Monday 23 November 2015

@@@ ಊರು ಉಪಕಾರ ಅರಿಯದು, ಹೆಣ ಶೃಂಗಾರ ಅರಿಯದು @@@


ಹೆಣಕ್ಕೂ ಶೃಂಗರಿಸುವ ಪದ್ಧತಿ ಬಹಳ ಕಡೆ ಇದೆ . ಅದನ್ನು ಕೆಲವು ಸಂಪ್ರದಾಯಗಳಲ್ಲಿ ಸಾಂಕೇತಿಕವಾಗಿ ಮಾಡುತ್ತಾರೆ . ಇನ್ನು ಕೆಲವರಲ್ಲಿ ವಿಶೇಷವಾಗಿ ಮಾಡುತ್ತಾರೆ . ನಮ್ಮ ಸಮಾಧಾನಕ್ಕೆ , ಆದ್ಯಂತ ನಡೆದುಕೊಂಡು ಬಂದ ನಮ್ಮ ನಂಬಿಕೆಗೆ ಈ ರೀತಿ ಹೆಣವನ್ನು ಶೃಂಗರಿಸುತ್ತೇವೆ. ಆದರೆ ಆ ಶೃಂಗಾರದ ವೈಭವವನ್ನು ಹೆಣ ಅರಿಯುತ್ತದೆಯೇ ?. ಇಲ್ಲ.
ನಾವು ಜನರಿಗೆ ಮಾಡುವ ಉಪಕಾರವೂ ಹಾಗೆಯೇ. ನಮ್ಮಿಂದ ಪ್ರಯೋಜನವನ್ನು ತೆಗೆದುಕೊಳ್ಳುವವರೆಗೆ ನಮ್ಮನ್ನು ಹೊಗಳುತ್ತಾರೆ. ತಮ್ಮ ತೆವಲು ತೀರಿದ ನಂತರ ನಮ್ಮನ್ನು ಮರೆತೇಬಿಡುತ್ತಾರೆ. ಹಾಗಂತ ಇದಕ್ಕೆ ಅಪವಾದ ಇಲ್ಲವೆಂದಲ್ಲ.
ಇದರ ಅರಿವಿದ್ದೂ ನಾವೇಕೆ ಜನರಿಗೆ, ಊರಿಗೆ, ನಮ್ಮನ್ನು ಆಶ್ರಯಿಸಿ ಬರುವವರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು ?. ಮಾಡುತ್ತೇವೆ ಏಕೆ ?.
ನಾವೂ ಒಂದು ದಿನ ಪಾರ್ಶ್ವವಾತ ಹೊಡೆದು ಮೂಲೆಯಲ್ಲಿ ಕುಳಿತುಕೊಳ್ಳಬಹುದು. ಅಸಹಾಯಕರಾಗಿ ಮುದುಡಿಕೊಂಡು ಏಕಾಂಗಿಯಾಗಿ ಕುಳಿತುಕೊಂಡಿರಬಹುದು . ನಮ್ಮ ಸಂಬಂಧಿಕರು , ಸ್ನೇಹಿತರು , ನೆರೆಹೊರೆಯವರು ಎಷ್ಟು ಜನ , ಎಷ್ಟು ದಿನ ನಮ್ಮನ್ನು ಮಾತನಾಡಿಸಲು ಬರಲು ಸಾಧ್ಯ .
ನಾವು ಅಸಾಹಯಕರಾಗಿ , ಏಕಾಂಗಿಯಾಗಿ ಸುಮ್ಮನೆ ಮೂಲೆಯಲ್ಲಿ ಕುಳಿತುಕೊಂಡಿರುವಾಗ ನಮಗೆ ಯೋಚಿಸಲು, ನಮ್ಮ ಮನಸ್ಸಿನ ಬೇಜಾರು ಕಳೆದುಕೊಳ್ಳಲು ಒಂದಿಷ್ಟು ಯಾವುದಾದದೂ ಒಳ್ಳೆಯ ವಿಷಯಗಳು ಬೇಕು. ನಮ್ಮ ಬದುಕು ಇಲ್ಲಿಯವರೆಗೆ ಸಾರ್ಥಕ ದಾರಿಯಲ್ಲಿ ಬಂದಿದೆಯೇ , ಇಲ್ಲವೇ ವ್ಯರ್ಥವಾಗಿ ಸಾಗಿ ಬಂದಿದೆಯೇ ಎಂದು ಮಂಥನ ಮಾಡಿಕೊಳ್ಳಬೇಕೆಂದು ಮನಸ್ಸು ಹವಣಿಸುತ್ತದೆ.
ಆಗ ಸಾಗಿಬಂದ ನಮ್ಮ ಜೀವನದ ದಾರಿಯಲ್ಲಿಆಗಾಗ್ಯೆ ನಾವು ಮಾಡಿದಂಥಹ ಪರೋಪಕಾರಗಳು , ಸಮಾಜಕ್ಕಾಗಿ ಮಾಡಿದಂಥಹ ಒಳ್ಳೆಯ ಕೆಲಸಗಳು ಮೂಲೆಯಲ್ಲಿ ಕುಳಿತು ಜಡ್ಡುಗಟ್ಟಲು ಪ್ರಾರಂಭವಾದ ನಮ್ಮ ಮನಸ್ಸಿಗೆ ಚೇತನ ಮತ್ತು ಸಮಾಧಾನವನ್ನು ಕೊಡುತ್ತವೆ . ಅಷ್ಟಕ್ಕಾಗಿ ನಾವು ಊರಿಗೆ ಉಪಕಾರವನ್ನು ನಮ್ಮ ಜೀವನದಲ್ಲಿ ಮಾಡಿರಬೇಕು

ಹೆಣ ಶೃಂಗಾರವನ್ನು ಅರಿಯದಿದ್ದರೂ ನಮ್ಮ ನಂಬಿಕೆಯ ಸಮಾಧಾನಕ್ಕಾಗಿ ಅದನ್ನು ಮಾಡುತ್ತೇವೆ. ಹಾಗೆಯೇ ಊರು ಉಪಕಾರವನ್ನು ಅರಿಯದಿದ್ದರೂ ನಮ್ಮ ಮಾನಸಿಕ ಸಮಾಧಾನಕ್ಕಾಗಿ ಅದನ್ನು ನಾವು ಮಾಡಬೇಕು. ಅಷ್ಟೇ !.

@@@@ ನಕಲಿ ವಿಚಾರವಾದಿಗಳ ಹಾವಳಿ @@@@


                                                                                        ~~~~~~ ಎಂ. ಗಣಪತಿ ಕಾನುಗೋಡು.
ಇಂದು ತಮ್ಮನ್ನು ವಿಚಾರವಾದಿಗಳು, ಚಿಂತಕರು, ಪ್ರಗತಿಪರರು ಎಂದು ಕರೆದುಕೊಳ್ಳುತ್ತಿರುವ ಅನೇಕರನ್ನು ನಮ್ಮ ಸುತ್ತಮುತ್ತ ನಾವು ನೋಡುತ್ತಿದ್ದೇವೆ. ಚುಪುರು ಗಡ್ಡ, ಮೋಟು ತೋಳಿನ ಮೊಳಕಾಲು ಕೆಳನವರೆಗೂ ಹಾಸಿಕೊಂಡ ಖಾದಿ ಅಂಗಿಯನ್ನು ಹಾಕಿಕೊಂಡು ಇದೇ ವಿಚಾರವಾದಿಗಳ ಲಾಂಛನ ಎಂಬಂತೆ ಕೈ ಬೀಸಿಕೊಂಡು ಓಡಾಡುತ್ತಿರುತ್ತಾರೆ.
ಬಹಳಷ್ಟು ವಿಚಾರವಾದಿಗಳೆಂದು ಕರೆದುಕೊಳ್ಳುತ್ತಿರುವವರಿಗೆ ತಾವು ಏನು ಜನರ ಎದುರು ಪ್ರಚುರಪಡಿಸಲು, ಸಾರಲು ಹೊರಟಿರುತ್ತಾರೋ ಅಂಥಹ ವಿಚಾರಗಳು ಅವರ ಸ್ವಂತದ್ದಾಗಿರುವುದಿಲ್ಲ. ಗಟ್ಟಿ ಹೇಳಬೇಕೆಂದರೆ ಸ್ವಂತ ಬುದ್ಧಿಯೇ ವರಿಗೆ ಇರುವುದಿಲ್ಲ.
ಇಂಥಹ ಬುದ್ಧಿಜೀವಿಗಳಲ್ಲೂ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಇರುವಂತೆ ಬೇರೆ ಬೇರೆ ಪಂಥಗಳಿವೆ. ಆ ಪಂಥಕ್ಕೂ ಒಬ್ಬ ಮುಖಂಡ ಇರುತ್ತಾನೆ. ಆ ಮುಖಂಡ ರಾಜ್ಯ ಮಟ್ಟದವನು ಇರಬಹುದು, ರಾಷ್ಟ್ರ ಮಟ್ಟದವನು ಇರಬಹುದು, ಅಂತರಾಷ್ಟ್ರೀಯ ಮಟ್ಟದವನೂ ಇರಬಹುದು.ಅವನಿಗೆ ತನ್ನದೇ ಆದ ಒಂದು ಅಭಿಮಾನಿ ಶಿಷ್ಯಗಣ ಸಮೂಹವಿರುತ್ತದೆ. ಆ ಗಣಗಳೆಲ್ಲರೂ ತನ್ನ ಮುಖಂಡ ಏನನ್ನು ಹೇಳುತ್ತಾನೋ ಅದನ್ನೇ ಒಂದು ವಿಚಾರ, ಚಿಂತನೆ, ಪ್ರಗತಿಪರತೆ ಅವರವರ ಹರಹುವಿನಲ್ಲಿ ತುತ್ತೂರಿ ಊದುತ್ತಿರುತ್ತಾರೆ. ಅವರು ಸಾರುವ ಚಿಂತನೆಗಳಾವುವೂ ಅವರ ಸ್ವಂತದ್ದಾಗಿರುವುದಿಲ್ಲ.
ಒಂದು ನಿರ್ಧಿಷ್ಟ ಕ್ಷೇತ್ರದಲ್ಲಿ ಪರಿಣಿತಿ ಮತ್ತು ತರಬೇತಿಯನ್ನು ಹೊಂದಿರುವ ವ್ಯಕ್ತಿ ವಿಚಾರವಾದಿಯಾಗಿರಲು ಸಾಧ್ಯ -- ಅದೂ ಆ ನಿರ್ಧಿಷ್ಟ ಕ್ಷೇತ್ರಕ್ಕೆ ಅಷ್ಟೇ. ಬದುಕಿನ ವಾಸ್ತವತೆಯನ್ನು, ಸತ್ಯವನ್ನು ತಿಳಿಸುವಂತಾದ್ದು ವಿಚಾರ ಅಥವ ಚಿಂತನೆ. ಇಂಥಹ ವಾಸ್ತವತೆ ಮತ್ತು ಸತ್ಯ ವ್ಯಕ್ತಿ ವ್ಯಕ್ತಿಗಳ ಜೀವನದಲ್ಲಿ, ಬೇರೆ ಬೇರೆ ಸಮಾಜಗಳ ಸ್ಥಿತಿಯಲ್ಲಿ, ಕಾಲದ ಬದಲಾವಣೆಯಲ್ಲಿ ಬೇರೆ ಬೇರೆಯಾಗಿರುತ್ತದೆ.ಯಾರೋ ಒಬ್ಬ ಎಲ್ಲಿಯೋ ಹೇಳಿದ್ದು, ಯಾವಾಗಲೋ ಹೇಳಿದ್ದು ಸರ್ವಕಾಲಿಕ, ಸರ್ವದೇಶೀಯ ಸತ್ಯವಾಗಿರಲು ಸಾಧ್ಯವಿಲ್ಲ. ಒಂದು ವಿಚಾರ ಮಹತ್ವಪೂರ್ಣ ಎನಿಸಬೇಕಾದರೆ ಅದು ವಾಸ್ತವವನ್ನು ಕುರಿತು ಜನರಿಗಿರುವ ತಪ್ಪು ಕಲ್ಪನೆಯನ್ನು ಬದಲಾಯಿಸಬೇಕು.
ಒಬ್ಬ ವಿಚಾರವಾದಿಯ ಬದುಕಿನ ಉದ್ದೇಶ ಮಾನವ ಸ್ವಾತಂತ್ರ್ಯವನ್ನು ಮತ್ತು ಬದುಕಿನ ಜ್ಞಾನವನ್ನು ಎತ್ತಿ ಹಿಡಿಯುವುದು ಆಗಿರಬೇಕು. ಅದಕ್ಕಾಗಿ ಸಮಾಜದ ಹಾಗೂ ಅದರ ಸಂಸ್ಥೆಗಳ ಹೊರಗೆ ನಿಂತು ತನ್ನ ಕ್ರಿಯಾಶೀಲತೆಯಿಂದ ಜೀವನದ ವಾಸ್ತವತೆ ಮತ್ತು ಸತ್ಯವನ್ನು ಜನರಿಗೆ ಮನಗಾಣಿಸಿಕೊಡವುದಾಗಬೇಕು. ಸಮಾಜದ ಒಂದು ಭಾಗವಾಗಿದ್ದುಕೊಂಡೇ ತನ್ನ ವೈಚಾರಿಕ ತವಕ, ತಲ್ಲಣಗಳನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಲುಪಿಸುವುದು, ಅವರನ್ನು ಸದಾ ಎಚ್ಚರದಲ್ಲಿರುವಂತೆ ಮಾಡುವುದು ಆಗಿರಬೇಕು. ಆದರೆ ಬಹಳಷ್ಟು ವಿಚಾರವಾದಿಗಳೆಂದು ತಮ್ಮನ್ನು ಕರೆದುಕೊಳ್ಳುವವರು ಸಮಾಜದ ಒಂದು ಭಾಗವಾಗಿದ್ದುಕೊಂಡು ಈ ಕೆಲಸಗಳನ್ನು ಮಾಡಲು ಅಣಿಯಾಗಿರುವುದಿಲ್ಲ. ಸಮಾಜದಿಂದ ಹೊರಗೇ ಇರಲು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ತಾನು ಉಳಿದ ಎಲ್ಲರಿಗಿಂತ ಭಿನ್ನ ಎಂದು ಮೆರೆಯಲು ಯತ್ನಿಸುತ್ತಾರೆ.
ಮನುಷ್ಯನ ಬದುಕು ಭಾವನೆ ಮತ್ತು ಬುದ್ಧಿಯೆಂಬ ಎರಡು ಪ್ರಮುಖ ಶಕ್ತಿಗಳಿಂದ ಕೂಡಿರುತ್ತವೆ. ಭಾವನೆ ಕೇವಲ ಮನಸ್ಸಿಗೆ ಸಂಬಂಧಪಟ್ಟಿದ್ದು. ಬುದ್ಧಿ ಅಂತಃಶಕ್ತಿಗೆ ಸಂಬಂಧಪಟ್ಟಿದ್ದು. ಇವೆರಡೂ ಬೇರೆ ಬೇರೆ. ಆದರೆ ಇವೆರಡೂ ನಮ್ಮ ಒಂದೇ ಅನುಭವದಲ್ಲಿ ನಡೆದಾಡುವ ಎರಡು ಮುಖಗಳು. ನಮ್ಮ ಬದುಕಿನ ಅನುಭವದಲ್ಲಿ ಭಾವನೆ ಕೇವಲ ಸಂವೇದನಾಗಮ್ಯವಾಗಿರುತ್ತದೆ. ಆದರೆ ಬುದ್ಧಿಯು ವಿಚಾರಗಮ್ಯವಾಗಿರುತ್ತದೆ. ನಮ್ಮ ಬದುಕಿನ ಎಷ್ಟೋ ಘಟನೆಗಳನ್ನು ಬುದ್ಧಿಯ ವಿಚಾರದ ಅರದಲ್ಲಿ ತಿಕ್ಕಿ ನೋಡಲು ಸಾಧ್ಯವಾಗದು. ನಮಗೆ ತಂದೆ ಯಾರು ಎಂಬುದರ ಅನುಭವವನ್ನು ಡಿ.ಎನ್.ಎ. ಪರೀಕ್ಷೆಯಿಂದ ನಿರ್ಣಯಮಾಡಿಕೊಳ್ಳಲು ಹೊರಟರೆ ಅನರ್ಥವಾದೀತು. ತಾಯಿ ಹೇಳಿದ ಮಾತನ್ನು ಒಪ್ಪಿಕೊಂಡು ಆ ಭಾವನೆಯ ಸಂವೇದನೆಯಲ್ಲಿ ನಮ್ಮ ತಂದೆಯ ಮಕ್ಕಳಾಗಿ ನಾವು ಮುನ್ನಡೆಯುತ್ತೇವೆ. ಇಲ್ಲಿ ನಮ್ಮ ಬದುಕು ಭಾವನಾಪ್ರಧಾನ ಎಂಬುದಕ್ಕೆ ಪುಷ್ಠಿ ದೊರೆಯುತ್ತದೆ. ಇದನ್ನು ಅನುಮಾನ ಪ್ರಮಾಣ ಎಂದು ಕರೆಯಲಾಗುತ್ತದೆ. ಅದರಂತೆ ವಿಚಾರಗಮ್ಯವಾದ ಬುದ್ಧಿಯ ಪ್ರಾಧಾನ್ಯತೆಯೂ ಹೀಗೆಯೆ. ಬದುಕಿನ ಮತ್ತೊಂದು ಹಂತದಲ್ಲಿ ಯಾವುದೇ ವಿಷಯವನ್ನು ವಿಚಾರದ ಒರೆಗೆ ಹಚ್ಚಿಯೇ ಮುನ್ನಡೆಯಬೇಕಾಗುತ್ತದೆ. ಇಲ್ಲಿ ನಮ್ಮ ಬದುಕು ಬುದ್ಧಿಪ್ರಧಾನವಾದುದು ಎನ್ನುವುದು ಸುಳ್ಳಲ್ಲ. ಇದಕ್ಕೆ ಪ್ರತ್ಯಕ್ಷ ಪ್ರಮಾಣ ಎಂದು ಕರೆಯಲಾಗುತ್ತದೆ. ನಾವು ನಮ್ಮ ಜೀವನವನ್ನು ಅನುಭವಿಸುವಾಗಲೆಲ್ಲಾ ನಮ್ಮ ಭಾವನೆ ಮತ್ತು ಬುದ್ಧಿ ಈ ಎರಡೂ ಶಕ್ತಿಗಳು ಒಂದಲ್ಲ ಒಂದು ಪ್ರಮಾಣದಲ್ಲಿ ಸೇರಿಕೊಂಡೇ ಕೆಲಸ ಮಾಡುತ್ತಿರುತ್ತವೆ. ಇವೆರೆಡರಲ್ಲಿ ಯಾವುದಾದರೊಂದು  ಮತ್ತೊಂದನ್ನು ಹಿಮ್ಮೆಟ್ಟಿಸಿ ಮುನ್ನಡೆದಾಗ ನಮ್ಮ ಬದುಕಿನ ದಾರಿ ತಪ್ಪುತ್ತದೆ. ಬುದ್ಧಿ ಮತ್ತು ಭಾವನೆಗಳ ನಡುವೆ ಸಮತೂಕ ಏರ್ಪಟ್ಟಾಗ ನಮ್ಮ ಅಂತರಂಗದ ಸರಿಯಾದ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಆಗ ನಮ್ಮ ಯೋಚನೆಗಳು, ಮಾತುಗಳು ಮತ್ತು ಕೃತಿಗಳಲ್ಲಿ ಒಂದು ಹೃದ್ಯವಾದ ಸಾಮರಸ್ಯ ಕಂಡುಬರುತ್ತದೆ. ಮನುಷ್ಯನ ತ್ರಿಕರಣ ಸಾಂಗತ್ಯ ಎಂದರೆ ಇದೇ. ಅಂತಹ ಸಾಮರಸ್ಯವನ್ನು ಸಮಾಜದಲ್ಲಿ ಸ್ವಯಂ ಶಕ್ತಿಯಿಂದ ಹುಟ್ಟುಹಾಕುವವನು ಮಾತ್ರ ಒಬ್ಬ ವಿಚಾರವಾದಿ, ಪ್ರಗತಿಪರ, ಚಿಂತಕ ಆಗಲು ಸಾಧ್ಯ. ಇಂದು, ತಾವು ವಿಚಾರವಾದಿಗಳೆಂದು ಕೈಬೀಸುತ್ತಿರುವ ಎಷ್ಟು ಮಂದಿಯಲ್ಲಿ ಈ ಚರ್ಯೆ ಕಂಡು ಬರಲು ಸಾಧÀ್ಯ? ನಿಜವಾದ ವಿಚಾರವಾದಿ ತನ್ನ ಬದುಕನ್ನು ಐಷಾರಾಮಿಯಾಗಿ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಅವನಿಗೆ ತನ್ನ ವೈಯಕ್ತಿಕ ಜೀವನ ಪ್ರಧಾನವಾಗಿರುವುದಿಲ್ಲ. ಆತ ಸದಾ ಪರರ ಬಗ್ಗೆ, ಸಮಾಜದ ಬಗ್ಗೆ ತನ್ನ ಜೀವನವನ್ನು ಮುಡಿಪಾಗಿಡುತ್ತಾನೆ. ತನ್ನ ವೈಯಕ್ತಿಕ ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಾ ಇರುತ್ತಾನೆ. ಹಾಗೆಯೇ ತನ್ನ ಅಂತರಂಗವನ್ನು ಹದಗೊಳಿಸಿ, ಸಿದ್ಧಗೊಳಿಸಿ ವಾಸ್ತವತೆಯ ಅಭಿವ್ಯಕ್ತಿಯನ್ನು ಸಮಾಜಕ್ಕೆ ಕೊಡಲು ತನ್ನನ್ನು ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಕಾರಣ ಇಂತಹ ವಿಚಾರವಾದಿಯಲ್ಲಿ ತತ್ಕಾಲದ ಪ್ರಜ್ಞೆಗಿಂತ ಹೆಚ್ಚು ಭವಿಷ್ಯತ್ ಕಾಲದ ಪ್ರಜ್ಞೆಯು ತೀವ್ರವಾಗಿರುತ್ತದೆ. ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲದ ನಡುವೆ ಹಾಗೂ ನಮ್ಮ ಭಾವನಾ ಪ್ರಪಂಚ ಮತ್ತು ವೈಚಾರಿಕ ಪ್ರಪಂಚದ ನಡುವೆ ಒಂದು ಸಮತೂಕವನ್ನು ತರುವ ಹಪಾಹಪಿ ನಿಜವಾದ ವಿಚಾರವಾದಿಯ ಹೋರಾಟವಾಗಿರುತ್ತದೆ. ಇಂತಹ ನಿಜವಾದ ವಿಚಾರವಾದಿಗಳು, ಪ್ರಗತಿಪರರು ನಮ್ಮಲ್ಲಿ ತೀರಾ ಅಪರೂಪಕ್ಕೆ ಕಾಣಸಿಗುತ್ತಾರೆ ಅಷ್ಟೆ.

ನಮ್ಮ ಸುತ್ತಮುತ್ತಲು ಮೇಲರಿಮೆಯಿಂದ ತಿರುಗುತ್ತಿರುವ ವಿಚಾರವಾದಿಗಳು, ಪ್ರಗತಿಪರರು ಎಂದು ತಮ್ಮನ್ನು ಬಿಂಬಿಸಿಕೊಂಡು ತಿರುಗುತ್ತಿರುವ ಬುದ್ಧಿವಂತರಿಗೆ ಇವಾವುದರ ಅರಿವು ಇಲ್ಲ. ಅಂಥಹ ಬ್ರಾಂಡನ್ನು ಧರಿಸಿ ಹೊರಟವರಲ್ಲಿ ಬಹಳಷ್ಟು ಮಂದಿ ನಕಲಿ ವಿಚಾರವಾದಿಗಳು. ಅಸಲಿ ಅಲ್ಲ. ಜಗತ್ತಿನಲ್ಲಿ ಬೇರೆ ಯಾರಿಗೂ ಬುದ್ಧಿ ಇಲ್ಲ, ಇದ್ದದ್ದು ಇದ್ದರೆ ಅದು ತಮಗೊಬ್ಬರಿಗೆ ಮಾತ್ರ ಎಂದು ಅವರು ಭಾವಿಸಿರುತ್ತಾರೆ. ತಮ್ಮ ಸುತ್ತಲಿನವರನ್ನು ವಿಚಾರ, ಚಿಂತನೆ ಇಲ್ಲದವರೆಂದು ಅವರನ್ನು ಅತಿ ನಿಕೃಷ್ಟವಾಗಿ ಕಾಣುತ್ತಾರೆ.



ತಾರೀಖು : 10 - 11 - 2015

Tuesday 15 September 2015

@@@@ ಬಣ್ಣ ಕಳೆದುಕೊಂಡ ಗುಂಡ ಕಟ್ಟಿದ ಬಂಗಾರದ ಮಾಂಗಲ್ಯದ ಸರ @@@@


                                                               ~~~~ ಎಂ. ಗಣಪತಿ. ಕಾನುಗೋಡು.

ನಮ್ಮೂರ ಗುಂಡ ಮದುವೆಯಾಗಿ ಈ ದಿನಕ್ಕೆ ನಾಲ್ಕು ವರ್ಷಗಳಾದುವು. ಆತ ಮನೆಯಲ್ಲಿ ಸಾಕಷ್ಟು ಶ್ರೀಮಂತ. ಮದುವೆಯಲ್ಲಿ ತನ್ನ ಮಗಳಿಗೆ ಅವನ ಆರ್ಥಿಕ ಅನುಕೂಲಕ್ಕನುಸಾರವಾಗಿ ಬಹಳ ಬಂಗಾರ ಹಾಕುತ್ತಾನೆ ಎಂದು ಭಾವಿಸಿಕೊಂಡಿದ್ದ ಅವನ ಮಾವನಿಗೆ ಭ್ರಮನಿರಸನವಾಗಿತ್ತು. ಅನಿವಾರ್ಯವಾಗಿ ಹಾಕಲೇಬೇಕಾಗಿದ್ದ ಬಂಗಾರದ ಮಾಂಗಲ್ಯದ ಸರವನ್ನು ಬಿಟ್ಟರೆ ಹೆಚ್ಚಿನದಕ್ಕೆ ಅಳಿಯನ ಶ್ರೀಮಂತಿಕೆಯನ್ನು ನೋಡಿಯಷ್ಟೇ ಸಮಾಧಾನಪಟ್ಟುಕೊಳ್ಳಬೇಕಾಯಿತು. ಏಕೆಂದರೆ ಗುಂಡನ ಹೆಂಡತಿಯ ತವರಿನಲ್ಲಿ ಆರ್ಥಿಕವಾಗಿ ಬಡವರು.
ನಮಗೆ ಊರಿನವರೂ ಇದು ಅರ್ಥವಾಗಲಿಲ್ಲ.
ಊರಿನ ಜನ, ಅವನ ಸಂಬಂಧಿಕರು ಮಾತಾಡಿಕೊಳ್ಳುತಿದ್ದರು -- ಗುಂಡನ ಪಕ್ಕದ ಮನೆಯ ಸೊಸೆಯ ಹಾಗೆ ಇವನ ಹೆಂಡತಿಯೂ ವರ್ಷಾರು ತಿಂಗಳಲ್ಲಿ ಡೈವೋರ್ಸ್ ಕೊಡದಿದ್ದರೆ ಸಾಕು, ಅವಳ ಹಾಗೆ ಗುಂಡನ ಬಂಗಾರ , ಹಣವನ್ನೆಲ್ಲ ದಾಟಿಸಿಕೊಂಡು ಇವನ ಕೈ ಬಿಟ್ಟು ಓಡಿಹೋಗದಿದ್ದರೆ ಸಾಕು ದೇವರೇ ಎಂದು ತಮ್ಮೊಳಗೆ ಅಂದುಕೊಳ್ಳುತಿದ್ದರು.
ಗುಂಡನ ದಾಂಪತ್ಯ ಯಾವ ಕುಂದೂ ಇಲ್ಲದೆ ಸುಗಮವಾಗಿದ್ದು ನಾಲ್ಕು ವರ್ಷಗಳು ಕಳೆದು ಹೋದುವು. ಅವನ ಹೆಂಡತಿ ಮದುವೆಯ ನಂತರ ಮುಟ್ಟಾಗಲೇ ಇಲ್ಲ. ಬೇಗನೆ ಮುದ್ದಾದ ಎರಡು ಮಕ್ಕಳೂ ಹುಟ್ಟಿದುವು. ಅವನ ಹೆಂಡತಿ ಗಂಡನೊಡನೆ ಅತಿ ಪ್ರೀತಿಯಿಂದ ಇದ್ದಾಳೆ . ಅಂತೂ ನಾವೆಲ್ಲಾ ಭಾವಿಸಿದಂತೆ ಅವನ ಹೆಂಡತಿ ಅವನನ್ನು ಬಿಟ್ಟು ಹೋಗಲಿಲ್ಲ.
ಆದರೆ ಹೋದದ್ದು ವಿವಾಹದಲ್ಲಿ ಅವನು ಹೆಂಡತಿಗೆ ಕಟ್ಟಿದ ಚಿನ್ನದ ಮಾಂಗಲ್ಯದ ಸರದ ಬಣ್ಣ ಮಾತ್ರ. ಸರ ಪೂರ್ತಿ ಬೆಳ್ಳಗಾಗಿತ್ತು. ನಾಲ್ಕು ವರ್ಷಗಳ ನಂತರ ಒಂದು ದಿನ ತನ್ನ ಮಕ್ಕಳೊಂದಿಗೆ ಹೆಂಡತಿಯನ್ನೊಡಗೂಡಿದ ಸುಖೀಸಂಸಾರದೊಂದಿಗೆ ಬಂಗಾರದ ಅಂಗಡಿಗೆ ಹೋಗಿ ತನ್ನ ಹೆಂಡತಿ ಕೇಳಿದ ಹೆಚ್ಚಿನ ತೂಕದ ಒಳ್ಳೆಯ ಬಂಗಾರದ
ಮಾಂಗಲ್ಯದ ಸರವನ್ನು ಅವಳಿಗೆ ಕೊಡಿಸಿ ಅಲ್ಲೇ ಕೊರಳಿಗೆ ಕಟ್ಟಿಸಿಕೊಂಡು ಮನೆಗೆ ಬಂದ.
ನಮಗೆಲ್ಲ ಅಚ್ಚರಿ. ಊರಿಗೇ ಶ್ರೀಮಂತನಾಗಿದ್ದ ಗುಂಡ ಮೊದಲು ತಂದ ಸರದ ಬಣ್ಣ ಹೋದದ್ದು ಏಕೆ ?. ಹಾಗಂತ ಅವನಿಗೆ ಸೊನಗಾರನು ಮೋಸ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಕೆ. ಜಿ. ಗಟ್ಟಲೆ ಬಂಗಾರವನ್ನು ತನ್ನ ಸಂಸಾರಕ್ಕೆ ಖರೀದಿಸಿದವನು. ಸಾಕಷ್ಟು ಬುದ್ಧಿವಂತ ಬೇರೆ. ಒಂದು ವಾರ ನಮಗೆ ನಿದ್ರೆಯೇ ಸರಿಯಾಗಿ ಬರಲಿಲ್ಲ.
ನಾವು, ಅವನ ಗೆಳೆಯರೆಲ್ಲ ಒಂದು ದಿನ ಈ ವಿಚಾರವಾಗಿ ಗುಂಡನನ್ನು ಕೇಳಿಯೇ ಬಿಟ್ಟೆವು. ಆಗ ಅವನು ಕೊಟ್ಟ ಉತ್ತರ ಹೀಗಿತ್ತು.
" ಯಾರಿಗೆ ಗೊತ್ತೋ ಮಾರಾಯರಾ. ನನ್ನ ಹೆಂಡತಿ ನನ್ನ ಜೊತೆಗೆ ಬಾಳುವೆ ಮಾಡಿಕೊಂಡು ಮುಂದುವರೆಯುತ್ತಾಳೆ ಎಂದು ಇಂದಿನ ಕಾಲದಲ್ಲಿ ಏನು ಗ್ಯಾರಂಟಿ ?. ನಮ್ಮ ಪಕ್ಕದ ಮನೆಯವನನ್ನು ನೋಡಿ ನನಗೆ ಸಾಕಾಗಿ ಹೋಗಿತ್ತು. ಒಮ್ಮೆ ಅವಳು ನನ್ನನ್ನು ಬಿಟ್ಟು ಓಡಿಹೋದರೆ ಅಷ್ಟರಲ್ಲೇ ಹೋಗಲಿ ಎಂದು ಬೆಳ್ಳಿಯ ಸರಕ್ಕೆ ಬಂಗಾರದ ನೀರನ್ನು ಹಾಕಿಸಿ ಅದಕ್ಕೆ ಐದು ನೂರು ರುಪಾಯಿ ಖರ್ಚು ಮಾಡಿದ್ದೆ ಅಷ್ಟೆ. ಸರದ ಬಣ್ಣ ಹೋದರೂ ಅವಳು ಹೋಗಲಿಲ್ಲ. ಅದಕ್ಕೆ ಖುಷಿಯಿಂದ ಅವಳ ಇಚ್ಚೆಯಂತೆ ಎರಡು ಲಕ್ಷ ರೂಪಾಯಿನ ಅಪ್ಪಟ ಬಂಗಾರದ ಮಾಂಗಲ್ಯದ ಸರವನ್ನೇ ಕೊಡಿಸಿದೆ ".


ತಾರೀಖು : 9 - 9 - 2015

@@@@@ ಪೂತನಿಯ ಮೊಲೆಯಲ್ಲಿ ಹಾಲು, ಮನದಲ್ಲಿ ವಿಷ. ಪರಿಣಾಮ ಹಾಲಾಹಲ @@@@@


                                                                           ಎಂ.ಗಣಪತಿ.ಕಾನುಗೋಡು.

ಹಾಲುಣ್ಣಿಸಲು ಬಂದವರನ್ನೂ ಶಿಶುಕೃಷ್ಣ ಕೊಂದ ಎಂದಮೇಲೆಯೆ ಲೋಕಕ್ಕೆ ಗೊತ್ತಾದದ್ದು ಒಂದು ಪಾಠ. ಯಾರು ನಮಗೆ ಬಾಹ್ಯವಾಗಿ ಒಳ್ಳೆಯವರೆಂದು ಕಂಡರೂ ಅವರನ್ನು ಪೂರ್ವ್ವಾಪರವಾಗಿ ನಾವು ಗ್ರಹಿಸಿಕೊಳ್ಳಬೇಕು ಎನ್ನುವುದೇ ಆ ಪಾಠ.
ಪೂತನಿ ಒಬ್ಬಳು ರಾಕ್ಷಸಿ. ಕೃಷ್ಣನ ಮೇಲೆ ವೈರುಧ್ಯವನ್ನೇ ಸಾಧಿಸುತಿದ್ದ ಕಂಸನ ಪರಿವಾರದಳು. ಕಂಸನ ಆದೇಶದ ಮೇರೆಗೆ ತನ್ನ ರಾಕ್ಷಸ ವೇಷವನ್ನು ಮರೆಸಿ ಸುಂದರ ಸ್ತ್ರೀ ವೇಷದಿಂದ ಗೋಕುಲದಲ್ಲಿ ನಂದನ ಮನೆಯನ್ನು ಹೊಕ್ಕು ಅಲ್ಲಿ ಶ್ರೀಕೃಷ್ಣನಿಗೆ ಮೊಲೆಯ ಹಾಲನ್ನುಣಿಸತೊಡಗಿದಳು. ಮೂಲತಃ ಹಾಲು ವಿಷವಲ್ಲ. ಆದರೆ ಅವನನ್ನು ಕೊಲ್ಲಲೇಬೇಕೆಂಬ ದುರುದ್ಧೇಶದ ವಿಷ ಅವಳ ಮನಸ್ಸಿನಲ್ಲಿ ಇತ್ತು. ಉಣ್ಣಿಸುವುದು ಮೊಲೆಯ ಶುದ್ಧ ಹಾಲಾದರೂ ಮನಸ್ಸಿನಲ್ಲಿ ವಿಷವಿದ್ದರೆ ಆ ಹಾಲೂ ವಿಷಪೂರಿತವಾಗುತ್ತದೆ ಎನ್ನುವುದು ಲೋಕಕ್ಕೆ ಇನ್ನೊಂದು ಪಾಠವೂ ಹೌದು. ಹಾಗಾಗಿಯೇ ನಮ್ಮ ತಾಯಂದಿರು ತಮ್ಮ ಮಕ್ಕಳಿಗೆ ಮೊಲೆಯುಣ್ಣಿಸುವಾಗ ಪ್ರಸನ್ನತೆಯಿಂದ, ಮಕ್ಕಳ ಮೇಲಿನ ಅತಿ ಅನುರಾಗದಿಂದ ಉಣ್ಣಿಸುತ್ತಾರೆ. ಉಣ್ಣಿಸಬೇಕು. ಏಕೆಂದರೆ ನಮ್ಮ ದೇಹದಿಂದ ಹೊರಡುವ ಜೀವ ರಸಗಳು ನಮ್ಮ ಭಾವನೆಗಳಿಂದಲೂ ಪ್ರಭಾವಿತಗೊಳ್ಳುತ್ತವೆ.
ನಮ್ಮ ವಿರುದ್ಧ ಯಾರು ಎಂಥಹ ಒಳ್ಳೆಯ ರೂಪದಿಂದ ಬಂದರೂ ಅದು ಸೋಗು ಇರಬಹುದೇ ಎಂದು ನಾವು ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳಬೇಕು. ಅಂತಹವರನ್ನು ನಿರ್ಧಾಕ್ಷಿಣ್ಯವಾಗಿ ಧಿಕ್ಕರಿಸಬೇಕು. ಇಲ್ಲದಿದ್ದರೆ ನಾವು ಘೋರ ಅವಘಡಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವುದನ್ನು ಶ್ರೀಕೃಷ್ಣ ಲೋಕಕ್ಕೆ ಕಲಿಸಿಕೊಟ್ಟ ಪಾಠ.
ಸುಂದರ ರೂಪದ ಹೆಣ್ಣು ಪೂತನಿ ಒಳ್ಳೆಯವಳು, ತಾಯಿಯ ಸ್ವರೂಪಿ ಎಂದು ಗೋಕುಲದ ಜನರು ಗ್ರಹಿಸಿರಬೇಕು. ಎಷ್ಟೇ ಗುಟ್ಟಾಗಿ ಬಂದರೂ ಆಕೆಯ ಬರವು ಯಾರಿಗೂ ಗೊತ್ತಾಗದೆ ಇರಲಿಕ್ಕಿಲ್ಲ. ಆದರೆ ಕೃಷ್ಣ ಮುಂದೆ ಒಂದು ದಿನ ಸ್ನಾನ ಮಾಡುವ ಹೆಣ್ಣುಗಳೊಂದಿಗೆ ಅವರ ಉಡುಪುಗಳನ್ನು ಕದ್ದು ಮಜಾ ಮಾಡುವ ಹಗುರ ಸ್ವಭಾವದವನೆಂದು ನಮಗೆ ಮೇಲ್ನೋಟಕ್ಕೆ ಅನ್ನಿಸಿದರೂ ವಾಸ್ತವಿಕವಾಗಿ ಈ ಸುಂದರ ಹೆಣ್ಣು ಪೂತನಿ ತನ್ನೆಡೆ ಬಂದಾಗ ಆತ ಕಣ್ಮುಚ್ಚಿ ಸುಮ್ಮನೆ ಅವಳ ಮೊಲೆಯುಣ್ಣಲಿಲ್ಲ. ಅಷ್ಟರ ಮಟ್ಟಿಗೆ ಆತ ಚಿಂತನಾಶೀಲ. ಶೈಶವಾವಸ್ಥೆಯಲ್ಲಿಯೇ ಅವನಲ್ಲಿ ಆ ಶಕ್ತಿ, ಪ್ರಜ್ಞೆ ಇತ್ತು ಎನ್ನುವುದು ಒಂದು ಭಾವನಾತ್ಮಕ ಕಲ್ಪನೆ. ಆದ್ದರಿಂದ ತನ್ನ ಸುತ್ತಲಿನ ಮಂದಿ ಆಕೆಯನ್ನು ಒಳ್ಳೆಯವಳೆಂದು ಗ್ರಹಿಸಿದರೂ ಶ್ರೀಕೃಷ್ಣ ಯಥಾವತ್ತಾಗಿ ಅವಳನ್ನು ಗ್ರಹಿಸಿದ. ಮೇಲ್ನೋಟಕ್ಕೆ ಒಳ್ಳೆಯವಳೆಂದು ಕಂಡರೂ ಅವಳನ್ನು ಕೊಲ್ಲಲೇಬೇಕೆಂದು ನಿರ್ಣಯಿಸಿ ಅವಳ ಮೊಲೆಯನ್ನೇ ಕಚ್ಚಿ ಕೊಂದುಬಿಟ್ಟ. ಆ ವಯಸ್ಸಿನಲ್ಲಿ, ಆ ಹೊತ್ತಿನಲ್ಲಿ ಅವನಲ್ಲಿದ್ದ ಅವನ ಆಯುಧವೆಂದರೆ ಅವನ ಹಲ್ಲುಗಳು ಮಾತ್ರ. ನಾವು ಮನಸ್ಸು ಮಾಡಿದರೆ, ನಮಗೆ
ಇಚ್ಚಾಶಕ್ತಿ ಇದ್ದರೆ ನಮ್ಮ ಶತ್ರುಗಳನ್ನು ಎದುರಿಸಲು ಹೊರಗಿನ ಆಯುಧ, ಶಕ್ತಿ ಬೇಕಾಗಿಲ್ಲ, ನಮ್ಮಲ್ಲಿ ಅಂತರ್ಗತವಾಗಿರುವ ಅನ್ಥಶಕ್ತಿಯೇ ಸಾಕು ಎನ್ನುವುದು ಶ್ರೀಕೃಷ್ಣ ನಮಗೆ ಹೇಳಿಕೊಟ್ಟ ಪಾಠ.
ಪೂತನಿ ಮತ್ತು ಕೃಷ್ಣನ ಪ್ರಸಂಗದಿಂದ ನಾವು ಕಲಿಯಬೇಕಾದ ಪಾಠವೆಂದರೆ ಶತ್ರುಗಳು ನಮ್ಮ ದೇಹದ ಹೊರಗೆ ಇದ್ದಾರೆ. ಹಾಗೆಯೆ ನಮ್ಮ ದೇಹದ ಮತ್ತು ಮನಸ್ಸಿನ ಒಳಗೂ ಇವೆ. ಅವುಗಳನ್ನು ಯಾವಾಗ, ಎಲ್ಲಿ, ಹೇಗೆ ಮಟ್ಟ ಹಾಕಬೇಕೋ ಹಾಗೆ ಮಟ್ಟಹಾಕಬೇಕು ಎನ್ನುವ ವಿಚಾರ ಸರ್ವಕಾಲಿಕ ಸತ್ಯ.

ತಾರೀಖು : 5 - 9 - 2015

ಶ್ರೀ ಕೃಷ್ಣಾಷ್ಟಮಿಯ ದಿನ .

Friday 4 September 2015

%&%&%& ನೀರಂಡೆ. ನೀ.... ರಂಡೆ %&%&%&


ನಾಗಮ್ಮ ಮತ್ತು ಹುಚ್ಚಮ್ಮ ಇಬ್ಬರೂ ಹಳ್ಳಿಯಲ್ಲಿ ಹಾಲು ಮಾರುವವರು. ಅಕ್ಕಪಕ್ಕದ ಹಳ್ಳಿಯವರು. ಬೇರೆ ಬೇರೆ ಊರಿಗೆ ಹೋಗಿ ದಿನನಿತ್ಯ ಬೆಳಿಗ್ಯೆ ಎಂಟು ಘಂಟೆಗೆ ಹಾಲು ಮಾರಲು ಹೊರಡುವವರು. ಇಬ್ಬರೂ ಸ್ನೇಹಿತೆಯರೇ. ಸಾಗುವಾಗ ನಮ್ಮೂರಿನ ಒಂದು ಜಾಗದಲ್ಲಿ ಸಂಧಿಸಿ ಸ್ವಲ್ಪ ಸುಖ - ಕಷ್ಟ ಮಾತನಾಡಿಕೊಂಡು ಮುಂದೆ ಸಾಗುವವರು.
ನಮ್ಮೂರು ಭತ್ತ ಬೆಳೆಯುವ ಪ್ರದೇಶ. ಪೈರು ತುಂಬಿ ಬೆಳೆದ ದಿನಗಳು. ಆ ಒಂದು ದಿನ ಎಂದಿನಂತೆ ಅದೇ ಜಾಗದಲ್ಲಿ ಅವರಿಬ್ಬರೂ ಸಂಧಿಸಿದರು. ನಾಗಮ್ಮ ಹುಚ್ಚಮ್ಮಳನ್ನು ಕಂಡವಳೇ ' ಅದೇನೆ ಹುಚ್ಚಿ, ಅದೆಂತ ಶಬ್ದ ಆಕೈತಲೇ 'ಎಂದು ಅವಳನ್ನು ಕೇಳಿದಳು.
' ನೀರಂಡೆ ' ಎಂದಳು ಹುಚ್ಚಮ್ಮ.
ನಾಗಮ್ಮನಿಗೆ ಸಿಟ್ಟು ನೆತ್ತಿಗೇರಿತು. ಏನೇ ..... ಸ್ವಲ್ಪ ಹಲ್ಲು ಹಿಡಿದು ಮಾತಾಡೆ. ಗಂಡ ಸತ್ತವಳು ನೀನು. ಸ್ವಕಾ ಏನೋ ಕೇಳಿದರೆ ನನಗೇ ರಂಡೆ ಹೇಳ್ತೀಯಾ ?. ನನ್ನ ಗಂಡ ಇನ್ನೂ ಬದುಕಿ ಐದಾನೆ ಕಣೇ. ನಾನಲ್ಲ. ನೀನು ರಂಡೆ. ಕುಟ್ಟಿಕಾಣಿಸಿಯೇ ಬಿಟ್ಟಳು ನಾಗಮ್ಮ.
ಇಬ್ಬರಿಗೂ ಹಾಲಿನ ಬಿಂದಿಗೆ ತಲೆಯ ಮೇಲೆಯೇ ಇದೆ. ಒಂದು ಬ್ಯಾಲನ್ಸ್ ನಿಂದಾಗಿ ಬಿಂದಿಗೆಯನ್ನು ಕೈಯಲ್ಲಿ ಹಿಡಿದುಕೊಳ್ಳದೆ ತಲೆಯ ಮೇಲೆ ಇಟ್ಟುಕೊಂಡು ಇಬ್ಬರೂ ಮತ್ತೊಬ್ಬರತ್ತ ಎರಡೂ ಕೈಗಳನ್ನು ಬೀಸಿಕೊಳ್ಳುತ್ತಾ ಟಗರು ಕಾಳಗಕ್ಕೆ ಶುರುವಿಟ್ಟುಕೊಂಡರು.
' ಹೌದೆ ನಾಗಿ ನನ್ನ ಗಂಡ ಸತ್ತು ಹೋಗವ್ನೆ.ಹಾಂಗೆ ಹೇಳಿ ನಾನು ಯಾರನ್ನು ಇಟ್ಟುಕೊಳ್ಳಕ್ಕೆ ಹೋಗ್ಲಿಲ್ಲ. ನೀನು ದೊಡ್ಡ ಗರತಿಯೇನೆ ?. ನಿಂದು ಊರ್ನಾಗೆಲ್ಲಾ ನಾರಿ [ ಗಬ್ಬು ] ಹೋಗೈತೆ. ನಾನಲ್ಲ. ನೀನು ರಂಡೆ. ಮುಚ್ಕ್ಯಾ ಸಾಕು '. ಹುಚ್ಚಮ್ಮನೂ ಬಿಡಲಿಲ್ಲ. ನಾಗಮ್ಮನಿಗೆ ಸರಿಯಾಗಿಯೇ ಕಾಸಿದಳು.
ನಾನಲ್ಲ ಕಣೆ ನೀನು ರಂಡೆ. --- ನಾಗಮ್ಮ.
ಯಾವಳೇ ನೀನು, ನೀನು ದೊಡ್ಡ ಶುಭಗ್ಯನೆ ?. ನೀನು ರಂಡೆ. --- ಹುಚ್ಚಮ್ಮ.
ಜಗಳ ತಾರಕ್ಕೇರಿ ಹೊಡೆದಾಟದವರೆಗೂ ಹೋದದ್ದು ಇಡೀ ಊರಿಗೆ ತಿಳಿಯಿತು. ಗ್ರಾಮದ ಹಿರಿಯರೆಲ್ಲಾ ಅಲ್ಲಿಗೆ ಬಂದರು. ಇಬ್ಬರನ್ನೂ ಸಮಾಧಾನಪಡಿಸಿ ಮೊದಲಿನಿಂದ ವಿಷಯವೇನೆಂದು ತಿಳಿದುಕೊಂಡರು. ಇಬ್ಬರ ಹೇಳಿಕೆಯೂ ತಪ್ಪಲ್ಲ. ಇಬ್ಬರೂ ಪರಸ್ಪರ ತಿಳಿದುಕೊಂಡಿದ್ದು ತಪ್ಪಾಗಿದೆ ಅಷ್ಟೆ ಎಂದು ಇಬ್ಬರಿಗೂ ಬುದ್ಧಿ ಹೇಳಿ ಸಮಜಾಯಿಸಿ ಮಾಡಿ ಅವರಿಬ್ಬರನ್ನೂ ಆ ಜಾಗದಿಂದ ಕಳಿಸಿಕೊಟ್ಟರು.
ವಿಷಯ ಇಷ್ಟೇ. ನಮ್ಮೂರಿನ ಜಮೀನಿನ ಭತ್ತದ ಬೆಳೆಗೆ ಕಾಡುಹಂದಿಯ ಕಾಟ ಜಾಸ್ತಿಯಾಗಿತ್ತು. ಭತ್ತದ ಗದ್ದೆಗೆ ರಾತ್ರಿಯೆಲ್ಲಾ ನುಗ್ಗಿ ಪೈರನ್ನು ತುಳಿದು ಹಾಳು ಮಾಡುತ್ತಿದ್ದುವು. ಅವುಗಳನ್ನು ಬೆದರಿಸಲಿಕ್ಕಾಗಿ ನೀರು - ಅಂಡೆಯನ್ನು ಆ ದಿನ ಬೆಳಿಗ್ಯೆಯಷ್ಟೇ ಯಾರೋ ಮಾಡಿದ್ದರು. ಅದನ್ನು ಆಡುಭಾಷೆಯಲ್ಲಿ " ನೀರಂಡೆ " ಎನ್ನುತ್ತಾರೆ. ಅದನ್ನೇ ಹುಚ್ಚಮ್ಮ ನಾಗಮ್ಮನಿಗೆ ಹೇಳಿದ್ದು. ಆದರೆ ನೀರಂಡೆಯ ಮಾಹಿತಿ ನಾಗಮ್ಮನಿಗೆ ಇರಲಿಲ್ಲ. ಇಬ್ಬರಲ್ಲೂ ಜಗಳ ಕುದುರಿದ್ದು ಇದೇ ಕಾರಣಕ್ಕೆ.
{ ನೀರಂಡೆ ಎಂದರೇನು ?. ಎರಡು ಮರದ ಗೂಟಕ್ಕೆ ಒಂದು ಮರದ ರಾಟಿಯನ್ನು ಕಟ್ಟುತ್ತಾರೆ. ಆ ರಾಟಿಯ ಮೇಲೆ ಸ್ವಲ್ಪ ಎತ್ತರದಿಂದ ಸಣ್ಣದಾಗಿ ನೀರು ಧುಮುಕುವಂತೆ ವ್ಯವಸ್ಥೆ ಮಾಡಿ ಹಗಲು ರಾತ್ರಿ ಅದು ತಿರುಗುತ್ತಿರುವಂತೆ ಸಜ್ಜು ಮಾಡಿರುತ್ತಾರೆ. ಅದರ ಎದುರು ಒಂದು ಮರದ ಗೂಟಕ್ಕೆ ಉದ್ದನೆಯ ಕೊಡೆಯ ಕಡ್ಡಿಯೊಂದನ್ನು ಕಟ್ಟಿರುತ್ತಾರೆ. ಅದು ಸ್ವಲ್ಪ flexible ಆಗಿರುತ್ತದೆ. ಆ ಕೊಡೆಯ ಕಡ್ಡಿಯ ಒಂದು ತುದಿ ರಾಟಿಗೆ ತಾಗಿಕೊಂಡಿರುತ್ತದೆ. ಅದರ ಮತ್ತೊಂದು ತುದಿ ತಾಗುವ ಹಾಗೆ ಕಡ್ಡಿಯ ಎದುರಿಗೆ ಖಾಲಿ ಡಬ್ಬವೊಂದನ್ನು ಇಟ್ಟಿರುತ್ತಾರೆ. ನೀರು ರಾಟಿಯ ಮೇಲೆ ಬಿದ್ದು ತಿರುಗಿದಂತೆಲ್ಲಾ ಅದು ತಿರುಗಿ ಕೊಡೆ ಕಡ್ಡಿಯ ಒಂದು ತುದಿಯನ್ನು ಎತ್ತಿ ಹಾಕುತ್ತಾ ಇರುತ್ತದೆ. ಆಗ ಕೊಡೆ ಕಡ್ಡಿಯ ಮತ್ತೊಂದು ತುದಿ ಸಹಜವಾಗಿ ಖಾಲಿ ಡಬ್ಬದ ಮೇಲೆ ಒತ್ತಡದಿಂದ ಬಿದ್ದು ಶಬ್ದವನ್ನು ಮಾಡುತ್ತದೆ. ಆ ಶಬ್ದವನ್ನು ಕಂಡ ಹಂದಿಗಳು ಹೊಲದ ಹತ್ತಿರ ಬಂದದ್ದು ಹೆದರಿಕೊಂಡು ಪಲಾಯನ ಮಾಡುತ್ತದೆ. ಬೆಳೆ ರಕ್ಷಣೆಯಾಗುತ್ತದೆ. ಇದು ರೈತರ ಪೃಕೃತಿದತ್ತವಾದ ಒಂದು ಸರಳ ಯಂತ್ರ. }.

@@@@ ರೈತ --- ದೇಶದ ಅನ್ನದಾತನ ಮೇರು- ಕೂರು. @@@@


~~~~~~ ಎಂ. ಗಣಪತಿ. ಕಾನುಗೋಡು.

ರೈತ ದೇಶದ ಬೆನ್ನೆಲುಬು. ಆತ ನಮಗೆ ಅನ್ನವನ್ನು ನೀಡುವ ಅನ್ನದಾತ. ಅವನನ್ನು ನಮ್ಮ ದೇಶದ ಹಿಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು " ಜೈ ಕಿಸಾನ್ " ಎಂದು ಶ್ಲಾಘಿಸಿದರು. " ಭೂಮಿಯನುಳುವ ನೇಗಿಲ ಯೋಗಿಯ ನೋಡಲ್ಲಿ " ಎಂದು ಅವನನ್ನು ಕವಿಗಳು ಕೊಂಡಾಡಿದರು. ಆತನನ್ನು ಯೋಗಿ ಎಂದು ಬಣ್ಣಿಸಿದ್ದೇಕೆ ಎಂದು ಎಲ್ಲರೂ ಗಮನಿಸಬೇಕು. " ಯೋಗಿ " ಎಂದರೆ ತನ್ನ ಸ್ವಾರ್ಥವನ್ನು ತ್ಯಾಗಮಾಡಿ ಸಮಾಜದ ಉದ್ಧಾರಕ್ಕಾಗಿ ತನ್ನ ಜೀವನವನ್ನು ವ್ಯಯಿಸುವವನು ಎಂದರ್ಥ. ನಮ್ಮ ದೇಶದ ರೈತ ಅದೇ ಅರ್ಥದಲ್ಲಿ ತನ್ನ ಜೀವವನ್ನು ಸವೆಸಿ ದೇಶದ ಜನತೆಗೆ ಅನ್ನ ನೀಡುತ್ತಿದ್ದಾನೆ ಎಂದರ್ಥ. ಏಕೆಂದರೆ ಇಂದು ಕೃಷಿ ಲಾಭದಾಯಕವಾಗಿಲ್ಲ. ಆದರೂ ಅವನು ತನ್ನ ಆರ್ಥಿಕ ಲಾಭದ ಧೃಷ್ಟಿಯಿಂದ ಹಳ್ಳಿಯನ್ನು, ತನ್ನ ಭೂಮಿಯನ್ನು ತೊರೆದು ನಗರಕ್ಕೆ ವಲಸೆ ಹೋಗಿಲ್ಲ. ಇಲ್ಲಿ ರೈತನ ಸ್ವಾರ್ಥರಹಿತ ಬದುಕು ನಮಗೆ ಗೋಚರಿಸುತ್ತದೆ.
ಆದರೆ ರೈತನ ವೈಯುಕ್ತಿಕ ಬದುಕು ಅತಿ ಕಷ್ಟದಿಂದ ಕೂಡಿದೆ. ಆತ ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬೆಳೆದು, ಸಾಲದಲ್ಲಿಯೇ ಮರಣ ಹೊಂದುತ್ತಾನೆ. ' ಈಗ ತನ್ನ ಕೈ ಸ್ವಲ್ಪ ಗಿಡ್ಡವಾಗಿದೆ, ಇನ್ನೊಂದು ನಾಲ್ಕು ವರ್ಷ ಕಳೆದರೆ ಅಡ್ಡಿಯಿಲ್ಲ, ತಾನು ಆರ್ಥಿಕವಾಗಿ ಸುಧಾರಿಸಿಕೊಳ್ಳುತ್ತೇನೆ ' ಎಂದು ಆತ ಹೇಳಿಕೊಳ್ಳುತ್ತಲೇ ಇರುತ್ತಾನೆ. ಅವನ ಅಜ್ಜ ಹೇಳಿದ ಮಾತು ಇದೇ. ಅವನ ಅಪ್ಪ ಹೇಳಿದ ಮಾತು ಇದೇ. ಈಗ ಅವನು ಹೇಳುತ್ತಿರುವುದು ಇದೇ. ಅವನ ಮಗ, ಮೊಮ್ಮಕ್ಕಳು ಹೇಳುವ ಮಾತು ನಾಳೆ, ನಾಡಿದ್ದು ಇದೇ.
ಅವನು ತನ್ನ ಕೃಷಿಗಾಗಿ ಮಾಡುವ ಹಣದ ವೆಚ್ಚ ಮತ್ತು ಅವನು ಬೆಳೆದ ಉತ್ಪನ್ನದಿಂದ ಬರುವ ಆದಾಯ ಇವೆರಡರ ನಡುವೆ ಇರುವ ಅಂತರ ಅತಿ ಕಡಿಮೆ. ಅವನ ಬೆಳೆಯ ಉತ್ಪಾದನೆಯ ಮತ್ತು ಬೆಳೆದ ಬೆಳೆಯ ಬೆಲೆಯ ಅನಿರ್ಧಿಷ್ಟತೆ. ತನ್ನ ಬೆಳೆಯನ್ನು ಮಾರಾಟಮಾಡುವಲ್ಲಿ ಅವನ ಅಸಹಾಯಕತೆ, ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪಿಡುಗು, ಕಾಡುಪ್ರಾಣಿಗಳು , ಹಕ್ಕಿ ಪಕ್ಷಿಗಳು , ಕಳ್ಳ ಕಾಕರು ಒಯ್ದು ಬಿಟ್ಟದ್ದು ಇವನ ಮನೆಯೊಳಗೆ ಎನ್ನುವ ಪರಿಸ್ಥಿತಿ, ಬೆಳೆಗೆ ತಗಲುವ ರೋಗರುಜಿನಗಳು, ಕೂಲಿಕಾರ ಅಭಾವದ ಸಮಸ್ಯೆ, ಸಾಲಬಾಧೆ... ಹೀಗೆ ಅನೇಕ ಸಮಸ್ಯೆಗಳು ರೈತನನ್ನು ಕಾಡುತ್ತಿವೆ.
ಸರ್ಕಾರ ಅವನನ್ನು ಸಾಕಬೇಕು. ಪ್ರಸ್ತುತ ಸರ್ಕಾರದ ಸವಲತ್ತುಗಳು ನಮ್ಮ ದೇಶದ ರೈತನಿಗೆ ಕಣ್ಣೊರೆಸುವ ತಂತ್ರವಾಗಿದೆ. ಕೆಲವು ಸಬ್ಸಿಡಿಗಳು ಕೇವಲ ಬೋಗಸ್. ಕೃಷಿ ಉಪಕರಣಗಳನ್ನು ಅದನ್ನು ತಯಾರಿಸಿದ ಮಾಲಿಕರಿಂದ ಮೂಲ ಬೆಲೆಗಿಂತ ದುಪ್ಪಟ್ಟು ಏರಿಸುವಂತೆ ಮಾಡಿಸಿ ಅದಕ್ಕೆ 50 % ಸಬ್ಸಿಡಿ ಎಂದು ಸರ್ಕಾರ ಸಾರುತ್ತದೆ. ಕೃಷಿ ಇಲಾಖೆಯಿಂದ ಅವನ್ನು ರೈತರಿಗೆ ವಿತರಿಸಲಾಗುತ್ತದೆ. ನಿಜವಾದ ಅರ್ಥದಲ್ಲಿ ರೈತನಿಗೆ ಉಪಕರಣ ದೊರಕುವುದು ಮೂಲ ಬೆಲೆಗೆ ವಿನಃ ಸಹಾಯಧನದ ಪ್ರಯೋಜನ ಅವನಿಗೆ ದೊರಕುವುದೇ ಇಲ್ಲ. ವಾಸ್ತವಿಕವಾಗಿ ಸಹಾಯಧನದ ಲಾಭ ದೊರಕುವುದು ಸರ್ಕಾರದಲ್ಲಿದ್ದವರಿಗೆ ಅಷ್ಟೇ. ಉಪಕರಣದ ಮಾಲಿಕನಿಗೆ ಸರ್ಕಾರದ ಜಾಹೀರಿನಿಂದ ತನ್ನ ಉತ್ಪಾದನೆಯ ವಸ್ತು ಹೇರಳವಾಗಿ ಮಾರಾಟವಾಗುತ್ತದೆ. ಅದು ಅವನಿಗೆ ಸಲ್ಲುವ ಪ್ರಯೋಜನ. ಇದರಂತೆ ಅನೇಕ ವಿಚಾರಗಳಲ್ಲಿ ರೈತನಿಗೆ ವಂಚನೆಯಾಗುತ್ತಿದೆ. ಕೆಲವೊಂದು ಆಮಿಷಗಳು ಗಗನ ಕುಸುಮವೂ ಆಗಿದೆ.
ರೈತನ ಇಂಥಹ ಕಠಿಣ ಪರಿಸ್ತಿತಿಯು ಒಂದು ದಿನ ಅವನನ್ನು ಸಮ್ಪೂರ್ಣವಾಗಿ ಈ ಕ್ಷೇತ್ರವನ್ನು ತ್ಯಜಿಸುವಂತೆ ಮಾಡಿ ನಗರಕ್ಕೆ ಗುಳೆ ಹೋಗುವಂತೆ ಮಾಡಿದರೂ ಆಶ್ಚರ್ಯವಿಲ್ಲ.
ತಾರೀಖು : 30 - 8 - 2015

$$$$$$ ಕಲಿಯುಗದ ಇಚ್ಚಾಮರಣಿ $$$$$$


~~~~ ಎಂ. ಗಣಪತಿ. ಕಾನುಗೋಡು.

ಹೌದು, ಇಲ್ಲೊಬ್ಬ ಇಚ್ಚಾಮರಣಿ ಇದ್ದಾರೆ. ಅವರೇ ದಿವಂಗತ ಶ್ರೀ ನಾರಾಯಣಪ್ಪ ಶಾನುಭೋಗ್. ಸಾಗರ ತಾಲ್ಲೂಕಿನ ನಂದಿತಳೆ ಹತ್ತಿರದ ಹೊಂಗೋಡು ಇವರ ಊರು. ಅವರ ಮರಣ ತಾರೀಖು 6 - 8 - 2015 . ವಯಸ್ಸು 94 ವರ್ಷ. ಅವರ ಹೆಂಡತಿ [ 84 ವರ್ಷ ]. ಮರಣ ಹೊಂದಿದ ಹನ್ನರಡನೆಯ ದಿನ ರಾತ್ರಿಯೇ ಇವರೂ ಮರಣ ಹೊಂದಿದರು.
ಶ್ರೀ ನಾರಾಯಣಪ್ಪನವರು ಸುಮಾರು ಹದಿನೈದು ವರ್ಷಗಳಿಂದ ತನ್ನ ಹೆಂಡತಿ ಸತ್ತ ಸ್ವಲ್ಪ ಕಾಲದಲ್ಲಿಯೇ ತಾನೂ ಮರಣ ಹೊಂದುತ್ತೇನೆ ಎಂದು ತಮ್ಮ ಮಕ್ಕಳೆದುರು ಹೇಳುತಿದ್ದರು. ಅವರದು ತುಂಬು ಕುಟುಂಬ. ಸಮಾಜದಲ್ಲಿ ಗೌರವಸ್ಥರು. ಸುಖೀ ಸಂಸಾರದವರು. ತೊಂಬತ್ತನಾಲ್ಕು ವಯಸ್ಸಿನವರೆಗೆ ತಮ್ಮ ಎಂಬತ್ತನಾಲ್ಕು ವಯಸ್ಸಿನ ಹೆಂಡತಿಯ ಜೊತೆಗೆ ತಮ್ಮ ಅವಿಭಕ್ತ ಕುಟುಂಬದಲ್ಲಿ ಬಾಳಿದವರು. ತಮ್ಮ ಮಕ್ಕಳ ನಡುವೆ ನಾಳೆ ಒಡುಕು ಬಾರದಿರಲಿ ಎಂದು ಕುಟುಂಬದೊಳಗಿನ ಎಲ್ಲಾ ವಿಷಯಗಳಲ್ಲೂ ಮುಂಜಾಗರೂಕತೆಯಿಂದ ತಕ್ಕ ವ್ಯವಸ್ಥೆ ಮಾಡಿದವರು.
ಕಳೆದ ಮೂರೂವರೆ ತಿಂಗಳಿನಿಂದ ಅವರ ಪತ್ನಿಗೆ ಆರೋಗ್ಯ ಹದಗೆಟ್ಟಿತು. ಇನ್ನೇನು ತನ್ನ ಹೆಂಡತಿ ಬದುಕಿ ಉಳಿಯುವುದಿಲ್ಲ ಎಂದು ಅವರಿಗೆ ಮನವರಿಕೆಯಾದಾಗ ಅವಳು ಸತ್ತ ಕೂಡಲೇ ತಾನೂ ಸಾಯುತ್ತೇನೆ, ಆದರೆ ಅವಳ ದಿನಕರ್ಮಕ್ಕೆ ತೊಂದರೆ ಕೊಡುವುದಿಲ್ಲ, ಅವುಗಳನ್ನು ಪೂರೈಸಿಕೊಂಡೇ ಹೋಗುತ್ತೇನೆ ಎಂದು ತಮ್ಮ ಮಕ್ಕಳೆಲ್ಲರೆದುರಿಗೆ ಹೇಳಿದರು. 
ಸುಮಾರು ಒಂದೂವರೆ ತಿಂಗಳ ಹಿಂದೆ ಅವರ ಹೆಂಡತಿ ಕಾಯಿಲೆಯಿಂದ ತೀರಿಕೊಂಡರು. ಆದರೆ ನಾರಾಯಣಪ್ಪನವರು ಘಟ್ಟಿಯಾಗಿಯೇ ಇದ್ದರು. ಅವರ ಅರೋಗ್ಯ ಸ್ವಲ್ಪವೂ ಕೆಟ್ಟಿರಲಿಲ್ಲ. ಹಾಗೆಂದು ತನ್ನ ಹೆಂಡತಿ ತೀರಿಹೋದಳೆಂದು ಅವರು ಬಹಿರಂಗವಾಗಿ ಅಳುಕಲೂ ಇಲ್ಲ.
ಪತ್ನಿಯ ಕರ್ಮಾಚರಣೆಯನ್ನು ತಾನೇ ಮುಂದೆ ನಿಂತು ಗಂಡುಮಕ್ಕಳಿಂದ ಶಾಸ್ತ್ರಬದ್ಧವಾಗಿಯೇ ನಡೆಸಿದರು. ಈ ಸೂತಕದ ದಿನಗಳಲ್ಲಿಯೇ ಮಧ್ಯೆ ಒಂದು ದಿನ ತನ್ನ ಮಕ್ಕಳನ್ನು ಮತ್ತು ಪಕ್ಕದ ಮನೆಯಲ್ಲಿರುವ ತನ್ನ ತಮ್ಮನ ಮಕ್ಕಳನ್ನು ತಮ್ಮ ಮನೆಯಲ್ಲಿ ಒಂದೆಡೆ ಕರೆದು ಸೇರಿಸಿದರು. ತಾನು ತನ್ನ ಪತ್ನಿಯ ಹನ್ನೆರಡು ಮುಗಿಸಿಕೊಂಡು ಸಾಯುತ್ತೇನೆ, ನೀವು ಯಾರೂ ದುಃಖಿಸಬಾರದು, ನಾನು ಸತ್ತಾಗ ಮನೆಯ ಇಂತಹ ಜಾಗದಲ್ಲಿ, ಈ ಕ್ರಮದಲ್ಲಿಯೇ ಭೂಷಣಕ್ಕೆ ತನ್ನ ಶವವನ್ನು ಹಾಕಬೇಕು, ತನ್ನ ಮುಂದಿನ ಕರ್ಮಾಂಗವನ್ನು ಹೀಗೆ ಹೀಗೆ ಮಾಡಬೇಕು ಎಂದು ಹೇಳಿದರು. ತನ್ನ ತಮ್ಮನ ಮಕ್ಕಳು ಮತ್ತು ತನ್ನ ಮಕ್ಕಳೊಂದಿಗೆ ' ನೀವು ಎಲ್ಲರೂ ಹಿತವಾಗಿರಬೇಕು, ಯಾವಾಗಲೂ ನಡುವೆ ಮನಸ್ತಾಪವನ್ನು ತಂದುಕೊಳ್ಳದೆ ಒಗ್ಗಟ್ಟಿನಿಂದ ಇರಬೇಕು, ಎಲ್ಲರೂ ಚೆನ್ನಾಗಿರಿ ಎಂದು ತಿಳಿವಳಿಕೆ ಹೇಳಿದರು.
ಹೆಂಡತಿಯ ಮರಣ ಕರ್ಮಾಚರಣೆಯ ಹನ್ನೊಂದನೇ ದಿನ ಆರಾಮವಾಗಿ ತಾವು ಜನಿವಾರ ಹಾಕಿಕೊಂಡು ಸೂತಕ ತೊಳೆದುಕೊಂಡಿದ್ದರು. ಚಟುವಟಿಕೆಯಿಂದ ಓಡಾಡಿಕೊಂಡು ಊಟ ಉಪಚಾರ ಮಾಡಿಕೊಂಡು ಎಂದಿನಂತೆ ಲವಲವಿಕೆಯಿಂದ ಇದ್ದರು. 
ಮರುದಿನ ಪತ್ನಿಯ ಮರಣದ ಹನ್ನೆರಡನೆಯ ದಿನ. ಅಂದು ಬೆಳಿಗ್ಯೆ ಕಷಾಯವನ್ನು ಮಾತ್ರ ಕುಡಿದರು. ನಂತರ ನಾಷ್ಟ ಮಾಡಲಿಲ್ಲ. ತನಗೆ ಸ್ವಲ್ಪ ವಿಶ್ರಾಂತಿ ಬೇಕು ಮಲಗಿಕೊಂಡಿರುತ್ತೇನೆ ಎಂದು ಮಲಗಿಕೊಂಡರು. ಮಧ್ಯಾಹ್ನ ಎರಡು ಘಂಟೆಯವರೆಗೂ ಮಲಗಿದ್ದರು. ನಡುವೆ ಯಾರು ಎಷ್ಟೇ ಒತ್ತಾಯ ಮಾಡಿದರೂ ಹೊಟ್ಟೆಗೆ ಏನನ್ನೂ ತೆಗೆದುಕೊಳ್ಳಲಿಲ್ಲ. ಹನ್ನೆರಡನೆಯ ವಿಧಿಯನ್ನು ಒಳಗೆ ವೈದಿಕರು ಸಾಗಿಸುತ್ತಿದ್ದಾರೆ. ಎರಡು ಘಂಟೆಯ ಹೊತ್ತಿಗೆ ಅಲ್ಲಿದ್ದ ಯಾರನ್ನೋ ತಮ್ಮ ಬಳಿ ಕರೆದಿದ್ದಾರೆ. ಈಗ ಘಂಟೆ ಎಷ್ಟಾಯಿತು ಎಂದು ಕೇಳಿದರು. ಅವರು ಎರಡು ಘಂಟೆ ಎಂದರು. ಭಟ್ಟರಿಗೆ ಊಟವಾಯಿತೇ ಎಂದು ಮರುಪ್ರಶ್ನೆ ಹಾಕಿದರು. ಇಲ್ಲ ಎಂದು ಅವರೆಂದರು. ಪುನಃ ಕಣ್ಮುಚ್ಚಿ ಮಲಗಿದರು.
ಅಂದರೆ ನಮ್ಮ ಗ್ರಹಿಕೆ ಪ್ರಕಾರ ಅವರು ತಮ್ಮ ಸಾವಿಗಾಗಿ ತಮ್ಮ ಪತ್ನಿಯ ಮರಣದ ಹನ್ನೆರಡನೆಯ ದಿನದ ಕರ್ಮಾಚರಣೆಯು ಮುಗಿಯುವುದನ್ನೇ ನಿರೀಕ್ಷಿಸುತ್ತಿದ್ದಾರೆ ಎಂದರ್ಥ. ಕರ್ಮಾಚರಣೆಯು ಮುಗಿದು ದಾನಮಾನಗಳೆಲ್ಲಾ ಮುಗಿದು ವೈದಿಕರೆಲ್ಲಾ ಮನೆಗೆ ಹೋದದ್ದೂ ಆಯಿತು. ಅಲ್ಲಿಯವರೆಗೆ ತಿನ್ನಲಿಕ್ಕೆ, ಕುಡಿಯಲಿಕ್ಕೆ ಯಾರು ಎಷ್ಟೇ ಒತ್ತಾಯಿಸಿದರೂ ಅದನ್ನು ಮುಟ್ಟಲಿಲ್ಲ. ಪ್ರತಿಯಾಗಿ, ಶ್ರೀಧರಸ್ವಾಮಿಗಳು [ ಸಾಗರ ತಾಲ್ಲೂಕಿನ ವರದಪುರದ ಬ್ರಹ್ಮೀಭೂತ ಸಂತರು ] ತನ್ನ ಎದುರಿಗೆ ನಿಂತಿದ್ದಾರೆ, ತಾನು ಈಗ ಅತ್ಯಾನಂದದ ಸ್ಥಿತಿಯಲ್ಲಿದ್ದೇನೆ, ನನಗೆ ವೃಥಾ ತೊಂದರೆಯನ್ನು ಕೊಡಬೇಡಿ ಎಂದು ಹೇಳುತಿದ್ದರು. ಹಾಗೆಯೇ ಕಣ್ಮುಚ್ಚಿ ಮಲಗಿಬಿಡುತ್ತಿದ್ದರು.
ಸಂಜೆ ಐದು ಘಂಟೆಗೆ ಹಠಾತ್ತನೆ ಅವರಿಗೆ ಪ್ರಜ್ಞೆ ತಪ್ಪಿತು. ಸುತ್ತಲಿದ್ದವರು, ಮಕ್ಕಳು ಅವರನ್ನು ಕೂಡಲೇ ಅಲ್ಲಿಂದ 15 ಕಿ. ಮೀ.ದೂರದ ಸಾಗರದ ವೈದ್ಯರಲ್ಲಿ ಕರೆದೊಯ್ದರು. ವೈದ್ಯರು ಅರ್ಧ ತಾಸಿನ ತಮ್ಮ ಪ್ರಯತ್ನದ ನಂತರ ಕೈಚೆಲ್ಲಿದರು. ಯಾವುದಕ್ಕೂ ನಾರಾಯಣಪ್ಪನವರಿಗೆ ಎಚ್ಚರವೇ ಇರಲಿಲ್ಲ. ಒಂದು 
ವಿಸ್ಮಯ ಎಂದರೆ ಆಸ್ಪತ್ರೆಯಲ್ಲಿ ಈ ನಡುವೆ ಒಂದು ಸಾರಿ ಅವರು ' ನನಗೆ ಮನೆಯಲ್ಲೇ ಸಾಯಲು ಅವಕಾಶ ಮಾಡಿ ' ಎಂದುಬಿಟ್ಟರು. ಅದರ ಹಿಂದೂ, ಮುಂದೂ ಮಾತು ಇರಲಿಲ್ಲ. ಕೂಡಲೇ ಮನೆಗೆ ಅವರನ್ನು ಮನೆಗೆ ತರಲಾಯಿತು. ಮನೆಗೆ ಬಂದ ಕೆಲವೇ ಘಂಟೆಗಳಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು.
ತನ್ನ ಮಕ್ಕಳಿಗೆ ಮುಂಚೆಯೇ ತಿಳಿಸಿದಂತೆ, ತನ್ನ ಇಚ್ಚೆಯಂತೆ ತನ್ನ ಪತ್ನಿ ಮರಣ ಹೊಂದಿದ ಹನ್ನೆರಡನೆ ದಿನದ ವಿಧಿಗಳನ್ನು ಪೂರೈಸಿಕೊಂಡು ಶ್ರೀ ನಾರಾಯಣಪ್ಪ ಶ್ಯಾನುಭೋಗ್ ಇವರು ಮರಣ ಹೊಂದಿದರು. ದ್ವಾಪರಯುಗದ ಭೀಷ್ಮನ ಇಚ್ಚಾಮರಣವನ್ನು ನೆನಪಿಗೆ ತಂದುಕೊಟ್ಟ ಮಹಾನುಭಾವರು. ' ಕಲಿಯುಗದ ಇಚ್ಚಾಮರಣಿ ' ಎಂಬ ಕೀರ್ತಿಗೆ ಪಾತ್ರರಾದರು. ದಿವಂಗತರಿಗೆ ಸಾಷ್ಟಾಂಗ ನಮಸ್ಕಾರ.
ಮಾಹಿತಿಯ ಕೃಪೆ : ಶ್ರೀಮತಿ ಮಧುರಾ ಮತ್ತು ಶ್ರೀ ದೇವಪ್ಪ ಪಡವಗೋಡು. ಸಾಗರ ತಾಲ್ಲೂಕು. ಮೃತರ ಮಗಳು ಮತ್ತು ಅಳಿಯ.
ತಾರೀಖು : 3 - 9 - 2015

Friday 24 July 2015

@@@@@ ಸೊಂಟದವರೆಗೂ ಸೀರೆಯನ್ನೆತ್ತಿಕೊಂಡ ಗಂಗಾ @@@@@


~~~~ ಒಂದು ನಡೆದ ಪ್ರಸಂಗ.
```````` ಎಂ. ಗಣಪತಿ ಕಾನುಗೋಡು.
ಹಳ್ಳಿಗಳಲ್ಲಿ ರಾತ್ರಿಯಿಂದ ಬೆಳಗಿನವರೆಗೂ ಜನಪದರ ಆಟ ಸಂಗ್ಯಾ -- ಬಾಳ್ಯಾ ನಡೆಯುತ್ತಿದ್ದ ಕಾಲ. ಆ ಆಟದಲ್ಲಿ ಚೆನ್ನಾಗಿ ಪಾತ್ರ ನಿರ್ವಹಿಸಿದವರಿಗೆ ಮೆಡ್ಲು [ ಮೆಡಲ್ ] ಕೊಡುವ ವಾಡಿಕೆ ಇತ್ತು. ಮೆಡಲ್ ಎಂದರೆ ಒಂದು ಖನಿಜದ ಪದಕ. ಅದು ಆ ಆಟದ ಮೇಳದಲ್ಲಿಯೇ ಖರೀದಿಗೆ ಸಿಗುತ್ತಿತ್ತು. ಕೊಡಲಿಚ್ಚಿಸುವವರು ಅದನ್ನು ಮೇಳದಿಂದ ಖರೀದಿಸಿ ರಂಗದ ಮೇಲೆ ಬಂದು ಆಟದ ಮಧ್ಯದಲ್ಲಿಯೇ ಪಾತ್ರಧಾರಿಯನ್ನು ತಡೆದು ನಿಲ್ಲಿಸಿ ಹೊಗಳಿ ಅವನಿಗೆ ಅದನ್ನು ಕೊಡುತ್ತಿದ್ದರು. ಅದನ್ನು ಧನ್ಯತೆಯಿಂದ ಸ್ವೀಕರಿಸಿದ ಕಲಾವಿದ " ಇದನ್ನು ಕೊಟ್ಟವರಿಗೆ ನನ್ನ ವಂದನೆಗಳು " ಎಂದು ಅವರಿಗೆ ಅಲ್ಲಿಯೇ ವಂದನೆಯನ್ನು ಹೇಳುತ್ತಿದ್ದ. ನಂತರ ಆ ಮೆಡಲನ್ನು ತಾತ್ಕಾಲಿಕವಾಗಿ ಭಾಗವತನ ಕೈಯಲ್ಲಿ ಕೊಟ್ಟು ಪುನಃ ತನ್ನ ಪಾತ್ರದ ಅಭಿನಯವನ್ನು ತಕ್ಷಣ ಪ್ರಾರಂಭಿಸುತ್ತಿದ್ದ. ಮರುದಿನ ಬೆಳಿಗ್ಯೆ ಭಾಗವತನಿಂದ ಮರಳಿ ಆ ಮೆಡಲನ್ನು ಪಡೆದುಕೊಂಡು ಪುನಃ ಮೇಳಕ್ಕೆ ಕೊಟ್ಟು ನಗದು ಮಾಡಿಕೊಳ್ಳುವುದು ರೂಢಿ.
ನಮ್ಮ ಊರಿನಲ್ಲಿ ಹೀಗೆ ಒಂದು ದಿನ ಸಂಗ್ಯಾ -- ಬಾಳ್ಯಾ ಆಟ ನಡೆಯಿತು. ಮೇಳ ನಮ್ಮ ಊರಿನ ಜನಪದರದ್ದೇ. ಆ ಪ್ರಸಂಗದಲ್ಲಿ ' ಗಂಗಾ ' ಎನ್ನುವ ಸ್ತ್ರೀಯು ಕಥಾನಾಯಕಿ. ನಮ್ಮ ಊರಿನ ಈಸ್ರಹುಡುಗ ಆ 'ಗಂಗಾ' ಳ ಪಾತ್ರವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದ. ಎಲ್ಲಾ ಆಟದಲ್ಲಿಯೂ ಆ ಪಾತ್ರವನ್ನು ಆತ ಖಾಯಂ ಆಗಿ ಮಾಡುತ್ತಿದ್ದ. ಎಲ್ಲೇ ಆಟವಾದರೂ ಅವನಿಗೆ 20 ರಿಂದ 30 ಮೆಡ್ಲು ಒಂದು ರಾತ್ರಿಯಲ್ಲಿ ದಕ್ಕುತ್ತಿತ್ತು.
ಸರಿ, ಅಂದು ನಮ್ಮ ಊರಿನಲ್ಲಿಯೂ ಆತ ಗಂಗೆಯ ಪಾತ್ರವನ್ನು ಅತಿ ಮನಮೋಹಕವಾಗಿ ನಿರ್ವಹಿಸಿದ. ಅದಕ್ಕೆ ಮೆಚ್ಚಿದ ಪ್ರೇಕ್ಷಕರೊಬ್ಬರು ರಂಗದ ಮೇಲೆ ಬಂದು ' ಗಂಗಾಳ ಪಾತ್ರದಿಂದ ನಮ್ಮೆಲ್ಲರ ಮನಸೂರೆಗೈದ ಈಸ್ರಹುಡುಗನಿಗೆ ಈ ಮೆಡಲನ್ನು ಕೊಡುತ್ತೇನೆ , ಸ್ವೀಕರಿಸಬೇಕು " ಎಂದರು. ಅದನ್ನು ಸ್ವೀಕರಿಸಿದ ಈಸ್ರಹುಡುಗ ಅವರಿಗೆ ಪದ್ಧತಿಯ ಪ್ರಕಾರ ವಂದನೆಯನ್ನು ಹೇಳಿದ. ಆ ಮೆಡಲನ್ನು ಎಂದಿನಂತೆ ಭಾಗವತನಿಗೆ ಕೊಡಲು ಅವನತ್ತ ತಿರುಗಿದ.
ಆದರೆ ಅಂದು ಬೆಳಿಗ್ಯೆ ಆ ಭಾಗವತನಿಗೂ ಅವನಿಗೂ ಏತಕ್ಕೋ ಹಣಾಹಣಿ ಜಗಳ ನಡೆದಿತ್ತು. ಅದು ಈಗ ಈಸ್ರಹುಡುಗನಿಗೆ ನೆನಪಾಗಿಹೋಯಿತು. ಮೆಡಲನ್ನು ಭಾಗವತನಿಗೆ ಕೊಟ್ಟರೆ ಮರುದಿನ ಬೆಳಿಗ್ಯೆ ಮರಳಿ ತನಗೆ ಕೊಡುತ್ತಾನೋ ಇಲ್ಲವೋ ಎನ್ನುವ ಸಂದೇಹ ಅವನಿಗೆ ಕಾಡಿತು. ಖಂಡಿತಾ ಕೊಡುವುದಿಲ್ಲ ಎನ್ನುವ ನಿರ್ಣಯಕ್ಕೆ ಬಂದೂ ಆಯಿತು. ಅರ್ರೇ.... ಏನು ಮಾಡುವುದು ಸಿಕ್ಕು ಬಿದ್ದೆನಲ್ಲ ಎಂದು ಒಂದು ನಿಮಿಷ ಚಿಂತೆಗೀಡಾದ. ತಟ್ಟನೆ ಅವನಿಗೆ ಒಂದು ಉಪಾಯ ಹೊಳೆಯಿತು. ತಾನು ಒಳಗೆ ಧರಿಸಿರುವ ಅಂಡರ್ವೇರ್ ಅವನಿಗೆ ನೆನಪಾಯಿತು. ಮೆಡಲನ್ನು ಕಾಯ್ದುಕೊಳ್ಳಬೇಕೆಂಬ ಅಮಲಿನಲ್ಲಿ ತಾನು ಈಗ ಸ್ತ್ರೀ ಪಾತ್ರದಲ್ಲಿ ರಂಗದ ಮೇಲಿದ್ದೇನೆಂಬ ಸಾಂದರ್ಭಿಕ ಜ್ಞಾನವನ್ನು ಮರೆತುಬಿಟ್ಟ. ತಡಮಾಡಲೇ ಇಲ್ಲ.
ಈಸ್ರಹುಡುಗ ನಡು ರಂಗಸ್ಥಳದಲ್ಲಿಯೇ ಅಂಗಾತನೆ ಸೊಂಟದವರೆಗೂ ಪೂರ್ತಿ ಸೀರೆಯನ್ನೆತ್ತಿಕೊಂಡು ತನ್ನ ಅಂಡರ್ವೇರ್ ಜೇಬಿಗೆ ಆ ಮೆಡಲನ್ನು ಸೇರಿಸಿಯೇಬಿಟ್ಟ.


@@@@@ ಶಿವಧನಸ್ಸನ್ನು ಮುರಿದೇಬಿಟ್ಟ @@@@@

~~~~ ನಡೆದ ಘಟನೆ .
`````` ಎಂ. ಗಣಪತಿ. ಕಾನುಗೋಡು.
ನಮ್ಮ ಊರಿನಲ್ಲಿ ಬಹಳಕಾಲದಿಂದ ಪ್ರತಿವರ್ಷವೂ ಒಂದು ನಾಟಕವನ್ನು ಆಡುವುದು ರೂಢಿ. ಬಹಳ ವರ್ಷಗಳ ಹಿಂದೆ ಪೌರಾಣಿಕ ನಾಟಕವನ್ನೇ ಆಡುತ್ತಿದ್ದೆವು.
ನಮ್ಮ ತಂಡದಲ್ಲಿ ಒಬ್ಬನಿದ್ದ. ರಾಮಣ್ಣನೆಂದು ಅವನ ಹೆಸರು. ಅವ ಸುಂದರಕಾಯ. ಸುಂದರವದನ. ಬಲು ಚುರುಕಿನವ. ಆದರೆ ಆತ ಉಗ್ಗ. ಮಾತನ್ನಾಡುವಾಗ ಬಹಳ ತಡವರಿಸುತ್ತಿದ್ದ. ಹಾಗಾಗಿ ಅವನಿಗೆ ನಮ್ಮ ತಂಡದ ಯಜಮಾನ ನಾಟಕದಲ್ಲಿ ಪಾತ್ರವನ್ನು ಕೊಡುತ್ತಿರಲಿಲ್ಲ. ಆದರೆ ಪಾತ್ರ ಮಾಡುವಂಥಹ ನಮಗೆ ಸಿಗುವಂಥ ಎಲ್ಲಾ ಗೌರವಾದರಗಳು ಅವನಿಗೆ ಸಿಗುತ್ತಿದ್ದುವು. ಕಾರಣ, ಊರಿನ ರಿವಾಜಿನ ಪ್ರಕಾರ ಆತ ನಾಟಕದಲ್ಲಿ ಪರದೆ ಎಳೆಯುವುದು, ಮೇಕ್ ಅಪ್ ಗೆ ಎಲ್ಲಾ ಸಿದ್ಧತೆ ಮಾಡಿಕೊಡುವುದು, ಕಲಾವಿದರಿಗೆ ಎಲ್ಲಾ ರೀತಿಯ ಸಹಕಾರವನ್ನು ಮಾಡಿಕೊಡುವುದು ಹೀಗೆ ಎಲ್ಲಾ ರೀತಿಯಲ್ಲಿ ನಮಗೆ ಹೊಂದಿಕೊಂಡಿದ್ದ. ಅಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ನಮ್ಮೊಡನೆ ಇದ್ದ.
ಹೀಗಿದ್ದವ ಒಂದು ವರುಷದ ನಾಟಕ ಪಾತ್ರವನ್ನು ಹಂಚುವ ಪ್ರಾರಂಭದಲ್ಲಿ ಇದ್ದಕಿದ್ದಂತೆ ಕ್ಯಾತೆಯನ್ನು ತೆಗೆದ. " ಅಲ್ರಯ್ಯಾ.. ಇಷ್ಟು ವರುಷವೂ ಬರೇ ಪರದೆ ಎಳೆಯುವುದು, ಸಾಮಾನು ಸೇರಿಸುವುದೇ ನನ್ನ ಹಣೆಬರಹವಾಗಿಹೋಯಿತು. ಈ ವರ್ಷ ಮಾತ್ರ ತನಗೆ ಪಾತ್ರವೊಂದನ್ನು ಕೊಡಲೇಬೇಕೆಂದು ದುಂಬಾಲು ಬಿದ್ದು ಹಠಕ್ಕಿಟ್ಟುಕೊಂಡ. ಆದರೆ ಆತ ಉಗ್ಗ, ಅದಕ್ಕಾಗಿಯೇ ಆತನಿಗೆ ಪಾತ್ರವನ್ನು ಕೊಟ್ಟಿಲ್ಲ ಎಂಬುದನ್ನು ರಾಮಣ್ಣನಿಗೆ ಯಾರೂ ಪತ್ತೆ ಕೊಟ್ಟಿರಲಿಲ್ಲ. ತಾನು ಸುಂದರಕಾಯ, ವದನ, ಆಜಾನುಬಾಹು ಎಂಬುದಷ್ಟೇ ಅವನ ಅಹಮಿಕೆ.
ಸರಿ, ನಮ್ಮ ತಂಡದ ಯಜಮಾನ ಅವನ ಹಠಕ್ಕೆ ಮನಸೋತು ಅವನಿಗೆ ಈ ವರ್ಷದ ನಾಟಕದಲ್ಲಿ ಪಾತ್ರವೊಂದನ್ನು ಕೊಟ್ಟ. ನಾಟಕ ' ಸೀತಾಸ್ವಯಂವರ '. ಅದರಲ್ಲಿ ರಾವಣನ ಪಾತ್ರ ನಿನ್ನದೆಂದು ಹೇಳಿದ್ದಾಯಿತು. ಆತ ಯೋಚನೆ ಮಾಡಿದ. ರಾಮಾಯಣದಲ್ಲಿ ರಾಮನನ್ನು ಬಿಟ್ಟರೆ ರಾವಣನದೇ ದೊಡ್ಡ ಪಾತ್ರ. ಬಾಪುರೆ... ಹೇಗೆ ನನ್ನ ಛಾಪು... ಎಂದು ತನ್ನಲ್ಲಿಯೇ ತಾನು ಭೀಗಿಕೊಂಡ.
ಆದರೆ ಅವನ ಪಾತ್ರಕ್ಕೆ ಮಾತೇ ಇರಲಿಲ್ಲ. ಸೀತಾಸ್ವಯಂವರದ ದೃಶ್ಯದಲ್ಲಿ ಆತ ಶಿವಧನಸ್ಸನ್ನು ಒಮ್ಮೆ ಎತ್ತಿ ಅದರ ಹಗ್ಗವನ್ನು ಸ್ವಲ್ಪವಷ್ಟೇ ಎಳೆದು ಅದರ ಹೆದೆಯನ್ನೇರಿಸಲು ಸಾಧ್ಯವಿಲ್ಲವೆಂದು ಹೇಳಿ ತನ್ನ ಆಸನಕ್ಕೆ ಮರಳುವುದಷ್ಟೇ ಅವನ ಪಾತ್ರದ ಕೆಲಸ. ಅದು ಅವನಿಗೆ ಗೊತ್ತಾದದ್ದು ಬಹಳ ದಿನಗಳ ನಂತರವಷ್ಟೇ. ಹೇಗೂ ಒಪ್ಪಿಕೊಂಡಾಗಿದೆ, ಅದನ್ನೇ ಬಹಳ ಕಲಾತ್ಮಕವಾಗಿ ತೋರಿಸುತ್ತೇನೆ ಎಂದು ಎಲ್ಲರ ಎದುರಿಗೆ ಕೊಚ್ಚಿಕೊಂಡ.
ನಾಟಕ ಪ್ರಾರಂಭವಾಗಿದೆ. ಸ್ವಯಂವರದ್ದೇ ದೃಶ್ಯ ಎದುರಿಗೆ ಬಂದಿದೆ. ಸ್ವಯಂವರಕ್ಕೆಂದು ರಾಜ ಮಹಾರಾಜರೆಲ್ಲಾ ಬಂದು ಕುಳಿತಿದ್ದಾರೆ. ಅದರಂತೆ ರಾವಣನಪಾತ್ರ ಮಾಡಿಕೊಂಡ ರಾಮಣ್ಣನೂ ಒಬ್ಬ. ಸೀತೆ ಹಾರ ಹಿಡಿದು ನಿಂತಿದ್ದಾಳೆ. ' ಯಾರು ಶಿವಧನಸ್ಸಿಗೆ ಹೆದೆಯನ್ನು ಏರಿಸುತ್ತಾರೋ ಅವಳಿಗೆ ನನ್ನ ಮಗಳನ್ನು ವಿವಾಹ ಮಾಡಿಕೊಡುತ್ತೇನೆ ' ಎಂದು ಜನಕ ಮಹಾರಾಜ ಸಾರಿದ. ಅದರಂತೆ ಎಲ್ಲಾ ರಾಜರೂ ಒಬ್ಬೊಬ್ಬರಾಗಿಯೇ ಎದ್ದು ಬಂದು ವ್ಯರ್ಥ ಪ್ರಯತ್ನವನ್ನು ಮಾಡಿ ತಮ್ಮ ಆಸಕ್ಕೆ ಮರಳಿದರು. ಉಳಿದದ್ದು ರಾವಣ. ನಂತರ ಶ್ರೀರಾಮ..
ಈಗ ರಾಮಣ್ಣನ ರಾವಣನ ಸರದಿ ಬಂತು. ತನಗೆ ಮಾತೇ ಇಲ್ಲದ ಪಾತ್ರವನ್ನು ಕೊಟ್ಟು ಮೋಸ ಮಾಡಿದರೂ ಅದಕ್ಕೇ ತುಂಬು ಅಭಿನಯದ ಜೀವವನ್ನು ತುಂಬಿ ಕಿಕ್ಕಿರಿದ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೇನೆ ಎಂದು ರಾಮಣ್ಣ ತನ್ನ ಗೆಳೆಯರೊಂದಿಗೆ ಬೆಟ್ಟು ಕಟ್ಟಿದ್ದ. ತನ್ನ ಸಮಯ ಬಂದಕೂಡಲೆ ತಾನು ಕುಳಿತ ಸಿಂಹಾಸನದ ಮೇಲೆಯೇ ಹಲವು ಭಂಗಿಯ ಕೈಕರಣ, ದೃಷ್ಟಿ ಅಭಿನಯ, ಮುಖಾಭಿನಯ ಮಾಡಿ ಮೇಲೇಳಲಿಕ್ಕೇ ಹತ್ತು ನಿಮಿಷ ಮಾಡಿದ. ಇದು ಪ್ರೇಕ್ಷಕರಿಗೆ ತುಂಬಾ ಮೋಜೆನಿಸಿತು. ಪ್ರೇಕ್ಷಕರೆಲ್ಲರೂ ನಮ್ಮ ಊರಿನವರೇ ಆಗಿದ್ದರಿಂದ ರಾವಣ ಪಾತ್ರಧಾರಿ ರಾಮಣ್ಣನೆನ್ದು ಎಲ್ಲರಿಗೂ ಗೊತ್ತಿತ್ತು. ನಮ್ಮದು ನೂರಿನ್ನೂರು ಮನೆಗಳ ಊರು. ಆದ್ದರಿಂದ ಬಹಳ ಮಂದಿ ನಾಟಕ ನೋಡಲು ಸೇರಿದ್ದರು. ರಾಮಣ್ಣನ ಅದ್ಭುತ ಅಭಿನಯವನ್ನು ಕಂಡು ನೋಡಿ ಖುಷಿಗೊಂಡ ಪ್ರೇಕ್ಷಕರು " ಹೋ..... ಹೋ .... ರಾಮಣ್ಣನ್ನ ನೋಡ್ರಲೇ ಏನು ಮಜಾ ಮಾಡ್ಡ್ತಾ ಇದ್ದಾನೆ..... ಹೋಯ್...ಹೋಯ್.... " ಎಂದು ಚಪ್ಪಾಳೆ, ಕೇಕೆ, ಸೀಟಿ ಹಾಕಿದರು. ರಾಮಣ್ಣ ಉಮೇದಿ ಇನ್ನೂ ಉಲ್ಬಣಗೊಂಡಿತು. ಬಡಬಡನೆ ಸೀದಾ ಎದ್ದು ಓಡಿ ಶಿವಧನಸ್ಸನ್ನು ಎತ್ತಿದ. ಎತ್ತಿದವನೇ ಪ್ರೇಕ್ಷಕರು ಕೊಟ್ಟ ಉಮೇದಿಯಿಂದ ಧನಸ್ಸಿನ ಹೆದೆಯನ್ನು [ ಹಗ್ಗವನ್ನು ] ಜೋರಾಗಿ ಎಳೆದೇಬಿಟ್ಟ. ಆ ಶಿವಧನಸ್ಸು ಮುಂದೆ ಶ್ರೀರಾಮನ ಪಾತ್ರದವನು ಹೆದೆಯೇರಿಸುವಾಗ ಸುಲಭವಾಗಿ ಮುರಿಯುವಂತೆ ಹಗರದಬ್ಬೆಗೆ ಬಂಗಾರದ ಬೇಗಡಿಯನ್ನು ಸುತ್ತಿ ತಯಾರಿಸಿದ್ದಾಗಿತ್ತು. ರಾವಣನ ಪಾತ್ರ ಮಾಡಿದ ರಾಮಣ್ಣ ಹೀಗೆ ರಭಸದಿಂದ ಎಳೆದ ಕೂಡಲೇ ' ಶಿವಧನಸ್ಸು ' ಮುರಿದೇ ಹೋಯಿತು.
ಸೇರಿದ ಪ್ರೇಕ್ಷಕರು ಮತ್ತೆ ಹೋ......ಹೋ........ಹೊಯ್........... ಎಂದು ಒರಲಿದರು. ' ರಾವಣನೆ ಶಿವಧನಸ್ಸನ್ನು ಮುರಿದೇಬಿಟ್ಟ ' ಎಂದು ಹುಯ್ಯೋ ಎಂದರು.

Tuesday 9 June 2015

@@@@@ ಜ್ಯೋತಿಷ್ಯ @@@@@


ಜೋತಿಷ್ಯ ಹೇಳುವವರು ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
[ ಇದನ್ನು ತಮಾಷೆಯಾಗಿ ಎಲ್ಲರೂ ತೆಗೆದುಕೊಳ್ಳಬೇಕು ]
++ ಒಬ್ಬ ವಿವಾಹಿತನು ಸ್ವಲ್ಪ ಕಾಲದಲ್ಲಿಯೇ ಸಾಯುವ ಯೋಗ ಕಂಡುಬಂದರೆ ನೀನು ಸಧ್ಯ ಸಾಯುತ್ತೀಯೆ ಎಂದು ಹೇಳಬಾರದು. ಅದರ ಬದಲು ನಿನ್ನ ಹೆಂಡತಿಯ ಮಾಂಗಲ್ಯಯೋಗಕ್ಕೆ ಮಾರಕವಿದೆ, ಅದಕ್ಕಾಗಿ ಕೂಡಲೇ ಶಾಂತಿಯನ್ನು ಮಾಡಿಸಬೇಕು ಎಂದು ಹೇಳಬೇಕು. ಇದರಿಂದ ಇವನಿಗೂ ಕಾಸು ಆಗುತ್ತದೆ. ನಾಲ್ಕು ಮಂದಿ ವೈದಿಕರಿಗೂ ಕೆಲಸ ಸಿಕ್ಕುತ್ತದೆ. ಆಜುಬಾಜಿನವರಿಗೂ ಪಾಯಸದ ಊಟ ದೊರೆಯುತ್ತದೆ.
++ ಕೆಲವರಿಗೆ ವಿವಾಹಯೋಗ ಇರುವುದಿಲ್ಲ. ಆದರೆ ಮಕ್ಕಳಾಗುವ ಯೋಗ ಇರುತ್ತದೆ. ಅದಕ್ಕೆ ನಿನಗೆ ವಿವಾಹಯೋಗವಿಲ್ಲದಿದ್ದರೂ ಮಕ್ಕಳಾಗುತ್ತದೆ ಎಂದು ಎದುರಾಎದುರು ಹೇಳಿದರೆ ಜಾತಕನಿಂದ ತಪರಾಕಿ ತಿನ್ನಬೇಕಾದೀತು. ಅದರ ಬದಲು ನಿಮ್ಮ ಸುತಮುತ್ತಲ ಊರಿನಲ್ಲಿ ನಿಮ್ಮನ್ನು ತಂದೆಯೆಂದೇ ಪರಿಗಣಿಸುವ ಹಲವು ಮಂದಿ ನಿಮಗೆ ಇರುತ್ತಾರೆ ಎಂದು ಹೇಳಬೇಕು.
++ ಆಶ್ಲೇಷ ನಕ್ಷತ್ರದ ಕನ್ಯೆಯಿಂದ ಅತ್ತೆಗೆ ಕೇಡು ಎಂಬುದು ಕೆಲವರ ಅಭಿಪ್ರಾಯ. ಅಂಥಹ ಸಂದರ್ಭದಲ್ಲಿ ಸೊಸೆಯಿಂದ ಬರುವ ಎಂಥಹ ಬಲಿಷ್ಠ ಕೇಡನ್ನೂ ಹೊಡೆದೋಡಿಸುವನ್ಥಹ ಸ್ವಭಾವನ್ನು ತೋರಿಸುವ ಜಾತಕವಿರುವ ಅತ್ತೆಯನ್ನೇ ಕನ್ಯೆಗೆ ತಳುಕೆ ಹಾಕಬೇಕು.
++ ತೀರಾ ಜೋರಿನ ಸ್ವಭಾವದ ಹೆಣ್ಣಿಗೆ ಅತಿ ಸೌಮ್ಯ ಸ್ವಭಾವದ ಗಂಡನ್ನು, ಅದೇ ಸ್ವಭಾವದ ಗಂಡಿಗೆ ಅತಿ ಸೌಮ್ಯ ಸ್ವಭಾವದ ಹೆಣ್ಣನ್ನು ತಳಿಕೆ ಹಾಕಬೇಕು. ಇಲ್ಲದಿದರೆ ಬಾಯಿಮುಚ್ಚಿಕೊಳ್ಳುವ ಹಂತಕ್ಕೆ ಬರಲು ಅಂತಹ ಹೆಂಡತಿಗೆ ಅಥವಾ ಗಂಡನಿಗೆ ಸ್ವಲ್ಪ ತ್ರಾಸು ಆಗುತ್ತದೆ.



ಓಹೋಯ್.... ಹೆಂಡತಿಯ ಕೈಯ್ಯಲ್ಲಿರುವ ಹಣದ ಸೆಲೆಯ ಬಲ್ಲಿರೇನೈ ?

                                                                                   ~~~~ ಎಂ. ಗಣಪತಿ ಕಾನುಗೋಡು.
[ ಇದನ್ನು ತಮಾಷೆಯಾಗಿ ತೆಗೆದುಕೊಳ್ಳಬೇಕು ]

ನಮ್ಮ ಹೆಂಡತಿಯ ಟ್ರೆಜರಿಯಲ್ಲಿರುವ ಹಣದ ಮೊತ್ತದ ಗುಟ್ಟನ್ನು ಯಾರಾದರೂ ತಾವು ಕಂಡುಹಿಡಿದಿರುವಿರಾ ?. ಹೌದು ಎಂದರೆ ನೀವು ಮೋಸಹೋಗಿದ್ದೀರಿ ಎಂದೇ ಅರ್ಥ, ಅನುಮಾನವೇ ಇಲ್ಲ. ಹೆಂಗಸರು ಯಾರೂ ತಮ್ಮಲ್ಲಿ ಕೂಡಿಟ್ಟುಕೊಂಡಿರುವ ಹಣದ ಗಂಟಿನ ಗುಟ್ಟನ್ನು ತಮ್ಮ ಗಂಡನಿಗೆ ಹೊರಹಾಕುವುದಿಲ್ಲ. ಹಾಗೆಂದು ಅದು ಅವರು ನಮಗೆ ಮಾಡುವ ವಂಚನೆ ಅಲ್ಲ. ಗೃಹಿಣಿಯಾಗಿದ್ದರೆ ಅವರ ಖರ್ಚಿಗೆಂದು ಕೊಟ್ಟ ಹಣದಲ್ಲಿಯೇ ಉಳಿಸಿಕೊಂಡು, ಯಾವುದಾದರೂ ಹರಕತ್ತಿನ ಸಂದರ್ಭಕ್ಕೆ ತಮಗೆ ಒದಗುತ್ತದೆಯೆಂದು ಅದನ್ನು ಒಳಗೆ ಕೂಡಿಕೊಂಡಿಟ್ಟಿರುತ್ತಾರೆ. ಮೊತ್ತದ ಗುಟ್ಟನ್ನು ಹೊರಹಾಕುವ ಪರಿ ಹೇಗೆ ಬಲ್ಲಿರಾ ?.
ಅವರಾಗಿಯೇ ತನ್ನಲ್ಲಿ ಹಣವಿದೆಯೆಂದು ಎಂದೂ ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ನಾವು, ಗಂಡಸರು, ಮಾಡಬೇಕಾದ ಉಪಾಯವೆಂದರೆ ಅವರಲ್ಲಿ ೧೦೦೦ ರುಪಾಯಿ ನೋಟಿಗೆ ಚಿಲ್ಲರೆಯನ್ನು ಕೇಳಬೇಕು. ಅದಕ್ಕೆ ಅಷ್ಟು ಸುಲಭವಾಗಿ ಅವರು ಚೇಂಜನ್ನು ಕೊಡುವುದಿಲ್ಲ
" ಅಯ್ಯೋ.. ನನ್ನ ಹತ್ತಿರ ಐದು ಪೈಸೆಯೂ ಇಲ್ಲ " ಎನ್ನುತ್ತಾರೆ
" ಅಯ್ಯೋ ಮಾರಾಯಿತಿ... ನೀನು ನನಗೆ ಧರ್ಮ ಕೊಡುವುದು ಬೇಡ, ಸಾವಿರ ರುಪಾಯಿನ ಗಟ್ಟಿಯ ಒಂದು ನೋಟನ್ನು ತೆಗೆದುಕೊಂಡು ನನಗೆ ಅದರ ಚಿಲ್ಲರೆ ಕೊಡು ಅಷ್ಟೇ. ನನಗ್ಯಾಕೋ ಸ್ವಲ್ಪ ಅರ್ಜಂಟ್ ಚಿಲ್ಲರೆ ಬೇಕು ಅದಕ್ಕೆ ಕೇಳಿದೆ ಅಷ್ಟೆ " ಎನ್ನಬೇಕು.

ಇದೇ ರೀತಿ ಹಲವು ಬಾರಿ ಪೀಡಿಸಿ 1000 ರೂಪಾಯಿನ ನೋಟು ಕೊಟ್ಟು ಚಿಲ್ಲರೆ ಪಡೆಯಬೇಕು. ಅದಕ್ಕೆ ಅವರು ಹೆಚ್ಚಾಗಿ 500 ರೂಪಾಯಿನ ನೋಟುಗಳನ್ನೇ ಕೊಡುತ್ತಾರೆ. ಏಕೆಂದರೆ ಎರಡು ನೋಟಿಗೆ ಎರಡು ಕಡೆ ಹುಡುಕಾಡಿ ತೆಗೆದುಕೊಡುವ ತ್ರಾಸು ತೆಗೆದುಕೊಂಡರೆ ಸಾಕು. ಅವರ ಒಂದು ಸ್ವಭಾವವೆಂದರೆ ಅವರ ಗುಟ್ಟಿನ ಹಣವನ್ನು ಎಂದೂ ಒಂದು ಕಡೆ ಇಡುವುದಿಲ್ಲ. ಏಕೆಂದರೆ ಅದು ಸುಲಭವಾಗಿ ಗಂಡಸರ ಕೈಗೆ ಸಿಗಬಾರದು. ಅಲ್ಲದೆ ನೋಟುಗಳನ್ನೂ ಕಿವಿ ತುರಿಸುವ ಕಡ್ಡಿಯ ಗಾತ್ರಕ್ಕೆ ಸಣ್ಣ ಸುತ್ತಿರುತ್ತಾರೆ. ಅದು ಅವರ ಚಹರೆ.
ಹತ್ತಾರು ಸಾರಿ ವ್ಯವಹಾರ ನಡೆದ ಮೇಲೆ ಮತ್ತೆ ನಾವು 1000 ನೋಟನ್ನು ಒಯ್ದರೆ ಅವರು " ಇನ್ನು ತನ್ನಲ್ಲಿ ಹಣವಿಲ್ಲ, ಇದ್ದ 500 ರೂಪಾಯಿನ ದುಡ್ಡನ್ನಷ್ಟೂ ನಿಮಗೆ ಇಲ್ಲಿಯವರೇ ಕೊಡಲಿಲ್ಲವೇ ಹಾಗಾದರೆ...... ದೇವರಾಣೆ, ನನ್ನಲ್ಲಿಲ್ಲ. ? " ಎನ್ನುತ್ತಾರೆ. ಎಲ್ಲಿ ' ದೇವರಾಣೆ ' ಎಂದು ಅವರ ಬಾಯಲ್ಲಿ ಬಂತೋ ಅಲ್ಲಿಗೆ ಅವರ ಹತ್ತಿರ ಇನ್ನು 500 ರೂಪಾಯಿನ ನೋಟುಗಳಿಲ್ಲ ಎಂದರ್ಥ. ಏಕೆಂದರೆ ಗಂಡಸರ ಬಾಯಲ್ಲಿ ಬಂದ ಹಾಗೆ ಪುಕ್ಕಟ್ಟೆ ' ದೇವರಾಣೆ ' ಶಬ್ದ ಅವರ ಬಾಯಲ್ಲಿ ಎಂದೂ ಬರುವುದಿಲ್ಲ. ಇಷ್ಟು ಹೊತ್ತಿಗೆ ನಾವು ಅವರಿಗೆ ಕೊಟ್ಟ 1000 ರೂಪಾಯಿನ ನೋಟುಗಳೆಷ್ಟು ಎಂಬುದನ್ನು ಸರಿಯಾಗಿ ಲೆಕ್ಕವಿಟ್ಟುಕೊಂಡು ಇಲ್ಲಿಯ ಹಂತದವರೆಗೆ ಅವರ ಹುತ್ತದಲ್ಲಿ ಕಾಯ್ದಿಟ್ಟುಕೊಂಡಿದ್ದ ಗಂಟು ಎಷ್ಟು ಎಂಬುದನ್ನು ನಾವು ಒಂದುಕಡೆ ಬರೆದಿಟ್ಟುಕೊಂಡಿರಬೇಕು.
ಹೀಗೆ ಎರಡನೇ ಆವರ್ತದಲ್ಲಿ 500 ನೋಟು ಕೊಟ್ಟು ನೂರು ರುಪಾಯಿ ನೋಟುಗಳನ್ನು ಎತ್ತುವುದು, ಮೂರನೇ ಆವರ್ತದಲ್ಲಿ 100 ರುಪಾಯಿ ನೋಟನ್ನು ಕೊಟ್ಟು ಅದರ ಚಿಲ್ಲರೆ ನೋಟುಗಳನ್ನು ಹೊರಗೆಳೆಯುವುದು ಹೀಗೆ ಮಾಡಿ ನಾವು ಅವರಿಗೆ ಕೊಟ್ಟ ನೋಟಿನ ಮೊತ್ತವನ್ನು ಸರಿಯಾಗಿ ಬರೆದಿಟ್ಟುಕೊಂಡು ಅವರು ಒಳಗೆ ಕೂಡಿಟ್ಟುಕೊಂಡ ಹಣದ ಒಟ್ಟು ಮೊತ್ತವೆಷ್ಟು ಎಂಬುದರ ಚಿದಂಬರ ರಹಸ್ಯವನ್ನು ಕಂಡುಹಿಡಿದುಕೊಳ್ಳಬೇಕು. ನಾನು ಅದನ್ನು ಒಂದುಕಡೆ ಬರೆದಿಟ್ಟುಕೊಳ್ಳಬೇಕು ಎಂದು ಏಕೆ ಹೇಳಿದೆನೆಂದರೆ ಹೆಂಗಸರಿಂದ ಹಣವನ್ನು ಹೊರಗೆಳೆಯುವ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಪ್ರತಿ ವ್ಯವಹಾರದ ನಡುವೆಯೂ ಕನಿಷ್ಠ 15 ದಿನ ಗ್ಯಾಪ್ ಇರಬೇಕು. ಪ್ರತಿಸಲ ನಿಧಾನವಾಗಿ ಸ್ವಲ್ಪ ತುಪ್ಪ ಸುರಿಸಿ ಅವರನ್ನು ಪುಸಲಾಯಿಸಿ ಮಾತನಾಡಿಸಬೇಕು . ಇವೆಲ್ಲಾ ತಂತ್ರಗಳು ಆಯಾ ಗಂಡಸರ ಶಕ್ತಿಗೆ ಸೇರಿದ್ದು. ಇದಕ್ಕೆ ಒಂದು ವರ್ಷದ ಅವಧಿಯೇ ಬೇಕಾದೀತು. ಇವೆಲ್ಲಾ ಅವರು ಕೂಡಿಟ್ಟುಕೊಂಡಿರುವ ಮೊತ್ತವನ್ನು ಅವಲಂಬಿಸಿರುತ್ತದೆ. ಇಲ್ಲಿಗೆ ಅವರ ಗುಟ್ಟಿನ ಗಂಟಿನ ಲೆಕ್ಕಾಚಾರ ನಮಗೆ ಸಿಗುತ್ತದೆ. ಇಲ್ಲಿಗೆ ಒಂದು ಅಂಕ.
ಇನ್ನು ಎರಡನೆಯ ಅಂಕ ಪ್ರಾರಂಭ. ಅವರಲ್ಲಿನ ಒಟ್ಟು ಮೊತ್ತ ಗೊತ್ತಾದ ಮೇಲೆ ಅದರಲ್ಲಿ ಸ್ವಲ್ಪ ಹಣವನ್ನು ಸಾಲವಾಗಿ ಕೇಳಬೇಕು. ಅಷ್ಟು ಸುಲಭವಾಗಿ ಅದನ್ನು ಅವರು ಕೊಡಲೊಪ್ಪುವುದಿಲ್ಲ. ಹೆಚ್ಚಿನ ಬಡ್ಡಿಯ ಆಸೆಯನ್ನು ಅವರಿಗೆ ತೋರಿಸಬೇಕು. ಆರು ತಿಂಗಳಿಗೊಮ್ಮೆ ಬಡ್ಡಿ ಪಾವತಿ. ಆರು ತಿಂಗಳಿನ ನಂತರದ ಬಡ್ಡಿಯನ್ನು ಮೊದಲೇ ಕೊಟ್ಟು ಸಾಲವನ್ನು ಪಡೆಯಬೇಕು. ಅವರ ಒಂದು ಗುಟ್ಟು ಎಂದರೆ ಬಡ್ಡಿ ಆಸೆ ಹುಟ್ಟಿದ ಮೇಲೆ ನಮ್ಮಿಂದ ಅಸಲನ್ನು ಅವರು ಕೇಳುವುದೇ ಇಲ್ಲ. ಆದ್ದರಿಂದ ಬಡ್ಡಿಯ ಪಾವತಿ ಸರಿಯಾಗಿ ನಡೆಯಲೇಬೇಕು. ಹೀಗೆ ವ್ಯವಹಾರ ನಡೆಯುತ್ತಿರುವಾಗಲೇ ಇನ್ನಷ್ಟು, ಸ್ವಲ್ಪ ತಿಂಗಳ ನಂತರ ಮತ್ತಷ್ಟು ಹಣವನ್ನು ಅವರಿಂದ ಸಾಲವಾಗಿ ಪಡೆಯುವುದು ಸುಲಭ. ಏಕೆಂದರೆ ಬಡ್ಡಿಯ ಆಸೆಯೇ ಹಾಗೆ. ಅದು ಹಾಗೆ ಒಳಗಿನ ಹಣವನ್ನು ಹೊರಬರುವಂತೆ ಮಾಡುತ್ತದೆ. ಪ್ರಕ್ರಿಯೆ ಎಲ್ಲಿಯವರೆಗೆ ನಡೆಯುತ್ತದೆಯೆಂದರೆ ಅವರಲ್ಲಿ ಅಸಲಾಗಿ ಕೂಡಿಕೊಂಡ ನಮ್ಮಿಂದ ಪಡೆದ ಬಡ್ಡಿಯ ಮೊತ್ತವೂ ಮುಂದಿನ ಬಡ್ಡಿಯ ಆಸೆಗಾಗಿ ಪೂರ್ತಿ ಹೊರಬೀಳುತ್ತದೆ. ಅಷ್ಟರ ಮಟ್ಟಿಗೆ, ಅಲ್ಲಿಯವರೆಗೆ. ನಮ್ಮ ಬಡ್ಡಿಯ ಪಾವತಿಯ ಕ್ರಮ ಕರಾರುವಾಕ್ಕಾಗಿ ಇರಬೇಕು.

ಮುಂದೇನು ?. ಮುಂದಿನದನ್ನು ಶಿವನೇ ಬಲ್ಲ. ಏಕೆಂದರೆ ನಾವು ಮಾಡುವ ಪ್ರತಿ ಕೆಲಸವೂ " ಶಿವಾರ್ಪಣ " ಎಂದೇ ಅಲ್ಲವೇ ?.