Monday 30 December 2013

ಹೊಸ ವರುಷ ಹಳೆ ದುಗುಡ



ಹೊಸ ವರುಷ ಹೊಸತಲ್ಲ ನನಗೆ .. ನನ್ನಷ್ಟೇ ಹಳತು. |
ಹಳೆದುಗುಡ ಹೊಸೆತಿರಲು ಹೊಸತೇನ  ಕಾಣಲಿ ನಾನು. |
ಹೊಸತನರಸಿದೊಡೆ ಆಸೆಗಳ ಹಾಸು - ಹೊಕ್ಕು
ಸಿಕ್ಕಾಗಿ ಬದುಕಿನ ಸೊಗಡು ಜಡವಾಯಿತು. |
ಕಾಲ ಕಲಿಸುವುದೊಂದೇ ಪಾಠ.. ನಿತ್ಯದಾಟ
ಹಳಸಲ ಮನಕೆ ಕರೆದು ತುಂಬುವ ನಿತ್ಯ ಚೇತನ. |


ಸರ್ವರಿಗೂ ಹೊಸವರುಷ ಶುಭವನ್ನು ಕೊಡಲಿ ..

                         - ಎಂ ಗಣಪತಿ , ಕಾನುಗೋಡು .

Saturday 7 December 2013

ಹೌದೇ... ಎಲ್ಲಾ ನಿನ್ನ ಗಂಡನ್ದೇಯಾ !!.. ..



-- ಎಂ. ಗಣಪತಿ, ಕಾನುಗೋಡು


ಪದ್ಮಜ್ಜಿ ಮತ್ತು ಲಕ್ಷ್ಮಜ್ಜಿ  ಇಬ್ಬರೂ ಓರೆಗಿತ್ತಿಯರು.  ಇಬ್ಬರ ಗಂಡಂದಿರೂ ತೀರಿ ಹೋಗಿದ್ದಾರೆ . ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿಯೇ ತಾಗಿಕೊಂಡಿದೆ.  ಇಬ್ಬರೂ ಹಲ್ಲು ಬಿದ್ದ ಬೋಡು ಬಾಯಿಯ ಮುದುಕಿಯರಾಗಿದ್ದಾರೆ. ಇವರಿಬ್ಬರ ಯಜಮಾನರಲ್ಲಿ ಅಣ್ಣ ಬುದ್ದಿವಂತ. ಆಸ್ತಿ ಮನೆ ವಿಸ್ತರಿಸಿ ತಮ್ಮನಿಗೆ  ಆಸ್ತಿಯಲ್ಲಿ ನ್ಯಾಯವಾಗಿ ಪಾಲು ಕೊಟ್ಟು ಮನೆಯನ್ನೂ ಕಟ್ಟಿಸಿಕೊಟ್ಟಿದ್ದಾನೆ.

 ವಯಸ್ಸು ಹೋದರೇನು ? ಓರೆಗಿತ್ತಿಯರ ನಂಜೇನೂ ಹೋಗಲಿಲ್ಲವಲ್ಲ...   ಒಂದು ದಿನ ಸಂಜೆ ಅಕ್ಕಪಕ್ಕದ ಅವರವರ ಮನೆಯ ಕಟ್ಟೆಯಮೇಲೆ ಕುಳಿತಿದ್ದರು. ಹೇಗೋ ಜಗಳಕ್ಕೆ ಶುರುವಾಯಿತು. ಇದು ಹಿಂದಿನಿಂದಲೂ ಇದ್ದದ್ದೇ. ಸುಮಾರು ಅರ್ಧ ಗಂಟೆ ವಾದಾಟವಾದ ನಂತರ ಹೇಳಿದಳು ಅಕ್ಕ ಅಜ್ಜಿ ...

 " ನಿಂಗಳದ್ದು ಎಂತಾ ಇದ್ದೇ ? ಯಲ್ಲಾ ಯಮ್ಮನೇರು ಮಾಡಿಟ್ಟಿದ್ದನ್ನೇ ನಿಂಗ ತಿಂಬೋದು  ಸೈಯಲ್ಲೇ ? !!" ..

ತಂಗಿ ಅಜ್ಜಿಗೆ ಸಿಟ್ಟು ನೆತ್ತಿಗೇರಿತು. ಅಕ್ಕನ ಒಂದು ಮಾತಿಗೆ ನಾಲ್ಕು ಮಾತು ಕುಟ್ಟಿಗಾಣಿಸಬೇಕು ಎಂಬುದೇ ಅವಳ ಆತುರ .. ಉಭ್ರಮೆಯಲ್ಲಿಯೇ ಹೇಳಿಬಿಟ್ಟಳು ..

" ಹೌದೇ.... ಎಲ್ಲಾ ನಿನ್ನ ಗಂಡನ್ದೇಯಾ .. ಈ ಮನೆಯೂ ನಿನ್ನ ಗಂಡನ್ದೇಯಾ ... ಈ ಅಡಿಕೆ ತೋಟವೂ  ನಿನ್ನ ಗಂಡನ್ದೇಯಾ .. ನಮ್ಮನೆ ಸೋಮ,  ಚಂದ್ರನೂ  ನಿನ್ನ ಗಂಡನ್ದೇಯಾ.. .. (ಸೋಮ ಚಂದ್ರ ಇವಳ ಮಕ್ಕಳು :) )  "


ಈ ತೆರನ ಸಂದರ್ಭಕ್ಕೇ ಕಾಯುತ್ತಿದ್ದ ಅಕ್ಕ ಅಜ್ಜಿ ಮುಡುಗಿದ ಸೊಂಟದಲ್ಲಿಯೇ ತಂಗಿ ಅಜ್ಜಿಯ ಕಡೆಗೆ ದೌಡಾಯಿಸಿ ಹೇಳಿದಳು ....



" ಹೌದೋ ... ಏನೋ ...... ಯಾರಿಗೆ ಗೊತ್ತು..... ? . ..!!  "





ಎಂ. ಗಣಪತಿ, ಕಾನುಗೋಡು   
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771

Friday 6 December 2013

ಉಂಡ ಬಾಳೆಎಲೆಯ ಪಾಡು



-ಎಂ.ಗಣಪತಿ ಕಾನುಗೋಡು


ಒಂದು ಕಾಲದಲ್ಲಿ ದಿನನಿತ್ಯದ ಊಟ, ತಿಂಡಿಗೆ ಪ್ರತಿಯೊಬ್ಬರೂ ಬಾಳೆಎಲೆಯನ್ನು ಬಳಸುತ್ತಿದ್ದರು. ಆದರೆ ಈಗ ಹಬ್ಬ-ಹರಿದಿನಗಳಲ್ಲಿ ಮಾತ್ರ ಬಾಳೆಎಲೆಗೆ ವಿಶೇಷ ಮಹತ್ವ. ಮದುವೆ ಸಮಾರಂಭಗಳಲ್ಲಿ ಸಾವಿರಗಟ್ಟಲೆ ಜನರಿಗೆ ಊಟಕ್ಕೆ ಬಾಳೆಎಲೆಯನ್ನು ಬಳಸುತ್ತಾರೆ ಅಷ್ಟೆ.
ನಗರದಲ್ಲಿ ಕೆಲವೊಂದು ಮಾಂಸಾಹಾರಿ ಊಟದ ಹೋಟೆಲ್ ಎದುರಿಗೆ ಬೋರ್ಡು ನೇತು ಹಾಕಿಕೊಂಡಿರುತ್ತದೆ. ‘ಬಾಳೆಎಲೆಯ ಮೀನು ಊಟ ದೊರೆಯುತ್ತದೆ’. ಆಹಾ ! ಮಾಂಸಾಹಾರಕ್ಕೂ ಬಾಳೆಎಲೆಗೂ ಅಷ್ಟೊಂದು ನಂಟು. ಬಾಳೆಎಲೆಯ ಮೀನು ಊಟಕ್ಕಾಗಿಯೇ ಆ ಹೋಟೆಲ್‍ಗೆ ವಿಶೇಷ ಗಿರಾಕಿಗಳು.
ಬಳಸುವ ಬಾಳೆಎಲೆಯ ಬಗ್ಗೆ ಎಷ್ಟೊಂದು ಕಾಳಜಿ. ಅದನ್ನು ಕ್ರಮವಾಗಿ ಕತ್ತರಿಸುತ್ತಾರೆ. ಹುಳ-ಹುಪ್ಪಟವಿದ್ದರೆ ಅದರ ಮೇಲೆ ನಿಲ್ಲದಂತೆ ಎಚ್ಚರ ವಹಿಸುತ್ತಾರೆ. ಗಲೀಜು ಇದ್ದರಂತೂ ಸರಿಯೇ. ಇಲ್ಲದಿದ್ದರೂ, ಅವುಗಳನ್ನು ನೀರಿನಿಂದ ಚೊಕ್ಕಟವಾಗಿ ತೊಳೆದು ಒಪ್ಪವಾಗಿ ಕಾಯ್ದಿರುತ್ತಾರೆ. ಯಾರೂ ಅದಕ್ಕೆ ಗಲೀಜು ತಾಗಿಸದಂತೆ ತಾಕೀತು ಮಾಡುತ್ತಾರೆ. ದಿನನಿತ್ಯದ ಕುಟುಂಬದೊಳಗಿನ ಆಹಾರದ ವ್ಯವಸ್ಥೆಗೆ ಇರಲಿ ಅಥವಾ ವಿಶೇಷ ಸಮಾರಂಭದಲ್ಲಿಯೇ ಇರಲಿ. ಬಾಳೆಎಲೆಯ ಬಗ್ಗೆ ಇದು ಸಾಮಾನ್ಯವಾಗಿ ಇರುವ ಮುಂಜಾಗರೂಕತೆ. ಎಷ್ಟೊಂದು ಗಮನ, ಮರ್ಯಾದೆ ಅದರ ಕಡೆಗೆ. ನಮ್ಮ ಊಟ ಪರಿಶುದ್ಧವಾಗಿರಬೇಕಲ್ಲವೇ?. ಯಾರ ಪಾದಧೂಳಿಯೂ ಬೀಳದ ತಾವಿನಲ್ಲಿ ಅದಕ್ಕೆ ಮಾನದ ಸ್ಥಾನ. ಅಬ್ಬಾ....!
ಇಷ್ಟೆಲ್ಲಾ ಗೌರವಾದರಗಳು, ಪ್ರತ್ಯೇಕ ಸ್ಥಾನಮಾನಗಳಿಂದ ಸಂಪನ್ನಗೊಂಡ ಬಾಳೆಎಲೆ ಊಟ ಮುಗಿದ ಮೇಲೆ ತಿಪ್ಪೆಗೆ ಬಿಸಾಡಲ್ಪಡುತ್ತದೆ. ಅಯ್ಯೋ ಒಂದು ಘಂಟೆ ಮುಂಚೆ ತಾರಸಿ ಮನೆಯ ಬೆಚ್ಚನೆಯ ಕೊಠಡಿಯಲ್ಲಿ ಜೋಪಾನವಾಗಿ ಕಾಯ್ದು ಇಟ್ಟಿದ್ದ ಬಾಳೆಎಲೆ ಉಂಡ ಬಾಳೆಎಲೆ ಎಂದಾದ ಮೇಲೆ ಕೊಠಡಿ ಇರಲಿ ಮನೆಯ ಯಾವ ಮೂಲೆಯಲ್ಲೂ ಅದಕ್ಕೆ ಸ್ಥಳವಿಲ್ಲ. ತಾರಸಿ ಎದುರಿನ ತಿಪ್ಪೆಯೇ ಅದಕ್ಕೆ ಗತಿ. ಇದಕ್ಕೇ ಉಂಡ ಬಾಳೆಎಲೆಯ ಪಾಡು ಎನ್ನುವುದು.
ಉಂಡ ಬಾಳೆಯನ್ನೇನು ತಿಜೋರಿಯಲ್ಲಿ ಕಾಯ್ದಿಡಲಾಗುತ್ತದೆಯೇ?. ಇದು ಸಹಜ ಪ್ರಶ್ನೆಯೆ. ಅದರ ಉಪಯೋಗ ಮುಗಿದ ಮೇಲೆ ಬಿಸಾಡಬೇಕು. ಅಲ್ಲವೇ? ಇನ್ನೇನು ಅಂಗಳದಲ್ಲಿ ಹೊಲಸು ಮಾಡಿಕೊಳ್ಳಲಾಗುತ್ತದೆಯೇ? ತಿಪ್ಪೆಯೇ ಅದಕ್ಕೆ ಒಪ್ಪು.
ಅದು ಅಲ್ಲವೆಂದಲ್ಲ. ಆದರೆ ಉಂಡ ಎಲೆಯ ಪಾಡು ಮನುಷ್ಯನಿಗೂ ಬಂದರೆ? ಇಲ್ಲಿಯೇ ಈ ಒಕ್ಕಣೆಯ ಮಹತ್ವ ಇರುವುದು. ಸಮಾಜದಲ್ಲಿ ಎಷ್ಟೋ ಜನರು ಮತ್ತೊಬ್ಬರ ಉಪಯೋಗಕ್ಕೆ ದೊರಕಿ ದೊರಕಿಸಿಕೊಂಡವರ ತೀಟೆ ತೀರಿದ ಮೇಲೆ ಉಂಡ ಬಾಳೆಎಲೆಯ ಪಾಡನ್ನು ಅನುಭವಿಸುತ್ತಾರೆ.
ಹೌದು. ಬದುಕೇ ಪರಾವಲಂಬಿ. ಒಬ್ಬರ ಉಪಯೋಗವನ್ನು ಪಡೆದುಕೊಂಡೇ ಇನ್ನೊಬ್ಬ ತನ್ನ ಬದುಕನ್ನು ಸಾಗಿಸಬೇಕು. ಇದು ವ್ಯಕ್ತಿಯ ತೀರ ವೈಯುಕ್ತಿಕ ಜೀವನದಿಂದ ಹಿಡಿದು ಸಾಮೂಹಿಕ ಜೀವನದ ವರೆಗೂ ಇರುವ ಸತ್ಯ. ಗಂಡ-ಹೆಂಡತಿ, ಪೋಷಕರು – ಮಕ್ಕಳು, ಸಹೋದರ-ಸಹೋದರಿಯರು ಹೀಗೆ ಎಲ್ಲರೂ ವೈಯುಕ್ತಿಕ ಜೀವನದಲ್ಲಿ ಪರಸ್ಪರ ಅವಲಂಬಿಗಳು. ಇಲ್ಲಿಯೂ ಹೆಚ್ಚು ಉಪಯೋಗಕ್ಕೆ ಸಿಗುವವನು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಾನೆ. ಯಾವ ಉಪಯೋಗಕ್ಕೂ ಬಾರದ ಕುಟುಂಬದ ಸದಸ್ಯನ ಪಾಡು ಪ್ರಥಮ ಹಂತದಲ್ಲಿಯೇ ಉಂಡ ಬಾಳೆಎಲೆಯ ಪಾಡು.  ಉಪಯೋಗಕ್ಕೆ ಸಿಕ್ಕವನ ಪಾಡು ಕೂಡ ತದನಂತರದಲ್ಲಿ ಅದೇ ಸ್ಥಿತಿ. ಆದರೆ ಇದು ಕುಟುಂಬವಾದ್ದರಿಂದ ಇಲ್ಲಿ ಅವಲಂಬನೆ ವರ್ತುಲವಾಗಿರುತ್ತದೆ. ಯಾರ  ಹಂಗು ಯಾರಿಗೂ ಇಲ್ಲಿಗೇ ಮುಗಿಯಿತು ಎಂದು ಪೂರ್ಣವಿರಾಮ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಪರಿಣಾಮದ ಲಕ್ಷಣಗಳು ಇಲ್ಲಿ ಮಾರ್ಮಿಕವಾಗಿರುತ್ತದೆ. ಮೂರ್ತ ರೂಪದಲ್ಲಿ ಪ್ರಕಟಗೊಳ್ಳುವುದಿಲ್ಲ.
ಕುಟುಂಬದ ಹೊರಗೆ ಬಂದರೆ ಸಾಮೂಹಿಕ ಜೀವನದಲ್ಲಿ ಈ ತೆರೆನ ಪಾಡು. ಮೂರ್ತ ರೂಪದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಉಪಯೋಗಕ್ಕೆ ಬೇಕೆನಿಸಿದರೆ ಮತ್ತೊಬ್ಬ ವ್ಯಕ್ತಿ ಅವನನ್ನು ಬಾಳೆಎಲೆಯ ಹಾಗೆ ಬಹಳ ಮಹತ್ವ ಕೊಟ್ಟು ಮುತುವರ್ಜಿಯಿಂದ ಕಾಯ್ದುಕೊಳ್ಳುತ್ತಾನೆ. ಎಷ್ಟು ಹೊತ್ತಿಗೂ ಅವನು ನಕರಾತ್ಮಕನಾಗದ ಹಾಗೆ ಪೋಷಿಸುತ್ತಾನೆ. ಹೊಗಳುತ್ತಿರುತ್ತಾನೆ. ಆತ ಯಾವಾಗಲೂ ತನ್ನ ಬದಿಯಲ್ಲಿ ತಾಗಿಕೊಂಡಿರಬೇಕು. ಉಪಯೋಗದ ಸಾಮಥ್ರ್ಯವನ್ನು ಅರಿತೇ ಬಾಳೆಎಲೆಯನ್ನು ರಕ್ಷಿಸಿ ಇಟ್ಟುಕೊಂಡ ಹಾಗೆ ತನಗೆ ಯಾವ ಹೊತ್ತಿಗೆ ಯಾವ ಪ್ರಯೋಜನವನ್ನು ಕೊಡುವ ಸಾಮಥ್ರ್ಯವಿದೆಯೋ ಅಂಥವರನ್ನು ಈತ ಆಯಾ ಹೊತ್ತಿಗೆ ಬಳಸಿಕೊಳ್ಳಲು ಹೊಂಚು ಹಾಕಿರುತ್ತಾನೆ. ತನಗೆ ಸಹಾಯವಾಗಲೆಂದು ಆತನನ್ನು ಮಾತಿನಿಂದ ಹಿಗ್ಗುವಂತೆ ಉಬ್ಬಿಸುತ್ತಾನೆ. ಇವನ ಲಾಭಕ್ಕಾಗಿ ಆತ ಯಾರ್ಯಾರನ್ನೋ ಬೈಯ್ದಾಡಿ ನಿಷ್ಟುರಕ್ಕೆ ಗುರಿಯಾಗುತ್ತಾನೆ. ತನ್ನ ಸ್ವಂತ ಸಂಸಾರ, ದುಡಿಮೆ ಎಲ್ಲವನ್ನೂ ಬಿಟ್ಟು ಆತ ಇವನಿಗಾಗಿ ಹೋರಾಡುತ್ತಾನೆ.
ಒಂದು ದಿನ ಈತನಿಗೆ ಅವನಿಂದ ಆಗಬೇಕಾದ ಪ್ರಯೋಜನವೆಲ್ಲವೂ ಮುಗಿಯುತ್ತದೆ. ಇನ್ನು ಮುಂದೆ ಅವನನ್ನು ತನ್ನ ಜೊತೆ ಇಟ್ಟುಕೊಂಡರೆ ತೊಂದರೆಯೇ ಸರಿ. ಅನಾವಶ್ಯಕವಾಗಿ ಆತನನ್ನು ಓಲೈಸಬೇಕು. ರಕ್ತವನ್ನು ಸಂಪೂರ್ಣವಾಗಿ ಹೀರಿಕೊಂಡ ನಂತರ “ಇಂಬಳ” (ಒಂದು ಬಗೆಯ ರಕ್ತ ಹೀರುವ ಹುಳು) ನಮ್ಮ ದೇಹದಿಂದ ಬೇರ್ಪಡುವುದು ಅದರ ಸ್ವಭಾವ. ಹಾಗೆ ಇನ್ನು ಹಿಡಿದುಕೊಂಡರೆ ಪ್ರಯೋಜನವಿಲ್ಲ ಎಂದೆನಿಸಿದ ಮರುಘಳಿಗೆಯಲ್ಲಿ ಇಂಬಳದಂತೆ ಆತನನ್ನು ಈತ ಬಿಟ್ಟುಬಿಡುತ್ತಾನೆ. ಪುನಃ ಆತ ಇವನನ್ನು ಎಷ್ಟು ಮೂಸಿ ನೋಡಿದರೂ ಅವನ ಮೂಗಿಗೆ ನಾರುವುದು ದುರ್ವಾಸನೆಯೇ ವಿನಹ ಮುಂಚಿನ ಸುವಾಸನೆಯಿಲ್ಲ. ಗುರುತೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವನ ಕುರಿತು ಈತ ನಿರ್ಲಿಪ್ತನಾಗಿರುತ್ತಾನೆ. ಸೂಕ್ಷ್ಮವಾಗಿ ಗ್ರಹಿಸಿದರಷ್ಟೇ ಸಮಾಜದಲ್ಲಿ ನಡೆಯುತ್ತಿರುವ ಇಂಥಹ ಅಹಿತರಕ ನಡವಳಿಕೆಗಳು ನಮ್ಮ ಗಮನಕ್ಕೆ ಬರುತ್ತವೆ.
ಬೇಕೆನಿಸಿದಾಗ ಹೇಗೆ ಬೇಕೋ ಹಾಗೆ ತಮ್ಮ ತೆವಲು ತೀರಿಸಿಕೊಳ್ಳಲಿಕ್ಕೆ ಸರಿಯಾಗಿ ಮತ್ತೊಬ್ಬರನ್ನು ಬಳಸಿಕೊಂಡ ಜನ ತೆವಲು ತೀರಿದ ನಂತರ ಅವರ ಸ್ಥಿತಿಯನ್ನು ಉಂಡ ಬಾಳೆಎಲೆಯ ಪಾಡನ್ನಾಗಿ ಮಾಡಿಬಿಡುತ್ತಾರೆ.


ದಿನಾಂಕ: 05.12.2013          

ಎಂ. ಗಣಪತಿ, ಕಾನುಗೋಡು     
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771

Tuesday 3 December 2013

ಔತಣದಲ್ಲಿ ಹಲ್ಲು ಸೆಟ್ಟು ....?



(ಒಂದು  ಹಾಸ್ಯ ಲೇಖನ)

-ಎಂ.ಗಣಪತಿ ಕಾನುಗೋಡು

ಇದು ನಗಲಿಕ್ಕಾಗಿ ಕಟ್ಟಿದ ಕಥೆಯಲ್ಲ. ವಾಸ್ತವಿಕ ಸಂಗತಿ. ಮನೆಯ ಯಜಮಾನಿ ಸ್ವಲ್ಪ ವಯಸ್ಸಾದವಳು. ಮೇಲ್ಭಾಗದ ಮುಂದಿನ ಎರಡು ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದಳು. ಪ್ರತಿದಿನ ಬೆಳಿಗ್ಗೆ ಅದನ್ನು ಬಾಯಿಗೆ ಜೋಡಿಸಿಕೊಳ್ಳುವುದು, ರಾತ್ರಿ ತೆಗೆದಿಡುವುದು ಎಂದಿನ ರೂಢಿ. 
ಮಗನ ಮದುವೆಯಾದ ವರ್ಷ. ದೀಪಾವಳಿಯ ಹೊಸ ಹಬ್ಬಕ್ಕೆ ಕರೆಯಲು ಸೊಸೆಯ ಮನೆಯ ಬೀಗರು ಬಂದಿದ್ದಾರೆ. ಹೊಸ ಬೀಗರಿಗೆ ಔತಣ ಎಂದ ಮೇಲೆ ತಯಾರಿ ಭರ್ಝರಿಯಾಗಿಯೇ ನಡೆದಿತ್ತು. 
ಬೆಳಿಗ್ಗೆಯಿಂದ ಮಧ್ಯಾಹ್ನದ ಊಟದ ಹೊತ್ತಿನ ವರೆಗೂ ಪುರುಸೊತ್ತಿಲ್ಲದಷ್ಟು ಕೆಲಸ ಯಜಮಾನಿಗೆ. ಬೀಗರನ್ನು ಇನ್ನೇನು ಊಟಕ್ಕೆ ಒಳಗೆ ಕರೆಯಬೇಕು ಅನ್ನುವಷ್ಟರಲ್ಲಿ ಯಜಮಾನಿ ಮುಖ ತೊಳೆದು ಒಮ್ಮೆ ತಲೆ ಬಾಚಲಿಕ್ಕಾಗಿ ಕನ್ನಡಿ ನೋಡಿದ್ದಾಳೆ. ಬಾಯಿಯೊಳಗಿನ ಎರಡು ಹಲ್ಲಿನ ಸೆಟ್ ಎಲ್ಲಿಯೋ ಬಿದ್ದು ಹೋಗಿದೆ. ಅಯ್ಯೋ ದೇವರೇ ....!?
ಬಿದ್ದು ಹೋಗಿದ್ದು ಪರವಾಗಿಲ್ಲ. ಕೆಡುವುದೇನು? ಅತ್ತೆಯ ಚಂದ ನೋಡಿ ಬೀಗರೇನು ಅವರನ್ನು ಮೆಚ್ಚಿಕೊಳ್ಳಬೇಕಾಗಿಲ್ಲವಲ್ಲ ! ಆದರೆ ಅದು ಎಲ್ಲಿ ಬಿತ್ತು ಅಂತ ಬೇಕಲ್ಲ. ಹೊರಗಡೆ ಎಲ್ಲಾದರೂ ಬಿತ್ತೋ ಅಥವಾ ಅಡುಗೆಯ ಐಟಂಗಳಲ್ಲಿ ಯಾವುದಾದರಲ್ಲೂ ಬಿದ್ದು ಹೋಗಿದೆಯೋ?. ಅದು ಬೀಗರ ಊಟದ ಪ್ಲೇಟಿಗೆ ಬಂದರೆ ಏನು ಗತಿ? ಶಿವ.....ಶಿವಾ.....
ವಿಷಯವನ್ನು ಮಗನಿಗೆ ಮತ್ತು ಗಂಡನಿಗೆ ತಿಳಿಸಿದ್ದು ಆಯಿತು. ಸೊಸೆಗೂ ಗುಟ್ಟಾಗಿ ಪಿಸುಗುಟ್ಟಿದ್ದಾಯಿತು. ಆಕೆಗೆ ತಿಳಿಸಿದರೆ ಅಪ್ಪನಿಗೆ ಹೇಳಿಬಿಟ್ಟಾಳು ಎಂದು ಮುಚ್ಚಿಟ್ಟರೆ ಮುಂದಿನ ಪ್ರಸಂಗದಿಂದ ಅದು ಅವಳಿಗೆ ತಿಳಿಯದೇ ಇರುತ್ತದೆಯೇ? ಆಗಲೇ ಗಂಟೆ ಮಧ್ಯಾಹ್ನ 1.30 ಆಗಿದೆ. ಬೀಗರು 3.00 ಗಂಟೆ ಬಸ್ಸಿಗೆ ಊರಿಗೆ ಮರಳಬೇಕು ಎಂದು ಬಂದ ಕೂಡಲೇ ಹೇಳಿದ್ದು ಬೇರೆ. ಅಯ್ಯೋ....ದೇವರೇ....!
ಮಗ ತಡಮಾಡಲಿಲ್ಲ. ಶೆಲ್ಪ್‍ನಲ್ಲಿದ್ದ ಹರಿವಾಣಗಳನ್ನಷ್ಟೇ ಅಲ್ಲ ಮಹಡಿಯ ರೂಮ್‍ನಲ್ಲಿದ್ದ ಹತ್ತಾರು ಹರಿವಾಣಗಳನ್ನು ತೊಳೆದು ತಂದು ಅಡುಗೆಮನೆಯ ಉದ್ದಗಲಕ್ಕೆ ಹರಡಿದ. ಅನ್ನದಿಂದ ಹಿಡಿದು ಸಾರು, ಸಾಂಬಾರು, ಹುಣಸೆಹಣ್ಣಿನ ಮಂದನೆಯ ಗೊಜ್ಜು, ಪಲ್ಯ, ಕೋಸುಂಬರಿ, ಪಾಯಸ, ಬಾಣಲೆತುಂಬಾ ಸಣ್ಣಕ್ಕಿ ಕೇಸರಿಬಾತು, ಚಿತ್ರಾನ್ನ ಒಂದೇ.. ಎರಡೇ.. ಹೀಗೆ.. ಹೀಗೆ.. ಎಲ್ಲವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹರಿವಾಣಕ್ಕೆ ಸುರವಿ ಸೌಟಿನಲ್ಲಿ ಹರವಿ ಹರವಿ ನೋಡಿದ್ದಾಯ್ತು. ಇದರಿಂದ ಪದಾರ್ಥಗಳು ಆರಿ ಹೋಯಿತೇ ವಿನಃ ಹಲ್ಲುಸೆಟ್ಟು ಸಿಗಲಿಲ್ಲ. ಒಬ್ಬೊಬ್ಬರು ಒಂದೊಂದನ್ನು ಜಾಲಾಡಿದರು. ಸೆಟ್ಟು ಸಿಕ್ಕದಿದ್ದಕ್ಕಾಗಿ ಸಿಡಿಮಿಡಿಗೊಂಡು ಅವನು ಸರಿಯಾಗಿ ನೋಡಲಿಲ್ಲವೇನೋ ಎಂದು ಇವನು ಇವನು ಸರಿಯಾಗಿ ನೋಡಿಲಿಲ್ಲವೇನೋ ಎಂದು ಅವನು ಹೀಗೆ ಒಬ್ಬರಿಗೊಬ್ಬರು ಗಾಬರಿಯಲ್ಲಿ ಬೈಯ್ದಾಡಿಕೊಂಡಿದ್ದೂ ಆಯಿತು. ಪಾತ್ರೆಯ ಶಬ್ದ, ಮಾತಿನ ಗೊಣಗಾಟದಲ್ಲಿ ಗಂಟೆ ಎರಡೂವರೆಯೂ ಆಯಿತು. 
ಜಗುಲಿಯ ಮೇಲೆ ಕುಳಿತಿದ್ದ ಬೀಗರಿಬ್ಬರು ಮನೆಯ ಯಜಮಾನನ್ನು ಹೊರಗೆ ಕರೆದರು. ಇನ್ನು ಅರ್ಧಗಂಟೆಯಲ್ಲಿ ತಾವು ಊರಿಗೆ ಹೊರಡಬೇಕು ಎಂದರು. ಅದು ಹಳ್ಳಿ ಬೇರೆ. ಬಿಟ್ಟರೆ ಮರುದಿನವೇ ಗತಿ. ಏನು ಬೀಗರೆ ಬಹಳ ವಿಶೇಷ ಔತಣ ಮಾಡಿಬಿಟ್ಟಿದ್ದೀರಿ ಅಂತ ಕಾಣುತ್ತೆ. ನಾವು ನಮ್ಮ ಹಲ್ಲಿನಲ್ಲಿ ಅಗಿದು ತಿಂದು ಜೀರ್ಣಿಸಿಕೊಳ್ಳಲಿಕ್ಕೆ ಆಗುತ್ತೋ ಇಲ್ಲವೋ, ಏನು ಮಹಾರಾಯರೆ ಎಂದು ತಮ್ಮ ಮಗಳ ಮಾವನನ್ನು ಕೇಳಿದರು. ಮಾವನ ಗತಿಯೋ ? ಅವನು ಬಾಯಿ ಬಿಟ್ಟರೆ ಕೆಟ್ಟ.! 
ಜಗುಲಿಯಲ್ಲಿ ಬೀಗರು ಅರ್ಜೆಂಟ್ ಮಾಡಿದ್ದನ್ನು ಯಜಮಾನ ಒಳಗೆ ಬಂದು ಹೇಳಿದ. ಅನಿವಾರ್ಯ. ಸಿದ್ದತೆ ಮಾಡಿದರು. ನೆಂಟರು ಅವಸರ ಅವಸರದಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದೂ ಆಯಿತು.
ದೇವರು ದೊಡ್ಡವ ಅಂತೂ ಬೀಗರ ಬಾಯಿಗೆ ನನ್ನ ಹಲ್ಲು ಸೆಟ್ಟು ಬಂದು ಕೂರಲಿಲ್ಲವಲ್ಲ. ಭಗವಂತ ನಮಸ್ಕಾರ. ಯಜಮಾನಿಯಿಂದ ದೇವರಿಗೆ ಥ್ಯಾಂಕ್ಸ್. 
ನೆಂಟರನ್ನು ಕಳುಹಿಸಿ ಮನೆಯವರೆಲ್ಲಾ ಪ್ರಕರಣದಲ್ಲಿ ದಣಿದು ಊಟ ಮುಗಿಸುವ ಹೊತ್ತಿಗೆ ಸಂಜೆ 5.00 ಗಂಟೆಯಾಗಿತ್ತು. ಅಡುಗೆ ಮನೆಯನ್ನು ಸೇರಿಸುವ ಕೆಲಸವನ್ನು ಸೊಸೆಗೆ ವಹಿಸಿ ಅತ್ತೆ ಮನಸ್ಸಿನ ಬೇಸರದಿಂದ ಸ್ವಲ್ಪ ವಿಶ್ರಾಂತಿಗೆ ಹೋದಳು.
ಕಸ ಮುಸುರೆ ಮುಗಿಸಿ ಬಂದ ಸೊಸೆ ಅತ್ತೆಯ ಮಂಚದ ಎದುರಿಗೆ ಬಂದು ನಿಂತಳು. ಅತ್ತೆ ಇಲ್ಲಿ ಸಿಕ್ಕಿತು ನಿಮ್ಮ ಹಲ್ಲು ಸೆಟ್ಟು ಎಂದಳು. ಅಯ್ಯೋ ಎಲ್ಲಿತ್ತೆ ಪುಣ್ಯಾತ್ಗಿತ್ತೀ ಎಂದು ಹೌಹಾರಿದಳು ಅತ್ತೆ. ಸೊಸೆ ಹೇಳಿದಳು. ಅದು ಅಡುಗೆ ಮನೆಯ ಅಕ್ಕಿ ತೊಳೆದ ನೀರಿನ ಬಕೆಟಿನಲ್ಲಿತ್ತು.

ದಿನಾಂಕ: 03.12.2013    

 ಎಂ. ಗಣಪತಿ, ಕಾನುಗೋಡು    
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kanagod@gmail.com
Blog : mgkangod.blogspot.com
Mob : 9481968771

Monday 25 November 2013

ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ ?

-ಎಂ. ಗಣಪತಿ ಕಾನುಗೋಡು 

ಹೌದು. ಹೊಗೆ ಕಾಣಿಸಿಕೊಂಡಿದೆ ಎಂದರೆ ಅದರ ಹಿಂದೆ ಬೆಂಕಿ ಇದೆ ಎಂಬುದು ವಾಸ್ತವಿಕ. ಇದು ಕೇವಲ ಒಂದು ಒಕ್ಕಣೆಯಾಗಿ ಉಳಿದಿಲ್ಲ. ಗಾದೆಯಾಗಿದೆ. ಗಾದೆ ಎಂದ ಮೇಲೆ ಅದು ಶಬ್ದಾರ್ಥಕ್ಕಷ್ಟೇ ಸೀಮಿತವಾಗದೆ ಅದರ ಇಂಗಿತಾರ್ಥಗಳು ಬಹಳ. ಅದರಂತೆ ಈ ಮಾತಿಗೆ ಬೇರೆ ಬೇರೆ ಅರ್ಥ ವಿಸ್ತಾರವಿದೆ. 

ಯಾವುದೇ ವ್ಯಕ್ತಿಯ ಜೀವನದಲ್ಲಿ ಒಂದು ಸುದ್ದಿ ಹೊರಟಾಗ ಅಥವಾ ಇನ್ನಾವುದೇ ಸಂದರ್ಭಗಳಲ್ಲಿ ಬೇರೆ ಬೇರೆ ಘಟನೆಗಳು ಘಟಿಸಿದಾಗ ಜನ ಆಡಿಕೊಳ್ಳುವುದು ಒಂದೇ ಪ್ರಶ್ನೆ. ಬೆಂಕಿಯಿಲ್ಲದೆ ಹೊಗೆಯಾಡಲು  ಸಾಧ್ಯವೇ ?. 

ಒಂದು ವ್ಯಕ್ತಿಯ ಬಗ್ಗೆ ಯಾವುದೇ ಸುದ್ಧಿ ಪ್ರಚಾರ ಗೊಂಡರೆ, ಅದಕ್ಕೆ ಸರಿಯಾದ ಕಾರಣ ಯಾರಿಗೂ ತಕ್ಷಣ ಗೊತ್ತಾಗುವುದಿಲ್ಲ. ಹಾಗೆಂದು ಒಂದು ಕಾರ್ಯಕ್ಕೆ   ಸಂಬಂಸಿದಿರಬಹುದಾದ  ವಾಸ್ತವಿಕ ಕಾರಣವನ್ನು ತಿಳಿದುಕೊಳ್ಳುವ ಗೋಜಿಗೂ ಜನ ಹೋಗುವುದಿಲ್ಲ. ಒಂದು ಸುದ್ದಿ ಅಥವಾ ಘಟನೆ ಪ್ರಚಲಿತಕ್ಕೆ ಬಂದರೆ ಆ ಹೊತ್ತಿಗೆ ತಮ್ಮ ಬುದ್ದಿಯ ಮಿತಿಯೊಳಗೆ ಯಾವ ಯಾವ  ಕಾರಣಗಳು  ಗೋಚರಿಸುತ್ತವೆಯೋ ಅವನ್ನೆಲ್ಲಾ ಆ ಪರಿಣಾಮಕ್ಕೆ  ತಳಿಕೆ ಹಾಕುತ್ತಾರೆ. ಹೊಗೆಯಾಡಲು ಅದರ ಹಿಂದೆ ಇರುವಂತಹ ನಿಜವಾದ ಬೆಂಕಿ ಯಾವುದು  ಎಂಬುದನ್ನು ಯಾರೂ ತಿಳಿದಿರುವುದಿಲ್ಲ. ಹಾಗೆಂದು ತಮ್ಮಷ್ಟಕ್ಕೆ ತಾವು ಯಾರೂ ಸುಮ್ಮನೆ ಕೂರುವುದಿಲ್ಲ. 

ಪ್ರಚಾರಕ್ಕೆ ಬಿದ್ದಿರುವ ಸುದ್ದಿ ಅಥವಾ ಸಂಭವಿಸಿದ ಘಟನೆ ಕೆಲವು ಸಾರಿ ಕೆಲವೊಂದು ಜನರ ನಾಲಿಗೆಯ ತುರಿಕೆಯಿಂದ ಆಗಿರುತ್ತದೆ.  ಇದಕ್ಕೆ ಕಾರಣರಾದ ವ್ಯಕ್ತಿಗಳಿಗೆ ಯಾವ  ಲಾಭವೂ ಇಲ್ಲ.  ಸಿಗಬಹುದಾದ ಪುಕ್ಕಟ್ಟೆ  ಮನರಂeನೆಯೊಂದೇ ಅವರಿಗೆ  ಲಾಭ. ಇಂತಹ ಸಂದರ್ಭಗಳಲ್ಲಿ ಹೊಗೆಯ ಹಿಂದೆ ಇರುವ ಬೆಂಕಿಯೆಂದರೆ ನಿಷ್ಪ್ರಪ್ರಯೋಜಕ  ವ್ಯಕ್ತಿಗಳಿಗೆ ಇರುವ ಬಾಯಿ ಚಪಲ ಅಷ್ಟೆ. ನಿಜ ಹೇಳಬೇಕೆಂದರೆ ಇದು ಬೆಂಕಿಯೇ ಅಲ್ಲ.  ಕೇವಲ ಗಾಳಿ ಅಷ್ಟೇ.  ದುರಂತವೆಂದರೆ  ನಿಜಾಂಶ ಸಮಾಜಕ್ಕೆ  ಗೊತ್ತಾಗುವುದರೊಳಗೆ ಈ ಗಾಳಿ ಮಾತ್ರಕ್ಕೆ  ಸಿಲುಕಿದ ವ್ಯಕ್ತಿ ಸುಟ್ಟು ಕರಕಲಾಗುತ್ತಾನೆ.  

ಆಡುವ ಹೊಗೆಗೆ ಇನ್ನೊಂದು ಹಿನ್ನೆಲೆಯೂ ಇದೆ. ಕೆಲವು ವ್ಯಕ್ತಿಗಳಿಗೆ ಒಬ್ಬ ವ್ಯಕ್ತಿಯ ಮೇಲೆ ದ್ವೇಷವಿದೆ. ಹಾಗೆಯೇ ಒಂದು ಸಂಘಟನೆ ಇನ್ನೊಂದು ಸಂಘಟನೆ ಮೇಲೆ ಭಿನ್ನಾಭಿಪ್ರಾಯವಿರುತ್ತದೆ. ಅಂತಹ ಸನ್ನಿವೇಶಗಳಲ್ಲಿ  ಆ ವ್ಯಕ್ತಿಗಳು ತಮ್ಮ ಗುರಿಯ ವ್ಯಕ್ತಿಯ ವಿರುದ್ದ, ಆ ಸಂಘಟನೆಯು ತನ್ನ ಗುರಿಯ  ಸಂಘಟನೆ ವಿರುದ್ದ ಉದ್ದೇಶಪಟ್ಟು ಅಪಪ್ರಚಾರದ ವದಂತಿಗಳನ್ನು ಹರಿಯ ಬಿಡುತ್ತಾರೆ. ಇದು ಕೇವಲ ಬಾಯಿ ಚಪಲ ಅಲ್ಲ. ಗಹನವಾದ ದುರುದ್ದೇಶ. ಈ ಸುಳಿಗೆ ಸಿಕ್ಕ  ಆ ವ್ಯಕ್ತಿ ಅಥವಾ ಸಂಘಟನೆ  ತತ್ತರಿಸಿ ಹೋಗಬೇಕು. ಆ ರೀತಿಯಲ್ಲಿ ಸಂಚು ನೇಯ್ಗೆಯಾಗಿರುತ್ತದೆ. ವಾಸ್ತವಾಂಶ ಬೇರೆಯೇ ಇದೆ ಎಂದು ಈ   ಸುಳಿತಕ್ಕೆ ಸಿಕ್ಕು ಹಣ್ಣಾದ ವ್ಯಕ್ತಿ ಅಥವಾ ಸಂಘಟನೆ ಎಷ್ಟು ಪರಿಯಲ್ಲಿ ತಿಳಿ ಹೇಳಿದರೂ ಜನ ನಂಬುವುದೇ ಇಲ್ಲ. ಏನೋ ಕೊಳಕು ಇದೆ. ಸುಮ್ಮನೆ ದುರ್ವಾಸನೆ ನಾರುತ್ತದೆಯೇ ? ಸುಮ್ಮನೆ ಹೊಗೆಯಾಡುತ್ತದೆಯೇ? ಎಂದು ಜನ ಆಡಿಕೊಳ್ಳುತ್ತಾರೆ. ಮೂಲವನ್ನು ತಿಳಿದುಕೊಳ್ಳುವ ಪ್ರಯತ್ನ ಮತ್ತು ತೊಂದರೆ ಯಾರಿಗೆ ಬೇಕು. ಪುಕ್ಕಟ್ಟೆ ಸಿಕ್ಕರೆ ಕರ್ಣಾನಂದ ಯಾರಿಗೆ ಬೇಡ. ಮನಸ್ಸಿಗೆ ಸಂತೋಷ ಒಂದೆ ಅಲ್ಲ. ಇವರ ಬಾಯಿ ಕೊಳೆಯೂ ಅದರಲ್ಲೇ ತೊಳೆದು ಹೋಗುತ್ತದೆಯಲ್ಲಾ. 

ಸಮಾಜ ಸೇವಕರು, ವಕೀಲರು, ಹೆಚ್ಚಾಗಿ ವೈದ್ಯರು, ಉಪನ್ಯಾಸಕರು, ಉದ್ಯಮಿಗಳು, ಉದ್ಯೋಗಿಗಳು ಹೀಗೆ ಇಂತಹುದೇ ಅನೇಕ ವ್ಯಕ್ತಿಗಳು ಒಳ್ಳೆಯ ಹೆಸರನ್ನು ಹೊಂದಿದ್ದರೆ, ಅವರಿಗೆ ಇದರ ಜ್ವಾಲೆ ತಪ್ಪಿದ್ದಲ್ಲ. ಮಠಾಪತಿಗಳು, ಊರು ಕೇರಿಯ ಗೌರವಾನ್ವಿತ ಹೆಣ್ಣು ಮಕ್ಕಳಿಗೂ ಇದು ಬಿಟ್ಟಿದ್ದಲ್ಲ. ಹೆಚ್ಚಾಗಿ ಗಂಡು ಹೆಣ್ಣಿನ ಅಕ್ರಮ ಸಂಪರ್ಕ ತಾಗಿಸಿಯೇ ಬೆಂಕಿಯನ್ನು ಹಚ್ಚಿದ ಸಾದೃಷ್ಟಗಳು ಅನೇಕ ಇವೆ. 

ಸಮಾಜದಲ್ಲಿ ಜವಾಬ್ದಾರಿಯಿಲ್ಲದ ಜನರು, ವದಂತಿಕೋರಪ್ರವೃತ್ತಿಯನ್ನೇ ಚಟವನ್ನಾಗಿರಿಸಿಕೊಂಡವರು. ಉದ್ಯೋಗದಲ್ಲಿ ಸೋತು ಹತಾಶರಾದರೂ `ಅಹಂ` ನ್ನು ಬಿಡಲಾರದವರು ಹೀಗೆ.. ಹೀಗೆ.. ಮುಂತಾದವರು ಬಹಳ  ಮಂದಿ ಇದ್ದಾರೆ. ಅವರಿಗೆ ಇದೇ ಕೆಲಸ. ಅವರು ನಿದ್ರೆ ಬರಲಿಕ್ಕೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದಿಲ್ಲ. ತಾವು ಸುಖ ನಿದ್ರೆ ಮಾಡಲಿಕ್ಕೆ ಕಂಡು ಕೊಂಡ ಅತ್ಯಂತ ಸುಲಭದ ದಾರಿ ಇದು. ಯಾರ ನಿದ್ರೆ ಹಾಳಾದರೇನಂತೆ ? 

ಎಂ. ಗಣಪತಿ, ಕಾನುಗೋಡು
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kanagod@gmail.com
Mob : 9481968771                 
                                                                                                                       Date : 08.11.2013

Wednesday 20 November 2013

ಸುದ್ದಿ ಪತ್ರಿಕೆಯ ಸ್ಥಳದಲ್ಲಿ ಸರ್ಪ !



                                                                                              --ಎಂ. ಗಣಪತಿ ಕಾನುಗೋಡು
   ಹೆಚ್ಚಾಗಿ ಮಲೆನಾಡಿನಲ್ಲಿ ಮನೆ ಮುಂದಿನ ಗೇಟಿಗೆ ಒಂದು ಕಡೆ ಮುಚ್ಚಳ ಹಾಕಿದ 2 ಅಡಿ ಉದ್ದದ ಪಿ.ವಿ.ಸಿ ಪೈಪ್‍ನ್ನು ಕಟ್ಟಿರುತ್ತಾರೆ. ನೆನೆಯದಿರಲೆಂದು ಮಳೆಗಾಲದಲ್ಲಿ ಸುದ್ಧಿ ಪತ್ರಿಕೆಯ ರಕ್ಷಣೆಗಾಗಿ ಪ್ರತಿ ಮನೆಯಲ್ಲಿ ಮಾಡಿರುವ ವ್ಯವಸ್ಥೆ ಇದು. ಪತ್ರಿಕೆಯನ್ನು ತಂದ ಹುಡುಗ ಅದರೊಳಗೆ ಅದನ್ನು ಪ್ರತಿದಿನ ತುರುಕಿ ಹೋಗುತ್ತಾನೆ. 
    ಒಂದು ದಿನ ಬೆಳಿಗ್ಗೆ ಮನೆಯ ಯಜಮಾನರೊಬ್ಬರು ಪ್ರತಿಕೆನ್ನು ತೆಗೆಯಲಿಕ್ಕಾಗಿ ಆ ಪೈಪ್‍ನೊಳಗೆ ಬೆರಳನ್ನು ಓಡಿಸಿದ್ದಾರೆ. ಪ್ರತಿಕೆ ಅದರಲ್ಲಿ ಇರಲಿಲ್ಲ. ಹುಡುಗ ಬರುವುದು ತಡವಾಗಿತ್ತು. ಯಜಮಾನರ ಕೈಗೆ ಸ್ಪರ್ಶವಾಗಿದ್ದೇ ಬೇರೆ. ಪುನಃ ಕೈಯಾಡಿಸಿ ನೋಡ ಲಾರದ ಮಟ್ಟಕ್ಕೆ ಅವರ ಎದೆ ಝಲ್ ಎಂದಿತ್ತು. ತಕ್ಷಣ ಟಾರ್ಚ್‍ನ್ನು ಬಳಸಿ ಒಳಗೆ ನೋಡಿದ್ದಾರೆ. ಒಂದು ಸಣ್ಣ ಸರ್ಪ ಅದರೊಳಗೆ ಮಳೆಯಿಂದ ರಕ್ಷಣೆಯನ್ನು ಪಡೆದಿದೆ. ಯಜಮಾನರ ಅದೃಷ್ಟಕ್ಕೆ ಅವರ ಕೈಗೆ ತಾಗಿದ್ದು ಸರ್ಪದ ಬಾಲ ಅಷ್ಟೇ. 
    ಹುಡುಗಾಟಿಕೆಯ ಹುಡುಗ ಬಂದು ಇಂದು ಏಕೋ ಪೇಪರ್ ಸರಿಯಾಗಿ ಒಳಗೆ ಹೋಗುತ್ತಿಲ್ಲಾ ಎಂದುಕೊಳ್ಳುತ್ತಿದ್ದ  ಅದನ್ನು ಹಿಂದೆ-ಮುಂದೆ ಸರಿಸಾಡಿ ತನ್ನ ಬೆರಳು ಸಹಿತ ಮುಂದೂಡುವ ಪ್ರಯತ್ನ ಮಾಡುತ್ತಿದ್ದ. ಸರ್ಪ ಹೊರಗೆ ಹೊರಡುವ ಭರದಲ್ಲಿ ಅವನ ಹಸ್ತವನ್ನು ಕುಟುಕಿದರೂ ಆಶ್ಚರ್ಯವಿರಲಿಲ್ಲ. 
    ಅಂದು ಹುಡುಗ ತಡವಾಗಿ ಬಂದದ್ದು, ಯಜಮಾನರು ಮುಂಚೆಯೇ ಕೈ ಹಾಕಿ ಜಾಗ್ರತೆ ವಹಿಸಿದ್ದು ಇವೆರಡೂ ಸರ್ಪ ಕಡಿತದಿಂದ ಜೀವವೊಂದು ಪಾರಾಗಲು ಸಹಾಯವಾಯಿತು.
     ಅಲ್ಲ. ಒಂದು ಪ್ರಶ್ನೆ. ನಾವು ಕೈಗೊಳ್ಳುವ ರಕ್ಷಣಾ ಕಾರ್ಯವು ಕೂಡಾ ಒಮ್ಮೆಮ್ಮೆ ನಮಗೆ ವಿಷವಾಗಿ ತಿರುಗಬಹುದಲ್ಲವೇ? ಜೋಕೆ...... ಜೋಕೆ.....!

ದಿನಾಂಕ: 18-11-2013        ಎಂ. ಗಣಪತಿ M.A.
ಕಾನುಗೋಡು
ಅಂಚೆ : ಬಿ.ಮಂಚಾಲೆ-577431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ ಮೊ.: 9481968771
Blog : mgkangod.blogspot.com

Tuesday 3 September 2013

ಮಡಿವಂತಿಕೆ ಇಲ್ಲದ ಶ್ರೀ ಗಣೇಶ



                                                                                                 ಎಂ. ಗಣಪತಿ. ಕಾನುಗೋಡು

ಕಿ.ಶ. 2ನೇ ಶತಮಾನದಿಂದ  ಗಣೇಶನ ಪೂಜೆಯು ರೂಡಿಗೆ ಬಂದಿತೆಂದು ಹೇಳಲಾಗುತ್ತಿದೆ. ಕಿ.ಶ. 8ನೇ ಶತಮಾನದಿಂದ ಈಚೆಗೆ   ಈಗಿನಂತೆ  ಎಲ್ಲಾ ಕಾರ್ಯಗಳ ಪ್ರಾರಂಭದಲ್ಲಿ ಗಣಪತಿಯನ್ನು  ಪೂಜಿಸುವ ಸಂಪ್ರದಾಯ ಬಂದಿತೆಂದು ಹೇಳುತ್ತಾರೆ. 
ಗಣೇಶನ ಹಬ್ಬದ ಕ್ರಮದಲ್ಲಿ  ಎರಡು ನೆಲೆಗಳಿವೆ,   ಒಂದು,  ಕುಟುಂಬದ ವ್ರತವಾಗಿ ಜನರು ಅವರವರ ಮನೆಯಲ್ಲಿ ಅಚರಿಸುವುದು.  ಇನ್ನೊಂದು  ಸಂಘಸಂಸ್ಥೆಗಳು, ಶಾಲೆಗಳು, ಸರ್ಕಾರಿ ಕಛೇರಿಗಳು ಅದಕ್ಕಾಗಿ ಹುಟ್ಟಿಕೊಂಡ ಸಮಿತಿಗಳಿಂದ ಸಾರ್ವಜನಿಕವಾಗಿ  ಉತ್ಸವವಾಗಿ ಆಚರಿಸುವುದು.  
ಗಣಪತಿಯ ಹುಟ್ಟಿನ  ಬಗ್ಗೆ  ಎರಡು ಅಬಿsಪ್ರಾಯಗಳಿವೆ. ದೇವತೆಗಳೆಲ್ಲಾ  ಸೇರಿ ತಮ್ಮ ಕಾರ್ಯ ನಿರ್ವಿಘ್ನವಾಗಿ ನೆರವೇರುವುದಕ್ಕೆ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು   ಶಿವನನ್ನು ಪ್ರಾರ್ಥಿಸಿದರು. ಆಗ ಅವರ ಇಷ್ಟದಂತೆ  ಪಾರ್ವತಿಯಲ್ಲಿ ಗಣೇಶನು ಹುಟ್ಟುವಂತೆ  ಶಿವ ಅನುಗ್ರಹಿಸಿದ. ಹೀಗೆ ಹುಟ್ಟಿದ ಗಣೇಶನಿಗೆ ಗಣಾದಿಪಥ್ಯವನ್ನು  ಕೊಟ್ಟು ಕಾರ್ಯವನ್ನು ನಿರ್ವಿಘ್ನವಾಗಿ  ನೆರವೇರಿಸಿಕೊಡುವ  ಶಕ್ತಿಯನ್ನು  ಕೊಟ್ಟ. ಅವನು  ಹೀಗೆ ಹುಟ್ಟಿದ್ದು ಭಾದ್ರಪದ ಶುಕ್ಲ ಚತುರ್ಥಿಯ ದಿನ ಚಂದ್ರೋದಯಕಾಲ. ಈ ಕಾರಣಕ್ಕಾಗಿ  ಆಂದಿನ  ದಿನ  ಗಣಪತಿಯ  ವ್ರತವನ್ನು  ನಡೆಸುವಂತೆ  ಶಿವ  ಅನುಗ್ರಹಿಸಿದ ಎನ್ನುವುದು ಒಂದು ಅಬಿsಪ್ರಾಯ. 
ಪಾರ್ವತಿಯು ತನಗಾಗಿ  ತನ್ನ ಅಂಗರಾಗದಿಂದ  ಗಣೇಶನನ್ನು ಸೃಷ್ಠಿಸಿ  ಅವನಿಗೆ ಜೀವಕಳೆಯನ್ನು ಕೊಟ್ಟಳು.  ಅವನು ಜೀವಪಡೆದ ಕೆಲವೇ ಸಮಯದಲ್ಲಿ  ಶಿವನಿಂದ ಶಿರಚ್ಛೇದನಕ್ಕೆ ಗುರಿಯಾದ. ಪುನಃ ಪಾರ್ವತಿಯ ಪ್ರಾರ್ಥನೆಯಂತೆ  ಆನೆಯ ತಲೆಯನ್ನು ಹೊಂದಿದವನಾಗಿ  ತಂದೆಯಿಂದ  ಜೀವಪಡೆದ. ಪಾರ್ವತಿಗೆ ತಾನು ಸೃಷ್ಠಿಸಿದ ಮಗನಮೇಲೆ ಬಹಳ  ಪ್ರೇಮ. ಹುಟ್ಟಿದ ಕೂಡಲೇ ಕಷ್ಟವನ್ನು ಅನುಭವಿಸಿದಕ್ಕಾಗಿ ಎಲ್ಲರೂ ನಿನ್ನನೇ ಮೊದಲು ಪೂಜಿಸಬೇಕು  ಎಂದು    ಆಶೀರ್ವದಿಸಿದಳು. ಅದಕ್ಕೆ ಶಿವನೂ  ಅನುಗ್ರಹಿಸಿದ ಎನ್ನುವುದು ಇನ್ನೊಂದು   ಅಬಿಪ್ರಾಯ.  
ಗಣೇಶನ ಶಾಪಕ್ಕೆ  ಗುರಿಯಾದ  ಚಂದ್ರ ತನ್ನ ಶಾಪ ವಿಮೋಚನೆಗಾಗಿ ಅವನನ್ನೇ ಮೊರೆಹೊಕ್ಕ. ಭಾದ್ರಪ್ರದ ಶುದ್ಧ ಚತುರ್ಥಿಯ ದಿನ ತನ್ನ ವ್ರತವನ್ನು ಕೈ ಗೊಂಡವರಿಗೆ   `ಅಪವಾದ` ಶಾಂತಿಯಾಗಲೆಂದು ಗಣಪತಿಯು ಚಂದ್ರನಿಗೆ ಅನುಗ್ರಹಿಸಿದ. ಒಮ್ಮೆ  ಶ್ರೀ ಕೃಷ್ಣ  ಶಮಂತಕ  ಮಣಿಯನ್ನು ಕದ್ದನೆಂಬ ಅಪವಾದಕ್ಕೆ ಸಿಲುಕಿದ.  ಆಗ ಇದರಂತೆ ಗಣಪತಿಯ ವ್ರತವನ್ನು ಕೈಗೊಂಡು ಆ ಶಾಪವನ್ನು ಪರಿಹರಿಸಿಕಕೊoಡ ಎಂದು ಹೇಳಲಾಗಿದೆ. 
ಮೇಲಿನ ಎಲ್ಲಾ ವಿಚಾರಗಳು ಜನರು ವೈಯಕ್ತಿಕವಾಗಿ ಗಣೇಶನ ಪೂಜೆ ಅಥವಾ ವ್ರತವನ್ನು ನಡೆಸುವುದಕ್ಕೆ ಪೂರಕವಾದ ಅಂಶಗಳು .
ಇನ್ನು,   ಸಾರ್ವತ್ರಿಕವಾಗಿ ಗಣೇಶನ  ಉತ್ಸವವನ್ನು ನಡೆಸುವ ವಿಚಾರ.  ಹಲವು ಜಾತಿಗಳು, ಸಂಪ್ರದಾಯಗಳು, ಸುಮಾರು  ಆರು ನೂರು ರಾಜ ಸಂಸ್ಥಾನಗಳ ಶಿಷ್ಟತೆಯಿಂದ ಕೂಡಿದ ಭಾರತ ರಾಷ್ಟ್ರದಲ್ಲಿ ಭಾವೈಕ್ಯತೆಯನ್ನು ತರುವುದು ಹಿಂದೆ ಒಂದು ಕಾಲದ ರಾಷ್ಟ್ರ ನೇತಾರರ ಉದ್ದೇಶವಾಗಿತ್ತು.  ಈ  ಉದ್ದೇಶ ಸಾಧನೆಗಾಗಿ ಸನ್ಮಾನ್ಯ ಬಾಲಗಂಗಾಧರ ತಿಲಕರು ಪ್ರಥಮವಾಗಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಣೆಗೆ  ತಂದರು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹವನ್ನು ಇಟ್ಟು ವಾರಗಟ್ಟಲೆ   ಉತ್ಸವವನ್ನು ನಡೆಸುವ  ಪದ್ಧತಿ ಅಂದಿನಿಂದ ರೂಡಿsಗೆ ಬಂದಿತು. ಎಲ್ಲಾ ಜಾತಿಗಳ, ವರ್ಗಗಳ, ಸಂಪ್ರದಾಯಗಳ ಜನರು ಗಣೇಶÉೂೀತ್ಸವದ ಸಂಭ್ರಮದಲ್ಲಿ  ಮಿಲನಗೊಳ್ಳುವಂತಾಯಿತು. ಇಲ್ಲಿ ಶ್ರೀ ಗಣೇಶ  ಜಾತ್ಯತೀತ , ಮಡಿವಂತಿಕೆ ಇಲ್ಲದ ದೇವರು. 
ಆದರೆ  ದುರಂತದ ಸಂಗತಿಯೆಂದರೆ ಇತ್ತೀಚೆಗೆ ಸಾರ್ವಜನಿಕ ಗಣೇಶೋತ್ಸವ  ತನ್ನ ಮೂಲ ಉದ್ದೇಶದ ಪಾವಿತ್ರತೆಯನ್ನು  ಕಳೆದುಕೊಳ್ಳುತ್ತಿದೆ. ಕ್ರಿಕೆಟ್ ಟೂರ್ನ್‍ಮೆಂಟ್ ಮಟ್ಟಕ್ಕೆ  ಅದು ಕುಸಿದಿದೆ. ಒಂದೊಂದು  ಜಾತಿಯವರದ್ದೇ ಒಂದೊಂದು  ಸಾರ್ವಜನಿಕ ಗಣೇಶ, ಒಂದು ಗುಂಪಿನವರದ್ದರ  ವಿರುದ್ಧ ದುರುದ್ದೇಶವಾಗಿ ಇನ್ನೊಂದು  ಸಾರ್ವಜನಿಕ ಗಣೇಶ.  ಈ  ತೆರೆನ ಬೆಳವಣಿಗೆ  ಸಮಾಜದ  ಸಂಘಟನೆಗೆ , ರಾಷ್ಟ್ರೀಯ ಭಾವೈಕ್ಯತೆಗೆ  ಮಾರಕವಾಗುತ್ತಿದೆ. ಕೆಲವರು ಹಣಮಾಡುವುದು, ಕೇವಲ ಅಮಲಿನ ರಂಜನೆಯ ಉದ್ದೇಶಕ್ಕಾಗಿಯೇ  ಗಣೇಶೋತ್ಸವವನ್ನು  ನಡೆಸುತ್ತಿರುವುದು  ಅಲ್ಲಲ್ಲಿ ಕಂಡುಬರುತ್ತಿದೆ. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊಬ :9481968771
BLOG: mgkangod.blogspot.com

Monday 2 September 2013

ಪುರುಸೊತ್ತಿಲ್ಲ . ಆಧುನಿಕ ಜಗತ್ತಿನಲ್ಲಿ ಒಂದು ಆತಂಕ


                                                                                                    ಎಂ.ಗಣಪತಿ. ಕಾನುಗೋಡು

ಪುರುಸಸೊತ್ತಿಲ್ಲ _ ಎನ್ನುವ ಪರಿಕಲ್ಪನೆ ಒಬ್ಬ ದೊಡ್ಡ ಉದ್ಯಮಿಯಿಂದ ಹಿಡಿದು ಬಿಕ್ಷುಕನವರೆಗು ತನ್ನ ಹರವಾನ್ನು  ಕಂಡುಕಕೊಂಡಿದೆ . ಇಂದು ಯಾರನ್ನು ಕೇಳಿದರೂ ಪುರುಸೊತ್ತಿಲ್ಲ ಎನ್ನುವ ಸೊಲ್ಲು ಸಾಮಾನ್ಯ. 
ಆಧುನಿಕ ಯಾಂತ್ರಿಕ  ಬದುಕಿನಲ್ಲಿ ಇದು ಅನಿರೀಕ್ಷಿ  ತವೇನಲ್ಲ. ಆದರೆ  ಪುರುಸೊತ್ತು ಎನ್ನುವುದು  ತಾನಾಗಿಯೇ  ಸಿಗುವಂತವುದೇ ಅಥವಾ ನಾವು ಕಂಡುಕೊಳ್ಳಬೇಕಾದುದ್ದೇ ಎಂಬುದನ್ನು ನಾವೇ ಆಲೋಚಿಸಬೇಕು. 
 ಒಂದು ನಿರ್ದಿಷ್ಟ ಉದ್ಯೋಗದ ಜನರಿಗೆ _ ಕೃಷಿಕ, ನೌಕರ, ವ್ಯಾಪಾರಿ ಹೀಗೆ  ಯಾವುದೇ ಒಂದು ಕಸುಬಿನಲ್ಲಿ  ನಿರಂತರ ನಿರತರಾಗಿರುವವರಿಗೆ   ಬಿಡುವು ಇರುವುದಿಲ್ಲ.  ಹಾಗೆಂದು  ಅವರು ತಮ್ಮ ದೈನಂದಿನ  ಮೂಲಭೂತ ಅಗತ್ಯಗಳು  _ ಊಟ, ಸ್ನಾನ, ನಿದ್ರೆ ಹೀಗೆ ಮುಂತಾದವುಗಳನ್ನು ಬಿಡಲು ಸಾಧ್ಯವಿಲ್ಲ. ಅದಕ್ಕೆಲ್ಲ ದಿನನಿತ್ಯದ ಕಸುಬಿನಲ್ಲಿ ಎಷ್ಟೇ ಒತ್ತಡವಿದ್ದರೂ ಪುರುಸೊತ್ತನ್ನು ಕಂಡುಕೊಳ್ಳೂತ್ತಾರೆ . ಅದು ಸಹಜ  ಕೂಡ. ಇವರಿಗೆ ತಾವಾಯ್ತು , ತಮ್ಮ ಕೆಲಸವಾಯ್ತು ಅಷ್ಟೇ . ಇದು ಒಂದು ವರ್ಗ. 
ಇನ್ನೊಂದು ವರ್ಗದ ಜನರಿದ್ದಾರೆ.  ಇವರಿಗೆ ಯಾವುದೇ ನಿರ್ದಿಷ್ಟ ಉದ್ಯೋಗ ಇರುವುದಿಲ್ಲವೆಂದಲ್ಲ.  ಅದನ್ನೇ ಹಿಡಿದು  ಮುನ್ನೆಡೆಸುವ ಪದ್ದತಿ ಇರುವುದಿಲ್ಲ. ಹಾಗೂ ಹೀಗೂ  ಮೂರುಹೊತ್ತಿನ ಅನ್ನಕ್ಕೆ ಬೇಕಾಗುವಷ್ಟು ದುಡಿಮೆ ಅವರದ್ದು. ಹಾಗೆಂದು ಅವರಿಗೂ ಪುರುಸೋತ್ತಿಲ್ಲ .  ತಮ್ಮ ಮಿತ ದುಡಿಮೆಯ ಶೂನ್ಯವೇಳೆಯಲ್ಲಿ ಅವರು ತಮ್ಮದರಕ್ಕಿಂತ   ಬೇರೆಯವರ ಬಗ್ಗೆ  ಕಾಳಜಿ ವಹಿಸುವುದು ಹೆಚ್ಚು. ತಮ್ಮ ಸುತ್ತಮುತ್ತಲಿನವರ  ಉಸಾಬರಿಗೆ ಅನಾವಶ್ಯಕ  ಮೂಗು ತೂರಿಸುತ್ತಾರೆ. ಪರಪೀಡನೆಯಿದ ಮನೋರಂಜನೆಯನ್ನು ಪಡೆಯುತ್ತಾರೆ. ಇವರು ಒಬ್ಬರಿಗೊಬ್ಬರಿಗೆ ಬೆಂಕಿಹಚ್ಚಿ ಕೊನೆಗೆ ತಾವೇ ಪಂಚಾಯಿತಿ ಮಾಡಿ  ಬಾಸ್ ಆಗುವ  ಚಟದ ಜನ.  ತನ್ನದು ಸಾವಿರ ಹೋದರೂ ಮತ್ತೊಬ್ಬನ ನೂರನ್ನು ವೆಚ್ಚಮಾಡಿಸುತ್ತೇನೆ ಎನ್ನುವ ಜನ. ಆಯುಷ್ಯವಿಡೀ  ಕೋರ್ಟು _ಕಟ್ಲೆ ನಡೆಸುವ ಜನ  ಹೀಗೆ  ಇನ್ನು ಅನೇಕ  ಸಲ್ಲದ ಕೆಲಸಗಳಲ್ಲಿಯೇ   ದಿನದ ತಮ್ಮ ವೇಳೆಯನ್ನು ವ್ಯಯಮಾಡುವ ಜನರಿದ್ದಾರೆ. ಇವರು ತಮ್ಮ ಸೀಮಿತ ಉದ್ಯೋಗಕ್ಕೆ ಧಕ್ಕೆ ತಂದುಕೊಳ್ಳದೆ ಸ್ವಂತ ರಂಜನೆಗಾಗಿ ಇನ್ನೊಬ್ಬರಿಗೆ ತೊಂದರೆಯನ್ನು ಕೊಡುವುದರಲ್ಲಿ ತಮ್ಮ ಜೀವಿತಾವದಿsಯನ್ನು  ತೊಡಗಿಸಿಕೊ0ಡಿರುತ್ತಾರೆ,  ಇವರಿಗೂ ಪುರುಸೊತ್ತೇ  ಇಲ್ಲ. 
ಹಲವು ಜನರಿಗೆ  ತಮ್ಮ ಜೀವನೋಪಾಯಕ್ಕಾಗಿ ಯಾವ ಉದ್ಯೋಗವೂ ಇರುವುದಿಲ್ಲ. ಸ್ವಂತ ದುಡಿಯುವುದಕ್ಕಷ್ಟೇ ಸೋಮಾರಿಗಳು. ಸ್ವಾಬಿಮಾನ ವಿಲ್ಲದವರು.  ಕುಟುಂಬದಲ್ಲಿ ಯಾರಾದರೂ ದುಡಿಯುವರಿದ್ದರೆ ತಿಂದುಕೊಂಡು ಅಡ್ಡನಾಡಿಯಾದವರು. ಹಾಗಂತ ಇವರಿಗೂ ಪುರುಸೊತ್ತಿಲ್ಲ.  ಇವರು ದಿನದ ಹೆಚ್ಚಿನ ಸಮಯ ಮಲಗಿರುತ್ತಾರೆ. ನಿದ್ದೆ ಬಂದಿಲ್ಲವೇ, ಹಾಯಾಗಿ ಕುಳಿತಿರುತ್ತಾರೆ.  ಎದ್ದುಹೊರಟರೋ, ಯಾರಿಗಾದರೂ   ಟೋಪಿಹಾಕಿ ಹಣ ಲಪಟಾಯಿಸುತ್ತಾರೆ.  ಇವರು ಸೋಮಾರಿಗಳೇ ವಿನಃ ದಡ್ಡರಲ್ಲ. ವಿಕೃತ ಮತ್ತು ಕ್ರಿಮಿನಲ್ ಮನೋಭಾವದವರು. ವಾಸ್ತವಿಕ ದುಡಿಮೆಗಾರರ ಮನಸ್ಸು  ಒಂದೇ ದಿಕ್ಕಿನಲ್ಲಿ , ಒಂದೇ ರೀತಿಯಲ್ಲಿ   ಓಡುತ್ತದೆ  ಇವರದ್ದು ಹಾಗಲ್ಲ. ಯಾರನ್ನಾದರೂ ವಂಚಿಸಿ ಹೊಟ್ಟೆ ತುಂಬಿಸಿಕೊಂಡು  ಮೋಜುಮಾಡಲು ಹಲವು ಕಡೆ, ಹಲವು ರೀತಿಯಲ್ಲಿ ಬುದ್ಧಿಯನ್ನು ವ್ಯಯಿಸುತ್ತಾರೆ. ಉಂಡಾಡಿಗಳಾಗಿ ತಿರುಗುತ್ತಾರೆ.ಕೆಲವೋಮ್ಮೆ ರೌಡಿಸಂನ್ನು ನಡೆಸುತ್ತಾರೆ.  ಸಮಾಜ ಕಂಟಕರಾಗಿ  ಬದುಕು ನಡೆಸುತ್ತಾರೆ. 
ಒಟ್ಟಾರೆ  ಎಲ್ಲರ ಬದುಕು ಪುರಸೊತ್ತು ರಹಿತವಾದದ್ದು.  ಸಮಯವನ್ನು ವಿನಿಯೋಗಿಸಿಕೊಳ್ಳುವ ಕ್ರಮಗಳು ಬೇರೆ ಬೇರೆ ಅಷ್ಟೆ. ನಾವು ಜೀವನದ ಸೀಮಿತ  ಕಾಲಾವದಿಯನ್ನು   ಸರಿಯಾಗಿ ವಿನಿಯೋಗಿಸಿಕೊಳ್ಳುವುದು ಮುಖ್ಯ. ಜೀವನವನ್ನು  ಶಿಸ್ತುಬದ್ದವಾಗಿ  ಹೊಂದಿಸಿಕೊಳ್ಳುವವರು ಪುರುಸೊತ್ತಿಗೂ ವೇಳೆಯನ್ನು ಹೊನ್ದಿಸಿಕೊಂಡಿರುತ್ತಾರೆ.  ಎಲ್ಲದಕ್ಕೂ ಘನ ಷರತ್ತು ಬೇಕು ಅಷ್ಟೆ. 

Wednesday 28 August 2013

ನವ ದಂಪತಿಗಳ ವಿವಾಹ ವಿಚ್ಛೇದನ



                                                                          -ಎಂ. ಗಣಪತಿ ಕಾನುಗೋಡು
ವಿವಾಹ ವಿಚ್ಛೇದನ ಹೊಸತಲ್ಲ. ಹಿಂದಿನ ಕಾಲದಲ್ಲಿ ವಿಚ್ಛೇದನ ಹೆಚ್ಚಾಗಿ ಪುರುಷ ಮೂಲವಾಗಿತ್ತು. ಪ್ರಸ್ತುತ ಮುಂದುವರೆದ ಸನ್ನಿವೇಶದಲ್ಲಿ ಪತಿಯರಷ್ಟೇ ಅಲ್ಲ ಅದಕ್ಕಿಂತ ಹೆಚ್ಚಾಗಿ ಪತ್ನಿಯರೇ ವಿಚ್ಛೇದನ ಬಯಸುವುದು ಕಂಡುಬರುತ್ತಿದೆ. ನವವಿವಾಹಿತರಲ್ಲಿ ವಿವಾಹವಾದ ಒಂದು ತಿಂಗಳು, ವರ್ಷದೊಳಗೆ  ಭಿನ್ನಾಭಿಪ್ರಾಯ ಹುಟ್ಟಿಕÉೂಂಡಿರುತ್ತದೆ. ಇದಕ್ಕೆ ಕಾರಣಗಳು ಹಲವಾರು. 
ಯುವಕ ಯುವತಿಯರಿಬ್ಬರು ಪರಸ್ಪರ ನಿರೀಕ್ಷೆಗಳ ಭ್ರಮೆಯಲ್ಲಿ ವಿವಾಹವಾಗಿರುತ್ತಾರೆ. ಅವುಗಳ ತುಲನೆ ವಿವಾಹದ ಮೊದಲನೆ ದಿನದಿಂದಲೇ ಇಬ್ಬರಿಂದಲೂ ಪರಸ್ಪರ ನಡೆಯುವುದಕ್ಕೆ ಪ್ರಾರಂಭವಾಗುತ್ತದೆ. ಯಾರ ನಿರೀಕ್ಷೆಗೆ ಯಾರೂ ನಿಲುಕುವುದಿಲ್ಲ. ಪರಸ್ಪರ ಭಿನ್ನಾಭಿಪ್ರಾಯಕ್ಕೆ  ಇದೇ ಮೊದಲ ಮೆಟ್ಟಿಲು.     
ಹೆಣ್ಣುಮಕ್ಕಳಿಗೆ ಈ ವಿಷಯದಲ್ಲಿ ಕಾನೂನಿನ ಸವಲತ್ತು ಹಿಂದಿನಿಗಿಂತ ಈಗ ಹೆಚ್ಚಾಗಿದೆ. ವಿರಸಕ್ಕೆ ಕಾರಣವೇನಿದ್ದರೂ ವರದಕ್ಷಿಣೆಯ ಕಾನೂನು ವರದಕ್ಷಿಣೆಯ ವಿಚಾರವನ್ನೇ ಹುಟ್ಟುಹಾಕಿ ಪತಿಯ ಮತ್ತು ಅವರ ಪೋಷಕರ ಮಗ್ಗಲು ಮುರಿಯುವಲ್ಲಿ ಬಳಕೆಯಾಗುತ್ತಿದೆ. ದುರುಪಯೋಗವಾಗುತ್ತಿದೆ ಕೂಡಾ. ತಂದೆಯ ಮನೆಯ ಆಸ್ತಿಯಲ್ಲಿ ಸಮಹಕ್ಕನ್ನು ಪಡೆದ ನಂತರವೂ ಗಂಡ ಬೇಡವೆಂದೆನಿಸಿದರೂ ಅವನ ಆಸ್ತಿ ಮತ್ತು ಸಂಪತ್ತು ಬೇಡವೆನಿಸುವುದಿಲ್ಲ. ಅದರಲ್ಲಿ ಪಾಲು ಕೇಳುವಷ್ಟು ಕಾನೂನಿನ ಬೆಂಬಲ ಅವಳಿಗಿದೆ. ಮಕ್ಕಳಿದ್ದರೆ ಮಕ್ಕಳ ಪೋಷಣೆ ತನ್ನ ಬದುಕಿನ ರಕ್ಷಣೆಗೆಂದು ಗಂಡನಿಂದ ಹಲವು ಲಕ್ಷ ರೂಪಾಯಿಗಳನ್ನು ದೋಚುವ ಸ್ಥಿತಿಯಲ್ಲಿ ಅವಳಿದ್ದಾಳೆ. ಇದು ವಿಚ್ಛೇದನದತ್ತ ಮುನ್ನುಗ್ಗುವಲ್ಲಿ ಮಹಿಳೆಗೆ ಇರುವ ಕಾನೂನಿನ ಬೆಂಬಲ. 
ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸರಿಸಮಾನಾಗಿ ಶಿಕ್ಷಣವನ್ನು ಹೊಂದಿ ಹೆಚ್ಚು ಸಂಪಾದಿಸುತ್ತಿದ್ದಾರೆ. ಕೂಡಿ ನಡೆಯುವಲ್ಲಿ ಅಗತ್ಯವಾದ ಶ್ರೇಷ್ಠತೆ ಮತ್ತು ಅಧೀನತೆಯ ನಡವಳಿಕೆ ಇಲ್ಲಿ ಶೂನ್ಯ. ಯಾರಿಗೆ ಯಾರೂ ಸೋತು ಸರಿಯುವುದಿಲ್ಲ. ಅಂತಿಮ ಪರಿಣಾಮ ವಿಚ್ಛೇದನ.
ವಿವಾಹದ ಹೊಸತರಲ್ಲಿ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ವಾಸ್ತವಿಕ ಆತ್ಮೀಯತೆ ಬೆಳೆದಿರುವುದಿಲ್ಲ. ದುಡಿಮೆಗಾಗಿ ದಿನದ ಬಹಳ ಕಾಲ ಗಂಡ ಮತ್ತು ಹೆಂಡತಿ ದೂರವಿರುವುದರಿಂದ ಪರಸ್ಪರ ಚಾರಿತ್ರಿಕವಾಗಿ ಒಮ್ಮೊಮ್ಮೆ ಸಂಶಯ ಪಡುವ ಸಂದರ್ಭವೂ ಇದೆ. ಈ ಬಿರುಕಿನ ಅಂತಿಮ ಘಟನೆ ವಿಚ್ಛೇದನ.
ಸಂಪಾದನೆಯ ಅಮಲಿನಲ್ಲಿ ಕೆಲವು ಯುವಕರು ನಗರದಲ್ಲಿ ಡ್ರಗ್ ಅಡಿಕ್ಷನ್, ಕುಡಿತ ಮುಂತಾದ ದುಶ್ಚಟಗಳಿಗೆ ದಾಸರಾಗಿದ್ದಾರೆ. ಇವರನ್ನು ತಿದ್ದಲಾಗದೆ, ಕೊನೆಗೆ ಸಹಿಸಲಾಗದೆ ಅವರ ಪತ್ನಿಯರು ಹತಾಶರಾಗುತ್ತಾರೆ. ಈ ಬೇಗುದಿಯ ಅಂತ್ಯವೇ ವಿಚ್ಛೇದನ. 
ಇಂದಿನ ಕುಟುಂಬಗಳಲ್ಲಿ ಮಕ್ಕಳಿಗೆ ಸಹಬಾಳ್ವೆಯ ಮನೋಭಾವವನ್ನು ಕಲಿಸುವ ಅವಕಾಶ ಕಡಿಮೆ. ಶಿಕ್ಷಣದ ಕಾರಣದಿಂದ ಅವರ ಬುದ್ಧಿ ಬೆಳವಣಿಗೆಯ ಪ್ರಾರಂಭದಿಂದ ಕುಟುಂಬದ ಹೊರಗೆ ಬೆಳೆದು ವಿವಾಹದ ಹಂತಕ್ಕೆ ಬಂದಿರುತ್ತಾರೆ. ಕುಟುಂಬದ ಹಿರಿಯರು-ಕಿರಿಯರು, ಹುಟ್ಟಿನ ನೆರೆಹೊರೆಯವರು, ಸಂಬಂಧಿಕರು ಎನ್ನುವ ಸಾಮಾಜಿಕ ಜೀವನದ ಪ್ರಾಥಮಿಕ ಸಂಘಗಳ ಒಡನಾಟವೇ ಇಂದಿನ ಯುವಜನತೆಗೆ ದೊರಕುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಅವರಿಗೆ ದೊರಕುವುದು ವಿಷಯಗಳ ಜ್ಞಾನವಷ್ಟೇ. ಬದುಕಿನ ಅರಿವಲ್ಲ. ಕೂಡಿ ಬದುಕುವ ಬುದ್ಧಿ ಬರುವಷ್ಟರ ಹೊತ್ತಿಗೆ ವಿವಾಹ ವಿಚ್ಛೇದನದಂತಹ ಆಗಬಾರದ ಪ್ರಮಾದವೆಲ್ಲ ಆಗಿ ಯುವಜನರು ಮುದುಕರಾಗಿರುತ್ತಾರೆ. 
ಈಗ ಕೇವಲ ಎರಡು ಅಥವಾ ಒಂದೇ ಮಗುವಾದ್ದರಿಂದ ತಾಯಿ ತಂದೆಯರು ಅವರನ್ನು ಅತೀ ಮುದ್ದಿನಿಂದ ಸಾಕಿರುತ್ತಾರೆ. ಮುದ್ದಿನ ಸಂವೇದನೆಯಲ್ಲಿ ಬದುಕಿನ ಕಲೆಯ ನೆಲೆ ಕಮರಿ ಹೋಗಿದೆ. ಗಂಡು-ಹೆಣ್ಣು ಮಕ್ಕಳು ದಾಂಪತ್ಯದಲ್ಲಿ ಹೊಂದಿಕೊಳ್ಳದೆ ಸಿಡಿದು ಹೋಗಲು ಇದು ಪ್ರಮುಖ ಕಾರಣ. 
ಇಂದಿನ ದಂಪತಿಗಳು ಯೋಚಿಸಬೇಕಾದದ್ದಿಷ್ಟೇ. ಇದ್ದಲ್ಲಿಯೇ ಕಾಡಿ ಕೂಡಿ ಬಾಳ್ವೆ ನಡೆಸಬೇಕು. ಹೊಂದಿಕೊಳ್ಳುವ ಮನೋಭಾವ ಇಲ್ಲದವರು ಯಾರನ್ನ ಬಿಟ್ಟು ಯಾರನ್ನ ಕೂಡಿಕೊಂಡರೂ ಇದೇ ಪಾಡು. ಹೊಂದಿಕೊಂಡು ಮುನ್ನಡೆಯಬೇಕೆಂದಿದ್ದರೆ ಒಬ್ಬರಿಗೆ ಒಬ್ಬರು ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಗ್ಗಿ ನಡೆಯಬೇಕಾದದ್ದು ಅಗತ್ಯ. ಪರಸ್ಪರ ವಿಶ್ವಾಸ ಮುಖ್ಯ. ಸುಖಕ್ಕಾಗಿ ಪರದಾಡಿ ಮುದುಕರಾಗುವ ಮುಂಚೆ ಇದ್ದಲ್ಲಿಯೇ ಸಾವರಿಸಿಕೊಂಡು ನೆಮ್ಮದಿಯಿಂದ ಇರುವುದು ಲೇಸು. ಸುಖ ಎನ್ನುವುದು ಅವರವರ ಮನೋಗತಿಗೆ ಬಿಟ್ಟ ವಿಚಾರ. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771

ಕೀರ್ತಿ ಕಾಮನೆ - ಮನುಷ್ಯನ ಒಂದು ಹಂಬಲ


                                                                         ಎಂ. ಗಣಪತಿ. ಕಾನುಗೋಡು
ಮನುಷ್ಯನ ಅನೇಕ ಬಯಕೆಗಳಲ್ಲಿ ಕೀರ್ತಿ ಕಾಮನೆಯೂ  ಒಂದು. ಜೀವನದ ಮೂಲಭೂತ ಬಯಕೆಗಳಾದ ಅನ್ನ, ವಸತಿ, ವಸ್ತ್ರ, ಇವು ಮೂರು ಇಂಗಿದ ಮೇಲೆ ಅವಕ್ಕೂ ಮೀರಿದ  ಅಸಂಖ್ಯಾತ ಪೂರಕ  ಬಯಕೆಗಳತ್ತ ಎಲ್ಲರೂ ಧಾವಿಸುತ್ತಾರೆ. ಅವುಗಳಲ್ಲಿ ಕೀರ್ತಿ ಸಾಧಿಸಬೇಕೆಂಬ ಹಂಬಲವೂ ಹೌದು. 
ಹುಟ್ಟು ಮತ್ತು ಸಾವು ಮನುಷ್ಯನನ್ನು ಒಳಗೊಂಡು ಎಲ್ಲಾ ಪ್ರಾಣಿಗಳಿಗೂ ಸಹಜ. ಆದರೆ ಎಷ್ಟೋ ಜನರು ಇದ್ದದ್ದು  ಹಾಗೂ  ಸತ್ತದ್ದು ಯಾರಿಗೂ  ತಿಳಿಯುವುದೇ ಇಲ್ಲ. ಕಾರಣ ಯಾವುದೇ  ವಿಚಾರದಲ್ಲೂ ಅವರು ಸಮಾಜದ  ಕಣ್ಣಿಗೆ ಕಾಣಿಸಿಕೊಂಡಿರುವುದಿಲ್ಲ. 
ಕೆಲವರು ಹಾಗಲ್ಲ. ತಾನು ಪ್ರಚಾರದಲ್ಲಿರಬೇಕು. ತನ್ನನ್ನು ಬಹಳ ಜನ ಗುರುತಿಸಬೇಕು ಎಲ್ಲರೂ ಶ್ಲಾಘಿಸುವಂತೆ  ಹೆಸರು ಗಳಿಸಬೇಕು   ಎನ್ನುವ ಹೆದ್ದಾಸೆ ಅವರಿಗೆ ಇರುತ್ತದೆ.   ಇದೇ ಕೀರ್ತಿ ಕಾಮನೆ.
ಈ ಉದ್ದೇಶಕ್ಕಾಗಿ ಜನರು ಗುರುತಿಸುವಂತಹ ಅನೇಕ ಕೆಲಸಗಳಲ್ಲಿ ತಮ್ಮನ್ನುತೊಡಗಿಸಿಕೊಂಡಿರುತ್ತಾರೆ. ಸಮಾಜ  ಸೇವೆ, ಹಳ್ಳಿಗಳಲ್ಲಿ ಗಿಡಮೂಲಕೆ ಜೌಷದಿsಗಳನ್ನು ಕೊಡುವುದು,  ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕ ಕೆಲಸಗಳಿಗೆ ಹಣ  ಕೊಡುವುದು, ಹಾವು ಹಿಡಿಯುವುದು. ಯಾರೇ  ಯಾವುದೇ ತೊಂದರೆಯಲ್ಲಿ ಸಿಕ್ಕಿ ಕೊಂಡಾಗ ತಕ್ಷಣ ಅಲ್ಲಿಗೆ ಧಾವಿಸಿ ಸಹಾಯಮಾಡುವುದು,  ಊರಿನಲ್ಲಿ  ಯಾರ ನಡುವೆಯಾದರೂ ವೈಮಸ್ಸು ಜಗಳ ಬಂದಾಗ  ಪಂಚಾಯಿತಿ ಮಾಡಿ ಅವರಲ್ಲಿ ರಾಜಿ ಮಾಡಿಸುವುದು, ಕಲಾಕ್ಷೇತ್ರಗಳಲ್ಲಿ ಭಾಗವಹಿಸುವುದು, ಹೀಗೆ ಇನ್ನೂ ಅನೇಕ ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವರು ಸ್ವಲ್ಪ ಸಂಭಾವನೆ ಪಡೆದರೂ ಕೂಡ ಅವರು ಮಾಡಿದ ಸೇವೆಗೆ ಅದು ಗೌಣ. 
ಇಂತಹ ಸ್ವಭಾವದರಲ್ಲಿಯೂ ಮೂರು ವಿಧಗಳಿವೆ. 1. ತಮ್ಮ  ವೈಯುಕ್ತಿಕ ಬದುಕನ್ನು ಬದಿಗಿಟ್ಟು ಅಗತ್ಯವಿದ್ದವರಿಗೆ ಆಯಾ ಸಂದರ್ಭಗಳಲ್ಲಿ ಧಾವಿಸಿ, ಸೇವೆ ಮಾಡಿ ಕೀರ್ತಿ ಸಂಪಾದಿಸುವವರು 2. ತಮ್ಮ ನಿತ್ಯ ಬದುಕನ್ನು ಪ್ರಧಾನವಾಗಿಟ್ಟುಕೊಂಡು ಬಿಡುವಿನ ವೇಳೆಯಲ್ಲಿ ಇಂತಹ ಸೇವೆಗಳನ್ನು ಮಾಡಿ ಕೀರ್ತಿ ಸಂಪಾದಿಸುವವರು. 3. ಕೆಲವರು ನೌಕರಿ ಅಥವಾ ಇನ್ಯಾವುದೋ ನಿರ್ದಿಷ್ಟ ಮತ್ತು ನಿಬಿಡವಾದ ಉದ್ಯೋಗದಲ್ಲಿ ನಿರತರಾಗಿರುತ್ತಾರೆ. ಇಂತಹವರು ತಾವು ಮಾಡುವ ಉದ್ಯೋಗವನ್ನೇ ಬಹಳ ಪ್ರ್ರಾಮಾಣಿಕತೆ ಮತ್ತು ದಕ್ಷತೆಯಿಂದ ಮಾಡುವುದು. ಅದರ ಪ್ರಯೋಜನ ಸಂಬಂಧ ಪಟ್ಟ ಸಂಸ್ಥೆಗೆ ಮತ್ತು ಜನರಿಗೆ ಯಶಸ್ವಿಯಾಗಿ ದೊರಕುವಂತೆ ಶ್ರಮಿಸುವುದು. ಈ ಮಾರ್ಗದಲ್ಲಿ  ಉದ್ಯೋಗದಲ್ಲಿರುವ ವ್ಯಕ್ತಿಗಳು ಹೆಸರನ್ನು ಗಳಿಸುತ್ತಾರೆ.  ಇಂತಹವರು ತಾವು ನಿರತರಾದ ಕೆಲಸವನ್ನು ಬದಗಿಡುವುದಾಗಲೀ, ಅಥವಾ ಅದನ್ನು ಬಿಟ್ಟು ಸೇವೆ ಮಾಡಿ ಹೆಸರು ಗಳಿಸುವ ತುಡಿತಕ್ಕೆ  ಹೋಗುವುದಿಲ್ಲ. ಉಪಾಧ್ಯಾಯರು, ವೈದ್ಯರು, ಕಾರ್ಮಿಕರು, ಇನ್ಯಾವುದೇ, ಸರ್ಕಾರಿ ಅಥವಾ ಖಾಸಗಿ ನೌಕರರು ಈ ವರ್ಗಕ್ಕೆ ಸೇರುತ್ತಾರೆ. 
ಅವರ ಹಂಬಲ ಏನೇ ಇರಲಿ, ಹೀಗೆ ಪ್ರಾಮಾಣಿಕವಾಗಿ ತೊಂದರೆ, ನಷ್ಟಗಳನ್ನು  ಎಣಿಸದೆ ಪರೋಪಕಾರವನ್ನು ಮಾಡುವ ಜನರು ಸಮಾಜದಲ್ಲಿ ಇನ್ನೂ ಇದ್ದಾರೆ. ಇದರಲ್ಲೂ,  ಕೆಲವರು ಹೆಚ್ಚು ಪ್ರಚಾರಕ್ಕೆ ಬಂದು ಸಾರ್ವಜನಿಕ ಸನ್ಮಾನ, ಶ್ಲಾಘನೆಗೆ ಒಳಗಾಗುತ್ತಾರೆ. ಇನ್ನು ಕೆಲವರು ಅಂತಹ ಬಹಿರಂಗ ಗೌರವ ದೊರಕದಿದ್ದರೂ  ಜನರ ಅಂತರಂಗದ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. 
ಒಂದು ದೃಷ್ಠಿಯಲ್ಲಿ ಕೀರ್ತಿ ಕಾಮನೆ ಮನುಷ್ಯನ ಒಂದು ಬಗೆಯ ಸ್ವಾರ್ಥ ಎನ್ನಿಸುತ್ತದೆ. ಆದರೆ ಸಂಪೂರ್ಣವಾಗಿ  ಸ್ವಾರ್ಥದ ಬದುಕಿನಲ್ಲಿಯೇ   ಮುಳುಗಿದವರನ್ನು ಕಂಡಾಗ `ಕೀರ್ತಿ ಕಾಮನೆ' ಯಂತಹ ಸ್ವಾರ್ಥದ ಸಾಧನೆಯಲ್ಲೂ ಪರಾರ್ಥದ ಸಾರ್ಥಕತೆ ಇದೆ  ಎನ್ನುವುದು ಮೆಚ್ಚುವಂತಹ ಸಂಗತಿ. 
ಒಂದು ವಿಪರ್ಯಾಸದ  ವಿಷಯವೆಂದರೆ, ಒಳ್ಳೆಯ ಕೆಲಸಗಳಿಂದಲೂ ಒಬ್ಬ ವ್ಯಕ್ತಿ ಪ್ರಚಾರಲ್ಲಿರುತ್ತಾನೆ. ಹಾಗೆಯೇ  ಕೆಟ್ಟ ಕೆಲಸಗಳಿಂದಲೂ ಮತ್ತೊಬ್ಬ ವ್ಯಕ್ತಿ ಪ್ರಚಾರದಲ್ಲಿಯೇ  ಇರುತ್ತಾನೆ. ಆದರೆ ಒಬ್ಬನದು ಸತ್ಕೀರ್ತಿ. ಇನ್ನೊಬ್ಬನದು  ದುಷ್ಕೀರ್ತಿ. 


ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771

Saturday 24 August 2013

ಹೆಂಡತಿಯ ಮೇಲೆ ಗಂಡನ ಅತ್ಯಾಚಾರ !!


                                                                                                    ಎಂ. ಗಣಪತಿ. ಕಾನುಗೋಡು
ಹೌದು. ಹೆಂಡತಿಯ ಮೇಲೆ ಗಂಡನಾದವನು ಅತ್ಯಾಚಾರ ನಡೆಸುವುದೂ ಇದೆ. ಇದನ್ನು ಕೇಳಿ ಬಹಳ ಜನರಿಗೆ ಆಶ್ಚರ್ಯವಾಗುತ್ತದೆ. ಒಬ್ಬ ಪುರುಷ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದಮೇಲೆ ಅವಳ ದೈಹಿಕ ಸಂಪರ್ಕವನ್ನು ಹೊಂದುವ ಹಕ್ಕು  ಅವನಿಗೆ ಇದೆ. ಇಲ್ಲಿ ಅತ್ಯಾಚಾರದ ಪ್ರಶ್ನೆ ಏನು ಎಂದು ಸಾಮಾನ್ಯರ ಅಭಿಪ್ರಾಯ. 
ಸ್ವತಃ ಪತ್ನಿಯೊಡನೆ ದೈಹಿಕ ಸಂಪರ್ಕವನ್ನು ಹೊಂದಬೇಕಾದರೂ ಆಕೆಯ ಪೂರ್ಣ ಸಮ್ಮತಿಬೇಕು. ಅವಳ ಇಚ್ಚೆಯ ವಿರುದ್ಧ ಬಲಾತ್ಕಾರವಾಗಿ ಅವಳನ್ನು ಸಂಪರ್ಕಿಸುವುದು ವೈವಾಹಿಕ ಅತ್ಯಾಚಾರ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಪತಿ-ಪತ್ನಿಯರ ಕೂಡುವಿಕೆಗೂ ಕಾಲ, ಸ್ಥಳ, ಪರಸ್ಪರ ಒಪ್ಟಿಗೆ ಹಾಗೂ ಆ ಕ್ರಿಯೆಗೆ ಸಂಬಂಧಪಟ್ಟು ಸಂದರ್ಭದ ಪೂರ್ಣ ಸಿದ್ಧತೆಬೇಕು. ಇವ್ಯಾವುದರ ಹೊಂದಾಣಿಕೆಯೂ ಇಲ್ಲದೆ ಹಠಾತ್ ಒತ್ತಾಯಪೂರ್ವಕವಾಗಿ ನಡೆಸುವ ಸಂಭೋಗ ಅತ್ಯಾಚಾರವೆನಿಸುತ್ತದೆ. ಮದುವೆಯಾದ ಹೊಸತರದಲ್ಲಿ ಅಥವಾ ಯೌವನದ ಬಿಸಿ ಕುದುಯುತ್ತಿರುವವರೆಗೂ  ಈ ತೆರೆನ ಅನಪೇಕ್ಷಿತ ಸಂದರ್ಭಗಳು ನಿರ್ಮಾಣವಾಗುತ್ತದೆ. ಇದು ಪ್ರಾಯದ ಪ್ರಮಾದವೇ ವಿನಃ ಹಿಂಸೆಯ ದುರುದ್ದೇಶ ಪುರುಷನಿಗೆ ಇರುವುದಿಲ್ಲ.  ಹಾಗಂತ ಈ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ. 
ಆಹಾರ ಪಥ್ಯದಂತೆ ಹಾಸಿಗೆ ಪಥ್ಯವೂ ಕೂಡ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಒಂದು ನಿಗ್ರಹ. ಸಂತಾನ ನಿಯಂತ್ರಣದ ಆಧುನಿಕ ತಂತ್ರಗಳ ಅಭಾವದ ಕಾಲದಲ್ಲಿ ಸಂತಾನ ನಿಯಂತ್ರಣಕ್ಕಾಗಿ ನಮ್ಮ ಹಿರಿಯರು ಹಾಸಿಗೆ ಪಥ್ಯವನ್ನು ಅನುಸರಿಸುತ್ತಿದ್ದರು. ಹೆಂಡತಿ ಗರ್ಭವನ್ನು ಧರಿಸಬಹುದಾದ ದಿನಗಳಲ್ಲಿ ಆಕೆಯ ದೆೃಹಿಕ ಸಂಪರ್ಕವನ್ನು ನಡೆಸುತ್ತಿರಲಿಲ್ಲ. ಹೆಂಡತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಹಾಸಿಗೆ ಪಥ್ಯ ಅಗತ್ಯ. ಆಧುನಿಕ ಸಮಾಜದ  ಬಹುತೇಕ ಯುವಜನರಿಗೆ ಈ ಪರಿಕಲ್ಪನೆಯ ಮಾಹಿತಿ ಇಲ್ಲ. 
ಬಹಳ ಕೆಲಸಗಳಿಂದ ದಣಿದಾಗ, ಕಾಯಿಲೆಯಿಂದ ಬಳಲಿದಾಗ, ರಾತ್ರಿ ನಿದ್ದೆಯಲ್ಲಿ ಮೈಮರೆತಾಗ, ತುಂಬು ಗರ್ಭಿಣಿ ಇದ್ದಾಗ, ಬಾಣಂತಿಯಿದ್ದಾಗ ಗಂಡನಡೆಸುವ ಸಂಪರ್ಕ ಕ್ರಿಯೆಯು ಅತ್ಯಾಚಾರವೆನಿಸುತ್ತದೆ. 
ನಗರದ ಬಹಳ ಕುಟುಂಬಗಳಲ್ಲಿ ರಜಸ್ವಲೆಯಾದ  ಮಹಿಳೆ ಹೊರಗೆ ಇರುವುದು ಕಂಡುಬರುವುದಿಲ್ಲ. ಈ ಸಂದರ್ಭದಲ್ಲಿ ಅವಳಿಗೆ ದೈಹಿಕ ಮತ್ತು ಮಾನಸಿಕ ವಿಶ್ರಾಂತಿಬೇಕು. ಈ ಕಾರಣದಿಂದ ಕೆಲಸದ ಒತ್ತಡದಿಂದ ಆಕೆ  ದೂರವಿರಬೇಕು ಎನ್ನುವ  ನಮ್ಮ ಹಿರಿಯರ ಕಲ್ಪನೆಯಲ್ಲಿ ನಾಲ್ಕುದಿನ ಆಕೆಯನ್ನು ಪ್ರತ್ಯೇಕ ಇರಿಸುವ ಪದ್ಧತಿ ಬಂದಿದ್ದಿರಬೇಕು.  ಈ ಸಂದರ್ಭದಲ್ಲಿ ದೈಹಿಕ ಸಂಪರ್ಕವೂ ಅವಳ ಆರೋಗ್ಯದ ದೃಷ್ಟಿಯಿದ ನಿಷಿದ್ಧ. ದೇಹ ಮತ್ತು ಮನಸ್ಸು  ಬಹಳ ಬಳಲಿಕೆಯಲ್ಲಿ ಇರುವುದರಿಂದ ಮಹಿಳೆಗೆ ಅದರ ಅಪೇಕ್ಷೆಯೂ ಇರುವುದಿಲ್ಲ. ಆದರೆ ಇಂದಿನ  ಜಂಜಾಟದ ಬದುಕಿನಲ್ಲಿ, ಅದೂ ಕೂಡ ಕೇವಲ ಪತಿ- ಪತ್ನಿಯರಷ್ಟೆ ಇರುವ ಅಣು ಕುಟುಂಬದಲ್ಲಿ ಮಹಿಳೆ ರಜಸ್ವಲೆಯಾದಾಗ ಹೊರಗೆ ಇರುವ ಮಾತು ಇರಲಿ, ಒಟ್ಟಿಗೇ ಹಾಸಿಗೆಯನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ  ಹೆಂಡತಿಯ ಸಂಪರ್ಕವನ್ನು  ಅದಕ್ಕೆ ಬೇಕಾದ ವ್ಯವಸ್ಥೆಯೊಂದಿಗೆ ಗಂಡ ಬಯಸುವ ಸಾಧ್ಯತೆ ಇದೆ.  ಇದು ಅತ್ಯಾಚಾರ. 
ಪುರುಷರಿಗಿಂತ ಮಹಿಳೆಯರು ಹೆಚ್ಚು ಧಾರ್ಮಿಕ ಆಚರಣೆವುಳ್ಳವರು. ಕುಟುಂಬದಲ್ಲಿ ವ್ರತಾದಿಗಳಿದ್ದಾಗ ಧಾರ್ಮಿಕ ಕಟ್ಟಳೆಯಕಾರಣ ಆನೇಕ ಮಹಿಳೆಯರಿಗೆ ದೈಹಿಕ ಸಂಪರ್ಕ ನಿಷಿದ್ಧ. ಅಂದಿನ ದಿನ ಹಾಸಿಗೆ ಪಥ್ಯವನ್ನು ಅವಳು ಬಯಸುತ್ತಾಳೆ. ಪುರುಷನ ಯೌವನದ ಒತ್ತಡ ಸುಮ್ಮನಿದ್ದೀತೆ?. ಹೆಂಡತಿಯ ಇಚ್ಚೆಯ ವಿರುದ್ಧವಾಗಿ, ಬಲತ್ಕಾರವಾಗಿ  ಅವಳ ಸಂಪರ್ಕ ನಡೆಸುತ್ತಾನೆ. ಇದು ಗಂಡನ ಅತ್ಯಾಚಾರ.  
ಹಿಂದಿನಹಾಗೆ ಈಗ  ಅವಿಭಕ್ತ ಕುಟುಂಬಗಳಿಲ್ಲ. ಮನೆತುಂಬಾ ಜನರು ಇಲ್ಲ. ಈಗ ಏನಿದ್ದರೂ ಅಣು ಕುಟುಂಬ (ನ್ಯೂಕ್ಲಿಯರ್ ಫ್ಯಾಮಿಲಿ). ಗಂಡ ಮತ್ತು ಹೆಂಡತಿ ಇಬ್ಬರದ್ದೇ ದರ್ಭಾರು. ಮಧ್ಯೆ ಬ್ರೇಕ್ ಹಾಕುವ ಹಿರಿಯರು ಇಲ್ಲಿ ಇಲ್ಲ. ಇಂತಹ ಅವಘಟನೆಯ ವೇದನೆಯನ್ನು  ಹೊರಗೆ ತರುವ ಸ್ಥಿತಿಯಲ್ಲಿ ಹೆಂಡತಿ ಇರುವುದಿಲ್ಲ. ಏಕೆಂದರೆ ಗಂಡ ಎನ್ನುವ ಮರ್ಯಾದೆ, ಪ್ರೀತಿ ಅವಳಿಗೆ ಇದ್ದೇ ಇರುತ್ತದೆ. ಒಳಗೇ ವಿರೋಧಿಸಿದರೆ ಗಂಡ ತಡೆದುಕೊಳ್ಳಬೇಕಲ್ಲ.  ಅಸಾಯಕಳಾಗಿ ಈ ತೆರೆನ ಅತ್ಯಾಚಾರಕ್ಕೆ ಆಕೆ ಸಿಲುಕಿಕೊಳ್ಳುತ್ತಾಳೆ. 
ಪುರುಷನಿಗೂ ಕೂಡ ಲೈಂಗಿಕ ಸಂಪರ್ಕ ಒಂದು ಅಗತ್ಯ. ಹಾಗೂ ನೈಜವಾದ ಪ್ರಕ್ರಿಯೆ ಎಂಬುದು ಸುಳ್ಳಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮೇಲೆ ಹೇಳಿದ ಅನೇಕ ಪ್ರಸಂಗಗಳಲ್ಲಿಯೂ ಅವನಿಗೆ  ವಿನಾಯಿತಿ ಇರುತ್ತದೆ.
ವಿಷಯ ಹೇಗಾದರೂ ಇರಲಿ. ಹೆಂಡತಿಯ ಮೇಲೆ ನಡೆಯುವ ಗಂಡನ ಅತ್ಯಾಚಾರ ಒಟ್ಟಾರೆ ಸಮಾಜದ ಸ್ವಾಸ್ತ್ದ್ಯದ ದೃಷ್ಟಿಯಿಂದ ಪುರುಷನಿಗೆ ತಿಳಿಯಹೇಳಬೇಕಾದ ಮತ್ತು P್ಷÀಮಿಸಬಹುದಾದ ಘಟನೆಯೂ ಹೌದು. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771


Tuesday 25 June 2013

ವಿವಾಹ ವಿಚ್ಛೇದನ ; ನವ ದಂಪತಿಗಳ ಸೀಳು ಜೀವನ


                                                                                         -ಎಂ. ಗಣಪತಿ ಕಾನುಗೋಡು
ವಿವಾಹ ವಿಚ್ಛೇದನ ಹೊಸತಲ್ಲ. ಹಿಂದಿನ ಕಾಲದಲ್ಲಿ ವಿಚ್ಛೇದನ ಹೆಚ್ಚಾಗಿ ಪುರುಷ ಮೂಲವಾಗಿತ್ತು. ಪ್ರಸ್ತುತ ಮುಂದುವರೆದ ಸನ್ನಿವೇಶದಲ್ಲಿ ಪತಿಯರಷ್ಟೇ ಅಲ್ಲ ಅದಕ್ಕಿಂತ ಹೆಚ್ಚಾಗಿ ಪತ್ನಿಯರೇ ವಿಚ್ಛೇದನ ಬಯಸುವುದು ಕಂಡುಬರುತ್ತಿದೆ. 
ಇದಕ್ಕೆ ಕಾರಣ ಹಲವಾರು. ಹೆಣ್ಣುಮಕ್ಕಳಿಗೆ ಈ ವಿಷಯದಲ್ಲಿ ಕಾನೂನಿನ ಸವಲತ್ತು ಹಿಂದಿನಿಗಿಂತ ಈಗ ಹೆಚ್ಚಾಗಿದೆ. ವಿವಾಹವಾಗಿ ಮೂರು ವರ್ಷದೊಳಗೆ ದಾಂಪತ್ಯದಲ್ಲಿ ವಿರಸ ಬಂದರೆ ಪತ್ನಿಯಾದವಳು ತನ್ನ ಗಂಡ, ಅತ್ತೆ ಮಾವಂದಿರನ್ನು ಜೈಲಿನಲ್ಲಿ ಇರಿಸುತ್ತಾಳೆ. ವಿರಸಕ್ಕೆ ಕಾರಣವೇನಿದ್ದರೂ ವರದಕ್ಷಿಣೆಯ ಕಾನೂನು. ವರದಕ್ಷಿಣೆಯ ವಿಚಾರವನ್ನೇ ಹುಟ್ಟುಹಾಕಿ ಪತಿಯ ಮತ್ತು ಅವರ ಪೋಷಕರ ಮಗ್ಗಲು ಮುರಿಯುವಲ್ಲಿ ಬಳಕೆಯಾಗುತ್ತಿದೆ. ದುರುಪಯೋಗವಾಗುತ್ತಿದೆ ಕೂಡಾ. ತಂದೆಯ ಮನೆಯ ಆಸ್ತಿಯಲ್ಲಿ ಸಮಹಕ್ಕನ್ನು ಪಡೆದ ನಂತರವೂ ಗಂಡ ಬೇಡವೆಂದೆನಿಸಿದರೂ ಅವನ ಆಸ್ತಿ ಮತ್ತು ಸಂಪತ್ತು ಬೇಡವೆನಿಸುವುದಿಲ್ಲ. ಅದರಲ್ಲಿ ಪಾಲು ಕೇಳುವಷ್ಟು ಕಾನೂನಿನ ಬೆಂಬಲ ಅವಳಿಗಿದೆ. ಮಕ್ಕಳಿದ್ದರೆ ಮಕ್ಕಳ ಪೋಷಣೆ ತನ್ನ ಬದುಕಿನ ರಕ್ಷಣೆಗೆಂದು ಗಂಡನನ್ನ ದೋಚುವ ಸ್ಥಿತಿಯಲ್ಲಿ ಅವಳಿದ್ದಾಳೆ. ಇದು ವಿಚ್ಛೇದನದತ್ತ ಮುನ್ನುಗ್ಗುವಲ್ಲಿ ಮಹಿಳೆಗೆ ಇರುವ ಕಾನೂನಿನ ಬೆಂಬಲ. 
ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸರಿಸಮಾನಾಗಿ ಶಿಕ್ಷಣವನ್ನು ಹೊಂದಿದ್ದಾರೆ. ಅವರಂತೆಯೇ ದೊಡ್ಡ ಹುದ್ದೆಯನ್ನೇರಿ ಹೆಚ್ಚು ಸಂಪಾದಿಸುತ್ತಿದ್ದಾರೆ. ಇಲ್ಲಿ ಯಾರಿಗೆ ಯಾರೂ ಕಡಿಮೆಯಿಲ್ಲ. ಕೂಡಿ ನಡೆಯುವಲ್ಲಿ ಅಗತ್ಯವಾದ ಶ್ರೇಷ್ಠತೆ ಮತ್ತು ಅಧೀನತೆಯ ನಡವಳಿಕೆ ಇಲ್ಲಿ ಶೂನ್ಯ. ಯಾರಿಗೆ ಯಾರೂ ಸೋತು ಸರಿಯುವುದಿಲ್ಲ. ಎರಡು ಮೇರು ಒಂದೇ ಬಿಂದುವಿನಲ್ಲಿ ಘರ್ಷಣೆಯೇ ಝಣಝಣವಾಗುತ್ತದೆ. ವಿರಸಕ್ಕೆ ವಿಷಯ ದೊಡ್ಡದು ಬೇಕಿಲ್ಲ. ಎಲ್ಲರ ಗಡಿಯಾರವೂ ಕೆಲವೇ ಸೆಕೆಂಡುಗಳಲ್ಲಿ ಅಂತರದಲ್ಲಿ ಒಂದೇ ಸಮಯವನ್ನು ತೋರಿಸುತ್ತದೆ. ದಾಂಪತ್ಯ ಒಂದೇ ಆದರೂ ಅಭಿಪ್ರಾಯಗಳ ಅಂತರ ಗಡಿಯಾರದ ಸೆಕೆಂಡುಗಳ ಅಂತರದಷ್ಟೇ. ಅಂತಿಮ ಪರಿಣಾಮ ವಿಚ್ಛೇದನ. ಇಬ್ಬರಿಗೂ ಇರುವ ಸಂಪಾದನೆಯೇ ಇದಕ್ಕೆ ಕಾರಣ. 
ಇಂದಿನ ಕುಟುಂಬಗಳಲ್ಲಿ ಮಕ್ಕಳಿಗೆ ಸಹಬಾಳ್ವೆಯ ಮನೋಭಾವವನ್ನು ಕಲಿಸುವ ಅವಕಾಶ ಕಡಿಮೆ. ಶಿಕ್ಷಣದ ಕಾರಣದಿಂದ ಅವರ ಬುದ್ಧಿ ಬೆಳವಣಿಗೆಯ ಪ್ರಾರಂಭದಿಂದ ಕುಟುಂಬದ ಹೊರಗೆ ಬೆಳೆದು ವಿವಾಹದ ಹಂತಕ್ಕೆ ಬಂದಿರುತ್ತಾರೆ. ಕುಟುಂಬದ ಹಿರಿಯರು-ಕಿರಿಯರು, ಹುಟ್ಟಿನ ನೆರೆಹೊರೆಯವರು, ಸಂಬಂಧಿಕರು ಎನ್ನುವ ಸಾಮಾಜಿಕ ಜೀವನದ ಪ್ರಾಥಮಿಕ ಸಂಘಗಳ ಒಡನಾಟವೇ ಇಂದಿನ ಯುವಜನತೆಗೆ ದೊರಕುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಅವರಿಗೆ ದೊರಕುವುದು ವಿಷಯಗಳ ಜ್ಞಾನವಷ್ಟೇ. ಬದುಕಿನ ಅರಿವಲ್ಲ. ಸಹಬಾಳ್ವೆ, ಬದುಕಿನ ನೀತಿಯನ್ನು ಅವರಿಗೆ ತಿಳಿಯುವ ಅವಕಾಶ ಕಡಿಮೆ. ಕೂಡಿ ಬದುಕುವ ಬುದ್ಧಿ ಬರುವಷ್ಟರ ಹೊತ್ತಿಗೆ ಆಗುವ ಪ್ರಮಾದವೆಲ್ಲ ಆಗಿ ಯುವಜನರು ಮುದುಕರಾಗಿರುತ್ತಾರೆ. 
ಈಗ ಕೇವಲ ಎರಡು ಅಥವಾ ಒಂದೇ ಮಗುವಾದ್ದರಿಂದ ತಾಯಿ ತಂದೆಯರು ಅವರನ್ನು ಅತೀ ಮುದ್ದಿನಿಂದ ಸಾಕಿರುತ್ತಾರೆ. ಮುದ್ದಿನ ಅಮಲಿನಲ್ಲಿ ಬದುಕಿನ ಕಲೆಯ ನೆಲೆ ಕಮರಿ ಹೋಗಿದೆ. ಗಂಡು-ಹೆಣ್ಣು ಮಕ್ಕಳು ದಾಂಪತ್ಯದಲ್ಲಿ ಹೊಂದಿಕೊಳ್ಳದೆ ಸಿಡಿದು ಹೋಗಲು ಇದು ಪ್ರಮುಖ ಕಾರಣ. 
ಗಂಡ ಹೆಂಡತಿಯರಿಬ್ಬರೂ ಮನೆಯ ಹೊರಗೆ ಪ್ರತ್ಯೇಕ ಪ್ರತ್ಯೇಕವಾಗಿ ದುಡಿಮೆಗಾಗಿ ಹೊರಗಿರುವ ಸಂದರ್ಭದಲ್ಲಿ ಕೆಲವೊಮ್ಮೆ ಚಾರಿತ್ರಿಕವಾಗಿ ಒಬ್ಬರನ್ನೊಬ್ಬರು ಸಂಶಯ ದೃಷ್ಟಿಯಿಂದ ನೋಡುವುದೂ ಉಂಟು. ಸ್ವಯಂ ಉದ್ಯೋಗಿಗಳಾಗಿದ್ದರಿಂದ ಕುಟುಂಬದ ಹಿರಿಯರಿಂದ ಸಹಜವಾಗಿ ದೂರವಿದ್ದು ಪತಿ ಪತ್ನಿಯರಿಬ್ಬರೇ ಪುಟ್ಟ ಕುಟುಂಬ ಮಾಡಿಕೊಂಡಿರುತ್ತಾರೆ. ಇಬ್ಬರಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ ತಕ್ಷಣ ಸರಿಮಾಡಲು ಅಲ್ಲಿ ಯಾರೂ ಇರುವುದಿಲ್ಲ. ಪರಿಣಾಮ ಲಗಾಮಿಲ್ಲದೆ ಕುದುರೆಯಂತೆ ದಾಂಪತ್ಯ ವಿಘಟನೆಯಾಗುತ್ತದೆ. 
ಇಂದಿನ ದಂಪತಿಗಳು ಯೋಚಿಸಬೇಕಾದದ್ದಿಷ್ಟೇ. ಇದ್ದಲ್ಲಿಯೇ ಕಾಡಿ ಕೂಡಿ ಬಾಳ್ವೆ ನಡೆಸಬೇಕು. ಹೊಂದಿಕೊಳ್ಳುವ ಮನೋಭಾವ ಇಲ್ಲದವರು ಯಾರನ್ನ ಬಿಟ್ಟು ಯಾರನ್ನ ಕೂಡಿಕೊಂಡರೂ ಇದೇ ಪಾಡು. ಹೊಂದಿಕೊಂಡು ಮುನ್ನಡೆಯಬೇಕೆಂದಿದ್ದರೆ ಒಬ್ಬರಿಗೆ ಒಬ್ಬರು ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಗ್ಗಿ ನಡೆಯಬೇಕಾದದ್ದು ಅಗತ್ಯ. ಸುಖಕ್ಕಾಗಿ ಪರದಾಡಿ ಮುದುಕರಾಗುವ ಮುಂಚೆ ಇದ್ದಲ್ಲಿಯೇ ಸಾವರಿಸಿಕೊಂಡು ನೆಮ್ಮದಿಯಿಂದ ಇರುವುದು ಲೇಸು. ಸುಖ ಎನ್ನುವುದು ಅವರವರ ಮನೋಗತಿಗೆ ಬಿಟ್ಟ ವಿಚಾರ.


 ಎಂ. ಗಣಪತಿ M.A.. ಕಾನುಗೋಡು 
 ಅಂಚೆ : ಬಿ.ಮಂಚಾಲೆ-577431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ.: 9481968771
 E-mail: mgkangod.blogspot.com

Tuesday 18 June 2013

ಯುವತಿಯರ ನಗರ ವಲಸೆ ; ಗ್ರಾಮೀಣ ಯುವಕರ ಮದುವೆ ನಿರಾಸೆ


                                                                                   -ಎಂ. ಗಣಪತಿ ಕಾನುಗೋಡು

ಯುವತಿಯರು ಓದಿನಲ್ಲಿ ಯುವಕರಿಗಿಂತ ಬಹಳ ಚುರುಕು. ಆದರೆ ಹಿಂದಿನ ಕಾಲದಲ್ಲಿ ಎಸ್‍ಎಸ್‍ಎಲ್‍ಸಿಕ್ಕಿಂತ ಮುಂದೆ ಅವರಿಗೆ ವಿದ್ಯಾಭ್ಯಾಸ ಮಾಡಿಸುತ್ತಿರಲಿಲ್ಲ. ಮದುವೆ ಮಾಡಿ ಕೈತೊಳೆದು ಕೊಳ್ಳುವುದು ಇತ್ತೀಚಿನ ವರ್ಷಗಳವರೆಗೂ ಪೋಷಕರ ವಾಡಿಕೆಯಾಗಿತ್ತು. ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿನ ಯುವತಿಯರ ಸ್ಥಿತಿಯಾಗಿತ್ತು. 
ಇಂದು ಹಾಗಲ್ಲ. ಹಳ್ಳಿ ಯುವತಿಯರು ವಿದ್ಯಾಭ್ಯಾಸದಲ್ಲಿ ಬಹಳ ಮುಂದೆ ಹೋಗಿದ್ದಾರೆ. ಶಿಕ್ಷಣ ಕ್ಷೇತ್ರ, ಸ್ಪಾಟ್‍ವೇರ್ ಇಂಜಿನೀಯರಿಂಗ್ ಕ್ಷೇತ್ರವನ್ನೂ ಒಳಗೊಂಡು ಅನೇಕ ಕ್ಷೇತ್ರಗಳಲ್ಲಿ ನೌಕರಿ ಗಿಟ್ಟಿಸಿ ಸಂಪಾದಿಸುವಷ್ಟು ಪದವಿಗಳನ್ನು ಗಳಿಸಿ ಮುನ್ನುಗಿದ್ದಾರೆ. ಒಂದು ಹಂತದ ವಿದ್ಯಾಭ್ಯಾಸ ಮುಗಿದರೂ ಮದುವೆಯಾಗಿ ಸಂಸಾರ ನಡೆಸಬೇಕೆಂಬ ಅಪಹಪಿಕೆಯಲ್ಲಿ ಅವರು ಇಲ್ಲ. ನೌಕರಿ ಮಾಡಿ ತಾನೂ ಹಣ ಸಂಪಾದಿಸಬೇಕು ಎಂಬ ಧೋರಣೆ ಅವರದ್ದು. ವರ್ಷ 25 ದಾಟುತ್ತಿದೆ, ಮೊದಲು ಮದುವೆಯಾಗು, ತಡವಾದರೆ ಸರಿಯಾದ ವರ ಸಿಗುವುದಿಲ್ಲ ಎಂದು ತಾಯಿ ತಂದೆಯರು ಒತ್ತಾಯಿಸುತ್ತಾರೆ. ಆದರೆ ಅದಕ್ಕೆ ಸಿದ್ಧರಿಲ್ಲ. ಒಮ್ಮೆ ಮದುವೆಯಾಗದಿದ್ದರೂ ಚಿಂತೆಯಿಲ್ಲ. ಸಂಪಾದನೆಯನ್ನು ಬಿಡುವುದಿಲ್ಲ ಎಂಬ ಗಟ್ಟಿ ನಿರ್ಧಾರವನ್ನು ತಳದಿದ್ದಾರೆ. ಒಮ್ಮೆ ವಿವಾಹವಾಗುವಾದರೂ ತನ್ನ ನೌಕರಿಯನ್ನು ಒಪ್ಪಿಕೊಳ್ಳುವ, ತನಗಿಂತ ಮೇಲು ಹುದ್ದೆಯ ಹುಡುಗನೇ ಬೇಕೆನ್ನುತ್ತಾರೆ. ಅವರ ದೃಷ್ಟಿಯಿಂದ ಅದು ಸರಿಯೇ. 
ಹಳ್ಳಿಯಲ್ಲಿ ವಾಸಿಸುವ ಹಿರಿಯರ ಭಾವನೆ ಬೇರೆಯಿದೆ. ಪಾರಂಪರಿಕವಾಗಿ ಬಂದ ಕೃಷಿ ಭೂಮಿ, ಮನೆಯನ್ನು ಬಿಟ್ಟು ಹೋಗಬಾರದು ಅದನ್ನು ಕಳೆಯ ಬಾರದು ಎನ್ನುವ ಬಲವಾದ ನಂಬಿಕೆ ಅವರದು. ಅದಕ್ಕಾಗಿ ಗಂಡು ಮಗನನ್ನು ಹಳ್ಳಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ಆದರೆ ಅದನ್ನು ಧಿಕ್ಕರಿಸಿ ನಗರಕ್ಕೆ ಹಾರಿದವನು ಬಚಾವು. ತಾಯಿತಂದೆಗಳ ಒತ್ತಡಕ್ಕೆ ಅಲ್ಲಲ್ಲಿ ಹಳ್ಳಿಯಲ್ಲಿಯೇ ಉಳಿದ ಗ್ರಾಮೀಣ ಯುವಕರ ಸ್ಥಿತಿ ಇಂದು ಬಹಳ ಪೇಚಿಗೆ ಸಿಕ್ಕಿದೆ. ಎಷ್ಟೇ ಸಂಪತ್ತು ಇದ್ದರೂ ಅವನನ್ನು ಮದುವೆಯಾಗಲು ಹೆಣ್ಣುಮಕ್ಕಳು ಮುಂದೆ ಬರುವುದಿಲ್ಲ. ಶಿಕ್ಷಣ ಕಡಿಮೆ ಇರುವ ಹೆಚ್ಚು ಮಕ್ಕಳು ಕೂಡಾ ನಗರವಾಸಿ ನೌಕರಿ ಹೊಂದಿದ ವರನೇ ಬೇಕೆನ್ನುತ್ತಾರೆ. ವರ್ಷ ನಲವತ್ತಾದರೂ ಹೆಣ್ಣಿನ ಅಭಾವದಿಂದಾಗಿ ಗ್ರಾಮೀಣ ಯುವಕ ಇಂದು ಮದುವೆ ಇಲ್ಲದೆ ನಿರಾಸೆಯಾಗಿದ್ದಾನೆ. 
ಈ ತೆರನ ಸಂದಿಗ್ಧ ಪರಿಸ್ಥಿತಿ ಮುಂದುವರೆದವರೆನಿಸಿಕೊಂಡ ಬ್ರಾಹ್ಮಣ, ವೀರಶೈವ ಮುಂತಾದ ಇನ್ನೂ ಅನೇಕ ಸಮುದಾಯಗಳಲ್ಲಿ ಈಗ ಉಲ್ಬಣವಾಗಿದೆ. ಇದರ ಹೊರತಾದ ಇನ್ನಿತರ ಸಮುದಾಯಗಳಲ್ಲೂ ಯುವತಿಯರು ಶೈಕ್ಷಣಿಕವಾಗಿ ದೂರದೂರ ಸಾಗುತ್ತಿದ್ದಾರೆ. ಭಾವನಾತ್ಮಕವಾಗಿ ಕೃಷಿಯನ್ನೇ ಅವಲಂಬಿಸುವ ಎಲ್ಲ ಸಮುದಾಯದ ಗ್ರಾಮೀಣ ಯುವಕರು ಒಂದು ದಿನ ಇದೇ ಸಂದಿಗ್ಧತೆಯನ್ನು ಅನುಭವಿಸಬೇಕಾಗುತ್ತದೆ. 
ಈಗ ಗ್ರಾಮೀಣ ಯುವಕನ ಮುಂದೆ ಕಾಡುತ್ತಿರುವುದು ಒಂದೇ ಪ್ರಶ್ನೆ. ಭೂಮಿ ಕೃಷಿಯನ್ನು ಹಾಳುಗೆಡವಿ ನಗರದ ಸಂಪಾದನೆಗೆ ತಾನು ಹೋಗಬೇಕೋ ಇಲ್ಲವೆ ಮದುವೆ, ಮಕ್ಕಳು, ಸಂಸಾರ ಯಾವುದೂ ಇಲ್ಲದೆ ಮಣ್ಣಿನಲ್ಲಿಯೇ ಮಣ್ಣಾಗಬೇಕೋ?

ಎಂ. ಗಣಪತಿ M.A.. ಕಾನುಗೋಡು
 ಅಂಚೆ : ಬಿ.ಮಂಚಾಲೆ-577431
 ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
 ಮೊ.: 9481968771
 E-mail: mgkangod.blogspot.com

Monday 10 June 2013

ಮಾಯವಾದ ಕಟ್ಟೆ ಪಂಚಾಯಿತಿ


                                                                                                   -ಎಂ. ಗಣಪತಿ ಕಾನುಗೋಡು
ಒಂದು ಕಾಲದಲ್ಲಿ ಕಟ್ಟೆ ಪಂಚಾಯಿತಿ ಎಂದರೆ ಹಳ್ಳಿಗಳಲ್ಲಿ ಒಂದು ಜನ ಸಂಪರ್ಕ ಕೇಂದ್ರ. ಪ್ರತಿ ಊರಿನಲ್ಲಿ ದಿನನಿತ್ಯ ಯಾರದ್ದಾದರೊಂದು ಮನೆಯ ಜಗುಲಿಯ ಮೇಲೆ ಅಥವಾ ಅಂದು ಇರುತ್ತಿದ್ದ ಹೆಬ್ಬಾಗಿಲ ಅಗಲ-ಉದ್ದನೆಯ ಕಟ್ಟೆಯ ಮೇಲೆ ಊರಿನ ಕೆಲವು ಜನ ಸೇರಿ ಮಾತನಾಡಿಕೊಳ್ಳುವುದೇ ಕಟ್ಟೆ ಪಂಚಾಯಿತಿ. 
ಪ್ರತಿನಿತ್ಯ ಸಂಜೆ ಕೇರಿ ಮನೆಯ ಹಲವಾರು ಜನ ಯಾರದ್ದಾದರೊಂದು ಮನೆಯ ಕಟ್ಟೆಯ ಮೇಲೆ ಜಮಾಯಿಸುತ್ತಿದ್ದರು. ಪ್ರತಿನಿತ್ಯ ಇಂಥವರ ಮನೆಯ ಕಟ್ಟೆಯೇ ಎನ್ನುವಂತಿಲ್ಲ. ಸಂಜೆ ತನಕ ಕೃಷಿ ಕೆಲಸ. ನಂತರ ವಿಶ್ರಾಂತಿಯಲ್ಲಿ ಅಲ್ಲಲ್ಲಿ ಕೆಲವು ಜನರ ಸೇರ್ಪಡೆ. ಇದರಲ್ಲಿ ವಯಸ್ಕರದ್ದು, ಯುವಕರದ್ದು, ಹೆಂಗಸರದ್ದು (ಇವರದ್ದು ಯಾರದ್ದಾದರೊಂದು ಮನೆಯೊಳಗೆ) ಹೀಗೆ ಬೇರೆ ಬೇರೆ ಕಟ್ಟೆ ಪಂಚಾಯಿತಿಗಳು ಇರುತ್ತಿದ್ದವು. 
ಇದು ಬಹಳ ಹಿಂದಿನ ಕತೆಯಲ್ಲ. ಸುಮಾರು 25 ವರ್ಷಗಳ ಹಿಂದಿನ ಕಾಲದ ಪ್ರಸ್ತಾಪ ಅಷ್ಟೆ. ಆಗ ಹಳ್ಳಿಗಳಲ್ಲಿ ಇಷ್ಟೊಂದು ಟಿವಿಯ ಅಬ್ಬರವಿರುವುದಿಲ್ಲ. ಸ್ಥಿರ, ಚರ ದೂರವಾಣಿಗಳಿರಲಿಲ್ಲ. ಹಾಗಂತ ನ್ಯೂಸ್ ಬರುವ ಸಮಯವಾಗಿದ್ದರೆ ಟ್ರಾನ್ಸಿಸ್ಟರ್ ಕೂಡಾ ಕಟ್ಟೆಗೆ ಬರುತ್ತಿತ್ತು – ದೇಶದ ಸುದ್ಧಿ ಆಲಿಸಲಿಕ್ಕೆ. ಈಗಿನಂತೆ ದಿನಕ್ಕೆ ಒಂದೆರಡು ಸಾರಿ ಪೇಟೆಗೆ ಹೋಗುವ ಅಭ್ಯಾಸವಿರುವುದಿಲ್ಲ. ತಾಲ್ಲೂಕು ಮುಖ್ಯ ಕೇಂದ್ರದಲ್ಲಿ ನಡೆಯುವ ಸಂತೆ ದಿನವಷ್ಟೆ ಕೆಲವರು ಪೇಟೆಗೆ ಹೋಗುತ್ತಿದ್ದರು. ಒಟ್ಟಾರೆ ಹೊರಗಿನ ಸಂಪರ್ಕ ಹಳ್ಳಿಯ ಜನರಿಗೆ ಬಹಳ ಸಿಮೀತವಾಗಿತ್ತು. 
ಅಂತಹ ಕಾಲದಲ್ಲಿ ಕಟ್ಟೆ ಪಂಚಾಯಿತಿ ಒಂದು ಸಾರ್ವಜನಿಕ ಸಂಪರ್ಕ ವಾಹಿನಿಯಂತೆ ಪಾತ್ರ ವಹಿಸುತ್ತಿತ್ತು. ಊರಿನಲ್ಲಿ, ತಾಲ್ಲೂಕಿನಲ್ಲಿ ದೇಶದಲ್ಲಿ ನಡೆಯುತ್ತಿದ್ದ ಆಗು ಹೋಗುಗಳ ಪ್ರಸ್ತಾಪ, ಚರ್ಚೆ, ಹೊಸ ವಿಚಾರಗಳ ಬಗ್ಗೆ ಪರಸ್ಪರ ವಿನಿಮಯ, ವಧೂವರರ ಮಾಹಿತಿ, ಕೃಷಿ ಮಾರುಕಟ್ಟೆಗಳ ಧಾರಣೆಯ ಮಾಹಿತಿ, ಅನೇಕ ವಿಷಯಗಳ ರಂಜನೆ, ಬೇರೆ ಬೇರೆ ಮಾಹಿತಿಗಳ ಮಂಡನೆ, ಅವುಗಳ ಮನವರಿಕೆ ಇವೆಲ್ಲ ಅಲ್ಲಿ ನಡೆಯುತ್ತಿದ್ದವು. ಊರ ಹೊರಗೆ ಹೋಗಿ ಬಂದವರು ಹೊರಗಿನ ಸಮಾಚಾರವನ್ನು ಊರಿನ ಜನರಿಗೆ ತಿಳಿಸುವುದು ಊರಿನ ಜನರ ಸ್ನೇಹ ವರ್ಧನೆ ಒಬ್ಬರಿಗೊಬ್ಬರ ಮೇಲೆ ಇರುವ ಸಣ್ಣಪುಟ್ಟ ದ್ವೇಷಗಳನ್ನು ಅಲ್ಲಿ ಹೇಳುವುದು, ಅದಕ್ಕೆ ಅಲ್ಲಿ ಕುಳಿತಿರುವ ಯಾರಾದರೂ ಹಿರಿಯರಿಂದ ಅದರ ಚಿಕಿತ್ಸೆ ಇವೆಲ್ಲಾ ಅಲ್ಲಿ ನಡೆಯುತ್ತಿದ್ದವು. 
ಆದರೆ ಇಂದು ಹಳ್ಳಿಗಳ ಪರಿಸ್ಥಿತಿ ಹಾಗಿಲ್ಲ. ತಮ್ಮ ವಿಶ್ರಾಂತಿ ವೇಳೆಯಲ್ಲಿ ಎಲ್ಲರೂ ಟಿವಿ ಮುಂದೆ ಕುಳಿತಿರುತ್ತಾರೆ. ದೂರವಾಣಿಗಳಿಂದ ಹೊರ ಪ್ರಪಂಚದ ಸಂಪರ್ಕದಲ್ಲಿರುತ್ತಾರೆ. ಮನೆ ಮನೆಗೆ ಬೈಕು, ಅಲ್ಲಲ್ಲಿ ಕಾರುಗಳಿರುವುದರಿಂದ ದಿನನಿತ್ಯ ಪೇಟೆ ಓಡಾಟ. ಹಳ್ಳಿಯ ಜನರ ಬದುಕು ಕೂಡಾ ಹಾಗೆಯೇ ಆಗಿದೆ. 25 ವರ್ಷಗಳ ಹಿಂದಿನಷ್ಟು ಸರಳ, ಸೀಮಿತವಾಗಿಲ್ಲ. ಜಂಜಾಟ ಹೆಚ್ಚಿದೆ. ಯಾರಿಗೂ ಊರಿನಲ್ಲಿ ಪ್ರತಿನಿತ್ಯ ಇರಲಿ ತಿಂಗಳಿಗೊಮ್ಮೆಯೂ ಒಬ್ಬರೊನ್ನಬ್ಬರು ಭೇಟಿಯಾಗಲು ಪುರಸೊತ್ತಿಲ್ಲ. ಟಿವಿ, ಫೋನ್ ಮುಂತಾದ ಆಧುನಿಕ ಉಪಕರಣಗಳು, ಜನರ ಸಂಕೀರ್ಣ ಜೀವನ ಹಳ್ಳಿಗಳ ಕಟ್ಟೆ ಪಂಚಾಯಿತಿಯನ್ನು ಇಲ್ಲವಾಗಿಸಿವೆ. ಅಲ್ಲಿನ ಜನರ ಪ್ರಾಥಮಿಕ ಸಂಬಂಧಗಳು ಮರೆಯಾಗುತ್ತಿವೆ. ನಗರಗಳಲ್ಲಿ ಒಂದೇ ಮನೆಯ ಎರಡು ಪೋರ್ಷನ್‍ಗಳಲ್ಲಿ ಜನ ವಾಸಿಸುತ್ತಾರೆ. ಆದರೆ ಒಬ್ಬರ ಸಂಪರ್ಕ ಮತ್ತೊಬ್ಬರಿಗೆ ಇರುವುದಿಲ್ಲ. ಹಳ್ಳಿಗಳಲ್ಲಿಯೂ ಈಗ ಹೆಚ್ಚುಕಡಿಮೆ ಇದೇ ಪಾಡು. 
ಮಲೆನಾಡಿನಲ್ಲಿ 10-20 ಮನೆಗಳಿದ್ದ ಊರಿನ ಜನ, ಬಯಲು ನಾಡಿನಲ್ಲಿ 100-200 ಮನೆಗಳಿದ್ದ ಒಂದು ಊರಿನ ಜನ ಅನೇಕ ವಿಚಾರಗಳಲ್ಲಿ ಒಂದೇ ಮನೆಯವರಾಗಿರುತ್ತಿದ್ದರು. ಕಟ್ಟೆ ಪಂಚಾಯಿತಿಯ ಮಹತ್ವ ಇದ್ದದ್ದೇ ಅಲ್ಲಿ. ಈಗ ಮುಂದುವರೆದ ಜೀವನ ಕ್ರಮದಲ್ಲಿ ಒಂದೇ ಮನೆಯಲ್ಲಿ ಹಲವು ಮನಸ್ಸುಗಳಿವೆ. ಅಷ್ಟೇ ಏಕೆ ಒಂದೇ ವ್ಯಕ್ತಿಯ ಮನಸ್ಸು ಹಲವು ಕಡೆ ಓಡುತ್ತಿದೆ. ಅದಕ್ಕೆ ಲಗಾಮು ಹಾಕಲು ಕಟ್ಟೆ ಪಂಚಾಯಿತಿಯ ಹಿರಿಯರು, ತಿಳಿದವರು ಈಗ ಇಲ್ಲ. 

ಎಂ. ಗಣಪತಿ M.A.. ಕಾನುಗೋಡು
 ಅಂಚೆ : ಬಿ.ಮಂಚಾಲೆ-577431
 ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
 ಮೊ.: 9481968771
 E-mail: mgkangod.blogspot.com

Monday 3 June 2013

ಅತ್ತೆ ಸೊಸೆಯರ ಜಗಳ


                                                                                              -ಎಂ. ಗಣಪತಿ ಕಾನುಗೋಡು
ಅತ್ತೆ ಸೊಸೆಯರ ಜಗಳ ಹೊಸತಲ್ಲ. ಸಂಯುಕ್ತ ಕುಟುಂಬದಲ್ಲಿ ಇದು ದಿನನಿತ್ಯದ ಭಜನೆ. ನಗರಗಳಲ್ಲಿ ಕೇವಲ ಗಂಡ ಹೆಂಡತಿಯರ ಪುಟ್ಟ ಕುಟುಂಬಗಳೇ ಹೆಚ್ಚು. ಅಂತಹ ಕುಟುಂಬಗಳಲ್ಲಿ ಅತ್ತೆ ಸೊಸೆಯರ ಜಗಳಕ್ಕೆ ಸ್ಥಳವಿಲ್ಲ. ಅದು ಏನಿದ್ದರೂ ಗಂಡ ಹೆಂಡತಿಯರ ನಡುವೆ ಸೀಮಿತ. ಒಮ್ಮೆ ಅತ್ತೆ ಮಾವಂದಿರಿದ್ದರೂ ಮಗ ಸೊಸೆ ಇಬ್ಬರು ಸಂಪಾದನೆಗೆ ಹೋಗುತ್ತಾರೆ. ಗೃಹ ಕೃತ್ಯದ ಕೆಲಸಕ್ಕೆ ಅತ್ತೆ ಮಾವಂದಿರು ಅತಿ ಸುಲಭಕ್ಕೆ ದೊರಕುವವರಿರುತ್ತಾರೆ. ಅಲ್ಲಿ ಸೊಸೆ ಅತ್ತೆಯೊಂದಿಗೆ ಜಗಳವಾಡುವ ದಡ್ಡತನವನ್ನು ತೋರುವುದಿಲ್ಲ. ಅತ್ತೆಗೂ ಹಾಗೆಯೇ. ಜಗಳ ಮಾಡಲು ಸೊಸೆ ಮನೆಯಲ್ಲಿ ಸಿಗುವುದಿಲ್ಲ. ಒಟ್ಟಾರೆ ಅಲ್ಲಿ ಅತ್ತೆ ಸೊಸೆಯರಿಬ್ಬರಿಗೂ ಜಗಳಕ್ಕೆ ಪುರಸೊತ್ತೇ ಇರುವುದಿಲ್ಲ. 
ಹಳ್ಳಿಗಳಲ್ಲಿ ವಾಸಿಸುತ್ತಿರುವ ಅತ್ತೆ ಸೊಸೆಯರ ಕಥೆ ಹಾಗಲ್ಲ. ಹಗಲೆಲ್ಲಾ ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತಾರೆ. ಗೃಹಕೃತ್ಯವೇ ಇಬ್ಬರ ಕೆಲಸ. ದಿನದ ಬಹಳ ಹೊತ್ತು ಒಟ್ಟಿಗೆ ಇರುವುದರಿಂದ ತಮ್ಮ ಕೆಲಸದ ಜೊತೆಗೇ ಜಗಳಕ್ಕೆ ಅವರಿಬ್ಬರಿಗೆ ಸಾಕಷ್ಟು ಪುರಸೊತ್ತು ಸಿಗುತ್ತದೆ. 
ಅತ್ತೆ ಸೊಸೆಯರ ಜಗಳಕ್ಕೆ ವಿಶೇಷ ಕಾರಣ ಬೇಕೆಂದಿಲ್ಲ. ಅದಕ್ಕಾಗಿ ಸಣ್ಣ ನೆವವೊಂದನ್ನು ಇಬ್ಬರೂ ತಡಕಾಡುತ್ತಲೇ ಇರುತ್ತಾರೆ. ಇಬ್ಬರ ಮಾತಿನ ರಭಸದಲ್ಲಿ ಯಾರ ಪ್ರಶ್ನೆಗೆ ಯಾರದ್ದೂ ಸ್ಪಷ್ಟ ಉತ್ತರವಿಲ್ಲ. ಹಾಗಂತ ಉತ್ತರ ಪಡೆಯುವಂತಹ ಸ್ಪಷ್ಟ ಪ್ರಶ್ನೆಯೂ ಇಬ್ಬರಲ್ಲಿ ಇರುವುದಿಲ್ಲ. ಅಂತಹ ಸ್ಪಷ್ಟತೆಯನ್ನು ಕಂಡುಕೊಳ್ಳುವ ಗೋಜು ಇಬ್ಬರಿಗೂ ಬೇಕಿಲ್ಲ. ಒಟ್ಟಾರೆ ಮಾತಿಗೆ ಮಾತು ಕುಟ್ಟಿಗಾಣಿಸುವುದೇ ಇಬ್ಬರ ಉದ್ದೇಶ. ಯಾರೂ ಸೋಲಲಿಕ್ಕೆ ಇಷ್ಟಪಡುವುದಿಲ್ಲ. ಇಲ್ಲಿ ಸೋಲುವುದು, ಪೇಚಿಗೆ ಸಿಕ್ಕುವುದು ಅತ್ತೆಯ ಗಂಡ ಮತ್ತು ಸೊಸೆಯ ಗಂಡ ಇಬ್ಬರೇ. ಅವರೇ ಅಪ್ಪ ಮತ್ತು ಮಗ. ಇವರಿಬ್ಬರೂ ಈ ಅತ್ತೆ ಸೊಸೆಯ ಜಗಳಕ್ಕೆ ಬಲಿಯಾಗಬೇಕು. ಯಾರನ್ನು ಓಲೈಸಿದರೂ ಕುತ್ತಿಗೆಗೆ ಬರುತ್ತದೆ. 
ಅತ್ತೆ ಸೊಸೆಯರ ಜಗಳಕ್ಕೆ ಕಾರಣ ಇಷ್ಟೆ. ಅತ್ತೆಯಾದವಳು ತನ್ನ ಹೆಣ್ಣು ಮಕ್ಕಳನ್ನು ಪ್ರೀತಿಸಿದ ಹಾಗೆ ಸೊಸೆಯನ್ನು ಪ್ರೀತಿಸುವುದಿಲ್ಲ. ಸೊಸೆಯಾದವಳು ತನ್ನ ತಾಯಿಯನ್ನು ಪ್ರೀತಿಸಿದಂತೆ ಅತ್ತೆಯನ್ನು ಪ್ರೀತಿಸುವುದಿಲ್ಲ. ಅತ್ತೆಯಾದವಳು ಕುಟುಂಬದಲ್ಲಿ ತನ್ನ ಹಿರಿಯತನವನ್ನು ಬಿಟ್ಟುಕೊಡಲು ಇಷ್ಟಪಡುವುದಿಲ್ಲ. ಸೊಸೆಯಾದವಳು ಅಧೀನಳಾಗಿ ಬದುಕಲು ಒಪ್ಪುವುದಿಲ್ಲ. 
ಇಂದು ಅತ್ತೆಯಾಗಿ ಸೊಸೆಗೆ ತಾಗಿಕೊಂಡವಳು ಹಿಂದೊಂದು ದಿನ ಸೊಸೆಯಾಗಿದ್ದವಳು. ಅತ್ತೆಯ ಯಾತನೆಯನ್ನು ಅನುಭವಿಸಿದವಳು. ಇಂದು ಸೊಸೆಯಾಗಿದ್ದವಳು ನಾಳೆ ಒಂದು ದಿನ ಅತ್ತೆಯಾಗಿ ಸೊಸೆಗೆ ತಾಗಿಕೊಳ್ಳುವವಳು. ಹಾಗಂತ ಅವಳು ಸೊಸೆಯಾಗಿ ಇಂದು ಅತ್ತೆಯಿಂದ ಕುಟ್ಟಿಸಿಕೊಳುತ್ತಿದ್ದವಳು. ಆದರೆ ಒಂದು ಮಜಾ ಅಂದರೆ ಸೊಸೆಗೆ ಸೊಸೆ ಬಂದಾಗ ಅತ್ತೆಯ (ದೀರ್ಘಾಯುಷಿಯಾಗಿದ್ದರೆ) ಒಳ ಹೊಡೆತ ಇನ್ನೂ ಹೆಚ್ಚು. ಒಳಗೊಳಗೆ ಮೊಮ್ಮಗನ ಹೆಂಡತಿಗೆ ಕೀಲಿಕೊಟ್ಟು ತನ್ನ ಸೊಸೆಯನ್ನು ಸೋಸಿ ನೋಡುವ ಮೋಜು ಅವಳದ್ದು. ಸೊಸೆಗೂ ಮುಂದೆ ಒಂದು ದಿನ ಈ ಪಾಳಿ ಸಿಕ್ಕರೆ ಹೆಚ್ಚಲ್ಲ. 
ಇಲ್ಲಿ ವಿವೇಚನೆ ಮಾಡಬೇಕಾದದ್ದು ಇಷ್ಟೇ. ಭಾವನಾತ್ಮಕ ಜೀವನದಲ್ಲಿ ಮಾತಿನಲ್ಲಿ ಸರಿದು, ಸೋತು ಗೆಲ್ಲಬೇಕು. ಒಬ್ಬರಿಗೊಬ್ಬರು ಸೆಣಸಿ ಗೆಲ್ಲಲು ಸಾಧ್ಯವಿಲ್ಲ. 
                       ಎಂ. ಗಣಪತಿ M.A.. ಕಾನುಗೋಡು                 ಅಂಚೆ : ಬಿ.ಮಂಚಾಲೆ-577431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ.: 9481968771
       E-mail: mgkangod.blogspot.com

Friday 17 May 2013

ನಮಸ್ಕಾರ. ಪ್ರಭುವೇ ನಮಗೆ ವೋಟು ಕೊಡಿ



                                                                                   
                                                                                          ಎಂ.ಗಣಪತಿ. ಕಾನುಗೋಡು.

ನಮ್ಮ ಸಂವಿಧಾನ ಪ್ರಾಜ್ಞರು ಉದ್ದೇಶಿಸಿದ್ದು ಪ್ರಜಾಪ್ರಭುತ್ವ. ಆದರೆ ಊರ್ಜಿತಕ್ಕೆ ಬಂದದ್ದು ಅರಾಜಕತೆಯ ಪ್ರಭುತ್ವ. ಇದಕ್ಕೆಲ್ಲ ಕಾರಣ ನಾವು. ನಾವೇ. ಘನ ಮತದಾರರು. ಲಂಚ, ಭ್ರಷ್ಟಾಚಾರದ ಅಂಗಡಿಗಳು ತೆರೆಯಲ್ಪಡುವುದೇ ಚುನಾವಣೆಯ ಜಾತ್ರೆಯಲ್ಲಿ. ಹೆಂಡ, ಹಣ, ಸೀರೆ, ಬೇರೆ ಬೇರೆ ವಸ್ತುಗಳು ಎಂಬ ಪುಕ್ಕಟೆ ಲಾಭಗಳ ಭೋರ್ಗರೆತ. ಇವುಗಳಿಗೆ ಪ್ರಥಮ ಬುನಾದಿಯೇ ಚುನಾವಣಾ ಪರಿಷೆ.
  ಪ್ರಜಾಪ್ರಭುತ್ವದ ಆಡಳಿತೆಯಲ್ಲಿ ಮತದಾರನೇ ಪ್ರಭು. ಈ ಪ್ರಭುತ್ವದ ಕಿರೀಟವನ್ನು ಹೊತ್ತುಕೊಳ್ಳಬೇಕಾದ ಪ್ರಜೆಗೆ ಅದರ ಹಕ್ಕಿನ ಪ್ರಜ್ಞೆಯೊಂದೇ ಸಾಲದು. ಅದನ್ನು ನಿಭಾಯಿಸುವ ಹೊಣೆಗಾರಿಕೆಯ ಅರಿವು ಅತಿ ಅಗತ್ಯ. ನಮ್ಮ ದೇಶದ ಇಂದಿನ ಸನ್ನಿವೇಶದಲ್ಲಿ ಮತದಾರನಿಗೆ ಈ ಅರಿವು ಪೂರ್ತಿ ಇದ್ದಂತೆ ಕಾಣುವುದಿಲ್ಲ. ಚುನಾವಣಾ ಅಭ್ಯರ್ಥಿಯು ತನ್ನ ಮನೆಬಾಗಿಲಿಗೆ ಬಂದು ನಮಸ್ಕಾರ, ಪ್ರಭುವೇ ನಮಗೆ ವೋಟು ಕೊಡಿಎಂದು ಎಚ್ಚರಿಸಿದಾಗ ಮತದಾರ ತನ್ನ ಕಣ್ಣು ತೆರೆಯುವ, ಬಾಯಿ ಕಳೆಯುವ ಮತ್ತು ಕೈ ಚಾಚುವ ಪರಿಸ್ಥಿತಿ ಇಂದು ಬಹಳಷ್ಟಿದೆ.
        ಚುನಾವಣಾ ಅಭ್ಯರ್ಥಿ ಕೋಟಿ ಕೋಟಿ ತೊಡಗಿಸಿ ಆಯ್ಕೆಯಾಗುತ್ತಾನೆ. ಮಂತ್ರಿಯಾಗ ಬೇಕಾದವನು ತನ್ನ ಈ ವೆಚ್ಚದ ಜೊತೆಗೆ ಹತ್ತಾರು ಶಾಸಕರ ಇಂತಹ ವೆಚ್ಚಗಳನ್ನು ನಿಭಾಯಿಸಿ ಅವರನ್ನು ತನ್ನ ಬೆಂಬಲಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇದು ಕೇವಲ ಸೂಚನೆ, ಬೆಂಬಲಕಷ್ಟೆ ಅನ್ವಯ. ಇನ್ನು ತನ್ನನ್ನು ಮಂತ್ರಿ ಸ್ಥಾನಕ್ಕೆ ಅನುಮೋದಿ ಸುವ ಪಕ್ಷದ ಪ್ರಮುಖರಿಗೆ, ಮಂತ್ರಿಯನ್ನಾಗಿ ಮಾಡುವ ಶಾಸಕಾಂಗದ ನಾಯಕನಿಗೆ ಬೇರೆ ಬೇರೆ ಸಲುವಳಿ. ಇವೆಲ್ಲಾ ಕೋಟ್ಯನುಕೋಟಿ ರುಪಾಯಿಗಳ ಒಂದು ಮೊತ್ತ. ಇದು ಒಬ್ಬ ಜನಪ್ರತಿನಿಧಿಯ ಪ್ರಥಮ ಹಂತ. ಇನ್ನು 5 ವರ್ಷ ಅಧಿಕಾರದಲ್ಲಿ ಉಳಿಯುವ ಯತ್ನ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿ ಮರಳಿ ಚುನಾವಣೆಯಲ್ಲಿ ಗೆಲ್ಲುವ ಹೋರಾಟದ ಇನ್‍ವೆಸ್ಟ್‍ಮೆಂಟ್ ಪ್ರತ್ಯೇಕ. ಇದನ್ನು ಶ್ರೀಸಾಮಾನ್ಯ ಪ್ರಜೆಯು ಲೆಕ್ಕಾಚಾರ ಹಾಕಲು ಅವನ ಕ್ಯಾಲುಕಲೇಟರ್ ಚಿಕ್ಕದಾಗುತ್ತದೆ. ಅದಕ್ಕೆ ಹದಿನಾರು ಡಿಜಿಟ್‍ಮೇಲಿನ ಕ್ಯಾಲುಕಲೇಟರ್ ಬೇಕು.
        ಇಷ್ಟೆಲ್ಲಾ ದೊಡ್ಡ ಮೊತ್ತವನ್ನು ಒಬ್ಬ ಜನಪ್ರತಿನಿಧಿಯಾದವನು ಎಲ್ಲಿ ಗಳಿಸಿ ಕೊಳ್ಳಬೇಕು. ಪ್ರಜೆಗಳ ಕಲ್ಯಾಣಕ್ಕೆಂದು ವಿನಿಯೋಗಿಸಿದ ಸರ್ಕಾರದ ಯೋಜನೆಗಳ ಹಣವನ್ನೇ ಶೇಖಡಾವಾರು ಭರಣದ ರೂಪದಲ್ಲಿ ಕೊಳ್ಳೆ ಹೊಡೆಯಬೇಕು. ಕೆಲವು ಯೋಜನೆಗಳನ್ನು ಜಾರಿ ಗೊಳಿಸದೆಯೇ ಕೇವಲ ದಾಖಲೆಗಳಲ್ಲಷ್ಟೆ ಅನುಷ್ಟಾನಗೊಳಿಸಿ ಹಣವನ್ನು ಲಪಟಾಯಿಸಬೇಕು.  ಈ ರೀತಿಯ ಲೂಟಿಯಲ್ಲಿ ದಾರಿಯಲ್ಲಿ ಮಧ್ಯೆ ಮಧ್ಯೆ ಎಟುಕುವ   ವ್ಯಕ್ತಿಗಳನ್ನು ಜನಪ್ರತಿನಿಧಿಗಳು ಉಪಯೋಗಿಸಿಕೊಳ್ಳುತ್ತಾರೆ.  ಇದು ಅಧಿಕಾರಿಗಳೂ ಇರಬಹುದು , ಗುತ್ತಿಗೆದಾರರೂ ಇರಬಹುದು .
ಒಟ್ಟಾರೆ ಇದೊಂದು ಜನಪ್ರತಿನಿಧಿಯ ಬಿಂದುವಿನಿಂದ ಮತದಾರನ ಬಿಂದುವಿನವರೆಗೆ ಚಲಿಸುವ ಚಕ್ರ. ಈ ಚಕ್ರವು ಸಾಮಾನ್ಯ ಮತದಾರನ ಬಿಂದುವಿನಿಂದ ಅತ್ಯಂತ ಮೇರು ಜನ ಪ್ರತಿನಿಧಿಯವರೆಗೆ ಹಾಗೆಯೇ ಮತ್ತೊಮ್ಮೆ  ಅದೇ ಜನಪ್ರತಿನಿಧಿಯ ಮಟ್ಟದಿಂದ ಸಾಮಾನ್ಯ ಮತದಾರನ ಮಟ್ಟದವರೆಗೆ ಒಮ್ಮೆ ಮುಮ್ಮುಖವಾಗಿಯೂ ತಿರುಗುತ್ತದೆ , ಮತ್ತೊಮ್ಮೆ ಹಿಮ್ಮುಖವಾಗಿಯೂ ತಿರುಗುತ್ತದೆ .  ಒಮ್ಮೆ ಹಿಮ್ಮುಖವಾಗಿಯೂ ತಿರುಗುತ್ತದೆ. ಮತ್ತೊಮ್ಮೆ ಮುಮ್ಮುಖ ವಾಗಿಯೂ ತಿರುಗುತ್ತದೆ. ಪ್ರಾಮಾಣಿಕ ರಾಜಕಾರಣಿಯಾಗಿದ್ದರೆ ಚುನಾಯಿತನಾಗದೇ ಮನೆಯಲ್ಲಿ ಕೈಕಟ್ಟಿ ಕುಳಿತಿರಬೇಕಷ್ಟೆ.
       ಇಂತಹ ವ್ಯವಸ್ಥೆಯನ್ನು ಕಲ್ಪಿಸಿದವರು ಯಾರು? ಮತದಾರರೋ ಅಥವಾ ರಾಜಕಾರಣಿಗಳೋ?. ಏಕೆಂದರೆ ಒಬ್ಬರು ಕೊಟ್ಟವರು, ಮತ್ತೊಬ್ಬರು ತೆಗೆದುಕೊಂಡವರು. ವಾಸ್ತವವೆಂದರೆ ರಾಜಕಾರಣಿಗಳು ಕೊಟ್ಟಿರದಿದ್ದರೆ ಇವರು ತೆಗೆದುಕೊಳ್ಳುತ್ತಿರಲಿಲ್ಲ. ಮತ ದಾರರು ಕಟ್ಟುನಿಟ್ಟಾಗಿ ತಿರಸ್ಕರಿಸಿದಿದ್ದರೆ ಅವರು ಕೊಡುತ್ತಿರಲಿಲ್ಲ. ಕೋಳಿ ಮೊದಲೋ? ಮೊಟ್ಟೆ ಮೊದಲೋ?. ಉತ್ತರವನ್ನು ಯಾರು ಕೊಡಬೇಕು.
       ಹಾಗೆಂದು ಇಂದು ಮತದಾರ ತಿಳುವಳಿಕೆ ಇಲ್ಲದವನೆಂದು ಭಾವಿಸಬೇಕಾಗಿಲ್ಲ. ನಮ್ಮ ದೇಶದಲ್ಲಿ ಇನ್ನೂ ಕೆಲವು ಅನಕ್ಷರಸ್ಥರು ಇರಬಹುದು. ಆದರೆ ದಡ್ಡರು ಯಾರೂ ಇಲ್ಲ. ತಮ್ಮ ತಮ್ಮ ಬಚಾವಿಗೆ ಎಲ್ಲರಿಗೂ ತಜ್ಞತೆಯಿದೆ. ಮುಂಜಾಗರೂಕತೆ ಇದೆ. ಆದರೆ ಅವುಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆಯೇ ವಿನಃ ಸಾರ್ವಜನಿಕಕ್ಕೆ ವಿನಿಯೋಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ, ಇಲ್ಲಿ ಸ್ವಾರ್ಥಿ ಯಾರು? ಮತದಾರನೋ? ರಾಜಕಾರಣಿಯೋ?
 ಮುಖ್ಯವಾಗಿ ಹೇಳುವುದಾದರೆ ಚುನಾವಣಾ ಪ್ರಕ್ರಿಯೆ ಆಡಳಿತದ ಮೇಲೆ ಸಕಲ ಪ್ರಭಾವವನ್ನು ಹೊಂದಿದೆ. ವಾಸ್ತವಿಕ ಅರ್ಥದಲ್ಲಿ ಚುನಾವಣೆ ನಡೆದು ದಕ್ಷ, ಪ್ರಾಮಾಣಿಕ ಪ್ರತಿನಿಧಿಗಳನ್ನೊಳಗೊಂಡ ಸರ್ಕಾರ ರಚನೆಯಾಗಬೇಕು. ಈ ಕಾರಣದಿಂದ ಚುನಾವಣಾ ಆಯೋಗವು ಈ ಮುಂದಿನ ಸುಧಾರಣೆಗಳನ್ನು ತರುವುದು ಸೂಕ್ತ.
1) ಚುನಾವಣೆಯಲ್ಲಿ ಪ್ರಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಯಾರಿಗೂ ಪ್ರಚಾರದ ಅಗತ್ಯವಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯೆನ್ನಿಸಿಕೊಂಡವನೂ ಬುದ್ದಿ ಹೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕರಪತ್ರ, ಬಾವುಟ, ಬ್ಯಾನರ್, ಮೈಕ್ ಪ್ರಚಾರ, ಇತ್ಯಾದಿ ಯಾವುದೇ ಸಾಮಗ್ರಿಯಿಲ್ಲದೇ ಅಂಡರ್‍ಗ್ರೌಂಡ್‍ನಲ್ಲಿ ಗುಪ್ತವಾಗಿ ಪ್ರಚಾರ ನಡೆಸುತ್ತಿರುವವರನ್ನು ಕಂಡು ಹಿಡಿದು ಕೂಡಲೇ ಬಂಧಿಸಿ ಚುನಾವಣೆಯ ನಂತರ ಹೊರಗೆ ಬಿಡಬೇಕು.
2) ಯಾವುದೇ ಪಕ್ಷದ ಚುನಾವಣಾ ಕಾರ್ಯಾಲಯವನ್ನು ಚುನಾವಣಾ ಅವಧಿಯಲ್ಲಿ ಸಂಪೂರ್ಣವಾಗಿ ಮುಚ್ಚಿಸಬೇಕು. ಅಭ್ಯರ್ಥಿಯ ಮತ್ತು ಪಕ್ಷದ ಚುನಾವಣಾ ಪ್ರಚಾರದ ಸರಕುಗಳಾದ ವಾಹನ, ಬ್ಯಾನರ್,ಬಾವುಟ, ಕರಪತ್ರ, ಸಭೆ ಸಮಾರಂಭಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.
3) ಅಭ್ಯರ್ಥಿಯನ್ನು ಚುನಾವಣೆ ಮುಗಿಯುವವರೆಗೆ ಗೃಹಬಂಧನದಲ್ಲಿ ಇರಿಸಬೇಕು. ಮೊಬೈಲ್, ಸ್ಥಿರ ದೂರವಾಣಿ ಮತ್ತು ಜನರ ಸಂಪರ್ಕವನ್ನು ಕಡಿತಗೊಳಿಸ ಬೇಕು. ಅಷ್ಟು ಕಾಲ ಇದೇ ಸ್ಥಿತಿಯಲ್ಲಿ ಕ್ಷೇತ್ರದ ಹೊರಗೆ ದೂರದಲ್ಲಿ ಅಭ್ಯರ್ಥಿ ಇದ್ದರೆ ಇನ್ನೂ ಅನುಕೂಲ.
4) ಚುನಾವಣಾ ಕ್ಷೇತ್ರದ ಕೇಂದ್ರಭಾಗದಲ್ಲಿ ಒಂದು ಸಾರ್ವಜನಿಕ ಪ್ರಚಾರಸಭೆಯನ್ನು ಚುನಾವಣಾ ಆಯೋಗವೇ ಏರ್ಪಡಿಸಬೇಕು. ಒಂದೇ ವೇದಿಕೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಸೇರುವಂತೆ ಮಾಡಬೇಕು. ಅಷ್ಟರ ಮಟ್ಟಿಗೆ ಮಾತ್ರ ಅಭ್ಯರ್ಥಿಯು ಹೊರಗೆ ಬರುವುದಕ್ಕೆ ಅವಕಾಶ ನೀಡಬೇಕು.ಈ ಸಭೆಗೆ ಮತದಾರರನ್ನು ಆಹ್ವಾನಿಸುವ ಕೆಲಸ ಆಯೋಗದ್ದಾಗಬೇಕು. ಇದಕ್ಕೆ ಅನುಕೂಲವಾದ ಮಾಧ್ಯಮಗಳು ಮತ್ತು ಪರಿಕರಗಳನ್ನು ಉಪಯೋಗಿಸಿಕೊಳ್ಳುವುದು ಆಯೋಗದ ಸೂಕ್ತ ವಿವೇಚನಗೆ ಬಿಟ್ಟದ್ದು. ಇವೆಲ್ಲದರ ಖರ್ಚನ್ನು ಆಯೋಗವೇ ನಿಗದಿಗೊಳಿಸ ಬೇಕು. ಅದನ್ನು ಅಭ್ಯರ್ಥಿಗಳು ಪೂರ್ವಭಾವಿಯಾಗಿ ಭರಿಸಬೇಕು.
5) ಈ ಸಂಯುಕ್ತ ವೇದಿಕೆಯಲ್ಲಿ ಅಭ್ಯರ್ಥಿಗಳು ಮತದಾರರ ಸಮುದಾಯಕ್ಕೆ ತಿಳಿಸ ಬೇಕಾದ ವಿಷಯಗಳನ್ನು ತಿಳಿಸುವುದು, “ಪ್ರಭುವೇ ನಮಗೆ ವೋಟು ಕೊಡಿ’’ ಎಂದು ಮತಯಾಚನೆ ಮಾಡಿಕೊಳ್ಳುವುದು ಇಂತಹ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪ್ರತಿ ಅಭ್ಯರ್ಥಿಗೂ ಇದಕ್ಕೆ ಸಂಬಂಧಪಟ್ಟಂತೆ ನಿಯಮಗಳು ಮತ್ತು ಸಮಯವನ್ನು ಆಯೋಗವು ಪ್ರಚುರಪಡಿಸಬೇಕು. ಮತಯಾಚನೆಯ ಈ ವೇದಿಕೆಯಲ್ಲಿ ಚುನಾವಣಾ  ಸ್ಪರ್ಧಾಳುಗಳೊಂದಿಗೆ ಸೌಹಾರ್ಧಯುತವಾಗಿ ವಿಷಯ ಕುರಿತು ಚರ್ಚೆ ಮಾಡಲು ಸಮಯಾವಕಾಶ ಮತ್ತು ಧ್ವನಿವರ್ಧಕ ವನ್ನೊಳಗೊಂಡ ಸೂಕ್ತ ವ್ಯವಸ್ಥೆಯು ಮತದಾರನಿಗೆ ಇರಬೇಕು. ಆದರೆ ಇಂತಹ ಸಭೆಗೆ ಕೆಲವೇ ಗಂಟೆಗಳ ಅವಧಿ ಸಾಕಾಗದು. ಬೇಕಾಗುವಷ್ಟು ಸಮಯದ ವ್ಯವಸ್ಥೆಯನ್ನು ಒದಗಿಸುವುದು ಅನಿವಾರ್ಯ. ಪ್ರಚಾರ ಕಾರ್ಯಕ್ಕಾಗಿ 15 ದಿನಗಳು ಸಾವಿರಾರು ಕಾರ್ಯಕರ್ತರ ಸಮಯದ ನಷ್ಟ ಮತ್ತು ಶ್ರಮದ ವ್ಯರ್ಥ, ನೂರಿನ್ನೂರು ವಾಹನಗಳ ವೆಚ್ಚಕ್ಕಿಂತ ಇದು ಅನುಕೂಲ. ಈ ಹದಿನೈದು ದಿನಗಳ ಅವಧಿಯಲ್ಲಿ ಮತದಾರರಿಗೆ ಪ್ರಚಾರದ ಕಾರ್ಯಕರ್ತರ ಕಿರಿಕಿರಿ ತಪ್ಪುತ್ತದೆ. ಇನ್ನು ದಿನಪತ್ರಿಕೆ, ಆನ್‍ಲೈನ್ ವ್ಯವಸ್ಥೆ, ಟಿ.ವಿ. ಮಾದ್ಯಮವನ್ನು ಕೂಡಾ ಪ್ರಚಾರಕ್ಕೆ ಆಯೋಗ ಬಳಸಿಕೊಳ್ಳಬಹುದು. ಈ  ಎಲ್ಲಾ ವೆಚ್ಚದ ಮೊತ್ತವನ್ನು ಆಯೋಗವು ಪೂರ್ವಭಾವಿಯಾಗಿ ಅಭ್ಯರ್ಥಿಗಳಿಂದ ವಸೂಲು ಮಾಡಿಕೊಳ್ಳಬೇಕು.
             ಇದರಿಂದ ಏಳು ಪ್ರಯೋಜನಗಳಿವೆ. 1) ಅಭ್ಯರ್ಥಿಗಳು 15 ದಿನಗಳ ಕಾಲ ಮತಯಾಚನೆಗಾಗಿ ಬಳಸುವ ಕಾರ್ಯಕರ್ತರ ದಾಕ್ಷಿಣ್ಯ, ಶ್ರಮ, ಅವರ ವೆಚ್ಚ, ವಾಹನ ವೆಚ್ಚ, ಇಂಧನ ಉಳಿತಾಯ, ಪ್ರಚಾರ ಸಾಮಾಗ್ರಿಯ ವೆಚ್ಚ, ಅಭ್ಯರ್ಥಿಯ ಮತ್ತು ಪಕ್ಷದ ಮುಖಂಡರ ಒದ್ದಾಟ ಎಲ್ಲವೂ ಕಡಿಮೆ ಯಾಗುತ್ತವೆ. 2) ಆಯೋಗವು ಪ್ರಚಾರ ವೆಚ್ಚಕ್ಕಾಗಿ ವಸೂಲ್ಮಾಡುವಂತಹ ಮೊಬಲಗು ಒಂದು ಪರಿಗಣನಾತ್ಮಕ ಮಟ್ಟದಲ್ಲಿರುತ್ತದೆ. ಅದನ್ನು ಭರಿಸುವ ಯೋಗ್ಯತೆ ಇದ್ದವನೇ ಸ್ಪರ್ಧಿಸಬೇಕು. ಸುಮ್ಮನೆ ಚಟಕ್ಕಾಗಿ ಸ್ಪರ್ಧಿಸುವವರ ಸಂಭ್ಯಾವತೆ ಇಲ್ಲವಾಗುತ್ತದೆ. 3) ಚುನಾವಣಾ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಮತ್ತು ಕಾರ್ಯಕರ್ತರು ನೇರವಾಗಿ ಮತದಾರರೊಡನೆ ವ್ಯಕ್ತಿಗತ ಸಂಪರ್ಕಕ್ಕೆ ಸಿಕ್ಕು ಅವ್ಯವಹಾರ ನಡೆಯುವುದು ಕಡಿಮೆಯಾಗುತ್ತದೆ. 4) ಮುಖತಃ ಭೇಟಿ ಯಾದಾಗ ಮತದಾರರನ್ನು ಸಂತೋಷಗೊಳಿಸಲಿಕ್ಕಾಗಿ ಪೊಳ್ಳು  ಆಶ್ವಾಸನೆಗಳನ್ನು ಅಭ್ಯರ್ಥಿಗಳು ಕೊಡುವುದು, ಹಾಗೆಯೇ ಮತದಾರರಿಂದ ಛೀಮಾರಿ ಹಾಕಿಸಿ ಕೊಳ್ಳುವುದು ಇವೆರಡೂ ತಪ್ಪುತ್ತವೆ. 5) ಮತದಾರರು ಬಹಿರಂಗವಾಗಿ ತಮ್ಮ ಅನಿಸಿಕೆ, ಅಹವಾಲುಗಳನ್ನು ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಂಡಿಸುವಂತಹ ಪರಂಪರೆಯನ್ನು ಬೆಳೆಸಲು ಹುಟ್ಟುಹಾಕಿದಂತಾಗುತ್ತದೆ.    6) ಅಭ್ಯರ್ಥಿಗಳು ತಮ್ಮ ಸ್ವಂತ ವೇದಿಕೆಯಲ್ಲಿ ಮತ್ತೊಂದು ಪಕ್ಷ ಹಾಗೂ ಅದರ ಅಭ್ಯರ್ಥಿಯನ್ನು ಆದಾರ ರಹಿತವಾಗಿ ದೂಷಣೆ ಮಾಡಿ ಮತದಾರ ಸಮುದಾಯವನ್ನು ತಪ್ಪುದಾರಿಗೆ ಎಳೆಯುವುದು ನಿಲ್ಲುತ್ತದೆ. 7) ಸಂಯುಕ್ತ ವೇದಿಕೆಯಲ್ಲಿ ಪ್ರಚುರಗೊಳಿಸಿದ ಅಂಶಗಳನ್ನು ಅಭ್ಯರ್ಥಿಯು ಮರೆಗೆ ಸರಿಸದ ಹಾಗೆ ಸೋತ ಅಭ್ಯರ್ಥಿಗಳು ಚುನಾವಣೆಯ ನಂತರ ಮತದಾರ ಸಮುದಾಯವನ್ನು ಎಚ್ಚರಗೊಳಿಸುತ್ತಿರಲು ಸಹಾಯವಾಗುತ್ತದೆ.
6) ಪಕ್ಷದ ಪ್ರಣಾಳಿಕೆ, ಸಾಧನೆಗಳ ಮಾಹಿತಿ (ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ), ಅಭ್ಯರ್ಥಿಯ ಫೋಟೋ ಸಹಿತ ಪರಿಚಯ, ಅಭ್ಯರ್ಥಿಯ ಮನವಿ ಕುರಿತಂತೆ ಎಲ್ಲಾ ಅಭ್ಯರ್ಥಿಗಳದ್ದನ್ನೂ ಸೇರಿಸಿ ಸಂಯುಕ್ತವಾಗಿ ಒಂದು ಕಿರುಪುಸ್ತಕವನ್ನು ಚುನಾವಣಾ ಆಯೋಗವು ಪ್ರಕಟಿಸಬೇಕು. ಇದಕ್ಕೆ ಅಗತ್ಯವಾದ ಮಾಹಿತಿ ಪರಿಕರ ಗಳು ಮತ್ತು ವೆಚ್ಚನ್ನು ಅಭ್ಯರ್ಥಿಗಳಿಂದ ಪೂರ್ವಭಾವಿಯಾಗಿ ಆಯೋಗವು ಪಡೆದುಕೊಳ್ಳಬೇಕು. ಈ ಕಿರುಹೊತ್ತಿಗೆಗಳನ್ನು ಸಂಯುಕ್ತ ಚುನಾವಣಾ ಪ್ರಚಾರದ ಸಭೆಯಲ್ಲಿ ಪ್ರತಿಯೊಬ್ಬ ಮತದಾರನಿಗೆ ಪುಕ್ಕಟ್ಟೆ ಹಂಚಬೇಕು. ಮತದಾರನ ಕೈಗೆ ಸುಲಭವಾಗಿ ಬರುವ ಹಾಗೆ ವ್ಯವಸ್ಥೆಯನ್ನು ಆಯೋಗ ಮಾಡಬೇಕು. ಅದಕ್ಕಾಗಿ ಮತದಾರ ಪರದಾಡಬಾರದು.
7) ಮತದಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದ ಹಾಗೆ, ತನ್ನ ಮತ ಚಲಾವಣೆಯ ಹಕ್ಕನ್ನು ಸರಿಯಾಗಿ ನಿರ್ವಹಿಸುವ ಹಾಗೆ ಆಯೋಗವು ದಿನಪತ್ರಿಕೆ, ಟಿ.ವಿ. ಕರಪತ್ರ, ಮತ್ತು ಮೈಕ್ ಪ್ರಚಾರ ಇತ್ಯಾದಿ ಮಾಧ್ಯಮಗಳ ಮೂಲಕ ಪ್ರಸಾರ ಮಾಡಬೇಕು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸಮಾಜದ ಕಟ್ಟಕಡೆಯ ಪ್ರಜೆ ಎನ್ನಿಸಿಕೊಂಡವನಿಗೂ ಕೂಡಾ  ತನಗಿರುವ ಮತದಾನದ ಹಕ್ಕಿನ ಪ್ರಜ್ಞೆಯಿದೆ. ಆದರೆ ಅದನ್ನು ಸೂಕ್ತವಾಗಿ ಚಲಾಯಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಇದು ಕೇವಲ ಕಟ್ಟಕಡೆಯ ಪ್ರಜೆಯೊಂದೇ ಅಲ್ಲ. ಸಮಾಜದ ಪ್ರಥಮ ಸಾಲಿನ ಪ್ರಜೆಗಳಲ್ಲೂ ಈ ಕೊರತೆ ಬಹಳಷ್ಟಿದೆ. ಆದ್ದರಿಂದ ಕಡ್ಡಾಯ ಮತದಾನದ ಕಾನೂನು ಅಗತ್ಯ. ಒಮ್ಮೆ ಮತದಾರ ಮತ ಚಲಾವಣೆ ಮಾಡ ಲಾಗದ ಅನಾನುಕೂಲ ಸ್ಥಿತಿಯಿದ್ದಲ್ಲಿ ಆಯೋಗಕ್ಕೆ ಸೂಕ್ತ ಮಾಹಿತಿಯನ್ನು ಕೊಟ್ಟು ವಿನಾಯಿತಿಯನ್ನು ಪಡೆದುಕೊಳ್ಳಬೇಕು.
8) ಚುನಾವಣೆಯಲ್ಲಿ ಮತದಾರ ಪ್ರಜ್ಞಾವಂತಿಕೆಯಿಂದ ತನ್ನ ಜವಾಬ್ಧಾರಿಯನ್ನು ನಿರ್ವಹಿಸಬೇಕು. ಅಭ್ಯರ್ಥಿಯೇ ಆಗಲಿ ಅಥವಾ ಅವನ ಪರವಾಗಿ ಯಾರಾದರೂ ತನ್ನ ಮನೆಯ ಬಾಗಿಲಿಗೆ ಮತಯಾಚನೆಗೆ ಬಂದರೆ “ನಿನಗೆ ಮತ ಕೊಡುವುದಿಲ್ಲ’’ ಎಂದು ಗದರಿಸಬೇಕು. ಮತ ಚಲಾವಣೆಗೆ ಸಂಬಂಧಪಟ್ಟ ವಿಚಾರಗಳನ್ನೆಲ್ಲಾ ಎಲ್ಲಿ, ಹೇಗೆ, ಏನು, ಏಕೆ ಮತ್ತು ಯಾವುದು ಎಂಬಿತ್ಯಾದಿ ಅಂಶಗಳನ್ನು ತಾನೇ ಸ್ವತಃ ತಿಳಿದುಕೊಳ್ಳಬೇಕಾದದ್ದು ಮತದಾರನ ಹೊಣೆ. ಹಾಗೆಂದು ಇವು ಅವನಿಗೆ ನಿಲುಕದ ವಿಷಯವೇನಲ್ಲ. ಕಾರಣ ತನ್ನ ಬದುಕಿನ ಇತರೆ ಎಲ್ಲಾ ವಿಷಯಗಳನ್ನು ತಾನೇ ಮುನ್ನುಗ್ಗಿ ನಿಭಾಯಿಸಿಕೊಂಡು ಗಟ್ಟಿಯಾಗುವುದಿಲ್ಲವೇ? ಆಯೋಗವು ಏರ್ಪಡಿಸಿದ ಪ್ರಚಾರ ಸಭೆಗೆ ಸ್ವಯಂ ಪ್ರೇರಿತನಾಗಿ  ಅದಕ್ಕಾಗಿ ಸಾಕಷ್ಟು ವೈಚಾರಿಕ ಸಿಧ್ಧತೆಗೊಂಡ ಮನೋಭೂಮಿಕೆಯಲ್ಲಿ ಹೋಗುವುದು , ಅಭ್ಯರ್ಥಿಗಳ ಮಾತುಗಳನ್ನು ಆಲಿಸುವುದು, ಮಂಥನ ಮಾಡುವುದು, ಮಾಹಿತಿಗಳ ಕಿರುಪುಸ್ತಕವನ್ನು ಮನೆಗೆ ಒಯ್ದು ಅಭ್ಯಾಸ ಮಾಡುವುದು. ಇವೆಲ್ಲಾ ಅವನ ಮತ ಚಲಾವಣೆಯ ಹಿನ್ನಲೆ ತಯಾರಿಯಾಗಿರಬೇಕು.ಯಾವುದೇ ತಾತ್ಕಾಲಿಕ ಆಮಿಷಕ್ಕೆ, ಒತ್ತಡಕ್ಕೆ, ಮುಲಾಜಿಗೆ ಜಾತಿ ಮತ್ತು ಯಾವುದೋ ಸ್ವಾರ್ಥ ಸಾಧನೆಯ ಆಸೆಗೆ ಗುರಿಯಾಗದೇ ಸ್ವಯಂ ವಿವೇಚನೆಯಿಂದ ಮತಚಲಾಯಿಸಬೇಕು. ಹೀಗಾದಾಗ ಮಾತ್ರ  ತಾವು ಚುನಾಯಿಸಿದ ಪ್ರತಿನಿಧಿ ಕರ್ತವ್ಯವಿಮುಖನಾದರೆ  ಅವನನ್ನು ನಿಯಂತ್ರಿಸುವ ಶಕ್ತಿ ಮತದಾರರಿಗೆ ಬರುತ್ತದೆ. ಇಂತಹ ಮತದಾರರು ಸಿಡಿದೆದ್ದಾಗ ಜನಪ್ರತಿನಿಧಿಯಾದವನು ಒಂದೋ ಜನರಿಗೆ ಅನುಕೂಲಕರವಾಗಿ ಕಾರ್ಯನಿರ್ವಹಿಸಬೇಕು. ಇಲ್ಲವೇ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು.
9) ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಟ ವಿದ್ಯಾರ್ಹತೆ ಮತ್ತು ಕನಿಷ್ಟ ಸಾರ್ವಜನಿಕ ಕ್ಷೇತ್ರದ ಅನುಭವವನ್ನು ನಿಗದಿಗೊಳಿಸಬೇಕು. ಒಂದು ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡವರಿಗೆ ಮುಂದಿನ ಒಂದು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿರಕೂಡದು. ಸತತವಾಗಿ ಮೂರು ಚುನಾವಣೆಯಲ್ಲಿ ಸೋತವರು ಮತ್ತು 80 ವರ್ಷ ವಯಸ್ಸು ದಾಟಿದವರು ಚುನಾವಣೆಯಲ್ಲಿ ಪುನಹ ಸ್ಪರ್ಧಿಸುವಂತಿರಬಾರದು. ಯಾವುದೇ ಅಭ್ಯರ್ಥಿ ತನ್ನ ಸ್ವಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವಂತಿರಬೇಕು. ಈ ಅಂಶವನ್ನು ಸಧ್ಯದಲ್ಲಿಯೇ  ಜಾರಿಗೆ ತರಲು ಸರಕಾರದ ಮಟ್ಟದಲ್ಲಿ ಈಗಾಗಲೇ ಚಿಂತನೆ ನಡೆಯುತ್ತಿದೆ.
10) ಮತದಾನದ ಯಂತ್ರದಲ್ಲಿ ಅಭ್ಯರ್ಥಿಗಳ ಹೆಸರುಗಳ ಜೊತೆಗೆ ಕೊನೆಯಲ್ಲಿ “ಇವರಲ್ಲಿ ಯಾರೂ ಇಷ್ಟವಿಲ್ಲ’’ ಎಂದು ಮುದ್ರಿಸಿದ ಒಂದು ಕಾಲಂನ್ನು ಪ್ರತ್ಯೇಕವಾಗಿ ಸೇರಿಸಬೇಕು. ಮತದಾರನಿಗೆ ಸ್ಪರ್ಧಿಸಿದವರಲ್ಲಿ ಯಾರೂ ಬೇಡವೆಂದೆನಿಸಿದಾಗ ಈ ಕೊನೆಯ ಕಾಲಂನ ಗುಂಡಿಯನ್ನು ಒತ್ತಿ  ಮತವನ್ನು ನೀಡುವಂತೆ ಇರಬೇಕು. ಅದಕ್ಕೆ ಹೆಚ್ಚು ಮತಗಳು ಬಂದರೆ ಆ ಕ್ಷೇತ್ರಕ್ಕೆ ಮರು ಚುನಾವಣೆಯಾಗಬೇಕು. ಈ ಮರು ಚುನಾವಣೆಯಲ್ಲಿ ಮೊದಲು ಸ್ಪರ್ಧಿಸಿದವರಿಗೆ ಪುನಃ ಅವಕಾಶವಿರಬಾರದು. ಇಂತಹ ಪ್ರಕ್ರಿಯೆ ಚಾಲನೆಗೆ ಬಂದರೆ ಕೇವಲ ಯೋಗ್ಯತಾವಂತರಷ್ಟೆ ಸ್ಪರ್ಧಿಸ ಬೇಕಾಗುತ್ತದೆ.
      ಆದರೆ ಸದ್ಯದ ಸ್ಥಿತಿಯಲ್ಲಿ ಇದು ಒಂದು ಅಪ್ರಯೋಗಿಕವಾದ (ಯುಟೋಪಿಯನ್) ಪರಿಕಲ್ಪನೆ. ಈ ರೀತಿಯಲ್ಲಿ ಮರುಚುನಾವಣೆ ನಡೆಯುವ ಹಾಗೆ ಕೊನೆಯ ಕಾಲಂಗೆ ಮತನೀಡಬೇಕಾದರೆ ಮತದಾರರು ಪ್ರಜ್ಞಾವಂತರಷ್ಟೇ ಅಲ್ಲ ಅಷ್ಟೇ ಪ್ರಾಮಾಣಿಕರೂ ಮತ್ತು ಜವಾಬ್ದಾರಿಯುತರೂ ಆಗಬೇಕಾಗುತ್ತದೆ.
  ಮತದಾನ ತಿರಸ್ಕರಿಸುವ ಈ ರೀತಿಯ ತಂತ್ರವನ್ನು  ಚಾಲನೆಗೆ ತಂದಾಗ ತಿಳಿಯುವುದು ಒಂದಂತೂ ಸತ್ಯ. ಯಾರು ಭ್ರಷ್ಟರು? ರಾಜಕಾರಣಿಗಳೊ ಅಥವಾ ಮತದಾರರೋ ಎನ್ನುವ ಕಠೋರ ಸತ್ಯ ಬಯಲಿಗೆ ಬರುತ್ತದೆ.
    ಈಗಾಗಲೇ ಈ ರೀತಿಯ ಮತದಾನಕ್ಕೆ ಕಾನೂನು ರೀತ್ಯಾ ಅವಕಾಶ ವಿದೆ. ಆದರೆ ಇದು ಬಹಳ ಮಂದಿಗೆ ಗೊತ್ತಿಲ್ಲ. ಸ್ಪರ್ಧಿಸಿದವರಲ್ಲಿ ಯಾರು ಇಷ್ಟವಿಲ್ಲವೆಂದಾಗ ಚುನಾವಣಾ ಪ್ರಿಸೈಡಿಂಗ್ ಅಧಿಕಾರಿಗಳಿಂದ ಅದಕ್ಕಾಗಿಯೇ
  ಇರುವ ಒಂದು ಪ್ರತ್ಯೇಕ ಅರ್ಜಿ ನಮೂನೆಯನ್ನು ಕೇಳಿ ಪಡೆದು ಅದರಲ್ಲಿ ಬರೆದು ಮತದಾರ ಮತಪೆಟ್ಟಿಗೆಗೆ ಹಾಕಬೇಕು. ಅರ್ಜಿ ನಮೂನೆ ಎಂದರೆ ಫಾರಂ ನಂ. 17ಎ ಅಂಡರ್ ರೂಲ್ 49-0. ಈ ರೀತಿ ವಿಶೇಷ ಸೌಲಭ್ಯದ ಬಗ್ಗೆ ಪ್ರಚಾರವೂ ಇಲ್ಲವೆಂಬುದು ಖೇದದ ಸಂಗತಿ. ಮತದಾನ ಯಂತ್ರದಲ್ಲ್ಲಿಯೇ ಈ ವ್ಯವಸ್ಥೆಯನ್ನು ಸಜ್ಜುಗೊಳಿಸಿದರೆ ಪ್ರತ್ಯೇಕ ಪ್ರಚಾರ ಅನಗತ್ಯ.
11) ಹಳ್ಳಿಗಳಲ್ಲಿ ಮತಗಟ್ಟೆಗಳನ್ನು ಈಗಿನ ವ್ಯವಸ್ಥೆಗಿಂತ ಇನ್ನೂ ಹತ್ತಿರ ಹತ್ತಿರ ಮಾಡಬೇಕು. ಮತದಾರ ಮತ ಚಲಾಯಿಸಲು 1 ಕಿ. ಮೀ. ಗಿಂತ ಹೆಚ್ಚು ದೂರ ನಡೆಯುವಂತೆ ಇರಬಾರದು. ಆಗ ವಯಸ್ಸಾದವರು, ಅನಾರೋಗ್ಯ, ಪೀಡಿತರು ಅಂಗವಿಕಲರು,ಮತದಾನದ ಬಗ್ಗೆ ಸ್ವಲ್ಪ ಅಸಡ್ಡೆ ಇದ್ದವರು ಅನುಕೂಲತೆ ಜಾಸ್ತಿ ಯಾಗಿದ್ದರಿಂದ ಹೆಚ್ಚು ಪ್ರಮಾಣದಲ್ಲಿ ಮತ ಚಲಾಯಿಸುತ್ತಾರೆ. ಇದರಿಂದ ಮತದಾನದ  ಪ್ರಮಾಣ ಹೆಚ್ಚುತ್ತದೆ. ಮತದಾರರಿಗೆ ತೊಂದರೆಯೂ ಕಡಿಮೆ ಯಾಗುತ್ತದೆ.
12) ಉದ್ಯೋಗ, ವಿದ್ಯಾಭ್ಯಾಸ, ಆರೋಗ್ಯ ಚಿಕಿತ್ಸೆ ಇತ್ಯಾದಿ ಅನೇಕ ಕಾರಣಗಳಿಗಾಗಿ ಸ್ವಂತ ಊರಿನಿಂದ ದೂರ ಇದ್ದವರು ತಾವಿರುವ ಊರಿನಿಂದಲೇ ತಮ್ಮ ಹುಟ್ಟೂರಿನ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುವ ವ್ಯವಸ್ತೆಯಾಗಬೇಕು.ಈಗಿನ ಅಂತರ್ಜಾಲದ ತಾಂತ್ರಿಕತೆಯಲ್ಲಿ ಇದು ಸಾಧ್ಯ. ಅದಕ್ಕೆ ತಕ್ಕನಾದ ಅಂತರ್ಜಾಲ ಯೋಜನೆಯನ್ನು ರೂಪಿಸಬೇಕು. ಹೀಗೆ ಮಾಡಿದರೆ ತನ್ನ ಜನ್ಮ ಕ್ಷೇತ್ರದ ಅಭ್ಯರ್ಥಿಗೆ ಮತದಾರನು ಮತ ಕೊಡಲು ಅನುಕೂಲವಾಗುತ್ತದೆ . ತಮ್ಮ ಉದ್ಯೋಗಕ್ಕಾಗಿ  ತಮ್ಮ ಹುಟ್ಟಿದ ಕ್ಷೇತ್ರದಿಂದ ದೂರದಲ್ಲಿ ವಾಸಿಸುತ್ತಿರುವ ಮತದಾರರಿಗೆ ತಮ್ಮ ಊರಿಗೆ ಬಂದು ಮತದಾನ ಮಾಡುವ ಸಾವಿರಾರು ರೂಪಾಯಿಗಳ ಹಣದ ಖರ್ಚುಸಮಯ ನಷ್ಟ, ಪ್ರಯಾಣದ ತೊಂದರೆ ಇತ್ಯಾದಿ ಕಷ್ಟಗಳನ್ನು ತಪ್ಪಿಸಿದಂತೆ ಆಗುತ್ತದೆ. ಈ ಕಷ್ಟಗಳನ್ನು ತೆಗೆದುಕೊಳ್ಳಲು ಇಷ್ಟ ಪಡದ ಮತದಾರನೂ ಮತ ಚಲಾಯಿಸಲು ಅನುಕೂಲವಾಗುತ್ತದೆ. ಈ ವ್ಯವಸ್ಥೆಯನ್ನು ಮಾಡಿದಲ್ಲಿ ಮತದಾನದ ಪ್ರಮಾಣ ಹೆಚ್ಚುತ್ತದೆ. ಏಕೆಂದರೆ ಗ್ರಾಮೀಣ ಪ್ರದೇಶವನ್ನು ಹೆಚ್ಚಾಗಿ ಹೊಂದಿದ ಒಂದು ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ದೂರದಲ್ಲಿ ಇರುವ ಇಂತಹ ಮತದಾರರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಇರುತ್ತಾರೆ.
      ಈ ಮೇಲಿನ ಎಲ್ಲಾ ವಿಚಾರಗಳೂ ಒಂದು ಹಂತದಲ್ಲಿ ಅಪ್ರಯೋಗಿಕ ಪರಿಕಲ್ಪನೆಗಳು (ಯುಟೋಪಿಯನ್ ಕಾನ್ಸೆಪ್ಟ್ಸ್) ಎನ್ನುವಂತೆ ಕಾಣುತ್ತದೆ ಹೌದು. ಕೆಲವು ವರ್ಷಗಳ ಹಿಂದೆ ಸನ್ಮಾನ್ಯ ಟಿ.ಎನ್. ಶೇಷನ್‍ರವರು ಬಹಳಷ್ಟು ಚುನಾವಣೆ ಸುಧಾರಣೆಗಳನ್ನು ತಂದಾಗಲೂ ಜನರು ಅವುಗಳನ್ನು ಪ್ರ್ರಾಯೋಗಿಕ ವಾಗಿ ಎಷ್ಟರ ಮಟ್ಟಿಗೆ ಸಾಧ್ಯ ಎಂದುಕೊಂಡಿದ್ದರು. ಇತ್ತೀಚಿಗಿನ ಚುನಾವಣೆ ಯಲ್ಲಿನ ಸುಧಾರಣೆಗಳು ಅಂದಿನಗಿಂತ ಬಹಳ ಮುಂದೆ ಹೋಗಿವೆ. ಜನತೆ ಅದಕ್ಕೆ ಹೊಂದಿಕೊಳ್ಳುತ್ತಿಲ್ಲವೇ?
ಒಂದು ದೃಷ್ಟಿಯಲ್ಲಿ ಮೇಲ್ನೋಟಕ್ಕೆ ಈ ಎಲ್ಲಾ ವಿಚಾರಗಳ ಪ್ರಯೋಗವು ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಂತೆ ಭಾಸವಾಗುತ್ತದೆ ನಿಜ. ಬಹಳಷ್ಟು ರಾಜಕಾರಣಿಗಳ ಕೈಕಾಲು, ಬಾಯಿಗಳನ್ನು ಕಟ್ಟಿದಂತಾಗುತ್ತದೆ. ಅವರ ಅಭಿಪ್ರಾಯ ಮಂಡನೆಯ ಹಕ್ಕಿಗೆ ಧಕ್ಕೆ ತಂದಂತಾಗುತ್ತದೆ. ಹಾಗೆಯೇ ಮತದಾರನ ಚಾಚುವ ಕೈಗಳನ್ನು ಕತ್ತರಿಸಿದಂತಾಗಿ ಅವನಿಗೆ ಅಭಾವದ ಪ್ರಜ್ಞೆ ನಿರ್ಮಾಣವಾಗುತ್ತದೆ. ರಾಜಕೀಯ ಮುಖಂಡರ ಹಿಂಬಾಲಕರನ್ನು ಬಂಧಿಸಿದಂತಾಗುತ್ತದೆ. ಒಟ್ಟಾರೆ ಇಂತಹ ಚುನಾವಣೆಯ ಅನುಸರಣೆ ಅಬ್ಬರವಿಲ್ಲದ ಜಾತ್ರೆಯಾಗುತ್ತದೆ.
     ಆದರೆ ಇದೆಲ್ಲ ಅನಿಸಿಕೆಗಳು ಜನಮಾನಸದಲ್ಲಿ ಒಂದೆರಡು ಚುನಾವಣೆಗಳಲ್ಲಿ ಸಾಣಿಗೆ ಸಿಕ್ಕ ಕರಗಸದಂತಾಗುತ್ತದೆ. ನಂತರದಲ್ಲಿ ನಿಧಾನವಾಗಿ ರಾಜಕಾರಣಿಗಳು ಮತ್ತು ಮತದಾರರು ಅಲ್ಲದೇ ಈ ಪ್ರಕ್ರಿಯೆಯಲ್ಲಿ ಸುಳಿದು ಹೋಗುವ ಪ್ರತಿಯೊಬ್ಬರೂ ಈ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾರೆ. ಎರಡು ಚುನಾವಣೆಗಳ ಅವಧಿಯ ನಂತರ ಈ ಪ್ರಕ್ರಿಯೆಗಳ ಜಾರಿಗಾಗಿ ತಂದ ಅನೇಕ ಕಾನೂನು ಕ್ರಮಗಳ ಪ್ರಯೋಗ ಜನಸಾಮಾನ್ಯರಲ್ಲಿ ಸಹಜವಾಗಿಯೇ ಅನಪೇಕ್ಷಿತವಾಗಬಹುದು. ಕಾರಣ ಅಷ್ಟು ಹೊತ್ತಿಗೆ ಬದಲಾದ ಪರಿಸ್ಥಿತಿಗಳಿಗೆ ಜನರು ತಮ್ಮ ಮನೋಗತಿಯನ್ನು ರೂಢಿಸಿಕೊಂಡಿರಲಿಕ್ಕೆ ಸಾಕು. ಯಾವುದೇ ವಿಷಯವೂ ಅಷ್ಟೆ. ಬದಲಾವಣೆಯ ಹಂತದಲ್ಲಿ ಅದು ಸಂಘರ್ಷವನ್ನು ಎದುರಿಸಬೇಕಾಗುತ್ತದೆ.
     ಸರ್ಕಾರ ಈ ಸುಧಾರಣೆಗಳಿಗಾಗಿ ಕಾನೂನು ತಿದ್ದುಪಡಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ಅಧಿಕಾರದ ಮಂಚೂಣಿಯಲ್ಲಿ ಇರುವವರ ಪ್ರಾಮಾಣಿಕತೆ, ವಿವೇಚನೆ, ದಕ್ಷತೆ, ದೂರದರ್ಶಿತ್ವ, ಹೆಚ್ಚಿನದಾಗಿ ಪರಮದೈರ್ಯ ಮತ್ತು ಇಚ್ಛಾಶಕ್ತಿ ಅಗತ್ಯವಿದೆ. ಈ ಎಲ್ಲಾ ಗುಣಗಳನ್ನು ಅನುಸರಿಸದೆ ಈಗಿನ ದಾರಿಯಲ್ಲಿಯೇ ನಮ್ಮ ರಾಜಕೀಯ ನೇತಾರರು, ರಾಜಕೀಯ ಚಿಂತಕರು ಮತ್ತು ಆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇನ್ನು ಅನೇಕ ಜವಾಬ್ದಾರಿ ವ್ಯಕ್ತಿಗಳು ಮುಂದೆ ಸಾಗಿದರೆ ಅವರಷ್ಟೇ ಅಲ್ಲ, ಇಡೀ ರಾಷ್ಟ್ರವೇ ಒಂದು ದಿನ ಅಧಃಪತನದ ಕಟ್ಟಕಡೆಯ ನಕಾರಾತ್ಮಕ ಕಂದಕಕ್ಕೆ ಬೀಳಬೇಕಾಗುತ್ತದೆ. ಊರಲೆಲ್ಲಾ ನೀರು ಆರಿದ ಮೇಲೆ ಬೆಂಕಿ ಉರಿದು ಬಿದ್ದರೆ ಅದನ್ನು ಆರಿಸುವ ಪ್ರಯತ್ನ ಅಪ್ರಯೋಗಿಕವಲ್ಲವೇ?
  ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಬದುಕಿನ ಉಳಿದ ವಿಚಾರಗಳಿಗೆ ತಾನು ಸ್ಪಂದಿಸುವಂತೆ ಮತದಾನದ ವಿಚಾರದಲ್ಲಿಯೂ ಸ್ವತಂತ್ರ ವಾಗಿ ಯೋಚಿಸಬೇಕು. ಅದು ಬಿಟ್ಟು ಯಾವುದೋ ಒತ್ತಡಕ್ಕೆ, ಪೂರ್ವಾಗ್ರಹ ಪೀಡನೆಗೆ ಅಥವಾ ಸಮೂಹಸನ್ನಿಗೆ ಬಲಿಯಾಗಬಾರದು. ತನಗಾಗಿ ಪ್ರತಿನಿಧಿ ಬೇಕು. ಅಂಥವನನ್ನು ಚುನಾಯಿಸಿಕೊಳ್ಳಬೇಕು. ಎಂಬ ವಿಚಾರ ಅವನ ತಲೆಯಲ್ಲಿ ಇರಬೇಕು.
ಆಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಯಾಗಬಹುದು.

                                                                       *** 

ದಿನಾಂಕ: 20-04-2013                                               ಎಂ.ಗಣಪತಿ    ಕಾನುಗೋಡು
                                                                              ಅಂಚೆ: ಬಿ.ಮಂಚಾಲೆ-577431
                                                                                      ಸಾಗರ ತಾ: ಶಿವಮೊಗ್ಗ ಜಿಲ್ಲೆ
                                                                                      ಕರ್ನಾಟಕ ರಾಜ್ಯ.
                                                                                      ಮೊ: 9481968771
  
 

Wednesday 23 January 2013

ಭಾರತೀಯ ಸಮಾಜದಲ್ಲಿ ಮಹಿಳೆ , ಸ್ವಾತಂತ್ರ್ಯ ಮತ್ತು ಕುಟುಂಬ


                                                                                         -------ಎಂ ಗಣಪತಿ ಕಾನುಗೋಡು.
( ಈ ಲೇಖನದ ವಿಚಾರಗಳನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು)

    ಭಾರತೀಯ ಸಮಾಜದಲ್ಲಿ ಮಹಿಳೆ ಮತ್ತು ಅವಳ ಸ್ವಾತಂತ್ರ್ಯವನ್ನು ಚರ್ಚೆ ಮಾಡುವ ಮೊದಲು ಭಾರತೀಯ ಸಮಾಜದ ನೆಲಗಟ್ಟಿನ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ.  ಕೌಟುಂಬಿಕ ಪರಿಸರ ಮತ್ತು ಮನೋಭಾವಗಳಲ್ಲಿ ನಮ್ಮ ಸಮಾಜ ಪಾಶ್ಚಿಮಾತ್ಯ ಸಮಾಜದ ಕೌಟುಂಬಿಕ ನೆಲೆಗಿಂತ ಭಿನ್ನವಾಗಿದೆ. ಸಾಮಾನ್ಯವಾಗಿ ಒಂದು ಕುಟುಂಬ ಮೂರು ತಲೆಮಾರುಗಳನ್ನು ಹೊಂದಿರುತ್ತದೆ. 1) ಅಜ್ಜ-ಅಜ್ಜಿ  2) ಅಪ್ಪ - ಅಮ್ಮ 3 ) ಮೊಮ್ಮಕ್ಕಳು ಅಥವಾ ಮಕ್ಕಳು . ಈ ಸ್ಥರಗಳು ಪ್ರಪಂಚದಾದ್ಯಂತ ಒಂದೇ.  ಇನ್ನು ಮುತ್ತಜ್ಜ - ಮುತ್ತಜ್ಜಿ , ಮತ್ತು ಮರಿಮಕ್ಕಳು ಎನ್ನುವ ವಿಶೇಷ ಸ್ಥರಗಳು ಇಂದಿನ ವಿಭಕ್ತ ಕುಟುಂಬದ ವ್ಯವಸ್ಥೆಯಲ್ಲಿ ಬಹಳ ಅಪರೂಪ. ಬಹಳ ಕುಟುಂಬಗಳಲ್ಲಿ ಅಪ್ಪ - ಅಮ್ಮ ಮತ್ತು ಮಕ್ಕಳು ಹೀಗೆ ಎರಡೇ ಸ್ಥರಗಳನ್ನು ನೋಡುತ್ತೇವೆ .
 ಪಾಶ್ಚಿಮಾತ್ಯ ಸಮಾಜದಲ್ಲಿ ಅಜ್ಜ - ಅಜ್ಜಿ ಅಂತೆಯೇ ವಯಸ್ಸಾಗಿದ್ದರೆ ಅಪ್ಪ - ಅಮ್ಮ ಈ ಎರಡೂ ತಲೆಮಾರುಗಳನ್ನು ನಿಗಾ ವಹಿಸಲು , ಸಾಕಲು ಬೇರೆ ಸಾಂಸ್ಥಿಕ ವ್ಯವಸ್ಥೆಗಳೇ ಇರುತ್ತವೆ. ಹಾಗೆಯೇ ಮಕ್ಕಳನ್ನು ನೋಡಿಕೊಳ್ಳಲು, ವಿಧ್ಯಾಭ್ಯಾಸ  ಮಾಡಿಸಿಕೊಡಲು 'ಡೇ  ಕೇರ್' ನಂತಹ ಸಾಸ್ಥಿಕ ವ್ಯವಸ್ಥೆಗಳು ಇರುತ್ತವೆ . ಹಾಗೆಂದು ಇವು  ಅನಾಥಾಶ್ರಮವೆಂದು ಭಾವಿಸಬೇಕಾಗಿಲ್ಲ. ವ್ಯವಸ್ಥಿತವಾದ ಒಂದು ಸುಶ್ರಮ.  ಇದಕ್ಕೆ ಅಲ್ಲಿಯ ಜನರ ವ್ಯೆಯುಕ್ತಿಕ   ಸಮ್ಮತಿಯೊಂದೇ ಅಲ್ಲ ಸಾಮಾಜಿಕ ಸಮ್ಮತಿಯೂ ಇರುತ್ತದೆ.  ಅದಕ್ಕೆ ತಗಲಬಹುದಾದ ವೆಚ್ಚವನ್ನು ಸಂಭಂಧಪಟ್ಟವರು ಭರಿಸುತ್ತಾರೆ. ದುಡಿಮೆಯ ನಡುವೆ ಕಾಲಾವಕಾಶವಿದ್ದಾಗ ತಮ್ಮ ಹಿರಿಯರನ್ನು ಅಗತ್ಯವಾಗಿ ಭೇಟಿಯಾಗಿ ಯೋಗಕ್ಷ್ಯೇಮ ವಿಚಾರಿಸುತ್ತಾರೆ. ಅಲ್ಲದೇ ನಿತ್ಯ ಸಂಪರ್ಕದಲ್ಲಿರುತ್ತಾರೆ. ಕಿರಿಯರ ವಿಚಾರದಲ್ಲೂ ಇದೇ ವ್ಯವಸ್ಥೆ. ಆದರೆ ಸಂಸರ್ಗ ಮತ್ತು ಸಂಪರ್ಕ ವಿಚಾರದಲ್ಲಿ ಬೇರೆ ಬೇರೆ ಕ್ರಮ ಅಷ್ಟೇ.
 ಆದರೆ ಭಾರತೀಯ ಸಮಾಜದಲ್ಲಿ ಪಾರಂಪರಾನುಗತವಾಗಿ ಹಾಗಿಲ್ಲ. ಪ್ರಸಕ್ತ ಪರಿಸ್ಥಿತಿಯಲ್ಲಿ ದೊಡ್ಡ ಶಹರಗಳಲ್ಲಿ ವೃದ್ದರು ಮತ್ತು ಸಣ್ಣ ಮಕ್ಕಳ ವ್ಯವಸ್ಥೆಗೆ ಪಾಶ್ಚಿಮಾತ್ಯ ಮನೋಭೂಮಿಕೆಯಂತೆ ಅಲ್ಲಲ್ಲಿ ಸಂಸ್ಥೆಗಳು ಹುಟ್ಟಿಕೊಂಡದ್ದು ಹೌದು. ಆದರೆ ನಮ್ಮ ಮನೋಗತಿ ಅದಕ್ಕೆ ಇನ್ನೂ ಹೊಂದಿಕೊಂಡಿಲ್ಲ. ವೃದ್ಧರ ಮತ್ತು ಮಕ್ಕಳ ಪ್ರಾಥಮಿಕ ಸಂಭಂಧ ಇನ್ನೂ ತೀರ ವ್ಯೆಯುಕ್ತಿಕವಾಗಿಯೇ ಉಳಿದುಕೊಂಡು ಬಂದಿದೆ . ತಾಯಿಯು ಮಕ್ಕಳಿಗೆ ಹಾಲು, ಅನ್ನ ಉಣಿಸುವಷ್ಟು ಸಮಾಧಾನ , ಮಕ್ಕಳಿಗೆ ಸಂಸ್ಕೃತಿಯನ್ನು ಪರಿಪಾಠಿಸುವಲ್ಲಿ ಇರುವ ಸಂತೋಷ 'ಡೇ ಕೇರ್'  ನಂತಹ ಸಂಸ್ಥೆಯಲ್ಲಿನ ಕಾರ್ಯ ವಿಧಾನಗಳಿಂದ ನಮ್ಮ ಸಮಾಜದ ತಂದೆ ತಾಯಿಗಳಿಗೆ ಒಗ್ಗುವುದಿಲ್ಲ. ವೃದ್ಧ ತಂದೆ ತಾಯಿಗಳನ್ನು ಪೋಷಣೆ ಮಾಡದಿದ್ದರೆ ಅವರ ಮಕ್ಕಳಿಗೆ ಅಪರಾಧ ಪ್ರಜ್ಞೆ ಮೂಡುತ್ತದೆ.
 ನಮ್ಮ ಸಮಾಜದ ಈ ತೆರನ ಮನೋಭೂಮಿಕೆಯ ವೇದಿಕೆಯಲ್ಲಿ ಮಹಿಳೆ, ಅವಳ ಸ್ವಾತಂತ್ರ್ಯ ಮತ್ತು ಕುಟುಂಬ ಎನ್ನುವ ವಿಚಾರವನ್ನು ಚಿಂತನೆ ಮಾಡಬೇಕಾಗುತ್ತದೆ.
 ಇಲ್ಲಿ ಗಮನಿಸಬೇಕಾದ ಅತೀ ಮುಖ್ಯ ಅಂಶವೆಂದರೆ ಸಂಪೂರ್ಣ ಸ್ವಾತಂತ್ರ್ಯ ಯಾರಿಗೂ ಇಲ್ಲ. ಮಹಿಳೆ ಮತ್ತು ಪುರುಷ ಅಂತಲ್ಲ. ಪ್ರಪಂಚದ ಯಾವುದೇ ಪ್ರಾಣಿ,  ಮನುಷ್ಯನನ್ನು ಒಳಗೊಂಡು ಯಾರಿಗೂ ಸಂಪೂರ್ಣ ಸ್ವಾತಂತ್ರ್ಯವನ್ನು ದೇವರು ಕೊಟ್ಟಿಲ್ಲ. ಒಬ್ಬ ವ್ಯಕ್ತಿ ಸಂಪೂರ್ಣ ಸ್ವಾತಂತ್ರ್ಯವನ್ನು ಸಾಧಿಸುತ್ತಿದ್ದಾನೆ ಎಂದರೆ ಮತ್ತೊಬ್ಬನ ಸ್ವಾತಂತ್ರ್ಯವನ್ನು ಅವನು ಕಸಿದುಕೊಳ್ಳುತ್ತಿದ್ದಾನೆ ಎಂದೇ ಭಾವಿಸಬೇಕು. ಹಾಗೆಂದು ಸಂಪೂರ್ಣ ಸ್ವಾತಂತ್ರ್ಯ ಹೊಂದಿರಲು ತಕ್ಕನಾಗಿ ಯಾವ ವ್ಯಕ್ತಿಯೂ ಸಮಗ್ರವಾಗಿ ಸ್ವಾವಲಂಬಿಯಲ್ಲ. ಅವನು ನಿರ್ವಹಿಸುವ ಬದುಕಿನ ಅನೇಕ ಪ್ರತ್ಯೇಕ ಪಾತ್ರಗಳಲ್ಲಿ ಮತ್ತು ಹರಿದಾಡುವ ಹಲವಾರು ಕ್ಷೇತ್ರಗಳಲ್ಲಿ  ಪರಾವಲಂಬಿಯೇ ಆಗಿದ್ದಾನೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಸ್ತುತ ವಿಷಯವನ್ನು ವಿಶ್ಲೇಷಿಸಬೇಕಾಗುತ್ತದೆ.
 ಇಷ್ಟೆಲ್ಲಾ ಪೂರ್ವ ಪೀಠಿಕೆಯನ್ನು ಅಭ್ಯಾಸ ಮಾಡಿಕೊಂಡು ಈಗ ಮಹಿಳೆ, ಸ್ವಾತಂತ್ರ್ಯ ಮತ್ತು ಕುಟುಂಬ ಎಂಬ ಪರಿಕಲ್ಪನೆಯ ವಿಮರ್ಶೆಗೆ ಬರೋಣ.
 ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ  ನೋಡಬೇಕಾಗುತ್ತದೆ. ಒಂದು ಗ್ರಾಮೀಣ ಮಹಿಳೆ. ಇನ್ನೊಂದು ನಗರ ಪ್ರದೇಶದ ಮಹಿಳೆ. ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರ, ಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತು ಅನುಭವಿಸಲು ಇಚ್ಚಿಸುವ ಮನೋಭಾವದಲ್ಲಿ ಇಬ್ಬರಿಗೂ ವ್ಯತ್ಯಾಸವಿದೆ.
  ಗ್ರಾಮೀಣ ಭಾರತ ಹೆಚ್ಚಾಗಿ ಕೃಷಿ ಮತ್ತು ಕೃಷಿ ಅವಲಂಬಿತ ಉದ್ಯೋಗವನ್ನು ಹೊಂದಿದೆ.ಗ್ರಾಮೀಣ ಮಹಿಳೆ ಹೆಚ್ಚೆಂದರೆ ಸಾಮಾನ್ಯ ಶೈಕ್ಷಣಿಕ ಪದವಿಯನ್ನು ಹೊಂದಿರುವಳು. ತಾಂತ್ರಿಕ ಶೈಕ್ಷಣಿಕ ಪದವಿಯನ್ನು ಹೊಂದಿರುವುದಿಲ್ಲ. ಈಕೆ ಸ್ವಯಂ ಉದ್ಯೋಗದ ಹಪ ಹಪಿಕೆಯನ್ನು ಒಮ್ಮೆ ಹೊಂದಿದ್ದರೂ ಅದಕ್ಕೆ ಬೇಕಾದ ಶಿಕ್ಷಣ, ತರಬೇತಿ ಮತ್ತು ವಾತಾವರಣ ಇರುವುದಿಲ್ಲ. ಕೃಷಿ ಪ್ರಧಾನ ಜೀವನದಲ್ಲಿ ಕೇವಲ ಗೃಹಿಣಿಯಾಗಿ ತನ್ನ ಬದುಕನ್ನು ನಡೆಸುತ್ತಾಳೆ. ಪುರುಷರ ದುಡಿಮೆಗೆ ಕೈ ಜೋಡಿಸುತ್ತಾಳೆ. ಇಲ್ಲವೇ ಹಿನ್ನೆಲೆಯಲ್ಲಿ ಸಹಕರಿಸುತ್ತಾಳೆ. ಕೃಷಿ ಕುಟುಂಬದಲ್ಲಿ ಮನೆಯಲ್ಲಿಯೇ ಪುರುಸೊತ್ತಿಲ್ಲದಷ್ಟು ಕೆಲಸ ಅವಳಿಗಿರುತ್ತದೆ. ಹಾಗೆಂದು ಪುರುಷರಿಗಿರುವಷ್ಟು ಗೌರವ ಕೆಲವು ಕುಟುಂಬಗಳಲ್ಲಿ ಮಾತ್ರ  ಅವಳಿಗೂ ಇರುತ್ತದೆ. ಗ್ರಾಮೀಣ ಮಹಿಳೆಯರಿಗೆ ವಯೋವೃದ್ದರ ಪೋಷಣೆ, ದಿನದ ಮಧ್ಯೆ ಮಧ್ಯೆ ಕೃಷಿ ಕಾರ್ಮಿಕರಿಗೆ ಚಹಾ, ತಿಂಡಿ ಮತ್ತು  ಊಟ ಮಾಡಿ ಎಳೆಯುವುದು. ಕೃಷಿ ಜೀವನಕ್ಕೆ ಅಗತ್ಯವಾದ ನಾಯಿ, ಬೆಕ್ಕು, ಕೋಳಿಗಳ ಆರೈಕೆ ಮಾಡುವದು. ಎಮ್ಮೆ ಹಸುಗಳ ನಿಗಾ, ಹಾಲು ಹಿಂಡುವದು, ಅವುಗಳ  ಸಗಣಿ ಬಾಚುವುದು ಗ್ರಾಮೀಣ ಮಹಿಳೆಗೆ ಅಂಟಿದ ಕಟ್ಟಳೆ. ಮುಂಜಾನೆ ಆರು ಘಂಟೆಯಿಂದ ರಾತ್ರಿ ಹತ್ತು-ಹನ್ನೊಂದು ಘಂಟೆಯವರೆಗೂ ಯಂತ್ರದಂತೆ ಕೆಲಸಮಾಡುತ್ತಿರುವುದು ಅವಳ ದಿನಚರಿ. ಕೃಷಿ ಭೂಮಿ ಹೊಂದಿದ ಮಹಿಳೆಯಾದರೆ ಪುರುಷನಿಗೆ ಸರಿಸಮನಾಗಿ ಪತಿಗೆ ಹೇಗೆ ಸಂಬಳವಿಲ್ಲದೆ ಒಟ್ಟು ಉತ್ಪನ್ನದ ದುಡಿಮೆಯೋ ಹಾಗೆಯೇ ಅವಳಿಗೂ ಸಂಬಳವಿಲ್ಲದ ದುಡಿಮೆ. ಇನ್ನು, ಕೂಲಿಕಾರ ಕುಟುಂಬದ ಗ್ರಾಮೀಣ ಮಹಿಳೆಯಾದರೆ  ಸಂಸಾರ ನಿರ್ವಹಣೆ ಜೊತೆಗೆ ಕನಿಷ್ಠ ಸಂಬಳದ ದಿನಗೂಲಿ ಇರುತ್ತದೆ. 
  ಮಹಿಳೆಗೆ ಸಿಗುವ ಗೌರವ ಮತ್ತು ಸ್ವಾತಂತ್ರ್ಯದ ಇನ್ನೊಂದು ಮುಖವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಒಂದೇ ಕುಟುಂಬದ ಮೂರು ಗಂಡುಮಕ್ಕಳಲ್ಲಿ ಒಬ್ಬನು ಹುಟ್ಟಿದ ಮನೆಯ ಆಸ್ತಿ ಮತ್ತು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಹಳ್ಳಿಯಲ್ಲಿಯೇ ಉಳಿದುಕೊಳ್ಳುತ್ತಾನೆ.  ಸಹಜವಾಗಿ ಆತನ ಹೆಂಡತಿ ಗೃಹಿಣಿಯಾಗಿ ಆತನೊಡನೆ ಉಳಿಯಬೇಕಾಗುತ್ತದೆ. ಇನ್ನಿಬ್ಬರು ಮಕ್ಕಳು ಯಾವುದಾದರೂ ಉದ್ಯಮವನ್ನು ಅಥವಾ ನೌಕರಿಯನ್ನು ಹಿಡಿದು ನಗರವನ್ನು ಸೇರುತ್ತಾರೆ.  ಅವರ ಹೆಂಡತಿಯರು ಸಹಜವಾಗಿ ಅವರೊಡನೆ ಶಹರದ ಬಾಳ್ವೆಯನ್ನು ನಡೆಸುತ್ತಾರೆ. ಇಂತಹ ಘಟನೆಗಳಲ್ಲಿ ಶಹರವಾಸಿ ಈ ಮಹಿಳೆಯರು ವರ್ಷದಲ್ಲಿ ಅಪರೂಪಕ್ಕೆ ಹಳ್ಳಿಯ ಮನೆಗೆ ಬರುತ್ತಾರೆ. ಕೆಲವೇ ದಿನಗಳ ಮಟ್ಟಿಗೆ ಅವರಿಗೆ ಹಳ್ಳಿಯಲ್ಲಿರಲು ಅವಕಾಶವಿರುತ್ತದೆ. ಈ ಹತ್ತಾರು ದಿನಗಳಲ್ಲಿ ತನ್ನ ಮನೆ, ತವರುಮನೆ , ಅಕ್ಕ ತಂಗಿಯರ ಮನೆ ಮತ್ತು ಇತರ ನೆಂಟರಿಷ್ಟರ ಮನೆಗಳನ್ನು ಓಡಾಡಿಕೊಂಡು ಹೋಗಬೇಕಾಗುವುದು ಸಹಜ. ಇಂತಹ ಸನ್ನಿವೇಶಗಳಲ್ಲಿ ಹಳ್ಳಿಯ ಮನೆಗೆ ಮದುವೆಯಾಗಿ ಸೇರಿದರೂ ಶಹರವಾಸಿಯಾಗಿರುವ ಈ ಮಹಿಳೆಯರು ತಮ್ಮ ಗಂಡನ ಹಳ್ಳಿಯ ಮನೆಯಲ್ಲಿ ಇರಬಹುದಾದದ್ದು ಎಷ್ಟು ದಿನ ?  ಇಂತಹ ಮಹಿಳೆಯರು ಒಮ್ಮೆ ಶಹರದಲ್ಲಿ ದುಡಿಯುವ ಮಹಿಳೆಯೂ ಆಗಿರಬಹುದು ಅಥವಾ ಗಂಡನ ದುಡಿಮೆಯನ್ನು ಅನುಭವಿಸುತ್ತಾ ಶಹರದ ಗೃಹಿಣಿಯೂ ಆಗಿರಬಹುದು.  ಹೀಗಿರುವಾಗ ಗಂಡನ ಹಳ್ಳಿಯ ಮನೆಯಲ್ಲಿ ತಂಗುವ ಕಡಿಮೆ  ದಿನಗಳ ಅವಧಿಯಲ್ಲಿ ಯಾವ ಕೆಲಸವೂ ಅವರಿಗೆ ತೋಚುವುದಿಲ್ಲ. ಒಮ್ಮೆ ತೋಚಿದರೂ ಮಾಡಲಿಕ್ಕೆ ಪುರುಸೊತ್ತಿಲ್ಲ. ಅದಂತೂ ಇರಲಿ ತನ್ನ ಕೆಲಸವನ್ನು ಮಾಡಿಕೊಳ್ಳಲೂ ಅವಳಿಗೆ ಸಮಯವಿರುವುದಿಲ್ಲ. ಮನೆಯಲ್ಲಿ ಗೃಹಿಣಿಯಾಗಿ ಹಗಲು ಇರುಳು ಮತ್ತು ಆಯುಷ್ಯ ಪೂರ್ತಿ ಕೃಷಿ ಮತ್ತು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಹಳ್ಳಿ ಮನೆಯ ಗೃಹಿಣಿಯಾಗಿ ಇರುವವಳೇ ತನ್ನ  ಇಂತಹ ಓರೆಗಿತ್ತಿಯರ ಕೆಲಸವನ್ನು ಮಾಡಿಕೊಡಬೇಕಾಗುತ್ತದೆ. ಬಚ್ಚಲ ಮನೆಯಲ್ಲಿ ಸ್ನಾನ ಮಾಡುವಾಗ ಬಿಚ್ಚಿಟ್ಟ ಬಟ್ಟೆಯನ್ನು ತೊಳೆದುಕೊಳ್ಳಲು ಶಹರದ ಓರೆಗಿತ್ತಿ ಮಹಿಳೆಯರಿಗೆ ಪುರುಸೊತ್ತಿಲ್ಲ , urgent ಆಗಿ ಮತ್ತೆಲ್ಲಿಗೋ ಓಡಾಟಕ್ಕೆ ಹೋಗಬೇಕು. ಅವರ ಆ ಬಟ್ಟೆಯನ್ನೂ ಹಳ್ಳಿಯಲ್ಲಿ ವಾಸಿಸುವ ಓರೆಗಿತ್ತಿ ಮಹಿಳೆಯು ತೊಳೆದು ಒಣಗಿಸಿ ಕೊಡಬೇಕು. ಅದರಂತೆ ಶಹರದ ಪ್ರಭುಗಳಾದ ಬಾವ ಮೈದುನರಿಗೂ ಹಳ್ಳಿ ಮನೆಗೆ ಬಂದಾಗ ಈ ಹಳ್ಳಿ ಗೃಹಿಣಿಯೂ ಚಾಮರ ಬೀಸಿ ಬಹುಪರಾಕು ಎಂದು ಹೇಳಬೇಕು.  ಶಹರದ ವಾಸಿಗಳಾದ ಇಂತಹ ಮಹಿಳೆಯರು ಹಳ್ಳಿಯ ತಮ್ಮ ಮನೆಗೆ ಬಂದಾಗ ಮನೆಯಲ್ಲಿರುವ  ಹಳ್ಳಿ ಓರೆಗಿತ್ತಿ ಗೃಹಿಣಿಗೆ ತಾವು ಮನೆಗೆ ಬಂದ ಕೆಲವು ದಿನಗಳಮಟ್ಟಿಗಾದರೂ ವಿಶ್ರಾಂತಿ ಕೊಟ್ಟು ಆ      ಕುಟುಂಬದ ಕೆಲಸ ನಿರ್ವಹಿಸುವುದು ಗಗನಕುಸುಮವೇ ಸರಿ. ಹಾಗಂತ ಅವರ ಮಾತುಗಳೆಲ್ಲಾ ಜೇನುತುಪ್ಪ ಸುರಿಸುವ ಕುಸುಮಗಳ ಪುಂಜ ಹೌದು. ಹಾಗೆಂದು ನಗರ ಜೀವನದ ಸುಖವನ್ನರಸಿ ಹೊರಟ ಕುಟುಂಬದ ಸದಸ್ಯರು ಯಾರೂ ತಮ್ಮ ಮೂಲ ಕುಟುಂಬದ ಆಸ್ತಿಯ ಹಕ್ಕು ಮತ್ತು ಸವಲತ್ತುಗಳನ್ನು ತ್ಯಜಿಸುವುದಿಲ್ಲ. ಕೆಲವು ಉದಾಹರಣೆಗಳಲ್ಲಿ ಅವುಗಳನ್ನು ತ್ಯಜಿಸಿ ಹಳ್ಳಿಯ  ಮೂಲ ಕುಟುಂಬವನ್ನು ರಕ್ಷಿಸಿಕೊಂಡು ಬಂದ ಸೋದರ ದಂಪತಿಗಳಿಗೆ ನೆರವಾಗಿದ್ದೂ ಸುಳ್ಳಲ್ಲ.  ಒಬ್ಬ ವ್ಯಕ್ತಿಯು ತನ್ನ ಆನುವಂಶಿಕ ಮೂಲ ಆಸ್ತಿಯ ನಿಹ್ವಳ ಆದಾಯಕ್ಕಿಂತ ಹೆಚ್ಚಾಗಿ ಕೃಷಿಯೇತರ ಹೊರಗಿನ ಮೂಲದಿಂದ ಒಂದು ನಿರ್ಧಿಷ್ಟ ಮಿತಿಗಿಂತ ಆದಾಯವನ್ನು ಪಡೆಯುತ್ತಿದ್ದಾನೆ. ಆಗ  ಅವನಿಗೆ ಆನುವಂಶಿಕ ಆಸ್ತಿಯಲ್ಲಿ ಹಕ್ಕು ಮತ್ತು  ಸವಲತ್ತುಗಳು ಬರುವುದಿಲ್ಲ ಎಂದು ಸರ್ಕಾರದ ಕಾನೂನು ಹೇಳುತ್ತದೆ. ಹೀಗಿದ್ದರೂ ಹಳ್ಳಿಯ ಮೂಲ ಕುಟುಂಬದಲ್ಲಿ ವಾಸಿಸುವ  ಸದಸ್ಯನು ಕುಟುಂಬದ ಹೊರಗಿರುವ ತನ್ನ ಸೋದರ ದಂಪತಿಗಳ ಹಿತವನ್ನು ಅಲ್ಲಗಳೆಯಬಾರದು. ಆದರೆ ಈ  ಹೊಂದಾಣಿಕೆಯ  ಪ್ರಜ್ಞೆಯಲ್ಲಿ ಮೂಲ ಕುಟುಂಬದ ಸದಸ್ಯನು ಹೊರಗಿರುವ ಸೋದರ ದಂಪತಿಗಳ ಮಟ್ಟದಲ್ಲಿಯೇ ಸುಖವನ್ನು ಅನುಭವಿಸುತ್ತಿದ್ದಾನೋ ಇಲ್ಲವೋ ಎಂದು ಗಮನಿಸುವುದು ಮುಖ್ಯ. ಅಪರೂಪಕ್ಕೆ ಮನೆಗೆ ಬಂದವರು ಎಂದು ಈ ಶಹರ ವಾಸಿ ಮಹಿಳೆಯರಿಗೆ, ಅವರ ಗಂಡ ಮತ್ತು ಮಕ್ಕಳಿಗೆ  ಸುತ್ತಮುತ್ತಲಿನವರ ಆದಿಯಾಗಿ ಮನೆಯವರೆಲ್ಲಾ ವಿಶೇಷ ಗೌರವಾದರಗಳನ್ನು ಕೊಡುವುದು ಹೆಚ್ಚು.ಒಂಟುಗಾಲಲ್ಲಿ ನಿಂತು ಗೋಡೆಗೆ ಬೆನ್ನನ್ನು ಚಾಚಿ ಆಧರಿಸಿಕೊಂಡು ಸಾವರಿಸಿಕೊಳ್ಳುತ್ತಾ ಹಳ್ಳಿಯ ಗೃಹಿಣಿಯಾಗಿರುವ ಮಹಿಳೆಯು  ಇದನ್ನೆಲ್ಲಾ  ನೋಡಿಕೊಳ್ಳುತ್ತ  ತಾನೂ ತನ್ನ ಮನೆಯವರ ಚಪ್ಪಾಳೆಗೆ ಕೈ ಸೇರಿಸಿ ಮನಸ್ಸಿನಲ್ಲಿಯೇ ಮರುಗಬೇಕಾಗುತ್ತದೆ. ಅಯ್ಯೋ!..  ತಾನೂ ಅವರಂತೆಯೇ ಶಹರವಾಸಿಯಾಗಿದ್ದರೆ ಈ ಸುಖವನ್ನು ಅನುಭವಿಸಬಹುದಿತ್ತಲ್ಲ ಎಂದು ಕನವರಿಸಿದರೆ ಅನಿರೀಕ್ಷಿತವಲ್ಲ!! ಈ ಕಾರಣದಿಂದಲೇ ಬಹಳ ಜನ ಹೆಣ್ಣುಮಕ್ಕಳು ಹಳ್ಳಿಯಲ್ಲಿರುವ ಹುಡುಗರನ್ನು ಮದುವೆಯಾಗಲು ಇಷ್ಟ ಪಡುವುದಿಲ್ಲ . ತನ್ನ ಯೋಗ್ಯತೆಯ ಮಿತಿ ಯಾವುದೇ ಇದ್ದರೂ ಸರಿ.  ಶಹರದಲ್ಲಿ ವಾಸಿಸುವ ಹುಡುಗರನ್ನೇ ಮದುವೆಯಾಗಲಿಕ್ಕೆ ಇಷ್ಟಪಡುತ್ತಿದ್ದಾರೆ. ಎಷ್ಟೇ ಆಧುನಿಕ ಸವಲತ್ತುಗಳು ಹಳ್ಳಿಯ ಕುಟುಂಬಗಳಲ್ಲಿ ಇದ್ದರೂ ಕೂಡ ಶಹರ ಜೀವನದ ಸುಖ ಮತ್ತು ಗಂಡ ಹೆಂಡತಿ ಇಬ್ಬರೇ  ಇರುವ ಪುಟ್ಟ  ಕುಟುಂಬದ ಮೋಜು ಹಳ್ಳಿಯ ಕುಟುಂಬಗಳಲ್ಲಿ ಅವರಿಗೆ ದೊರಕುವುದಿಲ್ಲ ಎಂಬುದು ಅವರ ಭಾವನೆ. ಆಲೋಚಿಸಿ ನೋಡಿದರೆ ಸತ್ಯ ಎನ್ನಿಸುತ್ತದೆ  ಕೂಡ .
   ಎರಡನೆಯ ವರ್ಗವಾದ ನಗರ ಪ್ರದೇಶದ ಮಹಿಳೆ ಹಾಗಲ್ಲ . ಸಾಮಾನ್ಯ ಶಿಕ್ಷಣ ಪಡೆದವರೂ ಇದ್ದಾರೆ ಅಷ್ಟೇ ತಾಂತ್ರಿಕ ಶಿಕ್ಷಣ ಪಡೆದವರೂ ಇದ್ದಾರೆ. ಆಕೆಯ ಪತಿ ನೌಕರಿಯೋ ಅಥವಾ ಬೇರಾವುದೋ ಉದ್ಯೋಗದಲ್ಲಿಯೇ ನಿರತನಾಗಿರುತ್ತಾನೆ. ಇಲ್ಲಿಯ ಮಹಿಳೆಗೆ ಕುಟುಂಬದ ಕೆಲಸ ಮತ್ತು ಜವಾಬ್ದಾರಿಗಳು ಗ್ರಾಮೀಣ ಮಹಿಳೆಗಿಂತ ಕಡಿಮೆ. ಇಂತಹ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಲ ಕುಟುಂಬದಿಂದ ಬೇರ್ಪಟ್ಟು ದುಡಿಮೆಗಾಗಿ ಪ್ರತ್ಯೇಕವಾಗಿ ದೂರ ಬಂದವುಗಳಾಗಿರುತ್ತಾರೆ. ನಗರ ಪ್ರದೇಶದ ಮಹಿಳೆ ತಾನು ,  ತನ್ನ ಗಂಡ ಮತ್ತು ಮಗು ಈ ಮೂವರದ್ದೇ ಸಂಸಾರ. ಅಪರೂಪಕ್ಕೆ ತಂದೆ ತಾಯಿಗಳು ಇವರ ಜೊತೆ ಇರುತ್ತಾರೆ. ಆದರೆ ಈ ರೀತಿಯ ಬಹಳ ಕುಟುಂಬಗಳಲ್ಲಿ  ಮಗ - ಸೊಸೆ ಮತ್ತು ಮೊಮ್ಮಕ್ಕಳ ಉಸ್ತುವಾರಿಯೇ ಅವರ ಕೆಲಸವಾಗಿರುತ್ತದೆ. ಇಂತಹ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳ ಗೊಂದಲ, ಕೃಷಿ ಕಾರ್ಮಿಕರು, ನೆರೆ ಹೊರೆಯವರ ಜಂಜಾಟವಿಲ್ಲ.ನೆಂಟರು ಸ್ನೇಹಿತರು ಇವರಿಗೆ ಪುರುಸೊತ್ತಿದೆಯೆಂದರೆ  ಕೇಳಿಕೊಂಡು ಕೆಲವೇ ಘಂಟೆಗಳ ಅವಧಿಗೆ ಮನೆಗೆ ಬರುತ್ತಾರೆ . ಹಾಗಾಗಿ ನಗರದ ಮಹಿಳೆಗೆ ಕುಟುಂಬದಲ್ಲಿ ಗ್ರಾಮೀಣ ಮಹಿಳೆಗೆ ಹೋಲಿಸಿದರೆ ಕೆಲಸ ಅತಿ ಕಡಿಮೆ. ಗ್ರಾಮೀಣ ಮಹಿಳೆಯರ ಕಣ್ಣಿಗೆ ನಗರ ಪ್ರದೇಶದ ಮಹಿಳೆಯರದು  ವಿಶ್ರಾಂತ ಮತ್ತು ಐಷಾರಾಮಿ ಜೀವನ. ಸಮಾಜವೂ ಕೂಡ ಈ ಹಿಂದೆ ಹೇಳಿದಂತೆ ಬಹಳಷ್ಟು ಭಾರಿ ಸ್ವಂತ ಉದ್ಯೋಗಸ್ಥ ಮಹಿಳೆಗೆ ಕೊಟ್ಟಷ್ಟು ಗೌರವವನ್ನು ಗೃಹಿಣಿಯಾಗಿ ಕುಟುಂಬವನ್ನು ಮುನ್ನಡೆಸುವ ಮಹಿಳೆಗೆ ಕೊಡುವುದಿಲ್ಲ.
    ಪ್ರಸ್ತುತ ಸನ್ನಿವೇಶದಲ್ಲಿ ಗಂಡು ಮಕ್ಕಳಂತೆ ಹಳ್ಳಿಯ ಬಹಳಷ್ಟು ಹೆಣ್ಣು ಮಕ್ಕಳು ತಾಂತ್ರಿಕ ಶಿಕ್ಷಣವನ್ನು ಪಡೆದಿದ್ದಾರೆ . ಅಂತಹ ಹೆಣ್ಣುಮಕ್ಕಳು ನೌಕರಿಗೆ ಸೇರಿ ನಗರವಾಸಿಗಳಾಗಿದ್ದಾರೆ. ಸಾಮಾನ್ಯ ಶಿಕ್ಷಣ ಪಡೆದ ಹೆಣ್ಣುಮಕ್ಕಳು ಕೂಡ ತಾಂತ್ರಿಕ ಶಿಕ್ಷಣ ಪಡೆದ ಗಂಡನ್ನೇ ಮದುವೆಯಾಗುತ್ತಿದ್ದಾರೆ. ಗಂಡನಿಗೆ ಸರಿಸಮನಾಗಿ ತಾನು ಸಮಾಜದಲ್ಲಿ ಇರಬೇಕು ಎಂದು ಬಯಸುತ್ತಿದ್ದಾರೆ. ಪುರುಷನಿಗಿರುವ ಬಾಹ್ಯ ಸ್ವಾತಂತ್ರ್ಯವನ್ನು ಅವರೂ ಬಯಸುತ್ತಿದ್ದಾರೆ. ಗಂಡನಂತೆಯೇ ನೌಕರಿಗೆ ಹೋಗುವುದು ಇಲ್ಲವೇ ಇನ್ನಾವುದೋ ಉದ್ಯೋಗ ಮಾಡಿ ದುಡಿಯುವುದು , ಹಣ ಗಳಿಸುವುದು, ತನ್ನ ಇಚ್ಚೆಯಂತೆ ಖರ್ಚು ಮಾಡುವುದು , ಐಷಾರಾಮಿ ಜೀವನ ನಡೆಸುವುದು ಇವೇ ತನ್ನ 'ಸ್ವಾತಂತ್ರ್ಯ' ಎಂದು ಆಧುನಿಕ ಮಹಿಳೆ ಯೋಚಿಸುತ್ತಿದ್ದಾಳೆ . ಕುಟುಂಬಕ್ಕಾಗಿ ದುಡಿದು ಬರುವ ಪತಿಯ ಜೀವನದ ಬಗ್ಗೆ ನಿಗಾ ವಹಿಸುವುದು, ತನ್ನ ಮಗುವಿನ  ಲಾಲನೆ ಪಾಲನೆ ಅವಳಿಗೆ secondary . ಊಟ, ತಿಂಡಿಗೆ ಹೋಟೆಲ್ ಇರುವಾಗ  ಮನೆಯಲ್ಲಿ ಅಡುಗೆ  ಮಾಡಲೇ ಬೇಕಾದ ಅಗತ್ಯವೇನು ಎಂಬ ಭಾವನೆ ಅವಳಲ್ಲಿ ಮೂಡುತ್ತಿದೆ. ಅಷ್ಟರ ಮಟ್ಟಿನ ಸ್ವಾತಂತ್ರ್ಯವನ್ನು ಆಕೆ ಸಾಧಿಸುತ್ತಿದ್ದಾಳೆ.   ಮಕ್ಕಳ ಪಾಲನೆ ರಕ್ಷಣೆಗೆ ಡೇ ಕೇರ್ ಸೆಂಟರ್ ಗಳು ಇರುವಾಗ ತನಗೆ ಆಬಗ್ಗೆ ಚಿಂತಿಸಬೇಕಾದುದೇನು ಎಂಬ ಪ್ರಶ್ನೆ ಅವಳಲ್ಲಿ ಹುಟ್ಟುತ್ತಿದೆ. ಮನೆಯ ಒಪ್ಪ  ಓರಣ ಮಾಡಲು  ತಾನೇನು ಈ ಕುಟುಂಬಕ್ಕೆ ಕೂಲಿಗೆ ಬಂದಿಲ್ಲ  ಆ ಕೆಲಸಕ್ಕೆ ಕೆಲಸದಾಳನ್ನು ಇಟ್ಟುಕೊಂಡರಾಯಿತು ತಾನೇ? ಎಂಬ ಗ್ರಹಿಕೆ ಅವಳಲ್ಲಿ ಮೂಡಿದೆ. ನಗರ ಪ್ರದೇಶದ  ಮಹಿಳೆಯೊಬ್ಬಳು  ಅಪ್ಪಿ ತಪ್ಪಿ ಗೃಹಿಣಿಯಾಗಿಯೇ ಉಳಿದುಕೊಂಡರೆ ಉದ್ಯೋಗದಲ್ಲಿರುವ ಮಹಿಳೆಯನ್ನು ನೋಡಿ ತನ್ನ ಮೈ ಪರಚಿಕೊಳ್ಳುತ್ತಾಳೆ . ಉದ್ಯೋಗಸ್ಥ ಮಹಿಳೆಯ ಸ್ಥಿತಿ ಏನಾಗಿದೆ ? ಅವಳ ಒತ್ತಡಗಳೇನು ? ಎಂಬುದನ್ನು ಆಕೆಯಿಂದ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ.   
   ನಗರ ಪ್ರದೇಶದ ಕೆಲವು ಮಹಿಳೆಯರು ಗರ್ಭಿಣಿಯಾಗುವ , ಹೆರುವ,  ಮಕ್ಕಳನ್ನು ಸಾಕುವ ತೊಂದರೆಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲ . ಮಗುವನ್ನು ಹೊತ್ತು, ಹೆತ್ತು ಒಂದು ಹಂತದವರೆಗೆ ಸಾಕಿ ದತ್ತುಕೊಡುವ  ' ಬಾಡಿಗೆ ತಾಯಂದಿರನ್ನು ' (surrogate mother) ಬಯಸುತ್ತಿದ್ದಾರೆ . ಇದಕ್ಕಾಗಿ ಆ ಬಾಡಿಗೆ ತಾಯಂದಿರಿಗೆ ಲಕ್ಷಗಟ್ಟಲೆ ಹಣವನ್ನು ತೆರಲು ಸಿದ್ಧರಿದ್ದಾರೆ. ಆದರೆ ಇಂತಹವರ ಸಂಖ್ಯೆ ಪ್ರಸ್ತುತದಲ್ಲಿ ಬಹಳ   ಕಡಿಮೆ ಸಂಖ್ಯೆಯಲ್ಲಿದೆ. ಆದರೆ ಮಹಿಳೆಯರ  ಇಂತಹ ಸ್ವಾತಂತ್ರ್ಯ ಮನೋಭಾವ ಎಲ್ಲಿಗೆ ಮುಂದುವರೆಯುತ್ತದೆ ಎಂಬುದನ್ನು ಸಮಾಜ ಶಾಸ್ತ್ರಜ್ಞರು ಪರಿಶೀಲಿಸಬೇಕು. ಇದರ ಲಾಭ ಪಡೆಯುವ ಬಾಡಿಗೆ ತಾಯಂದಿರು ಇದನ್ನೇ ಒಂದು ದುಡಿಮೆಯ ಮೊಲವನ್ನಾಗಿ ಅರಸಿಕೊಂಡಿದ್ದಾರೆ. ಇವರೂ ಕೂಡ ತಮ್ಮದೇ ಸ್ವಾತಂತ್ರ್ಯವನ್ನು ಕಂಡುಕೊಂಡ ನಗರದ ಮಹಿಳೆಯಾಗಿದ್ದಾರೆ. 
   ನಗರದ ಮಹಿಳೆಯ ಸ್ವಾತಂತ್ರ್ಯ ಮತ್ತು ಕುಟುಂಬದ ಮನೋಭೂಮಿಕೆ ಎಷ್ಟರ ಮಟ್ಟಿಗೆ ಮುಂದೆ ಹೋಗಿದೆ ಎಂಬುದನ್ನು  ಅಭ್ಯಾಸ ಮಾಡಿದರೆ ಆಶ್ಚರ್ಯವಾದೀತು. ಅದೆಂದರೆ ಈಗಿನ ' Living  together relationship ' ಎಂಬ ಹೊಸ ಪರಿಕಲ್ಪನೆ. ಇದು ಭಾರತೀಯ ಸಮಾಜಕ್ಕೆ ಹೊಸ ಅನುಸರಣೆ. ಪಾಶ್ಚಿಮಾತ್ಯ ದೇಶಗಳಲ್ಲಿ 'Arranged Marriage'  ಎನ್ನುವ ಪರಿಕಲ್ಪನೆ  ಹಿಂದಿನಿಂದಲೂ ಇತ್ತು .     ' Living  together relationship ' ಎಂಬ ಪರಿಕಲ್ಪನೆಯಲ್ಲಿ ಒಂದು ಮಹಿಳೆ ಮತ್ತು ಪುರುಷ ಮದುವೆಯಾಗದೆ ಒಟ್ಟಿಗೆ ಸಂಸಾರ ನಡೆಸುತ್ತಾರೆ. ಮದುವೆಯಾದ ಸತಿಪತಿಗಳಂತೆ ಕುಟುಂಬದ ಮತ್ತು ವೈಯುಕ್ತಿಕ ಎಲ್ಲ ಕಾರ್ಯ ವಿಧಾನಗಳನ್ನು ನಡೆಸಿಕೊಳ್ಳುತ್ತಾರೆ. ಮೂರು ನಾಲ್ಕು  ವರ್ಷ ಹೀಗೆಯೇ ಮುಂದುವರೆಯುತ್ತಾರೆ. ಆದರೆ ಮಕ್ಕಳನ್ನು ಮಾತ್ರ ಪಡೆಯುವುದಿಲ್ಲ . ಇವೆಲ್ಲ ಅವರಿಬ್ಬರ ಪರಸ್ಪರ ಒಪ್ಪಿಗೆಯಿಂದಲೇ ನಡೆಯುತ್ತದೆ. ಒಬ್ಬ ಪರ ಪುರುಷ ಆಕಸ್ಮಿಕವಾಗಿ ಗೊತ್ತಾಗದೆ ತನ್ನ ಮೈ ಮುಟ್ಟಿದನೆಂದರೆ ಚಾರಿತ್ರ್ಯ ಹೀನತೆಯೆಂದು  ಭಾವಿಸುವ ಭಾರತೀಯ ಮಹಿಳೆ ಇಂದು ನಗರದ ಮಹಿಳೆಯಾಗಿ ಪರಪುರುಷನ ಜೊತೆಗೆ ವಿವಾಹವಿಲ್ಲದೇ ಬಹಿರಂಗವಾಗಿ ಬದುಕು ನಡೆಸುವ ಸ್ವಾತಂತ್ರ್ಯವನ್ನು ಹೊಂದಿದ್ದಾಳೆ ಎಂಬುದು ಗಮನಾರ್ಹ.  ಒಮ್ಮೆ ಮೊರು-ನಾಲ್ಕು ವರ್ಷದ ಕೂಡುದಾಂಪತ್ಯದಲ್ಲಿ  ಬಿನ್ನಾಭಿಪ್ರಾಯ ಉಂಟಾದರೆ ಪರಸ್ಪರರನ್ನು ತೊರೆಯುವ ಸ್ವಾತಂತ್ರ್ಯವನ್ನು ಇವರು ಹೊಂದಿದ್ದಾರೆ. ಇದಕ್ಕೆ ಪುರುಷ ಎನ್ನುವ ವ್ಯಕ್ತಿ ಸೇರಿಕೊಂಡಿದ್ದರೂ ಕೂಡ ಮಹಿಳೆಯೊಬ್ಬಳು ಭಾರತೀಯ ಸಮಾಜದಲ್ಲಿ ಬೇಕಾದವನೊಂದಿಗೆ ಕೂಡಿಕೊಳ್ಳುವ ಬೇಡವೆಂದಾಗ ಅವನನ್ನು ಬಿಟ್ಟು ಹೊಡೆಯುವ ಮತ್ತು ಕುಟುಂಬವನ್ನು ವಿಸರ್ಜಿಸುವ ಸ್ವಾತಂತ್ರ್ಯವನ್ನು ಸಾಧಿಸುತ್ತಿದ್ದಾಳೆ ಎನ್ನುವುದು ವಿಶೇಷ. 
    ವಿವಾಹ ವಿಛ್ಚೇಧನ  ಭಾರತೀಯ ಮಹಿಳೆಗೆ ತನ್ನ ಕುಟುಂಬ ಜೀವನದ ದಾರಿಯಲ್ಲಿ ಇರುವ ಮತ್ತೊಂದು ಸ್ವಾತಂತ್ರ್ಯ. ಭಾರತದ ಕಾನೂನು ಈ ವಿಚಾರದಲ್ಲಿ ಪುರುಷನಿಗಿಂತ ಮಹಿಳೆಗೆ ಹೆಚ್ಚಿನ ರಕ್ಷಣೆಯನ್ನು ಕೊಟ್ಟಿದೆ. ಆದರೆ ಈ ವಿಛ್ಚೇಧನ ಈ  ಹಿಂದೆ ಪ್ರಸ್ತಾಪಿಸಿದ 'Live  together relationship ' ಪರಿಕಲ್ಪನೆಗಿಂತ ಭಿನ್ನವಾದದ್ದು. ಇಲ್ಲಿ ಮೊಲತಃ ಒಬ್ಬರಿಗೊಬ್ಬರು ಕೂಡಿ ಬಾಳ್ವೆಯನ್ನು ನಡೆಸಿ ಕುಟುಂಬವನ್ನು ನಿರ್ಮಿಸಬೇಕು ಎಂಬ ಮಹತ್ತರ ಉದ್ದೇಶದಿಂದ ವಿವಾಹವಾಗುತ್ತಾರೆ. ಆದರೆ ಇಂದಿನ ಆಧುನಿಕ ಸ್ವಾತಂತ್ರ್ಯದ ಕಲ್ಪನೆಯ ಬಿರುಗಾಳಿಯಲ್ಲಿ ವಿವಾಹ ಬಂಧನ ಮುರಿದು ಬಿದ್ದು ವಿಛ್ಚೇಧನದ ಅಂಚಿಗೆ ಹೋಗುತ್ತದೆ. ಈ ಸ್ಥಿತಿಗೆ ಕಾರಣ ಮಹಿಳೆಯು ತಾನು ಪುರುಷನಷ್ಟೇ ಸರಿ ಸಮಾನಳು , ಸ್ವಾತಂತ್ರವನ್ನು ಹೊಂದಿದವಳು ಎಂಬ ಮನೋಭೂಮಿಕೆ. ಈ ಕಾರಣದಿಂದ ಕುಟುಂಬದ  ಯಾವುದೇ ವಿಷಯದಲ್ಲಿ ಬಿನ್ನಾಭಿಪ್ರಾಯ ಬಂದಾಗ ಯಾರೊಬ್ಬರೂ ಹಿಂದೆ ಸರಿದು ಹೊಂದಿಕೊಳ್ಳಲು ಇಚ್ಚಿಸುವುದಿಲ್ಲ. ಇದೇ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮಹಿಳೆ ವಿವಾಹ ವಿಛ್ಚೇಧನ ಪಡೆದು ತಾನು ಮದುವೆಯಾದ ಗಂಡನಿಂದ ಬೇರ್ಪಡುವ ಸ್ವಾತಂತ್ರ್ಯವನ್ನು ಹೊಂದಿದ್ದಾಳೆ. ಆಧುನಿಕ 'software ' ವಾಯುವೇಗದ ಬದುಕಿನಲ್ಲಿ ಮಹಿಳೆ ಪುರುಷನ ಅಡಿಯಾಳಾಗಿ ಇರಲು ಇಷ್ಟ ಪಡುತ್ತಿಲ್ಲ. ನಮ್ಮ ಸಮಾಜದ ಮೂಲ ಲಕ್ಷಣದ  ಚರ್ಯೆಯ ಪ್ರಕಾರ ಪುರುಷ ಹೇಗೂ ಮಹಿಳೆಯ ಅಡಿಯಾಳಾಗಿರಲು ಇಷ್ಟ ಪಡುವುದಿಲ್ಲ. ಯಾವುದೇ ಅಭಿಪ್ರಾಯದಲ್ಲೂ ತಾನು ಹೇಳಿದ್ದೇ ಸರಿ ಎನ್ನುವ ಶಟoನಲ್ಲಿಯೇ   ಇಬ್ಬರೂ ಇರುತ್ತಾರೆ. ಎಲ್ಲರ ಕೈಯಲ್ಲೂ ವಾಚು ಇರುತ್ತದೆ . ಒಬ್ಬೊಬ್ಬರ ವಾಚು ನಿಮಿಷಗಳ ವ್ಯತ್ಯಾಸದಲ್ಲಿ ಒನ್ನೊಂದು ಸಮಯವನ್ನು ತೋರಿಸುತ್ತದೆ ತಾನೇ ? . ಆದರೆ ಪ್ರತಿಯೊಬ್ಬರೂ ತನ್ನ ವಾಚಿನ ಸಮಯವೇ ಸರಿ ಎಂದು ಹೇಳುತ್ತಾರೆ.  ಮಹಿಳೆ ಮತ್ತು ಪುರುಷರ ಅಭಿಪ್ರಾಯ ಭಿನ್ನತೆಯ ಕಥೆಯೂ ಇಷ್ಟೇ . ಸ್ವಲ್ಪದರಲ್ಲಿಯೇ ಸಾಲದಷ್ಟು ಬಿರುಕು ಮನಸ್ತಾಪ ಉಂಟಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ  ತಾರ್ಕಿಕ ಜೀವನದಲ್ಲಿ ಮಾತಿನಲ್ಲಿ ಗೆಲ್ಲುವುದೇ ಮುಖ್ಯ . ಆದರೆ  ಭಾವನಾತ್ಮಕ ಜೀವನದಲ್ಲಿ  ಮಾತಿನಲ್ಲಿ ಒಬ್ಬರಿಗೊಬ್ಬರು ಹಿಂದೆ ಸರಿದು ಗೆಲ್ಲಬೇಕಾದದ್ದು ಅಗತ್ಯ. ಹೀಗೆ ಆದಾಗ ದಾಂಪತ್ಯದ ಸಾಂಗತ್ಯ ಚೆನ್ನಾಗಿ ಮುಂದುವರೆಯಬಹುದು. 
ಮಹಿಳೆಗೆ ಇರುವ ವಿವಾಹ ವಿಚ್ಚೇಧನದ ಸ್ವಾತಂತ್ರದ ಅಂತಿಮ ಪರಿಣಾಮವೆಂದರೆ ಕುಟುಂಬದ ಶೈಥಿಲ್ಯ. ಶಿಥಿಲಗೊಂಡ ಕುಟುಂಬಗಳೇ ಮುಂದುವರೆದ ಇಂದಿನ ನಮ್ಮ ಸಮಾಜದಲ್ಲಿ ಹೆಚ್ಚಾಗಿ ಕಂಡರೆ ಆಶ್ಚರ್ಯವಿಲ್ಲ. ಹಾಗಾದರೆ ಪುರುಷ ಮತ್ತು ಮಹಿಳೆಯ ಆತ್ಮೀಯ ಸಂಬಂಧದ ಗತಿಯೇನು?. ಮಕ್ಕಳು ಹುಟ್ಟಬೇಕಾದುದು ಎಲ್ಲಿ? ಯಾರಿಗೆ? ಯಾರಿಂದ?. ಹುಟ್ಟಿದ ಮಕ್ಕಳ ಭವಿಷ್ಯವೇನು? ಇವರೆಲ್ಲರನ್ನೂ ಆಶ್ರಯಿಸಿ ಕುಳಿತ ವೃದ್ಧ ತಂದೆ ತಾಯಿಗಳ ಪಾಡೇನು? ಹೀಗೆಯೇ ಮುಂದುವರೆದರೆ ಒಟ್ಟಾರೆ ಸಮಾಜ ಯಾವ ಸ್ಥಿತಿಗೆ ಹೋಗುತ್ತದೆ? ಸಂಪೂರ್ಣ ಸ್ವಾತಂತ್ರವನ್ನು ಬಯಸುವ ಮಹಿಳೆ ಇದರ ಬಗ್ಗೆ ಪರಾಮರ್ಶಿಸಬೇಕು. ಹಾಗೆಯೇ ಇದಕ್ಕೆ ಪುರುಷನೂ ಹೊರತಲ್ಲ. ಬದುಕನ್ನು ಕೆಡಿಸಿಕೊಂಡು ಸ್ವಾತಂತ್ರವನ್ನು ಅರಸುವುದು ಕೇವಲ ವ್ಯರ್ಥ ಪ್ರಯತ್ನ. ಸಾಮಾನ್ಯ ಸ್ಥಿತಿಯಲ್ಲಿ ಪರಸ್ಪರ ಹೊಂದಿಕೊಂಡು ಬದುಕಲಾರದವರು --- ಪುರುಷನೇ ಇರಲಿ ಅಥವಾ ಮಹಿಳೆಯೇ ಇರಲಿ ---  ಬೇರೆ ಯಾರೊಡನೆಯೋ ತಾಳಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ವಿಶೇಷ ಪರಿಸ್ಥಿತಿಗಳ ಪರಮಾವಧಿಯಲ್ಲಿ ವಿಘಟನೆ ಅನಿವಾರ್ಯವಲ್ಲವೆಂದಲ್ಲ. ಸುಖವೆಂಬುದು ಅವರವರ ಮನೋಗತಿಗೆ ಸಂಬಂಧಪಟ್ಟ ವಿಚಾರ. ಅದನ್ನು ವ್ಯಕ್ತಿಯು ತಾನು ಸ್ವತಃ ಕಂಡುಕೊಳ್ಳಬೇಕೇ ವಿನಃ ತಾನಾಗಿ ಅದೆಂದೂ ನಮಗೆ ದೊರೆಯುವುದಿಲ್ಲ. 'ಬಯಸಿದವರಿಗೆ ಮರಣವೂ ಸುಖ' ಎಂಬ ಗಾದೆಯ ಮಾತು ಇದೆ. ಹಾಗೆಂದು ಯಾರೂ ಸಾಯಬೇಕಿಲ್ಲ. ಒಬ್ಬರಿಗೊಬ್ಬರು ಸಹಕರಿಸಿಕೊಂಡು, ಸರಿದುಕೊಂಡು ಬದುಕಿ ಬಾಳ್ವೆಯನ್ನು ನಡೆಸುವುದು ಮುಖ್ಯ. ಇದನ್ನು ಸಾಮಾನ್ಯವಾಗಿ ಸಣ್ಣ ವಿಚಾರಕ್ಕೂ ತಲೆಕೆಡಿಸಿಕೊಳ್ಳುವ ಮಹಿಳೆ ಅರಿತುಕೊಳ್ಳಬೇಕು. ಹೊಂದಿಕೊಳ್ಳುವ ಮನೋಭಾವವಿಲ್ಲದ ಮನಸ್ಸಿನವರು ಎಲ್ಲಿ ಹೋದರೂ ಜಂಜಾಟದ ದುರಂತವನ್ನೇ ಅನುಭವಿಸಬೇಕಾಗುತ್ತದೆ.
      ನಗರದ ಜೀವನ ವೆಚ್ಚ ಹಳ್ಳಿಯ ಜೀವನ ವೆಚ್ಚಕ್ಕಿಂತ ಹೆಚ್ಚು . ಆದ್ದರಿಂದ ಪತಿಯ ಆದಾಯ ಕಡಿಮೆಯಿದ್ದು ಜೀವನ ನಿರ್ವಹಣೆ ಕಷ್ಟವಾದಾಗ ಪತ್ನಿಯೂ ದುಡಿಯಬೇಕಾದದ್ದು ನಗರ ಜೀವನದ ಅನಿವಾರ್ಯತೆಯೂ ಹೌದು. ಅದಲ್ಲದೆ ಪತಿಯ ಗಳಿಕೆ ಸೊಂಪಾಗಿದ್ದು ಪತ್ನಿಯು ಜೋಕಾಲಿಯಾಡುತ್ತ ಕುಳಿತುಕೊಳ್ಳುವ ಸನ್ನಿವೇಶವಿದ್ದರೂ ಕುಟುಂಬ ನಿರ್ವಹಣೆಯನ್ನು ಬಿಟ್ಟು ದುಡಿಮೆಗೆ ಹೋಗುವುದು ಐಷಾರಾಮಿ  ಮನೋಭಾವದ ಕಾರ್ಯಾನುಷ್ಟಾನವಷ್ಟೇ. 
     ಇನ್ನು, ಅನೇಕ ಕುಟುಂಬಗಳು ನಗರದಲ್ಲಿಯೇ ಹುಟ್ಟಿಬೆಳೆದಿವೆ. ಇನ್ನು ಕೆಲವು ಕುಟುಂಬಗಳು ಸಾಮಾನ್ಯವಾಗಿ ಐವತ್ತು ವರ್ಷಗಳ ಈಚೆಗೆ ಅಂದರೆ ಹಿಂದಿನ ತಲೆಮಾರಿನಲ್ಲಿಯೇ ನಗರವನ್ನು ಸೇರಿ ವಾಸಿಸುತ್ತಿರುವುದೂ ಇದೆ. ಇಂತಹ ಕುಟುಂಬಗಳಲ್ಲಿ ಮಹಿಳೆಯೂ ದುಡಿಮೆಗೆ ಮನೆಯಿಂದ ಹೊರ ಹೋಗಲು ಅವಕಾಶವಿದೆ . ಏಕೆಂದರೆ ನೌಕರಿ ಅಥವಾ ಉದ್ದಿಮೆಗಳಿಂದ ನಿವೃತ್ತರಾದ ಹಿರಿಯರು ಮನೆಯಲ್ಲಿ ಇರುತ್ತಾರೆ. ಕುಟುಂಬದ ನಿರ್ವಹಣೆ ಮಕ್ಕಳ ರಕ್ಷಣೆ ಪಾಲನೆಯನ್ನು ಅವರು ಮಾಡುತ್ತಾರೆ. ತಾನೂ ದುಡಿಯಬೇಕೆಂಬ ಹಂಬಲ, ಸ್ವತಂತ್ರವಾಗಿ ವ್ಯವಹರಿಸುವ ಹಪ ಹಪಿಕೆ ಖರ್ಚು ವೆಚ್ಚಕ್ಕೆ ತನ್ನ ವೈಯುಕ್ತಿಕ ಗಳಿಕೆ ಇವನ್ನೆಲ್ಲ ಹೊಂದುವ ಕೌಟುಂಬಿಕ ಪರಿಸ್ಥಿತಿ ಮತ್ತು ಅನುಕೂಲತೆ ಇಂತಹ ಕುಟುಂಬದ ಮಹಿಳೆಗೆ ಪುರುಷನಷ್ಟೇ ಇರುತ್ತದೆ. ತನ್ನ ಪತಿಯ ದುಡಿಮೆಯಲ್ಲಿ ಪರೋಕ್ಷವಾಗಿ ತನ್ನ ಪಾಲೂ ಇದೆ ಎನ್ನುವ ಪ್ರಜ್ಞೆಯನ್ನು ಇಂತಹ ಮಹಿಳೆಯರು ಇಟ್ಟುಕೊಳ್ಳಬೇಕಾಗಿಲ್ಲ. ಹಾಗೆಂದು ಇಬ್ಬರ ಗಳಿಕೆ ಒಟ್ಟಾರೆ ಕುಟುಂಬದ್ದು ಎಂದು ಭಾವಿಸಿ ಮುನ್ನಡೆದರೆ ಒಳ್ಳೆಯದಲ್ಲವೆಂದಲ್ಲ. ಏಕೆಂದರೆ ಪತಿ ಮತ್ತು ಪತ್ನಿ ಇಬ್ಬರೂ ಗಳಿಕೆಗೆ ಮನೆಯಿಂದ ಹೊರಗೆ ಹೊರಟಿದ್ದಾರೆ ಎಂದರೆ ಮನೆಯೊಳಗಿನ ಒಗೆತಾನಕ್ಕೆ ಹಿರಿಯರ ಕೊಡುಗೆ ಇದೆ ಎಂದೇ  ಅರ್ಥ. ಪುರುಷನಂತೆ ಇಂತಹ ಮಹಿಳೆಗೂ ಆ ಸ್ವಾತಂತ್ರ್ಯವನ್ನು ಅವರು ದೊರಕಿಸಿಕೊಟ್ಟಿದ್ದಾರೆಂದರೆ ಇವರ ಗಳಿಕೆಯಲ್ಲಿ ಆ ಹಿರಿಯರ ಪಾಲೂ ಇದೆ. ಇವರ ಸ್ವಾತಂತ್ರ್ಯಕ್ಕೆ ಅವರ ಕೊಡುಗೆಯೂ ಇದೆ. ಅಲ್ಲವೇ? 
    ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ದೇವರ ಸೃಷ್ಟಿಯೇ ಹಾಗೆ . ಮಹಿಳೆ ಗರ್ಭವತಿಯಾಗಿ ಪ್ರಸವಿಸಬೇಕೇ ವಿನಃ ಪುರುಷನಿಗೆ ಅದು ಸಾಧ್ಯವಿಲ್ಲ. ಎಳೆಗೂಸನ್ನು ಜೋಪಾನವಾಗಿ ಮಹಿಳೆ ನೋಡಿಕೊಳ್ಳುವಷ್ಟು ಬದ್ಧತೆ, ತಾಳ್ಮೆ ಮತ್ತು ವಿಶಿಷ್ಟ ಕಲೆ ಪುರುಷನಿಗೆ ಇಲ್ಲ. ಮಗುವಿಗೆ ಹಾಲುಣಿಸಬೇಕಾದವಳು ಮಹಿಳೆಯೇ ವಿನಃ ಪುರುಷನದರಲ್ಲಿ ಹಾಲು ಬರುವುದಿಲ್ಲ. ಭಾರತೀಯ ಸಮಾಜದಲ್ಲಿ ಪುರುಷ ನಿರಾತಂಕವಾಗಿ ಬದುಕನ್ನು ನಡೆಸಿದ ಹಾಗೆ ಮಹಿಳೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಅವಳು ಸಂಸಾರವನ್ನು ನಿರ್ಮಿಸುವವಳು, ಮಾಡಬೇಕಾದವಳು, ಮುನ್ನೆಡೆಸಬೇಕಾದವಳು. ನಮ್ಮ ಸಮಾಜದ ಪಾರಂಪರಿಕ ಸ್ಥಿತಿಯೇ ಹಾಗೆ. ಒಬ್ಬ ಪುರುಷ ಕೆಟ್ಟರೆ ಸಂಸಾರ ಸ್ವಲ್ಪ ಕುಂಠಿತವಾಗಬಹುದು ಆದರೆ ಒಬ್ಬಳು ಮಹಿಳೆ ಕೆಟ್ಟರೆ ಇಡೀ ಸಂಸಾರವೇ ಸರ್ವನಾಶವಾಗುತ್ತದೆ ಅಷ್ಟರ ಮಟ್ಟಿಗೆ  ನಮ್ಮ ಸಮಾಜದ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರವಿದೆ, ವಿಶೇಷ ಸ್ಥಾನವಿದೆ. ಕುಟುಂಬದ ಸ್ವಾಸ್ಥ್ಯವು ಅವಳ ಮೇಲೆಯೇ ನಿಂತಿದೆ. ಸಂಸಾರ ನಡೆಸುವುದೂ ಒಂದು ಉದ್ಯೋಗ . ಈ ಕಲ್ಪನೆ ನಮ್ಮ ಮುಂದುವರೆದ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಇಲ್ಲ . ಭಾರತದಲ್ಲಿ ಕುಟುಂಬ ಸಮಾಜದ ಒಂದು ಪ್ರಾಥಮಿಕ ಹಂತ. ಕುಟುಂಬಗಳ ಸಮಗ್ರತೆಯೇ ಸಮಾಜ. ಇದು ಇಡಿಯ ಜಗತ್ತಿಗೆ ಅನ್ವಯಿಸುವ ತತ್ವ. ಪಾಶ್ಚಿಮಾತ್ಯರಲ್ಲಿ ಕುಟುಂಬ ಎನ್ನುವ ಸಂಸ್ಥೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ನಮ್ಮಲ್ಲಿ ಹಾಗಲ್ಲ. ಸ್ವಾಸ್ಥ ಕುಟುಂಬದ ವ್ಯವಸ್ಥೆಯ ಮೇಲೆ ಸಮಾಜ ನಿಂತಿದೆ. ಇಂತಹ ಕುಟುಂಬದ ನಿರ್ವಹಣೆ ಮಹಿಳೆಯ ಪಾಲಿಗೆ ಇದೆ. ಕುಟುಂಬಕ್ಕೆ ಸಾಕಾಗುವಷ್ಟು ದುಡಿಯಬೇಕಾದವನು ಪುರುಷ. ಆತ ದುಡಿದು ತಂದದ್ದನ್ನು ಹೊಂದಿಸಿ ಕುಟುಂಬವನ್ನು ನೀಗಿಸಬೇಕಾದವಳು ಮಹಿಳೆ. ದುಡಿಯುವವ ಪುರುಷ . ಅದನ್ನು ಖರ್ಚು ಮಾಡಬೇಕಾದವಳು ಮಹಿಳೆ. ಮಹಿಳೆಗೆ ಸ್ವಾತಂತ್ರ್ಯ ಹೆಚ್ಚೋ ಅಥವಾ ಪುರುಷನಿಗೆ ಸ್ವಾತಂತ್ರ್ಯ ಹೆಚ್ಚೋ?.
    ಮಹಿಳೆಯ ಕಾಮನೆಗೆ, ಸುಖಕ್ಕೆ ಯಾವತ್ತೂ ಧಕ್ಕೆ ಬರದ ಹಾಗೆ ನೋಡಿಕೊಂಡರೆ ಮಾತ್ರ ಪುರುಷ ಸುಖವನ್ನು ಕಾಣಲು ಸಾಧ್ಯ. ಮಹಿಳೆಯ ವಿಷಯವೂ ಹಾಗೆಯೇ. ಹೆಂಡತಿಯಿಲ್ಲದ ಗಂಡನನ್ನು ಸಮಾಜ ಅನುಮಾನಾಸ್ಪದವಾಗಿಯೇ ನೋಡುತ್ತದೆ . ಹಾಗೆಯೇ ಗಂಡಿನ ರಕ್ಷಣೆಯಿಲ್ಲದ ಮಹಿಳೆಯನ್ನು ಜನ ಓರೆಗಣ್ಣಿನಿಂದ ನೋಡುತ್ತಾರೆ  . ಗಂಡಸಿನ ಹಂಗೇ ಬೇಡ. ತಾನು ಸ್ವತಂತ್ರವಾಗಿ ಇರುತ್ತೇನೆ ಎಂಬ ಮಹಿಳೆ ಅಪೂರ್ಣ ಸನ್ಯಾಸಿನಿಯಂತೆ ಇರಬೇಕಾಗುತ್ತದೆ. ಮಕ್ಕಳ ತಾಯಿಯಾಗಬೇಕು , ವಾಸ್ತವಿಕ ಸುಖಗಳನ್ನು ಕಾಣಬೇಕು ಅಂತಿದ್ದರೆ ಆಕೆಗೆ ಒಬ್ಬ ಗಂಡಸು ಬೇಕೇ ಬೇಕು. ಇಷ್ಟೇ ಉತ್ತರ  ಪುರುಷನಿಗೂ ಕೂಡ. ಇದಕ್ಕೆ ಅಪವಾದವಿಲ್ಲವೆಂದಲ್ಲ. ಇಲ್ಲಿ  ಹಕ್ಕು ಮತ್ತು ಸ್ವಾತಂತ್ರ ಎಂಬುದು ಮಹಿಳೆಗೂ ಅಷ್ಟೇ ಸರಿಸಮನಾಗಿ ಇದೆ ಎಂಬುದು ಸತ್ಯ . ಅಷ್ಟೇ,  ಜವಾಬ್ದಾರಿ ನಿರ್ವಹಣೆಯಲ್ಲಿಯೂ ಇಬ್ಬರಿಗೂ ಒಂದೇ ತೆರನಾದ ಹೊಣೆಗಾರಿಕೆ  ಇದೆ. 
   ಭಾರತ ಪುರುಷ ಪ್ರಧಾನ ಸಮಾಜ ಎಂಬ ಆರೋಪ ಬಂದದ್ದರ ಕಾರಣ ಎಲ್ಲದಕ್ಕೂ ಎದುರಿಗೆ ಕಾಣಸಿಗುವುದು ಪುರುಷ. ಮಹಿಳೆಗೆ ಅವನಂತೆ ಪೂರ್ಣ ಏಕಾಂಗಿಯಾಗಿ ಎದುರು ಬಂದು ನಿಲ್ಲಲು ಸಾಧ್ಯವಿಲ್ಲ. ಪ್ರಕೃತಿ ಅವಳಿಗೆ ವಿಶೇಷ  ಅರ್ಹತೆ (ಅಸಹಾಯಕತೆ ಅಲ್ಲ ) ಯನ್ನು ಕೊಟ್ಟು ಪುರುಷನ ಹಿಂದೆ ನಿಲ್ಲಿಸಿದೆ. ಈ ಅರ್ಥದಲ್ಲಿಯೇ ಮನು ಮಹರ್ಷಿ ಹೇಳಿದ್ದು. " ಪಿತಾ ರಕ್ಷ್ಯತಿ ಕೌಮಾರೆ ಭರ್ತಾ ರಕ್ಷ್ಯತಿ ಯೌವ್ವನೆ | ಪುತ್ರಸ್ತು ಸ್ಥವಿರೇ ತಸ್ಮಾತ್ ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ ||  (9.3)" . ಮಹಿಳೆಗೆ ಪುರುಷನು (ವ್ಯಕ್ತಿ ಬೇರೆ ಬೇರೆ ಇರಬಹುದು) ತನ್ನ ಪಾತ್ರ ಪ್ರತ್ಯೇಕತೆಯಲ್ಲಿ (Role  Differentiation )  ರಕ್ಷಣೆ ಕೊಡಬೇಕು. ಆಕೆ ಪ್ರಾಕೃತಿಕವಾಗಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಅನರ್ಹಳು ಎಂಬ ಅರ್ಥದಲ್ಲಿ ಮನು ಹೇಳಿರಬೇಕು. 

ಸಮರ್ಥವಾದ ಮಹಿಳೆಯ ಸಹಾಯವಿಲ್ಲದೆ ಒಬ್ಬ ಪುರುಷ ತನ್ನ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ.


Date : 23 Jan 2013                                                                                                                                                  

ಎಂ ಗಣಪತಿ M.A
ಕಾನುಗೋಡು
P.O : ಮಂಚಾಲೆ - 577431
ತಾ : ಸಾಗರ  ಜಿಲ್ಲೆ : ಶಿವಮೊಗ್ಗ
Mob : 9481968771