Tuesday 18 August 2020

$$$$ ಶಿಶುವಿಗೆ ಕರ್ಣವೇಧದ [ ಕಿವಿಯನ್ನು ಚುಚ್ಚುವ ] ಕಾಲ $$$$

 

# ಶಿಶುವಿನ ಜನ್ಮ ದಿನದಿಂದ ಹತ್ತು, ಹನ್ನೆರಡು ಅಥವಾ ಹದಿನಾರನೆಯ ದಿನ ----ಬೃಹಸ್ಪತಿ

# ಶಿಶು ಹುಟ್ಟಿದ ಆರನೆಯ, ಏಳನೆಯ , ಎಂಟನೆಯ ಅಥವಾ ಹನ್ನೆರಡನೆಯ ತಿಂಗಳು ---- ಗರ್ಗ

# ಶಿಶುವು ತಾಯಿಯ ಮಡಿಲಲ್ಲಿಯೇ ಅಧಿಕ ಕಾಲವಿರುವಂತಿರುವ ಸಮಯ ಮತ್ತು ಹಲ್ಲು ಹುಟ್ಟುವ ಮುಂಚೆ --- ಶ್ರೀಪತಿ

# ಶಿಶುವಿನ ಆರನೆಯ ಅಥವಾ ಏಳನೆಯ ತಿಂಗಳು --- ಸುಶ್ರುತ

# ಶಿಶುವಿನ ಮೂರನೇ ಅಥವಾ ಐದನೆಯ ವರ್ಷ -- ಕಾತ್ಯಾಯನ ಸೂತ್ರ

# ಶಿಶುವು ಜನಿಸಿದ ಹನ್ನೆರಡು ಅಥವಾ ಹದಿನಾರನೆಯ ದಿಂದ ಹಗಲಿನಲ್ಲಿ ಮಾಡಬಹುದು. ಈ ಎರಡು ದಿನಕ್ಕೆ ತಾರಾಬಲವನ್ನು ನೋಡಬೇಕಾದುದಿಲ್ಲ. ಇದಾಗದಿದ್ದರೆ ಶಿಶುವು ಹುಟ್ಟಿದ ಆರು, ಏಳು ಅಥವಾ ಎಂಟನೆಯ ತಿಂಗಳಿನಲ್ಲಿ ಶಿಶುವಿಗೆ ತಾರಾಬಲವಿರುವ ದಿನ ಕಿವಿ ಚುಚ್ಚಬಹುದು --- ಜ್ಯೋತಿಷ್ಯಶಾಸ್ತ್ರ

ಹೀಗೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯ ಕಾಲವನ್ನು ಹೇಳಿದ್ದಾರೆ. ಒಟ್ಟಿನಲ್ಲಿ ಶಿಶುವಿನ ಕಿವಿಯು ಬಲಿಯದೆ ಎಳೆಯದಿದ್ದಾಗ ಇದ್ದಾಗ ಕಿವಿ ಚುಚ್ಚುವುದು ಬಹಳ ಸುಲಭ.

ಕಿವಿಯಲ್ಲಿ ಶಂಖುರೇಖೆ ಮತ್ತು ಶಿರೋರೇಖೆ ಎನ್ನುವ ಎರಡು ನರಗಳಿರುತ್ತವೆ. ಅವಕ್ಕೂ ಮೂತ್ರಪಿಂಡಕ್ಕೂ ಸಂಬಂಧವಿರುತ್ತದೆ. ಆ ಎರಡು ನರಗಳು ಒಂದಕ್ಕೊಂದು ತಗುಲಿಕೊಂಡರೆ ಹರ್ನಿಯಾ ಬರುತ್ತದೆ. ಆದ್ದರಿಂದ ಆ ಎರಡು ನರಗಳು ಸೇರಿಕೊಳ್ಳದ ಹಾಗೆ ಅವುಗಳನ್ನು ಗುರುತಿಸಿ ಅವುಗಳ ನಡುವೆ ಕರ್ಣವೇಧಮಾಡುವ ಸಾಮರ್ಥ್ಯವುಳ್ಳ [ ಕಿವಿ ಚುಚ್ಚಬಲ್ಲ ] ವೈದ್ಯನೇ / ವ್ಯಕ್ತಿಯೇ ಕಿವಿಯನ್ನು ಚುಚ್ಚಬೇಕು ಎಂದು ಸುಶ್ರುತರು ಹೇಳಿದ್ದಾರೆ. ಬಂಗಾರದ ಸೂಜಿಯನ್ನು ಮಾಡುವ ಅಕ್ಕಸಾಲಿಗನು ಚುಚ್ಚಬಹುದು ಎಂದು ಶ್ರೀಪತಿಯೆಂಬ ಪ್ರಯೋಗಕಾರರು ಹೇಳಿದ್ದಾರೆ

ಗ್ರಂಥಋಣ : ಸಂಸ್ಕಾರ ಮಹೋದಧಿಹಿ ~~ ಡಾ|| ಎ.ಅನಂತನರಸಿಂಹಾಚಾರ್

$$$ ದರ್ಭ ಸಂಗ್ರಹಣ ಕಾಲ $$$


# ದರ್ಭೆಯನ್ನು ಕತ್ತರಿಸಲು ಬೇರೆ ಬೇರೆ ಸಮಯವನ್ನು ಹೇಳಲಾಗಿದೆ. ಆಯಾ ಸಮಯದಲ್ಲಿ ಕತ್ತರಿಸಿದ ದರ್ಭೆಗೆ ಆಯಾ ಮಿತ ಶಕ್ತಿ ಇರುತ್ತದೆ.
# ಸಾಮಾನ್ಯವಾಗಿ ಶ್ರಾವಣ ಬಹುಳ ಅಮಾವಾಸ್ಯೆಯಂದು ಕತ್ತರಿಸಿ ತರಬೇಕು. ಅಂದು ಕತ್ತರಿಸಿ ತಂದ ದರ್ಭೆಗೆ ಹಳತಾಗುವಿಕೆ ಎನ್ನುವುದಿಲ್ಲ. ಇಡೀ ವರ್ಷಕ್ಕೆ ಅದನ್ನು ಬಳಸಬಹುದು. ಆ ವರ್ಷದಲ್ಲಿ ಖರ್ಚಾಗದೆ ಉಳಿದರೆ ಅದನ್ನು ಮುಂದಿನ ವರ್ಷವೂ ಬಳಸಬಹುದು.
# ಮಹಾಲಯ ಅಮಾವಾಸ್ಯೆಯಂದು ದರ್ಭೆಯನ್ನು ಕತ್ತರಿಸಿ ತರಬಹುದು. ಆದರೆ ಆರು ತಿಂಗಳು ಮಾತ್ರ ಅದರ ಪಾವಿತ್ರ್ಯತೆ ಇರುತ್ತದೆ.
# ಇತರ ಅಮಾವಾಸ್ಯೆ ದಿನಗಳಲ್ಲಿಯೂ ಕತ್ತರಿಸಿ ತರಬಹುದು. ಆದರೆ ಅದರ ಶಕ್ತಿ ಒಂದು ತಿಂಗಳು ಮಾತ್ರ ಇರುತ್ತದೆ.
# ಯಾವುದೇ ಹುಣ್ಣಿಮೆಯಂದು ದರ್ಭೆಯನ್ನು ಕತ್ತರಿಸಿ ತರಬಹುದು. ಆದರೆ ಅದಕ್ಕೆ ಹದಿನೈದು ದಿನ ಶಕ್ತಿ ಇರುತ್ತದೆ.
# ಭಾನುವಾರ ತಂದರೆ ಒಂದು ವಾರ ಶಕ್ತಿ ಇರುತ್ತದೆ.
# ಉಳಿದ ದಿನಗಳಲ್ಲಿ ತಂದರೆ ಆ ದರ್ಭೆಗೆ ಒಂದು ದಿನ ಮಾತ್ರ ಶಕ್ತಿ ಇರುತ್ತದೆ.
# ಯಾವುದೇ ದಿನ ಕತ್ತರಿಸಿ ತಂದ ದರ್ಭೆಯಾದರೂ ಅದನ್ನು ಶ್ರಾವಣ ಬಹುಳ ಅಮಾವಾಸ್ಯೆಯಂದು ತಂದ ದರ್ಭೆಯೊಂದಿಗೆ ಸೇರಿಸಿದರೆ ಅದಕ್ಕೆ ಶ್ರಾವಣ ಬಹುಳ ಅಮಾವಾಸ್ಯೆಯಂದು ತಂದ ದರ್ಭೆಗೆ ಇರುವಷ್ಟೇ ಪಾವಿತ್ರ್ಯತೆ ದೊರಕುತ್ತದೆ. ಅದರ ಹಾಗೆ ಯಾವಾಗ ಬೇಕಾದರೂ ಬಳಸಬಹುದು.
~~ ಗ್ರಂಥಋಣ : ಸಂಸ್ಕಾರ ಮಹೋದಧಿ -- ಸಂ : ಡಾ| ಎ. ಅನಂತನರಸಿಂಹಾಚಾರ್

## ದರ್ಭೆಯಲ್ಲಿ ಭಿನ್ನತೆಗಳು ##


$$ ದರ್ಭೆಯಲ್ಲಿ ಏಳು ಬಗೆಗಳಿವೆ. ವಿಶ್ವಾಮಿತ್ರ, ಕುಶ, ಕಾಶ, ಭತ್ತ, ನಸ, ವಯ.ಮತ್ತು ದೂರ್ವಾ [ ಗರಿಕೆ ಹುಲ್ಲು ]. ರುದ್ರ ಸಂಬಂಧವಾದ ಮತ್ತು ಆಭಿಚಾರಕ ಕೃತ್ಯಗಳಲ್ಲಿ 'ಕಾಶ' ಎನ್ನುವ ದರ್ಭೆಯನ್ನು ಬಳಸಬೇಕು. ಬ್ರಾಹ್ಮಣ ಸಂಸ್ಕಾರಗಳಾದ ಶ್ರೌತ ಸ್ಮಾರ್ತ ಕರ್ಮಗಳಲ್ಲಿ 'ಕುಶ' ದರ್ಭೆಯನ್ನು ಬಳಸಬೇಕು. ಉಪಾಕರ್ಮವೇ ಮುಂತಾದ ಋಷಿ ಪೂಜಾ ಕಾರ್ಯಗಳಲ್ಲಿ 'ದೂರ್ವಾ' ದರ್ಭೆಯನ್ನು ಬಳಸಬೇಕು. ಸುದರ್ಶನ ಹೋಮವೇ ಮೊದಲಾದ ವೈಷ್ಣವ ಕಾರ್ಯದಲ್ಲಿ 'ವಿಶ್ವಾಮಿತ್ರ' ದರ್ಭೆಯನ್ನು ಬಳಸಬೇಕು.
ಆಯಾ ಕಾರ್ಯಗಳಿಗೆ ಹೇಳಿರುವ ನಿರ್ಧಿಷ್ಟ ದರ್ಭೆಗಳು ಸಿಗದಿದ್ದ ಅನಿವಾರ್ಯ ಸನ್ನಿವೇಶದಲ್ಲಿ ಈ ಏಳು ವಿಧ ದರ್ಭೆಗಳಲ್ಲಿ ಯಾವುದೇ ದರ್ಭೆಯನ್ನಾದರೂ ಎಲ್ಲಾ ಕಾರ್ಯಗಳಲ್ಲಿಯೂ ಬಳಸಬಹುದು.
$$ ಮೇಲೆ ಹೇಳಿದ ದರ್ಭೆಗಳಲ್ಲಿ ಲಿಂಗ ಬೇಧವಿದೆ. ದರ್ಭೆಯ ತುದಿ ಭಾಗ [ ಅಗ್ರ ಭಾಗ ] ಸ್ಥೂಲವಾಗಿದ್ದರೆ ಅವು ಸ್ತ್ರೀ ದರ್ಭೆ. ಬುಡದಿಂದ ತುದಿಯವರೆಗೂ ಸಮವಾಗಿದ್ದರೆ ಪುರುಷ ದರ್ಭೆ. ಬುಡ [ ಮೂಲ ಭಾಗ ] ದಪ್ಪನಾಗಿದ್ದರೆ ನಪುಂಸಕ ದರ್ಭೆ.

ಚೌಲ, ಉಪನಯನ, ಉಪಾಕರ್ಮ, ವ್ರತ ಸಮಾವರ್ತನಾದಿ ಪುರುಷ ಸಂಸ್ಕಾರ ಕಾರ್ಯಕ್ರಮಗಳಲ್ಲಿ, ಗಂಡು ಮಗುವಿನ ಜಾತಕರ್ಮ ಇತ್ಯಾದಿ ಪುರುಷ ಸಂಸ್ಕಾರಗಳಲ್ಲಿ ಪುರುಷ ದರ್ಭೆಯನ್ನು ಬಳಸಬೇಕು. ಗರ್ಭಾದಾನ, ಪುಂಸುವನ, ಸೀಮಂತೋನ್ನಯನ ಕರ್ಮಗಳಲ್ಲಿ, ಹೆಣ್ಣು ಶಿಶುವಿನ ಜಾತಕರ್ಮ, ನಾಮಕರಣ, ಅನ್ನಪ್ರಾಶನ ಸಂಸ್ಕಾರಗಳಲ್ಲಿ ಸ್ತ್ರೀ ದರ್ಭೆಯನ್ನು ಬಳಸಬೇಕು. ಉಭಯ ಸಂಸ್ಕಾರ ರೂಪವಾದ ವಿವಾಹದಲ್ಲಿ ಸ್ತ್ರೀ ಪುರುಷ ಈ ಎರಡು ದರ್ಭೆಯನ್ನೂ ಬಳಸಬೇಕು. ಶಾಂತಿ ಕರ್ಮಗಳಲ್ಲಿ ನಪುಂಸಕ ದರ್ಭೆಯನ್ನು ಬಳಸಬೇಕು.
ಆಯಾ ಕಾರ್ಯಕ್ರಮದಲ್ಲಿ ನಿರ್ಧಿಷ್ಟ ಲಿಂಗಬೇಧದ ದರ್ಭೆಗಳು ಸಿಗದಿದ್ದರೆ ಅನಿವಾರ್ಯದಲ್ಲಿ ಎಲ್ಲಾ ಕಾರ್ಯಕ್ರಮದಲ್ಲಿ ಯಾವ ಲಿಂಗದ ದರ್ಭೆಯನ್ನಾದರೂ ಬಳಸಬಹುದು.

[ ಸೂಚನೆ :ಈ ವಿಚಾರಗಳನ್ನು ಎಲ್ಲರೂ ಅನುಸರಿಸುತ್ತಾರೆ ಎಂದು ಭಾವಿಸಿ ನಾನು ಇದನ್ನು ಬರೆಯುತ್ತಿಲ್ಲ. ಆದರೆ ವಿಷಯ ಹೀಗೂ ಇದೆ ಎಂದು ಎಲ್ಲರಿಗೂ ಗೊತ್ತಿರಲಿ ಎಂದು ಬರೆಯುತ್ತಿದ್ದೇನೆ. ]

ಗ್ರಂಥಋಣ : ಸಂಸ್ಕಾರ ಮಹೋದಧಿ -- ಡಾ| ಎ. ಅನಂತನರಸಿಂಹಾಚಾರ್

## ಯಯಾತಿ ##


ಯಯಾತಿಯು ಚಂದ್ರವಂಶದ ರಾಜ. ನಹುಷನ ಮಗ. ಈತನಿಗೆ ಇಬ್ಬರು ಪತ್ನಿಯರು. ಹಿರಿಯ ಪತ್ನಿಯು ಶುಕ್ರಾಚಾರ್ಯರ ಮಗಳಾದ ದೇವಯಾನಿ. ಎರಡನೇ ಪತ್ನಿಯು ರಾಕ್ಷಸ ರಾಜನಾದ ವೃಷಪರ್ವನ ಮಗಳು ಶರ್ಮಿಷ್ಠೆ. ಯಯಾತಿಯು ಈ ಇಬ್ಬರು ಪತ್ನಿಯರಲ್ಲದೆ ವಿಸ್ವಾಚಿ ಎನ್ನುವ ಅಪ್ಸರ ಸ್ತ್ರೀಯನ್ನೂ ತನ್ನ ಪತ್ನಿಯಂತೆ ರಮಿಸುತ್ತಾ ಇದ್ದ.
ದೇವಯಾನಿಗೆ ಯದು ಮತ್ತು ತುರ್ವಸು ಎನ್ನುವ ಒಬ್ಬರು ಮಕ್ಕಳು. ಶರ್ಮಿಷ್ಟೆಗೆ ದ್ರುಹ್ಯು, ಅನು ಮತ್ತು ಪೂರು ಎನ್ನುವ ಮೂರು ಗಂಡುಮಕ್ಕಳು.ಮಾಧವಿ ಎನ್ನುವ ಹೆಣ್ಣುಮಗಳು.

ಶುಕ್ರಾಚಾರ್ಯರ ಮಗಳು ದೇವಯಾನಿಯೂ ರಾಕ್ಷಸರಾಜನಾದ ವೃಷಪರ್ವನ ಮಗಳು ಶರ್ಮಿಷ್ಟೆಯು ತಮ್ಮ ವಿವಾಹ ಪೂರ್ವದಲ್ಲಿಯೇ ಪರಸ್ಪರ ಪರಿಚಯದವರಾಗಿದ್ದರು. ಒಂದು ದಿನ ಅವರಿಬ್ಬರೂ ತಮ್ಮ ಸೀರೆಗಳನ್ನು ಬಿಚ್ಚಿ ಕಾಡಿನಲ್ಲಿರುವ ಕೊಳದ ದಡದಲ್ಲಿಟ್ಟು ಜಲಕ್ರೀಡೆಯಾಡುತ್ತಿರುವಾಗ ಇಂದ್ರನು ಗಾಳಿಯ ರೂಪದಿಂದ ಬಂದು ಎಲ್ಲಾ ಸೀರೆಗಳನ್ನೂ ಒಟ್ಟು ಮಾಡಿದ. ಜಲಕ್ರೀಧೆಯಾಡಿ ಮೊದಲು ಮೇಲೆ ಬಂದ ಶರ್ಮಿಷ್ಟೆಯು ತಿಳಿಯದೆ ದೇವಯಾನಿಯ ಸೀರೆಯನ್ನುಟ್ಟಳು. ಇದರಿಂದ ದೇವಯಾನಿಗೆ ಕೋಪ ಬಂದು ಶರ್ಮಿಷ್ಟೆಯನ್ನು ರಾಕ್ಷಸ ಸ್ತ್ರೀಯೆಂದು ಜರೆಯುತ್ತಾಳೆ. ಕೋಪಗೊಂಡ ಶರ್ಮಿಷ್ಟೆಯು ದೇವಯಾನಿಯನ್ನು ಅಲ್ಲೇ ಇರುವ ಒಂದು ಬಾವಿಗೆ ನೂಕಿ ಹೋಗುತ್ತಾಳೆ. ಆಗಷ್ಟೇ ಬೇಟೆಗಾಗಿ ಅಲ್ಲಿಗೆ ಬಂದ ಯಯಾತಿಯು ಅದನ್ನು ಕಂಡು ದೇವಯಾನಿಯನ್ನು ಮೇಲಕ್ಕೆತ್ತಿ ಬದುಕಿಸಿದ. ತನ್ನನ್ನು ಬದುಕಿಸಿದ ಯಯಾತಿಯೇ ತನ್ನನ್ನು ಮದುವೆಯಾಗಬೇಕೆಂದು ಅವನಲ್ಲಿ ದೇವಯಾನಿಯು ಒತ್ತಾಯಿಸಿ ಅವನ ಒಪ್ಪಿಗೆ ಪಡೆದು ಮನೆಗೆ ಬಂದಳು. ಶರ್ಮಿಷ್ಟೆಯು ತನಗೆ ಮಾಡಿದ ಅಪರಾಧವನ್ನು ತನ್ನ ತಂದೆ ಶುಕ್ರಾಚಾರ್ಯರಿಗೆ ತಿಳಿಸಿದಳು. ಅವರು ಅದನ್ನು ವೃಷಪರ್ವರಾಜನಿಗೆ ತಿಳಿಸಿದರು. ವೃಷಪರ್ವನು ದೇವಯಾನಿಯ ಅಭಿಪ್ರಾಯದಂತೆ ತನ್ನ ಮಗಳನ್ನು ಅವಳು ಮಾಡಿದ ತಪ್ಪಿಗಾಗಿ ದೇವಯಾನಿಯ ದಾಸಿಯನ್ನಾಗಿ ಮಾಡಿದ. ಮುಂದೆ ದೇವಯಾನಿ ಮತ್ತು ಯಯಾತಿಯ ವಿವಾಹವಾಯಿತು. ದಾಸಿಯಾಗಿದ್ದ ಶರ್ಮಿಷ್ಟೆಯೂ ದೇವಯಾನಿಯ ಜೊತೆಗೆ ಯಯಾತಿಯ ಅರಮನೆಗೆ ಹೋದಳು. ಮುಂದೆ ದೇವಯಾನಿಗೆ ಯಯಾತಿಯಿಂದ ಎರಡು ಮಕ್ಕಳಾದರು.
ದೇವಯಾನಿಯ ದಾಸಿಯಾದ ಶರ್ಮಿಷ್ಟೆಯೂ ದೇವಯಾನಿಗೆ ತಿಳಿಯದಂತೆ ಯಯಾತಿಯ ದೈಹಿಕ ಸಂಬಂಧವನ್ನು ಬೆಳೆಸಿದಳು. ಅಲ್ಲದೆ ದ್ರುಹು, ಅನು ಮತ್ತು ಪೂರು ಎಂಬ ಮೂರು ಗಂಡು ಮಕ್ಕಳನ್ನು ಯಯಾತಿಯಿಂದ ಪಡೆದಳು. ನಂತರ ಯಯಾತಿಯು ಶರ್ಮಿಷ್ಟೆಯನ್ನೂ ವಿವಾಹವಾದ ಎನ್ನುವ ವಿಚಾರ ಬೇರೆ.
ಯಯಾತಿಯು ತನ್ನ ದಾಸಿ ಶರ್ಮಿಷ್ಠೆಯ ಕಡೆಗೆ ಹೆಚ್ಚು ಪ್ರೀತಿ ತೋರಿದುದರಿಂದ ದೇವಯಾನಿಗೆ ಅವನ ಮೇಲೆ ಸಿಟ್ಟು ಬಂತು. ಆದ್ದರಿಂದ ತನ್ನ ತಂದೆ ಶುಕ್ರಾಚಾರ್ಯರಿಂದ ತನ್ನ ಗಂಡನಾದ ಯಯಾತಿಗೆ ಅಕಾಲ ವೃದ್ಯಾಪ್ಯವು [ ಮುದಿತನ ] ಬರುವಂತೆ ಶಾಪ ಕೊಡಿಸಿದಳು. ಯಯಾತಿಯು ಶಾಪ ವಿಮೋಚನೆಗಾಗಿ ಶುಕ್ರಾಚಾರ್ಯರನ್ನು ಪ್ರಾರ್ಥಿಸಿದ. ನಂತರ ಶುಕ್ರಾಚಾರ್ಯರು ಮುದಿತನವನ್ನು ನಿನ್ನ ಮಕ್ಕಳಿಗೆ ಕೊಟ್ಟು ಅವರಿಂದ ಯೌವನವನ್ನು ಸ್ವೀಕರಿಸು. ಮುಪ್ಪನ್ನು ಸ್ವೀಕರಿಸಿದ ಮಗನಿಗೆ ಸಿಂಹಾಸನವನ್ನು ಕೊಡು ಎಂದರು.
ಶುಕ್ರಾಚಾರ್ಯರ ಸೂಚನೆಯಂತೆ ತನ್ನ ವೃದ್ಯಾಪ್ಯವನ್ನು ಸ್ವೀಕರಿಸುವಂತೆ ಯಯಾತಿಯು ತನ್ನ ಐವರು ಗಂಡುಮಕ್ಕಳಿಗೆ ಹೇಳಿದ. ಶರ್ಮಿಷ್ಠೆಯ ಮೂರನೆಯ ಮಗನಾದ ಪೂರು ಮಾತ್ರ ತನ್ನ ತಂದೆಯ ವೃದ್ಯಾಪ್ಯವನ್ನು ಸಂತೋಷದಿಂದ ಸ್ವೀಕರಿಸಿದ. ತನ್ನ ಯೌವನವನ್ನು ತಂದೆಗೆ ಕೊಟ್ಟ. ಉಳಿದ ಮಕ್ಕಳು ತಂದೆಯ ಮಾತನ್ನು ತಿರಸ್ಕರಿಸಿದರು.ತನ್ನ ಮುದಿತನವನ್ನು ಕೈಗೊಂಡು ತಮ್ಮ ಯೌವನವನ್ನು ತನಗೆ ಕೊಡಲು ಸಮ್ಮತಿಸದ ಆ ನಾಲ್ಕು ಮಕ್ಕಳಿಗೆ ಯಯಾತಿಯು ಶಾಪ ಕೊಟ್ಟ. ಅವನ ಯೌವನವನ್ನು ತನಗೆ ಕೊಟ್ಟ ಪೂರುವಿನ ವಂಶಜರೇ ರಾಜ್ಯಭಾರ ಮಾಡುವಂತೆ ಯಯಾತಿಯು ಅನುಗ್ರಹಿಸಿದನು.ಅಲ್ಲದೆ ಅವನಿಗೆ ವರಗಳನ್ನೂ ಕೊಟ್ಟ.

ಕೆಲವು ಕಾಲದ ನಂತರ ಯಯಾತಿಗೆ ವೈರಾಗ್ಯ ಹುಟ್ಟಿತು.ವಿಷಯ ಸುಖವು ಅದರ ಸೇವನೆಯಿಂದ ಹೆಚ್ಚುತ್ತದೆಯೇ ವಿನಃ ತಗ್ಗುವುದಿಲ್ಲ ಎನ್ನುವ ಸತ್ಯವನ್ನು ಕೊನೆಯಲ್ಲಿ ಕಂಡುಕೊಂಡ.ಅದಕ್ಕಾಗಿ ಪುನಃ ಪೂರುವಿಗೆ ಅವನ ಯೌವನವನ್ನು ಹಿಂದಕ್ಕೆ ಕೊಟ್ಟು ತನ್ನ ಮುದಿತನವನ್ನೇ ಸ್ವೀಕರಿಸಿದ. ವೈರಾಗ್ಯ ತಾಳಿ ವಾನಪ್ರಸ್ಥಾಶ್ರಮವನ್ನು ಕೈಗೊಂಡು ತಪಸ್ಸಿಗಾಗಿ ಅರಣ್ಯಕ್ಕೆ ಹೋದ.

ಯಯಾತಿಯು ಸ್ವರ್ಗಕ್ಕೆ ಹೋದ ಮೇಲೆ ಅಲ್ಲಿದ್ದ ಹಿರಿಯರನ್ನೆಲ್ಲಾ ಕೀಳುದೃಷ್ಟಿಯಿಂದ ನೋಡಲು ಪ್ರಾರಂಭಿಸಿದ. ಸ್ವರ್ಗದ ಸುಖಗಳನ್ನೆಲ್ಲಾ ಅನುಭವಿಸಿ ಕ್ಷೀಣಪುಣ್ಯನಾದ. ಅದರಿಂದಾಗಿ ಮತ್ತೆ ಭೂಮಿಗೆ ಬಿದ್ದ


 ------------

 ಎಂ. ಗಣಪತಿ ಕಾನುಗೋಡು 

ತಾರೀಖು : 10 - 7 -2020

## ದೇವಯಾನಿಯ ಪ್ರೇಮ ಪ್ರಕರಣ ##


ದೇವಯಾನಿಯು ಬ್ರಾಹ್ಮಣನೂ ಅಸುರರ ಗುರುವೂ ಆದ ಶುಕ್ರಾಚಾರ್ಯನ ಮಗಳು. ತನ್ನ ತಂದೆಯಿಂದ ಮೃತಸಂಜೀವಿನಿ ಮಂತ್ರ ಕಲಿಯಲು ತಮ್ಮ ಆಶ್ರಮಕ್ಕೆ ಗುರುಕುಲ ವಾಸಕ್ಕಾಗಿ ಬಂದ ಕಚನನ್ನು ಪ್ರೇಮಿಸುತ್ತಾಳೆ. ಆದರೆ ಅದು one way love ಆಗಿತ್ತು. ಕಚನು ಯಾವ ಕಾರಣಕ್ಕೂ ಅವಳನ್ನು ಪ್ರೇಮಿಸಲು ಸಿದ್ಧನಿರಲಿಲ್ಲ. ಆ ವಿಶಿಷ್ಟ ಮಂತ್ರವನ್ನು ಕಲಿತುಕೊಂಡು ಹೋಗುವುದೊಂದೇ ಅವನ ಮುಖ್ಯ ಗುರಿಯಾಗಿತ್ತು.

ಕಚನ ತಂದೆ ದೇವಗುರು ಬೃಹಸ್ಪತಾಚಾರ್ಯರು. ' ಮೃತ ಸಂಜೀವಿನಿ ಮಂತ್ರವನ್ನು ಕಲಿತುಕೊಂಡು ಬಂದರೆ ತಾನು ಮಾಡುವ ಯಜ್ಞ ದಲ್ಲಿ ಅವನಿಗೂ ಹವಿರ್ಭಾಗ ಸಿಗುತ್ತದೆ ' ಎಂದು ಅವನಿಗೆ ಹೇಳಿದ್ದರು. ' ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಸಂತೋಷಪಡಿಸಿದರೆ ನಿನಗೆ ಆ ವಿದ್ಯೆ ಸುಲಭವಾಗಿ ಲಭಿಸುತ್ತದೆ ' ಎಂದೂ ಅವನಿಗೆ ತಿಳಿಸಿದ್ದರು. ಹೇಗೂ ಆ ವಿದ್ಯೆಯನ್ನು ಕಲಿತುಕೊಂಡೆ ಬರಬೇಕು ಎನುವುದು ಅವನ ಮನೋತರಪೇತಿಯಾಗಿತ್ತು.
ಮೃತಸಂಜೀವಿನಿ ಮಂತ್ರ ಎಂದರೆ ಸತ್ತವರನ್ನು ಬದುಕಿಸುವ ಒಂದು ವಿಶೇಷ ಮಂತ್ರ . ಶುಕ್ರಾಚಾರ್ಯರು ಒಂದು ಸಾವಿರ ವರ್ಷ ಧೂಮಪಾನ ಮಾಡುತ್ತಾ ತಲೆಕೆಳಗಾಗಿ ತಪಸ್ಸನ್ನು ( ಧೂಮವ್ರತ ತಪಸ್ಸು ) ಮಾಡಿ ಶಿವನಿಂದ ಆ ವಿದ್ಯೆಯನ್ನು ಬಹಳ ಶ್ರಮದಿಂದ ತನ್ನ ವಶಮಾಡಿಕೊಂಡಿದ್ದರು. ದೇವತೆಗಳು ರಾಕ್ಷರನ್ನು ಕೊಂದಾಗ ಅವರೆಲ್ಲರನ್ನೂ ಶುಕ್ರಾಚಾರ್ಯ ಆ ಮಂತ್ರದ ಬಲದಿಂದ ಬದುಕಿಸಿಬಿಡುತ್ತಿದ್ದ. ಆದ್ದರಿಂದ ರಾಕ್ಷಸರು ದೇವತೆಗಳನ್ನು ಧ್ವಂಸ ಮಾಡಿದಾಗಲೂ ಬಳಸಿಕೊಳ್ಳಲು ಈ ಮಂತ್ರವನ್ನು ಹೇಗಾದರೂ ಮಾಡಿ ಕಲಿತುಕೊಂಡು ಬರಲಿಕ್ಕಾಗಿ ಕಚನನ್ನು ಬ್ರಹಸ್ಪತಿಯು ಶುಕ್ರಾಚಾರ್ಯನಲ್ಲಿಗೆ ಕಳಿಸಿರುತ್ತಾನೆ.

ಈ ಎಚ್ಚರ ಕಚನಿಗೆ ಬಹಳ ಚೆನ್ನಾಗಿ ಇತ್ತು. ಆ ಕಾರಣಕ್ಕಾಗಿ ಆತ ಶುಕ್ರಾಚಾರ್ಯರಲ್ಲಿ ಬಹಳ ಭಯ ಭಕ್ತಿಯಿಂದ ವರ್ತಿಸಿಕೊಂಡಿದ್ದ. ಯಾವ ಘಳಿಗೆಯಲ್ಲಿಯೂ ಅವರ ಮುನಿಸಿಗೆ ಕಾರಣವಾಗದಂತೆ ಅವನ ವರ್ತನೆ ಇತ್ತು. ತಾನು ಅಲ್ಲಿಗೆ ಬಂದ ಉದ್ದೇಶ ಈಡೇರಿಕೆಗಾಗಿ ತನ್ನ ದಾರಿ ತಪ್ಪದಂತೆ ಜಾಗರೂಕತೆ ವಹಿಸಿದ್ದ. ಎಷ್ಟು ಹೊತ್ತಿಗೂ ದೇವಯಾನಿಯ ಪ್ರೇಮದ ಬುಟ್ಟಿಗೆ ಅವನು ಬೀಳುವ ಪ್ರಮೇಯವೇ ಇರಲಿಲ್ಲ.

ಹಾಗಂತ ಆತ ತನ್ನ ತಂದೆಯ ಮಾತಿನಂತೆ ಅವಳನ್ನು ಸಂತೋಷಪಡಿಸುವುದರಲ್ಲೇ ನಿರತನಾಗಿದ್ದ . ಶುಕ್ರಾಚಾರ್ಯರ ಸೇವೆಯ ಜೊತೆಗೆ ಅವಳು ಹೇಳಿದ ಕೆಲಸವನ್ನೂ ಪ್ರತಿದಿನ ಮಾಡಿಕೊಡುತ್ತಿದ್ದ. ಅವಳನ್ನು ಸಂತೋಷಪಡಿಸುವುದಕ್ಕಾಗಿ ಹೂಗಳನ್ನು ಕೊಯ್ದು ತರುವುದು, ಅವುಗಳನ್ನು ಕಟ್ಟುವುದು ಹೀಗೆ... ಹೀಗೆ. ಕೆಸವಿನ ಎಲೆಯ ಮೇಲಿನ ನೀರಿನಂತೆ -- ಸ್ಪರ್ಶವಿದ್ದರೂ ಆಕರ್ಷವಿರಲಿಲ್ಲ. ದೇವಯಾನಿಯೂ ಏಕಾಂತದಲ್ಲಿ ಅವನೊಡನೆ ಆಡುವುದು, ಹಾಡುವುದು ಅಲ್ಲದೆ ಅವನ ಸೇವೆಯನ್ನು ಮಾಡುತ್ತಿದ್ದಳು -- ಒಣಹುಲ್ಲನ್ನು ಬೆಂಕಿ ಆಕರ್ಷಿಸುವ ಹಾಗೆ. ಹೊರಗಿನ ವರ್ತನೆ ಇಬ್ಬರದೂ ಒಂದೇ ಆಗಿ ಕಂಡರೂ ಒಳಗಿನ ಗುರಿ ಇಬ್ಬರದೂ ಬೇರೆ ಬೇರೆಯದೇ ಆಗಿತ್ತು. ದೇವಯಾನಿಯದು ಕಚನನ್ನು ಒಳಗೆ ಹಾಕಿಕೊಳ್ಳಬೇಕೆನ್ನುವುದು . ಕಚನದು ಮೃತಸಂಜೀವಿನಿ ವಿಶೇಷ ಮಂತ್ರವನ್ನು ಅವಳ ತಂದೆಯಿಂದ ಒಳಗೆ ಹಾಕಿಕೊಳ್ಳಬೇಕೆನ್ನುವುದು. ಅದಕ್ಕಾಗಿ ಶುಕ್ರಾಚಾರ್ಯರ ಪ್ರಿಯ ಶಿಷ್ಯನಾಗಿ ಬ್ರಹ್ಮಚರ್ಯ ವ್ರತದಲ್ಲಿಯೇ ಇದ್ದ.

ಕಚನು ಶುಕ್ರಾಚಾರ್ಯರಿಂದ ಆ ಮಂತ್ರವನ್ನು ಕಲಿಯಬಾರದು, ಅದನ್ನು ಹೇಗಾದರೂ ತಪ್ಪಿಸಬೇಕು ಎಂದು ಅಸುರರೂ ಹೊಂಚು ಹಾಕುತ್ತಿದ್ದರು. ಏಕೆಂದರೆ ಆ ಮಂತ್ರವು ತಮ್ಮ ಬಚಾವಿಗಾಗಿಯೇ ಶುಕ್ರಾಚಾರ್ಯರು ಸಂಪಾದಿಸಿಕೊಂಡಿದ್ದು. ಅದು ತಮ್ಮ ವಿರುದ್ಧದ ಒಂದು ಸನ್ನಾಹ ಎಂದು ಅವರಿಗೆ ಗೊತ್ತಿರಬೇಕು. ಅದಕ್ಕಾಗಿ ಅವರು ಅವನನ್ನು ಎರಡು ಸಾರಿ ಕತ್ತರಿಸಿ ಹಾಕಿದರು. ಆಗ ದೇವಯಾನಿಯು ತನ್ನ ತಂದೆಯ ಹತ್ತಿರ ಅವನನ್ನು ಮೃತ ಸಂಜೀವಿನಿ ಮಂತ್ರದಿಂದ ಬದುಕಿಸಿ ಎಂದು ಗೋಗರೆದಳು. ಏಕೆಂದರೆ ಅವಳು ಅಷ್ಟರ ಮಟ್ಟಿಗೆ ಅವನ ಭ್ರಮೆಯಲ್ಲಿ ಮುಳುಗಿದ್ದಳು. ಮಗಳ ಮಾತಿನಂತೆ ಶುಕ್ರಾಚಾರ್ಯ ಅವನನ್ನು ಎರಡು ಸಾರಿಯೂ ಬದುಕಿಸಿದ. ಇದನ್ನು ಕಂಡುಕೊಂಡ ರಾಕ್ಷರರು ಶುಕ್ರಾಚಾರ್ಯನ ಮೇಲೆ ಸಿಟ್ಟು ಮಾಡಿಕೊಂಡು ಮೂರನೆಯ ಸಲ ಕಚನನ್ನು ಕೊಂದು ಅವನ ದೇಹವನ್ನು ಉಳಿಸದೆ ಸುಟ್ಟು ಬೂದಿ ಮಾಡಿ ಮದ್ಯದಲ್ಲಿ ಹಾಕಿ ಶುಕ್ರಾಚಾರ್ಯರಿಗೇ ಕುಡಿಸಿದರು. ಏಕೆಂದರೆ ಆ ಮಂತ್ರದಿಂದ ಅವನನ್ನು ಬದುಕಿಸಲು ಹೊರಟರೆ ಅವರ ಹೊಟ್ಟೆ ಸೀಳಿ ಅವರೇ ಸಾಯುತ್ತಾರೆ. ಅದರಿಂದ ಅವರು ಅವನನ್ನು ಇನ್ನು ಬದುಕಿಸುವುದಿಲ್ಲ ಎನ್ನುವುದು ಅವರ ಯೋಚನೆ . ಅಂದು ಸಂಜೆ ಮನೆಗೆ ಬಾರದ ಕಚನನ್ನು ಅಂದೂ ಅವನು ಮತ್ತೆ ಸತ್ತಿರಬೇಕು ಎನ್ನುವುದನ್ನು ಗ್ರಹಿಸಿ ಅವನನ್ನು ಬದುಕಿಸಿಕೊಡಬೇಕೆಂದು ದೇವಯಾನಿ ಪುನಃ ತನ್ನ ತಂದೆಯನ್ನು ಕಟುವಾಗಿ ಒತ್ತಾಯಿಸಿದಳು. ಏಕೆಂದರೆ ಒಂದು ದಿನವೂ ಅವನನ್ನು ಬಿಟ್ಟು ಇರಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಮಗಳ ಒತ್ತಾಯಕ್ಕೆ ಮಣಿದು ಶುಕ್ರಾಚಾರ್ಯರು ಕಚನು ತನ್ನ ಹೊಟ್ಟೆಯಲ್ಲಿಯೇ ಇರುವುದನ್ನು ತಿಳಿಯದೆ ಸಂಜೀವಿನಿ ಮಂತ್ರವನ್ನು ಉಚ್ಚರಿಸುತ್ತಿರುವಾಗ ಅವರ ಹೊಟ್ಟೆಯಿಂದಲೇ ಕಚನು ' ನಾನು ನಿಮ್ಮ ಹೊಟ್ಟೆಯಲ್ಲಿಯೇ ಇದ್ದೇನೆ , ಹೇಗೆ ಹೊಟ್ಟೆಯನ್ನು ಸೀಳಿಕೊಂಡು ಬರಲಿ ' ಎನ್ನುತ್ತಾನೆ. ಆಗ ಶುಕ್ರಾಚಾರ್ಯರು ಹೊಟ್ಟೆಯಲ್ಲಿದ್ದ ಕಚನಿಗೆ ಮೃತಸಂಜೀವಿನಿ ಮಂತ್ರೋಪದೇಶ ಮಾಡಿದರು. ಆಚಾರ್ಯ ದೇಹದಿಂದ ಹೊರಬಂದು ಅವರಿಂದ ತಾನು ಪಡೆದ ಮಂತ್ರದ ಬಲದಿಂದ ಮರಳಿ ಅವರನ್ನು ಬದುಕಿಸುತ್ತಾನೆ. ಅಲ್ಲಿಗೆ ಕಚನಿಗೆ ತಾನು ಅಲ್ಲಿಗೆ ಬಂದ ಉದ್ದೇಶ ನೆರವೇರುತ್ತದೆ. ತಂದೆಯ ಮಾತಿನಂತೆ ಶುಕ್ರಾಚಾರ್ಯನುಗೆ ನಿಷ್ಟನಾಗಿದ್ದುದು ಹಾಗೆಯೇ ಅವನ ಮಗಳಿಗೆ ಸಂತೋಷವಾಗುವಂತೆ ತಾನು ನಡೆದುಕೊಂಡಿದ್ದು ಸಫಲವಾಗುತ್ತದೆ. ಮಾತಿನಂತೆ ಗಳಿಸಿದ ವಿದ್ಯೆಯ ಯಶಸ್ವಿ ಪ್ರಯೋಗವೂ ಅಲ್ಲಿಯೇ ನಡೆಯುತ್ತದೆ. ಆಚಾರ್ಯರ ಒಪ್ಪಿಗೆ ಪಡೆದು ದೇವಲೋಕಕ್ಕೆ ಮರಳಲು ಅಣಿಯಾಗುತ್ತಾನೆ.

ಇಲ್ಲಿಯೇ ದೇವಯಾನಿಯ ಪ್ರೇಮ ಪಾರಮ್ಯ ಸ್ಪೋಟವಾಗುತ್ತದೆ. ಇಷ್ಟೂ ದಿನ ನಾನು ನಿನ್ನನ್ನು ಬಹಳವಾಗಿ ಪ್ರೀತಿಸಿದೆ. ನಿನ್ನೊಡನೆ ಲಾಸ್ಯವಾಡಿದೆ. ನೀನೂ ನನ್ನೊಡನೆ ಸಹಕರಿಸಿದೆ. ಮೂರು ಸಲ ರಾಕ್ಷಸರು ನಿನ್ನನ್ನು ಕಡಿದು ಕೊಚ್ಚಿ ಕೊಂದು ಹಾಕಿದರೂ ನನ್ನ ಅಪ್ಪನಿಗೆ ದುಂಬಾಲು ಬಿದ್ದು ನಿನ್ನನ್ನು ಬದುಕಿಸಿಕೊಂಡೆ. ಇಷ್ಟೆಲ್ಲಾ ಮಾಡಿದ್ದು ನೀನು ನನಗೆ ಬೇಕು ಎಂದಲ್ಲವೇ ?. ನಿನ್ನನ್ನು ನಾನು ಬಹಳವಾಗಿ ಮನಸಾ ಹಚ್ಚಿಕೊಂಡಿದ್ದೇನೆ. ನನ್ನನ್ನು ಪಾಣಿಗ್ರಹಣ ಮಾಡಿಕೊ ಎಂದು ಕಚನಿಗೆ ಜೋತು ಬೀಳುತ್ತಾಳೆ. ಎಂದೂ ಅವಳು ಅವನ ಮನಸಿನಲ್ಲಿ ಇರಲಿಲ್ಲ . ಇದ್ದುದು ಮಂತ್ರವಿದ್ಯೆಯ ಗಳಿಕೆಯೊಂದೇ. ಅದು ಪೂರೈಸಿತ್ತು.
' ನೀನು ನನಗೆ ಗುರುಪುತ್ರಿ.ನನಗೆ ಪೂಜ್ಯಳು . ನಿನ್ನನ್ನು ಮದುವೆಯಾಗಲಾರೆ' ಎಂದು ತಿರಸ್ಕರಿಸಿ ಹೊರಟುಹೋದ. ಆಗ ದೇವಯಾನಿಯು ಅಶಾಭಂಗಳಾಗುತ್ತಾಳೆ. ಭಗ್ನಪ್ರೇಮಿಯಾಗುತ್ತಾಳೆ. ಹತಾಶಳಾಗಿ ತನ್ನ ತಂದೆಯಿಂದ ಕಲಿತ ಮಂತ್ರವಿದ್ಯೆ ನಿನಗೆ ಫಲಿಸದಿರಲಿ ಎಂದು ಶಪಿಸುತ್ತಾಳೆ. 'ನನಗಲ್ಲದಿದ್ದರೂ ನನ್ನಿಂದ ಉಪದೇಶ ಪಡೆದವರಿಗೆ ಅದು ಫಲಿಸಿದರೆ ಸಾಕು' ಎಂದು ಎಂದು ಕಚ ಅಲ್ಲಿಗೂ ಸ್ಥಿತಪ್ರಜ್ಞನಾಗಿಯೇ ಇರುತ್ತಾನೆ. ಜೊತೆಗೆ , ' ನೀನು ಮಾತ್ರ ಸಂಪನ್ನನಾದ, ವಿದ್ವಾಂಸನಾದ ಬ್ರಾಹ್ಮಣಶ್ರೇಷ್ಠನ ಮಗಳಾಗಿದ್ದರೂ ಧರ್ಮವಿರುದ್ಧವಾದ ಕಾರ್ಯದಲ್ಲಿ ನನಗೆ ಇಷ್ಟವಿಲ್ಲದೆ ಇದ್ದರೂ ನನ್ನನ್ನು ಬಲಾತ್ಕರಿಸಿದೆ. ಅದಕ್ಕಾಗಿ ಯಾವ ಬ್ರಾಹ್ಮಣನೂ ನಿನ್ನನ್ನು ಮದುವೆಯಾಗದೇ ಇರಲಿ ಎಂದು ಮರುಶಾಪ ಕೊಟ್ಟು ಹೊರಟುಹೋಗುತ್ತಾನೆ. ಇದರಿಂದ ದೇವಯಾನಿ ಮತ್ತಷ್ಟು ಹತಾಶಳಾಗುತ್ತಾಳೆ.
ಅದಕ್ಕಾಗಿಯೇ ದೇವಯಾನಿ ಮತ್ತೊಂದು ದಿನ ಯಯಾತಿ ಎನ್ನುವ ಕ್ಷತ್ರಿಯನನ್ನು ಮದುವೆಯಾಗುವ ಪ್ರಸಂಗ ಬರುತ್ತದೆ. ಅದೂ ಕೂಡ ಒಂದು ರೀತಿಯಲ್ಲಿ ಪ್ರೇಮ ವಿವಾಹವೇ. ತನ್ನ ಗೆಳತಿಯಿಂದ ಬಾವಿಯಲ್ಲಿ ನೂಕಲ್ಪಟ್ಟು ಆ ಸಮಯದಲ್ಲಿ ಮೇಲೆತ್ತಿ ಬದುಕಿಸಿದ ಒಬ್ಬ ಕ್ಷತ್ರಿಯನಾದ ಯಯಾತಿಯನ್ನು ಮೆಚ್ಚಿ ತನ್ನನ್ನೇ ಮದುವೆಯಾಗಲು ಒತ್ತಾಯಿಸಿ ಮದುವೆಯಾಗುತ್ತಾಳೆ. ಆ ಮದುವೆಯ ನಂತರವೂ ತನ್ನ ದಾಸಿಯೊಡನೆ ದೈಹಿಕ ಸಂಪರ್ಕ ಹೊಂದಿದನೆಂಬ ಸಿಟ್ಟಿಗೆ ತನ್ನ ಅಪ್ಪ ಶುಕ್ರಾಚಾರ್ಯರಿಂದ ತನ್ನ ಗಂಡ ಯಯಾತಿಗೆ ಅಕಾಲ ಮುಪ್ಪು ಬರಲಿ ಎಂದು ಶಾಪವನ್ನು ಕೊಡಿಸಿ ಅವನ ಬದುಕನ್ನೂ ಹಾಳುಗೆಡುವುತ್ತಾಳೆ. ತಾನೂ ತೊಂದರೆಗೆ ಸಿಲುಕಿಕೊಳ್ಳುತ್ತಾಳೆ.
love ಎನ್ನುವುದು ಏಕಮುಖವಾಗಿದ್ದರೆ, ಅದು ವಿವೇಚನಾಪೂರಿತವಾಗದೆ ಇದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ದೇವಯಾನಿಯ ಪ್ರೇಮ ಪ್ರಕರಣವೇ ಒಂದು ಉತ್ತರವಾಗುತ್ತದೆ.


~~~~~ ಎಂ. ಗಣಪತಿ ಕಾನುಗೋಡು.
ತಾರೀಖು : 9 - 7 - 2020

## ನಮಸ್ಕಾರಗಳ ಬಗೆಗಳು ##

1. ಅಷ್ಟಾಂಗ ನಮಸ್ಕಾರ : ಎದೆ, ತಲೆ, ಕೈಗಳು, ಕಾಲುಗಳು, ಮಂಡಿಗಳು ಚೆನ್ನಾಗಿ ನೆಲದಲ್ಲಿ ತಗಲುವಂತೆ ನಮಸ್ಕಾರ ಮಾಡುವುದಲ್ಲದೆ ಮನಸ್ಸಿನಿಂದಲೂ ನಾಡಿಗಳಿಂದಲೂ ' ನಮಃ ' ಶಬ್ದಾರ್ಥವನ್ನು ಧ್ಯಾನ ಮಾಡುತ್ತಾ ' ನಮಃ ' ಎಂದು ಬಾಯಿಂದ ಹೇಳಿ ನಮಸ್ಕರಿಸುವಿಕೆಗೆ ಅಷ್ಟಾಂಗ ( ಸಾಷ್ಟಾಂಗ ) ನಮಸ್ಕಾರ ಎಂದು ಹೆಸರು. 

2. ದಂಡವತ್ ಪ್ರಣಾಮ : ಕೈಕಾಲುಗಳನ್ನು ನೀಡಿ ಬಿದ್ದಿರುವ ಕೋಲಿನಂತೆ ಭೂಮಿಯ ಮೇಲೆ ಕೆಳಮುಖವಾಗಿ ಎರಡು ಅಂಗೈಗಳನ್ನೂ ಕೂಡಿಸಿ ಅಂಜಲಿ ಮಾಡಿ ನಮಸ್ಕರಿಸುವಿಕೆಗೆ ದಂಡವತ್ ಪ್ರಣಾಮ ಎಂದು ಹೆಸರು.

3. ಪಂಚಾಗ ನಮಸ್ಕಾರ : ಕಾಲು ಬೆರಳುಗಳಿಂದಲೂ ಮಂಡಿಗಳಿಂದಲೂ, ತಲೆಯಿಂದಲೂ ಭೂಮಿಯನ್ನು ಸ್ಪರ್ಶಿಸಿ, ಬಗ್ಗಿ ನಮಸ್ಕರಿಸಿ, ತಲೆಯ ಮೇಲೆ ಎರಡು ಕೈಗಳನ್ನೂ ಸೇರಿಸಿ ಅಂಜಲಿ ಮಾಡುವಿಕೆಗೆ ಪಂಚಾಗ ನಮಸ್ಕಾರ ಎನ್ನುತ್ತಾರೆ. 4. ಮಸ್ತಿಷ್ಕ ಪ್ರಣಾಮ : ತಲೆಯಮೇಲೆ ಎರಡು ಕೈಗಳನ್ನೂ ಜೋಡಿಸಿ ಕೈ ಮುಗಿಯುವಿಕೆಗೆ ಮಸ್ತಿಷ್ಕ ಪ್ರಣಾಮ ಎಂದು ಹೆಸರು. 

5. ಸಂಪುಟ ಪ್ರಣಾಮ : ಎದೆಯ ಮೇಲೆ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುವಿಕೆಗೆ ಸಂಪುಟ ಪ್ರಣಾಮ ಎಂದು ಹೆಸರು. . 

6. ಪ್ರಹ್ವಾಂಗ ಪ್ರಣಾಮ : ಬಗ್ಗಿಸಲ್ಪಟ್ಟ ಅವಯವವುಳ್ಳವನಾಗಿ ಸಂಪುಟ ಪ್ರಣಾಮವನ್ನು ಮಾಡಿದರೆ ಅದಕ್ಕೆ ಪ್ರಹ್ವಾಂಗ ಪ್ರಣಾಮ ಎಂದು ಹೆಸರು. 

ಟಿಪ್ಪಣಿ : ಸ್ತ್ರೀಯರ ಕುಚಗಳು ಭೂಮಿಗೆ ತಗುಲಬಾರದೆಂಬ ಶಾಸ್ತ್ರವಿರುವುದರಿಂದ ಸ್ತ್ರೀಯರು ಅಷ್ಟಾಂಗ ಮತ್ತು ದಂಡವತ್ ಪ್ರಣಾಮವನ್ನು ಮಾಡಬಾರದು. 


ಗ್ರಂಥಋಣ : ಸಂಸ್ಕಾರ ಮಹೋದಧಿ -- ಮಹಾಮಹೋಪಾಧ್ಯಾಯ ಡಾ : ಎ. ಅನಂತನರಸಿಂಹಾಚಾರ್.

## ಕ್ಷತ್ರಿಯ ವಿಶ್ವರಥ --- ಬ್ರಾಹ್ಮಣ ವಿಶ್ವಾಮಿತ್ರ ##


ವಿಶ್ವಾಮಿತ್ರ ಚಂದ್ರವಂಶದ ಕುಶಿಕ ವಂಶದವನಾದ ಗಾಧಿರಾಜನ ಮಗ . ಕುಶಿಕ ವಂಶದವನಾದ್ದರಿಂದ ಕೌಶಿಕ ಎಂದೂ ಇವನನ್ನು ಕರೆದದ್ದುಂಟು. ಆದರೆ ಅದು ಅವನ ಮೂಲ ಹೆಸರಲ್ಲ. ಆತ ಮೂಲತಃ ಒಬ್ಬ ಕ್ಷತ್ರಿಯನಾಗಿ ಅರಸನಾಗಿದ್ದ.. ಆಗ ಅವನ ಹೆಸರು ' ವಿಶ್ವರಥ ' ಎಂದಾಗಿತ್ತು. ಮೊದಲು ಕ್ಷತ್ರಿಯನಾಗಿ ಜನಿಸಿ ಕೊನೆಗೆ ತನ್ನ ತಪೋಮಹಿಮೆಯಿಂದ ಬ್ರಾಹ್ಮಣನಾದ. ಅದಕ್ಕೆ ಒಂದು ಕಾರಣವಿದೆ. ಆತ ಕ್ಷತ್ರಿಯನಾಗಿದ್ದಾಗ ಜಗತ್ತಿನ ರಾಜಮಹಾರಾಜರುಗಳನ್ನೆಲ್ಲಾ ಜಯಿಸಿ ರಾಜಧಾನಿಗೆ ಮರಳುತ್ತಿದ್ದಾಗ ದಾರಿಯಲ್ಲಿದ್ದ ವಸಿಷ್ಟನ ಆಶ್ರಮದಲ್ಲಿ ಮಧ್ಯಾಹ್ನದ ಹೊತ್ತಿಗೆ ಸೈನ್ಯಸಮೇತ ತಂಗುತ್ತಾನೆ. ಅಲ್ಲಿದ್ದ ನಂದಿನೀಧೇನುವನ್ನು ಮೆಚ್ಚಿ ಬಲಾತ್ಕಾರದಿಂದ ಸೆಳೆದೊಯ್ಯುತ್ತಿದ್ದಾಗ ವಸಿಷ್ಟನಿಂದ ಪರಾಜಿತನಾಗುತ್ತಾನೆ. ಈ ರೀತಿ ಪರಾಜಿತನಾದವನು ತಾನೂ ಬ್ರಾಹ್ಮಣನಾಗಬೇಕೆಂದು ತಪಸ್ಸು ಮಾಡಿ ಬ್ರಾಹ್ಮಣನಾಗುತ್ತಾನೆ.

## ಉಪಾಕರ್ಮ ##


ಉಪಾಕರ್ಮ ಎನ್ನುವ ಶಬ್ದವು ಅಧ್ಯಯನದ ಆರಂಭ ಎಂದು ಅರ್ಥವನ್ನು ಹೊಂದಿದೆ. ಇದನ್ನು ಉಪಾಕರ್ಮ, ಅಧ್ಯಾಯೋಪಕರ್ಮ, ಉಪಾಕರಣ, ವೇದಸ್ವೀಕಾರ, ವೇದಾರಂಭಣ, ಎಂಬ ಹೆಸರುಗಳಿಂದ ಶಾಸ್ತ್ರಗಳು ಕರೆಯುತ್ತವೆ. ಉತ್ತರ ಭಾರತದಲ್ಲಿ ಇದಕ್ಕೆ ಶ್ರಾವಣದಲ್ಲಿ ಆಚರಿಸಲ್ಪದುವುದರಿಂದ 'ಶ್ರಾವಣೀ' ಎಂದು ಕರೆಯುತ್ತಾರೆ. ತಮಿಳುನಾಡಿನವರು 'ಆವಣಿ ಅವಿTTam' ಎನ್ನುತ್ತಾರೆ. ಇಂದು ಇದು ಜನಿವಾರವನ್ನು ಬದಲಾಯಿಸಿಕೊಳ್ಳುವ ಮತ್ತು ರಕ್ಷಾ ಬಂಧನದ ಹಬ್ಬವಾಗಿ ಆಚರಿಸುವುದಕ್ಕಾಗಿ 'ನೂಲು ಹುಣ್ಣಿಮೆ' ಎಂದೂ ಕರೆಯುತ್ತಾರೆ.
ಉಪಾಕರ್ಮವು ವೇದಗಳ ಒಂದು ಅಧ್ಯಯನ ವ್ರತವಾಗಿತ್ತು. ಆದರೆ ನಾವು ಅದನ್ನು ಇಂದು ಹೊಸ ಜನಿವಾರವನ್ನು ಹಾಕಿಕೊಳ್ಳುವ ಹಬ್ಬವೆಂದು ಆಚರಿಸುತ್ತಿದ್ದೇವೆ. ಹಿಂದೆ ಶಾಲೆ ಕಾಲೇಜುಗಳಿಲ್ಲದ ಕಾಲದಲ್ಲಿ, ಕೇವಲ ವೇದ, ಶಾಸ್ತ್ರಗಳ ಅಧ್ಯಯನವಿರುವ ಪ್ರಾಚೀನ ಕಾಲದಲ್ಲಿ ಗುರುಕುಲದಲ್ಲಿ ವಟುವು ತನ್ನ ಉಪನಯನದ ನಂತರ ವೇದ ವಿಧ್ಯಾಭ್ಯಾಸವನ್ನು ಸಂಸ್ಕಾರಪೂರ್ವಕವಾಗಿ ಗ್ರಹಿಸುವ ಮತ್ತು ಪ್ರಾರಂಭಿಸುವ ವ್ರತಕ್ಕೆ ಉಪಾಕರ್ಮವೆಂದು ಹೆಸರು.. ಪ್ರತಿಯೊಂದು ವ್ರತದಲ್ಲಿಯೂ ಹಿಂದೆ ಬಳಸಿದ ಮೌಂಜೀ, ದಂಡ , ವಸ್ತ್ರ ಹಾಗೆಯೇ ಜನಿವಾರ ಮತ್ತು ಕೃಷ್ಣಾಜಿನವನ್ನು ತೆಗೆದುಹಾಕಿ ಹೊಸತನ್ನು ಧರಿಸುವುದು ರೂಢಿಯಾಗಿತ್ತು. ಅದರಂತೆ ಉಪಾಕರ್ಮದಲ್ಲಿಯೂ ಈ ಎಲ್ಲಾ ಕ್ರಮಗಳನ್ನು ಅನುಸರಿಸುತ್ತಿದ್ದರು. ಅಂದು ಉಪಾಕರ್ಮದಲ್ಲಿ ಯಜ್ನೋಪವೀತದ ಬದಲಾವಣೆಯು ಒಂದು ಗೌಣಕರ್ಮವಾಗಿತ್ತು. ಆಗ ಎಲ್ಲದರ ಜೊತೆಗೆ ಇದೂ ಒಂದಾಗಿತ್ತು. ಆದರೆ ಕಾಲಾನುಕ್ರಮದಲ್ಲಿ ಅದೊಂದು ಮಾತ್ರ ಉಳಿದುಕೊಂಡಿದೆ.

ಶ್ರಾವಣ ಪೂರ್ಣಿಮೆಯಂದು ಸಾಮಾನ್ಯವಾಗಿ ಉಪಾಕರ್ಮವನ್ನು ಅನಾದಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಗ್ರಹಣ , ಸಂಕ್ರಮಣಾದಿಗಳ ಸಂಭವವಿದ್ದರೆ ಆಷಾಢ ಪೂರ್ಣಿಮೆಯು ಪ್ರಶಸ್ತ ಎನ್ನಲಾಗಿದೆ. ಋಗ್ವೇದಿಗಳು, ಯಜುರ್ವೇದಿಗಳು ಮತ್ತು ಸಾಮವೇದಿಗಳಲ್ಲಿ ಉಪಾಕರ್ಮದ ಆಚರಣೆಯ ಕಾಲದಲ್ಲಿ ವ್ಯತ್ಯಾಸವಿದೆ.

ಗುರುಕುಲದಲ್ಲಿ ಗುರು ಶಿಷ್ಯರೆಲ್ಲಾ ಸೇರಿ ಉಪಾಕರ್ಮ ಹೋಮ ಮಾಡಿ ಇತರ ವಿಧಿವಿಧಾನಗಳನ್ನೂ ಪೂರೈಸಬೇಕಾಗಿತ್ತು. ಉಪಾಕರ್ಮದ ಕ್ರಿಯೆಗಳು ಅರ್ಥವತ್ತಾಗಿದ್ದುವು. ಇಲ್ಲಿ ಪ್ರಾಚೀನ ಸ್ಮರಣೆಗಳು ನಡೆಯುತ್ತವೆ. ದೇವತೆಗಳು , ಪಿತೃಗಳು, ಋಷಿಗಳು, ವಾನ್ಗ್ಮಯದ ಶ್ರೀಮಂತಿಗೆಗೆ ನೆರವಿತ್ತ ಹಿರಿಯರು ಮುಂತಾದವರ ನಾಮಸ್ಮರಣೆ ಮಾಡಿ ತರ್ಪಣ ಕೊಡುವುದು , ಆಹುತಿ ಕೊಡುವುದು ಮುಂತಾದ ಕ್ರಮಗಳಿವೆ. ಇದರಿಂದಾಗಿ ಅಧ್ಯಯನ ಕಾರ್ಯಕ್ಕೆ ನವೋಲ್ಲಾಸ ಬರುತ್ತದೆ ಎಂದು ಭಾವಿಸಲಾಗುತ್ತಿತ್ತು. ಇಂದಿಗೂ -- ಅದರ ಮೂಲ ಉದ್ದೇಶದಲ್ಲಿ ಬದಲಾವಣೆ ಆದರೂ -- ಅದರ ಕೆಲವೊಂದು ಕ್ರಿಯೆಗಳು ಉಪಾಕರ್ಮ ವ್ರತದ ಆಚರಣೆಯಲ್ಲಿ ಉಳಿದುಕೊಂಡಿವೆ.

ಹಿಂದಿನ ಕಾಲದಲ್ಲಿ ಅಧ್ಯಯನ ವಿಷಯಗಳು ಪ್ರಧಾನವಾಗಿ ವೇದಗಳು ಮತ್ತು ಶಾಸ್ತ್ರಗಳು ಎಂದು ಎರಡು ಭಾಗವಾಗಿದ್ದುವು. ಗುರುಕುಲದಲ್ಲಿ ಐದೂವರೆಯಿಂದ ಆರು ತಿಂಗಳುಗಳ ಕಾಲ ವೇದಾಭ್ಯಾಸವನ್ನು ಮಾಡುವ ಪರಿಪಾಠವಿತ್ತು . ಅ ಅವಧಿಯ ನಂತರ ಉತ್ಸರ್ಜನ ಅಂದರೆ ಆ ವ್ರತದ ಉದ್ವಾಸನೆ ಇತ್ತು. ಆ ಅವಧಿಯ ಕಾಲದಲ್ಲಿ ಗುರುಕುಲದ ವಿದ್ಯಾಭ್ಯಾಸಕ್ಕೆ ರಜೆಯಿತ್ತು. ಅಂದರೆ ಶ್ರಾವಣ ಪೂರ್ಣಿಮೆಯಂದು ಆರಂಭವಾದರೆ ಪುಷ್ಯ ಅಥವ ಮಾಘ ಶುದ್ಧ ಪ್ರತಿಪದೆಯಂದು ಪೂರ್ವಾಹ್ನದಲ್ಲಿಯೇ ಉತ್ಸರ್ಜನವನ್ನು ಮಾಡಲಾಗುತ್ತಿತ್ತು. ಆ ಅವಧಿಯಲ್ಲಿ ವಟುಗಳು ಶಾಸ್ತ್ರಾಭ್ಯಾಸವನ್ನು ಮಾಡುತ್ತಿದ್ದರು ಎನ್ನಲಾಗಿದೆ. ಆ ರಜೆಯ ಅವಧಿಯ ನಂತರ ಪುನಃ ಗುರುಕುಲದಲ್ಲಿ ಪ್ರತಿ ವರ್ಷ ಉಪಾಕರ್ಮದ ಮೂಲಕವೇ ವೇದಾಭ್ಯಾಸವನ್ನು ಪ್ರಾರಂಭ ಮಾಡುತ್ತಿದ್ದರು. ಆಗ ಎಂದಿನಂತೆ ವ್ರತ ನಿಯಮದ ಪ್ರಕಾರ ತಮ್ಮ ಎಲ್ಲಾ ವಸ್ತುಗಳ ಜೊತೆಗೆ ಸಾಮಾನ್ಯವೆಂಬಂತೆ ಜನಿವಾರವನ್ನೂ ಬದಲಾಯಿಸಿಕೊಳ್ಳುತ್ತಿದ್ದರು. ಅದರಂತೆ ಮತ್ತೆ ಹಸನಾಗಿ, ಹೊಸತನದಲ್ಲಿ ಮರು ಅಧ್ಯಯನಕ್ಕೆ ಸಂಭ್ರಮದಲ್ಲಿ ಅಣಿಯಾಗುತ್ತಿದ್ದರು.

ಕೇವಲ ವಟುಗಳು ಆಚರಿಸುವ ವ್ರತ , ಉಪಾಕರ್ಮದಲ್ಲಿ ಗ್ರಹಸ್ಥರು ಹೇಗೆ ಬಂದರು ಎನ್ನುವುದು ಕುತೂಹಲದ ಪ್ರಶ್ನೆ. ಆಗ ಎಲ್ಲರೂ ವೇದಾಧ್ಯಯನವನ್ನು ಮಾಡುತ್ತಿದ್ದ ಕಾಲ. ವಿದ್ಯಾಭ್ಯಾಸದ ನಂತರದಲ್ಲಿ ತಮ್ಮ ತಮ್ಮ ಉದ್ಯೋಗದಲ್ಲಿ ಜನ ನಿರತರಾಗಿರುತ್ತಿದ್ದರು. ಈಗಿನ ಕಾಲದ ಹಾಗೆ ಅವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪುಸ್ತಕಗಳಾಗಲಿ, ಪುಸ್ತಕ ಭಂಡಾರವಾಗಲಿ ಇರಲಿಲ್ಲ. ಬೇರೆ ಬೇರೆ ಉದ್ಯೋಗದಲ್ಲಿ ನಿರತರಾದ ಅಂದಿನ ವೇದ ಶಾಸ್ತ್ರ ಪಾರಂಗತರು ಅವನ್ನು ಪುನರಾವರ್ತನೆ ಮಾಡಿಕೊಳ್ಳಲು ಹೆಚ್ಚು ಕೆಲಸವಿಲ್ಲದ ಮಳೆಗಾಲದ ಅವಧಿಯನ್ನು ಅಧ್ಯಯನಕ್ಕಾಗಿ ಮೀಸಲಿಡುವುದು, ಅವರು ತಮ್ಮ ತಮ್ಮ ಮನೆಯೊಳಗಿದ್ದುಕೊಂಡೇ ವೇದಾಧ್ಯಯನವನ್ನು ಮುಂದುವರೆಸುವ ವ್ಯವಸ್ಥೆಯಾಯಿತು. ಇಂಥ ಅಧ್ಯಯನವನ್ನು ಆರಂಭಿಸುವ ಮುನ್ನ ಉಪಾಕರ್ಮದ ದಿನ ತಮ್ಮ ಮಕ್ಕಳ ಜೊತೆ ಪಾಲಕರೂ -- ಗ್ರಹಸ್ಥರು -- ಗುರುಕುಲಕ್ಕೆ ಬಂದು ಅಧ್ಯಯನ ವ್ರತವನ್ನು ಸ್ವೀಕರಿಸುವ ವ್ಯವಸ್ಥೆಯಾಯಿತು. ಹೀಗೆ ಅಂದು ಆ ವ್ರತವನ್ನು ಸ್ವೀಕರಿಸುವ ಪ್ರತಿ ಗ್ರಹಸ್ಥನೂ ಬ್ರಹ್ಮಚಾರಿಯು ಅನುಸರಿಸುವ ವ್ರತನಿಯಮಗಳಲ್ಲಿ ದಂಡ ಇತ್ಯಾದಿಗಳನ್ನು ಬಿಟ್ಟು ಜನಿವಾರ ಬದಲಾವಣೆಯೂ ಸೇರಿ ಉಳಿದವುಗಳನ್ನು ಅನುಸರಿಸಬೇಕಾಗಿತ್ತು.

ಅಂದರೆ ಉಪಾಕರ್ಮವು ಒಂದು ಕಾಲದಲ್ಲಿ ಕೇವಲ ವಟುಗಳು ತಮ್ಮ ಅಧ್ಯಯನಕ್ಕಾಗಿ ಅದರ ಪ್ರಾರಂಭದಲ್ಲಿ ತಮ್ಮ ಗುರುಕುಲದ ಗುರುಗಳ ಮನೆಯಲ್ಲಿ ಆಚರಿಸಿಕೊಳ್ಳುವ ಹಲವು ವಿಧಿ ವಿಧಾನದ ಒಂದು ವ್ರತ. ಅವನು ಗ್ರಹಸ್ಥನಾದ ನಂತರ ಅದನ್ನು ಆಚರಿಸುವ ಪ್ರಮೇಯವಿರಲಿಲ್ಲ. ಏಕೆಂದರೆ ಅದು ಕೇವಲ ಉಪನಯನದಾದ ವಟುವಿನ ವೇದಾಧ್ಯಯನದ ಪ್ರಾರಂಭದ ಒಂದು ವ್ರತವಾಗಿತ್ತಷ್ಟೇ. ಆದರೆ ಕಾಲ ಕ್ರಮೇಣ ಗ್ರಹಸ್ಥನೂ ತನ್ನ ವೇದಾಧ್ಯಯನದ ಪಾಂಡಿತ್ಯವನ್ನು ಉಳಿಸಿಕೊಳ್ಳುವ ಸಂಬಂಧ ಪ್ರತಿ ವರ್ಷದ ಒಂದು ಅವಧಿಯಲ್ಲಿ -- ಹೆಚ್ಚಾಗಿ ತನಗೆ ಪುರುಸೊತ್ತು ಇರುವ ಮಳೆಗಾಲದಲ್ಲಿ-- ಅವುಗಳನ್ನು ಮರು ಅಧ್ಯಯನ ಮಾಡುವ ಸನ್ನಿವೇಶವನ್ನು ನಿರ್ಮಾಣ ಮಾಡಿಕೊಂಡ. ಆಗ ತನ್ನ ಆ ವರ್ಷದ ಮರು ಅಧ್ಯಯನದ ಪ್ರಾರಂಭಕ್ಕೆ ತಮ್ಮ ಮಕ್ಕಳ ಜೊತೆಗೆ ಅವರ ಗುರುಕುಲದಲ್ಲಿ ತಾನೂ ಉಪಾಕರ್ಮವನ್ನು ಆಚರಿಸಿದ. ಅಲ್ಲಿಗೆ ಬಹಳ ಮಂದಿ ಗ್ರಹಸ್ಥರೂ ಕೂಡಾ - ವಟುಗಳಂತೆ- ಪ್ರತಿ ವರ್ಷ ಉಪಾಕರ್ಮವನ್ನು ಆಚರಿಸುವಂತಾಯಿತು.

ಈಗಿನ ಯುವಕರು ತಮ್ಮ ಉಪನಯನವಾದ ನಂತರ ಮುಂಚಿನ ಹಾಗೆ ಗುರುಕುಲದಲ್ಲಿ ವೇದಾಭ್ಯಾಸವನ್ನು ಮಾಡುವ ಒತ್ತಡದಲ್ಲಿ ಇಲ್ಲ. ವೇದ ಅಂದರೆ ಜ್ಞಾನ. ಜ್ಞಾನದ ಅಧ್ಯಯನವು ವಿಶಾಲವಾಗಿ ಇಂದು ಬೆಳೆದಿದೆ. ಅದು ಆಧುನಿಕವಾಗಿ ಇಂಜನಿಯರಿಂಗ್, ವೈದ್ಯ , ಸಾಮಾಜಿಕ, ಆರ್ಥಿಕ ಹೀಗೆ ಇನ್ನೂ ಅನೇಕ ಶಾಖೆಗಳಾಗಿ ಮುಂದುವರೆದಿವೆ. ಆ ಕ್ಷೇತ್ರಗಳಿಗೆ ಸಹಜವಾಗಿ ಇಂದಿನ ಯುವಕರು ಹೋಗುತ್ತಿದ್ದಾರೆ. ಅಂದಿನಂತೆ ಗುರುಕುಲದ ಬದಲಿಗೆ ಕೆಲವು ವೇದಾಧ್ಯಯನದ ಕೇಂದ್ರಗಳು ಅಲ್ಲಲ್ಲಿ ಇವೆ. ಕೆಲವೇ ಮಂದಿ ಅಲ್ಲಿಗೆ ವೇದಾಧ್ಯಯನಕ್ಕೆ ಹೋದರೂ ಅಲ್ಲಿ ವಿಧ್ಯಾಭ್ಯಾಸದ ಪ್ರಾರಂಭದಲ್ಲಿ ಹಿಂದಿನ ಅರ್ಥದಲ್ಲಿ ಉಪಾಕರ್ಮ ವ್ರತವನ್ನು ಆಚರಿಸಿಕೊಳ್ಳುವ ಕ್ರಮ ಇಲ್ಲವಾಗಿದೆ.

ಆಗಿನ ಕಾಲದಲ್ಲಿ ನಡೆಯುತ್ತಿದ್ದ ಉಪಾಕರ್ಮದ ವ್ರತ ತನ್ನ ಉದ್ದೇಶ ಮತ್ತು ಆಚರಣೆಯನ್ನು ಕಳೆದುಕೊಂಡಿದೆ. ಇದು ಇಂದು ಕೇವಲ ಜನಿವಾರವನ್ನು ಬದಲಾಯಿಸಿಕೊಳ್ಳುವ ಗಂಡಸರ ಒಂದು ಹಬ್ಬವಾಗಿ ಉಳಿದುಕೊಂಡಿದೆ.


ಎಂ. ಗಣಪತಿ ಕಾನುಗೋಡು.
ಸಾಗರ. ಶಿವಮೊಗ್ಗ ಜಿಲ್ಲೆ

ತಾರೀಖು : 3 - 8 - 2020


ಗ್ರಂಥ ಋಣ : 1. ಸಂಸ್ಕಾರ ಮಹೋದಧಿ -- ಡಾ| ಅನಂತನರಸಿಂಹಾಚಾರ್
2. ಹಿಂದೂ ಸಂಸ್ಕಾರಗಳು -- ಪ್ರೊ. ಎಂ ಎ ಹೆಗಡೆ. 3. ಭಾರತೀಯರ ಹಬ್ಬ ಹರಿದಿನಗಳು -- ಶ್ರೀ ಶ್ರೀ ಶ್ರೀರಂಗಪ್ರಿಯ ಶ್ರೀ ಶ್ರೀ .

## ದಕ್ಷಿಣಾದಾನ ##


ಯಾವ ವಸ್ತುವನ್ನು ಕೊಡುವುದರಿಂದ ಯಜಮಾನನು ಅಭಿವೃದ್ಧಿಗೊಳ್ಳುತ್ತಾನೆಯೋ ಆ ವಸ್ತುವಿಗೆ ದಕ್ಷಿಣಾ ಎಂದು ಹೆಸರು. ವೃದ್ಧ್ಯರ್ಥದ 'ದಕ್ಷ' ಧಾತುವಿನ ಮೇಲೆ 'ಇನನ್' ಪ್ರತ್ಯಯವು ಬಂದು "ದಕ್ಷಿಣಾ" ಎಂಬ ಶಬ್ದವು ಉತ್ಪನ್ನವಾಗಿರುತ್ತದೆ.

ಯಜಮಾನನು ತನ್ನ ಯೋಗ್ಯತೆಗೆ ಅನುಸರಿಸಿ ಸರಿಯಾದ ರೀತಿಯಲ್ಲಿ, ಕೊಡಬೇಕಾದ ಕಾಲದಲ್ಲಿ ಸತ್ಪಾತ್ರರಿಗೆ ಕೊಟ್ಟುದುದು ಮಾತ್ರವೇ ದಕ್ಷಿಣೆಯಾಗುತ್ತದೆ. ಇಂಥಹ ದಾನವು ಮಾತ್ರ ಅನಂತವಾದ ಫಲವನ್ನು ಕೊಡುತ್ತದೆ. ಇಲ್ಲದಿದ್ದರೆ 'ಅಭಿವೃದ್ಧಿಗೊಳಿಸುವುದು' ದಕ್ಷಿಣಾ ಶಬ್ದದ ಅರ್ಥವು ಅನ್ವರ್ಥವಾಗುವುದಿಲ್ಲ.

ಗ್ರಂಥಋಣ : ಸಂಸ್ಕಾರ ಮಹೋದಧಿ -- ಡಾ | ಎ. ಅನಂತನರಸಿಂಹಾಚಾರ್ಯ.

## ದರ್ಭ ಸಂಗ್ರಹಣ ##

ದರ್ಭೆಯನ್ನು ಪ್ರತಿ ವರ್ಷ ಶ್ರಾವಣ ಬಹುಳ ಅಮಾವಾಸ್ಯೆಯಂದು ಕತ್ತರಿಸಿ ತರಬೇಕು. ಅಂದು ಕತ್ತರಿಸಿ ತಂದ ದರ್ಭೆಯನ್ನು ಎಷ್ಟು ದಿನ ಬೇಕಾದರೂ ಬಳಸಬಹುದು. ಬಳಸಿ ಉಳಿದರೆ ತಂದ ಮರುವರ್ಷವೂ ಬಳಸಬಹುದು. ಒಮ್ಮೆ ಶ್ರಾವಣ ಬಹುಳ ಅಮಾವಾಸ್ಯೆಯಂದು ತರಲಾಗದಿದ್ದರೆ ಬೇರೆ ದಿನಗಳಲ್ಲಿಯೂ ಕತ್ತರಿಸಿ ತರಬಾರದೆಂದಿಲ್ಲ. ಆ ದಿನವಲ್ಲದೆ ಇನ್ನೂ ಕೆಲವು ನಿಯಮಿತ ದಿನಗಳಲ್ಲಿ ಕತ್ತರಿಸಿ ತರಬಹುದು. ಆದರೆ ಅದಕ್ಕೆ ಆಯಸ್ಸು, ಪಾವಿತ್ರ್ಯತೆ ಕಡಿಮೆ. ಮಹಾಲಯ ಅಮಾವಾಸ್ಯೆಯಂದು ಕತ್ತರಿಸಿ ತಂದರೆ ಆ ದರ್ಭೆಗೆ ಆರು ತಿಂಗಳು ಆಯಸ್ಸು ಇರುತ್ತದೆ. ಅಂತೆಯೇ ಇತರೆ ಅಮಾವಾಸ್ಯೆಯಂದೂ ಕತ್ತರಿಸಿ ತರಬಹುದು. ಆ ದರ್ಭೆಗೆ ಒಂದು ತಿಂಗಳು ಮಾತ್ರ ಆಯಸ್ಸು ಇರುತ್ತದೆ. ಯಾವುದೇ ಹುಣ್ಣಿಮೆಯಂದು ಕತ್ತರಿಸಿ ತಂದರೆ ಹದಿನೈದು ದಿನಗಳು, ಭಾನುವಾರ ತಂದರೆ ಒಂದು ವಾರ, ಉಳಿದ ದಿನಗಳಲ್ಲಿ ಕತ್ತರಿಸಿ ತಂದರೆ ಆ ಒಂದು ದಿನ ಮಾತ್ರ ಆಯಸ್ಸು ಇರುತ್ತದೆ. ಇದಾವುದೇ ದಿನ ಕತ್ತರಿಸಿ ತಂದ ದರ್ಭೆಯನ್ನಾದರೂ ಶ್ರಾವಣ ಬಹುಳ ಅಮಾವಾಸ್ಯೆಯಂದು ಕತ್ತರಿಸಿ ತಂದು ಉಳಿದ ದರ್ಭೆಗೆ ಸೇರಿಸಿದರೆ ಆ ದರ್ಭೆಯ ಸಂಸರ್ಗದಿಂದ ಅವುಗಳಿಗೂ ' ಯಾತಯಾಮ ' (ಹಳೆಯದಾಗುವಿಕೆಯ ದೋಷ ) ದೋಷ ನಿವೃತ್ತಿಯಾಗಿ ಎಷ್ಟು ಕಾಲ ಬೇಕಾದರೂ ಬಳಸಬಹುದು. ನಿರ್ಧಿಷ್ಟ ದಿನದಂದು ಪೂರ್ವಾಹ್ನದಲ್ಲಿ ಕೆಲವು ಶಾಸ್ತ್ರ ರೀತಿಯಲ್ಲಿ ಹೇಳಿರುವ ಕ್ರಮಗಳನ್ನು ಅನುಸರಿಸಿ ಪೂರ್ವಾಭಿಮುಖವಾಗಿ ಕುಳಿತು ಐದು ಮುಷ್ಟಿಗೆ ಕಡಿಮೆ ಇಲ್ಲದಂತೆ ಉದ್ದವಾಗಿರುವ ದರ್ಭೆಯನ್ನು ಕತ್ತರಿಸಬೇಕು. ದರ್ಭೆಯಲ್ಲಿ ಏಳು ವಿಧಗಳಿವೆ. ವಿಶ್ವಾಮಿತ್ರ, ಕುಶ, ಕಾಶ, ಭತ್ತ, ನಸ, ವಯ, ಮತ್ತು ದೂರ್ವಾ ( ಗರಿಕೆ ಹುಲ್ಲು ) ಇವು ಏಳು ವಿಧಗಳು. ರುದ್ರ ಸಂಬಂಧವಾದ ಮತ್ತು ಆಭಿಚಾರಕ ಕೃತ್ಯಗಳಲ್ಲಿ,' ಕಾಶ ' ಎಂಬ ದರ್ಭೆಯನ್ನು, ಬ್ರಾಹ್ಮ ಸಂಸ್ಕಾರಗಳಾದ shrouta ಸ್ಮಾರ್ತಕರ್ಮಗಳಲ್ಲಿ ' ಕುಶ ' ದರ್ಭೆಯನ್ನು, ಉಪಾಕರ್ಮವೇ ಮುಂತಾದ ಋಷಿ ಪೂಜಾಕಾರ್ಯಗಳಲ್ಲಿ ' ದೂರ್ವಾ ' ದರ್ಭೆಯನ್ನು, ಸುದರ್ಶನ ಹೋಮವೇ ಮುಂತಾದ ವೈಷ್ಣವ ಕಾರ್ಯದಲ್ಲಿ ' ವಿಶ್ವಾಮಿತ್ರ ' ದರ್ಭೆಯನ್ನು ಬಳಸುವುದು ಉತ್ತಮ. ನಿರ್ದಿಷ್ಟವಾದ ದರ್ಭೆಗಳು ಸಿಗದಿದ್ದರೆ 'ಕುಶ' ವನ್ನು ಎಲ್ಲಾ ಕಾರ್ಯಗಳಲ್ಲಿ ಬಳಸಬಹುದು. ಆಯಾ ಕಾರ್ಯಗಳಿಗೆ ಹೇಳಿರುವ ನಿರ್ದಿಷ್ಟವಾದ ದರ್ಭೆಗಳು ಒಮ್ಮೆ ಸಿಗದಿದ್ದರೆ ಈ ಏಳು ವಿಧ ದರ್ಭೆಯಲ್ಲಿ ಯಾವುದೇ ದರ್ಭೆಯನ್ನಾದರೂ ಎಲ್ಲಾ ಕಾರ್ಯಗಳಲ್ಲಿಯೂ ಬಳಸಬಹುದು. ದರ್ಭೆಯಲ್ಲಿಯೂ ಲಿಂಗ ಬೇಧವಿದೆ. ದರ್ಭೆಗಳ ತುದಿಯ ಭಾಗ ( ಅಗ್ರಭಾಗ ) ಸ್ಥೂಲವಾಗಿದ್ದರೆ ಅವು ಸ್ತ್ರೀ ದರ್ಭೆ. ಬುಡದ ಭಾಗವು ( ಮೂಲ ಭಾಗ ) ದಪ್ಪನಾಗಿದ್ದರೆ ನಪುಂಸಕ ದರ್ಭೆ. ಮೂಲದಿಂದ ಅಗ್ರದವರೆಗೂ ( ಬುಡದಿಂದ ತುದಿಯವರೆಗೂ ) ಸಮವಾಗಿದ್ದರೆ ಪುಂದರ್ಭೆ ಎಂದು ಹೇಳಲಾಗಿದೆ. ಚೌಲ, ಉಪನಯನ, ಉಪಾಕರ್ಮ ವ್ರತ ಸಮಾವರ್ತನಾದಿ ಪುರುಷ ಸಂಸ್ಕಾರ ಕಾರ್ಯಕ್ರಮಗಳಲ್ಲಿ ಪುಂದರ್ಭೆಯನ್ನು ಬಳಸಬೇಕು. ಗರ್ಭಾದಾನ, ಪುಂಸವನ, ಸೀಮಂತೋನ್ನಯನ ಮುಂತಾದ ಸ್ತ್ರೀ ಸಂಬಂಧ ಕಾರ್ಯಕ್ರಮಗಳಲ್ಲಿ ಸ್ತ್ರೀ ದರ್ಭೆಯನ್ನು ಬಳಸಬೇಕು. ಸ್ತ್ರೀ ಪುರುಷ ಉಭಯ ಸಂಸ್ಕಾರ ರೂಪವಾದ ವಿವಾಹದಲ್ಲಿ ಸ್ತ್ರೀ ಪುರುಷ ಎರಡೂ ದರ್ಭೆಯನ್ನು ಬಳಸಬೇಕು. ಜಾತಕರ್ಮ, ನಾಮಕರಣ, ಅನ್ನಪ್ರಾಶನಗಳಲ್ಲಿ ಸ್ತ್ರೀ ಸಂಸ್ಕಾರವಾದರೆ ಸ್ತ್ರೀ ದರ್ಭೆಯನ್ನು, ಗಂಡು ಮಗುವಿನ ಸಂಸ್ಕಾರವಾದರೆ ಪುಂದರ್ಭೆಯನ್ನು, ಶಾಂತಿ ಕರ್ಮಗಳಲ್ಲಿ ನಪುಂಸಕ ದರ್ಭೆಯನ್ನು ಬಳಸಬೇಕು. ಒಮ್ಮೆ ಯಾವುದೇ ಕರ್ಮದಲ್ಲಿ ನಿರ್ದಿಷ್ಟವಾದ ದರ್ಭೆಯು ಸಿಗದಿದ್ದ ಸನ್ನಿವೇಶದಲ್ಲಿ ಯಾವ ದರ್ಭೆಯನ್ನು ಯಾವುದೇ ಕರ್ಮದಲ್ಲಿ ಬಳಸಬಹುದು. ಸಿಕ್ಕರೆ ಉತ್ತಮ. 

ಗ್ರಂಥಋಣ : ಸಂಸ್ಕಾರ ಮಹೋದಧಿ ---- ಮಮಹೋಪಾಧ್ಯಾಯ ಡಾ ll ಎ. ಅನಂತನರಸಿಂಹಾಚಾರ್.

Sunday 13 January 2019

#### ಯಜ್ನೋಪವೀತ ####

ಯಜ್ನೋಪವೀತ ಎಂದರೆ ಕೇವಲ ಜನಿವಾರ ಅಲ್ಲ. ಯಜ್ನೋಪವೀತದ ಜಾಗಕ್ಕೆ ಕಾಲಾನುಕ್ರಮದಲ್ಲಿ ಜನಿವಾರ ಬಂದಿದೆ ಅಷ್ಟೆ. ಯಜ್ನೋಪವೀತ ಎಂದರೆ ಯಜ್ಞ ಮಾಡುವುದಕ್ಕಾಗಿ ಮಾಡಿಕೊಂಡ ಉಪವೀತ. ಉಪವೀತ ಎಂದರೆ ಉತ್ತರೀಯ ಎಂದರ್ಥ. ಎಡದ ಹೆಗಲ ಮೇಲಿನಿಂದ ಬಂದು ಬಲದ ತೋಳಿನ ಕೆಳಗಡೆಯಿಂದ ಬಂದಿದ್ದರೆ ಅದು ಯಜ್ನೋಪವೀತವಾಗುತ್ತದೆ. ಯಜ್ನೋಪವೀತವನ್ನು ಬಹಳ ಹಿಂದಿನ ಕಾಲದಲ್ಲಿ ಸದಾ ಧರಿಸಿರಬೇಕಾಗಿರಲಿಲ್ಲ. ಯಜ್ನಾದಿ ಧಾರ್ಮಿಕ ಕಾರ್ಯವನ್ನು ಮಾಡುವಂಥಹ ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಧರಿಸಿದ್ದರೆ ಸಾಕಾಗಿತ್ತು. ಸ್ವಾಧ್ಯಾಯ , ಉತ್ಸರ್ಗ, ದಾನ, ಭೋಜನ, ಮತ್ತು ಆಚಮನಗಳೆಂಬ ಪಂಚಕರ್ಮಗಳನ್ನು ನಡೆಸುವಾಗ ಮಾತ್ರ ಧರಿಸುವ ಅಗತ್ಯವಿತ್ತು.

 ಪ್ರಾಚೀನ ಕಾಲದಲ್ಲಿ ಈಗಿನಂತೆ ಯಜೋಪವೀತವು ಜನಿವಾರ ಆಗಿರಲಿಲ್ಲ. ಕೃಷ್ಣಮೃಗದ ಇಡೀ ಚರ್ಮವೇ [ ಕೃಷ್ಣಾಜಿನ ] ಉಪವೀತವನ್ನಾಗಿ ಧರಿಸಲಾಗುತ್ತಿತ್ತು. ಅದು ಭಾರವೆನ್ನಿಸಿದ್ದರಿಂದ ನಂತರ ಕಾಲಾನುಕ್ರಮದಲ್ಲಿ ಹತ್ತಿಯ ಬಟ್ಟೆಯನ್ನು ಉಪವೀತವನ್ನಾಗಿ ಬಳಸಲಾಯಿತು. ಆದರೆ ಪ್ರಾಚೀನ ಪದ್ಧತಿಯನ್ನು ಬಿಡಲಾಗದ ಪೂರ್ವಾಗ್ರದಲ್ಲಿ ಆ ಬಟ್ಟೆಯ ಉಪವೀತದ ಜೊತೆಗೆ ನಾಲ್ಕು ಅಂಗುಲ ಅಗಲದ ಕೃಷ್ಣಾಜಿನದ ಉದ್ದನೆಯ ಪಟ್ಟಿಯನ್ನು-- ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗಿನವರೆಗೆ -- ಧರಿಸಿಕೊಳ್ಳುವ ಪದ್ಧತಿ ಬಂತು. ಮುಂದೆ ಕಾಲಾನುಕ್ರಮದಲ್ಲಿ ಅದೂ ಕಷ್ಟವೆನಿಸಿದಾಗ ಮೂರು ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲದ ಒಂದು ಚಿಕ್ಕ ತುಂಡನ್ನು ಆ ಬಟ್ಟೆಯ ಉಪವೀತಕ್ಕೆ ಸೇರಿಸಿ ಧರಿಸುವ ಪದ್ಧತಿ ಬಂತು. ಈಗ ಉಪನಯನವಾದ ಕೆಲವು ದಿನ ಅದೇ ರೀತಿ ಜನಿವಾರಕ್ಕೆ ಕೃಷ್ಣಾಜಿನ ಚಿಕ್ಕ ತುಂಡನ್ನು ಸೇರಿಸುವುದು ಈ ಕಾರಣದಿಂದ ಎಂದು ಹೇಳಲಾಗಿದೆ. ಕೃಷ್ಣಮೃಗದ ಚರ್ಮವೇ ಆಗಲಿ, ನಂತರದ ಹತ್ತಿಯ ಬಟ್ಟೆಯೇ ಆಗಲಿ ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗೆ ಬರುವ ಕ್ರಮವನ್ನು ಅನುಸರಿಸಲಾಗಿತ್ತು. ಈಗ ಅಪರಕರ್ಮವನ್ನು ಮಾಡುವಾಗ ಜನಿವಾರದ ಜೊತೆಗೆ ಬಟ್ಟೆಯ ತುಂಡನ್ನುಉಪವೀತದ ಆಕಾರದಲ್ಲಿ ಸೇರಿಸಿಕೊಳ್ಳುವುದು ಆಗಿನ ಕಾಲದ ಇಡೀ ಬಟ್ಟೆಯ ಉಪವೀತದ ಅನುಕರಣೆ ಇರಬೇಕು.

 ಒಂದು ಕಾಲದಲ್ಲಿ ಯಜ್ಞಗಳು ವ್ಯಕ್ತಿಯ ಜೀವನದಲ್ಲಿ ಆಗಾಗ್ಯೆಯಷ್ಟೇ ನಡೆಯುತ್ತಿತ್ತು ಆಗಷ್ಟೇ ಯಜೋಪವೀತವನ್ನು ಧರಿಸಲಾಗುತ್ತಿತ್ತು. ಉಳಿದ ಸಂದರ್ಭಗಳಲ್ಲಿ ಅದನ್ನು ಧರಿಸುವ ಪರಿಪಾಠ ಇರಲಿಲ್ಲ. ಆದರೆ ಕಾಲಾನುಕ್ರಮದಲ್ಲಿ ಯಜ್ನಗಳಿಗೆ ಪ್ರಾಶಸ್ತ ಬಂದಮೇಲೆ ಪ್ರತಿ ದಿನವೂ ಯಜ್ನವನ್ನು ಮಾಡಬೇಕೆಂದು ವಿಧಿ ಮಾಡಿದರು. ಪಂಚಮಹಾಯಜ್ಞಗಳು ಗೃಹಸ್ಥನಿಗೆ ಕಡ್ದಾಯವೆಂದು ವಿಧಿಸಲಾಯಿತು. ಅಷ್ಟೇ ಅಲ್ಲ, ಇತರ ಅನೇಕ ಕಾರ್ಯಗಳನ್ನು ಯಜ್ಞ ಸಮಾನವೆಂದು ಸಾರಲಾಯಿತು. ಯಜ್ನ ಮಾಡುವಾಗ ಉಪವೀತ ಇರಬೇಕು ಎಂದಮೇಲೆ ಈ ಕಾಲಘಟ್ಟದಲ್ಲಿ ಸದಾಕಾಲವೂ ಯಜ್ನೋಪವೀತವು ಶರೀರದ ಮೇಲೆ ಇರುವುದು ಕಡ್ದಾಯವಾಯಿತು.
ಈ ಹಂತದವರೆಗೆ ಯಜ್ನೋಪವೀತವನ್ನು ಬೇಕಾದಾಗ ಶರೀರದ ಮೇಲೆ ಇಟ್ಟುಕೊಳ್ಳುವ ಬೇಡವೆಂದಾಗ ತೆಗೆದಿಡುವ ಪದ್ಧತಿ ರೂಢಿಯಲ್ಲಿತ್ತು. ಸದಾಕಾಲವೂ ಯಜ್ನೋಪವೀತವು ಶರೀರದ ಮೇಲೆ ಇರಬೇಕು ಎನ್ನುವ ಈ ಕಾಲದಲ್ಲಿ ಕೃಷ್ಣಾಮೃಗದ ಇಡಿಯ ಚರ್ಮವನ್ನೋ ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲ ಅಗಲದ ಉದ್ದನೆಯ ಪಟ್ಟಿಯನ್ನು ಸೇರಿಸಿಕೊಂಡ ಹತ್ತಿಯ ಇಡಿಯ ಬಟ್ಟೆಯನ್ನೋ ಅಥವಾ ನಾಲ್ಕು ಅಂಗುಲದ ಕೃಷ್ಣಾಜಿನದ ತುಂಡನ್ನು ಸೇರಿಸಿದ ಹತ್ತಿಯ ಬಟ್ಟೆಯನ್ನೂ ಉಪವೀತವನ್ನಾಗಿ ದಿನ ನಿತ್ಯ ಧರಿಸುವ ಪದ್ಧತಿ ಕಷ್ಟವೆನಿಸಿರಬೇಕು. ಆಗ ಅದರ ಬದಲು ದರ್ಭೆಯ ಹಗ್ಗವನ್ನು ಯಜ್ನೋಪವೀತವನ್ನಾಗಿ ಧರಿಸುವ ಪರಿಪಾಠ ಬಂತು. ಆದರೆ ಅದೂ ಕಿರಿಕಿರಿಯನ್ನುಂಟು ಮಾಡುತ್ತಿದ್ದುದರಿಂದ ಹತ್ತಿಯ ದಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಜಾರಿಗೆ ಬಂತು. ಮೂರೆಳೆಯ ದಾರವನ್ನು ಜನಿವಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಪ್ರಾಚಿನದಕ್ಕೆ ಹೋಲಿಸಿದರೆ ಇತ್ತೀಚಿನದು. ಯಜ್ನೋಪವೀತವು ಹೀಗೆ ಸಂಪೂರ್ಣ ಕಷ್ಣಾ ಮೃಗದ ಚರ್ಮ , ಸಂಪೂರ್ಣ ಹತ್ತಿಯ ಬಟ್ಟೆ , ಹತ್ತಿಯ ದಾರ ಎಂಬ ಮೂರು ಹಂತಗಳಲ್ಲಿ ಕಾಲಾನುಕ್ರಮದಲ್ಲಿ ಪರಿವರ್ತನೆಯಾಗಿದೆ.

 [ ಪ್ರೊ. ಎಂ. ಎ. ಹೆಗಡೆಯವರ ' ಹಿಂದೂ ಸಂಸ್ಕಾರಗಳು ' ಎನ್ನುವ ಪುಸ್ತಕದಿಂದ ಆಯ್ದು ಬರೆದದ್ದು. ]

 ತಾರೀಖು : 10 -- 1 -- 2019

#### ಜನಿವಾರ ###

ಸಂಗ್ರಹ : ಎಂ. ಗಣಪತಿ ಕಾನುಗೋಡು.

 ಜನಿವಾರ ಎನ್ನುವುದು ಮೂರು ಎಳೆಯ ಹತ್ತಿಯ ದಾರ . ಪ್ರಾಚೀನ ಕಾಲದಲ್ಲಿ ಮೊದಲು ಕೃಷ್ಣಮೃಗದ ಇಡಿಯ ಚರ್ಮ , ಸ್ವಲ್ಪ ಕಾಲದ ನಂತರ ನಾಲ್ಕು ಅಂಗುಲದ ಅಗಲದ ಉದ್ದನೆಯ ಕೃಷ್ಣಮೃಗದ ಚರ್ಮದ ಪಟ್ಟೆಯೊಂದಿಗೆ ಹತ್ತಿಯ ದೊಡ್ಡ ಬಟ್ಟೆ, ಇನ್ನೂ ಸ್ವಲ್ಪ ಕಾಲದ ನಂತರ ಕೃಷ್ಣಾ ಮೃಗದ ಚರ್ಮದ ನಾಲ್ಕು ಅಂಗುಲದ ಒಂದು ಸಣ್ಣ ತುಂಡಿನೊಂದಿಗೆ ಹತ್ತಿಯ ಬಟ್ಟೆ, ಅದಕ್ಕೂ ಸ್ವಲ್ಪ ಕಾಲಾ ನಂತರ ದರ್ಭೆಯ ಹುರಿಯನ್ನು ಯಜ್ನೋಪವೀತವನ್ನಾಗಿ ಮಾಡಿಕೊಳ್ಳಲಾಗಿತ್ತು. ಬಹಳ ಕಾಲದ ನಂತರ ಇವೆಲ್ಲದರ ಬದಲಿಗೆ ಅನುಕೂಲಸಿಂಧುವಾಗಿ ಹತ್ತಿಯ ನೂಲಿನ ದಾರವನ್ನು ಯಜ್ನೋಪವೀತವನ್ನಾಗಿ ಬಳಸುವ ರೂಢಿ ಬಂತು. ಅದಕ್ಕೆ ಜನಿವಾರ ಎಂದು ಹೆಸರಿಸಲಾಯಿತು. ಹಿಂದಿನ ಯಜ್ನೋಪವೀತದ ಕ್ರಮದಂತೆ ಜನಿವಾರವನ್ನೂ ಎಡ ಹೆಗಲಿನ ಮೇಲಿನ ಭಾಗದಿಂದ ಬಂದು ಬಲದ ತೋಳಿನ ಕೆಳಗಡೆಯವರೆಗೆ ಧರಿಸಿಕೊಳ್ಳುವುದು ಆಚರಣೆಯಾಯಿತು.

 ಜನಿವಾರಕ್ಕೆ ಹಿಂದಿನ ಯಜ್ನೋಪವೀತದ ಬೇರೆ ಬೇರೆ ರೂಪಗಳಿಗೆ ಕೊಟ್ಟ ಮಹತ್ವ ಮತ್ತು ಪಾವಿತ್ರ್ಯವನ್ನು ಕೊಡಲಾಯಿತು. ಅದಕ್ಕಾಗಿ ಜನಿವಾರವನ್ನು ಧರಿಸುವಾಗ ಹಿಂದಿನ ಯಜ್ನೋಪವೀತಗಳನ್ನು ಧರಿಸುವಾಗ ಹೇಳುವ ಮಂತ್ರ " ಯಜ್ನೋಪವೀತಂ ಪರಮಂ ಪವಿತ್ರಂ ............ ಯಜ್ನೋಪವೀತಂ ಬಲಮಸ್ತು ತೇಜಃ || ಎನ್ನುವ ಮಂತ್ರವನ್ನು ಹೇಳಲಾಗುತ್ತದೆ. ಶಾಸ್ತ್ರಕಾರರು ಅದಕ್ಕೆ ಪಾವಿತ್ರ್ಯ ಮತ್ತು ಗಾಂಭೀರ್ಯಗಳನ್ನು ತುಂಬುವುದಕ್ಕೆ ಅನೇಕ ವಿಧಿಗಳನ್ನು ಹೇಳಿದ್ದಾರೆ.

 ಜನಿವಾರದ ಅಳತೆ 96 ಅಂಗುಲ. ಅದು ಅತಿ ಲಂಬವೂ ಆಗಿರಬಾರದು. ಅತಿ ಹ್ರಸ್ವವೂ ಆಗಿರಬಾರದು. 96 ಅಂಗುಲದ ದಾರವನ್ನು ಮೂರು ಸಮ ಎಳೆಗಳಾಗಿ ವಿಂಗಡಿಸಿ ಒಂದೇ ಗಂಟನ್ನು ಹಾಕುವುದು ಕ್ರಮ. ಮೂರು ಎಳೆಗಳು ಮೂರು ವೇದಗಳನ್ನು ಸಂಕೇತಿಸುತ್ತವೆ. ಇಲ್ಲಿ ಹಾಕುವ ಗಂಟಿಗೆ ಬ್ರಹ್ಮಗಂಟೆಂದು ಹೆಸರು. ಜನಿವಾರವು ಮೂರು ಎಳೆಗಳಿಂದ ಕೂಡಿರುತ್ತದೆ. ಅದರಲ್ಲಿನ ಪ್ರತಿ ಎಳೆಯೂ ಮತ್ತೆ ಮೂರು ಎಳೆಗಳಿಂದ ಕೂಡಿರುತ್ತದೆ. ಅಂದರೆ ಜನಿವಾರವು ವಾಸ್ತವಾಂಶದಲ್ಲಿ ಒಟ್ಟು ಒಂಬತ್ತು ಎಳೆಗಳಿಂದ ಕೂಡಿರುತ್ತದೆ. ಈ ಒಂದೊಂದು ಎಳೆಗೂ ಒಬ್ಬ ಅಧಿದೇವತೆ. ಓಂಕಾರ , ಅಗ್ನಿ, ನಾಗ, ಚಂದ್ರ, ಪಿತೃ, ಪ್ರಜಾಪತಿ, ವಾಯು, ಸೂರ್ಯ, ವಿಶ್ವೇದೇವ ಇವರು ಆ ಒಂಬತ್ತು ಎಳೆಗಳಿಗೆ ಒಂಬತ್ತು ಅಧಿದೇವತೆಗಳು. ಈ ದೇವತೆಗಳನ್ನು ಆವಾಹಿಸಿ ಪೂಜೆ ಸಲ್ಲಿಸಿ ಯಜ್ನೋಪವೀತವನ್ನು ಧಾರಣ ಮಾಡಬೇಕು.

 ಜನಿವಾರವು 96 ಅನ್ಗುಲವೇ ಏಕಿರಬೇಕೆಂಬುದಕ್ಕೆ ಬೇರೆ ಬೇರೆ ಕಾರಣವನ್ನು ಹೇಳಲಾಗಿದೆ.

 ಈಗಿನ ಕಾಲದಲ್ಲಿ ಬಹುತೇಕ ಮಂದಿ ವಿಧ್ಯುಕ್ತವಾದ ಅನುಷ್ಠಾನವನ್ನು ಮಾಡದಿದ್ದರೂ ಎಂದಿನಿಂದಲೋ ಬಂದ ಒಂದು ಸಂಪ್ರದಾಯವೆಂದು ಜನಿವಾರವನ್ನು ಧರಿಸುತ್ತಿದ್ದಾರೆ. ಹಾಗೆ ಮಾಡುವುದರಿಂದ ಅದರ ಶಕ್ತಿ ಕಳೆದುಹೋಗುತ್ತದೆ.

 [ ಪ್ರೊ: ಎಂ. ಎ. ಹೆಗಡೆಯವರ ' ಹಿಂದೂ ಸಂಸ್ಕಾರಗಳು ' ಪುಸ್ತಕದಿಂದ ಆಯ್ದು ಬರೆದದ್ದು ]

#### ಮಕರ ಸಂಕ್ರಾಂತಿ ####

ಎಂ. ಗಣಪತಿ. ಕಾನುಗೋಡು. 

ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣವು ಸೂರ್ಯನ ಪಥ ಬದಲಾವಣೆಗೆ ಸಂಬಂಧಿಸಿದ ಪರ್ವದಿನ [ Transition Day ]. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ 6 ತಿಂಗಳು ಪ್ರಯಾಣ ಬೆಳಸುತ್ತಾನೆ. ಪೌಷ್ಯ ಲಕ್ಷ್ಮಿಯ ಆಗಮನದ ತರುವಾಯ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನವನ್ನೇ ಮಕರ ಸಂಕ್ರಾಂತಿ ಎಂದು ಕರೆಯುವುದು. ಹೀಗೆ ಸೂರ್ಯಪಥ ಗಮನದಿಂದ ಭಾರತವಲ್ಲದೆ ಅರೇಬಿಯಾ, ಸಿರಿಯಾ, ಬೆಬಿಲೋನ್, ರೋಮ್ ಮೊದಲಾದ ದೇಶಗಳಿಗೆ ರಾತ್ರಿ ಕಡಿಮೆ ಆಗಿ ಹಗಲು ಹೆಚ್ಚು ದೊರಕುತ್ತದೆ. 

ಮದುವೆಯಾದ ಮೊದಲ ವರ್ಷದಲ್ಲಿ ಮಕರ ಸಂಕ್ರಾಂತಿಯಂದು ಹತ್ತಿರದ ನೆಂಟರಿಷ್ಟರೊಂದಿಗೆ ಸೊಸೆಯನ್ನು ತವರಿಗೆ ಕರೆದೊಯ್ದು ತಾಯಿಗೆ ಸೋಸೆಯಿಂದ ಬಾಗೀನ ಕೊಡಿಸುವ ಪದ್ಧತಿ ಕೆಲವೆಡೆ ಇದೆ. ಕರ್ಕಾಟಕ ಸಂಕ್ರಾಂತಿಯಂದು ತವರ ಮನೆಯವರು ತಮ್ಮ ಹತ್ತಿರದ ಬಂಧು ಮಿತ್ರರೊಂದಿಗೆ ಬಂದು ಮಗಳ ಕೈಯಿಂದ ಗಂಡನ ಮನೆಯ ಹೊಸ್ತಿಲ ಪೂಜೆಯನ್ನು ಮಾಡಿಸುತ್ತಾರೆ. 

ಹಿಂದೂ ಪದ್ಧತಿಯಲ್ಲಿ ಪ್ರತಿಯೊಂದು ಮಾಸಕ್ಕೆ ತಕ್ಕಂತೆ ಒಂದೊಂದು ರಾಶಿ ಹಾಗೂ ಸಂಕ್ರಮಣ ಇದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಹೋಗುವುದೇ ಸಂಕ್ರಮಣ. ಅಂತೆಯೇ ಹನ್ನೆರಡು ರಾಶಿಗಳಿಗೆ ತಕ್ಕಂತೆ ಹನ್ನೆರಡು ಸಂಕ್ರಮಣಗಳು ಇವೆ. ಇವುಗಳಲ್ಲಿ ಮಕರ ಸಂಕ್ರಮಣ [ ಜನವರಿ 14 ] ಮತ್ತು ಕರ್ಕಾಟಕ ಸಂಕ್ರಮಣ [ ಜುಲೈ 16 ] ಗಳನ್ನು ಮುಖ್ಯವಾಗಿ ಆಚರಿಸಲಾಗುತ್ತದೆ. 

ಎಲ್ಲ ಸಂಕ್ರಮಣಗಳು ಪ್ರತಿ ತಿಂಗಳು 14 , 15 ಅಥವಾ 16 ನೆ ತಾರೀಖಿನಂದು ಮಾತ್ರ ಬರುತ್ತವೆ. ಈ ದಿನಗಳು ಶುಭ ಕಾರ್ಯಗಳಿಗೆ ಪ್ರಶಸ್ತವಲ್ಲ ಎನ್ನುತ್ತಾರೆ. ಸಂಕ್ರಮಣ ಕಾಲದಲ್ಲಿ ಶೃದ್ಧಾಭಕ್ತಿ ವಿವೇಕಗಳಿಂದ ಮಾಡುವ ಸ್ನಾನ, ಧ್ಯಾನ, ಹೋಮ, ಪೂಜೆ, ತರ್ಪಣ, ಶ್ರಾದ್ಧ , ಉಪವಾಸ ವ್ರತಗಳನ್ನು ನಡೆಸುವುದು ಒಳ್ಳೆಯದು ಎಂದು ಹೇಳಲಾಗಿದೆ. 

ಸಂಕ್ರಾಂತಿಯು ಪುಣ್ಯಕಾಲವೆಂದು ಪರಿಗಣಿತವಾದುದರಿಂದ ಅಂದು ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡುವುದು ಅತ್ಯಂತ ಪ್ರಶಸ್ತ. ಹೀಗೆ ಮಾಡುವ ಸ್ನಾನವು ಶರೀರದ ಕೊಳೆಯನ್ನು ತೊಳೆಯುವ ಮಲಾಪಕರ್ಷಣ ಸ್ನಾನವಲ್ಲ. ಮಾನಸಿಕ ದೋಷಗಳನ್ನು ತೊಳೆಯುವ ಪುಣ್ಯಸ್ನಾನ. ಅದಕ್ಕಾಗಿ ಬಿಸಿನೀರಿನಿಂದ ಮಾಡುವ ಅಭ್ಯಂಜನಕ್ಕಿಂತ ಗಂಗಾದಿ ಪುಣ್ಯತೀರ್ಥಗಳಿಗೆ ಹೋಗಿ ಸಂಕಲ್ಪ ಪೂರಕವಾಗಿ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಪುಣ್ಯ ಸ್ನಾನವಾದ ನಂತರ ಶ್ರಾದ್ಧಕ್ಕೆ ಅಧಿಕಾರವುಳ್ಳವರು ಪಿತೃಗಳನ್ನೂ ಕುರಿತು ತರ್ಪಣಾದಿ ರೂಪದಲ್ಲಿ ಶ್ರಾದ್ಧ ಮಾಡಬೇಕು. ದಾನಧರ್ಮಗಳನ್ನು ಮಾಡಬೇಕು. 

ಧ್ಯಾನ ಧೀಕ್ಷೆ ಮತ್ತು ಮಂತ್ರಧೀಕ್ಷೆಯನ್ನು ಪಡೆಯುವುದಕ್ಕೆ ಇದು ಉತ್ತಮವಾದ ಕಾಲ. 

ಹಿಂದೂಗಳು ಮಕರ ಸಂಕ್ರಾಂತಿಯ ದಿನವನ್ನು ' ಉತ್ತರಾಯಣ ಪುಣ್ಯಕಾಲ ' ಎಂದು ಕರೆಯುತ್ತಾರೆ. ಏಕೆಂದರೆ ಸೂರ್ಯನಾರಾಯಣನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಹೆಜ್ಜೆಯಿಡಲು ಪ್ರಾರಂಭಿಸುವ ಪವಿತ್ರ ಸಮಯವಾಗಿರುತ್ತದೆ. ಈ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ನಮ್ಮವರ ನಂಬಿಕೆ. ಶರಶಯ್ಯೆಯ ಮೇಲೆ ಮಲಗಿದ್ದ ಇಚ್ಛಾಮರಣಿ ಭೀಷ್ಮರು ಸಹ ಕೊನೆಯುಸಿರನ್ನು ಎಳೆಯುವುದಕ್ಕಾಗಿ ಉತ್ತರಾಯಣ ಬರುವವರೆಗೆ ಕಾಯ್ದಿದ್ದರು. 

ಮಕರ ಸಂಕ್ರಾಂತಿಯ ದಿನದಿಂದ ದೇವತೆಗಳಿಗೆ ಹಗಲು ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣಗಳ ಹೇಳಿಕೆ.

ಮಧ್ಯಾಹ್ನದ ಬೋಜನವಾದ ನಂತರ ಪರಿಕರ ಸಹಿತವಾದ ಎಳ್ಳು ಬೆಲ್ಲವನ್ನು, ಕಬ್ಬಿನ ಜಲ್ಲೆಯನ್ನು, ಸಕ್ಕರೆಯಿಂದ ಮಾಡಿದ ವಿಗ್ರಹಗಳನ್ನು ಹಂಚುವ ಪದ್ಧತಿ ಇದೆ. ಇವೆಲ್ಲವನ್ನೂ ಹಂಚಿ ಇಷ್ಟಮಿತ್ರರೊಂದಿಗೆ ಮಧುರ ಮಾತುಗಳನ್ನು ಆಡುತ್ತಾರೆ. ಸಾಮಾಜಿಕ ಸಂಬಂಧವನ್ನು ಘಟ್ಟಿಗೊಳಿಸಲು ಇದು ಒಂದು ಮಾರ್ಗ. ಸಾಗರದ ಕೆಲವು ಕಡೆ ಮದ್ಯಾಹ್ನದ ಊಟಕ್ಕೆ ಸಿಹಿ ಹೆಸರುಬೇಳೆ ಹುಗ್ಗಿ [ ಪೊಂಗಲ್ ] ಮತ್ತು ಸಿಹಿ ಬೆರಸದ ಪೊಂಗಲ್ , ಜೊತೆಗೆ ಹೊಸ ಹುಣಿಸೆ ಹಣ್ಣಿನ ಹುಳಿಗೊಜ್ಜನ್ನು ಮಾಡುತ್ತಾರೆ. 

ಭೋಗಿ, ಸಂಕ್ರಮಣ ಮತ್ತು ಕನು ಹಬ್ಬ ಎಂದು ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸುವ ಪದ್ಧತಿ ಕೆಲವೆಡೆ ಇದೆ. ಸುಗ್ಗಿಯ ಕಾಲದ ಹಿಗ್ಗು ಬಂದಿರುತ್ತದೆ. ಕಬ್ಬು ಸಮೃದ್ಧಿಯಾಗಿ ಈ ವೇಳೆಗೆ ಬೆಳೆದಿರುತ್ತದೆ. ಮನೆಯಲ್ಲಿ ಮಕ್ಕಳಿಗೆ ಅಭ್ಯಂಜನ ಮಾಡಿಸಿ ಮಕ್ಕಳ ತಲೆಯ ಮೇಲೆ ಭೋಗಿ ಹಣ್ಣು [ ಬದರೀಫಲ] [ ಬೋರೆಯ ಹಣ್ಣು,ಎಲಚಿಹಣ್ಣು ] , ಕಬ್ಬು ಮೊದಲಾದುವುಗಳನ್ನು ಎರೆದು ಆರತಿ ಮಾಡುವ ಪದ್ಧತಿ ಕೆಲವೆಡೆ ಇದೆ. 

ಕೆಲವು ಕಡೆ ಹಸು , ಎಮ್ಮೆ ಮೊದಲಾದ ಜಾನುವಾರುಗಳಿಗೆ ಸ್ನಾನ ಮಾಡಿಸಿ ಅವುಗಳ ಕೋಡಿಗೆ , ಮೈಗೆ ಬಣ್ಣ ಬಳಿದು ಅಲಂಕರಿಸುತ್ತಾರೆ. ಅವುಗಳಿಗೆ ಪ್ರಿಯವಾದ ಹುಲ್ಲುಕಡ್ಡಿ, ಧಾನ್ಯ, ಕಾಯಿ, ಬೆಲ್ಲವನ್ನು ತಿನ್ನಿಸುತ್ತಾರೆ. ದೃಷ್ಟಿದೋಷ, ಪೀಡೆಯ ನಿವಾರಣೆಗಾಗಿ ಬೆಂಕಿಯ ಮೇಲೆ ದಾಟಿಸುವ ಪದ್ಧತಿ ಇದೆ. ಇದಕ್ಕೆ ಕಿಚ್ಚು ಹಾಯಿಸುವುದು ಎನ್ನುತ್ತಾರೆ. 

ಇನ್ನು ಕೆಲವು ಕಡೆ ದೇವಸ್ಥಾನಗಳಲ್ಲಿ ದೇವರ ಮುಂದೆ ಮೊಲಕ್ಕೆ ಅರಿಸಿನ - ಕುಂಕುಮ ಬಳಿದು ಹೂವು ಮುಡಿಸಿ ಪೂಜೆ ಮಾಡಿ ಬಿಡುವ ಪದ್ಧತಿ ಇದೆ. 

ಆಂದ್ರದಲ್ಲಿಯೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಲಾಗುತ್ತದೆ. ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ತಂದ ದಿನವೆಂದು ಭಾವಿಸಿ ಮನೆಯ ಮುಂದೆ ಬೆಂಕಿಯನ್ನು ಹಾಕಿ ರಾವಣ ದಹನವನ್ನು ನಡೆಸುತ್ತಾರೆ. ಇದನ್ನು ' ಭೋಗಿಮಂಟ 'ಎಂದು ಕರೆಯುತ್ತಾರೆ. ಸ್ವರ್ಗಸ್ತರಾದ ಪಿತೃಗಳು ಅದೃಶ್ಯರಾಗಿ ಸ್ವರ್ಗಲೋಕದಿಂದ ತಮ್ಮ ಮನೆಯಂಗಳಕ್ಕೆ ಆಗಮಿಸುವರೆಂದು ಅವರ ನಂಬಿಕೆ. 

ತಮಿಳುನಾಡಿನಲ್ಲಿ ಸಂಕ್ರಾಂತಿಯ ಹಬ್ಬವನ್ನು ' ಪೊಂಗಲ್ ' ಎಂದು ಕರೆಯುತ್ತಾರೆ. ವಿಶೇಷ ವಿಧಿಯಿಂದ ಹಾಲನ್ನು ಕಾಯಿಸಿ ಉಕ್ಕಿಸುವ ದಿನವಾದ್ದರಿಂದ ಅಲ್ಲಿ ಇದು ಪೊಂಗಲ್ ಎಂದು ಪ್ರಸಿದ್ಧವಾಗಿದೆ. ಪೊಂಗಲ್ಲನ್ನು ಬೇಯಿಸಿ ಕಬ್ಬಿನ ಜಲ್ಲೆಗಳನ್ನಿರಿಸಿ ಪೂಜೆ ಮಾಡುತ್ತಾರೆ. ಅದನ್ನು ಸೂರ್ಯನಿಗೆ ನೈವೇಧ್ಯ ಮಾಡುತ್ತಾರೆ. ಸಂಕ್ರಾಂತಿಯು ತಮಿಳರಿಗೆ ಸಂಭ್ರಮದ ಹಬ್ಬ. 

ಉತ್ತರ ಭಾರತದಲ್ಲಿಯೂ ಈ ಹಬ್ಬವನ್ನು ಆಚರಿಸುವುದುಂಟು. ಅಲಹಾಬಾದಿನಲ್ಲಿ ಈ ವೇಳೆಗೆ ಸುಪ್ರಸಿದ್ಧವಾದ ಕುಂಭಮೇಳವನ್ನು ನಡೆಸುವ ಪದ್ಧತಿ ಇದೆ. 

ತಾರೀಖು :14 - 1 - 2018 .

Thursday 10 January 2019

ಅಡಿಕೆ ಬೇಯಿಸುವ ಒಲೆ. ಅಸ್ತ್ರ ಒಲೆ

ನಮ್ಮ ಮನಯಲ್ಲಿ ಮಾಡಿರುವ ಅಡಿಕೆ ಬೇಯಿಸುವ ಒಲೆ. ಅಸ್ತ್ರ ಒಲೆ. ಇದರ ವಿಶೇಷ ಎಂದರೆ 1. ಒಲೆಯ ಕೆಳಗಿನ ಭಾಗದಿಂದ ಒಳಗೆ ಗಾಳಿ ಬರುವ ವ್ಯವಸ್ತೆ -- ಹಿಂದಿನ ಆಲೆಮನೆಯ ಪೂಗುದಾಳಿ [ ಒಲೆಯ ಮಧ್ಯಭಾಗದಲ್ಲಿನ ಕೆಳಗಿನ ಗಾಳಿ ಬರುವ ಕಿಂಡಿ ] ಇದ್ದಂತೆ . ಇದರಲ್ಲಿ ಬೂದಿಯೂ ಕೆಳಗೆ ಬೀಳುತ್ತದೆ. 2. ಕಟ್ಟಿಗೆ ಕೂಡುವ ಜಾಗ ಕೇವಲ 12 ಇಂಚು ಅಗಲ, 8 ಇಂಚು ಎತ್ತರ, ಹಂಡೆ ಇಡುವ ಜಾಗದಿಂದ ಹೊರಗೆ 30 ಇಂಚು ಉದ್ದದ ಒಂದು ಕಾಲುವೆಯಾಕೃತಿಯ ವ್ಯವಸ್ಥೆ ಸಾಕು. ಸುಮಾರು ಐದು ಅಡಿ ಉದ್ದದ ಒಂದು ತಲೆ ಹೊರೆ ಮರದ ಚೆಕ್ಕೆಗಳನ್ನು ಕೂಡಿದರೆ ಒಂದು ಹಂಡೆ ಅಡಿಕೆ ಬೇಯುತ್ತದೆ.. ಕುಂಟೆಗಳ ಅಗತ್ಯವಿಲ್ಲ. ಇದರಲ್ಲಿ ಗಾಳಿ ಒಳಹೋಗದಂತೆ ಮುಚ್ಚಿಡಲಾಗುತ್ತದೆ. .3. . ಗಾಳಿ ಬರುವ ಕಿಂಡಿ + ಬೂದಿ ಬೀಳುವ ಜಾಗದಲ್ಲಿ ಹಾಕಿರುವ ಜಾಲರಿಯ ಮಟ್ಟದಿಂದ ಅಂದರೆ ಒಲೆಯ ತಳಭಾಗದಿಂದ ಹಂಡೆಯಾ ತಳ ಕೇವಲ 7 ರಿಂದ 8 ಇಂಚು ಅಂತರ ಇದ್ದರೆ ಸಾಕು . [ ಅದು ಕಟ್ಟಿಗೆ ಕೂಡಲಿಕ್ಕೆ ].. ಇದರಿಂದ ಶಾಖ [ ಕಾವು ] ಬರುವ ಶಕ್ತಿ ಹೆಚ್ಚು ಇರುತ್ತದೆ. .4. ಒಲೆಯ ಒಳಭಾಗದಲ್ಲಿ ಸುತ್ತ ಮತ್ತು ಕೆಳಗಿನಿಂದ ಮೇಲಿನವರೆಗೆ [ ಹಂಡೆಯ ಕಂಟದವರೆಗೆ ] . ಹಂಡೆಗೂ ಒಲೆಗೂ ಮಧ್ಯೆ 2 ಇಂಚು ಅಂತರ [ Gap ] ಇರಬೇಕು . ಇದರಿಂದಾಗಿ ಬೆಂಕಿ ಹಂಡೆಯ ಸುತ್ತ ಮೇಲಿನವರೆಗೂ ಆವರಿಸಿ ಹಂಡೆಗೆ ಶಾಖ ಬೇಗನೆ ಹೆಚ್ಚು ಸಿಗುತ್ತದೆ. 5. . ಒಲೆಯ ಒಳಭಾಗದಲ್ಲಿ ಭತ್ತದ ಉಮಿಯನ್ನು [ ಭತ್ತದ ಸಿಪ್ಪೆ ] ಸೇರಿಸಿದ ಮಣ್ಣಿನಿಂದ ಮೆತ್ತಿಗೆ ಮಾಡಬೇಕು. ಇದರಿಂದಾಗಿ ಬೆಂಕಿಯ ಕಾವು ಬೇಗನೆ ಬರುತ್ತದೆ ಮತ್ತು ಹೀಗೆ ಬಂದ ಕಾವು ಬೇಗ ತಣಿಯದೆ ಹೆಚ್ಚು ಹೊತ್ತು ಇರುತ್ತದೆ. 6. . ಹಂಡೆಯ ಮೇಲ್ಭಾಗದಲ್ಲಿ ಹೆಂಚು ಮತ್ತು ಮಣ್ಣನ್ನು ಬಳಸಿ ಮುಚ್ಚಬೇಕು. ಇದರಿಂದಾಗಿ ಕಾವು ಬೇಗ ಬರುತ್ತದೆ.. 7. ಚಿತ್ರದಲ್ಲಿ ತೋರಿಸಿದಂತೆ ಒಲೆಯ ಅರ್ಧ ಎತ್ತರದಲ್ಲಿ ಹೊಗೆ ಕಿಂಡಿಯನ್ನಿಟ್ಟು ಮೇಲೆ ಪೈಪನ್ನು ನೆಡಬೇಕು. ನಾನು ಬಳಸಿರುವ ಹಂಡೆಯಲ್ಲಿ 48 ಗಿದ್ನ [ ಹನ್ನೆರಡು ಮಣ್ಣು ಬುಟ್ಟಿ ಅಥವಾ ಸಾಗರದ ಹನ್ನೆರಡು ಡಬ್ಬ ] ] ಸುಳಿ ಬೇಳೆ ಬೇಯುತ್ತದೆ. ಮೊದಲನೆಯ ಹಂಡೆ 48 ಗಿದ್ನ ಅಡಿಕೆ ಬೇಯಲಿಕ್ಕೆ ಸುಮಾರು ಒಂದು ಗಂಟೆ ಬೇಕು. ನಂತರದ ಹಂಡೆಯ ಅಡಿಕೆ ಬೇಯಲು ಕೇವಲ 30 ನಿಮಿಷಗಳು ಸಾಕು. ಪ್ರತೀ 5 ನಿಮಿಷಕ್ಕೊಮ್ಮೆ ಕಟ್ಟಿಗೆಯನ್ನು ಮುಂದೆ ಹಾಕುತ್ತಿರಬೇಕು.
Image may contain: tree, plant and outdoor



Image may contain: outdoor



Image may contain: outdoor


Image may contain: tree, plant and outdoor


Image may contain: sky, tree and outdoor

#### ಯಜ್ನೋಪವೀತ ####

ಯಜ್ನೋಪವೀತ ಎಂದರೆ ಕೇವಲ ಜನಿವಾರ ಅಲ್ಲ. ಯಜ್ನೋಪವೀತದ ಜಾಗಕ್ಕೆ ಕಾಲಾನುಕ್ರಮದಲ್ಲಿ ಜನಿವಾರ ಬಂದಿದೆ ಅಷ್ಟೆ. ಯಜ್ನೋಪವೀತ ಎಂದರೆ ಯಜ್ಞ ಮಾಡುವುದಕ್ಕಾಗಿ ಮಾಡಿಕೊಂಡ ಉಪವೀತ. ಉಪವೀತ ಎಂದರೆ ಉತ್ತರೀಯ ಎಂದರ್ಥ. ಎಡದ ಹೆಗಲ ಮೇಲಿನಿಂದ ಬಂದು ಬಲದ ತೋಳಿನ ಕೆಳಗಡೆಯಿಂದ ಬಂದಿದ್ದರೆ ಅದು ಯಜ್ನೋಪವೀತವಾಗುತ್ತದೆ. ಯಜ್ನೋಪವೀತವನ್ನು ಬಹಳ ಹಿಂದಿನ ಕಾಲದಲ್ಲಿ ಸದಾ ಧರಿಸಿರಬೇಕಾಗಿರಲಿಲ್ಲ. ಯಜ್ನಾದಿ ಧಾರ್ಮಿಕ ಕಾರ್ಯವನ್ನು ಮಾಡುವಂಥಹ ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಧರಿಸಿದ್ದರೆ ಸಾಕಾಗಿತ್ತು. ಸ್ವಾಧ್ಯಾಯ , ಉತ್ಸರ್ಗ, ದಾನ, ಭೋಜನ, ಮತ್ತು ಆಚಮನಗಳೆಂಬ ಪಂಚಕರ್ಮಗಳನ್ನು ನಡೆಸುವಾಗ ಮಾತ್ರ ಧರಿಸುವ ಅಗತ್ಯವಿತ್ತು. ಪ್ರಾಚೀನ ಕಾಲದಲ್ಲಿ ಈಗಿನಂತೆ ಯಜೋಪವೀತವು ಜನಿವಾರ ಆಗಿರಲಿಲ್ಲ. ಕೃಷ್ಣಮೃಗದ ಇಡೀ ಚರ್ಮವೇ [ ಕೃಷ್ಣಾಜಿನ ] ಉಪವೀತವನ್ನಾಗಿ ಧರಿಸಲಾಗುತ್ತಿತ್ತು. ಅದು ಭಾರವೆನ್ನಿಸಿದ್ದರಿಂದ ನಂತರ ಕಾಲಾನುಕ್ರಮದಲ್ಲಿ ಹತ್ತಿಯ ಬಟ್ಟೆಯನ್ನು ಉಪವೀತವನ್ನಾಗಿ ಬಳಸಲಾಯಿತು. ಆದರೆ ಪ್ರಾಚೀನ ಪದ್ಧತಿಯನ್ನು ಬಿಡಲಾಗದ ಪೂರ್ವಾಗ್ರದಲ್ಲಿ ಆ ಬಟ್ಟೆಯ ಉಪವೀತದ ಜೊತೆಗೆ ನಾಲ್ಕು ಅಂಗುಲ ಅಗಲದ ಕೃಷ್ಣಾಜಿನದ ಉದ್ದನೆಯ ಪಟ್ಟಿಯನ್ನು-- ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗಿನವರೆಗೆ -- ಧರಿಸಿಕೊಳ್ಳುವ ಪದ್ಧತಿ ಬಂತು. ಮುಂದೆ ಕಾಲಾನುಕ್ರಮದಲ್ಲಿ ಅದೂ ಕಷ್ಟವೆನಿಸಿದಾಗ ಮೂರು ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲದ ಒಂದು ಚಿಕ್ಕ ತುಂಡನ್ನು ಆ ಬಟ್ಟೆಯ ಉಪವೀತಕ್ಕೆ ಸೇರಿಸಿ ಧರಿಸುವ ಪದ್ಧತಿ ಬಂತು. ಈಗ ಉಪನಯನವಾದ ಕೆಲವು ದಿನ ಅದೇ ರೀತಿ ಜನಿವಾರಕ್ಕೆ ಕೃಷ್ಣಾಜಿನ ಚಿಕ್ಕ ತುಂಡನ್ನು ಸೇರಿಸುವುದು ಈ ಕಾರಣದಿಂದ ಎಂದು ಹೇಳಲಾಗಿದೆ. ಕೃಷ್ಣಮೃಗದ ಚರ್ಮವೇ ಆಗಲಿ, ನಂತರದ ಹತ್ತಿಯ ಬಟ್ಟೆಯೇ ಆಗಲಿ ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗೆ ಬರುವ ಕ್ರಮವನ್ನು ಅನುಸರಿಸಲಾಗಿತ್ತು. ಈಗ ಅಪರಕರ್ಮವನ್ನು ಮಾಡುವಾಗ ಜನಿವಾರದ ಜೊತೆಗೆ ಬಟ್ಟೆಯ ತುಂಡನ್ನುಉಪವೀತದ ಆಕಾರದಲ್ಲಿ ಸೇರಿಸಿಕೊಳ್ಳುವುದು ಆಗಿನ ಕಾಲದ ಇಡೀ ಬಟ್ಟೆಯ ಉಪವೀತದ ಅನುಕರಣೆ ಇರಬೇಕು. ಒಂದು ಕಾಲದಲ್ಲಿ ಯಜ್ಞಗಳು ವ್ಯಕ್ತಿಯ ಜೀವನದಲ್ಲಿ ಆಗಾಗ್ಯೆಯಷ್ಟೇ ನಡೆಯುತ್ತಿತ್ತು ಆಗಷ್ಟೇ ಯಜೋಪವೀತವನ್ನು ಧರಿಸಲಾಗುತ್ತಿತ್ತು. ಉಳಿದ ಸಂದರ್ಭಗಳಲ್ಲಿ ಅದನ್ನು ಧರಿಸುವ ಪರಿಪಾಠ ಇರಲಿಲ್ಲ. ಆದರೆ ಕಾಲಾನುಕ್ರಮದಲ್ಲಿ ಯಜ್ನಗಳಿಗೆ ಪ್ರಾಶಸ್ತ ಬಂದಮೇಲೆ ಪ್ರತಿ ದಿನವೂ ಯಜ್ನವನ್ನು ಮಾಡಬೇಕೆಂದು ವಿಧಿ ಮಾಡಿದರು. ಪಂಚಮಹಾಯಜ್ಞಗಳು ಗೃಹಸ್ಥನಿಗೆ ಕಡ್ದಾಯವೆಂದು ವಿಧಿಸಲಾಯಿತು. ಅಷ್ಟೇ ಅಲ್ಲ, ಇತರ ಅನೇಕ ಕಾರ್ಯಗಳನ್ನು ಯಜ್ಞ ಸಮಾನವೆಂದು ಸಾರಲಾಯಿತು. ಯಜ್ನ ಮಾಡುವಾಗ ಉಪವೀತ ಇರಬೇಕು ಎಂದಮೇಲೆ ಈ ಕಾಲಘಟ್ಟದಲ್ಲಿ ಸದಾಕಾಲವೂ ಯಜ್ನೋಪವೀತವು ಶರೀರದ ಮೇಲೆ ಇರುವುದು ಕಡ್ದಾಯವಾಯಿತು. ಈ ಕಾಲದಲ್ಲಿ ಕೃಷ್ಣಾಮೃಗದ ಇಡಿಯ ಚರ್ಮವನ್ನೋ ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲ ಅಗಲದ ಉದ್ದನೆಯ ಪಟ್ಟಿಯನ್ನು ಸೇರಿಸಿಕೊಂಡ ಹತ್ತಿಯ ಇಡಿಯ ಬಟ್ಟೆಯನ್ನೋ ಅಥವಾ ನಾಲ್ಕು ಅಂಗುಲದ ಕೃಷ್ಣಾಜಿನದ ತುಂಡನ್ನು ಸೇರಿಸಿದ ಹತ್ತಿಯ ಬಟ್ಟೆಯನ್ನೂ ಉಪವೀತವನ್ನಾಗಿ ದಿನ ನಿತ್ಯ ಧರಿಸುವ ಪದ್ಧತಿ ಕಷ್ಟವೆನಿಸಿರಬೇಕು. ಆಗ ಅದರ ಬದಲು ದರ್ಭೆಯ ಹಗ್ಗವನ್ನು ಯಜ್ನೋಪವೀತವನ್ನಾಗಿ ಧರಿಸುವ ಪರಿಪಾಠ ಬಂತು. ಆದರೆ ಅದೂ ಕಿರಿಕಿರಿಯನ್ನುಂಟು ಮಾಡುತ್ತಿದ್ದುದರಿಂದ ಹತ್ತಿಯ ದಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಜಾರಿಗೆ ಬಂತು. ಮೂರೆಳೆಯ ದಾರವನ್ನು ಜನಿವಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಪ್ರಾಚಿನದಕ್ಕೆ ಹೋಲಿಸಿದರೆ ಇತ್ತೀಚಿನದು. ಯಜ್ನೋಪವೀತವು ಹೀಗೆ ಸಂಪೂರ್ಣ ಕಷ್ಣಾ ಮೃಗದ ಚರ್ಮ , ಸಂಪೂರ್ಣ ಹತ್ತಿಯ ಬಟ್ಟೆ , ಹತ್ತಿಯ ದಾರ ಎಂಬ ಮೂರು ಹಂತಗಳಲ್ಲಿ ಕಾಲಾನುಕ್ರಮದಲ್ಲಿ ಪರಿವರ್ತನೆಯಾಗಿದೆ. 

 [ ಪ್ರೊ. ಎಂ. ಎ. ಹೆಗಡೆಯವರ ' ಹಿಂದೂ ಸಂಸ್ಕಾರಗಳು ' ಎನ್ನುವ ಪುಸ್ತಕದಿಂದ ಆಯ್ದು ಬರೆದದ್ದು. ] 
 ತಾರೀಖು : 10 -- 1 -- 2019

Wednesday 28 November 2018

### ಮಾತಿನ ವಂಚನೆ ###

ನಾವು ಅನೇಕರಿಗೆ ಮಾತನ್ನು ಕೊಡುತ್ತೇವೆ. ಆದರೆ ಅದನ್ನು ಈಡೇರಿಸಿಕೊಡಲು ಅಥವ ಆ ಮಾತಿಗೆ ಮುಟ್ಟಿಕೊಳ್ಳಲು ಆಗುತ್ತದೆಯೋ ಇಲ್ಲವೋ ಎಂಬುದನ್ನು ಮಾತು ಕೊಡುವ ಮುಂಚೆಯೇ ಸಾಕಷ್ಟು ಯೋಚಿಸಿಕೊಳ್ಳಬೇಕು ಎನ್ನುವುದು ಬದುಕಿನ ತತ್ವ. ಈ ತತ್ವವನ್ನು ಬಹಳಷ್ಟು ಸಾರಿ, ಗೊತ್ತಿದ್ದರೂ, ನಾವು ತಪ್ಪುತ್ತೇವೆ. ಯಾವುದೋ ಸನ್ನಿವೇಶದಲ್ಲಿ ನಮ್ಮೆದುರು ತಾಗುವ ವ್ಯಕ್ತಿ ನಮ್ಮಿಂದ ಈಡೇರಿಸಿಕೊಡಲಾಗದ ಮಾತನ್ನು ಕೇಳುತ್ತಾನೆ. ಅದಕ್ಕೆ ಒಪ್ಪದಿದ್ದರೆ ಆ ಸನ್ನಿವೇಶಕ್ಕೆ ಆತನಿಂದ ನಮಗೆ ಸಿಗುವ ಪ್ರಯೋಜನ ಅಥವಾ ಆತ ಆ ಹೊತ್ತಿಗೆ ನಮಗೆ ಮಾಡಿಕೊಡಲೇಬೇಕಾದ ಕೆಲಸವನ್ನು ಮಾಡಿಕೊಡುವುದಿಲ್ಲ. ಆ ಮುಜುಗರಕ್ಕಾಗಿ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಯಾವುದೋ ಮಾತನ್ನು ಎದುರು ವ್ಯಕ್ತಿಗೆ ಕೊಡುತ್ತೇವೆ. ಒಮ್ಮೆ ಆ ಮಾತನ್ನು ನಡೆಸಿಕೊಡಬೇಕೆಂಬ ಹಂಬಲ ನಮಗಿದ್ದರೂ ಮತ್ತಾವುದೋ ವಿಷಯ \ ವ್ಯಕ್ತಿ ನಮಗೆ ಅಡ್ಡಿಯಾಗುತ್ತಾರೆ. ಹೆಚ್ಚಾಗಿ ರಾಜಕಾರಣಿಗಳು, ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದವರು ಈ ತೆರನ ಮಾತಿನ ವಂಚನೆಯನ್ನು ಮಾಡುತ್ತಾರೆ. ಏಕೆಂದರೆ ತಮಗೆ ಬೇಕಾದುದೆಲ್ಲವನ್ನೂ ಅವರಿಂದ ಪಡೆದುಕೊಳ್ಳಬೇಕೆಂಬ ಹಪಾಹಪಿ ಜನರದ್ದು. ಅವರಿಗೂ ಒಂದು ಕ್ಷೇತ್ರದ, ಕಾರ್ಯದ, ವ್ಯಕ್ತಿ ಸಾಮರ್ಥ್ಯದ ಮಿತಿ ಇದೆ ಎನ್ನುವುದನ್ನು ಯಾರೂ ಭಾವಿಸುವುದಿಲ್ಲ. ವಾಸ್ತವಿಕ ವಿಚಾರವನ್ನು ತಿಳಿಸಿ ಮಾತು ಕೊಡಲು ಒಪ್ಪದಿದ್ದರೆ ಜನರು ಆ ರಾಜಕೀಯ \ ಸಾರ್ವಜನಿಕ ವ್ಯಕ್ತಿಯನ್ನು ತಕ್ಷಣ ನಿರಾಕರಿಸುತ್ತಾರೆ. ಆದ್ದರಿಂದ ಹಾಗೆ ಮಾತುಕೊಟ್ಟು ಕದಿಯುವುದು ಬಹಳಷ್ಟು ಸಾರಿ ಆ ಕ್ಷೇತ್ರದಲ್ಲಿದ್ದವರಿಗೆ ಅನಿವಾರ್ಯ. ಕೊನೆಗೆ ಒಂದು ದಿನ ದೂರಿಸಿಕೊಳ್ಳುವುದು, ಮತ್ತೆ ಪ್ರಯೋಜನವನ್ನು ಜನರಿಂದ ಪಡೆಯಬೇಕೆಂದಾಗ ಅದಕ್ಕೆ ತಾತ್ಕಾಲಿಕ ಭತ್ಯೆಯನ್ನು [ Tips ] ಕೊಡುವುದು ರಾಜಕಾರಣಿಗಳಿಗೆ \ ಸಾರ್ವಜನಿಕ ವ್ಯಕ್ತಿಗಳಿಗೆ ರೂಢಿಸಿಕೊಂಡ ಅಭ್ಯಾಸ. ಹಲವು ಬಾರಿ, ಎಲ್ಲರಿಗೂ ಸರಿಯಾಗಿ ಇರುತ್ತೇನೆ ಎನ್ನುವ ' ಸಂಭಾವಿತರು ' ಈ ರೀತಿಯ ಮಾತಿನ ವಂಚನೆಯನ್ನು ಮಾಡುತ್ತಾರೆ. ಏಕೆಂದರೆ ಯಾರಿಗೂ ನಿಷ್ಟುರವಾಗಿ ತಾನು ಇರುವುದಿಲ್ಲ ಎನ್ನುವುದು ಅವರ ಕನಸು. ಆದರೆ ಮತ್ತೊಂದು ದಿನ ವಾಸ್ತವತೆಯ ಅರಿವಾಗಿ ಅಂಥವರು ಎಲ್ಲರಿಗೂ ಗುಟ್ಟಾಗಿ ಬೇಡದವರಾಗಿರುತ್ತಾರೆ. ಒಂದು ಕುಟುಂಬದಲ್ಲಿಯೂ -- ಹೆಚ್ಚಾಗಿ ಅವಿಭಕ್ತ ಕುಟುಂಬ --- ಯಜಮಾನನಾದವನು ಕುಟುಂಬದ ಸದಸ್ಯರಿಗೆ ಈ ರೀತಿಯ ಮಾತಿನ ವಂಚನೆಯನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಅದು ತನ್ನ ಅಣ್ಣ ತಮ್ಮಂದಿರಿಗೂ ಇರಬಹುದು, ಮಕ್ಕಳಿಗೂ ಇರಬಹುದು, ಕೊನೆಗೆ ತನ್ನ ಹೆಂಡತಿಗೂ ಇರಬಹುದು. ಏಕೆಂದರೆ ಇಲ್ಲಿಯೂ ಹಾಗೆ. ಸದಸ್ಯರು ಆ ಕುಟುಂಬದ ಶಕ್ತಿಗೆ ಮೀರಿದ ಅನೇಕ ಪ್ರಯೋಜನವನ್ನು ಆಗಾಗ್ಯೆ ಕೇಳುತ್ತಿರುತ್ತಾರೆ. ಯಾವುದೇ ಕ್ಷೇತ್ರದಲ್ಲಿ, ಯಾವುದೇ ವ್ಯಕ್ತಿ ಇಂಥಹ ಮಾತಿನ ವಂಚನೆಯನ್ನು ಬಹಳಷ್ಟು ಸಾರಿ ಮಾಡುತ್ತಲೇ ಇರುತ್ತಾನೆ. ಕೆಲವು ಅನಿವಾರ್ಯವಾಗಿ ವಂಚನೆ . ಮತ್ತೆ ಕೆಲವು ವಂಚನೆಗಾಗಿ ವಂಚನೆ. ತಾರೀಖು :28 -11- 2018

Thursday 22 November 2018

#### ಹಾಸ್ಯಪ್ರಜ್ಞೆ ####


~~~~ ಎಂ. ಗಣಪತಿ ಕಾನುಗೋಡು.

ಬದುಕಿನ ಅಗತ್ಯಗಳಲ್ಲಿ ಹಾಸ್ಯಪ್ರಜ್ನೆಯೂ ಒಂದು. ಹಾಸ್ಯ ಮನುಷ್ಯನ ಮಾನಸಿಕ ದುಗುಡಗಳನ್ನು ದೂರ ಸರಿಸುತ್ತದೆ. ಆದರೆ ಆ ಹಾಸ್ಯ ವ್ಯಂಗ್ಯವಾಗಿರಬಾರದು. ಇನ್ನೊಬ್ಬರಿಗೆ ನೋವನ್ನು ತರುವಂತಿರಬಾರದು.
ಕೆಲವರಿಗೆ ಹಾಸ್ಯ ಪ್ರಜ್ಞೆ ಚೆನ್ನಾಗಿರುತ್ತದೆ. ಹಾಸ್ಯ ಮಾಡುವುದೂ ಒಂದು ಕಲೆ. ಆ ಕಲೆ ಕೆಲವರಲ್ಲಿ ಮಾತ್ರ ಇರುತ್ತದೆ. ಇನ್ನು ಕೆಲವರಿಗೆ ಹಾಸ್ಯ ಅರ್ಥವಾಗುತ್ತದೆ,ಅದನ್ನು ಅನುಭವಿಸಿ ಖುಷಿಯಾಗುತ್ತಾರೆ. ಆದರೆ ಅವರಿಗೆ ಹಾಸ್ಯ ಮಾಡುವ ಚಾಕಚಕ್ಯತೆ ಇರುವುದಿಲ್ಲ. ಮಾತಿನಲ್ಲಿ ಜಡಕಿಲ್ಲದೆ. ವ್ಯಂಗ್ಯವಿಲ್ಲದೆ, ಇನ್ನೊಬ್ಬರ ಮನಸ್ಸಿಗೆ ಸುಲಭವಾಗಿ ನಾಟುವ ಹಾಗೆ ಮೋಡಿ ಹರಿಸಿ ನಗಿಸಬಲ್ಲ ಶಕ್ತಿ ಕೆಲವರಿಗೆ ಮಾತ್ರ ಇರುತ್ತದೆ.
ಇನ್ನು ಕೆಲವರಿಗೆ ಹಾಸ್ಯಪ್ರಜ್ನೆಯೇ ಇರುವುದಿಲ್ಲ. ಅಂಥವರಿಗೆ ಹಾಸ್ಯ ಅರ್ಥವಾಗುವುದೂ ಇಲ್ಲ. ಹಾಸ್ಯದ ಹೊಯಿಲನ್ನು ಹರಿಸಲು ಹೇಗೂ ಬರುವುದಿಲ್ಲ. ಆದರೆ ಮಾತನ್ನು ಅಪಾರ್ಥ ಮಾಡಿಕೊಂಡು ಮತ್ತೊಬ್ಬರು ಮಾಡುವ ಹಾಸ್ಯದಿಂದ ಅಂಥವರು ಮುನಿಸಿಕೊಳ್ಳುವುದು, ತಪ್ಪಾಗಿ ಭಾವಿಸುವುದೂ ಇದೆ. ಕೆಲವೊಮ್ಮೆ ಜಗಳಕ್ಕೆ ತಿರುಗುವುದೂ ಇದೆ.
ಹಾಸ್ಯದ ಪ್ರವೃತ್ತಿ ಸ್ವಲ್ಪ ಕಷ್ಟವೇ. ಏಕೆಂದರೆ ಕೆಲವರಿಗೆ ಅದು ಅರ್ಥವಾಗುವುದಿಲ್ಲ ಎಂದಾದರೆ , ಅರ್ಥವಾಗುವ ಇನ್ನು ಕೆಲವರಿಗೆ ಆ ಹೊತ್ತಿಗೆ ಯಾವುದೋ ಕಾರಣದಿಂದ ಮನಸ್ಸು ಕೆಟ್ಟಿರುತ್ತದೆ. ಅಂಥಹ ಸನ್ನಿವೇಶಗಳಲ್ಲಿ ಹಾಸ್ಯದ ಚಟಾಕಿ ಹಾರಿಸುವವನು ಎದುರು ವ್ಯಕ್ತಿಯಿಂದ ಬೈಸಿಕೊಳ್ಳುವ ಸಾಧ್ಯತೆ ಹೆಚ್ಚು.
ಹಾಸ್ಯ ಮಾಡುವ ಪ್ರವೃತ್ತಿ ಇರುವವರು ಎದುರಿನ ಮಂದಿ ತಿರುಗಿ ಸಣ್ಣ ಮಾತನ್ನಾಡಿದರೆ ಬೇಸರಿಸಬಾರದು. ಹಾಗೆ ಬೇಸರ ಮಾಡಿಕೊಳ್ಳುವುದಾದರೆ ಹಾಸ್ಯ ಮಾಡಿ ಮತ್ತೊಬ್ಬರಿಗೆ ಸಂತೋಷವನ್ನು ದೊರಕಿಸಿಕೊಡುವ ಜನ ಇಲ್ಲವಾಗುತ್ತಾರೆ.

Monday 27 August 2018

" ಒಂದು ಸುಖವನ್ನು ಬಯಸಿದರೆ ಹಲವು ಸಮಸ್ಯೆಗಳನ್ನು ಆಹ್ವಾನಿಸಿದಂತೆ ".

" ಒಂದು ಸುಖವನ್ನು ಬಯಸಿದರೆ ಹಲವು ಸಮಸ್ಯೆಗಳನ್ನು ಆಹ್ವಾನಿಸಿದಂತೆ ".

ಉದಾಹರಣೆ:
ಮದುವೆಯಾಗಿ ಸುಖವಾಗಿ ಇರಬೇಕು ಎನ್ನುವ ಹಂಬಲವನ್ನು ಬೆನ್ನಟ್ಟುವ ಸಮಸ್ಯೆಗಳು :
[ ಈ ಮುಂದೆ ಹೇಳಲ್ಪಡುವ ವಿಷಯಗಳನ್ನು ಯಾರೂ ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು. ಇವು ಸರ್ವೆಸಾಮಾನ್ಯ ವಿಚಾರಗಳಾದುದರಿಂದ ಕೆಲವು ವಿಚಾರಗಳು ಕೆಲವರಿಗೆ ಅನ್ವಯಿಸಬಹುದಾದರೂ ಅದನ್ನು ತಮಗೆಂದು ದಯೆಯಿಟ್ಟು ತೆಗೆದುಕೊಳ್ಳಬಾರದು. ]
1 . ಸರಿಯಾದ ನೆಂಟಸ್ಥನದ ಮತ್ತು ಚೆನ್ನಾಗಿರುವ ಕನ್ಯೆಯ ಜಾತಕ ಬರುವುದಿಲ್ಲ.
2 . ಬಂದದ್ದು ಜಾತಕವೇ ತಾಳೆಯಾಗುವುದಿಲ್ಲ. ಒಂದಕ್ಕೆ ಮಕ್ಕಳಾಗುವುದಿಲ್ಲ, ಇನ್ನೊಂದಕ್ಕೆ ಗಂಡನ ಜೊತೆ ಜಗಳವಾಡುವವಳು, ಇನ್ನೊಂದು ಶಷ್ಟಾಷ್ಟಕ, ದಾಂಪತ್ಯ ದೀರ್ಘವಾಗಿ ಮುಂದುವರೆಯುವುದಿಲ್ಲ, ಇನ್ನೊಂದಕ್ಕೆ ಕುಜದೋಷ ಜಾಸ್ತಿ ಇದೆ, ಗಂಡ ಸಾಯುವ ಯೋಗ, ಇನ್ನೊಂದು ಚ್ಯಾರಿತ್ರ್ಯ ಸರಿಯಿಲ್ಲ, ಇನ್ನೊಂದು ಆಶ್ಲೇಷ ನಕ್ಷತ್ರ, ಅತ್ತೆಗೆ ಕೇಡು. ಹೀಗೆ ಒಂದಲ್ಲ ಒಂದು ಕಾರಣದಿಂದ ಜೋಯಿಸರು ಬಂದ, ಮೆಚ್ಚಿಕೊಂಡ ಜಾತಕಗಳನ್ನು ಬದಿಗಿಡುತ್ತಾರೆ.
3 . ಅಂತೂ ಜಾತಕ ತಾಳೆಯಾಗಿ, ಸಂಬಂಧ ಒಪ್ಪಿ ಹುಡುಗ - ಹುಡುಗಿ ನೋಡಿಯಾಯಿತು. ಈಗಿನ ಕಾಲದ ರೂಢಿಯಂತೆ ಅವರಿಬ್ಬರ ಇಂಟರ್ವ್ಯೂದಲ್ಲಿ ಯಾವುದೋ ವಿಚಾರಕ್ಕೆ ಹುಡುಗ / ಹುಡುಗಿ ಸೇರಲಿಲ್ಲ,ಮದುವೆ ಮುರಿದು ಹೋಯಿತು.
4 . ಮದುವೆ ನಿಕ್ಕಿಯಾಯಿತು. ಮುಹೂರ್ತದ ದಿನ ಅನಿರೀಕ್ಷಿತ ಅಶೌಚ ಬಂದು ಮದುವೆ ಮುಂದೆ ಹೋಯಿತು.
5 .ಮದುವೆಯಾಯಿತು. ಗಂಡ-ಹೆಂಡತಿ ಕೈ ಕೈ ಹುರಿ ಹೊಸೆದುಕೊಂಡು ಜಾತ್ರೆ, ಹನಿಮೂನ್ ಎಂತೆಲ್ಲಾ ತಿರುಗಿದ್ದೂ ಆಯಿತು. ಸರಿ. ಮೂರೂ ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕು ಬಂತು. ಡೈವೋರ್ಸೂ ಆಗಿಹೋಯಿತು.
6 . ಇಲ್ಲ. ಕೆಲವು ದಾಂಪತ್ಯಕ್ಕೆ ಸಂಬಂಧಿಕರು ಯಾರೋ ಸಕಾಲದಲ್ಲಿ ಸರಿಯಾಗಿ ಬೆಸುಗೆ ಹಾಕಿದರು. ಗಂಡ-ಹೆಂಡತಿ ಹೇಗೋ ಸರಿಯಾಗಿ ಹೊಂದಿಕೊಂಡರು. ಮಕ್ಕಳೆ ಆಗಲಿಲ್ಲ.
7 . ಹರಕೆಯಿಂದಲೋ,ಚಿಕಿತ್ಸೆಯಿಂದಲೋ ಹೆಂಡತಿ ಬಸುರಿಯಾದಳು. ಮಧ್ಯದಲ್ಲಿಯೆ ಗರ್ಭಪಾತವಾಗಿ ಹೋಯಿತು.
8 .ಮತ್ತೇನೋ ಪ್ರಯತ್ನದಿಂದ ಗರ್ಭಿಣಿಯಾಗಿದ್ದಾಗ ಬಹಳ ನಿಗಾ ಇಟ್ಟು ಮಗುವಾಯಿತು. ಅದು ಬುದ್ಧಿಮಾಂದ್ಯ. ಸ್ಕಾನಿಂಗ್ ನಲ್ಲಿ ಹೇಳಲೆ ಇಲ್ಲ.
9 .ಸರಿಯಾದ ಮಗು ಆಯಿತು. ತಾಯಿಗೆ ಸೂತಕಸನ್ನಿ.
10 . ಎಲ್ಲ ಸರಿಯಾಯಿತು. ಮಗುವನ್ನು ಚೆನ್ನಾಗಿ ಬೆಳೆಸಲಾಯಿತು .
11 . ಇಷ್ಟು ಹೊತ್ತಿಗೆ ಅತ್ತೆ ಸೊಸೆಗೆ ಸರಿ ಬರಲಿಲ್ಲ. ಅಪ್ಪ -ಅಮ್ಮಂದಿರನ್ನು ಬಿಟ್ಟು ಬೇರೆ ಇರುವುದು ಅನಿವಾರ್ಯವಾಯಿತು. ಮದುವೆಯಾಗಿದ್ದರಿಂದ ಅಪ್ಪ ಮತ್ತು ಮಗನಿಗೆ ಸಮಸ್ಯೆ ಒಂದೇ ತರಹದ್ದು ಆಯಿತು.
12 .ಮಗನ ಸಂಸಾರದಲ್ಲಿ ಅವನ ಮಗ \ ಮಗಳು ಸರಿಯಾದ ವಿದ್ಯಾಭ್ಯಾಸವಿಲ್ಲದೆ ಪೋಕರಿಯಾದ \ ಳು.
13 .ಮಗ \ ಮಗಳು ಪೋಕರಿಯಾಗದೆ ಬೆಳೆದು ಸರಿಯಾದ ವಿದ್ಯಾಭ್ಯಾಸ ಮಾಡಿಕೊಂಡು ಮದುವೆ ವಯಸ್ಸಿಗೆ ಬಂದರು. ಅಷ್ಟೊತ್ತಿಗೆ ಮಗನಾದರೆ ಯಾವುದೋ ಒಂದು ವಿಜಾತಿಯ ಹುಡುಗಿಯನ್ನು ಗಂಟು ಹಾಕಿಕೊಂಡ. ಮಗಳಾದರೆ ವಿಜಾತಿಯ ಒಬ್ಬ ಬಸ್ ಕಂಡಕ್ಟರನನ್ನು ಕೂಡಿಕೊಂಡು ಓಡಿ ಹೋದಳು.
14 . ಮಗ ಸರಿಯಾದ ದಾರಿಯಲ್ಲೇ ಹೋಗಿ ದುಡಿಯುವ ಹಂತಕ್ಕೆ ಬಂದ. ಸಂಸಾರದ ನೆರವಿಗೆ ಬರುವ ಯೋಗ್ಯತೆ ಗಳಿಸಿಕೊಂಡ. ಹೆಂಡತಿ ಮಗನನ್ನು ಒಳಹಾಕಿಕೊಂಡು ಗಂಡನ ಜೊತೆ ಜಗಳವಾಡಲು ಪ್ರಾರಂಭಿಸಿದಳು. ಅಂತೂ ಗಂಡನಿಂದ ಸಂಸಾರದ ಯಜಮಾನಿಕೆಯನ್ನು ಬಿಡಿಸಿ ಮಗನಿಗೆ ಕೊಡಿಸಿ ತನ್ನ ಗಂಡನನ್ನು ಮೂಲೆಗೆ ಕೂರಿಸಿದಳು.
15 .ತಾಯಿ ತನ್ನ ಅಧ್ವರ್ಯದಲ್ಲಿಯೇ ಮಗನಿಗೆ ಮದುವೆ ಮಾಡಿದಳು. ಆರು ತಿಂಗಳಲ್ಲಿಯೇ ಅತ್ತೆ -ಸೊಸೆಗೆ ಸರಿಬಾರದೆ ಸೊಸೆಯು ಅತ್ತೆಯನ್ನು ಬದಿಗೆ ಸರಿಸಿದಳು.
16 .ಇಲ್ಲಿ ಮಗನ ಸಂಸಾರವೇ ಬೇರೆಯಾಯಿತು. ಮಗನ ಅಮ್ಮನಿಗೆ ಮಗನೂ ಇಲ್ಲ.ಅವಳಿಗೆ ಗಂಡ ಹೇಗೂ ಮುಂಚೆಯೇ ಕೈ ತಪ್ಪಿ ಹೋಗಿದ್ದಾನೆ.
17 .ಮಗನ ಅಪ್ಪನಿಗೆ ತನ್ನ ಹೆಂಡತಿಯೇ ಕೈ ತಪ್ಪಿ ಹೋದಮೇಲೆ ಮಗ-ಸೊಸೆಯ ಪರಿಚಯ ಇರುವುದಾದರೂ ಹೇಗೆ?
18 .ಹೆಂಡತಿ ತವರ ಮನೆಯಲ್ಲಿ ಪಾತ್ರೆ ತೊಳೆಯಲಿಕ್ಕೆ ಒಂದು ಜನವಾಗಿದೆ. ಗಂಡ ಶ್ರೀಮಂತ ನೆಂಟರೊಬ್ಬರ ಮನೆಯಲ್ಲಿ ಮನೆ ಕಾಯಲಿಕ್ಕೆ ಒಂದು ಜನವಾಗಿದೆ.

ನೋಡಿದಿರಾ.... !. ಒಂದು ಮದುವೆಯಾಗುವ ಸುಖವನ್ನು ಬಯಸಿದ್ದರ ಹಿಂದೆ ಇರಬಹುದಾದ ಹಲವಾರು ----- ಸದ್ಯ ಹದಿನೆಂಟು ---- ಸಮಸ್ಯೆಗಳು. ಇನ್ನೂ ಉಪ ಸಮಸ್ಯೆಗಳು ಬಹಳ ಇವೆ.
ಬದುಕೇ ಹಾಗೆ. ಒಂದು ಸುಖವನ್ನು ಬಯಸಲು ಹೊರಟರೆ ಹಲವಾರು ಸಮಸ್ಯೆಗಳನ್ನು ಅನುಭವಿಸಲು ನಾವು ಸಿದ್ಧರಿರಬೇಕು. 
------------------
ಎಂ. ಗಣಪತಿ. ಕಾನುಗೋಡು.
 P. O. B. ಮಂಚಾಲೆ
 ಸಾಗರ --- ಶಿವಮೊಗ್ಗ
Pin: 577431
. ಮೊ. 9481968771
Date : 26 August 2014

Thursday 31 May 2018

#### ಸಂಸಾರ ####



ಸಂಸಾರವೆಂದರೆ ಗಂಡ ಹೆಂಡತಿ, ತಾಯಿ ತಂದೆ, ಅಣ್ಣ ತಮ್ಮ, ಮಕ್ಕಳು ಮರಿ, ನೆಂಟರು ಇಷ್ಟರು.ಜೊತೆಗೆ ಖಾಯಂ ಕೆಲಸದವರು ಕೂಡಾ . ಇದು ನಮ್ಮ ಪಾರಂಪರಿಕ ಅವಿಭಕ್ತ ಕುಟುಂಬ. ಅದು ಈಗ ಕೇವಲ ಗಂಡ ಹೆಂಡತಿ , ಒಂದು ಮಗು ಹೀಗೆ ಮೂವರು ಸದಸ್ಯರನ್ನೊಳಗೊಂಡ ಅಣುಕುಟುಂಬವಾಗುತ್ತಲಿದೆ [ Nuclear Family ].

ಸಂಸಾರವೇ ಸಮಾಜಕ್ಕೆ ತಳಹದಿ. ಈಗಿನ ಕಾಲದ ಆರ್ಥಿಕ ಸ್ಥಿತಿಗಳಿಂದಲೂ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿಶಯವಾದ ಪ್ರಾಶಸ್ತ ಕೊಡಲು ಪ್ರಾರಂಭಿಸಿರುವುದರಿಂದಲೂ ಸಂಸಾರದಲ್ಲಿ ವಿಶ್ವಾಸ , ವಿಧೇಯತೆ, ಒಗ್ಗಟ್ಟು,ಮುಂತಾದ ಸ್ನೇಹಗುಣಗಳು ಕಡಿಮೆ ಆಗಿವೆ. ಸ್ನೇಹ, ವಿಶ್ವಾಸ ಇಲ್ಲದ ಸಂಸಾರ ಒಂದೋ ಮರಳುಕಾಡು ಅದಿಲ್ಲದಿದ್ದರೆ ಕುರುಕ್ಷೇತ್ರ. ಅಣ್ಣ ತಮ್ಮಂದಿರ , ಅಪ್ಪ ಮಕ್ಕಳ ನಡುವೆಯ ಮಾತಿರಲಿ ಗಂಡ ಹೆಂಡತಿಯ ನಡುವೆಯೇ ಹೊಡೆದಾಟ. ಪರಿಣಾಮ ಸಂಸಾರ ಶಿಥಿಲ . ಮಕ್ಕಳು ಮೂರಾಬಟ್ಟೆ. ಅಜ್ಜ ಅಜ್ಜಿಯರಿದ್ದರೆ ನಾಯಿಪಾಡು.

ಜೊತೆಯಲ್ಲಿ ಇರಬೇಕಾದವರು ಅಹಿತವಾದರೆ ಅದು ಕಾಲಿನಲ್ಲಿ ಮುಳ್ಳು ಚುಚ್ಚಿ ಮುರಿದುಕೊಂಡಂತೆ. ತೆಗೆದರೆ ಘಾಯ., ತೆಗೆಯದಿದ್ದರೆ ನೋವು. ಸಂಸಾರದ ನಡೆ ಕುಂಟು. ಏಕೆ ?. ಇಲ್ಲಿ ನಡೆಯುವವರು , ನಡೆಸುವವರು ಹೊಂದಾಣಿಕೆಯ ಕೊರತೆಯ ಗೊಂದಲದಲ್ಲಿ ಹೆಳವರಾಗಿದ್ದಾರೆ, ಮೂಕರಾಗಿದ್ದಾರೆ, ಕಿವುಡರಾಗಿದ್ದಾರೆ. ಮುರಿದ ಮುಳ್ಳಿನ ಪರಿಣಾಮ ಸಂಸಾರದ ಯಾವ ಕೆಲಸದಲ್ಲಿಯೂ ಎಲ್ಲರಿಗೂ ನೋವಿನ ಮೇಲೆ ಜ್ಞಾನ, ಹಿಂದೇಟು.

ಈ ನೋವು ಇಲ್ಲದಿರಬೇಕಾದರೆ ಸಂಸಾರದಲ್ಲಿ ಪ್ರತಿಯೊಬ್ಬನಲ್ಲಿಯೂ ಅತಿ ಸ್ವಾತಂತ್ರ್ಯದ [ ಸ್ವೇಚ್ಚೆ ] ಮನೋಭಾವ ತಗ್ಗಬೇಕು. ಜೊತೆಗಿರುವವರ ಹಿತಕ್ಕಾಗಿ ತಮ್ಮ ಸುಖದ ಕಾಳಜಿಯನ್ನು ಸ್ವಲ್ಪ ಮಟ್ಟಿಗೆ ಪ್ರತಿಯೊಬ್ಬರೂ ಕಡಿಮೆ ಮಾಡದ ಹೊರತು ಒಟ್ಟಾರೆ ಯಾರಿಗೂ ಸುಖ ಸಿಕ್ಕದು.

ಸಂಸಾರದಲ್ಲಿ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ ಇದ್ದರೆ ಕ್ಷಮೆ, ತ್ಯಾಗ ಇವೆರಡೂ ತನ್ನಿಂದ ತಾನೇ ಬಂದು ಅಲ್ಲಿ ಸೇರಿಕೊಳ್ಳುತ್ತದೆ. ಈ ಗುಣಗಳೆಲ್ಲಾ ನಮ್ಮಲ್ಲಿ ತನ್ನಿಂದ ತಾನೇ ಹುಟ್ಟುವ ಕೇಂದ್ರವೆಂದರೆ ಮನೆ. ಅದು ಸಂಸಾರ.

[ ಆಧಾರ : ವಚನ ಭಾರತದ ಪೀಠಿಕೆಯಲ್ಲಿ ಮಾನ್ಯ ಎ. ಆರ್. ಕೃಷ್ಣಶಾಸ್ತ್ರಿಯವರ ಮಾತು ---- ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ತಮ್ಮ ಕೃತಿ ' ಸಪ್ತಪದಿ ಸಂದೇಶ ' ಪುಸ್ತಕದ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದು ]


M Ganapathi Kangod

Friday 11 May 2018

ಒಂದು ವಿಶಿಷ್ಟ ಕಾರ್ಯಕ್ರಮ



ಇಂದು ಸಾಗರದ ಗೆಣಸಿನಕುಣಿ ಶ್ರೀ ನಾಗಭೂಷಣ ಹೆಗಡೆಯವರ ಮಗನ ಮದುವೆಯ ವಧೂಪ್ರವೇಶದ ಸತ್ಕಾರ ಸಂಭ್ರಮ. ಅದರಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಸುಮಾರು ನಾಲ್ಕು ಅಡಿ ಉದ್ದದ ವಿಶಿಷ್ಟವಾದ ಕೊಳಲನ್ನು ನುಡಿಸಿ ಅದರ ಸೂಕ್ಷ್ಮತೆಯ ಸೂಚನೆಯಿಂದಾಗಿ ಮತ್ತೊಬ್ಬರು ಬಚ್ಚಿಟ್ಟುಕೊಂಡ ಯಾವುದೇ ವಸ್ತುವನ್ನು ಪತ್ತೆ ಹಚ್ಚುವ ಒಂದು ಜಾನಪದ ಕಲೆ. ಕಲಾವಂತಿಕೆಯ ಚಾತುರ್ಯ. ಒಬ್ಬನ ಕಣ್ಣನ್ನು ಕಟ್ಟಿ ಅವನಿಗೆ ಗೊತ್ತಾಗದಂತೆ ಒಂದು ವಸ್ತುವನ್ನು ಮತ್ತೊಬ್ಬ ವ್ಯಕ್ತಿಯ ಹತ್ತಿರ ಬಚ್ಚಿಟ್ಟಿರುತ್ತಾರೆ. ಕಣ್ಣು ಬಿಚ್ಚಿದ ನಂತರ ಕೊಳಲಿನ ನುಡಿಯ ಸೂಚನೆ ಮೇರೆಗೆ ಅವನು ಅದನ್ನು ಪತ್ತೆ ಹಚ್ಚಿ ತರುತ್ತಾನೆ. ಆ ವಸ್ತು ಬಚ್ಚಿಟ್ಟಿರುವ ಜಾಗವನ್ನು ಕೊಳಲನ್ನು ನುಡಿಸುವವನಿಗೆ ಗೊತ್ತಾಗುವಂತೆ -- ಹುಡುಕುವವನಿಗೆ ಗೊತ್ತಾಗದಂತೆ -- ವ್ಯವಸ್ಥೆ ಮಾಡಲಾಗುತ್ತದೆ. ಏಕೆಂದರೆ ಆ ವಸ್ತು ಎಲ್ಲಿ ಇದೆ ಎಂಬುದನ್ನು ತನ್ನ ಕೊಳಲಿನ ಶ್ರುತಿಯಿಂದಲೇ ಹುಡುಕುವವನಿಗೆ ನುಡಿಸುವವನು ಸೂಚಿಸುತ್ತಾನೆ. ಇಲ್ಲಿ ವಿಶೇಷ ಎಂದರೆ ಕೊಳಲನ್ನು ನುಡಿಸುವವನು ಹುಡುಕುವವನಿಗೆ ತಿಳಿಯುವಂತೆ ಕೊಳಲಿನ ಶ್ರುತಿಯ ಸೂಚನಾ ನುಡಿಯ ಕೌಶಲ್ಯವನ್ನು ಮೆರೆಯಬೇಕು. ಹುಡುಕುವವನು ನುಡಿಸುವವನ ಸೂಚನೆಯನ್ನು ಅರ್ಥಮಾಡಿಕೊಳ್ಳುವ ಕೌಶಲ್ಯವನ್ನು ಹೊಂದಿರಬೇಕು. ತಿಮ್ಮ ನಾಗೂಗೌಡ. ಜಡ್ಡಿಗದ್ದೆ , ವಾನಳ್ಳಿ , ಶಿರಸಿ ತಾಲೂಕು ಇವರು ವಯಸ್ಸಾದ ಮುದುಕರು. ತಮ್ಮ ವಿಶಿಷ್ಟ ಕೊಳಲನ್ನು ನುಡಿಸುತ್ತಾರೆ. ಗಣಪತಿ ಗೌಡ ಎನ್ನುವವರು ಕೊಳಲ ನುಡಿಯ ಸೂಚನೆಯಂತೆ ವಸ್ತುವನ್ನು ಹುಡುಕಿ ತೆಗೆಯುತ್ತಾರೆ.

ಈ ಕಾರ್ಯಕ್ರಮದ ಸಂಯೋಜನೆಯನ್ನು ಶ್ರೀ ನಾಗಭೂಷಣ ಹೆಗಡೆಯವರ ಸಂಬಂಧಿ ಶ್ರೀ ರಾಘವೇಂದ್ರ ಬೆಟ್ಟಕೊಪ್ಪ ಶಿರಸಿ ದಂಪತಿಗಳು ಮಾಡಿರುತ್ತಾರೆ. ಅಪರೂಪದ ಜಾನಪದ ಕಲಾವಿದರನ್ನು ಸಾಗರದ ಜನತೆಗೆ ಪರಿಚಯಿಸಿದ ಶ್ರೀ ರಾಘವೇಂದ್ರ ಬೆಟ್ಟಕೊಪ್ಪ ಮತ್ತು ಗಾಯತ್ರಿ ರಾಘವೇಂದ್ರ ಅವರಿಗೆ ಧನ್ಯವಾದಗಳು

https://www.facebook.com/mganapathi.kangod/videos/979174142250156/