Thursday 25 August 2016

###### ಬ್ರಹ್ಮ ######


~~~~ ಒಂದು ಮಾಹಿತಿ
..... ಎಂ. ಗಣಪತಿ. ಕಾನುಗೋಡು.
ಬ್ರಹ್ಮ ಎನ್ನುವ ಶಬ್ದಕ್ಕೆ ಮೂರು ಅರ್ಥಗಳಿವೆ.
1. ಪರಮಾತ್ಮ. ಸತ್ವ, ರಜ, ತಮಗಳ ಗುಣತ್ರಯ ರಹಿತವೂ ಉಪಾಧಿರಹಿತವೂ ಪರಿಚ್ಛೇದಶೂನ್ಯವೂ ಆಗಿ ಸಚ್ಚಿದಾನಂದ ಸ್ವರೂಪವೆನಿಸಿದ ಪರಾತ್ಪರ ಶಕ್ತಿಯೇ ಈ ಪರಮಾತ್ಮ. ಅದಕ್ಕಾಗಿಯೇ ಪರಮಾತ್ಮನಲ್ಲಿ ಲೀನರಾದವರು ಇದ್ದರೆ ಅವರಿಗೆ ಬ್ರಹ್ಮೀಭೂತರು, ಬ್ರಹ್ಮೈಕ್ಯ ಎಂದು ಹೆಸರಿಸಿರಬೇಕು.
2. ವೇದಗಳು ಎಂತಲೂ ಅರ್ಥವಿದೆ.
3. ಪ್ರಪಂಚದ ಸೃಷ್ಟಿಕರ್ತನಾದ ದೇವತೆ -- ಬ್ರಹ್ಮ. ವಿಷ್ಣುವಿನ ನಾಭಿಕಮಲದಿಂದ ಹುಟ್ಟಿದವ. ಬ್ರಹ್ಮನಿಗೆ ಹುಟ್ಟುವಾಗ ಒಂದೇ ಮುಖವಿತ್ತು. ಆಗ ಅವನು ಆ ಕಮಲ ಮಧ್ಯದಲ್ಲಿ ಕುಳಿತು ಶೂನ್ಯವಾಗಿರುವುದನ್ನು ಕಂಡು ನಾಲ್ಕು ದಿಕ್ಕುಗಳನ್ನೂ ನೋಡಲು ಹವಣಿಸಿದ. ಆಗ ಅವನಿಗೆ ಮತ್ತೆ ನಾಲ್ಕು ಮುಖಗಳು ಪ್ರಾಪ್ತಿಯಾಯಿತು. ಹೀಗೆ ಬ್ರಹ್ಮನಿಗೆ ಈ ಮತ್ತೊಂದು ಹಂತದಲ್ಲಿ ಐದು ಮುಖಗಳು ಇದ್ದುವು.
ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಗಳಲ್ಲಿ ತಾನೇ ಸರ್ವಶ್ರೇಷ್ಠ ಎಂಬುದಾಗಿ ಬ್ರಹ್ಮ ಅಹಂಕಾರ ಮಾಡಿದ. ವೇದಗಳನ್ನು ನಿಂದಿಸಿ ಮಾತನಾಡಿದ. ಇದರಿಂದ ಕೋಪಗೊಂಡ ಶಿವನು ಅವನ ಒಂದು ತಲೆಯನ್ನು ಕತ್ತರಿಸಿದ. ಈ ಮೂರನೆಯ ಹಂತದಲ್ಲಿ ಇದ್ದದ್ದು ಅವನಿಗೆ ನಾಲ್ಕು ಮುಖಗಳು. ಆ ನಂತರವಷ್ಟೇ ಬ್ರಹ್ಮನಿಗೆ ಚತುರ್ಮುಖ ಎನ್ನುವ ಹೆಸರು ಬಂತು.
ಇಲ್ಲಿ ಇನ್ನೊಂದು ಅಭಿಪ್ರಾಯವೂ ಇದೆ. ಬ್ರಹ್ಮನ ಈ ಅಹಂಕಾರವನ್ನು ಸಹಿಸದೆ ಅದನ್ನು ಪ್ರಶ್ನಿಸಲು ಎದುರಿಗೆ ಬಂದಾಗ ಬ್ರಹ್ಮನು ಶಿವನನ್ನು ತಿರಸ್ಕರಿಸಿದ. ಆಗ ಶಿವನು ಸ್ತ್ರೀರೂಪದ ಭೈರವನನ್ನು ಸೃಷ್ಟಿಸಿ ಆತನಿಂದ ಅವನ ಐದನೆಯ ತಲೆಯನ್ನು ಕತ್ತರಿಸುವಂತೆ ಮಾಡಿದ ಎನ್ನುವುದು ಈ ಮತ್ತೊಂದು ಅಭಿಪ್ರಾಯ.
ಒಟ್ಟಾರೆ ಅವನ ಅಹಂಕಾರವನ್ನು ಸಹಿಸದ ಶಿವ ಅವನ ತಲೆಯನ್ನು ಕತ್ತರಿಸಿದ್ದಲ್ಲದೆ ಲೋಕದಲ್ಲಿ ದೇವಾಲಯ, ಪೂಜೆ, ರಥೋತ್ಸವಾದಿಗಳು ಇಲ್ಲದಿರುವಂತೆ ಬ್ರಹ್ಮನಿಗೆ ಶಾಪವನ್ನು ಕೊಟ್ಟ. ಅದಕ್ಕಾಗಿಯೇ ಎಲ್ಲಿಯೂ ಬ್ರಹ್ಮನ ದೇವಾಲಯ. ಅವನ ಪೂಜೆ ಇರುವುದು ಕಂಡುಬರುವುದಿಲ್ಲ.
ಬ್ರಹ್ಮ ಶಿವನಿಂದ ಯೋಗಮಾಯೆಯಲ್ಲಿ ಜನಿಸಿದವ ಎನ್ನುವ ಮಾತೂ ಇದೆ.
ಬ್ರಹ್ಮನಿಗೆ ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ, ಪುಲಹ, ಕ್ರತು ಎಂಬುದಾಗಿ ಆರು ಮಾನಸಪುತ್ರರು ಎಂದು ಒಂದು ಕಡೆ ಹೇಳಲಾಗಿದೆ. ಇದಲ್ಲದೆ ಸನಂದನ, ಸನತ್ಕುಮಾರ, ಮತ್ತು ಸನತ್ಸುಜಾತರು ಕೂಡ ಬ್ರಹ್ಮನ ಮಾನಸಪುತ್ರರು ಎಂದು ಮತ್ತೊಂದು ಕಡೆ ಹೇಳಲಾಗಿದೆ. ಭೃಗು ಋಷಿಯೂ ಅವನಿಂದ ಉತ್ಪತ್ತಿಯಾದವನು ಎನ್ನಲಾಗಿದೆ.
ಬ್ರಹ್ಮನು ಅತ್ರಿಮುನಿಯನ್ನು ಮಾನಸಪುತ್ರನನ್ನಾಗಿ ಪಡೆದಿದ್ದಾನೆ ಎಂದು ಒಂದು ಕಡೆ ಹೇಳಿದರೆ ಮತ್ತೊಂದು ಕಡೆ ಅತ್ರಿಮುನಿಯ ಪತ್ನಿಯಾದ ಅನಸೂಯಾದೇವಿಯ ಹೊಟ್ಟೆಯಲ್ಲಿ ಬ್ರಹ್ಮನು ಚಂದ್ರನಾಗಿ ಹುಟ್ಟಿದ ಎನ್ನಲಾಗಿದೆ. ಅಂದರೆ ಮತ್ತೊಂದು ಹಂತದಲ್ಲಿ ಬ್ರಹ್ಮನೇ ಅತ್ರಿಯ ಮಗ ಎಂದಂತಾಯಿತು. ಆದರೆ ರೂಪ ಬೇರೆ ಎನ್ನುವುದು ಗ್ರಾಹ್ಯ. ಒಂದೇ ವ್ಯಕ್ತಿ ಅತ್ರಿಮುನಿಯ ತಂದೆಯಾಗಿ ಬ್ರಹ್ಮ. ಹಾಗೆಯೇ ಅತ್ರಿಮುನಿಯ ಮಗನಾಗಿ ಚಂದ್ರ.
ಬ್ರಹ್ಮನ ಮುಖದಿಂದ ದೇವತೆಗಳು, ವಕ್ಷದಿಂದ ಪಿತೃಗಳು, ಬೆನ್ನು ಭಾಗದಿಂದ ರಾಕ್ಷಸರು ಮತ್ತು ಸಾಧ್ಯರು, ಕೆಳಗಿನ ಇಂದ್ರಿಯದಿಂದ ಮಾನವರು ಜನಿಸಿದರು.
ಬ್ರಹ್ಮನು ತಾನೇ ಸೃಷ್ಟಿಸಿದ ಸರಸ್ವತಿಯನ್ನು ಕಾಮದಿಂದ ನೋಡಿದ.

Monday 22 August 2016

##### ನೆಲ್ಲಿ ಫೆಲ #####


ಒಂದು ಮಾಹಿತಿ.
~~~~ ಸಂಗ್ರಹ : ಎಂ. ಗಣಪತಿ. ಕಾನುಗೋಡು.
ನೆಲ್ಲಿಯ ಫಲವು ಶ್ರೀಹರಿಗೆ ಅತ್ಯಂತ ಪ್ರಿಯವಾದದ್ದು. ಹಿಂದೆ ಬ್ರಹ್ಮನು ಹುಟ್ಟಿ ವಿಷ್ಣುವನ್ನು ಕುರಿತು ತಪಸ್ಸಿನಲ್ಲಿ ನಿರತನಾದನು. ಅವನ ತಪಸ್ಸಿಗೆ ಮೆಚ್ಚಿ ವಿಷ್ಣುವು ಪ್ರತ್ಯಕ್ಷ್ಯನಾದಾಗ ಬ್ರಹ್ಮನಿಗೆ ಸಂತೋಷವಾಗಿ ಆನಂದ ಭಾಷ್ಪಗಳು ನೆಲಕ್ಕೆ ಬಿದ್ದು ಅಲ್ಲಿ ನೆಲ್ಲಿಯ ಮರವು ಹುಟ್ಟಿಕೊಂಡಿತು ಎಂದು ಹೇಳಲಾಗಿದೆ.
ಹಿಂದೆ, ಬ್ರಹ್ಮಚಾರಿಯಾಗಿದ್ದ ಶ್ರೀ ಶಂಕರರು ಒಬ್ಬಳು ಬಡ ಬ್ರಾಹ್ಮಣ ಸ್ತ್ರೀಯ ಮನೆಗೆ ಬಿಕ್ಷೆಗೆ ಹೋಗುತ್ತಾರೆ. ಆಕೆ ತನ್ನಲ್ಲಿರುವ ಒಂದು ನೆಲ್ಲಿಕಾಯಿಯನ್ನೇ ಅವರಿಗೆ ಬಿಕ್ಷೆಯಾಗಿ ನೀಡುತ್ತಾಳೆ. ಆ ಘಳಿಗೆಯಲ್ಲಿ ಭಗವಾನ್ ಶ್ರೀ ಶಂಕರರು ಕನಕಧಾರಾ ಸ್ತೋತ್ರವನ್ನು ರಚಿಸಿ ಹೇಳುತ್ತಾರೆ. ಆಗ ಆ ಸ್ತೋತ್ರದ ಮಹಿಮೆಯಿಂದ ಅಲ್ಲಿ ಬಂಗಾರದ ನೆಲ್ಲಿಕಾಯಿಗಳು ಪ್ರತ್ಯಕ್ಷ ಉರುಳುತ್ತವೆ. ಇಂದಿಗೂ ಆ ಕನಕಧಾರಾ ಸ್ತೋತ್ರವನ್ನು ಪಠಿಸಿದರೆ ದಾರಿದ್ರ್ಯ ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ.
ನೆಲ್ಲಿಯ ಮರವು ಮನೆಯ ಅಂಗಳದಲ್ಲಿ ಇದ್ದರೆ ಬಡತನವು ಬರುವುದಿಲ್ಲ. ಐಶ್ವರ್ಯವನ್ನು ಬಯಸುವವರು ನೆಲ್ಲಿ ಫಲವನ್ನು ನೀರಿನಲ್ಲಿ ಹಾಕಿ ಆ ನೀರಿನಿಂದ ಸ್ನಾನವನ್ನು ಮಾಡಬೇಕು. ಅದರಲ್ಲೂ ಏಕಾದಶಿಯಂದು ಈ ಸ್ನಾನ ಹೆಚ್ಚು ಪುಣ್ಯದಾಯಕ.
ನೆಲ್ಲಿಯನ್ನು ಧಾತ್ರಿ, ತಿಕ್ತ, ಅದಿರೋಹ, ಅಮಲಕ, ಅಮೃತ ಎಂದೆಲ್ಲ ಕರೆಯುತ್ತಾರೆ.
ಅನೇಕ ಆಯುರ್ವೇದ ಔಷಧಗಳಲ್ಲಿ ನೆಲ್ಲಿಯನ್ನು ಬಳಸುತ್ತಾರೆ.
+ಮೆದುಳಿನ ಕಾಯಿಲೆ +ಹೊಟ್ಟೆನೋವು +ಬಾಯಿ ಹುಣ್ಣು +ತಲೆಸುತ್ತುವಿಕೆ +ಅಜೀರ್ಣ +ಅತಿ ಬೆವರು ವಸರುವಿಕೆ +ಆಸನಾಗ್ರದಲ್ಲಿ ಆಗುವ ಉರಿ +ಬಾಯಿ, ಮೂಗು, ಗುದದ್ವಾರದಿಂದ ಹೊರಬೀಳುವ ರಕ್ತದ ತಡೆಗೆ + ' ಸಿ ' ಜೀವಸ್ತ್ವದ ಕೊರತೆ ನಿವಾರಣೆಗೆ + ಕಣ್ಣಿನ ದೋಷ + ದೇಹ ಮನಸ್ಸಿನ ಚೈತನ್ಯ ವೃದ್ಧಿಗೆ +ಸಿಹಿಮೂತ್ರ + ಮಧುಮೇಹ + ಕೂದಲು ಉದುರುವಿಕೆ ಮತ್ತು ಕೇಶದ ಬೆಳವಣಿಗೆ +ನೆಗಡಿ, ಉಬ್ಬಸ, ಕ್ಷಯ, ಜ್ಞಾಪಕ ಶಕ್ತಿ ಹೀನತೆ, ಅಕಾಲ ಮುಪ್ಪು ನಿವಾರಣೆ ಹೀಗೆ ಮನುಷ್ಯನ ಅನೇಕ ಮಾನಸಿಕ ಮತ್ತು ದೈಹಿಕ ರೋಗಗಳನ್ನು ನಿವಾರಣೆಯಲ್ಲಿ ನೆಲ್ಲಿ ಫೆಲವನ್ನು ಉಪಯೋಗಿಸಲಾಗುತ್ತದೆ.
ತಾರೀಖು : 21 - 8 - 2016.

Saturday 13 August 2016

%%%% ರೈತರ ಆತ್ಮಹತ್ಯೆ %%%%


~~~~~~ ಎಂ. ಗಣಪತಿ. ಕಾನುಗೋಡು.
ರೈತನ ಸಾಲದ ಉಭ್ರಮೆ ಎಷ್ಟಿದೆಯೆಂದರೆ ತನ್ನ ಮೂಲ ಕಸುಬಿನಿಂದ ಹೊರಟು ಬೇರೆ ಉದ್ಯೋಗವನ್ನು ಹಿಡಿಯಲು ಅವನಲ್ಲಿ ಅದಕ್ಕೆ ಬೇಕಾದ ಪರಿಣಿತಿ, ಕಾಸು, ವಾತಾವರಣದ ಅನುಕೂಲತೆ ಯಾವುದೂ ಆತನಲ್ಲಿ ಇಲ್ಲ. ಅಲ್ಲದೆ ಈಗಾಗಲೇ ಅವನು ತನ್ನ ಆರ್ಥಿಕ ಅಧೋಗತಿಯಿಂದಾಗಿ ಬಸವಳಿದಿದ್ದಾನೆ, ಯಾವುದಕ್ಕೂ ಧೈರ್ಯ ಕುಂದಿದೆ. ಇನ್ನು ಸಂಘಟಿತನಾಗಿ ಸರ್ಕಾರದ ನೆರವನ್ನು ಕೋರಬೇಕು. ತನ್ನ ವೈಯುಕ್ತಿಕ ಬದುಕಿನ ಹತೋಟಿಯೇ ಅವನಲ್ಲಿರದಿರುವಾಗ ಅವನು ಇನ್ನು ಸಾಂಘಿಕ ನೆಲೆಗೆ ಸಾಗುವುದು ಹೇಗೆ ?.
ಈಗಾಗಲೇ ರೈತ ಸಂಘಟನೆಗಳಿವೆ. ಆದರೆ ಅವೂ ರಾಜಕೀಯಪ್ರೇರಿತ. ಯಾವುದೊ ಕೆಲವು ಮಂದಿಯ ತೆವಲಿಗೆ ರೈತರ ಹೆಸರಿನಲ್ಲಿ ಮಾಡಿಕೊಂಡ ರೈತ ಸಂಘಗಳವು. ಮತ್ತೆ ಆ ಸಂಘಟನೆಗಳಲ್ಲೇ ಒಡಕುಂಟಾಗಿ ಬೇರೆ ಬೇರೆ ಬಣಗಳಾಗಿವೆ. ತಮ್ಮ ಘಾಯವನ್ನೇ ಮಾಗಿಸಿಕೊಳ್ಳಲು ಅವರಿಗಾಗದಾದಾಗ ಇನ್ನು ನಿಜವಾಗಿ ರೈತರ ಘಾಯವನ್ನು ವಾಸಿಮಾಡುವ ಅವರ ಘೋಷಣೆ ಕೇವಲ ಗಾಳಿಯ ಮೇಲಿನ ಗುದ್ದಷ್ಟೇ.
ರೈತ ತಿಳಿವಳಿಕೆ ಇಲ್ಲದವನೇನೂ ಅಲ್ಲ. ತಾನು ಶೂನ್ಯ ಬಿಂದುವಿನವರೆಗೆ ಬರುವವರೆಗೂ ಯಾವುದಾದರೂ ಒಂದು ಮಾರ್ಗದಲ್ಲಿ ಬದುಕಲು ಸಾಧ್ಯವೇನೋ ಎಂದು ಪ್ರಯತ್ನಿಸ ಹಣುಕಿದವನು. ಸರ್ಕಾರ ಕೂಲಿಕಾರರಿಗೆ ಬೇಕಾಬಿಟ್ಟಿ ಪುಕ್ಕಟ್ಟೆ ಸವಲತ್ತನ್ನು ಹೇರಳವಾಗಿ ಕೊಟ್ಟು ಅವರನ್ನು ಇನ್ನೂ ಸೋಮಾರಿಗಳಾಗಿ ಮಾಡಿ ಅವರ ದುಡಿಯುವ ಶಕ್ತಿಯನ್ನು ಉಡುಗಿಸುವುದಕ್ಕಿಂತ ದುಡಿದು ದೇಶಕ್ಕೆ ಅನ್ನ ಕೊಡುವ ರೈತನಿಗೆ ಅವನು ಬದುಕಿ ಉಳಿಯುವ ಹಾಗೆ ವಾಸ್ತವಿಕ ಸವಲತ್ತುಗಳನ್ನುಕೊಡಬೇಕು. ಹಾಗೆಂದು ಸರ್ಕಾರ ಈಗ ಮಾಡುತ್ತಿರುವಂತೆ ರೈತ ತೆಗೆದುಕೊಂಡ ಸಾಲದಲ್ಲಿ 25 % ಅಸಲಿನ ಹಣವನ್ನು ವಿನಾಯಿತಿ ಮಾಡುವುದು ಸಲ್ಲದು. ಅದರ ಬದಲಿಗೆ ಆತನಿಗೆ ಕೃಷಿ ಸಂಬಂಧಿತ ಕೈಗಾರಿಕೆ, ಗ್ರಾಮೀಣ ಕೈಗಾರಿಕೆ, ಕೃಷಿಯನ್ನೇ ಇನ್ನೂ ಅಭಿವೃದ್ಧಿ ಪಡಿಸುವಿಕೆ ಮುಂತಾದ ಉದ್ದೇಶಗಳಿಗೆ ಬಡ್ಡಿರಹಿತವಾಗಿ , ಅತಿ ಸುಲಭವಾಗಿ, ಹೇರಳವಾಗಿ ಸಾಲವನ್ನು ಕೊಡಬೇಕು. ಅವನು ಬೆಳೆದ ಬೆಳೆಗಳಿಗೆ ಸಹಾಯಧನವನ್ನು ಕೊಡಬೇಕು. ಅಂದರೆ ಒಂದು ಕ್ವಿಂಟಾಲ್ ಬತ್ತಕ್ಕೆ ನಿಜವಾಗಿ ಹೇಳಬೇಕೆಂದರೆ ಪ್ರಸ್ತುತದಲ್ಲಿ ಒಂದು ಸಾವಿರದ ಐದು ನೂರು ರುಪಾಯಿ ಖರ್ಚಾಗುತ್ತದೆ. ಅದರಮೇಲೆ ರೈತನಿಗೆ ಲಾಭ ಉಳಿಯಬೇಕೆಂದಿದ್ದರೆ ಅವನು ಅದನ್ನು ಒಂದು ಕ್ವಿಂಟಲಿಗೆ ಕನಿಷ್ಠ ಎರಡು ಸಾವಿರ ರೂಪಾಯಿಗಳಿಗೆ ಮಾರಬೇಕು. ಆದರೆ ಆ ಧಾರಣೆ ಈಗ ಮಾರುಕಟ್ಟೆಯಲ್ಲಿ ದೊರಕುತ್ತಿಲ್ಲ. ಅಥವ ಹಾಗೆ ಮಾಡಿದರೆ ಅಕ್ಕಿಯನ್ನು ಬಳಕೆಮಾಡುವ ಗ್ರಾಹಕನಿಗೆ ತೊಂದರೆಯಾಗುತ್ತದೆ. ಅದೂ ಒಂದು ಕಷ್ಟವೇ. ಜನಸಾಮಾನ್ಯ ಗ್ರಾಹಕರಿಗೆ ಖಂಡಿತಾ ತೊಂದರೆ ಆಗಬಾರದು. ಆದ್ದರಿಂದ ಆ ವ್ಯತ್ಯಾಸದ ಮೊಬಲಗನ್ನು ಸರ್ಕಾರ ರೈತನಿಗೆ ಭರಿಸಬೇಕು. ಆಗ ಮಾತ್ರ ರೈತ ತನ್ನ ಉದ್ಯೋಗದಲ್ಲಿ ಉಳಿಯಲು ಸಾದ್ಯ. ಇಲ್ಲದಿದ್ದರೆ ಅವನೂ ತನ್ನ ಜೀವನೋಪಾಯಕ್ಕೆ ಬೇರೆ ದಾರಿಯನ್ನು ಅರಸಿ ನಗರವನ್ನು ಸೇರಬೇಕಾಗುತ್ತದೆ. ಹೀಗೆ ಗ್ರಾಮ ಭಾರತದ ಜನರೆಲ್ಲಾ ಶಹರವನ್ನು ಸೇರಿದರೆ ಆಗ ನಗರ ಭಾರತದ ಜನಜೀವನ ಒತ್ತಡವನ್ನು, ಅನೇಕ ಸಮಸ್ಯೆಗಳನ್ನು ನಿರ್ಮಾಣ ಮಾಡಿದತಾಗುತ್ತದೆ. ಈಗ ಆಗುತ್ತಿರುವುದು ಇದೇ. ಈಗ ಮಾಡುತ್ತಿರುವಂತೆ ಸಹಾಯಧನದಲ್ಲಿ ಕೃಷಿ ಯಂತ್ರಗಳು, ಗೊಬ್ಬರಗಳು, ಕೃಷಿ ಉಪಕರಣಗಳು ಇತ್ಯಾದಿ ಸವಲತ್ತುಗಳು ಸರ್ಕಾರದಿಂದ ಪೂರೈಕೆಯಾಗುತ್ತಿರುವ ಕ್ರಮ ಸರಿ ಇಲ್ಲ. ಏಕೆಂದರೆ ಹಾಗೆ ಪೂರೈಕೆಯಾಗುತ್ತಿರುವ ವಸ್ತುಗಳು ನಿಜವಾಗಿ ರೈತನಿಗೆ ಸಹಾಯಧನದಲ್ಲಿ ದೊರಕುತ್ತಿಲ್ಲ. ಹಾಗೆ ಮಾಡುವಲ್ಲಿ ಸರ್ಕಾರ ಅವುಗಳ ಮೂಲ ಬೆಲೆಯನ್ನೇ ಏರಿಸಿ ರೈತನಿಗೆ ಸಹಾಯಧನ ಕೊಟ್ಟ ಕುಹಕವನ್ನು ಮಾಡುತ್ತಿದೆ. ಅಂದರೆ ಆ ವಸ್ತುಗಳ ತಯಾರಕರಿಗೆ ಕಡಿಮೆ ಬೆಲೆಯನ್ನು ಕೊಟ್ಟು ಅವರಿಂದ ಹೆಚ್ಚು ಬೆಲೆಯನ್ನು ಅವುಗಳಿಗೆ ಕಟ್ಟಿಸಿದಂತೆ ದಾಖಲೆಯನ್ನು ಸಿದ್ಧಗೊಳಿಸಿಕೊಂಡಿರುತ್ತದೆ. ಆ ಬೆಲೆಯ ಮೊಬಲಗಿನ ವ್ಯತ್ಯಾಸವನ್ನು ಸರ್ಕಾರ ರೈತನಿಗೆ ಸಹಾಯಧನವೆಂದು ಘೋಷಿಸುತ್ತದೆ. ಆ ವಸ್ತುವಿನ ಹೆಚ್ಹಿಸಿದ ಬೆಲೆಯ ಮೊಬಲಗನ್ನು ಯಾರು ಯಾರೋ ತಿನ್ನುತ್ತಾರೆ. ಆದರೆ ಸಹಾಯಧನದ ಮೊಬಲಗನ್ನು ಸರ್ಕಾರದ ಖಜಾನೆಯಿಂದ ಭರಿಸಲಾಗುತ್ತದೆ. ಇದು ಸರ್ಕಾರದಿಂದ ರೈತರಿಗೆ ಆಗುತ್ತಿರುವ ಒಂದು ವಂಚನೆ. ಇಂಥಹ ಪ್ರಾಯೋಗಿಕ ಸವಲತ್ತುಗಳನ್ನು ಕೊಡುವುದನ್ನು ಬಿಟ್ಟು ಸರ್ಕಾರ ಕೇವಲ ಬಾಯೋಪಚಾರ ಮಾಡುತ್ತಿದೆ.

ರೈತ ಎಲ್ಲವೂ ನಿಷ್ಫಲವಾದಾಗ ಆತ ಉದ್ಯೋಗವನ್ನು ಅರಸಿ ಅನಿವಾರ್ಯವಾಗಿ ನಗರಕ್ಕೆ ಗುಳೇ ಹೋಗಬೇಕಾಗುತ್ತದೆ. ಅದು ಸಾಧ್ಯವಾಗದಿದ್ದಾಗ ಅವನು ಅಸಹಾಯಕನಾಗಿ ಅವನ ಧೃಷ್ಟಿಯಲ್ಲಿ ಅರಸಲೇ ಬೇಕಾದ ಅತಿ ಕೊನೆಯ ದಾರಿ ಆತ್ಮಹತ್ಯೆ.