ ವೈದ್ಯರು.

ಎರಡನೆಯ ಕಂತು :

ಹಾವು ಕಚ್ಚಿದವರಿಗೆ ಪ್ರಥಮ ಚಿಕಿತ್ಸೆ :

೧. ಹಾವು ಕಚ್ಚಿದ ವ್ಯಕ್ತಿಗೆ ಧೈರ್ಯದ ಮಾತುಗಳನ್ನು ಹೇಳಬೇಕು. ಆತನ ಸುತ್ತಲಿರುವ ಜನ ಆತಂಕ, ಗಾಬರಿಯ ಮಾತುಗಳನ್ನಾಡುವುದು, ಹತ್ತಿರದ ಸಂಬಂಧಿಗಳು ಅಳುವುದು ಮುಂತಾದುವು ನಡೆಯದಂತೆ ನೋಡಿಕೊಳ್ಳಬೇಕು. ಆಪ್ತರಾದ ಒಬ್ಬಿಬ್ಬರನ್ನು ಹೊರತುಪಡಿಸಿ ಉಳಿದವರನ್ನು ದೂರ ಕಳುಹಿಸಬೇಕು. ಕಚ್ಚಿದ ಹಾವು ವಿಷದ ಹಾವಲ್ಲ, ಒಮ್ಮೆ ಹೌದಾದರೂ ಅದಕ್ಕೆ ಚಿಕಿತ್ಸೆಯಿದೆಯೆಂದು ಅವನಿಗೆ ಧೈರ್ಯವನ್ನು ತುಂಬಬೇಕು.ನೂರಕ್ಕೆ ಐವತ್ತು ಮಂದಿ ಹೆದರಿಕೊಂಡೇ ಹೃದಯ ಕ್ರಿಯೆ ನಿಂತು ಸಾಯುವ ಸಂದರ್ಭವೇ ಹೆಚ್ಚು. ಆದ್ದರಿಂದ ಸಮಯಕ್ಕೆ ಸರಿಯಾಗಿ ಸರಿಯಾದ ವೈಜ್ಞಾನಿಕ ತಿಳಿವಳಿಕೆ ಮತ್ತು ಸಮಾಧಾನದ ಮಾತುಗಳನ್ನಾಡಿ ಆ ವ್ಯಕ್ತಿಯು ಶಾಂತಚಿತ್ತನಾಗಿರುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

೨. ಹಾವು ಕಚ್ಚಿದ ವ್ಯಕ್ತಿಗೆ ಕೂಡಲೇ ಕಚ್ಚಿದ ಘಾಯದ ಮೇಲು ಭಾಗದಲ್ಲಿ ಸುಮಾರು ಒಂದು ಅಡಿ ಅಂತರದಲ್ಲಿ ಕಟ್ಟನ್ನು ಸಾಧ್ಯವಾದಷ್ಟು ಮಟ್ಟಿಗೆ ಅತಿ ಗಟ್ಟಿಯಾಗಿ ಹಾಕಬೇಕು. ತಕ್ಷಣ ಚುರುಕಾಗಿ ಬಟ್ಟೆಯನ್ನು ಉದ್ದವಾಗಿ ಹರಿದು ಸಣ್ಣದಾದ ಉದ್ದನೆಯ, ಗಟ್ಟಿಯಾದ ಹುರಿ [ ಹಗ್ಗ ] ಯನ್ನು ತಯಾರು ಮಾಡಿಕೊಳ್ಳಬೇಕು. ಈ ಹಗ್ಗದ ಸಹಾಯದಿಂದ ಕಟ್ಟನ್ನು ಹಾಕಬೇಕು. ಹಾವು ಕಚ್ಚಿದ ಘಾಯದಿಂದ ಮೇಲ್ಭಾಗಕ್ಕೆ ರಕ್ತವು ಸಂಚರಿಸಿ ಅದು ಮೆದುಳನ್ನು ಸೇರಬಾರದು. ಹಾಗೆ ಸೇರದಂತೆ ಕಟ್ಟನ್ನು ಹಾಕಬೇಕು. ಹೀಗೆ ಸುತ್ತಿ ಕಟ್ಟನ್ನು ಹಾಕುವಾಗ ಹಾಕುತ್ತಿರುವ ಸುತ್ತು ಸಡಿಲವಾಯಿತೆಂದು ನಮಗೆನ್ನಿಸಿದರೆ ಆ ಸುತ್ತನ್ನು ಖಂಡಿತಾ ಹಿಂದೆ ತೆಗೆಯಬಾರದು. ಹಾಗೆಯೇ ಸುತ್ತಿಬಿಡಬೇಕು. ಒಮ್ಮೆ ಹಾಗೆ ತೆಗೆದರೆ ತಕ್ಷಣ ರಕ್ತವು ಘಾಯದಿಂದ ವಿಷವನ್ನು ತೆಗೆದುಕೊಂಡು ರಭಸದಿಂದ ಮೆದುಳನ್ನು ಸೇರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಂಥಹ ಸಮಯದಲ್ಲಿ ಮೊದಲು ಹಾಕಿದ ಕಟ್ಟಿನ ಪಕ್ಕದಲ್ಲಿ, ಅದರ ಮೇಲ್ಭಾಗದಲ್ಲಿ ಮತ್ತೊಂದು, ಅಗತ್ಯ ಬಿದ್ದರೆ ಮಗದೊಂದು ಕಟ್ಟನ್ನು ಅತಿ ಬಿಗುವಾಗಿ ಹಾಕಬೇಕು. ಯಾವ ಕಾರಣಕ್ಕೂ ಘಾಯದ ಕೆಳಭಾಗಕ್ಕೆ ಕಟ್ಟನ್ನು ಹಾಕಲೇಬಾರದು. ಏಕೆಂದರೆ ರಕ್ತವು ಮದುಳಿನತ್ತ ಹೋಗುವುದು ಮೇಲ್ಭಾಗಕ್ಕೆ ಸರಿ. ರಕ್ತವು ಹಾವಿನ ವಿಷವನ್ನು ತೆಗೆದುಕೊಂಡು ಮೆದುಳನ್ನು ಸೇರಬಾರದು. ಈ ಕಾರಣಕ್ಕಾಗಿಯೇ ಘಾಯದ ಮೇಲ್ಭಾಗಕ್ಕೇ ಕಟ್ಟನ್ನು ಹಾಕಬೇಕಾದುದು ಮುಖ್ಯ. ಈ ಕಟ್ಟನ್ನು ಹಾಕುವ ಪ್ರಕ್ರಿಯೆ ಅತ್ಯಂತ ಅಗತ್ಯವಾದ ಪ್ರಥಮ ಚಿಕಿತ್ಸೆ.

೩. ಹಾವು ಕಚ್ಚಿದ ಘಾಯದ ಮೇಲೆ [ ಘಾಯಕ್ಕೆ ] ' x 'ಗುರುತಿನ ರೀತಿಯಲ್ಲಿ ಹರಿತವಾದ ಚಾಕುವಿನಿಂದ ಅಥವಾ ಹೊಸ ಶೇವಿಂಗ್ ಬ್ಲೇಡಿನ ಸಹಾಯದಿಂದ ಗೀರಿ ಧಾರಾಳವಾಗಿ ರಕ್ತವು ಸೋರಿ ಹೋಗುವಂತೆ ಮಾಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಘಾಯವನ್ನು ಚೆನ್ನಾಗಿ ತೊಳೆಯಬೇಕು.

೪. ಕೋಳಿಗೆ ಹಾವಿನ ವಿಷವನ್ನು ಹೀರುವ ಶಕ್ತಿ ಇದೆ. ಆದರೆ ಬಾಯಿಯಿಂದ ಅಲ್ಲ, ಅದರ ಪೃಷ್ಠದಿಂದ ಮಾತ್ರ. ಹಳ್ಳಿಯ [ ಗಾವಟಿ ] ಕೋಳಿಯು ಒಳ್ಳೆಯದು. ಹಳ್ಳಿಯ ಕಪ್ಪು ಕೋಳಿಯಾಗಬೇಕು. ಅದಕ್ಕೆ ಹಾವಿನ ವಿಷವನ್ನು ಹೀರುವ ಶಕ್ತಿ ಹೆಚ್ಚು ಇರುತ್ತದೆ. ಇಂಥಹ ಕೋಳಿಯ ಪೃಷ್ಠಭಾಗವನ್ನು ಹಾವು ಕಚ್ಚಿದ ಘಾಯದ ಮೇಲೆ ಒತ್ತಿ ಹಿಡಿಯಬೇಕು. ಹೀಗೆ ಹಿಡಿದಾಗ ವಿಷವು ಕೋಳಿಯಿಂದ ಹೀರಲ್ಪಟ್ಟು ಕೋಳಿಯು ಸಾಯುತ್ತದೆ. ಹೀಗೆಯೇ ೫ - ೬ ಕೋಳಿಗಳನ್ನು ಪ್ರಯೋಗಿಸಬೇಕು. ಎಲ್ಲಿಗೆ ಕೋಳಿ ಸಾಯುವುದು ನಿಲ್ಲುತ್ತದೆಯೋ ಅಲ್ಲಿಯವರೆಗೂ ಈ ಕೋಳಿ ಚಿಕಿತ್ಸೆಯನ್ನು ಮುಂದುವರೆಸಬೇಕು. ಈ ತೆರನಾದ ಪ್ರಥಮ ಚಿಕಿತ್ಸೆಗೆ ಸಾಮಾನ್ಯವಾಗಿ ಮೂರು ಕೋಳಿಯಿಂದ ಎಂಟು ಕೋಳಿಯವರೆಗೂ ಬೇಕಾಗುತ್ತದೆ. ಈ ಸಂಖ್ಯೆ ಮನುಷ್ಯನ ದೇಹದೊಳಕ್ಕೆ ಸೇರಿದ ಹಾವಿನ ವಿಷದ ಪ್ರಮಾಣವನ್ನು ಅನುಸರಿಸಿ ಇರುತ್ತದೆ. ಒಂದು ವಿಚಾರ. ಇದು ಒಂದು ಪ್ರಥಮ ಚಿಕಿತ್ಸೆಯೇ ವಿನಃ ಪ್ರಾಕೃತ ಚಿಕಿತ್ಸೆಯಲ್ಲ.

೫. ಹಾವು ಕಚ್ಚಿದ ಘಾಯದ ಮೇಲೆ ಗರುಡಪಚ್ಚೆ ಮಣಿಯನ್ನು ಇಡಬಹುದು ಅಥವಾ ಘೇಂಡಾಮೃಗದ ಕೋಡನ್ನು ನೀರಿನಲ್ಲಿ ಸ್ವಲ್ಪ ತೇಯ್ದು ಕುಡಿಸಬಹುದು. ಇದೂ ಒಂದು ಪ್ರಥಮ ಚಿಕಿತ್ಸೆ.

೬. ಹಾವು ಕಚ್ಚಿದ ವ್ಯಕ್ತಿ ನಡೆದಾಡಕೂಡದು ಅಥವಾ ಕಚ್ಚಿಸಿಕೊಂಡ ಅಂಗ ಚಲಿಸದಂತೆ ನೋಡಿಕೊಳ್ಳಬೇಕು. ಹಾಗೆ ಮಾಡಿದರೆ ರಕ್ತಸಂಚಾರಕ್ಕೆ ಅವಕಾಶವಾಗಿ ವಿಷವು ಬೇಗ ಮೆದುಳಿಗೆ ಸೇರುವ ಸಾಧ್ಯತೆ ಹೆಚ್ಚು.

೭. ಹಾವು ಕಚ್ಚಿದ ವ್ಯಕ್ತಿಗೆ ಟೀ, ಕಾಫೀ, ಹಾಲು ವಗೈರೆ ಪಾನೀಯಗಳನ್ನು ಕೊಡಬಾರದು. ಊಟ ಮತ್ತು ಆಹಾರಗಳನ್ನು ಖಂಡಿತ ಕೊಡಕೂಡದು. ತೀರಾ ಅಗತ್ಯ ಬಿದ್ದಲ್ಲಿ ಒಂದು ಗುಟುಕು ನೀರನ್ನು ಕೊಡಬಹುದು.

೮. ಹಾವು ಕಡಿದವರು ನಿದ್ರೆ ಮಾಡದಂತೆ ಕಟ್ಟು ನಿಟ್ಟಾಗಿ ನೋಡಿಕೊಳ್ಳಬೇಕು. ಹಾವು ಕಡಿದವರಿಗೆ ನಿದ್ರೆ ಹೆಚ್ಚು ಬರುವ ಸಾಧ್ಯತೆ ಇದೆ. ಇದು ಅತ್ಯಂತ ಮಹತ್ವದ ಸೂಚನೆ.

ಈ ಮೇಲ್ಕಂಡ ಎಲ್ಲಾ ಪ್ರಥಮ ಚಿಕಿತ್ಸೆಗಳಲ್ಲಿ ಒಂದು, ಎರಡು, ಏಳು ಮತ್ತು ಎಂಟನೆಯದು ಅತಿ ಮುಖ್ಯವಾಗಿ ಮಾಡಲೇಬೇಕಾದಂಥಹ ಪ್ರಥಮ ಚಿಕಿತ್ಸೆಗಳು.

ಇಲ್ಲಿಗೆ ಹಾವು ಕಚ್ಚಿದ ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಮಾಹಿತಿ ಮುಗಿಯಿತು. ಮುಂದಿನ ಚಿಕಿತ್ಸೆಯ ಮಾಹಿತಿಗಾಗಿ ಮೂರನೆಯ ಕಂತನ್ನು ಓದಿ.

==================================================================================

ಹಾವು ಕಚ್ಚಿದ ಬಗ್ಯೆ ಮಾಹಿತಿ :

ಮೂರನೆಯ ಕಂತು :

ತಾರೀಖು :೨೭ -೬ -೨೦೧೪.

ಮಾಹಿತಿಯ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಅಂಚೆ ಮತ್ತು ಊರು : ಗೆಣಸಿನಕುಣಿ. - ೫೭೭೪೫೩ ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ. ಸರ್ಪ ವಿಷ ಪರಿಹಾರಕರು ಮತ್ತು ನಾಟಿ ವೈದ್ಯರು.

ಶ್ರೀ ಕೇಶವ ಹೆಗಡೆಯವರು ಹಾವು ಕಚ್ಚಿದ್ದಕ್ಕೆ ಮಾಡುವ ಚಿಕಿತ್ಸೆ ಮತ್ತು ಹಾವು ಕಚ್ಚುವುದರ ಕುರಿತು ಅವರು ನೀಡುವ ವಿವರಣೆ :

ವಿವರಣೆ :

ಹಾವು ಎಂದ ಮಾತ್ರಕ್ಕೆ ಎಲ್ಲಾ ಹಾವುಗಳೂ ವಿಷದ ಹಾವುಗಳು ಎಂದು ತಿಳಿಯಬಾರದು. ವಿಷದ ಹಾವುಗಳು ಸಹಿತ ಕಚ್ಚಿದ ಎಲ್ಲಾ ಸಂದರ್ಭಗಳಲ್ಲಿ ಒಂದೇ ಪ್ರಮಾಣದಲ್ಲಿ ವಿಷವನ್ನು ನಮ್ಮ ದೇಹಕ್ಕೆ ಬಿಟ್ಟಿರುವುದಿಲ್ಲ. ನಾಗರ ಹಾವು ,ಮಂಡಲದ ಹಾವು ಮತ್ತು ಇನ್ನಿತರೆ ಬೇರೆ ರೀತಿಯ ಹಾವುಗಳು ಈ ಮೂರು ನಮೂನೆ ಹಾವುಗಳ ಕಚ್ಚುವಿಕೆಯ ಪರಿಣಾಮ ಬೇರೆ ಬೇರೆ ಇದೆ. ಈ ರೀತಿಯಲ್ಲಿ ಬೇರೆ ಬೇರೆ ಹಾವುಗಳು ಕಚ್ಚಿದಾಗ ಬೇರೆ ಬೇರೆ ಔಷಧ ಮತ್ತು ಬೇರೆ ಬೇರೆ ಚಿಕಿತ್ಸೆಯಿದೆ.

ಹಾವು ಕಚ್ಚಿದವರೆಲ್ಲ ಸಾಯುತ್ತಾರೆ ಎಂಬ ಭ್ರಮೆಯನ್ನು ಜನ ಬಿಡಬೇಕು. ಹಾವು ಕಚ್ಚಿದ ಕೂಡಲೆ ಹೆದರಿಕೆಯಿಂದಲೇ ಕೆಲವರು ಹೃದಯಾಘಾತದಿಂದ ಸಾಯುವವರಿದ್ದಾರೆ. ಇದು ಆಗಬಾರದು. ಅದಕ್ಕೆ ವರ್ತಮಾನದ ಕಾಲದಲ್ಲಿ ಅನೇಕ ರೀತಿಯ ಚಿಕಿತ್ಸೆಯಿದೆ. ಅದರಂತೆಯೇ ನಾನು ಕೂಡಾ ನನ್ನದೇ ಕ್ರಮದಲ್ಲ್ಲಿ ನನ್ನಲ್ಲಿ ಕೇಳಿ ಬಂದವರಿಗೆ ಚಿಕಿತ್ಸೆಯನ್ನು ಮಾಡುತ್ತೇನೆ. ಇದು ನನ್ನ ದುಡಿಮೆಯ ಉದ್ಯೋಗವಲ್ಲ. ನಿರಾಪೇಕ್ಷೆಯಿಂದ ಸಮಾಜಕ್ಕೆ ಸಲ್ಲಿಸುವ ಕೇವಲ ಸೇವೆ ಅಷ್ಟೇ. ನಾನು ನೀಡಿದ ಚಿಕಿತ್ಸೆಗಾಗಿ ಯಾರಿಂದಲೂ ಹಣವನ್ನಾಗಲಿ ಅಥವಾ ಇನ್ನಿತರೆ ಯಾವುದೇ ಪ್ರತಿಫಲವನ್ನಾಗಲೀ ತೆಗೆದುಕೊಳ್ಳುವುದಿಲ್ಲ. ಹಾಗೆಂದು ಮೂವತ್ತನಾಲ್ಕು ವರ್ಷಗಳಿಂದ ,ಅಂದರೆ ೧೯೮೦ನೇ ಇಸವಿಯಿಂದ ಇಂದಿನವರೆಗೆ ಸುಮಾರು ಹನ್ನೊಂದು ಸಾವಿರ ಮಂದಿ ಹಾವು ಕಚ್ಚಿಸಿಕೊಂಡು ಬಂದವರಿಗೆ ಸಮಯೋಚಿತವಾಗಿ ಕೇವಲ ಉಚಿತವಾಗಿ ಚಿಕಿತ್ಸೆ ಮತ್ತು ಔಷಧವನ್ನು ಕೊಟ್ಟಿರುತ್ತೇನೆ. ಅಲ್ಲದೆ ಅದರಲ್ಲಿ ಯಶಸ್ವಿಯಾಗಿದ್ದೇನೆ. ಇದರಲ್ಲಿ ನಾನು ಕಂಡುಕೊಂಡ ಯಶಸ್ಸು ಜನರು ತಾವಾಗಿಯೇ ನನ್ನನ್ನು ಹುಡುಕಿಕೊಂಡು ಬರುವಂತೆ ಆಗಿದೆ ಎಂದು ಭಾವಿಸುತ್ತೇನೆ.

ನಮ್ಮ ಭಾಗದಲ್ಲಿ ಬಹಳ ಹಿಂದೆ ಶ್ರೀ ಶ್ರೀಪಾದ ಆಚಾರ್ ಎನ್ನುವವರು ಸರ್ಕಾರಿ ಅರೋಗ್ಯ ತಪಾಸಕರಾಗಿ ನೇಮಕಗೊಂಡಿದ್ದರು. ಅವರು ನಮ್ಮ ಪೂಜ್ಯ ತಂದೆಯವರಾದ ಶ್ರೀ ಜಿ.ಡಿ.ತಿಮ್ಮಪ್ಪ ಹೆಗಡೆಯವರಿಗೆ ೧೯೪೦ನೆ ಇಸವಿಯಲ್ಲಿ ಸರ್ಪ ಕಚ್ಚಿದ ಚಿಕಿತ್ಸೆಗೆ ಮಂತ್ರೋಪದೇಶವನ್ನು ನೀಡಿದರು. ಅಲ್ಲದೆ ನಾನು ಹಿಂದೆ ತಿಳಿಸಿದಂತೆ ಬೇರೆ ಹಾವು ಕಚ್ಚಿದರೆ ಅದಕ್ಕೆ ಆಯುರ್ವೇದ ಮತ್ತು ಗಿಡಮೂಲಿಕೆ ಔಷಧಗಳ ಮಾಹಿತಿಯನ್ನು ಅವರಿಗೆ ಕಲಿಸಿಕೊಟ್ಟರು. ಜೊತೆಗೆ ಪ್ರತಿಫಲಾಪೇಕ್ಷೆಯಿಲ್ಲದೆ ಅಗತ್ಯ ಜನರಿಗೆ ಈ ಕೆಲಸವನ್ನು ಸೇವಾಮನೋಭಾವದಿಂದ ಮಾಡಬೇಕೆಂದು ಸೂಚಿಸಿದರು. ಅದರಂತೆಯೇ ನಮ್ಮ ತಂದೆಯವರು ೧೯೪೦ನೆ ಇಸವಿಯಿಂದ ೧೯೮೦ನೆ ಇಸವಿಯವರೆಗೆ ನಲವತ್ತು ವರ್ಷಗಳ ದೀರ್ಘ ಕಾಲ ಈ ಮಂತ್ರ ಚಿಕಿತ್ಸೆ ಮತ್ತು ಔಷಧ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ೧೯೪೭ನೆ ಇಸವಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶ್ರೀ ಕ್ಷೇತ್ರ ವರದಪುರದ ಭಗವಾನ್ ಶ್ರೀ ಶ್ರೀಧರ ಸ್ವಾಮಿಯವರು ನನ್ನ ತಂದೆಯವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಅವರು ಉಪದೇಶ ಪಡೆದುಕೊಂಡ ಸರ್ಪ ವಿಷ ನಿವಾರಣಾ ಮಂತ್ರಕ್ಕೆ ಹೆಚ್ಚಿನ ಶಕ್ತಿಯನ್ನು ಅನುಗೃಹಿಸಿದರು. ಇವೆಲ್ಲವೂ ನಂಬಿಕೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ್ದೇ ವಿನಃ ತರ್ಕಕ್ಕೆ ಸಿಗುವಂಥಹುದಲ್ಲ. ಈ ಮಂತ್ರೋಪದೇಶ ಮತ್ತು ಔಷಧದ ಮಾಹಿತಿಯನ್ನು ನನ್ನ ತಂದೆಯವರು ನಮಗೆ ನೀಡಿದರು. ನಿರಾಪೇಕ್ಷೆಯಿಂದ ಈ ಸೇವೆಯನ್ನು ಮುಂದುವರೆಸಲು ಸೂಚಿಸಿದರು. ಅದರಂತೆಯೇ ೧೯೮೦ನೆ ಇಸವಿಯಿಂದ ಇಲ್ಲಿಯವರೆಗೆ ನಾನು ಇದನ್ನು ಪ್ರಾಮಾಣಿಕವಾಗಿ ಸೇವಾಮನೋಭಾವದಿಂದ ಮುಂದುವರೆಸಿಕೊಂಡು ಬಂದಿದ್ದೇನೆ. ದೇವರ ಸ್ಮರಣೆಯಲ್ಲಿಯೆ ನಡೆಯುವ ಮಂತ್ರ ಚಿಕಿತ್ಸೆಗೆ ದೇವರು ಆ ಮಂತ್ರದಲ್ಲಿ ವೈಜ್ಞಾನಿಕ ಶಕ್ತಿಯನ್ನು ಇರಿಸಿದ್ದಾನೆ ಎಂದು ನನ್ನ ಭಾವನೆ. ಏಕೆಂದರೆ ಸರ್ಪದಿಂದ ಕಚ್ಚಿಸಿಕೊಂಡು ಬಂದ ಹಲವು ಸಾವಿರ ಮಂದಿ ನಾನು ಮಾಡುವ ಮಂತ್ರ ಚಿಕಿತ್ಸೆಯಿಂದಲೇ
ಗುಣಮುಖವಾಗಿದ್ದಾರೆ.

ಚಿಕಿತ್ಸೆಯ ಕ್ರಮಗಳು : ೧. ಸರ್ಪ ಕಚ್ಚಿದವರಿಗೆ ಈಗಾಗಲೇ ತಿಳಿಸಿದಂತೆ ಸಿದ್ಧಿಸಿದ ಮಂತ್ರದಿಂದ ಚಿಕಿತ್ಸೆ ಮಾಡಲಾಗುತ್ತದೆ. ಮಂತ್ರ ಚಿಕಿತ್ಸೆ ನೀಡಿದ ನಂತರ ಹಾವು ಕಚ್ಚಿದ ಘಾಯದ ಮೇಲ್ಭಾಗದಲ್ಲಿ ಕಚ್ಚಿದ ಕೂಡಲೆ ವ್ಯಕ್ತಿಯು ಹಾಕಿಕೊಂಡ ಕಟ್ಟನ್ನು ಬಿಚ್ಚಲಾಗುವುದು. ೨. ಮಂಡಲ ಹಾವು ಮತ್ತು ಇತರೆ ಬೇರೆ ಹಾವು ಕಚ್ಚಿದವರಿಗೆ ಆಯುರ್ವೇದ ಅಥವಾ ಗಿಡಮೂಲಿಕೆ ಔಷಧ. ಹಾವು ಕಚ್ಚಿದ ಕ್ರಮವನ್ನು ಪರೀಕ್ಷಿಸಿ ಅದು ಕಚ್ಚಿದ ವಿಧಾನ ಮತ್ತು ಕಚ್ಚಿದ ನಂತರ ಆಗುವ ಪರಿಣಾಮಗಳನ್ನು ಪರಾಮರ್ಶಿಸಿ ಇಂಥಹುದೇ ಹಾವು ಕಚ್ಚಿದೆಯೆಂದು ನಿರ್ಣಯಿಸಲಾಗುವುದು ಮತ್ತು ಅದರಂತೆ ಚಿಕಿತ್ಸೆ ಮಾಡಲಾಗುತ್ತದೆ. ದಿನದ ಯಾವುದೇ ಸಮಯದಲ್ಲಿ ಬಂದವರಿಗೂ ಘಟನೆಯ ಔಚಿತ್ಯಕ್ಕನುಸರಿಸಿ ಚಿಕಿತ್ಸೆಯನ್ನು ನೀಡಲಾಗುವುದು. ಯಾವುದೇ ಪ್ರತಿಫಲವನ್ನು ಸ್ವೀಕರಿಸಲಾಗುವುದಿಲ್ಲ.

ಈ ಮೇಲಿನ ಚಿಕಿತ್ಸೆಗಳಲ್ಲದೆ ಸರ್ಪಸುತ್ತಿಗೆ ಕೂಡ ಗಿಡಮೂಲಿಕೆಗಳಿನ್ದ ಗುಣಪಡಿಸಲಾಗುತ್ತದೆ.

******* ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ ?, *******

- ಎಂ ಗಣಪತಿ , ಕಾನುಗೋಡು .

ಹೌದು. ಹೊಗೆ ಕಾಣಿಸಿಕೊಂಡಿದೆ ಎಂದರೆ ಅದರ ಹಿಂದೆ ಬೆಂಕಿ ಇದೆ ಎಂಬುದು ವಾಸ್ತವಿಕ. ಆದರೆ ಆ ಬೆಂಕಿ ಯಾವುದು ಎಂಬುದು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾದ ವಿಚಾರ.

ಒಂದು ವ್ಯಕ್ತಿ ಅಥವಾ ಸಂಸ್ಥೆಯ ಬಗ್ಯೆ ಯಾವುದೇ ಸುದ್ಧಿ ಪ್ರಚಾರಗೊಂಡರೆ ಅದಕ್ಕೆ ಸರಿಯಾದ ಕಾರಣ ತಕ್ಷಣ ಯಾರಿಗೂ ಗೊತ್ತಾಗುವುದಿಲ್ಲ. ಹಾಗೆಂದು ಒಂದು ಪರಿಣಾಮಕ್ಕೆ ಸಂಬಂಧಿಸಿರಬಹುದಾದ ವಾಸ್ತವಿಕ ಕಾರಣವನ್ನು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಒಂದು ಸುದ್ದಿ ಅಥವಾ ಘಟನೆ ಪ್ರಚಲಿತಕ್ಕೆ ಬಂದಾಗ ಆ ಹೊತ್ತಿಗೆ ತಮ್ಮ ಬುದ್ಧಿಯ ಮಿತಿಯೊಳಗೆ ಯಾವ ಯಾವ ಕಾರಣಗಳು ಗೋಚರಿಸುತ್ತವೆಯೋ ಅವನೆಲ್ಲ ಆ ಪರಿಣಾಮಕ್ಕೆ ತಳಿಕೆ ಹಾಕುತ್ತಾರೆ.ಆಡುತ್ತಿರುವ ಹೊಗೆಯ ಹಿಂದೆ ಇರುವಂತಹ ನಿಜವಾದ ಬೆಂಕಿ ಯಾವುದು ಎಂಬುದನ್ನು ಯಾರೂ ತಿಳಿದಿರುವುದಿಲ್ಲ. ಹಾಗೆಂದು ತಮ್ಮಷ್ಟಕ್ಕೆ ತಾವು ಯಾರೂ ಸುಮ್ಮನೆ ಕೂರುವುದಿಲ್ಲ.

ಎಷ್ಟೋ ಭಾರಿ ಆಡುವ ಹೊಗೆಗೂ ಅಡಗಿರುವ ಬೆಂಕಿಗೂ ಕಾರ್ಯ ಕಾರಣ ಸಂಬಂಧವೇ ಇರುವುದಿಲ್ಲ.

ಸಮಾಜದಲ್ಲಿ ಜವಾಬ್ದಾರಿಯಿಲ್ಲದ ಜನರು, ನಾಲಿಗೆ ತುರಿಕೆ ಇರುವ ಜನರು, ಪುಕ್ಕಟೆ ಕರ್ಣಾನಂದವನ್ನು ಬಯಸುವ ಜನರು, ವದಂತಿಕೋರ ಪ್ರವೃತ್ತಿಯನ್ನೇ ಚಟವನ್ನಾಗಿರಿಸಿಕೊಂಡವರು, ಉದ್ಯೋಗದಲ್ಲಿ ಸೋತು ಹತಾಶರಾದರೂ 'ಅಹಂ' ನ್ನು ಬಿಡಲಾರದವರು, ತಮ್ಮಲ್ಲಿರುವ ದ್ವೇಷವನ್ನು ಸಾಧಿಸಲು ಸಮಯಕ್ಕೆ ಹೊಂಚು ಹಾಕುತ್ತಿರುವವರು ಹೀಗೆ.....ಹೀಗೆ......... ಬಹಳ ಮಂದಿ ಇದ್ದಾರೆ. ಅವರಿಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವದಂತಿಯನ್ನು ಹಬ್ಬಿಸುವುದೇ ಕೆಲಸ. ಅವರು ನಿದ್ರೆ ಬರಲಿಕ್ಕೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದಿಲ್ಲ.ತಾವು ಸುಖನಿದ್ರೆ ಮಾಡಲಿಕ್ಕೆ ಕಂಡುಕೊಂಡ ಅತ್ಯಂತ ಸುಲಭದ ದಾರಿ ಇದು.

ಯಾರ ನಿದ್ರೆ ಹಾಳಾದರೇನಂತೆ ?.

ದಾಂಪತ್ಯ ಮುರಿಯುವಲ್ಲಿ ಇರಬಹುದಾದ ಮರೆ

- ಎಂ ಗಣಪತಿ , ಕಾನುಗೋಡು .
[ ಈ ಲೇಖನವನ್ನು ಯಾರೂ ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು ]
ಒಂದು ದಾಂಪತ್ಯ ಮುರಿದು ಬೀಳಬೇಕಾದರೆ ಗಂಡನ ಪಾತ್ರ ಹೆಚ್ಚಿರಬಹುದು, ಹೆಂಡತಿಯ ಪಾತ್ರ ಹೆಚ್ಚಿರಬಹುದು ಇಲ್ಲವೇ ಗಂಡ ಮತ್ತು ಹೆಂಡತಿಯ ಸಮಪಾತ್ರವಿರಬಹುದು, ಗಂಡನ ತಂದೆ ತಾಯಿಯ ಪಾತ್ರ ಇರಬಹುದು, ಹೆಂಡತಿಯ ತಂದೆ ತಾಯಿಯ ಪಾತ್ರ ಇರಬಹುದು, ಗಂಡನ ಅಥವಾ ಹೆಂಡತಿಯ ಅಕ್ಕ ತಂಗಿಯರದ್ದಿರಬಹುದು ಅಥವಾ ಅಪರೂಪಕ್ಕೆ ನೆರೆಹೊರೆಯವರದ್ದೂ ಇರಬಹುದು. ಒಬ್ಬ ಗಂಡಿನ ಅಥವಾ ಹೆಣ್ಣಿನ ಉಭ್ರಮೆಗೆ ಕಾಲಾವಕಾಶವಿರುವುದು ಕೇವಲ ಹತ್ತೆಂಟು ವರುಷ ಅಷ್ಟೆ. ವ್ಯಕ್ತಿಯೊಬ್ಬ ಹೇಗೆ ಬಾಳಬೇಕೊ ಹಾಗೆ ಬಾಳದೆ ಇದ್ದರೆ ಕಾಲ ಮೀರಿದ ಮೇಲೆ ಬದುಕೇ ಶೂನ್ಯವಾಗುತ್ತದೆ. ಸಮಾಜವು ಅಂಥವರನ್ನು ನೋಡುವ ದೃಷ್ಟಿಯೇ ಬೇರೆ. ಆದ್ದರಿಂದ ಸಾಕಷ್ಟು ವಿವೇಚನೆ ದಂಪತಿಗಳಿಗೆ ಬದುಕಿನ ಪ್ರಾರಂಭದಲ್ಲಿ ಅಗತ್ಯ.
ಯಾವುದೇ ಬೆಸುಗೆ ಭದ್ರವಾಗಿ ಮುಂದುವರಿಯಬೇಕೆಂದರೆ ಆ ಕೂಟದಲ್ಲಿ ಬರುವ ವ್ಯಕ್ತಿಗಳು ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಮಾತಿನಲ್ಲಿ, ಹಠದಲ್ಲಿ ಗೆದ್ದೇತೀರಬೇಕೆನ್ನುವುದರ ಪರಿಣಾಮ ವಿರಸ,ವಿಘಟನೆ. . ದಾಂಪತ್ಯದ ವಿರಸ ಅದು ಕೇವಲ ಗಂಡ-ಹೆಂಡತಿಗೊಂದೆ ಅಲ್ಲ, ಮಕ್ಕಳನ್ನೊಳಗೊಂಡ ತಮ್ಮ ಕುಟುಂಬವೊಂದೇ ಅಲ್ಲ, ಗಂಡನ ಮನೆಯ ಕುಟುಂಬ ಮತ್ತು ಹೆಂಡತಿಯ ಮನೆಯ ಕುಟುಂಬಗಳನ್ನೂ ಬಲಿ ತೆಗೆದುಕೊಳ್ಳುತ್ತದೆ.
ಯಾರೂ ತನಗೆ ಅನಿವಾರ್ಯವಲ್ಲವೆಂದು ಗಂಡ ಮತ್ತು ಹೆಂಡತಿ ಪರಸ್ಪರ ಭಾವಿಸಿದರೆ ಪರಿಣಾಮ ವಿಘಟನೆ.ಈ ಭಾವನೆಯನ್ನು ತೊಡೆದು ಹಾಕದಿದ್ದರೆ ಯಾರನ್ನು ಬಿಟ್ಟು ಯಾರನ್ನು ಯಾರನ್ನು ಪುನಃ ಮದುವೆಯಾದರೂ ಅಲ್ಲಿಯೂ ಇದೇ ಪಾಡು. ಒಬ್ಬರಿಗೊಬ್ಬರು ಹೊಂದಿಕೊಂಡು ಸಾಗಿ ಅಹಮಿಕೆಯನ್ನು ಬಿಟ್ಟರೆ ಯಾರನ್ನು ಯಾರೂ ಬಿಡಬೇಕಾದದ್ದಿಲ್ಲ. ಒಟ್ಟಾರೆ ಇದೇ ಪರಿಕ್ರಮದಲ್ಲಿ ಗಂಡನಿಗೆ ವಯಸ್ಸು ಹೋಗುತ್ತದೆ. ಹೆಂಡತಿಗೆ ಮುಟ್ಟು ಸಾರಿಸಿ ಹೋಗುತ್ತದೆ. ಆಕೆಗೆ ವಯಸ್ಸು ಆಗುವುದೇ ಇಲ್ಲ. ಏಕೆಂದರೆ ಈಗಾಗಲೇ ಎರಡು ಜನರನ್ನು ಬಿಟ್ಟು ಬಂದವಳು ಅವಳು ಎಂದಾದರೆ ಇನ್ನೂ ನಾಲ್ಕಾರು ಗಂಡಸರು ಆಕೆಗೆ ಬಂದಾರು !. ಹೆಣ್ಣಿನ ವಯಸ್ಸನ್ನು ಕೇಳಬಾರದೆಂದು ಮೊದಲೇ ಗಾದೆ ಇದೆ. ಅಷ್ಟರಮಟ್ಟಿಗೆ ಹೆಣ್ಣಿನ ಬಗ್ಯೆ ನಮ್ಮ ಸಮಾಜದಲ್ಲಿ ವಿಶೇಷತೆಯ ಅಪಭ್ರಾಂತಿಯನ್ನು ಹುಟ್ಟಿಸಿಬಿಟ್ಟಿದ್ದಾರೆ.
ಈ ತೆರನಾದ ಬಿರುಕಿಗೆ ಕಾರಣ ಹಲವಾರು.
 1 . ತಮ್ಮ ಆದಾಯಕ್ಕಿಂತ ಮಿಗಿಲಾದ ಬಯಕೆಗಳು.
2 .ಮತ್ತೊಬ್ಬರ ಬದುಕಿಗೆ ತಮ್ಮ ಜೀವನವನ್ನು ಹೋಲಿಸಿಕೊಂಡು ಕರುಬಿಕೊಳ್ಳುವುದು.
3 . ತಮ್ಮ ಸ್ಥಿತಿ ಮತ್ತು ಮಿತಿಯನ್ನು [ಭಗವಂತ ಕರುಣಿಸಿದ ಪಾಡು] ಮೀರಿ ಆಕಾಶವನ್ನು ನೋಡುವುದು. [ಇದು ಒಂದನೇ ಅಂಶಕ್ಕಿಂತ ಸ್ವಲ್ಪ ಭಿನ್ನ.]
 4 .ಗಂಡ-ಹೆಂಡತಿಯರಿಂದ ಪರಸ್ಪರ ಅತಿಯಾದ ನಿರೀಕ್ಷೆ.
5 . ಸಣ್ಣ ಪುಟ್ಟ ಸಂಗತಿಗಳಿಗೂ ಮಾತಿಗೆ ಮಾತು, ಜಗಳ.
6 . ಸಂಸಾರದಲ್ಲಿನ ಸಣ್ಣ ಪುಟ್ಟ ವಿಚಾರಕ್ಕೂ ಪರಸ್ಪರ ವಿಪರೀತ ಅವಲಂಬನೆ. ದೇವಸ್ಥಾನಕ್ಕೆ ಹೋಗಿಬರಲು ಗಂಡನು ಜೊತೆಯಲ್ಲಿಯೇ ಇರಬೇಕೆಂದು ಹೆಂಡತಿ ಬಯಸುವುದು. ಸ್ನಾನಕ್ಕೆ ನೀರು ಕಾಯಿಸಿಕೊಡಲು ಹೆಂಡತಿಯೇ ಬೇಕು ಎಂದು ಗಂಡ ಬಯಸುವುದು ...ಹೀಗೆ.
7 .ಯಾರೂ ತನಗೆ ಮುಖ್ಯ ಅಲ್ಲ ಎಂದು ಪರಸ್ಪರ ಸ್ವಪ್ರತಿಷ್ಠೆ ಮಾಡುವುದು.
 8 .ಒಬ್ಬರು ಮತ್ತೊಬ್ಬರಿಗೆ ಪಾಠ ಕಲಿಸುತ್ತೇನೆಂದು ಪರಸ್ಪರ ದಿನಗಟ್ಟಲೆ ಮಾತನಾಡದೆ ಸುಮ್ಮನೆ ಇರುವುದು.
9 . ಪದೇ ಪದೇ ಒಬ್ಬರ ತಪ್ಪನ್ನು ಮತ್ತೊಬ್ಬರು ಎತ್ತಿಯಾಡಿಸುವುದು. ತಮ್ಮ ತಪ್ಪಿಗೆ ಯಾವುದಾದರೂ ಒಂದು ಸಬೂಬನ್ನು ಹೇಳಿ ಜಾರಿಕೊಳ್ಳುವುದು.
 10 .ಒಬ್ಬರ ಒಳ್ಳೆಯ ಪ್ರಯತ್ನವನ್ನು ಮತ್ತೊಬ್ಬರು ಮೆಚ್ಚಿಕೊಳ್ಳದೆ ಇರುವುದು. ತಾನು ಮಾಡಿದ ಪ್ರಯತ್ನ ಸಂಸಾರದ ಒಳಿತಿಗೆ ವಿರುದ್ಧವಾಗಿದ್ದನ್ನು ಗಮನಿಸಿ ಮತ್ತೊಬ್ಬರು ಮತ್ತೊಂದು ದಿನ ವಿರೋಧಿಸಿದರು ಎನ್ನುವ ಕಾರಣಕ್ಕಾಗಿಯೇ ಅವರ ಸೂಕ್ತ ಪ್ರಯತ್ನವನ್ನು ವ್ಯರ್ಥವಾಗಿ ಕಡೆಗಣಿಸುವುದು.
11 . ಯಾವಾವುದೋ ಮನಸ್ತಾಪದಿಂದ ಹಾಸಿಗೆಯಲ್ಲಿ ದೂರ ಇರುವುದು. ಪ್ರತಿಭಾರಿ ಹತ್ತಿರ ಬಂದಾಗ ಏನಾದರೊಂದು ನೆವ ಹೇಳಿ ಸಂಪರ್ಕದಿಂದ ತಪ್ಪಿಸಿಕೊಳ್ಳುವುದು.
 12 . ಗಂಡ - ಹೆಂಡತಿಯರ ನಡುವೆ ಚಾರಿತ್ರಿಕವಾಗಿ ಪರಸ್ಪರ ಸಂಶಯ ಪಡುವುದು. ಯಾರು ಮತ್ತೊಬ್ಬರೊಡನೆ ಸಲಿಗೆಯಿಂದ ವರ್ತಿಸಿದರೂ ಅವರೊಡನೆ ಇನ್ನೊಬ್ಬರು ಸಂದೇಹದಿಂದ ನೋಡುವುದು. ಆದರೆ ಈ ತೆರನಾದ ಸಂಶಯದ ಬಿರುಕು ಈಗಿನ ದಂಪತಿಗಳಲ್ಲಿ ಬಹಳ, ಬಹಳ ಅಪರೂಪ.
September 14

Sunday 24 August 2014

ಹೊಸ ವರುಷ

ಹೊಸ ವರುಷ ಹಳೆ ದುಗುಡ ...

ಹೊಸ ವರುಷ ಹೊಸತಲ್ಲ ನನಗೆ .. ನನ್ನಷ್ಟೇ ಹಳತು. |
ಹಳೆದುಗುಡ ಹೊಸೆತಿರಲು ಹೊಸತೇನ ಕಾಣಲಿ ನಾನು. |
ಹೊಸತನರಸಿದೊಡೆ ಆಸೆಗಳ ಹಾಸು - ಹೊಕ್ಕು
ಸಿಕ್ಕಾಗಿ ಬದುಕಿನ ಸೊಗಡು ಜಡವಾಯಿತು. |
ಕಾಲ ಕಲಿಸುವುದೊಂದೇ ಪಾಠ.. ನಿತ್ಯದಾಟ
ಹಳಸಲ ಮನಕೆ ಕರೆದು ತುಂಬುವ ನಿತ್ಯ ಚೇತನ. |


ಸರ್ವರಿಗೂ ಹೊಸವರುಷ ಶುಭವನ್ನು ಕೊಡಲಿ ..

- ಎಂ ಗಣಪತಿ , ಕಾನುಗೋಡು .

ಅಡಿಕೆ ಬೆಲೆ ಗಗನಕ್ಕೆ

ಕೆಂಪು ಅಡಿಕೆ ಬೆಲೆ ಗಗನಕ್ಕೆ ಏರಿದೆ ಎನ್ನುವುದು ಸುಳ್ಳಲ್ಲ. ಕೆಂಪು ಅಡಿಕೆ ಬೆಳೆಗಾರನಿಗೆ ಸಿಗುವುದು ಒಂದು ಎಕರೆಯಲ್ಲಿ , ಸರಿಯಾದ ಸಮಯದಲ್ಲಿ ಕೊಯಿಲು ಮಾಡಿದರೆ, ಒಟ್ಟು ಉತ್ಪನ್ನದ ಮೂರನೆಯ ಒಂದು ಭಾಗ ಮಾತ್ರ. ಸಾಗರ ಪ್ರಾಂತ್ಯದಲ್ಲಿ ಸರಾಸರಿ ಒಂದು ಎಕೆರೆಗೆ 12 ಕ್ವಿಂಟಾಲ್ ಅಷ್ಟೇ. ಅಂದರೆ ರೈತನಿಗೆ ಒಂದು ಎಕೆರೆಯಲ್ಲಿ ಮೂರು ಕ್ವಿಂಟಾಲ್ ಕೆಂಪಡಿಕೆ ಸಿಗುತ್ತದೆ. ಅದರಲ್ಲೂ ಕೆಂಪು ಗೋಟು ಬೇರ್ಪಡೆಯಾಗುತ್ತದೆ. ಅದಕ್ಕೆ ಧಾರಣೆ ಕಡಿಮೆ. ಉಳಿದ 9 ಕ್ವಿಂಟಾಲ್ ಅಡಿಕೆಯಲ್ಲಿ ಚಾಲಿ[ಬಿಳಿ ಅಡಿಕೆ], ಬಿಳಿಗೋಟು, ಕಲ್ವಾರು. ಕೋಕ [ಅತಿ ಲಡ್ಡು ಅಡಿಕೆ]ಇವೆಲ್ಲ ಸೇರಿಕೊಳ್ಳುತ್ತದೆ. ಇವಕ್ಕೂ ಒಮ್ಮೆ ಬೆಲೆ ಬಂದರೂ ಈ ವಿವಿಧ ಬಗೆಯ ಚಾಲಿ ಬೇರ್ಪಡೆಗಳಿಗೆ ಧರ ತಾರತಮ್ಯವಿದೆ. ಕಳೆದ ಚುನಾವಣೆಯ ನಂತರ ಧಾರಣೆ ಒಳಗೆ ಬರುತ್ತದೆ ಎನ್ನುವ ಕಾರಣ ಮತ್ತು ಪಡೆದ ಸಾಲವನ್ನು ತೀರಿಸಿ ಚೊಕ್ಕವಾಗುವ ಕಾರಣಗಳಿಂದ ಬಹುತೇಕ ಬೆಳೆಗಾರರು ಚಾಲಿ ಅಡಿಕೆಯನ್ನೂ ಧಾರಣೆ ಏರುವ ಮೊದಲೇ ಮಾರಾಟ ಮಾಡಿದ್ದಾರೆ. ಕಳೆದ ವರ್ಷ ಕೊಳೆ ರೋಗ ಮತ್ತು ಪ್ರಾಕೃತಿಕ ಒತ್ತಡದಿಂದಾಗಿ ಈ ಉತ್ಪನ್ನ್ನದಲ್ಲೂ ಅತಿ ಕಡಿಮೆಯಾಗಿದೆ. ಸಾಗರದ ಇದೇ ಮಾದರಿ ಉಳಿದ ಎಲ್ಲಾ ಅಡಿಕೆ ಬೆಳೆಯುವ ಪ್ರದೇಶಕ್ಕೂ ಸ್ವಲ್ಪ ತಾರತಮ್ಯದಲ್ಲಿ ಹೊಂದಿಕೊಂಡಿದೆಯೇ ವಿನಃ ಬಹಳ ವ್ಯತ್ಯಾಸವಿಲ್ಲ.

ಇಷ್ಟಕ್ಕೂ ಮಲೆನಾಡಿನ ಪಾರಂಪರಿಕ ಅಡಿಕೆ ಬೆಳೆಗಾರ ಹೊಂದಿರುವ ತಲಾ ಅಡಿಕೆ ತೋಟವೆಷ್ಟು?. ಹತ್ತು ಗುಂಟೆಯಿಂದ ಒಂದು ಎಕರೆ ಕ್ಷೇತ್ರವಷ್ಟೇ. ಇದು ಸರಾಸರಿ ಹಿಡುವಳಿಯ ಮಾಹಿತಿ. ಇತ್ತೀಚೆಗೆ ಕೆಲವರು ಒಂದೂಅರ್ಧಎಕೆರೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಡಿಕೆ ಬೆಳೆಗಾರನ ಸಾಲ ಎಷ್ಟಿದೆಯೆಂದು ಅವನ ಹೆಂಡತಿಗೂ ಗೊತ್ತಿಲ್ಲ. ಹೇಳಿದರೆ ಮರ್ಯಾದೆ ಹೋಗುತ್ತದೆ. ಕಾರಣ ಅಡಿಕೆ ಧಾರಣೆ ಬಹಳ ಇದೆಯೆಂದು ಎಲ್ಲರೂ ಹೇಳುತ್ತಿದ್ದಾರೆ. ಕೃಷಿಯ, ಕೂಲಿಯ ಖರ್ಚನ್ನೂ ಯಾರೂ ಪ್ರಸ್ತಾಪ ಮಾಡುತ್ತಿಲ್ಲ.

ಇನ್ನು, ಈಗ ಏರಿದ ಕೆಂಪಡಿಕೆ ಧಾರಣೆ ಬೆಳೆಗಾರನ ನಾಲ್ಕನೇ ಒಂದು ಭಾಗದ ಬೆಳೆಗೆ ಮಾತ್ರ. ಅದೂ ಅವನ ಕೈಗೆ ಸಿಗಲಿಲ್ಲ. ಕಿವಿಯಲ್ಲಿ ಕೇಳಿದ್ದಷ್ಟೇ. ಅಡಿಕೆಯ ಬೆಲೆ ಗಗನದಲ್ಲಿ. ಬೆಳೆಗಾರನಿಗೆ ಅದು ಗಗನ ಕುಸುಮ. ಕಣ್ಣಿಗೆ ಕಾಣುತ್ತದೆ, ಕೈಗೆ ಸಿಕ್ಕಿಲ್ಲ. ಅವನ ಎಲ್ಲಾ ಬೆಳೆಯನ್ನು ಫೆಬ್ರುವರಿ ತಿಂಗಳಿನಲ್ಲಿ ಮಾರಾಟ ಮಾಡಿ ಸಾಲ ತೀರಿಸಿ ಹೊಸ ಸಾಲಕ್ಕೆ ಅರ್ಜಿ ಹಾಕಿ ಸಾಲದ ಹಣ ಬರುವುದಕ್ಕೆ ಈಗ ಹಲ್ಲುಗಿಂಜಿ ಕುಳಿತಿದ್ದಾನೆ.

ಒಟ್ಟಾರೆ ನಮ್ಮ ರೈತ " ಈಗ ಸ್ವಲ್ಪ ಕಷ್ಟದಲ್ಲಿದ್ದೇನೆ,ಇನ್ನು ನಾಲ್ಕು ವರ್ಷ ಹೋದರೆ ಸುಧಾರಿಸಿ ಕೊಳ್ಳುತ್ತೇವೆ " ಎಂದು ಹೇಳಿಕ್ಪ್ಳ್ಳುತ್ತಲೇ ಸಾಯುತ್ತಾನೆ. ಇದು ಅಜ್ಜರೈತನಿಂದ ಹಿಡಿದು ಮೊಮ್ಮಗ,ಮಿಮ್ಮಗರೈತನವರೆಗೂ ಇರುವ ಆದ್ಯಂತ ಕಥೆ.

ವೃಥಾ ಮಾಧ್ಯಮದವರು ಆಕಾಶದಲ್ಲಿ ಹಾರಾಡುವ ಪ್ಯಾರಾಚೂಟನ್ನೇ ವೈಭವೀಕರಿಸಿ ಬೇರೆಯವರಿಗೆ, ಸರ್ಕಾರಕ್ಕೆ ಅಡಿಕೆ ಬೆಳೆಗಾರನ ಮೇಲೆ ಕಣ್ಣು ದೃಷ್ಟಿ ತಾಗುವ ಹಾಗೆ ಮಾಡುತ್ತಿದ್ದಾರೆ. ಅಯ್ಯೋ ದೇವರೇ ನಾನೊಬ್ಬ ಅಡಿಕೆ ಬೆಳೆಗಾರ. "ಗಂಡ ಸತ್ತ ದುಃಖ ಬೇರೆ, ಬಡ್ಡುಗತ್ತಿಯ ಉರಿಬೇರೆ " ಎಂಬ ಗಾದೆ ಈಗ ಅಳಿಸಿಹೋದರೂ ಅದರ ವೇದನೆ ನನಗೆ ಪುನಃ ಪುನಃ ಬರುವಂತೆ ಮಾಡುತ್ತಿದ್ದಾರಲ್ಲಾ. ಈ ವರ್ಷ ಮಳೆಯೂ ಇಲ್ಲದೆ ಬರುವ ಬೆಳೆಯೂ ಆತಂಕದಲ್ಲಿದೆ. ನಮ್ಮನ್ನು ದೇವರೇ ಕಾಯಬೇಕು.

ಹುಟ್ಟಿದ ಮಗು ಗಂಡೋ ಅಥವಾ ಹೆಣ್ಣೋ ಎನ್ನುವುದಕ್ಕೆ ಶಂಖ ಮತ್ತು ಜಾಗಟೆಯ ಬಳಕೆ ..


ಗಂಡು ಹುಟ್ಟಿದರೆ ಶಂಖ. ಹೆಣ್ಣು ಹುಟ್ಟಿದರೆ ಜಾಘಂಟೆ :

ಸಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಆಗ ಹಳ್ಳಿಗಳಲ್ಲಿ ಮನೆಯಲ್ಲಿಯೇ ಗರ್ಭಿಣಿಯರು ಪ್ರಸವವಾಗುವ ಕಾಲ. ಊರಿನಲ್ಲಿರುವ ಅನುಭವಿ ಮಹಿಳೆಯರು ಹೆರಿಗೆಯನ್ನು ಮಾಡಿಸುವುದಕ್ಕೆ ಸಹಾಯವಾಗುತ್ತಿದ್ದರು.

ಗರ್ಭಿಣಿಗೆ ಪ್ರಸವ ವೇದನೆ ಪ್ರಾರಂಭವಾದ ಕೂಡಲೇ ಅದಕ್ಕೆ ಬೇಕಾದ ವ್ಯವಸ್ಥೆಗಳೊಂದಿಗೆ ಶಂಖ ಮತ್ತು ಜಾಘಂಟೆಯೂ ಮುಂಜಾಗರೂಕತೆಯಿನ್ದ ಅಲ್ಲಿ ತನ್ದಿಟ್ಟುಕೊಳ್ಳಲಾಗುತಿತ್ತು. 

ಹುಟ್ಟಿದ್ದು ಗಂಡುಮಗುವಾದರೆ ಯಾರಾದರೊಬ್ಬರು ಮನೆಯ ಹೊರಗೆ ಬಂದು ಎದುರು ಅಂಗಳದಲ್ಲಿ ನಿಂತು ಗಟ್ಟಿಯಾಗಿ ಸುತ್ತಮುತ್ತ ಊರಿಗೆಲ್ಲಾ ಕೇಳುವ ಹಾಗೆ ಶಂಖವನ್ನು ಊದುತ್ತಿದ್ದರು. ಹೆಣ್ಣುಮಗುವಾದರೆ ಹಾಗೆಯೇ ಜಾಘಂಟೆಯನ್ನು [ಜಾಗಟೆ, ಜಾವುಟೆ] ಗಟ್ಟಿಯಾಗಿ ಹೊಡೆಯುತ್ತಿದ್ದರು. ಇದು ಮಗು ಹುಟ್ಟಿದ ತಕ್ಷಣ ಮಾಡುತ್ತಿದ್ದ ಅಂದಿನ ಕ್ರಮ.

ಇಂದು, ಈಗ, ನಮ್ಮ ಮನೆಯಲ್ಲಿ ಗಂಡು ಅಥವಾ ಹೆಣ್ಣು ಮಗುವು ಜನ್ಮ ತಾಳಿತು ಎಂದು ನೆರೆಹೊರೆಗೆಲ್ಲಾ ಸಾರುವುದೇ ಈ ಪದ್ಧತಿ ಅನುಸರಣೆಯ ಉದ್ದೇಶವಾಗಿತ್ತು

ಸಾಗರ ತಾಲ್ಲೂಕಿನ ಕೆಲವು ಕಡೆ ಐವತ್ತು ವರ್ಷಗಳ ಹಿಂದೆಯೇ ಈ ಪದ್ಧತಿ ಬಿಟ್ಟು ಹೋಗಿದೆ. ಸಾಗರದ ಕೆಲವು ಕಡೆ, ಉತ್ತರಕನ್ನಡ ಮತ್ತು ದಕ್ಷಿಣಕನ್ನಡದ ಹವ್ಯಕರಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದಿನ ಆಸುಪಾಸು ಇದು ಚಾಲ್ತಿಯಲ್ಲಿ ಇತ್ತು.

Monday 28 July 2014

ಜರೆದ ಹಾಡು :


ಏನ್ ಮರುಳಾದೆ ದಗಡಿ ಪೀಪಿ ಊದ್ದವಂಗೆ |
ಒಣಗಿದ ಮರಕೆ ತಮಟೆ ಕಟ್ಕೊಂಡ್ ಡಾಮ್ ಡೂಮ್ ಎಂದವಂಗೆ || ಪ ||
ಸಾಲಿಸೀರೆ ಉಟ್ಟುಕೊಂಡು ಬಟ್ ಮುತ್ ಕೊರಳಿಗೆ ಕಟ್ಟಿಕೊಂಡು |
ಕೃಷ್ಣಭಟ್ಟನ ಕೂಡಿಕೊಂಡು ಅಗಳ ಬಿದ್ದು ಓಡ್ದಾಂಗಲ್ಲಾ |೧|
ಏನ್ ಮರುಳಾದೆ ............
ಇದು ಒಂದು ಜರೆದ ಹಾಡಿನ ಒಂದು ತುಣುಕು. ಹವ್ಯಕರಲ್ಲಿ ಸುಮಾರು 50 ವರ್ಷಗಳ ಹಿಂದೆ ಈ ತೆರನ ಜರೆದ ಹಾಡುಗಳು ಪ್ರಚಲಿತದಲ್ಲಿದ್ದುವು.ಈ ಮೇಲೆ ಬರೆದ ಹಾಡು ಮದುವೆ ಮನೆಯಲ್ಲಿ ಗಂಡಿನ ಕಡೆಯವರು ಮದುವಣಗಿತ್ತಿಯನ್ನು ಜರೆಯುವ ಹಾಡು. ಇದಕ್ಕೆ ಉತ್ತರವಾಗಿ ವಧುವಿನ ಕಡೆಯವರು ಮದುಮಗನನ್ನು ಜರೆದು ಒಂದು ಹಾಡನ್ನು ಹೇಳುತ್ತಿದ್ದರು. ಸಮಾಜ ಶಾಸ್ತ್ರಜ್ಞರು ಇದನ್ನು ' joking relationship ' ಎನ್ನುತ್ತಾರೆ. ಊಟಕ್ಕೆ ಕುಳಿತಾಗ ಒಂದು ಕಡೆಯವರು [ವಧುವಿನ ಮನೆಯಲ್ಲಾಗಲಿ ವರನ ಮನೆಯಲ್ಲಾಗಲಿ ಊಟಕ್ಕೆ ಕುಳಿತವರು] ಮೊದಲು ಹೀಗೆ ಒಂದು ಜರೆದ ಹಾಡನ್ನು ಪ್ರಾರಂಭಿಸುತ್ತಿದ್ದರು. " ಚೂರು ಹೋಳಿಗೆ ಬಡಿಸಿದಳೆ ಭೀಗಿತಿ ಸೂಜಿಲಿ ತುಪ್ಪವ ತೂರಾಡಿದಳೆ............... " ಎಂದು ಒಗ್ಗರಿಸುತ್ತಿದ್ದರು. ಇದನ್ನು ಸ್ವಲ್ಪ ಹೊತ್ತು ತನ್ನ ಜೊತೆಯವರೊಡನೆ ಆಲಿಸಿದ ಎದುರು ಕಡೆಯ ಭೀಗಿತಿ ತಕ್ಷಣ ಒಳಗಿನಿಂದ ಹರಿವಾಣ ಹೋಳಿಗೆಯನ್ನು ತಂದು ಹಾಡು ಹೇಳಿದವರಿಗೆ ತಲಾ ಎರಡೆರಡು ಹೋಳಿಗೆಯನ್ನು ಬಡಬಡನೆ ಬೇಡ ಬೇಡವೆಂದರೂ ಹಾಕುತ್ತಿದ್ದಳು. ಅದರ ಮೇಲೆ ಸೌಟಿನಲ್ಲಿ ತುಪ್ಪವನ್ನು ಸುರುವುತ್ತಿದ್ದಳು. ಆಗ ನಗೆಯ ಹೊಯಿಲು ಎರಡೂ ಕಡೆಯವರಿಂದ ತೇಲುತ್ತಿದ್ದವು. ಅಲ್ಲದೆ ಅದಕ್ಕೆ ಉತ್ತರವಾಗಿ [ಅದಕ್ಕಾಗಿಯೆ ಮೊದಲು ಜರೆದವರು ಕಾಯುತ್ತಿದ್ದವರು] ಎದುರು ಕಡೆಯವರು ಮತ್ತೊಂದು ಜರೆದ ಹಾಡನ್ನು ಝಡಾಯಿಸುತ್ತಿದ್ದರು. " ಹಡಗಿನ ಹೊಟ್ಟೆಗೆ ಹೆಡಿಗೆ ಹೋಳಿಗೆ ಹೊಳೆಗೆ ಉಪ್ಪ ಕರಡಿದ ಹಾಗೆ ಆಯ್ತಲ್ಲೇ ಭೀಗಿತಿ.......... " ಎಂದು ಕೊಟ್ಟ ಉತ್ತರಕ್ಕೆ ಮತ್ತೆ ಎರಡೂ ಕಡೆಯವರಿಂದ 'ಹೋ' ಎಂದು
ನಗೆಯ ಹೊಯಿಲು. ಅಂದಿನ ಮದುವೆ ಸಮಾರಂಭದಲ್ಲಿ ಹಾಡು ಹೇಳುವವರೆ ಒಂದು ತಂಡವಾಗಿ ಕುಳಿತುಕೊಳ್ಳುತ್ತಿದ್ದರು. ಅಂದು ಈಗಿನ ಹಾಗಲ್ಲ. ಪ್ರತಿಯೊಬ್ಬ ಹೆಣ್ಣುಮಗಳೂ ಹಾಡುಗಳನ್ನು ಕಲಿತುಕೊಳ್ಳಬೇಕೆಮ್ಬ ಸಾಮಾಜಿಕ ನಿಯಮ ಹವ್ಯಕರಲ್ಲಿ ಇತ್ತು. ಚೌಲ, ಉಪನಯನ, ಮದುವೆಗಳ ಹಾಡುಗಳು, ಇಂತಹ ಮದುವೆ ಮನೆಯ ಜರೆದ ಹಾಡುಗಳು, ದೇವರ ಮೇಲಿನ ಹಾಡುಗಳು, ಹಬ್ಬಹರಿದಿನಗಳ ಹಾಡುಗಳು, ಜೋಗುಳದ ಹಾಡುಗಳು, ಹೀಗೆ ಇನ್ನೂ ಅನೇಕ ನೂರಾರು ಹಾಡುಗಳು ಅಂದಿನ ಹೆಂಗಸರಿಗೆ ಕರಗತವಾಗಿದ್ದುವು. ಹಾಡನ್ನು ಕಲಿಯದ ಹೆಣ್ಣುಮಕ್ಕಳನ್ನು ಕುರಿತು ಅಂದಿನ ಅಜ್ಜಿಯರು " ಹಾಡು ಬರೋದಿಲ್ಲ,ಸೇಡಿ ಬರೋದಿಲ್ಲ ನಾವೈದೇವಕ್ಕ ದುರ್ದುಂಡೇರು " ಎಂದು ಮೂದಲಿಸುತ್ತಿದ್ದರು. ಅನಕ್ಷರತೆಯ ಅಂದಿನ ಕಾಲದಲ್ಲಿ ಕಿವಿಯಿಂದ ಕಿವಿಗೆ ಹಾಡುಗಳು transfer ಆಗುತ್ತಿದ್ದುವು. ತಾಯಿ ಮಗಳಿಗೆ ಚಿಕ್ಕಂದಿನಿಂದಲೇ ಅವುಗಳನ್ನು ಕಲಿಸುತ್ತಿದ್ದಳು. ಅಷ್ಟರ ಮಟ್ಟಿಗೆ ತಾಯಿಯೂ ಪರಿಣಿತರಿಳುತ್ತಿದ್ದಳು.
ಹೀಗೆ ವಧುವಿನ ಮನೆಯಲ್ಲಿ ಹೆಚ್ಹಾಗಿ ಗಂಡಿನ ಕಡೆಯವರು ಜರೆದ ಹಾಡನ್ನು ಪ್ರಾರಂಭಿಸುತ್ತಿದ್ದರು. ಅದಕ್ಕಾಗಿಯೆ ಪೂರ್ವ ತಯಾರಿಯೂ ನಡೆದಿರುತಿತ್ತು. ಇದಕ್ಕೆ ಸಾಕಷ್ಟು ಇಲ್ಲಿ ವಧುವಿನ ಕಡೆಯವರು ಉತ್ತರವನ್ನು ಕುಟ್ಟಿಯೂ ಆಗುತಿತ್ತು. ಇದಕ್ಕೆ ಸಾಲದೆಂಬಂತೆ ಮರುದಿನ ವರನ ಮನೆಯಲ್ಲಿ ವರನ ಕಡೆಯವರಿಗೆ ಇನ್ನಷ್ಟು ಕುಟ್ಟಿಗಾಣಿಸಬೇಕೆನ್ದು ವಧುವಿನ ಕಡೆಯವರು ಇನ್ನಷ್ಟು ತಯಾರಿ ನಡೆಸುತ್ತಿದ್ದರು. ಸೊಂಟ ಉಳಿಕಿದೆಯೆಂದು ಅಂದು ಊರಿನ ತಮ್ಮ ಮನೆ ಮದುವೆ ಬರದಿದ್ದ ಆ ಊರಿನ ಹಾಡಿನ expert ಮೇಲಿನಮನೆ ಗಂಗಕ್ಕನನ್ನೂ ಗಾಳಿ ಹೊಡೆದು ಮರುದಿನದ ತಮ್ಮ ಮನೆಯ ದಿಬ್ಬಣಕ್ಕೆ ready ಮಾಡುತ್ತಿದ್ದರು.
ಹೀಗೆ ಮರುದಿನ ವರನ ಮನೆಯ ವಧು ಗೃಹಪ್ರವೇಶದ ಸಮಾರಂಭದಲ್ಲಿ ವಧುವಿನ ಕಡೆಯವರಿಂದ ಮೊದಲು ಅನುಕ್ರಮವಾಗಿ ಮನೆದುಂಬಿಸಿದ ಹಾಡು, ಮಡಿಲಕ್ಕಿ ತೂರಿದ ಹಾಡು, ಚೆಟ್ಟು ಹೊಯ್ದ ಹಾಡು ಹೀಗೆ ಸರಣಿ ಹಾಡುಗಳು ಮೆರೆಯುತ್ತಿದ್ದವು. ನಂತರ ಜರೆದ ಹಾಡಿನ ಅಬ್ಬರ. ನಿನ್ನೆ ಮೊದಲು ಗಂಡಿನ ಕಡೆಯವರು ತಮ್ಮ ಮನೆಯಲ್ಲಿ ಜರಿಯಲು ಶುರುಮಾಡಿದ ಹಾಗೆ ಇಂದು ಗಂಡಿನ ಮನೆಯಲ್ಲಿ ಹೆಣ್ಣಿನ ಕಡೆಯವರದ್ದೇ ಮೊದಲ ಪಾಳಿ. ವರನನ್ನು ಜರೆಯುವುದು, ಭೀಗಿತಿ ಅಥವಾ ಭೀಗರು ,ಗಂಡಿನ ಕಡೆಯ ನೆಂಟರು ಹೀಗೆ ಎಲ್ಲರನ್ನು ಜರೆದು ಹಾಡನ್ನು ಹೇಳಿ ಮೋಜಿನ ವಾತಾವರಣವನ್ನು ನಿರ್ಮಾಣವನ್ನು ಮಾಡುವುದು. ಅದಕ್ಕೆ ಉತ್ತರವಾಗಿ ಗಂಡಿನ ಕಡೆಯವರು ಝಡಾಯಿಸುವುದು. ಯಾರು ಯಾರನ್ನು ಜರೆದರೂ ಅದೇ ಒಂದು ಮೋಜು ಆಗುತಿತ್ತು. ಎರಡೂ ಕಡೆಯವರು 'ಹುಯ್ಯೋ' ಎಂದು ಅತ್ಯಂತ ಖುಷಿಯಿಂದ ನಗೆಯಾಡುತ್ತಿದ್ದರು. ಅತಿ ಕೊನೆಗೆ ಇಲ್ಲಿಯವರೆಗೆ ಬೀಗರನ್ನು ಜರೆಯದೆ ಇದ್ದರೆ [ ಈ ಹೊಗಳುವ ಸಲುವಾಗಿಯೇ ಯಾರಾದರೊಬ್ಬ ಮುಖ್ಯಸ್ತರನ್ನು ಮೊದಲು ಜರೆಯುತ್ತಿರಲಿಲ್ಲ] ಈಗ ಭೀಗರನ್ನು ಹೊಗಳಿ ಹಾಡನ್ನು ಹೇಳಿ ಇಷ್ಟು ಹೊತ್ತಿನವರೆಗೆ ಯಾರಿಗಾದರೂ ಒಮ್ಮೆ ಬೇಸರವಾಗಿದ್ದರೆ ಅದನ್ನು compensete ಮಾಡುವುದು. ಇದು ಎರಡೂ ಕಡೆಯವರಿಂದ ನಡೆಯುವ ಓಲೈಕೆಯ ತಂತ್ರ. ಕೆಲವೊಮ್ಮೆ ಈ ರೀತಿಯ ಜರೆವ ಹಾಡಿನ ಪ್ರಕ್ರಿಯೆ ಜಡಕಿಗೆ ಸಿಕ್ಕು [ ಜರೆಯುವುದರಲ್ಲಿ ಒಂದು ಕಡೆಯವರು weak ಇದ್ದಾಗ ] ಎರಡು ಸಂಬಂಧಗಳ ನಡುವೆ ಜಗಳ ಆಗಿದ್ದು ಉಂಟು.
ಒಟ್ಟಾರೆ ಅಂದಿನ ಕಾಲದಲ್ಲಿ ಶುಭಾಸಮಾರಂಭದಲ್ಲಿ ಧಾರ್ಮಿಕವಿಧಿಗಳನ್ನು ಪ್ರಸ್ತುತಪಡಿಸುವ ಮಂತ್ರಗಳ ಜೊತೆಗೆ ಅದೇ ಧಾರ್ಮಿಕ ವಿಧಿಗಳ ಝಾಡನ್ನು ಬಿಂಬಿಸುವ ಹಾಡುಗಳೂ ಇರುತ್ತಿದ್ದುವು. ಜೊತೆಗೆ ಸಂಬಂಧಗಳನ್ನು ಬೆಸೆಯುವಂಥಹ ತಮಾಷೆಯ ಜರೆಯುವ ಹಾಡುಗಳೂ ಇರುತ್ತಿದ್ದುವು. ವಿಧ್ಯುಕ್ತವಾದ ಧಾರ್ಮಿಕ ವಿಧಿಗಳ ಮದುವೆ ಕಾರ್ಯಕ್ರಮದಲ್ಲಿ ಅಂದಿನ ಸಣ್ಣ ವಯಸ್ಸಿನ [ ಗಂಡು ಹದಿನಾರರಿಂದ ಇಪ್ಪತ್ತು ವರ್ಷಗಳು.ಹೆಣ್ಣು ಎಂಟರಿಂದ ಹದಿನೈದು ವರ್ಷಗಳು] ವಧು ಮತ್ತು ವರರ ನಡುವೆ ಸುಲಭ ಸಾಂಗತ್ಯವನ್ನು ಏರ್ಪಡಿಸುವುದಕ್ಕಾಗಿ ಓಕುಳಿಯಾಡುವುದು, ನೀರಿನಲ್ಲಿ ಹಾಕಿದ ಉಂಗುರವನ್ನು ಹುಡುಕಿ ತೆಗೆಯುವುದು [ಅದನ್ನು ಹುಡುಕಿ ತೆಗದವರಿಗೆ ಆ ಉಂಗುರ], ಅಲ್ಲೇ ಮದುವೆ ಮನೆಯಲ್ಲಿ ವಧು,ವರರು ಮೀನು ಹಿಡಿಯುವ ಆಟವನ್ನುಆಡುವುದು ಮುಂತಾದ ಪ್ರಕ್ರಿಯೆಗಳು ಜರೆದ ಹಾಡುಗಳನ್ತಾದ್ದೆ ಮತ್ತೊಂದು ರೂಪ.ಸ್ಸಕಸ್ಃಟು ಪುರುಸೊತ್ತು ಇದ್ದ ಅಂದಿನ ಜೀವನ ಕ್ರಮದಲ್ಲಿ ನವ ವಧು ಮತ್ತು ವರ ಹಾಗೂ ಹೊಸ ಎರಡು ಸಂಬಂಧಗಳನ್ನು ಚೆನ್ನಾಗಿ ಬೆಸೆಯುವಂತಹ ಹವ್ಯಕರ ಸಾಮಾಜಿಕ ಪ್ರಕ್ರಿಯೆ ಇವುಗಳಾಗಿದ್ದುವು.

Sunday 13 July 2014

===== ಹವ್ಯಕರ ಮದುವೆಯಲ್ಲಿ ಅಂದಿನ ಸಂಪ್ರದಾಯ. =====



ಹವ್ಯಕರ ಮದುವೆ ಮನೆಯಲ್ಲಿ ಗಂಡಿನ ಕಡೆಯ ನೆಂಟರನ್ನು ಊಟಕ್ಕೆ ಕರೆಯುವುದರಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಸಂಪ್ರದಾಯವಿತ್ತು. ನೆಂಟರಿಗೆನ್ದೇ ಒಂದು ಬಿಡಾರದ ಮನೆಯೆಂದು ಊರಿನಲ್ಲಿ ಒಂದು ಮನೆಯನ್ನು ಹೆಣ್ಣಿನಕಡೆಯವರು ವ್ಯವಸ್ಥೆ ಮಾಡುತ್ತಿದ್ದರು. ಅದು ಹೆಚ್ಚಾಗಿ ಮದುವೆ ಮನೆಯ ಮೊದಲೇ ಇರುತ್ತಿತ್ತು. ಏಕೆಂದರೆ ಗಂಡಿನಕಡೆಯವರು ಮದುವೆಗೆ ಮುಂಚೆ ಮದುವೆಮನೆಯನ್ನು ದಾಟಿ ಹೋಗುವ ಪದ್ಧತಿಯಿರಲಿಲ್ಲ. ಅಲ್ಲಿ ಅವರು ಕೈಕಾಲು,ಮುಖತೊಳೆದುಕೊಳ್ಳಲಿಕ್ಕೆ,ಬಟ್ಟೆ ಬದಲಾಯಿಸಿಕೊಳ್ಳುವುದಕ್ಕೆ, ತಾತ್ಕಾಲಿಕ ವಿಶ್ರಾಂತಿ ತೆಗೆದುಕೊಳ್ಳಲಿಕ್ಕೆ,ಲಘು ಪಾನೀಯಕ್ಕೆ ಅನುಕೂಲತೆ ಕಲ್ಪಿಸಲಾಗುತ್ತಿತ್ತು. ಅಂದು ಎಲ್ಲರಿಗೂ ಸಾಕೆನ್ನುವಷ್ಟು ಪುರುಸೊತ್ತು ಇದ್ದ ಕಾಲ.

ಮದುವೆ ಕಾರ್ಯಕ್ರಮ ಮುಗಿದಕೂಡಲೆ ನೆಂಟರು ಬಿಡಾರದ ಮನೆಗೆ ತಮ್ಮ ಅನುಕೂಲತೆಗಾಗಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಇಲ್ಲಿ ಹೆಣ್ಣಿನ ಮನೆಯಲ್ಲಿ ಊಟಕ್ಕೆ ತಯಾರಾದ ಕೂಡಲೆ ಮನೆಯ ಯಜಮಾನ ಪುರೋಹಿತರೊಡಗೂಡಿ ನೆಂಟರ ಬಿಡಾರದ ಮನೆಗೆ ಬರುತ್ತಿದ್ದ.ಹಾಗೆ ಬರುವಾಗ ಮಂಗಲಾಕ್ಷತೆ,ಒಂದು ಮಡಿ ಮತ್ತು ಒಂದು ಚೊಂಬು ನೀರು ಅವನ ಸಹಾಯಕರೊಂದಿಗೆ ತರುತ್ತಿದ್ದ. ಆ ನೀರಿನ ಚೊಂಬು ಮತ್ತು ಮಡಿಯನ್ನು ಮುಖ್ಯ ಬೀಗರೆದುರು ಇಡುತ್ತಿದ್ದ.ಕೈಕಾಲು,ಮುಖ ತೊಳೆದು ಮಡಿಯುಟ್ಟು ಊಟಕ್ಕೆ ಬರಬೇಕೆಂದು ಭಿನ್ನವಿಸಿಕೊಳ್ಳುತ್ತಿದ್ದ. ಅದಕ್ಕಾಗಿಯೆ ಆ ಮಡಿ ಮತ್ತು ನೀರು [ಸಾಂಕೇತಿಕವಾಗಿ]. ಪುರೋಹಿತರು ಅವರನ್ನು ಊಟಕ್ಕೆ ಆಹ್ವಾನಿಸುವ ಮಂತ್ರವೊಂದನ್ನು ಹೇಳುತ್ತಿದ್ದರು.ಅಷ್ಟಾದ ನಂತರ ಸರ್ವರೂ ಊಟಕ್ಕೆ ಆಗಮಿಸಬೇಕೆಂದು ಯಜಮಾನ ಬೀಗರು,ನೆಂಟರೆದುರಿಗೆ ಕೈ ಮುಗಿದು ಆಹ್ವಾನಿಸುತ್ತಿದ್ದ. ಅದಕ್ಕಾಗಿ ಬೀಗರು,ನೆಂಟರೆಲ್ಲರಿಗೆ ಅಕ್ಷತೆಯನ್ನು ಕೊಡುತ್ತಿದ್ದ. ಅಷ್ಟರಲ್ಲಿಯೇ ನೆಂಟರು ಆಗಿನ ಪದ್ಧತಿಯಂತೆ ಅಂಗಿ,ಬನಿಯನ್ ತೆಗೆದು ಶಲ್ಯ ಹೊದೆದುಕೊಂಡು ಊಟದ ಕರೆಗಾಗಿ ಅಣಿಯಾಗಿರುತ್ತಿದ್ದರು. ಆಗಿನ ಕಾಲದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಗಂಡಸರೆಲ್ಲರೂ ಪಂಚೆಯುಟ್ಟು ಬರುತ್ತಿದ್ದರು. ಈ ರೀತಿ ಆಹ್ವಾನ ಬಂದ ನಂತರ ಬೀಗರು,ಅವರ ಹಿಂದೆ ಆಯಾ ಮಟ್ಟದ ಜೇಷ್ಟತೆಯ ಮೇಲೆ ಮದುವೆ ಮನೆಗೆ ಔತಣಕ್ಕೆ ಎಲ್ಲರೂ ಹೊರಡುತ್ತಿದ್ದರು. ಇಲ್ಲಿ ಇನ್ನೊಂದು ವಿಶೇಷವೆಂದರೆ ನೆಂಟರನ್ನು ಊಟಕ್ಕೆ ಕರೆತರಲು ಓಲಗದವರು ಓಲಗ ವನ್ನು ನೆಂಟರ ಮುಂದೆ ಊದುತ್ತ ಬರುತ್ತಿದ್ದರು. ನೆಂಟರು ನಿಧಾನ ನಡಿಗೆಯಲ್ಲಿ ಓಲಗದವರು,ಮನೆಯ ಯಜಮಾನನನ್ನು ಹಿಂಬಾಲಿಸುತ್ತಿದ್ದರು. ಹೀಗೆ ಮದುವೆಮನೆಗೆ ಬಂದು ನೆಂಟರು ಔತಣವನ್ನು ಸ್ವೀಕರಿಸುವ ಸಂಪ್ರದಾಯವಿತ್ತು.
ನೆಂಟರಿಗೆ ಊಟವಾದ ಹೊರತು ಹೆಣ್ಣಿನ ಕಡೆಯವರು ಊಟ ಮಾಡುವ ಹಾಗಿರಲಿಲ್ಲ.ನೆಂಟರ ಪಂಕ್ತಿ ಎಂತಲೇ ಪ್ರತ್ಯೇಕ ವ್ಯವಸ್ತೆ ಮಾಡಲಾಗುತ್ತಿತ್ತು. ಇದು ಸುಮಾರು ನಲವತ್ತು ವರ್ಷದ ಹಿಂದಿನ ಮಾತು.

Monday 7 April 2014

ಹಬ್ಬದ ಹಾಡು -ದಿನದ ಮಾತು


ದಿನದ ಮಾತು :

ಒಂದನೆಯ ಕಂತು :
ಹಬ್ಬದ ಹಾಡು.ಇದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಸುವಂತಹ ಒಂದು ಸಾಂಪ್ರದಾಯಿಕ ಪದ್ಧತಿ.ಇದಕ್ಕೆ ಬಿಂಗಿಪದ್ಯ, ಅಂಟಿಕೆಪಂಟಿಕೆ ಎಂತಲೂ ಕರೆಯುತ್ತಾರೆ.ಹಳ್ಳಿಗಳಲ್ಲಿ, ಹೆಚ್ಚಾಗಿ ಮಲೆನಾಡಿನಲ್ಲಿ ಮಾತ್ರ ಇದರ ಆಚರಣೆಯನ್ನು ಕಾಣುತ್ತೇವೆ. ಇದರ ಆಚರಣೆಯ ಕ್ರಮ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಈ ರೀತಿ ದೀಪ ಹಚ್ಚುವ ಸಮುದಾಯಗಳಲ್ಲೂ ಅದರ ಆಚರಣೆಯ ಆಸಕ್ತಿ ಕಡಿಮೆಯಾಗಿದೆ.

ಈ ಪದ್ಧತಿಯು ಧಾರ್ಮಿಕ ಮತ್ತು ಸಾಂಸ್ಕ್ರತಿಕ ನೆಲೆಯನ್ನು ಹೊಂದಿದೆ. ಗ್ರಾಮಾಧಿದೇವತೆಯ ದೀಪವನ್ನು ಊರಿನ ಮತ್ತು ನೆರೆ ಊರಿನ ಮನೆಗಳಿಗೆ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಕೊಡುವುದು ಈ ಸಂಪ್ರದಾಯದ ಮುಖ್ಯ ಉದ್ದೇಶ. ಒಂದು ಊರಿನ ಜನ ಕನಿಷ್ಠ 8 - 10 ಮಂದಿಯ ಒಂದು ತಂಡವಾಗಿ ಮನೆ ಮನೆಗೆ ಹೋಗುತ್ತಾರೆ.ಪುರಾಣದ ಕತೆಗಳನ್ನೊಳಗೊಂಡ ಹಾಡುಗಳನ್ನು ಜನಪದ ಶೈಲಿಯಲ್ಲಿ ಹಾಡುತ್ತ ಹೋಗುತ್ತಾರೆ. ಹಸಲರು,ಮಡಿವಾಳರು, ಒಕ್ಕಲಿಗರು,ದೀವರು [ನಾಯ್ಕರು].... ಹೀಗೆ ಜನಪದರು ಈ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದಾರೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಊರಿಗೆ ಒಂದೇ ತಂಡ ದೇವರ ದೀಪವನ್ನುಹಚ್ಚಬೇಕು ಎನ್ನುವ ರಿವಾಜು ಇದೆ. ಆ ದೀಪವನ್ನು ಎಲ್ಲರೂ ಹಿಡಿಯುವಂತಿಲ್ಲ. ಅದಕೆಂದೇ ಊರಿನಲ್ಲಿ ಲಾಗಾಯ್ತಿನಿಂದ ಒಂದು ಕುಟುಂಬವನ್ನು ಗ್ರಾಮದ ನಿಯಮದಂತೆ ಹೆಸರಿಸಲಾಗಿರುತ್ತದೆ.ಆ ಕುಟುಂಬದ ಯಜಮಾನನೆ ದೀಪವನ್ನು ಹಿಡಿಯಬೇಕಾದದ್ದು ಸಂಪ್ರದಾಯ. ಒಮ್ಮೆ ಆ ಯಜಮಾನನಿಗೆ ಅಶೌಚ [ಸತ್ತ ಸೂತಿಕ ಅಥವಾ ಹುಟ್ಟಿದ ಅಮೆ] ಬಂದರೆ ಆ ವರ್ಷವೊಂದೆ ಅಲ್ಲ . ಆ ವರ್ಷವೂ ಸೇರಿ ಒಟ್ಟು ಮುಂದಿನ ಮೂರು ವರ್ಷಗಳು ದೀಪ ಹಚ್ಚುವ ಹಾಗಿಲ್ಲ.

-------- ಇದು ಬಹಳ ದೀರ್ಘವಾದ ಮತ್ತು ಆಸಕ್ತಿಯುತ ವಿಚಾರ. ಮುಂದಿನ ಮಾಹಿತಿ ಎರಡನೆಯ ಕಂತಿನಲ್ಲಿ ನೋಡಿ.


ದಿನದ ಮಾತು :

ಹಬ್ಬದ ಹಾಡು : ಎರಡನೆಯ ಕಂತು .

ದೇವರ ದೀಪ ಹಚ್ಚಲಿಕ್ಕೆಂದೇ ಒಂದು ವ್ಯವಸ್ತೆ ಇರುತ್ತದೆ.ದೀಪ ಹಚ್ಚುವ ಪಾತ್ರೆ ಸುಮಾರು ೩೦ ಸೆಂಟಿಮೀಟರು ಅಗಲಕ್ಕಿದ್ದು ಅಂದಾಜು ೩ ಲೀಟರು ದೀಪದ ಎಣ್ಣೆ ಹಿಡಿಯುವಷ್ಟು ದೊಡ್ಡದಿರುತ್ತದೆ. ಇದು ಮಣ್ಣಿನ ಗಡಿಗೆಯದು.ಇದಕ್ಕೆ ಹಬ್ಬದ ದೀಪದ ಹಣತೆ ಎನ್ನುತ್ತಾರೆ.ದೀಪ ಹಿಡಿಯುವ ಯಜಮಾನನ ಅಜ್ಜ,ಮುತ್ತಜ್ಜನ ಕಾಲದಿಂದ ಬಾಳಿಸಿ ಕಾಯ್ದು ಇಟ್ಟುಕೊಂಡು ಬಂದಿದ್ದು ಇದು.ನೂರಾರು ವರುಷಗಳಷ್ಟು ಹಿಂದಿನದು.ಇದನ್ನು ಆ ಯಜಮಾನನ ಮನೆಯಲ್ಲಿಯೇ ಜಾಗರೂಕತೆಯಿನ್ದ ಕಾಯ್ದಿಡಲಾಗುತ್ತದೆ.ದೀಪ ಹಚ್ಚುವ ಹಬ್ಬದ ಸಂದರ್ಭದಲ್ಲಿ ಮಾತ್ರ ಅದನ್ನು ಹೊರತೆಗೆಯಲಾಗುತ್ತದೆ. ಆ ದೀಪ ಉರಿಯಲಿಕ್ಕೆ ಬೇಕಾಗುವಂತಹ ಹತ್ತಿಯ ಉದ್ದನೆಯ ಮತ್ತು ದೀಪ ಸುಲಭದಲ್ಲಿ ಆರಿಹೋಗದ ಹಾಗೆ ದಪ್ಪನೆಯ ಬತ್ತಿ [ಓರತಿ] ಹಾಗೂ ಇದಕ್ಕೆ ಪೂರಕವಾದ ಇನ್ನಿತರೆ ಸರಂಜಾಮುಗಳಿರುತ್ತವೆ.ಈ ವಸ್ತುಗಳೆಲ್ಲ ದೀಪ ಹಿಡಿಯುವ ಯಜಮಾನನ ಮನೆಯಲ್ಲಿಯೇ ಕಾಯಿದಿಡಲಾಗುತ್ತದೆ.

ದೀಪಾವಳಿಯ ದಿನ ಸಂಜೆ .ಹಾಡು ಹೇಳುವ ತಂಡದವರು ಸೇರಿ ಆ ಊರಿನ ಗ್ರಾಮಾಧಿದೇವತೆಯ ದೇವಸ್ಥಾನದಲ್ಲಿ ದೇವರಿಗೆ ಪೂಜೆ, ಮಂಗಳಾರತಿ ಮಾಡಿಸಿ ತಮ್ಮ ದೀಪದ ಪಾತ್ರೆಗೆ ಆ ದೇವರ ದೀಪವನ್ನು ಹೊತ್ತಿಸಿಕೊಳ್ಳುತ್ತಾರೆ. ನಂತರ ಆ ದೇವ ಎದುರಿಗೆ ಹಬ್ಬದ ಹಾಡುಗಳನ್ನು ಹಾಡುತ್ತಾರೆ. ಅದು ಒಂದು ಪವಿತ್ರವಾದ ಜ್ಯೋತಿಯೆಂದು ಪರಿಗಣಿಸಲಾಗುತ್ತದೆ. ದೀಪಾವಳಿ ಹಬ್ಬದ ದಿನದಿಂದ ಸತತ ಮೂರು ರಾತ್ರಿಯವರೆಗೆ ದೀಪ ಒಯ್ಯಲಾಗುತ್ತದೆ.ಮೂರು ರಾತ್ರಿ ಕಳೆದು ನಾಲ್ಕನೆಯ ದಿನದ ಬೆಳಿಗ್ಯೆ ಮುಂಜಾನೆ ಯಾವ ದೇವಸ್ಥಾನದ ದೇವರಿಂದ ದೀಪ ತೆಗೆದುಕೊಂಡು ಹಚ್ಚಿಕೊಳ್ಳಲಾಗಿತ್ತೊ ಅದೇ ದೇವರ ದೀಪಕ್ಕೆ ಮರಳಿ ಆ ದೀಪವನ್ನು ಸೇರಿಸಬೇಕಾದದ್ದು ಗ್ರಾಮದ ಕಟ್ಟಳೆ. ದೀಪವನ್ನು ಸೇರಿಸುವ ಮೊದಲು ದೇವರ ಎದುರಿಗೆ ಹಾಡಲಾಗುತ್ತದೆ. ದೀಪ ಕೊಡುವ ಸಂದರ್ಭದಲ್ಲಿ ಒಟ್ಟಾದ ಹಣ,ಎಣ್ಣೆ, ಇತರೆ ವಸ್ತುಗಳನ್ನು ಆ ದೇವರಿಗೆ ವಿನಿಯೋಗಿಸಲಾಗುತ್ತದೆ..ಅದೇ ಸಮ್ಪನ್ಮೂಲವನ್ನು ಬಳಸಿ ಆ ದೇವರಿಗೆ ಅದೇ ಕಾರ್ತಿಕ ಮಾಸದಲ್ಲಿ ಒಂದು ದಿನ ಕಾರ್ತಿಕೋತ್ಸವವನ್ನು ಮಾಡಲಾಗುತ್ತದೆ ಆ ಮೂರು ದಿನದ ಅವಧಿಯಲ್ಲಿ ದೀಪ ಹಗಲು - ರಾತ್ರಿ ಆರುವ ಹಾಗಿಲ್ಲ. ಹಾಗೆ ಆರಿದರೆ ದೀಪ ಹಚ್ಚಿದ ಇಡೀ ಊರಿಗೆ ಕೇಡು ಬರುತ್ತದೆಯೆಂದು ನಂಬಲಾಗಿದೆ.ಹೀಗೆ ಹಬ್ಬದ ದಿನ ಸಂಜೆ ದೇವರ ದೀಪ ದೇವಸ್ಥಾನದಿಂದ ಹೊರಗೆ ಹೊರಡುತ್ತದೆ.ಅಲ್ಲಿಂದ ಹೊರಟಿದ್ದು ಮೊದಲು ತಮ್ಮ ಊರಿನ ಎಲ್ಲ ಮನೆಗಳಿಗೆ ಹೋಗುತ್ತದೆ.ಪ್ರತಿ ಮನೆಯನ್ನು ಬಾಗಿಲು ತೆಗಸಿ ಆ ಮನೆಯವರಿಗೆ ದೇವರ ದೀಪವನ್ನು ಕೊಡಲಾಗುತ್ತದೆ.ಬಹಳ ಮನೆಗಳಿದ್ದರೆ ಒಂದು ಊರಿಗೆ ಒಂದು ರಾತ್ರಿ ಕಳೆಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾತ್ರಿ ಮಾತ್ರ ದೀಪವನ್ನು ಒಯ್ಯಲಾಗುತ್ತದೆ. ಬೆಳಗಾದ ಕೂಡಲೆ ದೀಪ ಕೊಡುವುದನ್ನು ನಿಲ್ಲಿಸುತ್ತಾರೆ.ನಂತರ ಅಂದು ದೀಪ ಪುನಃ ದೀಪ ಹಿಡಿದ ಯಜಮಾನನ ಮನೆಗೆ ಬರಬೇಕು.ಮತ್ತೆ ಸಂಜೆಯಾಗುವವರೆಗೂ ಅದು ಆರದ ಹಾಗೆ ಯಜಮಾನನ ಮನೆಯವರು ಆಗಾಗ್ಯೆ ಓರತಿಯನ್ನು ಮುಂದೆ ಹಾಕುತ್ತ ,ಪಾತ್ರೆಗೆ ಎಣ್ಣೆ ಹಾಕುತ್ತಾ ಜಾಗರೂಕತೆ ವಹಿಸುತ್ತಾರೆ.ಗಾಳಿಯಿಂದ ಆರದ ಹಾಗೆ ಮರೆ ಮಾಡಿರುತ್ತಾರೆ. ಇದು ಹಿಂದಿನ ಪದ್ಧತಿ.ಆದರೆ ಆ ಸಮುದಾಯದ ಇಂದಿನ ಯುವಕರು ಅಂತಹ ತೊಂದರೆಯನ್ನು ತೆಗೆದುಕೊಳ್ಳಲಿಕ್ಕೆ ಇಷ್ಟಪಡುವುದಿಲ್ಲ.ಆದ್ದರಿಂದ ಬೆಳಿಗ್ಯೆ ಯಜಮಾನನ ಮನೆಗೆ ದೀಪ ಮರಳಿ ಬಂದಕೂಡಲೆ ಮನೆಯೊಳಗೆ ಒಂದು ಕಡೆ ದಪ್ಪ ಕಟ್ಟಿಗೆಗಳನ್ನಿಟ್ಟು ಅದಕ್ಕೆ ಆ ದೀಪವನ್ನು ಹೊತ್ತಿಸುತ್ತಾರೆ.ಹೀಗೆ ಹಗಲು ಸಮಯದಲ್ಲಿ ಮೂರುದಿನ ದೀಪವನ್ನು ಬೆಂಕಿಯಾಗಿ ಪರಿವರ್ತಿಸುತ್ತಾರೆ.ಆದರೆ ಆ ಬೆಂಕಿ ಎಷ್ಟೊತ್ತಿಗೂ ಆರದ ಹಾಗೆ ನಿಗಾ ವಹಿಸುತ್ತಾರೆ.ಇಲ್ಲಿ ಅವರು ಅನುಸರಿಸುವ ಸಂಪ್ರದಾಯವೆಂದರೆ ಆ ಬೆಂಕಿಯನ್ನು ಬಾಯಿಯ ಉಸುರಿನಿಂದ ಊದಿ ಉರಿಯುವ ಹಾಗೆ ಮಾಡುವ ಹಾಗಿಲ್ಲ.ಅದಕ್ಕೆ ಅಡಿಕೆ ಹಾಳೆಯ ಅಥವಾ ರೊಟ್ಟಿನ ಬೀಸಣಿಗೆಯನ್ನು ಬೀಸಿ ಉರಿಯನ್ನು ಆರದ ಹಾಗೆ ಬೆಳಿಗ್ಯೆಯಿಂದ ಸಂಜೆಯವರೆಗೂ ಒಬ್ಬೊಬ್ಬರು ಪಾಳಿಯಂತೆ ಗಮನ ಹರಿಸುತ್ತಿರುತ್ತಾರೆ.

-------- ಮುಂದಿನ ವಿಷಯ ಮೂರನೆಯ ಕಂತಿನಲ್ಲಿ.-------

ದಿನದ ಮಾತು :

ಹಬ್ಬದ ಹಾಡು : ಮೂರನೆಯ ಕಂತು.:

ದೀಪಾವಳಿ ಹಬ್ಬದ ದಿನದಿಂದ ಮುಂದಿನ ಮೂರು ದಿನಗಳಲ್ಲಿ ಪ್ರತಿದಿನ ಸಂಜೆ ಕಪ್ಪಾದ ನಂತರ ಹಬ್ಬ ಹಾಡುವವರ ದೀಪದ ತಂಡ ಹೊರಡುತ್ತದೆ.ಮೊದಲು ತಮ್ಮ ಊರಿಗೆ ದೀಪ ಕೊಟ್ಟು ನಂತರ ಆ ಮೂರು ದಿನಗಳ ಅವಧಿಯಲ್ಲಿ ಎಷ್ಟು ಆಗುತ್ತದೆಯೋ ಅಷ್ಟು ಪಕ್ಕದ ಊರುಗಳಿಗೆ ದೀಪ ಕೊಡಲು ಹೋಗುತ್ತಾರೆ.ಹೀಗೆ ಸಾಗುವಾಗ ಕೆಲವು ನಿರ್ಬಂಧಗಳಿವೆ. ಈ ಮೊದಲೇ ತಿಳಿಸಿದಂತೆ ದೀಪ ಹಿಡಿಯುವ ಯಜಮಾನನಿಗೆ ಅಶೌಚ ಬಂದರೆ ಅದನ್ನು ಹಚ್ಚುವ ಪ್ರಸಂಗವೇ ಇಲ್ಲ. ಆದರೆ ತಂಡದಲ್ಲಿ ಪಾಲ್ಗೊಳ್ಳುವ ಯಾವುದೇ ವ್ಯಕ್ತಿಗೆ ಅಶೌಚ ಬಂದಿರಬಾರದು. ಹಾಗೆ ಬಂದಿದ್ದರೆ ಅಂಥವನು ತಂಡಕ್ಕೆ ಸೇರಿಕೊಳ್ಳುವ ಹಾಗಿಲ್ಲ.ಇದನ್ನುಳಿದು ಊರಿನ ಆ ಸಮುದಾಯದ ಪ್ರತಿ ಕುಟುಂಬದ ಸದಸ್ಯನೂ ತಂಡದಲ್ಲಿ ಭಾಗವಹಿಸಬೇಕೆಂಬ ನಿಯಮವಿದೆ.ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಕೆಲವರಿಗೆ ವಿನಾಯಿತಿ ಇರುತ್ತದೆ.ಎರಡನೆಯ ನಿರ್ಬಂಧವೆಂದರೆ ಎದುರು ದೀಪ ಬರುವ ಹಾಗಿಲ್ಲ. ಅಂದರೆ ಇವರಂತೆಯೇ ಇವರ ಪಕ್ಕದ ಊರಿನವರು ಅಥವಾ ದೂರದ ಬೇರೆ ಊರಿನವರು ಇದೇರೀತಿ ದೀಪ ಹಚ್ಚಿ ಬರುವ ಸಂಪ್ರದಾಯವನ್ನು ಇಟ್ಟುಕೊಂಡಿರುತ್ತಾರೆ. ಇವರು ತಮ್ಮ ಗ್ರಾಮದ ದೇವರ ದೀಪವನ್ನು ಒಯ್ಯುತ್ತಿರುವಾಗ ದಾರಿಯ ಮಧ್ಯದಲ್ಲಿ ಮತ್ತೊಂದು ತಂಡದವರ ದೇವರ ದೀಪ ಎದುರಾಗಿ ಬರಬಾರದು. ಇಲ್ಲವೇ ಇವರ ದೀಪ ಅವರ ದೀಪಕ್ಕೆ ಎದುರಾಗಬಾರದು.ಇದು ವಿರೋದಾಭಾಸದ ಲಕ್ಷಣ ಎಂದು ಭಾವಿಸಲಾಗುತ್ತದೆ.ಹೀಗೆ ಎದುರು ದೀಪವಾದರೆ ಎರಡೂ ತಂಡದ ಇಡಿಯ ಊರಿಗೆ ಕೇಡು ಬರುತ್ತದೆಯೆಂದು ನಂಬಲಾಗಿದೆ. ಅದಕ್ಕಾಗಿಯೇ ದಾರಿಯಲ್ಲಿ ಸಾಗುವಾಗ ದಾರಿಯುದ್ದಕ್ಕೂ ಯಾವುದೇ ತಂಡದವರು ಒಂದು ಕ್ರಮದಲ್ಲಿ ಕೂಗು ಹಾಕುತ್ತಾ ಹೋಗುತ್ತಾರೆ.ತಂಡದ ಮುಖ್ಯ ಹಾಡುಗಾರನು "ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೋ " ಅಥವಾ ಕೆಲವು ಕಡೆ " ಡ್ವಮ್ಸಾಲ್ ಹೊಡಿರಣ್ಣ ಡಮ್ಸಾಲ್ ಹೊಡಿರೊ " ಎಂದು ದೊಡ್ಡದಾಗಿ ರಾಗವಾಗಿ ಹೇಳುತ್ತಾನೆ . ತಂಡದ ಇತರರು ಬಹಳ ದೊಡ್ಡದಾಗಿ ಬಲು ದೂರ ಕೇಳುವ ಹಾಗೆ "ಹುಯ್ಯೋ " ಎನ್ನುತ್ತಾರೆ.ಇದರಿಂದಾಗಿ ಸನಿಹದಲ್ಲೇ ದೀಪದ ತಂಡವೊಂದು ತಮ್ಮ ದಾರಿಯೆದುರಿನಿಂದ ಬರುತ್ತಿದೆಯೆಂದು ಮತ್ತೊಂದು ತಂಡಕ್ಕೆ ದೂರದಲ್ಲಿಯೆ ಅರಿವಾಗುತ್ತದೆ. ಆಗ ಯಾವುದಾದರೊಂದು ತಂಡ ಮತ್ತೊಂದು ದಾರಿಯತ್ತ ಹೀಗೆಯೆ ಕೂಗುತ್ತ ಮುಂದೆ ಸಾಗುತ್ತದೆ.ಮತ್ತೊಂದು ತಂಡ ಬೇರೆ ದಾರಿಯಲ್ಲಿ ಹೋಗಿದ್ದನ್ನು ಗಮನಿಸಿ ಈ ತಂಡ ತನ್ನ ದಾರಿಯಲ್ಲಿ ಮುಂದೆ ಸಾಗುತ್ತದೆ .ಇದರಿಂದಾಗಿ ಎದುರು ದೀಪವಾಗುವುದನ್ನು ಎರಡೂ ತಂಡದವರು ಪರಸ್ಪರ ತಪ್ಪಿಸಿಕೊಳ್ಳುತ್ತಾರೆ.

      ಒಂದು ಊರು ಉದ್ದನೆಯ ಸಾಲುಗೇರಿಯಾಗಿರುತ್ತದೆ.ಆ ಊರಿಗೆ ಒಂದು ತಂಡ ಊರಿನ ಒಂದು ತುದಿಯಿಂದ ಪ್ರವೇಶ ಮಾಡಿರುತ್ತದೆ. ಮತ್ತೊಂದು ತಂಡ ಮತ್ತೊಂದು ತುದಿಯಿಂದ ಅದೇ ಊರಿಗೆ ಪ್ರವೇಶ ಮಾಡುತ್ತದೆ. ಒಂದು ತಂಡ ಆ ಊರಿಗೆ ಪ್ರವೇಶ ಮಾಡಿದ್ದು ಮತ್ತೊಂದು ತಂಡಕ್ಕೆ ಗೊತ್ತಿರುವುದಿಲ್ಲ. ಆದರೆ ಎರಡೂ ತಂಡದವರು ಸನಿಹ,ಸನಿಹ ಬಂದ ಕೂಡಲೆ ಮತ್ತೊಂದು ತಂಡ ಹಾಡು ಹಾಡುತ್ತಿರುವುದು ಇನ್ನೊಂದು ತಂಡಕ್ಕೆ ಕೇಳುತ್ತದೆ.ಹೀಗೆಯೆ ಮುಂದುವರೆದರೆ ಎದುರುದೀಪವಾಗುತ್ತದೆ. ಆದ್ದರಿಂದ ಅದರಲ್ಲಿ ಯಾವುದಾದರೊಂದು ತಂಡದವರು ಆ ಊರಿನ ಒಂದು ಮನೆಯೊಳಗೆ ಕುಳಿತುಕೊಂಡು ಆ ಮನೆಯ ಬಾಗಿಲು ಮುಚ್ಚಿಸಿಕೊಳ್ಳುತ್ತಾರೆ. ಆ ಮನೆಯೊಂದನ್ನು ಬಿಟ್ಟು ಮುಂದೆ ದಾಟಿ ಹೋಗುವಂತೆ ಮತ್ತೊಂದು ತಂಡಕ್ಕೆ ಸೂಚನೆಯನ್ನು ಕಳಿಸುತ್ತಾರೆ. ಆ ತಂಡದವರು ಹಾಗೆಯೇ ಮಾಡುತ್ತಾರೆ.ಆ ನಂತರದಲ್ಲಿ ಈ ತಂಡದವರು ತಮ್ಮ ಮುಂದಿನ ಮನೆಗೆ ದಾಟುತ್ತಾರೆ.ಅಂತೆಯೇ ಮುಂದೆ ಸಾಗುತ್ತಾರೆ.ನಂತರ ಮನೆಯೊಂದನ್ನು ಬಿಟ್ಟು ದಾಟಿ ಈಚೆ ಮುಂದೆ ಸಾಗಿದ ತಂಡ ಮರಳಿ ಬಂದು ಬಿಟ್ಟ ಮನೆಯನ್ನು ಪ್ರವೇಶಿಸಿ ದೇವರ ದೀಪವನ್ನು ಕ್ರಮದಂತೆ ಅವರಿಗೆ ಕೊಟ್ಟು ತನ್ನ ದಾರಿಯಲ್ಲಿ ಪುನಃ ಸಾಗುತ್ತದೆ.ಈ ಕ್ರಮದಲ್ಲಿ ಎದುರುದೀಪವಾಗುವುದನ್ನು ಇಲ್ಲಿ ತಪ್ಪಿಸಲಾಗುತ್ತದೆ.

======ಮುಂದಿನ ವಿಷಯ ನಾಲ್ಕನೆಯ ಕಂತಿನಲ್ಲಿ.======

ದಿನದ ಮಾತು :

ಹಬ್ಬದ ಹಾಡು :ನಾಲ್ಕನೆಯ ಕಂತು :

ದೀಪಾವಳಿಯ ದೀಪವನ್ನು ಮನೆಮನೆಗೆ ಕೊಡುವಾಗ ಕೆಲವು ರಿವಾಜುಗಳಿವೆ.ಅಶೌಚ [ ಜನ್ಮಾಶೌಚ ಮತ್ತು ಮರಣಾಶೌಚಗಳೆರಡು ] ಇರುವ ಮನೆಗಳಿಗೆ ದೀಪ ಕೊಡುವ ಹಾಗಿಲ್ಲ.ತಂಡದವರ ಸ್ವಂತ ಊರಿನಲ್ಲಿಯಾದರೆ ಯಾರಯಾರ ಮನೆಗೆ ಅಶೌಚ ಬಂದಿದೆಯೆಂದು ಮೊದಲೇ ಗೊತ್ತಿರುತ್ತದೆ. ಅಂಥವರ ಮನೆ ಮಧ್ಯೆ ಸಿಕ್ಕಿದರೂ ಆ ಮನೆಯನ್ನು ಬಿಟ್ಟು ಮುಂದಿನ ಮನೆಗೆ ಅವರು ಸಾಗುತ್ತಾರೆ. ಯಾರದ್ದೇ ಮನೆಯನ್ನು ಪ್ರವೇಶಿಸುವ ಮೊದಲು ಆ ಮನೆಗೆ ಮಾವಿನ ಎಲೆಯ ತೋರಣ ಕಟ್ಟಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸುತ್ತಾರೆ. ಹಬ್ಬದ ದಿನ ಹಿನ್ದೂಗಳ ಮನೆಗಳಲ್ಲಿ ಈ ರೀತಿಯ ತೋರಣಗಳನ್ನು ಕಟ್ಟುವುದು ಸಂಪ್ರದಾಯ ತಾನೆ.ಕಟ್ಟಲಿಲ್ಲವೆನ್ದಾದರೆ ಮನೆಗೆ ಬೀಗ ಹಾಕಲಾಗಿದೆಯೋ ಎಂಬುದನ್ನು ಗಮನಿಸುತ್ತಾರೆ.ಬೀಗವನ್ನು ಹಾಕಲಿಲ್ಲ, ತೋರಣವನ್ನು ಕಟ್ಟಲಿಲ್ಲವೆಂದಾದರೆ ಆ ಮನೆಗೆ ಅಶೌಚ ಬಂದಿದೆ ಎಂತಲೇ ಅರ್ಥ. ತೋರಣ ಕಟ್ಟದೆ ಬೀಗ ಹಾಕಿದ್ದರೆ ಆ ಮನೆಯವರು ಊರಲ್ಲಿಲ್ಲವೆನ್ದು ಭಾವಿಸಿ ಅವರ ಮನೆ ಬಾಗಿಲಮೇಲೆ ಹತ್ತಿಯ ಓರತಿಯಿಂದ ಹಚ್ಚಿದ ದೀಪವನ್ನು ಇಟ್ಟು ಮುಂದೆ ಸಾಗುತ್ತಾರೆ.ಅಶೌಚ ಬಂದು ಒಮ್ಮೆ ಅವರು ದೂರ ಹೋಗಿದ್ದರೆ ದೋಷ ತಮಗೆ ತಟ್ಟುವುದಿಲ್ಲವೆಂಬುದು ತಂಡದವರ ಭಾವನೆ. ಏಕೆಂದರೆ ಅಶೌಚವಿಲ್ಲದ ಮನೆಗೆ ದೀಪ ಕೊಡದೆ ಮುಂದೆ ಹೋಗುವುದು ಅಪರಾಧವಾಗುತ್ತದೆ. ದಾರಿಯ ಮಧ್ಯದಲ್ಲಿ ಯಾವುದಾದರು ಅಹಿಂದುವಿನ ಮನೆ ಸಿಕ್ಕರೆ ಆ ಮನೆಯವರು ದೀಪವನ್ನು ಬಯಸಿದರೆ,ಅಂಥವರು ತಮ್ಮ ರಿವಾಜಿನೊಳಗೆ ಇದ್ದರೆ ಅವರಿಗೂ ತಮ್ಮ ಕ್ರಮದಂತೆ ದೀಪವನ್ನು ಕೊಡುತ್ತಾರೆ.ಹಳ್ಳಿಯ ಸಾಮುದಾಯಿಕ ಜೀವನದಲ್ಲಿ ಅನೇಕ ಹಿಂದೂ ಮನೆಗಳ ಮಧ್ಯದಲ್ಲಿ ಒಂದೆರಡು ಅಹಿಂದು ಮನೆಗಳಿದ್ದರೆ ಅವರೂ ತಮ್ಮ ಬಾಹ್ಯ ಜೀವನದಲ್ಲಿ ಹಿಂದೂಗಳಿಗೆ ಹೊಂದಿಕೊಂಡೇ ಇರಬೇಕಾಗುತ್ತದೆ.ಈ ಮಾತು ಎಲ್ಲಾ ಜನಾಂಗಕ್ಕೂ ಅನ್ವಯಿಸುತ್ತದೆ. ಹೀಗೆ ಪಕ್ಕದ ಊರಿನ ಮೊದಲ ಮನೆಯಾಗಿ ಒಮ್ಮೆ ತೋರಣ ಕಟ್ಟದಿರುವುದನ್ನು ಗಮನಿಸದೆ ತಂಡದವರು ಒಳಪ್ರವೇಶಿಸುದನ್ನು ಕಂಡಕೂಡಲೆ ತಮಗೆ ಅಶೌಚವಿದೆ ಮುಂದೆ ಸಾಗಿ ಎಂದು ಆ ಮನೆಯವರು ಹೇಳಬೇಕು. ಆ ಊರಿನಲ್ಲಿ ಮುಂದೆ ಯಾರಯಾರ ಮನೆಗಳಲ್ಲಿ ಅಶೌಚವಿದೆಯೆಂದು ಆ ಮನೆಯಿಂದಲೇ ತಂಡದವರು ತಿಳಿದುಕೊಳ್ಳುತ್ತಾರೆ.ಅಂಥವರ ಮನೆಗೆ ಮುದ್ದಾಂ ದೀಪವನ್ನು ಕೊಡುವುದಿಲ್ಲ. ಇದೊಂದು ವಿಚಾರವನ್ನು ಹೊರತುಪಡಿಸಿ ತಾವು ಪ್ರಾರಂಭಿಸಿದ ಊರಿನಲ್ಲಿ ಯಾವುದೇ ಮನೆಗೆ ದೀಪ ಕೊಡದೆ ಮುಂದೆ ಹೋಗುವ ಹಾಗಿಲ್ಲ. ಪರಿಧಿಯಲ್ಲಿ ಸಿಗುವ ಯಾವುದಾದರು ಮನೆಗೆ ಬೀಗ ಹಾಕಿದ್ದಲ್ಲಿ ಆ ಮನೆಯ ಎದುರು ಬಾಗಿಲ ಹೊಸ್ತಿಲ ಮೇಲೆ ದೀಪವನ್ನಿಟ್ಟು ಮುಂದೆ ಸಾಗಬೇಕು. ಅಸ್ಪ್ರಶ್ಯತೆಯ ಮನೋಭಾವ ಯಾರಿಗೂ ಬಿಟ್ಟಿದ್ದಲ್ಲ. ಆ ಅವಹೇಳನಕ್ಕೆ ಗುರಿಯಾದದ್ದು ಕೇವಲ ಬ್ರಾಹ್ಮಣರಷ್ಟೇ. ಎಲ್ಲ ಜಾತಿಯವರೂ ತಮಗಿಂತ ಅತ್ತ್ಯಂತ ಕೆಳಗಿನ ಜಾತಿಯವರನ್ನು ಅಸ್ಪರ್ಶರೆಂದೆ ಪರಿಗಣಿಸುತ್ತಾರೆ.ಹೀಗೆ ದೀಪ ಹಿಡಿದು ಹೊರಟ ತಂಡದರಿಗೆ ಅಸ್ಪರ್ಶ್ಯರಾದ ಯಾವುದಾದರು ಮನೆಗಳು ತಮ್ಮ ದಾರಿಯ ಮಧ್ಯೆ ಸಿಕ್ಕರೆ ಅವರನ್ನು ಬಿಟ್ಟು ಮುಂದೆ ಸಾಗುವ ಹಾಗಿಲ್ಲ. ಹಾಗೆ ಸಾಗಿದರೆ ಆ ಮನೆಯವರು ದೇವರ ದೀಪ ತಮಗೆ ಸಿಗದಿದ್ದುದು ಅವಲಕ್ಷಣ ಎಂದು ಭಾವಿಸುತ್ತಾರೆ. ಆ ತಂಡದವರು ಮುಂದೆ ಸಾಗದಂತೆ ತಡೆ ಹಾಕುತ್ತಾರೆ.ಆದ್ದರಿಂದ ಅನಿವಾರ್ಯವಾಗಿ ಆ ತಂಡದವರುತಮ್ಮ ಜಾತಿಯ ಪದ್ಧತಿಯಂತೆ ಅವರ ಮನೆಯ ಒಳಗೆ ಹೋಗದಿದ್ದರೂ ಅವರ ಮನೆಯ ಎದುರು ಬಾಗಲ ಹೊಸ್ತಿಲ ಮೇಲೆ ದೀಪವನ್ನು ಇಟ್ಟು ಹೋಗಲೇಬೇಕು. ದಾರಿಯ ಮಧ್ಯೆ ಅಂಥಹವರದ್ದೆ ಸಾಲುಮನೆಗಳು ಸಿಕ್ಕಿದರೆ ಆ ಕೇರಿಯ ಮುಂದೆ ದಾರಿಯಲ್ಲಿ ತಂಡವು ನಿಧಾನವಾಗಿ ಹಾಡು ಹೇಳುತ್ತ ಮುಂದೆ ಸಾಗುತ್ತಿರುತ್ತದೆ.ಆಗ ಎದುರಿಗೆ ಸಿಕ್ಕುವ ಆಯಾ ಮನೆಯವರು ತಂಡದವರ ಸನಿಹಕ್ಕೇ ಬಂದು ಅವರ ಮನಸ್ಸಿಗೆ ತೋಚಿದಷ್ಟು ಕಾಣಿಕೆಯನ್ನು ಕೊಟ್ಟು ಅವರವರ ಮನೆಗಳಿಗೆ ದೇವರ ದೀಪವನ್ನು ಒಯ್ಯುವುದು ವಾಡಿಕೆ. ಇಲ್ಲಿ ಜಾತೀಯತೆ,ವೈಯುಕ್ತಿಕ ವೈಷಮ್ಯ ಇವಾವುದರ ಸಾಧನೆಯನ್ನು ಮಾಡುವಂತಿಲ್ಲ.ದೀಪಾವಳಿಯ ದೀಪ ಸಕಲರಿಗೂ ಸಲ್ಲಬೇಕೆಂಬುದು ಈ ಸಂಪ್ರದಾಯದ ಘನ ಉದ್ದೇಶ.

====== ಮುಂದಿನ ವಿಷಯ ಐದನೆಯ ಕಂತಿನಲ್ಲಿ ======.


ದಿನದ ಮಾತು :

ಹಬ್ಬದ ಹಾಡು : ಐದನೆಯ ಕಂತು :

ದೀಪಾವಳಿಯ ಹಬ್ಬದ ಹಾಡು ಹಾಡುವ ತಂಡದಲ್ಲಿ ಕನಿಷ್ಠ 8 ರಿಂದ 10 ಮಂದಿ ಇರುತ್ತಾರೆ. ದೀಪವನ್ನು ಹಿಡಿಯುವವನೆ ಈ ತಂಡಕ್ಕೆ ಯಜಮಾನ. ಇವನು ಪಟ್ಟಗಚ್ಚೆ ಹಾಕಿ ಪಂಚೆಯುಟ್ಟಿರುತ್ತಾನೆ.ಕೋಟು,ಪೇಟ ಧರಿಸಿರುತ್ತಾನೆ.ಒಂದು ಕೈಯಲ್ಲಿ ದೀಪ ಮತ್ತೊಂದು ಕೈಯಲ್ಲಿ ರೊಟ್ಟಿನ ಅಥವಾ ಅಡಿಕೆ ಹಾಳೆಯ ಅಗಲನೆಯ ಬೀಸಣಿಗೆಯನ್ನು ಹಿಡಿದಿರುತ್ತಾನೆ.ಗಾಳಿಯಿಂದ ರಕ್ಷಿಸಲು ಸಂದರ್ಭ ಬಂದಾಗ ದೀಪಕ್ಕೆ ಅಡ್ಡವಾಗಿ ಆ ಬೀಸಣಿಗೆಯನ್ನು ಹಿಡಿಯುತ್ತಾನೆ.ಹೆಚ್ಚಾಗಿ ಇವನು ವಯಸ್ಸಿನಲ್ಲಿ ತಂಡದ ಇತರರಿಗಿಂತ ಹಿರಿಯವನಿರುತ್ತಾನೆ.ಕೆಲವು ವರ್ಷಗಳ ಹಿಂದೆ ತಂಡದ ಪ್ರತಿಯೊಬ್ಬರೂ ಕಂಬಳಿಕೊಪ್ಪೆಯನ್ನು ಸೂಡಿಕೊಂಡು ಬರುತ್ತಿದ್ದರು.ಈ ಸಮುದಾಯದ ಹಿಂದಿನ ಜನರು ಈ ಸಂಪ್ರದಾಯದ ಕಟ್ಟಳೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರು.ಈಗಿನ ಯುವಕರಿಗೆ ಅನೇಕ ನಿಯಮಗಳ ಅರಿವೇ ಇಲ್ಲ. ಇದ್ದಷ್ಟನ್ನು ಸರಿಯಾಗಿ ಪಾಲಿಸುವುದಿಲ್ಲ.

ಈ ತಂಡದ ಜನರಲ್ಲಿ ಒಳ್ಳೆಯ ಧ್ವನಿ ಇರುವ ಹಾಗೂ ಹಬ್ಬದ ಹಾಡುಗಳನ್ನು ಬಲ್ಲವ ಒಬ್ಬ ಪ್ರಧಾನ ಹಾಡುಗಾರನಿರುತ್ತಾನೆ ಅವನೊಂದಿಗೆ ಸಾಮಾನ್ಯವಾಗಿ ಅವನಿಗೆ ಹೊಂದಿಕೊಂಡು ಹೇಳುವಂತಹ ಮತ್ತೊಬ್ಬ ಸಹ ಹಾಡುಗಾರನಿರುತ್ತಾನೆ.ಇವರಿಬ್ಬರು ಸೇರಿಯೇ ಹಾಡುತ್ತಾರೆ.ತಂಡದ ಉಳಿದವರು ಅವರು ಹೇಳಿದ ಹಾಡಿನ ಪಲ್ಲವಿಯನ್ನು ಅಥವಾ ಆ ಹಾಡಿನ ಉತ್ತರಾರ್ಧದ ತುದಿಯನ್ನು ಆಯಾ ಹಾಡಿನ ಕ್ರಮಕ್ಕೆ ಅನುಸರಿಸಿ ಹಾಡುತ್ತಾರೆ. ಆದರೆ ಪ್ರಧಾನ ಹಾಡುಗಾರರ ಜೊತೆಗೆ ಅಲ್ಲ.ಅವರು ಹಾಡಿ ಬಿಡುವ ತುಸು ಅರೆಕ್ಷಣದ ಮೊದಲಿಗೆ ಇವರು ಈ ಮೊದಲು ತಿಳಿಸಿದಂತೆ ಹಾಡನ್ನು ಧ್ವನಿಗೂಡಿಸುತ್ತಾರೆ.ಇದಕ್ಕೆ ಸ್ವರಗುಟ್ಟುವುದು ಎನ್ನುತ್ತಾರೆ . ಉದಾಹರಣೆಗೆ, ಪ್ರಧಾನ ಹಾಡುಗಾರರು "ಬಲ್ಲೇಳು ಬಲೀಂದ್ರ ಬಲವಿದ್ದು ಬರುವಾಗ ಕಲ್ಲೊಳಗೆ ಮಳೆಯೇ ಕರೆದಾವೋ " ಎಂಬ ಸೊಲ್ಲನ್ನು ಹೇಳಿ ಮುಗಿಸಿದರೋ ಇಲ್ಲವೋ ಎನ್ನುವ ಕ್ಷಣದಲ್ಲೇ ಹಿಂದಿನ ಹಾಡುಗಾರರು " ಬರಲೇಳು ಬಲೀನ್ದ್ರನು ರಾಜಾ ಬಂದನು ತನ್ನ ರಾಜ್ಯಕೆ ತಾ " ಎನ್ನುವ ಆ ಹಾಡಿನ ಪಲ್ಲವಿಯನ್ನು ಧ್ವನಿಗೂಡಿಸುತ್ತಾ ಇರುತ್ತಾರೆ.ಈ ಹಾಡಿನ ಪ್ರಥಮದಲ್ಲಿ ಪ್ರಧಾನ ಹಾಡುಗಾರರು ಈ ಪಲ್ಲವಿಯಿಂದಲೇ ಪ್ರಾರಂಭಿಸಿರುತ್ತಾರೆ ಈ ಹಾಡುಗಳಲ್ಲಿ ಜಾನಪದ ಸೊಗಡು ಮತ್ತು ಅದರದೇ ಆದ ವೈಶಿಷ್ಟತೆಯಿರುತ್ತದೆ.ಇಂಪು ಇರುತ್ತದೆ. ಪೌರಾಣಿಕ ಕಥೆಗಳು ಅದರಲ್ಲಿರುತ್ತವೆ.ಸಾಂದರ್ಭಿಕ ಅರ್ಥಗಳಿರುತ್ತವೆ.ಜೀವನದ ಸಂದೇಶಗಳಿರುತ್ತವೆ. ದೇವರ ದೀಪವೊಂದು ತಮ್ಮ ಮನೆ ಬಾಗಿಲಿಗೆ ಬಂದ ಸಾರ್ಥಕ್ಯ ಮನೋಭಾವವನ್ನು ಈ ಹಾಡುಗಳು ಜನರ ಮನಸ್ಸಿನಲ್ಲಿ ಮೂಡಿಸುತ್ತವೆ.[ಈ ಹಾಡುಗಳ ಸಮಯೌಚಿತ್ಯ ಮತ್ತು ಭಾವಗಳನ್ನು ಮುಂದಿನ ಕಂತಿನಲ್ಲಿ ತಿಳಿಸಲಾಗುತ್ತದೆ].

ಹೀಗೆ ದೀಪ ಕೊಡಲು ಹೋದ ಮನೆಗಳಲ್ಲೆಲ್ಲ ಈ ತಂಡದವರಿಗೆ ದೀಪಾವಳಿ ಹಬ್ಬದ ಕಜ್ಜಾಯ,ಅಂದು ತಮ್ಮ ಮನೆಯ ದೇವರಿಗೆ ಒಡೆದ ತೆಂಗಿನಕಾಯಿ, ಹಣ್ಣು, ಹೂವಿನಪ್ರಸಾದ, ವೀಳ್ಯದೆಲೆ ಅಡಿಕೆ, ಕನಿಷ್ಠ ಒಂದು ಕೆಜಿ ಅಕ್ಕಿ, ದೀಪದ ಪಾತ್ರೆಗೆ [ಸುಮಾರು 30 ಸೆ.ಮಿ.ಅಗಲದ,ಅಂದಾಜು 3 ಲೀ ಎಣ್ಣೆ ಹಿಡಿಯುವ ಮಣ್ಣಿನ ಸುಟ್ಟಗಡಿಗೆಯನ್ತಹ ಪಾತ್ರೆ. ಇದಕ್ಕೆ ಹಣತೆ ಎನ್ನುತ್ತಾರೆ.ಇದನ್ನು ಅಂಥವರ ಮನೆಯಲ್ಲಿ ಸುಮಾರು ನೂರು ವರ್ಷಗಳಿಂದ, ಅಜ್ಜ,ಮುತ್ತಜ್ಜನ ಕಾಲದಿಂದ ಕಾಯ್ದಿರಿಸಿಕೊಂಡು ಬರಲಾಗಿದೆ].ಹಾಕಿ ಹೆಚ್ಚಾದದ್ದನ್ನು ಅವರ ಪ್ಲಾಸ್ತಿಕ್ಕ್ ಕ್ಯಾನಿಗೆ ಶೇಂಗ ಅಥವಾ ಎಳ್ಳೆಣ್ಣೆ, ಸಮಾಧಾನವೆನಿವಸ್ಟು ಹಣ ಹೀಗೆ... ಹೀಗೆ.... ಎಲ್ಲವನ್ನು ದೀಪ ತಂದವರ ಗೌರವಾರ್ಥ ಕೊಡಲಾಗುತ್ತದೆ. ಒಳ ಹೊಕ್ಕವರ ಮನೆಯಲ್ಲಿ ಹೊಸದಾಗಿ ಮದುವೆಯಾದ ಅಳಿಯ-ಮಗಳು ಬಂದಿದ್ದರೆ ಅವರು ನಿದ್ರೆಯಿಂದ ಎದ್ದು ಹೊರಗೆ ಬರುವ ಹಾಗೆ ಮತ್ತೆ ಮತ್ತೆ ಹಾಡುಗಳನ್ನು ಹಾಡಿ ಪೀಡಿಸಿ ಅವರನ್ನು ಸಂತೋಷಪಡಿಸಿ ಅವರಿಂದಲೂ ಖುಷಿಯಿಂದ ಹಣವನ್ನು ತಂಡದವರು ಕೀಳುತ್ತಾರೆ.


======ಮುಂದಿನ ವಿಷಯ ಆರನೆಯ ಕಂತಿನಲ್ಲಿ.======



ದಿನದ ಮಾತು :

ಹಬ್ಬದ ಹಾಡು : ಆರನೆಯ ಕಂತು.:

ದೀಪಾವಳಿಯ ದೇವರ ದೀಪದ ಕುರಿತು ಹಳ್ಳಿಯ ಜನರಲ್ಲಿ ಗೌರವ,ಪೂಜ್ಯ ಭಾವನೆ ಇದೆ.ಮಧ್ಯ ರಾತ್ರಿಯಾಗಿರಲಿ.ಮಕ್ಕಳು,ಮುದುಕರು,ಕಾಯಿಲೆಯವರ ನಿದ್ರೆಗೆ ಬಾಧಕವಾಗುತ್ತದೆಯೆಂದು ಅವರು ಭಾವಿಸುವುದಿಲ್ಲ.ರಾತ್ರಿ ಯಾವುದೋ ಸಮಯಕ್ಕೆ ದೀಪದ ತಂಡದವರು ಬರುತ್ತಾರೆ. ಮನೆಯ ಬಾಗಿಲಲ್ಲಿ ನಿಂತು ಅವರ ಪದ್ಧತಿಯಂತೆ " ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೊ " ಎನ್ನುತ್ತಾರೆ.ಅದಕ್ಕೆ ಎದುರಾಗಿ ಅವರ ಹಿಮ್ಮೇಳದವರು " ಹುಯ್ಯೋ " ಎಂದು ಕೂಗುತ್ತಾರೆ.ಇದನ್ನು ಕೇಳಿದ ಮನೆಯವರು ಎಚ್ಚರಾಗಿ ಬಾಗಿಲನ್ನು ತೆಗೆಯುತ್ತಾರೆ.ಆಗ ದೀಪವನ್ನು ಮುಂದಿಟ್ಟುಕೊಂಡು ತಂಡ ಮನೆಯೊಳಗೆ ಬರುತ್ತದೆ.[ಈ ಸಂದರ್ಭಕ್ಕೆ ಬೇರೆಬೇರೆ ಹಾಡುಗಳಿವೆ.ಅವುಗಳನ್ನು ಮುಂದಿನ ಕಂತಿನಲ್ಲಿ ವಿವರಿಸಲಾಗುತ್ತದೆ.] ದೀಪಕ್ಕೆ ಮನೆಯೊಡತಿ ಮಣೆಯನ್ನು ಕೊಡುತ್ತಾಳೆ.ಅದರ ಮೇಲೆಯೇ ದೀಪವನ್ನು ಇಡಬೇಕಾದದ್ದು ಕಡ್ಡಾಯ. ನಂತರ ಸಂಪ್ರದಾಯದಂತೆ ಯಾವಯಾವ ಹಾಡುಗಳನ್ನು ಹಾಡಬೇಕೊ ಅವುಗಳನ್ನು ಅನುಕ್ರಮವಾಗಿ ಹಾಡಲಾಗುತ್ತದೆ. ಈ ಅವಧಿಯಲ್ಲಿ ಮನೆಯವರು ಕೆಲವು ಕ್ರಮಗಳನ್ನು ಅನುಸರಿಸುವುದು ವಾಡಿಕೆ. ಮೊದಲನೆಯದಾಗಿ ದೀಪವನ್ನು ಮಣೆಯ ಮೇಲೆ ಇಟ್ಟಕೂಡಲೆ ಮನೆಯೊಡತಿ ತಮ್ಮ ಮನೆಯ ಹತ್ತಿಯ ಓರತಿಯಿಂದ [ಬತ್ತಿ ] ಆ ದೇವರ ದೀಪದಿಂದ ದೀಪವನ್ನು ತೆಗೆದುಕೊಂಡು ತಮ್ಮ ಮನೆಯ ದೇವರ ದೀಪಕ್ಕೆ ಸೇರಿಸುತ್ತಾಳೆ. ಮತ್ತೊಂದು ಓರತಿಯಿಂದ ತಮ್ಮ ಮನೆಯ ದೇವರ ದೀಪದಿಂದ ದೀಪವನ್ನು ತೆಗೆದುಕೊಂಡು ತಂಡದವರ ದೀಪಕ್ಕೆ ಸೇರಿಸುತ್ತಾಳೆ.ಇದೇ ರೀತಿ ಪ್ರತಿಯೊಬ್ಬರ ಮನೆಯಲ್ಲೂ ನಡೆಯಬೇಕೆಂಬುದು ನಿರೀಕ್ಷೆ. ಹೀಗೆ ಅದೊಂದು ಗ್ರಾಮಾಧಿದೇವತೆಯ ದೀಪವೊಂದೇ ಅಲ್ಲ.ಎಲ್ಲರ ಮನೆಯ ದೀಪವೂ ಸೇರಿ ಅದು ಶಕ್ತಿ ದೀಪವಾಗುತ್ತದೆ. ಎರಡನೆಯದಾಗಿ ಆ ದೀಪದ ಹಣೆತೆಗೆ ಶೇಂಗ ಅಥವಾ ಎಳ್ಳೆಣ್ಣೆಯನ್ನು ಸುರುವುತ್ತಾಳೆ.ಆ ದೀಪ ಸಣ್ಣದಾಗದಿರಲಿ ಎಂದು ಅದಕ್ಕೆ ಮತ್ತಷ್ಟು ಓರತಿಯನ್ನು ಸೇರಿಸುತ್ತಾಳೆ. ಮೂರನೆಯದಾಗಿ ಮತ್ತೊಂದು ಸಂಪ್ರದಾಯವಿದೆ.ಆ ದೀಪದ ಹಣತೆಯಲ್ಲಿರುವ ಎಣ್ಣೆಯಲ್ಲಿ ಮುಖವನ್ನು ನೋಡಿದರೆ ಸಕಲ ಸಂಕಷ್ಟಗಳೂ ನಿವಾರಣೆಯಾಗುತ್ತದೆಯೆನ್ದು ಜನರ ನಂಬಿಕೆ.ಆದ್ದರಿಂದ ಮನೆಯ ಜನೆರೆಲ್ಲರು ಆ ಎಣ್ಣೆಗೆ ನಾಣ್ಯದ ಕಾಣಿಕೆಯನ್ನು ಹಾಕಿ ತಮ್ಮ ಮುಖವನ್ನು ನೋಡಿ ದೀಪಕ್ಕೆ ಕೈ ಮುಗಿಯುತ್ತಾರೆ. ಇವಿಷ್ಟು ಕ್ರಮಗಳು ಆದ ನಂತರ ಸಾಮಾನ್ಯವಾಗಿ ಮನೆಯೊಡತಿ ಒಂದು ಮೊರದಲ್ಲಿ ತಮ್ಮ ಮನೆಯ ದೇವರಿಗೆ ಹಬ್ಬದಲ್ಲಿ ಒಡೆದ ತೆಂಗಿನಕಾಯಿ,ಹಣ್ಣು ಹೂವಿನ ಪ್ರಸಾದ,ಹಬ್ಬದ ಕಜ್ಜಾಯ,ವೀಳ್ಯದೆಲೆ ಅಡಿಕೆ,ಅಂದಾಜು ಒಂದು ಕೆಜಿ ಅಕ್ಕಿಮತ್ತು ಅವರಿಗೆ ಸಮಾಧಾನವೆನಿಸುವಷ್ಟು ಹಣ ಈ ಎಲ್ಲವನ್ನು ತಂದು ಅವರಿಗೆ ಕೊಡುತ್ತಾಳೆ. ಇಷ್ಟು ಹೊತ್ತಿಗೆ ತಂಡದವರ ಅನುಕ್ರಮವಾಗಿ ಹಾಡುವ ಹಾಡುಗಳನ್ನು ಪೂರೈಸಿರುತ್ತಾರೆ.ಆಸಕ್ತಿ ಇದ್ದವರು ಇನ್ನೂ ಹೆಚ್ಚಿನ ಬಗೆಬಗೆಯ ಹಾಡುಗಳನ್ನು ಹೇಳಿಸಿ ಕೇಳಿ ಖುಷಿ ಪಡೆಯುತ್ತಾರೆ.ನಂತರ ಕೊನೆಯಲ್ಲಿ ಮಂಗಳ ಪದ್ಯವನ್ನು ಹಾಡಿ ತಂಡದವರು ಮುಂದಿನ ಮನೆಗೆ ತೆರಳುತ್ತಾರೆ.

====== ಮುಂದಿನ ವಿಷಯ ಏಳನೆಯ ಕಂತಿನಲ್ಲಿ ======


ದಿನದ ಮಾತು :

ಹಬ್ಬದ ಹಾಡು : ಏಳನೆಯ ಕಂತು : [ಕೊನೆಯ ಕಂತು]

ದೀಪಾವಳಿಯ ಹಬ್ಬದ ಹಾಡಿನ ಸಂಪ್ರದಾಯದಲ್ಲಿ ಬೇರೆ ಬೇರೆ ನಿಯಮಗಳಂತೆ ಹಾಡುಗಳನ್ನು ಹಾಡಲಿಕ್ಕೂ ಕೆಲವು ನಿಯಮಗಳಿವೆ.ಒಟ್ಟಾರೆ ತಮಗೆ ಬಾಯಿಗೆ ಬಂದದ್ದನ್ನು ಉಗುಳುವುದಲ್ಲ.ಒಂದು ಮನೆಯ ಎದುರು ಹೋದ ಕೂಡಲೆ ಮೊದಲು ಬಾಗಿಲನ್ನು ತೆರೆಸುವ ಹಾಡನ್ನು ಹಾಡಬೇಕು. "ಆ ಮನೆ ಬಾಗಿಲು ಚಂದಾ ಈ ಮನೆ ಬಾಗಿಲು ಚಂದಾ ಬಾಗಿಲ ಮೇಲೊನ್ದೇನೈತೊ ಶಿವ ಶಿವಾ || ಬಾಗಿಲ ಮೇಲೇನೆನ್ದು ಬರೆದಾರೋ ಹಸಿರ ಪಾಲಣದ ನವಿಲಿಂಡು ಶಿವ ಶಿವಾ |.............ಹೀಗೆ ಅವರದ್ದೇ ಆದ ಜಾನಪದ ಧಾಟಿಯಲ್ಲಿ ತಾವು ಒಳ ಹೋಗುವ ಮನೆಯವರ ಬಾಗಿಲನ್ನು ಹೊಗಳಿ ಹಾಡುತ್ತಾರೆ. ಮನೆಯವರು ಬಾಗಿಲನ್ನು ತೆಗೆದ ನಂತರ ದೇವರ ದೀಪವನ್ನು ಮುಂದೆ ಮಾಡಿಕೊಂಡು ಒಳ ಹೋಗುವಾಗ "ಇಲ್ಲಿಗೆ ಹರ ಹರಾ ಇಲ್ಲಿಗೆ ಶಿವ ಶಿವಾ ಇಲ್ಲಿಗೆ ಸಂದೇ ಪದ ಮುಂದೇ | ಇಲ್ಲಿಗೆ ಸಂದೇ ಪದ ಮುಂದೆ ಕಾರಣ ಗ್ರಾಮದ ದೀಪಾ ನಡೆಮುಂದೆ ಗ್ರಾಮದ ದೀಪಾ ನಡೆ ಮುಂದೆ ||............. ಹೀಗೆ ದೀಪ ಮನೆಯೊಳಗೆ ಹೋಗುವ ಹಾಡನ್ನು ಹಾಡುತ್ತಾರೆ. ದೀಪ ಒಳಗೆ ಹೋದ ನಂತರ ಮನೆಯೊಡತಿ ಅದಕ್ಕೆ ಮಣೆ ಕೊಟ್ಟ ನಂತರ ಆ ದೀಪಕ್ಕೆ ಎಣ್ಣೆ ಎರಸುವ ಹಾಡನ್ನು ಹೇಳುತ್ತಾರೆ.ಇದಕ್ಕೆ ಅವರು ಎಣ್ಣೆ ಎರೆಯುವ ಹಾಡು ಎನ್ನುತ್ತಾರೆ.ಈ ಹಾಡಿನಲ್ಲಿ ಆ ಮನೆಯನ್ನು ಮತ್ತು ಮನೆಯೊಡತಿಯನ್ನು ಹೊಗಳುವ ಸಾಹಿತ್ಯವಿರುತ್ತದೆ. "ಸಾಕೆಂಬಾ ಹಾಲಿಗೆ ಬೇಕೆಮ್ಬಾ ಕಡೆಗೋಲೂ ವಜ್ರ ಮಾಣಿಕ್ಯದ ಉರಿನೇಣೂ ".ಅಂದರೆ ಆ ಮನೆಯಲ್ಲಿ ಸಾಕೆಂಬಷ್ಟು ಹಾಲು ಮೊಸರು ಇರಲಿ. ಅದನ್ನು ಕಡೆಯುವ ಕಡೆಗೋಲಿಗೆ ವಜ್ರ ಮತ್ತು ಮಾಣಿಕ್ಯದ ದಪ್ಪನೆಯ ಎಳೆಯುವ ದಾರ [ಉಗಿನೇಣು ] ವಿರಲಿ ಎಂದು ಹೊಗಳುತ್ತಾರೆ. 'ಓಲೆಯ ಬೆಳಕಲ್ಲಿ ಮಗನ ಜೋಗುಳ ಪಾಡಿ ನಿದ್ರೆ ಬರಿಸುವ ಒಡತಿ ಎಣ್ಣೆ ಎರಿ [ಹಣತೆಗೆ ಎಣ್ಣೆ ಹಾಕು ಅಥವಾ ಎರಸು ಎಂಬರ್ಥದಲ್ಲಿ ] ಬಾರೆ ' ......... ಹೀಗೆ ತಮ್ಮ ದೀಪದ ಹಣೆತೆಗೆ ಮನೆಯೊಡತಿ ಎಣ್ಣೆಯನ್ನು ಹಾಕುವಂತೆ ಪ್ರೇರೇಪಿಸುವ ಹಾಡನ್ನು ಹಾಡುತ್ತಾರೆ.ನಂತರದಲ್ಲಿ ಹಬ್ಬದ ಸಂದರ್ಭದ ಅತಿ ಮುಖ್ಯವಾದ ಹಾಡು. ಬಲೀನ್ದ್ರನನ್ನು ಸ್ತುತಿಸುವ,ಹೊಗಳುವ ಹಾಡು. 'ಬಲ್ಲೇಳು ಬಲೀನ್ದ್ರನು ರಾಜ ಬಂದನು ತನ್ನ ರಾಜ್ಯಕೆ ತಾ | ಬಲ್ಲೇಳು ಬಲೀಂದ್ರ ಬಲವಿದ್ದು ಬರುವಾಗ ಕಲ್ಲೊಡನೆ ಮಳೆಯೇ ಕರೆದಾವೋ |............. ಹೀಗೆ ಬಲಿ ಚಕ್ರವರ್ತಿಯನ್ನು ಕುರಿತು ಹಾಡುತ್ತಾರೆ. ಆದರೆ ಈ ಹಾಡನ್ನು ಅವರ ಮೂರು ದಿನಗಳ ಅವಧಿಯಲ್ಲಿ ಮೊದಲ ಎರಡು ದಿನ ಮಾತ್ರ ಹಾಡುತ್ತಾರೆ.ಮೂರನೆಯ ದಿನ ಅದು ಇಲ್ಲ. ಏಕೆಂದರೆ ಅವರು ತರುವ ಬಲೀನ್ದ್ರನನ್ನು ಹಬ್ಬದ ಮುನ್ನಾದಿನ ತಂದು ಹಬ್ಬದ ಮರುದಿನ ಬಿಟ್ಟುಬಿಡುತ್ತಾರೆ.ಮೂರನೆಯೆ ದಿನ ಬಲೀಂದ್ರ ಇರುವುದಿಲ್ಲ.ಆ ಕಾರಣದಿಂದ ಬಲೀನ್ದ್ರನ ಹಾಡನ್ನು ಮೂರನೆಯ ದಿನ ಹೇಳುವುದಿಲ್ಲ.ಇವಿಷ್ಟು ಒಂದು ಮನೆಯೊಳಗೆ ದೀಪ ಒಯ್ದಾಗ ಕಡ್ಡಾಯವಾಗಿ ಹಾಡಬೇಕಾದ ಹಾಡುಗಳು. ನಂತರದಲ್ಲಿ ಮನೆಯವರು ಬಯಸಿದರೆ ಇನ್ನು ಕೆಲವು ಐಚ್ಚಿಕ ಹಾಡುಗಳನ್ನು ಹಾಡುತ್ತಾರೆ. ತಮಗೆ ಸಲ್ಲಬೇಕಾದ ಗೌರವಗಳನ್ನು ವಸ್ತುಗಳು,ಹಣದ ರೂಪದಲ್ಲಿ ಮನೆಯವರು ಕೊಟ್ಟ ಮೇಲೆ ಅಂತಿಮವಾಗಿ ಮಂಗಳಪದ್ಯವನ್ನು ಹಾಡಿ ಅಲ್ಲಿಂದ ಮುಂದಿನ ಮನೆಗೆ ತೆರಳುತ್ತಾರೆ.ಮಂಗಳ ಪದ್ಯ ಈ ರೀತಿ ಇರುತ್ತದೆ."ಎತ್ತಿರಾರತಿಯಾ ಸಖಿಯರೇ ಎತ್ತಿರಾರತಿಯಾ |...............
ಥರ ಥರ ಮೂರುತಿ ಪವನ ಜ್ಯೋತಿಗೆ ಎತ್ತಿರಾರತಿಯಾ || " ಇವಿಷ್ಟು ಹಬ್ಬದ ಹಾಡುಗಳನ್ನು ಹಾಡುವಲ್ಲಿ ತಂಡದವರು ಅನುಸರಿಸುವ ನಿಯಮಗಳು.


[ ಈ ಹಾಡಿನ ಸಂಪ್ರದಾಯದ ಕುರಿತು ಮಾಹಿತಿ ಕೊಟ್ಟವರು.: ಶ್ರೀಯುತರುಗಳಾದ ಕ್ರಷ್ಣಪ್ಪನವರ ಮಗನಾದ ಹುಚ್ಚಪ್ಪ ಮತ್ತು ಅವನ ಮಕ್ಕಳು ಸುರೇಶ ,ಬಾಲಚಂದ್ರ [ಮಡಿವಾಳ ಸಮುದಾಯದವರು].ಪುರ್ಲೆಮಕ್ಕಿ.ಸಾಗರ ತಾಲೂಕು. ಹಾಗೂ ಮಾರ್ಯಪ್ಪ,ಮರಿಯಪ್ಪ,ದ್ಯಾವಪ್ಪ,[ಹಸಲರ ಸಮುದಾಯದವರು] ಬನದಕೊಪ್ಪ.ಸಾಗರ ತಾಲೂಕು.]

======ಇಲ್ಲಿಗೆ ಹಬ್ಬದ ಹಾಡಿನ ಸಂಪ್ರದಾಯದ ವಿವರಣೆ ಮುಗಿಯಿತು. ======