Sunday 24 August 2014

ಅಡಿಕೆ ಬೆಲೆ ಗಗನಕ್ಕೆ

ಕೆಂಪು ಅಡಿಕೆ ಬೆಲೆ ಗಗನಕ್ಕೆ ಏರಿದೆ ಎನ್ನುವುದು ಸುಳ್ಳಲ್ಲ. ಕೆಂಪು ಅಡಿಕೆ ಬೆಳೆಗಾರನಿಗೆ ಸಿಗುವುದು ಒಂದು ಎಕರೆಯಲ್ಲಿ , ಸರಿಯಾದ ಸಮಯದಲ್ಲಿ ಕೊಯಿಲು ಮಾಡಿದರೆ, ಒಟ್ಟು ಉತ್ಪನ್ನದ ಮೂರನೆಯ ಒಂದು ಭಾಗ ಮಾತ್ರ. ಸಾಗರ ಪ್ರಾಂತ್ಯದಲ್ಲಿ ಸರಾಸರಿ ಒಂದು ಎಕೆರೆಗೆ 12 ಕ್ವಿಂಟಾಲ್ ಅಷ್ಟೇ. ಅಂದರೆ ರೈತನಿಗೆ ಒಂದು ಎಕೆರೆಯಲ್ಲಿ ಮೂರು ಕ್ವಿಂಟಾಲ್ ಕೆಂಪಡಿಕೆ ಸಿಗುತ್ತದೆ. ಅದರಲ್ಲೂ ಕೆಂಪು ಗೋಟು ಬೇರ್ಪಡೆಯಾಗುತ್ತದೆ. ಅದಕ್ಕೆ ಧಾರಣೆ ಕಡಿಮೆ. ಉಳಿದ 9 ಕ್ವಿಂಟಾಲ್ ಅಡಿಕೆಯಲ್ಲಿ ಚಾಲಿ[ಬಿಳಿ ಅಡಿಕೆ], ಬಿಳಿಗೋಟು, ಕಲ್ವಾರು. ಕೋಕ [ಅತಿ ಲಡ್ಡು ಅಡಿಕೆ]ಇವೆಲ್ಲ ಸೇರಿಕೊಳ್ಳುತ್ತದೆ. ಇವಕ್ಕೂ ಒಮ್ಮೆ ಬೆಲೆ ಬಂದರೂ ಈ ವಿವಿಧ ಬಗೆಯ ಚಾಲಿ ಬೇರ್ಪಡೆಗಳಿಗೆ ಧರ ತಾರತಮ್ಯವಿದೆ. ಕಳೆದ ಚುನಾವಣೆಯ ನಂತರ ಧಾರಣೆ ಒಳಗೆ ಬರುತ್ತದೆ ಎನ್ನುವ ಕಾರಣ ಮತ್ತು ಪಡೆದ ಸಾಲವನ್ನು ತೀರಿಸಿ ಚೊಕ್ಕವಾಗುವ ಕಾರಣಗಳಿಂದ ಬಹುತೇಕ ಬೆಳೆಗಾರರು ಚಾಲಿ ಅಡಿಕೆಯನ್ನೂ ಧಾರಣೆ ಏರುವ ಮೊದಲೇ ಮಾರಾಟ ಮಾಡಿದ್ದಾರೆ. ಕಳೆದ ವರ್ಷ ಕೊಳೆ ರೋಗ ಮತ್ತು ಪ್ರಾಕೃತಿಕ ಒತ್ತಡದಿಂದಾಗಿ ಈ ಉತ್ಪನ್ನ್ನದಲ್ಲೂ ಅತಿ ಕಡಿಮೆಯಾಗಿದೆ. ಸಾಗರದ ಇದೇ ಮಾದರಿ ಉಳಿದ ಎಲ್ಲಾ ಅಡಿಕೆ ಬೆಳೆಯುವ ಪ್ರದೇಶಕ್ಕೂ ಸ್ವಲ್ಪ ತಾರತಮ್ಯದಲ್ಲಿ ಹೊಂದಿಕೊಂಡಿದೆಯೇ ವಿನಃ ಬಹಳ ವ್ಯತ್ಯಾಸವಿಲ್ಲ.

ಇಷ್ಟಕ್ಕೂ ಮಲೆನಾಡಿನ ಪಾರಂಪರಿಕ ಅಡಿಕೆ ಬೆಳೆಗಾರ ಹೊಂದಿರುವ ತಲಾ ಅಡಿಕೆ ತೋಟವೆಷ್ಟು?. ಹತ್ತು ಗುಂಟೆಯಿಂದ ಒಂದು ಎಕರೆ ಕ್ಷೇತ್ರವಷ್ಟೇ. ಇದು ಸರಾಸರಿ ಹಿಡುವಳಿಯ ಮಾಹಿತಿ. ಇತ್ತೀಚೆಗೆ ಕೆಲವರು ಒಂದೂಅರ್ಧಎಕೆರೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಡಿಕೆ ಬೆಳೆಗಾರನ ಸಾಲ ಎಷ್ಟಿದೆಯೆಂದು ಅವನ ಹೆಂಡತಿಗೂ ಗೊತ್ತಿಲ್ಲ. ಹೇಳಿದರೆ ಮರ್ಯಾದೆ ಹೋಗುತ್ತದೆ. ಕಾರಣ ಅಡಿಕೆ ಧಾರಣೆ ಬಹಳ ಇದೆಯೆಂದು ಎಲ್ಲರೂ ಹೇಳುತ್ತಿದ್ದಾರೆ. ಕೃಷಿಯ, ಕೂಲಿಯ ಖರ್ಚನ್ನೂ ಯಾರೂ ಪ್ರಸ್ತಾಪ ಮಾಡುತ್ತಿಲ್ಲ.

ಇನ್ನು, ಈಗ ಏರಿದ ಕೆಂಪಡಿಕೆ ಧಾರಣೆ ಬೆಳೆಗಾರನ ನಾಲ್ಕನೇ ಒಂದು ಭಾಗದ ಬೆಳೆಗೆ ಮಾತ್ರ. ಅದೂ ಅವನ ಕೈಗೆ ಸಿಗಲಿಲ್ಲ. ಕಿವಿಯಲ್ಲಿ ಕೇಳಿದ್ದಷ್ಟೇ. ಅಡಿಕೆಯ ಬೆಲೆ ಗಗನದಲ್ಲಿ. ಬೆಳೆಗಾರನಿಗೆ ಅದು ಗಗನ ಕುಸುಮ. ಕಣ್ಣಿಗೆ ಕಾಣುತ್ತದೆ, ಕೈಗೆ ಸಿಕ್ಕಿಲ್ಲ. ಅವನ ಎಲ್ಲಾ ಬೆಳೆಯನ್ನು ಫೆಬ್ರುವರಿ ತಿಂಗಳಿನಲ್ಲಿ ಮಾರಾಟ ಮಾಡಿ ಸಾಲ ತೀರಿಸಿ ಹೊಸ ಸಾಲಕ್ಕೆ ಅರ್ಜಿ ಹಾಕಿ ಸಾಲದ ಹಣ ಬರುವುದಕ್ಕೆ ಈಗ ಹಲ್ಲುಗಿಂಜಿ ಕುಳಿತಿದ್ದಾನೆ.

ಒಟ್ಟಾರೆ ನಮ್ಮ ರೈತ " ಈಗ ಸ್ವಲ್ಪ ಕಷ್ಟದಲ್ಲಿದ್ದೇನೆ,ಇನ್ನು ನಾಲ್ಕು ವರ್ಷ ಹೋದರೆ ಸುಧಾರಿಸಿ ಕೊಳ್ಳುತ್ತೇವೆ " ಎಂದು ಹೇಳಿಕ್ಪ್ಳ್ಳುತ್ತಲೇ ಸಾಯುತ್ತಾನೆ. ಇದು ಅಜ್ಜರೈತನಿಂದ ಹಿಡಿದು ಮೊಮ್ಮಗ,ಮಿಮ್ಮಗರೈತನವರೆಗೂ ಇರುವ ಆದ್ಯಂತ ಕಥೆ.

ವೃಥಾ ಮಾಧ್ಯಮದವರು ಆಕಾಶದಲ್ಲಿ ಹಾರಾಡುವ ಪ್ಯಾರಾಚೂಟನ್ನೇ ವೈಭವೀಕರಿಸಿ ಬೇರೆಯವರಿಗೆ, ಸರ್ಕಾರಕ್ಕೆ ಅಡಿಕೆ ಬೆಳೆಗಾರನ ಮೇಲೆ ಕಣ್ಣು ದೃಷ್ಟಿ ತಾಗುವ ಹಾಗೆ ಮಾಡುತ್ತಿದ್ದಾರೆ. ಅಯ್ಯೋ ದೇವರೇ ನಾನೊಬ್ಬ ಅಡಿಕೆ ಬೆಳೆಗಾರ. "ಗಂಡ ಸತ್ತ ದುಃಖ ಬೇರೆ, ಬಡ್ಡುಗತ್ತಿಯ ಉರಿಬೇರೆ " ಎಂಬ ಗಾದೆ ಈಗ ಅಳಿಸಿಹೋದರೂ ಅದರ ವೇದನೆ ನನಗೆ ಪುನಃ ಪುನಃ ಬರುವಂತೆ ಮಾಡುತ್ತಿದ್ದಾರಲ್ಲಾ. ಈ ವರ್ಷ ಮಳೆಯೂ ಇಲ್ಲದೆ ಬರುವ ಬೆಳೆಯೂ ಆತಂಕದಲ್ಲಿದೆ. ನಮ್ಮನ್ನು ದೇವರೇ ಕಾಯಬೇಕು.

No comments:

Post a Comment

Note: only a member of this blog may post a comment.