Tuesday 16 September 2014

******* ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ ?, *******

- ಎಂ ಗಣಪತಿ , ಕಾನುಗೋಡು .

ಹೌದು. ಹೊಗೆ ಕಾಣಿಸಿಕೊಂಡಿದೆ ಎಂದರೆ ಅದರ ಹಿಂದೆ ಬೆಂಕಿ ಇದೆ ಎಂಬುದು ವಾಸ್ತವಿಕ. ಆದರೆ ಆ ಬೆಂಕಿ ಯಾವುದು ಎಂಬುದು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾದ ವಿಚಾರ.

ಒಂದು ವ್ಯಕ್ತಿ ಅಥವಾ ಸಂಸ್ಥೆಯ ಬಗ್ಯೆ ಯಾವುದೇ ಸುದ್ಧಿ ಪ್ರಚಾರಗೊಂಡರೆ ಅದಕ್ಕೆ ಸರಿಯಾದ ಕಾರಣ ತಕ್ಷಣ ಯಾರಿಗೂ ಗೊತ್ತಾಗುವುದಿಲ್ಲ. ಹಾಗೆಂದು ಒಂದು ಪರಿಣಾಮಕ್ಕೆ ಸಂಬಂಧಿಸಿರಬಹುದಾದ ವಾಸ್ತವಿಕ ಕಾರಣವನ್ನು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಒಂದು ಸುದ್ದಿ ಅಥವಾ ಘಟನೆ ಪ್ರಚಲಿತಕ್ಕೆ ಬಂದಾಗ ಆ ಹೊತ್ತಿಗೆ ತಮ್ಮ ಬುದ್ಧಿಯ ಮಿತಿಯೊಳಗೆ ಯಾವ ಯಾವ ಕಾರಣಗಳು ಗೋಚರಿಸುತ್ತವೆಯೋ ಅವನೆಲ್ಲ ಆ ಪರಿಣಾಮಕ್ಕೆ ತಳಿಕೆ ಹಾಕುತ್ತಾರೆ.ಆಡುತ್ತಿರುವ ಹೊಗೆಯ ಹಿಂದೆ ಇರುವಂತಹ ನಿಜವಾದ ಬೆಂಕಿ ಯಾವುದು ಎಂಬುದನ್ನು ಯಾರೂ ತಿಳಿದಿರುವುದಿಲ್ಲ. ಹಾಗೆಂದು ತಮ್ಮಷ್ಟಕ್ಕೆ ತಾವು ಯಾರೂ ಸುಮ್ಮನೆ ಕೂರುವುದಿಲ್ಲ.

ಎಷ್ಟೋ ಭಾರಿ ಆಡುವ ಹೊಗೆಗೂ ಅಡಗಿರುವ ಬೆಂಕಿಗೂ ಕಾರ್ಯ ಕಾರಣ ಸಂಬಂಧವೇ ಇರುವುದಿಲ್ಲ.

ಸಮಾಜದಲ್ಲಿ ಜವಾಬ್ದಾರಿಯಿಲ್ಲದ ಜನರು, ನಾಲಿಗೆ ತುರಿಕೆ ಇರುವ ಜನರು, ಪುಕ್ಕಟೆ ಕರ್ಣಾನಂದವನ್ನು ಬಯಸುವ ಜನರು, ವದಂತಿಕೋರ ಪ್ರವೃತ್ತಿಯನ್ನೇ ಚಟವನ್ನಾಗಿರಿಸಿಕೊಂಡವರು, ಉದ್ಯೋಗದಲ್ಲಿ ಸೋತು ಹತಾಶರಾದರೂ 'ಅಹಂ' ನ್ನು ಬಿಡಲಾರದವರು, ತಮ್ಮಲ್ಲಿರುವ ದ್ವೇಷವನ್ನು ಸಾಧಿಸಲು ಸಮಯಕ್ಕೆ ಹೊಂಚು ಹಾಕುತ್ತಿರುವವರು ಹೀಗೆ.....ಹೀಗೆ......... ಬಹಳ ಮಂದಿ ಇದ್ದಾರೆ. ಅವರಿಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವದಂತಿಯನ್ನು ಹಬ್ಬಿಸುವುದೇ ಕೆಲಸ. ಅವರು ನಿದ್ರೆ ಬರಲಿಕ್ಕೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದಿಲ್ಲ.ತಾವು ಸುಖನಿದ್ರೆ ಮಾಡಲಿಕ್ಕೆ ಕಂಡುಕೊಂಡ ಅತ್ಯಂತ ಸುಲಭದ ದಾರಿ ಇದು.

ಯಾರ ನಿದ್ರೆ ಹಾಳಾದರೇನಂತೆ ?.

No comments:

Post a Comment

Note: only a member of this blog may post a comment.