Sunday 6 November 2016

ಹಬ್ಬಗಳು ಏಕೆ ?. ಹೇಗೆ ?.


~~~~~ ಎಂ. ಗಣಪತಿ. ಕಾನುಗೋಡು.
ನಮ್ಮ ಸಂಪ್ರದಾಯಗಳಲ್ಲಿ ಹಬ್ಬಗಳ ಆಚರಣೆ ತೀರಾ ಅಗತ್ಯವಾದದ್ದು ಎನ್ನಿಸಿಕೊಂಡಿದೆ. ಅವುಗಳ ಪೌರಾಣಿಕ ಹಿನ್ನಲೆ ಏನೂ ಇರಲಿ. ಅವುಗಳ ಸಾಮಾಜಿಕ ಕಳಕಳಿ ಬಹಳ ತುಂಬಾ ಮಹತ್ವದ್ದು. ನಮ್ಮ ಜೀವನದ ಜಂಜಾಟದಲ್ಲಿ ಯಾವಾಗಲೂ ಪುರುಸೊತ್ತು ಎನ್ನುವುದೇ ಇರುವುದಿಲ್ಲ. ಯಾವುದಕ್ಕೂ ಹಣಕಾಸಿನ ಅಡಚಣೆ ಬಿಟ್ಟಿದ್ದೇ ಇಲ್ಲ. ಊರು ಕೇರಿಯವರು, ಹತ್ತಿರದ ನೆಂಟರಿಷ್ಟರು ಒಂದು ದಿನ ಒಂದೆಡೆ ಸೇರಿಕೊಳ್ಳಲು ಮಾನಸಿಕ ಉದ್ದೇಶ ಮತ್ತು ವೈಯುಕ್ತಿಕ ಅನುಕೂಲತೆಗಳು ಯಾರಿಗೂ ಇರುವುದಿಲ್ಲ. ಬದುಕಿನಲ್ಲಿ ಕೆಲವು ಕಜ್ಜಾಯಗಳನ್ನು ಮಾಡಲೂ ನಮಗೆ ಉದ್ದೇಶವಾಗುವುದಿಲ್ಲ. ಇದಕ್ಕೆ ಕೆಲವರಿಗೆ ಅನುಕೂಲತೆಯೂ ಇರುವುದಿಲ್ಲ.
ಮನುಷ್ಯನ ಈ ಎಲ್ಲಾ ಅಡಚಣೆಗಳನ್ನು ನಿವಾರಿಸಲಿಕ್ಕಾಗಿಯೇ ಹಬ್ಬಗಳು ಸಂಭ್ರಮಗಳಿಂದ ನಮ್ಮಲ್ಲಿ ಆಚರಿಸಲ್ಪಡುತ್ತವೆ. ವರುಷದಲ್ಲಿ ಇಂತಿಂಥ ಹಬ್ಬಗಳನ್ನು ಆಚರಿಸಲು ಇಂತಿಂಥಹುದೇ ಮಿತಿ [ ದಿನ ] ಎಂದು ಸಾಮಾಜಿಕವಾಗಿ ಮತ್ತು ಶಾಸ್ತ್ರೀಯವಾಗಿ ನಿಗದಿ ಮಾಡಿದ್ದರಿಂದ ಆ ದಿನದಂದು ನಮ್ಮ ಎಷ್ಟೇ ತೊಂದರೆ, ಅಡಚಣೆಗಳಿದ್ದರೂ ನಾವು ಬಿಡುವು ಮಾಡಿಕೊಳ್ಳುತ್ತೇವೆ. ಅದರ ವೆಚ್ಚಕ್ಕೆ ಹಣವನ್ನು ಹೊಂದಿಸಿಕೊಳ್ಳುತ್ತೇವೆ. ಸಾಲ ಮಾಡಿಯಾದರೂ ಹೊಂದಿಸಿಕೊಳ್ಳುತ್ತೇವೆ. ನಮ್ಮಲ್ಲಿ ಹೆಚ್ಚಿನ ಹಬ್ಬಗಳಿಗೆ ಇಂಥಹುದೇ ಕಜ್ಜಾಯ ಆಗಬೇಕೆಂದು ನಿಯಮ ಇದೆ. ಬೂರೆ ಹಬ್ಬಕ್ಕೆ, ಭೂಮಿ ಹುಣ್ಣಿಮೆ ಹಬ್ಬಕ್ಕೆ ಕೊಟ್ಟೆಕಡುಬು , ದೀಪಾವಳಿಗೆ ಹೋಳಿಗೆ , ಗಣೇಶ ಚತುರ್ತಿಗೆ ಕರಿಕಡುಬು, ಪಂಚಕಜ್ಜಾಯ, ಹೀಗೆ ಹೀಗೆ. ಆಯಾ ಹಬ್ಬದಂದು ಎಷ್ಟೇ ತೊಂದರೆ, ಯಾವುದೇ ತೊಂದರೆ ಇದ್ದರೂ ಅಂಥಹ ಕಜ್ಜಾಯ, ಅಪ್ಪಚ್ಚಿಯನ್ನು ಮಾಡಿಯೇ ಮುಗಿಸುತ್ತೇವೆ. ಆ ದಿನ ನೆರೆಹೊರೆಯವರೊಂದಿಗೆ ಸಂತೋಷ , ವಿನೋದಗಳಿಂದ ಕೂಡಿ ಆಡಿಕೊಂಡಿರುತ್ತೇವೆ. ನಮ್ಮ ಅಕ್ಕ ತಂಗಿಯರು ಹೆಣ್ಣುಮಕ್ಕಳನ್ನು ಅವರ ಬಳಗವನ್ನು, ಅಂದಿನ ಹಬ್ಬದ ಆಚರಣೆಯಲ್ಲಿ ಆತಂಕವಿದ್ದ ನಮ್ಮ ಪ್ರೇಮಿಕರನ್ನು ನಮ್ಮಲ್ಲಿಗೆ ಆಮಂತ್ರಿಸಿರುತ್ತೇವೆ.
ನಮ್ಮಲ್ಲಿ ಹಬ್ಬಗಳು ಎನ್ನುವ ಪರಿಕಲ್ಪನೆ ಇಲ್ಲದೆ ಇದ್ದಿದ್ದರೆ ನಮ್ಮ ಒತ್ತಡದ ಮತ್ತು ಹರಕತ್ತಿನ ಜೀವನದಲ್ಲಿ ಇಂತಹ ಸಂಭ್ರಮಗಳು ಸಾಧ್ಯವಾಗುತ್ತಿರಲಿಲ್ಲ. ಅದರ ಪಾರಮಾರ್ಥಿಕ ಇಂಗಿತಗಳು ಏನೇ ಇದ್ದರೂ ಅವುಗಳಿಂದ ಪರಮ ಸಂತೋಷದ ಇಂಬು ದೊರಕುವುದು ಸುಳ್ಳಲ್ಲ.

ತಾರೀಖು : 30 - 10 - 2016.

ತುಂಬುವ ಗಂಗೆ, ತರುವ ಬಲೀಂದ್ರ , ಹಚ್ಚುವ ದೀಪಗಳು ...... ಏಕೆ ?

~~~~~~ ಎಂ. ಗಣಪತಿ. ಕಾನುಗೋಡು.


ಬಲಿ ಒಬ್ಬ ಶಕ್ತಿಶಾಲಿ ದಾನವ. ಅಮೃತದಿಂದ ವಂಚಿತರಾದ ದಾನವರು ದೇವತೆಗಳ ಮೇಲೆ ಯುದ್ಧವನ್ನು ಸಾರಿ ಸೋತರು. ಅವರಲ್ಲಿ ಮುಖ್ಯನಾದ ಬಲಿಯನ್ನು ಸೋಲಿಸುವುದು ಸುಲಭದ ಮಾತಾಗಿರಲಿಲ್ಲ. ಅಂತೂ ಇಂದ್ರನು ಅವನನ್ನು ಸಂಹರಿಸಿದ. ಆದರೆ ಅವನ ಗುರುಗಳಾದ ಶುಕ್ರಾಚಾರ್ಯರು ಅವನನ್ನು ಮೃತ ಸಂಜೀವಿನಿ ವಿದ್ಯೆಯಿಂದ ಬದುಕಿಸಿದರು. ಇದಾದ ನಂತರ ಬಲಿಯು ವಿಶ್ವಜಿತ್ತೆಂಬ ಮಹಾಯಾಗವನ್ನು ಮಾಡಿ ಅಗ್ನಿದೇವನಿಂದ ರಥಾಶ್ವಧ್ವಜಗಳನ್ನು, ತನ್ನ ಪಿತಾಮಹನಾದ ಪ್ರಹ್ಲಾದನಿಂದ ಮಹಾಧನುಸ್ಸನ್ನು, ಅಕ್ಷಯ ಬತ್ತಳಿಕೆಯನ್ನೂ ಪಡೆದ. ಹೀಗೆ ಆ ಯಾಗದಿಂದ ಅತ್ಯುಗ್ರ ಶಕ್ತಿಯನ್ನು ಸಂಪಾದಿಸಿದ. ಇಂತಹ ಶಕ್ತಿಯಿಂದ ಇಂದ್ರಾದಿ ದೇವತೆಗಳನ್ನು ಹೀನಾಯವಾಗಿ ಸೋಲಿಸಿ ಸ್ವರ್ಗರಾಜ್ಯವನ್ನು ವಶಪಡಿಸಿಕೊಂಡ. ತಾನೇ ಇಂದ್ರಪದವಿಯನ್ನು ಹೊಂದಿ ಬಲೀಂದ್ರನಾದ.. ತ್ರಿಲೋಕಾಧಿಪತಿಯಾದ.
ಇದರಿಂದ ಆತಂಕಕ್ಕೆ ಸಿಕ್ಕಿದ ದೇವತೆಗಳು ವಿಷ್ಣುವನ್ನು ಪ್ರಾರ್ಥಿಸಿ ಬಲಿಯನ್ನು ಕೊಲ್ಲಲು ಕೇಳಿಕೊಂಡರು. ಆಗ ಶ್ರೀ ಹರಿಯು ಅವರ ಅರಿಕೆಯನ್ನು ನೀಗಿಸಲು ಕಶ್ಯಪ ಮತ್ತು ಅದಿತಿಯ ಪುತ್ರನಾಗಿ ಜನಿಸಿದ. ತೀರಾ ಚಿಕ್ಕದಾದ ಆಕೃತಿಯನ್ನು ಹೊಂದಿದ್ದರಿಂದ ಅವನಿಗೆ ವಾಮನ ಎಂಬ ಹೆಸರು ಬಂತು. ವಿಷ್ಣುವಿನ ಹತ್ತು ಅವತಾರಗಳಲ್ಲಿ ವಾಮನಾವತಾರವು ಐದನೆಯದು.
ಬಲೀಂದ್ರನು ಅಶ್ವಮೇಧಯಾಗವನ್ನು ಮಾಡುತ್ತಿದ್ದ. ಆಗ ಅಲ್ಲಿಗೆ ವಾಮನನು ಬಾಲವಟುವಾಗಿ ಬಂದ. ಬಾಲವಟುವಾದ ವಾಮನ ಅದ್ಭುತ ತೇಜಸ್ಸನ್ನು ಕಂಡು ಬಲಿಯು ಬೆರಗಾದ. ಆ ಸಂತೋಷದಲ್ಲಿ ಬಲಿಯು ' ನಿನಗೆ ಯಾವ ವರ ಬೇಕೋ ಕೇಳು ' ಎಂದು ವಾಮನನಿಗೆ ಹೇಳಿದ. ವಾಮನನು ತನ್ನನ್ನು ವಧಿಸಲಿಕ್ಕಾಗಿ ಅವತರಿಸಿ ಬಂದ ವಿಷ್ಣು ಎಂದು ಅವನಿಗೆ ಗೊತ್ತಾಗಲಿಲ್ಲ. ಅದಕ್ಕೆ ವಾಮನನು ' ಬಲಿಚಕ್ರವರ್ತಿ, ನನಗೆ ಹೆಚ್ಚೇನೂ ಬೇಡ. ನನ್ನ ಅಳತೆಯಲ್ಲಿ ಮೂರು ಹೆಜ್ಜೆ ಭೂಮಿ ಕೊಟ್ಟರೆ ಸಾಕು ' ಎಂದ. ಅದಕ್ಕೆ ಬಲಿಯು ಒಪ್ಪಿದ. ಕೂಡಲೇ ನೋಡು ನೋಡುತ್ತಿದ್ದಂತೆ ವಾಮನನು ತ್ರಿವಿಕ್ರಮನಾಗಿ ಬೆಳೆದ. ಆಕಾಶ ಭೂಮಿಗಳು ಒಂದಾದುವು. ಒಂದು ಪಾದದಿಂದ ತ್ರಿವಿಕ್ರಮನು ಇಡೀ ಭೂಮಂಡಲವನ್ನು ಅಳೆದ. ಇನ್ನೊಂದು ಪಾದವನ್ನು ಗಗನಕ್ಕೆ ಚಾಚಿದಾಗ ಅದು ಇಡೀ ಆಕಾಶವನ್ನೇ ವ್ಯಾಪಿಸಿತು. ಅಲ್ಲದೆ ಹೀಗೆ ಗಗನಕ್ಕೆ ಪಾದವನ್ನು ಚಾಚಿದಾಗ ತ್ರಿವಿಕ್ರಮನ ಎಡಗಾಲಿನ ಹೆಬ್ಬೆರಳಿನ ಉಗುರಿನ ತುದಿ ತಾಗಿ ಬ್ರಹ್ಮಾಂಡದ ಕಟಾಹದ ತುದಿ ತೂತಾಗಿ ನೀರು ಸೊರಹತ್ತಿತು. ಈ ವಿಷ್ಣು ಪಾದೋದಕವೇ ಗಂಗೆ. ಇದಕ್ಕೆ ದೇವಗಂಗೆ ಎಂದೂ ಕರೆಯುತ್ತಾರೆ. ತ್ರಿವಿಕ್ರಮನಾದ ಶ್ರೀ ಹರಿಯು ಮತ್ತೊಂದು ಪಾದವನ್ನು ಬಲಿಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ಅಟ್ಟಿದ.
ಹೀಗೆ ಮೂರನೆಯ ಪಾದವನ್ನು ತ್ರಿವಿಕ್ರಮನು ಬಳಿಯ ಮೇಲಿಟ್ಟಾಗ ಬಲಿಯ ಪಿತಾಮಹನಾದ ಪ್ರಹ್ಲಾದನು ಪ್ರಕಟಗೊಂಡು ಬಲಿಯನ್ನು ರಕ್ಷಿಸುವಂತೆ ಪ್ರಾರ್ಥಿಸಿದ. ಆಗ ಶ್ರೀ ಹರಿಯು ' ಪಾತಾಳದಲ್ಲಿರುವ ಬಲಿಯ ಅರಮನೆಯನ್ನು ನಾನು ನನ್ನ ಅಂಶದಿಂದ ಯಾವಾಗಲೂ ಕಾಯುತ್ತಾ ಇರುತ್ತೇನೆ. ಅವನಿಗೆ ಒಂದು ಕಲ್ಪ ಪ್ರಮಾಣದ ಆಯುಷ್ಯವನ್ನು ಕೊಟ್ಟಿದ್ದೇನೆ. ಅದುವರೆಗೆ ಸುತಲ ಲೋಕದಲ್ಲಿ ಮುನ್ನೂರು ಮಂದಿ ಸುಂದರಿಯರೊಡನೆ ಭೋಗಿಸುವಂತಾಗಲಿ. ಅಲ್ಲದೆ ಮುಂದಿನ ಸಾವರ್ಣಿಕ ಮನ್ವಂತರದಲ್ಲಿ ಮತ್ತೆ ಇಂದ್ರನಾಗುತ್ತಾನೆ. ಪ್ರತಿ ವರ್ಷ ಬಲಿಯು ತನ್ನ ರಾಜ್ಯವನ್ನು ನೋಡಲು ಭೂಮಿಗೆ ಬರುತ್ತಾನೆ. ಜನರು ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸುತ್ತಾರೆ. ಎಂಬುದಾಗಿ ಪ್ರಹ್ಲಾದನ ಪ್ರಾರ್ಥನೆಯಂತೆ ಬಲಿಗೆ ಅನುಗ್ರಹಿಸಿದನು. ಅಲ್ಲದೆ ' ವೇದ ಓದದ ಬ್ರಾಹ್ಮಣನಿಗೆ ಕೊಟ್ಟ ದಾನಗಳ ಮತ್ತು ವಿಶ್ವಾಸವಿಲ್ಲದವನು ಮಾಡಿದ ಯಜ್ಞ ಯಾಗಾದಿಗಳ ಫಲವು ಕೊಟ್ಟವನಿಗೆ, ಮಾಡಿದವನಿಗೆ ಲಭಿಸದೆ ನಿನಗೆ ಲಭಿಸುತ್ತದೆ ' ಎಂದು ವರವನ್ನು ಕೊಟ್ಟನು.
ಈ ಪ್ರಕಾರ ಬಲಿಯು ಪ್ರತಿ ವರ್ಷ ಬಲಿ ಪಾಡ್ಯಮಿಯಂದು ಭೂಮಿಗೆ ಬರುತ್ತಾನೆ. ಒಂದು ದಿನ ಇರುತ್ತಾನೆ ಎನ್ನುವ ಒಂದು ಅಭಿಪ್ರಾಯ ಇದೆ. ನರಕ ಚತುರ್ದಶಿಯಂದು ಬಂದು ಬಲಿಪಾಡ್ಯಮಿಯವರೆಗೆ ಮೂರು ದಿನ ಇರುತ್ತಾನೆ ಎನ್ನುವ ಇನ್ನೊಂದು ಹೆಚ್ಚಿನ ಅಭಿಪ್ರಾಯವೂ ಇದೆ. ಒಟ್ಟಾರೆ ಅದನ್ನೇ ನಾವು ಬಲೀಂದ್ರನನ್ನು ತರುವ ಪದ್ಧತಿಯನ್ನಾಗಿ ಆಚರಿಸುತ್ತೇವೆ. ಈ ಕಾರಣಕ್ಕಾಗಿ ದೀಪಾವಳಿಯ ಮೂರು ದಿನಗಳು ದೀಪಗಳನ್ನು ಹಚ್ಚಿ ಸಂಭ್ರಮಿಸುವ ಪದ್ಧತಿ ಬಂದಿದೆ. ಬಲಿಯು ಕೊಟ್ಟ ದಾನದಂತೆ ತ್ರಿವಿಕ್ರಮನು ಆಕಾಶಕ್ಕೆ ತನ್ನ ಪಾದವನ್ನಿಟ್ಟು ಅಳೆಯುವಾಗ ಅವನ ಹೆಬ್ಬೆರಳ ಉಗುರು ತುದಿ ತಾಗಿ ಬ್ರಹ್ಮಾಂಡದ ಭಿತ್ತಿಯಲ್ಲಿ ರಂಧ್ರವಾಗಿ ದೇವಗಂಗೆ ಹೊರಬಂದಿದ್ದರಿಂದ ಆ ಗಂಗೆಯನ್ನು ತುಂಬುವ ಪದ್ಧತಿಯೂ ಈ ಸಂದರ್ಭದಲ್ಲಿ ನಡೆಯುತ್ತದೆ. ಇವೇ ಗಂಗೆಯನ್ನು ತುಂಬುವುದು. 
ಬಲೀಂದ್ರನನ್ನು ತರುವುದು ಮತ್ತು ದೀಪಗಳನ್ನು ಹಚ್ಚುವುದು ಈ ಪದ್ಧತಿಗಳಿಗೆ ಕಾರಣ.
ನರಕ ಚತುರ್ದಶಿಯ [ ದೀಪಾವಳಿಯ ] ದಿನ ರಾತ್ರಿಯ ಕಾಲದಲ್ಲಿ [ ಸಂಜೆಯ ಕಾಲದಲ್ಲಿ ? ] ಮೈಗೆ ಎಣ್ಣೆಯನ್ನು ಸವರಿಕೊಂಡು ಅಭ್ಯಂಜನವನ್ನು ಮಾಡಬೇಕು. ಆ ದಿನ ತೈಲದಲ್ಲಿ ಲಕ್ಷ್ಮಿಯೂ, ಜಲದಲ್ಲಿ ದೇವಗಂಗೆಯೂ, ಉಪಸ್ಥಿತರಿರುತ್ತಾರೆ. ಇದರಿಂದ ನರಕವೂ ಪ್ರಾಪ್ತವಾಗುವುದಿಲ್ಲ. ಮರುದಿನ [ ಅಮಾವಾಸ್ಯೆ ] ಸಂಜೆ ಪ್ರದೋಷ ಕಾಲದಲ್ಲಿ ಲಕ್ಷ್ಮಿಯನ್ನು ಪೂಜಿಸಬೇಕು. ಹಸುವಿನ ಕೊಟ್ಟಿಗೆಯಲ್ಲಿ ದೀಪವನ್ನು ಹಚ್ಚಿಡುವುದನ್ನು ಮರೆಯಬಾರದು. ಏಕೆಂದರೆ ಆ ದಿನ ಲಕ್ಷ್ಮಿಯು ಅಲ್ಲಿ ಇರುತ್ತಾಳೆ. ನಂತರ ಪ್ರತಿಪದೆಯ ದಿನ ಬಲಿ ಪೂಜೆಯನ್ನು ಮಾಡಬೇಕು. ಆ ದಿನ ಯಾರು ಬಲಿ ಪೂಜೆಯನ್ನು ಮಾಡುವುದಿಲ್ಲವೋ ಅವರ ಪುಣ್ಯವೆಲ್ಲಾ ಬಲಿಗೆ ಸೇರುತ್ತದೆ.
ತಾರೀಖು : 29 - 10 - 2016 . ದೀಪಾವಳಿಯ ಮುನ್ನಾ ದಿನಗಳು.

Monday 12 September 2016

###### ಒಗಟುಗಳು ######


~~~~ ಎಂ. ಗಣಪತಿ. ಕಾನುಗೋಡು.

ಒಗಟುಗಳು ಜನಪದ ಸಾಹಿತ್ಯದ ಒಂದು ಪ್ರಾಕಾರ. ಇದಕ್ಕೆ ಕನ್ನಡದಲ್ಲಿ ಒಂಟು, ಒಡಪು, ಒಡಗತೆ [ ಅಪಭೃಂಶಿತ ' ವರ್ಚಿಗತೆ '. ] ಎಂದೂ ಹೇಳುತ್ತಾರೆ. ಇದಕ್ಕೆ ಆಂಗ್ಲಭಾಷೆಯಲ್ಲಿ ' riddles ' ಎನ್ನುತ್ತಾರೆ. ಮೂಲತಃ ಒಗಟುಗಳನ್ನು ಕೇಳುವುದು ಮತ್ತು ಅವುಗಳನ್ನು ಬಿಡಿಸುವುದು ಮನೋರಂಜನೆಯ ಪ್ರಕ್ರಿಯೆಗಳಾಗಿದ್ದುವು.
ಸಾಮಾನ್ಯವಾಗಿ ಒಗಟುಗಳೆಂದರೆ ಒಂದು ವಿಷಯವನ್ನು ಒಳಗೊಂಡ ಜಡಕಿನ ಪ್ರಶ್ನೆಯನ್ನು ಕೇಳುವುದು ಮತ್ತು ಅದನ್ನು ಚುರುಕು ಬುದ್ಧಿಯಿಂದ ಬಿಡಿಸುವುದು. ಅದರ ಪಧಾನ ಗುಣ ಸಂಕ್ಷಿಪ್ತತೆ ಮತ್ತು ಆಕರ್ಷಣೆ. ಒಗಟಿನಲ್ಲಿ ಗೋಪ್ಯ ಮುಖ್ಯ ಅಂಶ. ಅದು ಮನುಷ್ಯನ ಬುದ್ಧಿಗೆ ಕೈ ಹಾಕುತ್ತದೆ. ಅವನ ಬುದ್ಧಿಮತ್ತೆಯನ್ನು [ I Q ] ಪರೀಕ್ಷೆ ಮಾಡುತ್ತದೆ. ಚುರುಕು ಬುದ್ಧಿಯುಳ್ಳವರು ಒಂದು ಒಗಟಿನ ಅಂತರಾರ್ಥವನ್ನು ಕೂಡಲೇ ಗ್ರಹಿಸುತ್ತಾರೆ.
ಒಗಟುಗಳು ಜನತೆಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ಅವು ಹಾಸ್ಯಮಯತೆಗಳಿಂದ ಕೂಡಿರುವುದರಿಂದ ಮನೋರಂಜಕವಾಗಿರುತ್ತವೆ.ಹಲವು ಭಾರಿ ಸಾಹಿತ್ಯಕವಾಗಿರುತ್ತವೆ. ಗಣಿತ, ವಿಜ್ನಾನಗಳಿಂದ ಕೂಡಿ ಶೈಕ್ಷಣಿಕವಾಗಿರುತ್ತವೆ. ಮತಾಚಾರದವುಗಳೂ ಇರುತ್ತವೆ.
ಬೈಗುಳಗಳ ಒಗಟುಗಳು, ಅಶ್ಲೀಲ ಒಗಟುಗಳು, ಮದುವೆಯ ಒಗಟುಗಳು, ಹೆಸರಿನ ಒಗಟುಗಳು, ಆಟದ ಒಗಟುಗಳು ಎಂದು ಹಲವು ಥರದ ಒಗಟುಗಳು ಇವೆ.
ಒಗಟುಗಳು ಪದ್ಯರೂಪ, ಸಂಭಾಷಣೆಯ ರೂಪ, ಹಾಡಿನ ರೂಪ, ಕಥೆಯ ರೂಪ ಗಳಲ್ಲಿ ಇರುತ್ತವೆ. ಕೆಲವು ಒಗಟುಗಳು ಒಂದೇ ಸಾಲಿನಷ್ಟು ಚಿಕ್ಕವು. ಆರು ಸಾಲಿನ ದೊಡ್ಡವೂ ಇವೆ. ಹಾಡಿನ ರೂಪದಲ್ಲಿ ಇರುವವು ಹೆಚ್ಚಾಗಿ ತ್ರಿಪದಿಗಳು. ಒಗಟುಗಳು ಕಾವ್ಯಾತ್ಮಕ, ಆಸಕ್ತಿಯುತ ಮತ್ತು ಸಂಭ್ರಮಶೀಲವಾದವು. ಅವುಗಳಲ್ಲಿ ಎರಡು ಸದೃಶ ವಸ್ತುಗಳಿರುತ್ತವೆ. ಉಪಮಾನ ಮತ್ತು ಉಪಮೇಯ. ಒಗಟಿಗೆ ಕೊಡುವ ಹೋಲಿಕೆಗಳು ಸಾಮಾನ್ಯವಾಗಿ ಬಾಹ್ಯ ಪ್ರಪಂಚದ ವಸ್ತು ಚಿತ್ರಗಳೇ ಆಗಿರುತ್ತವೆ.
ಒಗಟುಗಳ ಸರಮಾಲೆಯೇ ಇರುತ್ತದೆ. ತಮಾಷೆಯೆಂದರೆ ಒಂದು ಒಗಟಿಗೆ ಉತ್ತರ ಹೇಳಿದರೆ ಆ ಉತ್ತರದಿಂದಲೇ ಪ್ರಾರಂಭವಾಗುವ ಮತ್ತೊಂದು ಒಗಟು ಇರುತ್ತದೆ. ಆ ಉತ್ತರದ ಒಗಟನ್ನೇ ಮೊದಲು ಒಗಟು ಕೇಳಿದವನಿಗೆ ಬಿಡಿಸಲು ಒಡ್ಡುವ ಪರಿಪಾಠವಿದೆ. ಹೀಗೆ ಈ ಮೋಜಿನಲ್ಲಿ ಒಂದು ರೀತಿಯ ಕೊಂಡಿ ಇರುವುದೂ ಇದೆ.
ಒಂದು ಕಾಲದಲ್ಲಿ ಅದು ಮನೋರಂಜನೆಯ ಮತ್ತು ಜ್ನಾನವವರ್ಧನೆಯ ಕೋರ್ಸ್ ಆಗಿತ್ತು. ಹಗಲೆಲ್ಲಾ ದುಡಿದು ರಾತ್ರಿ ಮಲಗಿದಾಗ ಹಾಸಿಗೆಯಿಂದಲೇ ಮಧ್ಯರಾತ್ರಿಯವರೆಗೂ ಆಗಿನ ಅವಿಭಕ್ತ ಕುಟುಂಬದಲ್ಲಿ ಸದಸ್ಯ ಸದಸ್ಯರ ನಡುವೆ ಒಗಟನ್ನು ಕೇಳುವ , ಬಿಡಿಸುವ ಪರಿಪಾಠವಿತ್ತು. ಕೆಲವು ಜನರಿಗೆ ಒಗಟುಗಳು ಕಂಠಸ್ಥ. ಜನ ಸೇರಿರುವ ಕಡೆ ಒಗಟುಗಳನ್ನು ಒಡ್ಡುವ ಜಾಣ್ಮೆ ಅವರಲ್ಲಿ ಇರುತ್ತದೆ.
ಕನ್ನಡ ಸಾಹಿತ್ಯದ ವಚನ ಸಾಹಿತ್ಯದಲ್ಲಿ ಬೆಡಗಿನ ವಚನಗಳು, ಸರ್ವಜ್ಞ ವಚನಗಳು, ಕಂತಿ ಹಂಪನ ಸಮಸ್ಯೆಗಳು, ಹರಿಹರನ ಮುಂಡಿಗೆಯ ಅಷ್ಟಕ, ಕನಕದಾಸರ ಮುಂಡಿಗೆಗಳು, ಮಹಾಭಾರತದ ಜಾತಕದ ಕಥೆಗಳು , ಯಕ್ಷಪ್ರಶ್ನೆ ಪ್ರಸಂಗ, ಅಲ್ಲದೆ ಅದರ ಇನ್ನು ಕೆಲವು ಪದ್ಯಗಳು [ ಉದಾ : ವೇದ ಪುರುಷನ ಸುತನ ಸುತನ ....... ವೀರ ನಾರಾಯಣ ] ಇವುಗಳಲ್ಲಿ ಒಗಟುಗಳನ್ನು ಕಾಣುತ್ತೇವೆ. ಕನಕದಾಸರ ಕೀರ್ತನೆಗಲ್ಲೂ ಕೆಲವೆಡೆ ಒಗಟುಗಳ ರಚನೆಗಳಿವೆ. ಜನಪದ ಸಾಹಿತ್ಯದಲ್ಲಂತೂ ಅದರದೇ ಸಂತೆ. ಸಂಸ್ಕೃತ ಗ್ರಂಥಗಳಲ್ಲಿ ಅಂದರೆ ವೇದ -- ಉಪನಿಷತ್ತುಗಳಲ್ಲಿ ಒಗಟಿನಂಥಹ ಮಾತುಗಳನ್ನು ಕಾಣಬಹುದು. ಸಂಸ್ಕೃತದಲ್ಲಿ ಇದಕ್ಕೆ ಪ್ರಹೇಲಿಕಾಗಳು ಎಂದಿದ್ದಾರೆ. ಬೋಜರಾಜ, ಕಾಳಿದಾಸರ ಕಥೆಗಳಲ್ಲಿ ಇರುವ ಒಗಟುಗಳು ಈ ಸಾಲಿಗೆ ಸೇರುತ್ತವೆ. ' ಬೋಜ ಪ್ರಬಂಧ ' ದಲ್ಲಿ ಕಾಳಿದಾಸನು ಪೂರ್ಣಗೊಳಿಸುವ ಒಗಟುಗಳನ್ನು ಕಾಣಬಹುದು.
ಒಗಟುಗಳು ಸಾರ್ವತ್ರಿಕವಾದದ್ದು. ಎಲ್ಲಾ ಪ್ರದೇಶದಲ್ಲಿ, ಎಲ್ಲಾ ಭಾಷೆಗಳಲ್ಲಿ ಎಲ್ಲಾ ಜನಾಂಗಗಳಲ್ಲಿ ಕಂಡುಬರುತ್ತವೆ. ಒಗಟನ್ನು ಒಡ್ಡುವುದು ಮತ್ತು ಬಿಡಿಸುವುದು ಇವೆಲ್ಲ ಒಂದು ಬಗೆಯ ಕ್ರೀಡೆ. ಒಗಟಿನ ಸ್ಪರ್ಧೆ ನಡೆದದ್ದೂ ಇದೆ. ಒಗಟಿನ ಜೂಜು ಒಂದು ಮೋಜಿನ ಪ್ರಸಂಗ.
ತಾರೀಖು : 6 - 9 - 2016

Thursday 25 August 2016

###### ಬ್ರಹ್ಮ ######


~~~~ ಒಂದು ಮಾಹಿತಿ
..... ಎಂ. ಗಣಪತಿ. ಕಾನುಗೋಡು.
ಬ್ರಹ್ಮ ಎನ್ನುವ ಶಬ್ದಕ್ಕೆ ಮೂರು ಅರ್ಥಗಳಿವೆ.
1. ಪರಮಾತ್ಮ. ಸತ್ವ, ರಜ, ತಮಗಳ ಗುಣತ್ರಯ ರಹಿತವೂ ಉಪಾಧಿರಹಿತವೂ ಪರಿಚ್ಛೇದಶೂನ್ಯವೂ ಆಗಿ ಸಚ್ಚಿದಾನಂದ ಸ್ವರೂಪವೆನಿಸಿದ ಪರಾತ್ಪರ ಶಕ್ತಿಯೇ ಈ ಪರಮಾತ್ಮ. ಅದಕ್ಕಾಗಿಯೇ ಪರಮಾತ್ಮನಲ್ಲಿ ಲೀನರಾದವರು ಇದ್ದರೆ ಅವರಿಗೆ ಬ್ರಹ್ಮೀಭೂತರು, ಬ್ರಹ್ಮೈಕ್ಯ ಎಂದು ಹೆಸರಿಸಿರಬೇಕು.
2. ವೇದಗಳು ಎಂತಲೂ ಅರ್ಥವಿದೆ.
3. ಪ್ರಪಂಚದ ಸೃಷ್ಟಿಕರ್ತನಾದ ದೇವತೆ -- ಬ್ರಹ್ಮ. ವಿಷ್ಣುವಿನ ನಾಭಿಕಮಲದಿಂದ ಹುಟ್ಟಿದವ. ಬ್ರಹ್ಮನಿಗೆ ಹುಟ್ಟುವಾಗ ಒಂದೇ ಮುಖವಿತ್ತು. ಆಗ ಅವನು ಆ ಕಮಲ ಮಧ್ಯದಲ್ಲಿ ಕುಳಿತು ಶೂನ್ಯವಾಗಿರುವುದನ್ನು ಕಂಡು ನಾಲ್ಕು ದಿಕ್ಕುಗಳನ್ನೂ ನೋಡಲು ಹವಣಿಸಿದ. ಆಗ ಅವನಿಗೆ ಮತ್ತೆ ನಾಲ್ಕು ಮುಖಗಳು ಪ್ರಾಪ್ತಿಯಾಯಿತು. ಹೀಗೆ ಬ್ರಹ್ಮನಿಗೆ ಈ ಮತ್ತೊಂದು ಹಂತದಲ್ಲಿ ಐದು ಮುಖಗಳು ಇದ್ದುವು.
ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಗಳಲ್ಲಿ ತಾನೇ ಸರ್ವಶ್ರೇಷ್ಠ ಎಂಬುದಾಗಿ ಬ್ರಹ್ಮ ಅಹಂಕಾರ ಮಾಡಿದ. ವೇದಗಳನ್ನು ನಿಂದಿಸಿ ಮಾತನಾಡಿದ. ಇದರಿಂದ ಕೋಪಗೊಂಡ ಶಿವನು ಅವನ ಒಂದು ತಲೆಯನ್ನು ಕತ್ತರಿಸಿದ. ಈ ಮೂರನೆಯ ಹಂತದಲ್ಲಿ ಇದ್ದದ್ದು ಅವನಿಗೆ ನಾಲ್ಕು ಮುಖಗಳು. ಆ ನಂತರವಷ್ಟೇ ಬ್ರಹ್ಮನಿಗೆ ಚತುರ್ಮುಖ ಎನ್ನುವ ಹೆಸರು ಬಂತು.
ಇಲ್ಲಿ ಇನ್ನೊಂದು ಅಭಿಪ್ರಾಯವೂ ಇದೆ. ಬ್ರಹ್ಮನ ಈ ಅಹಂಕಾರವನ್ನು ಸಹಿಸದೆ ಅದನ್ನು ಪ್ರಶ್ನಿಸಲು ಎದುರಿಗೆ ಬಂದಾಗ ಬ್ರಹ್ಮನು ಶಿವನನ್ನು ತಿರಸ್ಕರಿಸಿದ. ಆಗ ಶಿವನು ಸ್ತ್ರೀರೂಪದ ಭೈರವನನ್ನು ಸೃಷ್ಟಿಸಿ ಆತನಿಂದ ಅವನ ಐದನೆಯ ತಲೆಯನ್ನು ಕತ್ತರಿಸುವಂತೆ ಮಾಡಿದ ಎನ್ನುವುದು ಈ ಮತ್ತೊಂದು ಅಭಿಪ್ರಾಯ.
ಒಟ್ಟಾರೆ ಅವನ ಅಹಂಕಾರವನ್ನು ಸಹಿಸದ ಶಿವ ಅವನ ತಲೆಯನ್ನು ಕತ್ತರಿಸಿದ್ದಲ್ಲದೆ ಲೋಕದಲ್ಲಿ ದೇವಾಲಯ, ಪೂಜೆ, ರಥೋತ್ಸವಾದಿಗಳು ಇಲ್ಲದಿರುವಂತೆ ಬ್ರಹ್ಮನಿಗೆ ಶಾಪವನ್ನು ಕೊಟ್ಟ. ಅದಕ್ಕಾಗಿಯೇ ಎಲ್ಲಿಯೂ ಬ್ರಹ್ಮನ ದೇವಾಲಯ. ಅವನ ಪೂಜೆ ಇರುವುದು ಕಂಡುಬರುವುದಿಲ್ಲ.
ಬ್ರಹ್ಮ ಶಿವನಿಂದ ಯೋಗಮಾಯೆಯಲ್ಲಿ ಜನಿಸಿದವ ಎನ್ನುವ ಮಾತೂ ಇದೆ.
ಬ್ರಹ್ಮನಿಗೆ ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ, ಪುಲಹ, ಕ್ರತು ಎಂಬುದಾಗಿ ಆರು ಮಾನಸಪುತ್ರರು ಎಂದು ಒಂದು ಕಡೆ ಹೇಳಲಾಗಿದೆ. ಇದಲ್ಲದೆ ಸನಂದನ, ಸನತ್ಕುಮಾರ, ಮತ್ತು ಸನತ್ಸುಜಾತರು ಕೂಡ ಬ್ರಹ್ಮನ ಮಾನಸಪುತ್ರರು ಎಂದು ಮತ್ತೊಂದು ಕಡೆ ಹೇಳಲಾಗಿದೆ. ಭೃಗು ಋಷಿಯೂ ಅವನಿಂದ ಉತ್ಪತ್ತಿಯಾದವನು ಎನ್ನಲಾಗಿದೆ.
ಬ್ರಹ್ಮನು ಅತ್ರಿಮುನಿಯನ್ನು ಮಾನಸಪುತ್ರನನ್ನಾಗಿ ಪಡೆದಿದ್ದಾನೆ ಎಂದು ಒಂದು ಕಡೆ ಹೇಳಿದರೆ ಮತ್ತೊಂದು ಕಡೆ ಅತ್ರಿಮುನಿಯ ಪತ್ನಿಯಾದ ಅನಸೂಯಾದೇವಿಯ ಹೊಟ್ಟೆಯಲ್ಲಿ ಬ್ರಹ್ಮನು ಚಂದ್ರನಾಗಿ ಹುಟ್ಟಿದ ಎನ್ನಲಾಗಿದೆ. ಅಂದರೆ ಮತ್ತೊಂದು ಹಂತದಲ್ಲಿ ಬ್ರಹ್ಮನೇ ಅತ್ರಿಯ ಮಗ ಎಂದಂತಾಯಿತು. ಆದರೆ ರೂಪ ಬೇರೆ ಎನ್ನುವುದು ಗ್ರಾಹ್ಯ. ಒಂದೇ ವ್ಯಕ್ತಿ ಅತ್ರಿಮುನಿಯ ತಂದೆಯಾಗಿ ಬ್ರಹ್ಮ. ಹಾಗೆಯೇ ಅತ್ರಿಮುನಿಯ ಮಗನಾಗಿ ಚಂದ್ರ.
ಬ್ರಹ್ಮನ ಮುಖದಿಂದ ದೇವತೆಗಳು, ವಕ್ಷದಿಂದ ಪಿತೃಗಳು, ಬೆನ್ನು ಭಾಗದಿಂದ ರಾಕ್ಷಸರು ಮತ್ತು ಸಾಧ್ಯರು, ಕೆಳಗಿನ ಇಂದ್ರಿಯದಿಂದ ಮಾನವರು ಜನಿಸಿದರು.
ಬ್ರಹ್ಮನು ತಾನೇ ಸೃಷ್ಟಿಸಿದ ಸರಸ್ವತಿಯನ್ನು ಕಾಮದಿಂದ ನೋಡಿದ.

Monday 22 August 2016

##### ನೆಲ್ಲಿ ಫೆಲ #####


ಒಂದು ಮಾಹಿತಿ.
~~~~ ಸಂಗ್ರಹ : ಎಂ. ಗಣಪತಿ. ಕಾನುಗೋಡು.
ನೆಲ್ಲಿಯ ಫಲವು ಶ್ರೀಹರಿಗೆ ಅತ್ಯಂತ ಪ್ರಿಯವಾದದ್ದು. ಹಿಂದೆ ಬ್ರಹ್ಮನು ಹುಟ್ಟಿ ವಿಷ್ಣುವನ್ನು ಕುರಿತು ತಪಸ್ಸಿನಲ್ಲಿ ನಿರತನಾದನು. ಅವನ ತಪಸ್ಸಿಗೆ ಮೆಚ್ಚಿ ವಿಷ್ಣುವು ಪ್ರತ್ಯಕ್ಷ್ಯನಾದಾಗ ಬ್ರಹ್ಮನಿಗೆ ಸಂತೋಷವಾಗಿ ಆನಂದ ಭಾಷ್ಪಗಳು ನೆಲಕ್ಕೆ ಬಿದ್ದು ಅಲ್ಲಿ ನೆಲ್ಲಿಯ ಮರವು ಹುಟ್ಟಿಕೊಂಡಿತು ಎಂದು ಹೇಳಲಾಗಿದೆ.
ಹಿಂದೆ, ಬ್ರಹ್ಮಚಾರಿಯಾಗಿದ್ದ ಶ್ರೀ ಶಂಕರರು ಒಬ್ಬಳು ಬಡ ಬ್ರಾಹ್ಮಣ ಸ್ತ್ರೀಯ ಮನೆಗೆ ಬಿಕ್ಷೆಗೆ ಹೋಗುತ್ತಾರೆ. ಆಕೆ ತನ್ನಲ್ಲಿರುವ ಒಂದು ನೆಲ್ಲಿಕಾಯಿಯನ್ನೇ ಅವರಿಗೆ ಬಿಕ್ಷೆಯಾಗಿ ನೀಡುತ್ತಾಳೆ. ಆ ಘಳಿಗೆಯಲ್ಲಿ ಭಗವಾನ್ ಶ್ರೀ ಶಂಕರರು ಕನಕಧಾರಾ ಸ್ತೋತ್ರವನ್ನು ರಚಿಸಿ ಹೇಳುತ್ತಾರೆ. ಆಗ ಆ ಸ್ತೋತ್ರದ ಮಹಿಮೆಯಿಂದ ಅಲ್ಲಿ ಬಂಗಾರದ ನೆಲ್ಲಿಕಾಯಿಗಳು ಪ್ರತ್ಯಕ್ಷ ಉರುಳುತ್ತವೆ. ಇಂದಿಗೂ ಆ ಕನಕಧಾರಾ ಸ್ತೋತ್ರವನ್ನು ಪಠಿಸಿದರೆ ದಾರಿದ್ರ್ಯ ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ.
ನೆಲ್ಲಿಯ ಮರವು ಮನೆಯ ಅಂಗಳದಲ್ಲಿ ಇದ್ದರೆ ಬಡತನವು ಬರುವುದಿಲ್ಲ. ಐಶ್ವರ್ಯವನ್ನು ಬಯಸುವವರು ನೆಲ್ಲಿ ಫಲವನ್ನು ನೀರಿನಲ್ಲಿ ಹಾಕಿ ಆ ನೀರಿನಿಂದ ಸ್ನಾನವನ್ನು ಮಾಡಬೇಕು. ಅದರಲ್ಲೂ ಏಕಾದಶಿಯಂದು ಈ ಸ್ನಾನ ಹೆಚ್ಚು ಪುಣ್ಯದಾಯಕ.
ನೆಲ್ಲಿಯನ್ನು ಧಾತ್ರಿ, ತಿಕ್ತ, ಅದಿರೋಹ, ಅಮಲಕ, ಅಮೃತ ಎಂದೆಲ್ಲ ಕರೆಯುತ್ತಾರೆ.
ಅನೇಕ ಆಯುರ್ವೇದ ಔಷಧಗಳಲ್ಲಿ ನೆಲ್ಲಿಯನ್ನು ಬಳಸುತ್ತಾರೆ.
+ಮೆದುಳಿನ ಕಾಯಿಲೆ +ಹೊಟ್ಟೆನೋವು +ಬಾಯಿ ಹುಣ್ಣು +ತಲೆಸುತ್ತುವಿಕೆ +ಅಜೀರ್ಣ +ಅತಿ ಬೆವರು ವಸರುವಿಕೆ +ಆಸನಾಗ್ರದಲ್ಲಿ ಆಗುವ ಉರಿ +ಬಾಯಿ, ಮೂಗು, ಗುದದ್ವಾರದಿಂದ ಹೊರಬೀಳುವ ರಕ್ತದ ತಡೆಗೆ + ' ಸಿ ' ಜೀವಸ್ತ್ವದ ಕೊರತೆ ನಿವಾರಣೆಗೆ + ಕಣ್ಣಿನ ದೋಷ + ದೇಹ ಮನಸ್ಸಿನ ಚೈತನ್ಯ ವೃದ್ಧಿಗೆ +ಸಿಹಿಮೂತ್ರ + ಮಧುಮೇಹ + ಕೂದಲು ಉದುರುವಿಕೆ ಮತ್ತು ಕೇಶದ ಬೆಳವಣಿಗೆ +ನೆಗಡಿ, ಉಬ್ಬಸ, ಕ್ಷಯ, ಜ್ಞಾಪಕ ಶಕ್ತಿ ಹೀನತೆ, ಅಕಾಲ ಮುಪ್ಪು ನಿವಾರಣೆ ಹೀಗೆ ಮನುಷ್ಯನ ಅನೇಕ ಮಾನಸಿಕ ಮತ್ತು ದೈಹಿಕ ರೋಗಗಳನ್ನು ನಿವಾರಣೆಯಲ್ಲಿ ನೆಲ್ಲಿ ಫೆಲವನ್ನು ಉಪಯೋಗಿಸಲಾಗುತ್ತದೆ.
ತಾರೀಖು : 21 - 8 - 2016.

Saturday 13 August 2016

%%%% ರೈತರ ಆತ್ಮಹತ್ಯೆ %%%%


~~~~~~ ಎಂ. ಗಣಪತಿ. ಕಾನುಗೋಡು.
ರೈತನ ಸಾಲದ ಉಭ್ರಮೆ ಎಷ್ಟಿದೆಯೆಂದರೆ ತನ್ನ ಮೂಲ ಕಸುಬಿನಿಂದ ಹೊರಟು ಬೇರೆ ಉದ್ಯೋಗವನ್ನು ಹಿಡಿಯಲು ಅವನಲ್ಲಿ ಅದಕ್ಕೆ ಬೇಕಾದ ಪರಿಣಿತಿ, ಕಾಸು, ವಾತಾವರಣದ ಅನುಕೂಲತೆ ಯಾವುದೂ ಆತನಲ್ಲಿ ಇಲ್ಲ. ಅಲ್ಲದೆ ಈಗಾಗಲೇ ಅವನು ತನ್ನ ಆರ್ಥಿಕ ಅಧೋಗತಿಯಿಂದಾಗಿ ಬಸವಳಿದಿದ್ದಾನೆ, ಯಾವುದಕ್ಕೂ ಧೈರ್ಯ ಕುಂದಿದೆ. ಇನ್ನು ಸಂಘಟಿತನಾಗಿ ಸರ್ಕಾರದ ನೆರವನ್ನು ಕೋರಬೇಕು. ತನ್ನ ವೈಯುಕ್ತಿಕ ಬದುಕಿನ ಹತೋಟಿಯೇ ಅವನಲ್ಲಿರದಿರುವಾಗ ಅವನು ಇನ್ನು ಸಾಂಘಿಕ ನೆಲೆಗೆ ಸಾಗುವುದು ಹೇಗೆ ?.
ಈಗಾಗಲೇ ರೈತ ಸಂಘಟನೆಗಳಿವೆ. ಆದರೆ ಅವೂ ರಾಜಕೀಯಪ್ರೇರಿತ. ಯಾವುದೊ ಕೆಲವು ಮಂದಿಯ ತೆವಲಿಗೆ ರೈತರ ಹೆಸರಿನಲ್ಲಿ ಮಾಡಿಕೊಂಡ ರೈತ ಸಂಘಗಳವು. ಮತ್ತೆ ಆ ಸಂಘಟನೆಗಳಲ್ಲೇ ಒಡಕುಂಟಾಗಿ ಬೇರೆ ಬೇರೆ ಬಣಗಳಾಗಿವೆ. ತಮ್ಮ ಘಾಯವನ್ನೇ ಮಾಗಿಸಿಕೊಳ್ಳಲು ಅವರಿಗಾಗದಾದಾಗ ಇನ್ನು ನಿಜವಾಗಿ ರೈತರ ಘಾಯವನ್ನು ವಾಸಿಮಾಡುವ ಅವರ ಘೋಷಣೆ ಕೇವಲ ಗಾಳಿಯ ಮೇಲಿನ ಗುದ್ದಷ್ಟೇ.
ರೈತ ತಿಳಿವಳಿಕೆ ಇಲ್ಲದವನೇನೂ ಅಲ್ಲ. ತಾನು ಶೂನ್ಯ ಬಿಂದುವಿನವರೆಗೆ ಬರುವವರೆಗೂ ಯಾವುದಾದರೂ ಒಂದು ಮಾರ್ಗದಲ್ಲಿ ಬದುಕಲು ಸಾಧ್ಯವೇನೋ ಎಂದು ಪ್ರಯತ್ನಿಸ ಹಣುಕಿದವನು. ಸರ್ಕಾರ ಕೂಲಿಕಾರರಿಗೆ ಬೇಕಾಬಿಟ್ಟಿ ಪುಕ್ಕಟ್ಟೆ ಸವಲತ್ತನ್ನು ಹೇರಳವಾಗಿ ಕೊಟ್ಟು ಅವರನ್ನು ಇನ್ನೂ ಸೋಮಾರಿಗಳಾಗಿ ಮಾಡಿ ಅವರ ದುಡಿಯುವ ಶಕ್ತಿಯನ್ನು ಉಡುಗಿಸುವುದಕ್ಕಿಂತ ದುಡಿದು ದೇಶಕ್ಕೆ ಅನ್ನ ಕೊಡುವ ರೈತನಿಗೆ ಅವನು ಬದುಕಿ ಉಳಿಯುವ ಹಾಗೆ ವಾಸ್ತವಿಕ ಸವಲತ್ತುಗಳನ್ನುಕೊಡಬೇಕು. ಹಾಗೆಂದು ಸರ್ಕಾರ ಈಗ ಮಾಡುತ್ತಿರುವಂತೆ ರೈತ ತೆಗೆದುಕೊಂಡ ಸಾಲದಲ್ಲಿ 25 % ಅಸಲಿನ ಹಣವನ್ನು ವಿನಾಯಿತಿ ಮಾಡುವುದು ಸಲ್ಲದು. ಅದರ ಬದಲಿಗೆ ಆತನಿಗೆ ಕೃಷಿ ಸಂಬಂಧಿತ ಕೈಗಾರಿಕೆ, ಗ್ರಾಮೀಣ ಕೈಗಾರಿಕೆ, ಕೃಷಿಯನ್ನೇ ಇನ್ನೂ ಅಭಿವೃದ್ಧಿ ಪಡಿಸುವಿಕೆ ಮುಂತಾದ ಉದ್ದೇಶಗಳಿಗೆ ಬಡ್ಡಿರಹಿತವಾಗಿ , ಅತಿ ಸುಲಭವಾಗಿ, ಹೇರಳವಾಗಿ ಸಾಲವನ್ನು ಕೊಡಬೇಕು. ಅವನು ಬೆಳೆದ ಬೆಳೆಗಳಿಗೆ ಸಹಾಯಧನವನ್ನು ಕೊಡಬೇಕು. ಅಂದರೆ ಒಂದು ಕ್ವಿಂಟಾಲ್ ಬತ್ತಕ್ಕೆ ನಿಜವಾಗಿ ಹೇಳಬೇಕೆಂದರೆ ಪ್ರಸ್ತುತದಲ್ಲಿ ಒಂದು ಸಾವಿರದ ಐದು ನೂರು ರುಪಾಯಿ ಖರ್ಚಾಗುತ್ತದೆ. ಅದರಮೇಲೆ ರೈತನಿಗೆ ಲಾಭ ಉಳಿಯಬೇಕೆಂದಿದ್ದರೆ ಅವನು ಅದನ್ನು ಒಂದು ಕ್ವಿಂಟಲಿಗೆ ಕನಿಷ್ಠ ಎರಡು ಸಾವಿರ ರೂಪಾಯಿಗಳಿಗೆ ಮಾರಬೇಕು. ಆದರೆ ಆ ಧಾರಣೆ ಈಗ ಮಾರುಕಟ್ಟೆಯಲ್ಲಿ ದೊರಕುತ್ತಿಲ್ಲ. ಅಥವ ಹಾಗೆ ಮಾಡಿದರೆ ಅಕ್ಕಿಯನ್ನು ಬಳಕೆಮಾಡುವ ಗ್ರಾಹಕನಿಗೆ ತೊಂದರೆಯಾಗುತ್ತದೆ. ಅದೂ ಒಂದು ಕಷ್ಟವೇ. ಜನಸಾಮಾನ್ಯ ಗ್ರಾಹಕರಿಗೆ ಖಂಡಿತಾ ತೊಂದರೆ ಆಗಬಾರದು. ಆದ್ದರಿಂದ ಆ ವ್ಯತ್ಯಾಸದ ಮೊಬಲಗನ್ನು ಸರ್ಕಾರ ರೈತನಿಗೆ ಭರಿಸಬೇಕು. ಆಗ ಮಾತ್ರ ರೈತ ತನ್ನ ಉದ್ಯೋಗದಲ್ಲಿ ಉಳಿಯಲು ಸಾದ್ಯ. ಇಲ್ಲದಿದ್ದರೆ ಅವನೂ ತನ್ನ ಜೀವನೋಪಾಯಕ್ಕೆ ಬೇರೆ ದಾರಿಯನ್ನು ಅರಸಿ ನಗರವನ್ನು ಸೇರಬೇಕಾಗುತ್ತದೆ. ಹೀಗೆ ಗ್ರಾಮ ಭಾರತದ ಜನರೆಲ್ಲಾ ಶಹರವನ್ನು ಸೇರಿದರೆ ಆಗ ನಗರ ಭಾರತದ ಜನಜೀವನ ಒತ್ತಡವನ್ನು, ಅನೇಕ ಸಮಸ್ಯೆಗಳನ್ನು ನಿರ್ಮಾಣ ಮಾಡಿದತಾಗುತ್ತದೆ. ಈಗ ಆಗುತ್ತಿರುವುದು ಇದೇ. ಈಗ ಮಾಡುತ್ತಿರುವಂತೆ ಸಹಾಯಧನದಲ್ಲಿ ಕೃಷಿ ಯಂತ್ರಗಳು, ಗೊಬ್ಬರಗಳು, ಕೃಷಿ ಉಪಕರಣಗಳು ಇತ್ಯಾದಿ ಸವಲತ್ತುಗಳು ಸರ್ಕಾರದಿಂದ ಪೂರೈಕೆಯಾಗುತ್ತಿರುವ ಕ್ರಮ ಸರಿ ಇಲ್ಲ. ಏಕೆಂದರೆ ಹಾಗೆ ಪೂರೈಕೆಯಾಗುತ್ತಿರುವ ವಸ್ತುಗಳು ನಿಜವಾಗಿ ರೈತನಿಗೆ ಸಹಾಯಧನದಲ್ಲಿ ದೊರಕುತ್ತಿಲ್ಲ. ಹಾಗೆ ಮಾಡುವಲ್ಲಿ ಸರ್ಕಾರ ಅವುಗಳ ಮೂಲ ಬೆಲೆಯನ್ನೇ ಏರಿಸಿ ರೈತನಿಗೆ ಸಹಾಯಧನ ಕೊಟ್ಟ ಕುಹಕವನ್ನು ಮಾಡುತ್ತಿದೆ. ಅಂದರೆ ಆ ವಸ್ತುಗಳ ತಯಾರಕರಿಗೆ ಕಡಿಮೆ ಬೆಲೆಯನ್ನು ಕೊಟ್ಟು ಅವರಿಂದ ಹೆಚ್ಚು ಬೆಲೆಯನ್ನು ಅವುಗಳಿಗೆ ಕಟ್ಟಿಸಿದಂತೆ ದಾಖಲೆಯನ್ನು ಸಿದ್ಧಗೊಳಿಸಿಕೊಂಡಿರುತ್ತದೆ. ಆ ಬೆಲೆಯ ಮೊಬಲಗಿನ ವ್ಯತ್ಯಾಸವನ್ನು ಸರ್ಕಾರ ರೈತನಿಗೆ ಸಹಾಯಧನವೆಂದು ಘೋಷಿಸುತ್ತದೆ. ಆ ವಸ್ತುವಿನ ಹೆಚ್ಹಿಸಿದ ಬೆಲೆಯ ಮೊಬಲಗನ್ನು ಯಾರು ಯಾರೋ ತಿನ್ನುತ್ತಾರೆ. ಆದರೆ ಸಹಾಯಧನದ ಮೊಬಲಗನ್ನು ಸರ್ಕಾರದ ಖಜಾನೆಯಿಂದ ಭರಿಸಲಾಗುತ್ತದೆ. ಇದು ಸರ್ಕಾರದಿಂದ ರೈತರಿಗೆ ಆಗುತ್ತಿರುವ ಒಂದು ವಂಚನೆ. ಇಂಥಹ ಪ್ರಾಯೋಗಿಕ ಸವಲತ್ತುಗಳನ್ನು ಕೊಡುವುದನ್ನು ಬಿಟ್ಟು ಸರ್ಕಾರ ಕೇವಲ ಬಾಯೋಪಚಾರ ಮಾಡುತ್ತಿದೆ.

ರೈತ ಎಲ್ಲವೂ ನಿಷ್ಫಲವಾದಾಗ ಆತ ಉದ್ಯೋಗವನ್ನು ಅರಸಿ ಅನಿವಾರ್ಯವಾಗಿ ನಗರಕ್ಕೆ ಗುಳೇ ಹೋಗಬೇಕಾಗುತ್ತದೆ. ಅದು ಸಾಧ್ಯವಾಗದಿದ್ದಾಗ ಅವನು ಅಸಹಾಯಕನಾಗಿ ಅವನ ಧೃಷ್ಟಿಯಲ್ಲಿ ಅರಸಲೇ ಬೇಕಾದ ಅತಿ ಕೊನೆಯ ದಾರಿ ಆತ್ಮಹತ್ಯೆ.

Wednesday 27 July 2016

ಸ್ನೇಹ ಸಂವಾದದಲ್ಲಿ ಬರೆದ ದೇವನ ಲಕ್ಷಣಗಳೇನು? ' ಅಲ್ಲಾಹು 'ವಿನ ಕುರಿತು [Posted on 24 -7 - 2014] ಬರೆದ ಬರಹಕ್ಕೆ ಒಂದು ಪ್ರತಿಕ್ರಿಯೆ]

 ಸ್ನೇಹ ಸಂವಾದದಲ್ಲಿ ಬರೆದ ದೇವನ ಲಕ್ಷಣಗಳೇನು? ' ಅಲ್ಲಾಹು 'ವಿನ ಕುರಿತು [Posted on 24 -7 - 2014] ಬರೆದ ಬರಹಕ್ಕೆ ಒಂದು ಪ್ರತಿಕ್ರಿಯೆ] 

------ ಎಂ. ಗಣಪತಿ ಕಾನುಗೋಡು.


ಹಿಂದೂಧರ್ಮದ ಪ್ರಕಾರವೂ ಸೃಷ್ಟಿಕರ್ತನು ಒಬ್ಬನೇ. ಅವನೇ " ಪರಮೇಶ್ವರ.". ಪರಮ ಎಂದರೆ ಸುಪ್ರೀಂ. ಈಶ್ವರ ಎಂದರೆ ಸರ್ವಶಕ್ತ. [Super human power or atimaanusha Shakti]. ಯಾರು ನಶ್ವರ ಅಲ್ಲವೋ [ಅಳಿದು ಹೋಗುವುದಿಲ್ಲವೋ] ಅವನು ಈಶ್ವರ. ಅವನು "ನಿರಾಕಾರ ನಿರ್ಗುಣ ಪರಮೇಶ್ವರ". ಅಂದರೆ ಹಿಂದೂಧರ್ಮದ ದೇವರು ಯಾವುದೇ ಆಕಾರವನ್ನು ಹೊಂದಿರದವನು. ಅವನಿಗೆ ಮನುಷ್ಯರಿಗೆ ಇರುವಂಥಹ ಯಾವುದೇ ಗುಣಗಳಿಲ್ಲ. ಪರಮೇಶ್ವರನು ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿ. [Omniscient , Omnipotent , Omnipresent ]. ಅವನು ಅನಾದಿ ಮತ್ತು ಅನಂತ್ಯ. ಅವನಿಗೆ ಹುಟ್ಟು ಮತ್ತು ಸಾವುಗಳಿಲ್ಲ. ಅವನನ್ನೇ ಇಸ್ಲಾಂ ಧರ್ಮದವರು " ಅಲ್ಲಾಹು " ಎಂದು ಕರೆಯುತ್ತಾರೆ. ಏಕೆಂದರೆ ಸ್ನೇಹ ಸಂವಾದದಲ್ಲಿ 'ನಮ್ಮ ಮಿತ್ರ' ರವರು ಬರೆದ "ದೇವನ ಗುಣಲಕ್ಷಣಗಳೇನು?" ಎಂಬ ವಿವರಣೆಯಲ್ಲಿ ಬರೆದ ಎಲ್ಲ ಲಕ್ಷಣಗಳೂ 'ಪರಮೇಶ್ವರ' ನದೇ ಆಗಿದೆ. ಅವರು ಅಂದುಕೊಂಡಂತೆ ಅದು 'ಅಲ್ಲಾಹು'ಗೆ ಮಾತ್ರ ಅಲ್ಲ. ಒಟ್ಟಾರೆ ದೇವರಿಗೆ ಇರುವ ಲಕ್ಷಣಗಳು ಅವು ಎಂಬುದನ್ನು ಅವರು ತಿಳಿದುಕೊಳ್ಳಬೇಕು. ವಿಶ್ವದಾದ್ಯಂತ ಇರುವ ದೇವರು ಒಬ್ಬನೇ. ದೇವನೊಬ್ಬ ನಾಮ ಹಲವು ಎನ್ನುವ ಮಾತನ್ನು ಅರ್ಥ ಮಾಡಿಕೊಂಡರೆ ಮತಾಂಧತೆ ಮಾಯವಾಗುತ್ತದೆ. ಇಂದಿನ ಅಧುನಿಕ ಯಾಂತ್ರಿಕ ಸಂಪರ್ಕಸಾಧನ ಹಲವು ಸಾವಿರ ವರ್ಷಗಳ ಹಿಂದೆಯೇ ಇದ್ದಿದ್ದರೆ ಬಹುಶ್ಯಃ ವಿಶ್ವದಾದ್ಯಂತ ಸಮಗ್ರವಾಗಿ ಒಂದೇ ಧರ್ಮವಿರುತ್ತಿತ್ತು. ಏಕೆಂದರೆ ಎಲ್ಲಾ ಧರ್ಮವು ಹೇಳುವುದು ಒಂದನ್ನೇ. ಭಾಷೆ ಮತ್ತು ವಿಷಯ ಪ್ರಸ್ತಾರಕ್ಕಾಗಿ ತೆಗೆದುಕೊಂಡನ್ಥಹ ಉದಾಹರಣೆಗಳು ಬೇರೆ ಬೇರೆ ಅಷ್ಟೇ. ಆಧುನಿಕ ಸಂಪರ್ಕವಿಲ್ಲದ ಕಾಲದಲ್ಲಿ ಆಯಾ ದೇಶದ ಮತ್ತು ಜನಾಂಗದ ಭಾಷೆ ಮತ್ತು ಸ್ಥಾನಿಕ ವಿಷಯಗಳನ್ನು ಸಂಪರ್ಕ ಮಾಧ್ಯಮವನ್ನಾಗಿ ಬಳಸಿಕೊಂಡದ್ದು ತಪ್ಪಲ್ಲ. ಇದಕ್ಕೆ ಹಿಂದೂ ಧರ್ಮವೂ ಹೊರತಲ್ಲ. ಅದಕ್ಕಾಗಿಯೆ ವಿಶ್ವದ ಯಾವುದೇ ಧರ್ಮವೂ ಹಿಂದೂ ಧರ್ಮಕ್ಕೆ ಹೊರತಲ್ಲ. 
ಸಾಮಾನ್ಯ ಮನುಷ್ಯನು ಅಶಕ್ತ. ಅವನಿಗೆ ಮೂಲ ಅರ್ಥದಲ್ಲಿ ದೇವರನ್ನು ಗೃಹಿಸುವ ಶಕ್ತಿ ಇಲ್ಲ. ಕಾರಣಕ್ಕಾಗಿ ಕಾಲಾನುಕ್ರಮದಲ್ಲಿ ಹಿಂದೂ ಧರ್ಮದ ಸಂತರು. ದಾರ್ಶನಿಕರು [ಇಸ್ಲಾಂ ಧರ್ಮದಲ್ಲಿ ಪ್ರವಾದಿಗಳಿದ್ದಂತೆ] ಸಾಮಾನ್ಯ ಜನರಿಗೆ ದೇವರನ್ನು ಸುಲಭವಾಗಿ ಕಂಡುಕೊಳ್ಳುವ ಮಾರ್ಗಗಳನ್ನು ತೋರಿಸಿದ್ದಾರೆ. ನಿರಾಕಾರ ಸ್ವರೂಪದಲ್ಲಿ ದೇವರನ್ನು ಕಾಣದ ಅರಿತುಕೊಳ್ಳುವ ಶಕ್ತಿಯಿಲ್ಲದವನಿಗೆ ಹಲವು ಆಕಾರಗಳ ಕಲ್ಪನೆಯಿಂದ ಅವನನ್ನು ಕಂಡುಕೊಳ್ಳುವ ಮಾರ್ಗವನ್ನು ತೋರಿಸಿದರು. ಅವನ ನಿರ್ಗುಣ ಸ್ವಭಾವದ ಸ್ವರೂಪದಲ್ಲಿ ದೇವರನ್ನು ಅರಿತುಕೊಳ್ಳಲಾರದವರಿಗೆ ಸರ್ವಗುಣಗಳ ಕಲ್ಪನೆಯಲ್ಲಿ ಅವನನ್ನು ಕಂಡುಕೊಳ್ಳುವ ಮಾರ್ಗವನ್ನು ತೋರಿಸಿದರು. ಕಾರಣಕ್ಕಾಗಿ ವಿಶ್ವದ ಅಂತಹ ಸಾಮಾನ್ಯ ಜನರಿಗಾಗಿ ಅವರ ಮಟ್ಟಕ್ಕೆ ಹೊಂದುವ ಹಾಗೆ ದೇವರ ರೂಪಗಳನ್ನು ಮತ್ತು ಕಥೆಗಳನ್ನು ಹೆಣೆದರು. ಆದರೆ ಅವೇ ದೇವರ ಸ್ವರೂಪ ಮತ್ತು ಗುಣಗಳಲ್ಲ. ಮೂಲಕ ನಿರಾಕಾರ, ನಿರ್ಗುಣ ಪರಮೇಶ್ವರನನ್ನು ಅವರ ಅಶಕ್ತ ಮನಸ್ಸಿಗೆ ನಾಟಿಸುವುದು ಇದರ ಮೂಲ ಉದ್ದೇಶ. ಘಟನೆಯಲ್ಲಿ ಹಲವು ಸಂತರು ಮತ್ತು ದಾರ್ಶನಿಕರು ಬೇರೆಬೇರೆ ಮಾರ್ಗಗಳನ್ನು ತೋರಿಸಿದರು. ಮಾರ್ಗಗಳು ಬೇರೆ ಬೇರೆಯೇ ವಿನಃ ಮೂಲ ಗುರಿ ಒಂದೇ. ಅದನ್ನೇ ಹಿಂದೂ ಧರ್ಮದಲ್ಲಿ ಬೇರೆ ಬೇರೆ ಪಂಗಡಗಳು ಇವೆಯೆಂದು ವಾಸ್ತವಿಕತೆಯ ಅರಿವಿಲ್ಲದ ಜನ ತಪ್ಪು ಗೃಹಿಸಿದ್ದಾರೆ. ಅಂತಹ ಪಂಗಡಗಳು, ಧರ್ಮದ ಉಪಶಾಖೆಗಳು ಇಸ್ಲಾಂ ಧರ್ಮವನ್ನೊಳಗೊಂಡು ವಿಶ್ವದ ಎಲ್ಲಾ ಧರ್ಮಗಳಲ್ಲೂ ಇವೆ. ಆದರೆ ದೇವರನ್ನು ಮೂಲ ಸ್ವರೂಪದಲ್ಲಿ ಕಂಡುಕೊಳ್ಳುವ ಸಾಮರ್ಥ್ಯವಿದ್ದವರು ಅವನನ್ನು ನಿರಾಕಾರ,ನಿರ್ಗುಣ ಪರಮೇಶ್ವರನನ್ನಾಗಿಯೇ ಗೃಹಿಸಿಕೊಳ್ಳುತ್ತಾರೆ. ಇದು ಹಿಂದೂ ಧರ್ಮದಲ್ಲಿ ಹಿಂದೆ,ಇಂದು ಮತ್ತು ಮುಂದೂ ಇರುವಂಥಹ ಪ್ರಕ್ರಿಯೆ. ಆದ್ದರಿಂದ ಹಿಂದೂಧರ್ಮ ವಿಶ್ವಧರ್ಮವಾಗಿದೆ. [ ವಿವರಣೆಯನ್ನು ಬರೆಯುವ ಹೊತ್ತಿಗೆ ಸ್ನೇಹ ಸಂವಾದದಲ್ಲಿ ಲೇಖನವು ಕಂಡುಬರಲಿಲ್ಲವಾದ್ದರಿಂದ ಇದನ್ನು ಇಲ್ಲಿ ಪ್ರಕಟಿಸಲಾಗಿದೆ]