Tuesday 27 November 2012

ಅನುಭವದ ಕೆಲ ತುಣುಕುಗಳು ಅಕ್ಷರಗಳಲ್ಲಿ ...


-----
ತೆರುವುದು ಬಂದರೆ ಬಡವ ಹೊರುವುದು ಬಂದರೆ ದಡ್ಡ (ಇದರ ಅರ್ಥ : ಹಣವನ್ನು ತೆರುವ ಸಂದರ್ಭ ಬಂದಾಗ ನಾನು ಬಡವ ಎಂದು ಕೆಲವರು ಹೇಳುತ್ತಾರೆ. ತಮ್ಮ ಸುಖಕ್ಕೆ ಯಾವ ಕೊರತೆಯೂ ಇಲ್ಲ. ಜವಾಬ್ದಾರಿಯನ್ನು ಹೊರುವದು ಬಂದಕೂಡಲೇ ನಾನು ದಡ್ಡ ಎನ್ನುತ್ತಾರೆ . ತಮ್ಮ ಬಚಾವಿಗೆ ಎಲ್ಲಾ ಬುದ್ದಿವಂತಿಕೆಯೂ ಅವರಲ್ಲಿ ಇರುತ್ತದೆ )

-----
ಬಹಳ ಗಂಭೀರವಾಗಿದ್ದರೆ 'ಅಹಂಕಾರಿ' ಎನ್ನುತ್ತಾರೆ . ಬಹಳ ಸರಳವಾಗಿದ್ದರೆ ಅದೇ ಜನ ತಲೆಯ ಮೇಲೆ ಕುಳಿತು ಹಗುರವಾಗಿ ನೋಡುತ್ತಾರೆ. 

-----
ಒಬ್ಬ ವ್ಯಕ್ತಿ ಎಷ್ಟು ಹಣ ಗಳಿಸುತ್ತಾನೆ ಎನ್ನುವದಕ್ಕಿಂತ ಗಳಿಸಿದ್ದನ್ನು ಹೇಗೆ ಖರ್ಚು ಮಾಡುತ್ತಾನೆ ಎನ್ನುವದು ಮುಖ್ಯ .

-----
ಚುನಾವಣೆಯಲ್ಲಿ ಸ್ಪರ್ಧಿಸುವ ದೊಡ್ಡ ಲಾಭವೆಂದರೆ , ಗೆಲುವದು ಸೋಲುವದು ಎರಡನೆಯ ವಿಷಯ , ಆದರೆ ನಮ್ಮ ಸುತ್ತಲೂ ಇರುವವರಲ್ಲಿ ಯಾರು ನಮಗೆ  ನಿಜವಾದ ಶತ್ರುಗಳು ಎನ್ನುವದು ನಿಖರವಾಗುತ್ತದೆ .

-----
ಕುಟುಂಬದ ದೊಡ್ಡ ಕಾರ್ಯಕ್ರಮದಲ್ಲಿ ನೆಂಟರಿಷ್ಟರು , ನೆರೆಹೊರೆಯವರ ಒಲವು ಹಿಡಿಯುವದು ; ಚುನಾವಣೆಯಲ್ಲಿ ಕಾರ್ಯಕರ್ತರ ಒಲವು ಹಿಡಿಯುವದು ; ಗೋವಿನ ಪೂಜೆಯ ದಿನ (ದೀಪಾವಳಿಯಂದು) ಹಸು, ಹೋರಿಗಳ ಒಲವು ಹಿಡಿಯುವದು ; ಈ ಮೂರೂ ಕಷ್ಟ ಸಾಧ್ಯವೇ ಸರಿ .

-----
'ಅವನು ಹಣ ಖರ್ಚು ಮಾಡಲು ಸಾಯುತ್ತಾನೆ , ಹೋಗುವಾಗ ಏನು ಕಟ್ಟಿಕೊಂಡು ಹೋಗುತ್ತಾನೆಯೇ ?' ಎಂದು ಜನ ಹೇಳುತ್ತಾರೆ . ಹಾಗೆಂದು ಹೀಗೆ ಹೇಳುವ ಜನ ತಾವು ಕೂಡಿಡುವ ಅಭ್ಯಾಸವನ್ನೇನೂ ಬಿಡುವದಿಲ್ಲ. ನಮ್ಮೊಂದಿಗೆ ನಮ್ಮ ಹೆಂಡತಿ, ಮಕ್ಕಳು , ಸೊಸೆಯಂದಿರು , ಅಳಿಯಂದಿರು , ಮೊಮ್ಮಕ್ಕಳು , ಮಿಗಿಲಾಗಿ ವೃದ್ಧ ಅಪ್ಪ - ಅಮ್ಮ , ಹೀಗೆ ಎಲ್ಲರೂ ಒಟ್ಟಿಗೆ ಸಾಯುವುದಾದರೆ ಅಡ್ಡಿಯಿಲ್ಲ . ನಾನೊಬ್ಬ ಸತ್ತು ಅವರೆಲ್ಲಾ ಬದುಕಿ ಉಳಿದರೆ ಅವರೇನು ಬಿಕ್ಷೆ ಬೇಡಬೇಕೆ ? ಇಷ್ಟಕ್ಕೂ ಒಬ್ಬ ವ್ಯಕ್ತಿ ಗಳಿಸಿದ ಸಂಪತ್ತು ಕೇವಲ ಅವನೋಬ್ಬನದ್ದಲ್ಲ , ಪರೋಕ್ಷ್ಯವಾಗಿ ಇಡಿಯ ಕುಟುಂಬದ್ದು .

------

ಸುಖ ತೃಪ್ತಿಯನ್ನು ನಾವು ನಾವಿರುವಲ್ಲಿ , ನಮಗಿರುವಿಷ್ಟರಲ್ಲಿ ಕಂಡುಕೊಳ್ಳಬೇಕು. ಹುಡುಕುತ್ತಾ ಹೋದರೆ 'ಸಾಕು' ಎನ್ನಿಸುವದು ಸಿಗುವುದೇ ಇಲ್ಲ . ಸಾಕು ಎನ್ನುವುದು ಕೇವಲ ಎರಡೇ !. ಒಂದು ಹೊಟ್ಟೆಗೆ .. ಎರಡು ಪೆಟ್ಟಿಗೆ !!!
ಮತ್ತೊಬ್ಬರ ಬಾಹ್ಯದಂಬರವನ್ನು ನೋಡಿ ಮೈ ಪರಚಿಕೊಂಡರೆ ಉಳಿವುದು ಗಾಯವೊಂದೇ. ಆ ಆಡಂಬರದ ಹಿಂದೆ ಇರುವ ಗಾಯದ ಹುಳವನ್ನು ಗಮನಿಸಿ ನಾವು ಇಷ್ಟಕ್ಕೂ ಸುಸ್ತಿರ ಎಂಬ ತೃಪ್ತಿಭಾವ ಬೇಕು.

-------

ಎಲ್ಲಾ ಚಟಗಳಂತೆ  ಹಣ  ಮಾಡಬೇಕೆ0ಬುದೂ ಒಂದು ಚಟ. ಹಣ  ಸೇರುವುದು,ಬಿಡುವುದು  ಅವರವರ ಅದೃಷ್ಟ.ಆದರೆ  ಹಣ  ಮಾಡುವ  ಚಟ  ಒಳ್ಳಯದು.ಅದರಿಂದ  ಬೇರೆ  ಚಟ  ಹಿಡಿಯುವುದಿಲ್ಲ .ಏಕೆಂದರೆ  ಬೇರೆ  ಚಟಕ್ಕೆ  ಹೋದರೆ  ಕಾಸು  ಖರ್ಚಾದೀತು  ಎಂಬ  ಚಿಂತೆ .

-- ಎಂ ಗಣಪತಿ , ಕಾನುಗೋಡು

1 comment:

Note: only a member of this blog may post a comment.