Wednesday 22 October 2014

*^*^*^* ಬಹುಮತಕ್ಕೆ ಅರ್ಥ ಬರುವುದು ಯಾವಾಗ ? ಹೇಗೆ ? ^*^*^*^*

ಬಹುಮತದ ಪರಿಕಲ್ಪನೆ ನಮಗಿರುವುದು ರಾಜಕಾರಣದಲ್ಲಿ ಇಲ್ಲವೇ ಹೆಚ್ಚೆಂದರೆ ಸಂಘ ಸಂಸ್ಥೆಗಳಲ್ಲಿ. ಆದರೆ ಬಹುಮತದ ಕಲ್ಪನೆ ಒಂದು ಸಂಸಾರದಿಂದ ಪ್ರಾರಂಭವಾಗಿ ವಿಶ್ವಸಂಸ್ಥೆಯವರೆಗಿನ ಎಲ್ಲಾ ಹಂತದ ಸಮೂಹಕ್ಕೂ ಅನ್ವಯಿಸುತ್ತದೆ.
ಯಾವುದೇ ನಿರ್ಣಯ ಇಂದು ಪ್ರಾತಿನಿಧಿಕ ವ್ಯವಸ್ಥೆಯಲ್ಲಿ ಬಹುಮತದ ಆಧಾರವನ್ನು ಅವಲಂಬಿಸಿದೆ. ಯಾವುದೇ ವಿಚಾರಕ್ಕೆ ನಿರ್ಣಯಕ್ಕೆ ಬರುವಾಗ ಆ ಸಮೂಹದ ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಕೇಳಲಾಗುತ್ತದೆ. ಮಂಡಿಸಿದ ವಿಚಾರದ ಕುರಿತು ಬಂದ ಹೆಚ್ಚು ಸದಸ್ಯ ಬಣದ ಅಭಿಪ್ರಾಯಕ್ಕೆ ಮನ್ನಣೆ ಕೊಡಲಾಗುತ್ತದೆ. ಅಂದರೆ ಒಂದು ಸಮೂಹದಲ್ಲಿ ಹೆಚ್ಚು ಮಂದಿ ಹೇಳಿದ್ದು ಸರಿಯಾಗಿರುತ್ತದೆ ಎನ್ನುವುದು ಈ ವಿಷಯದ ಹಿನ್ನಲೆಯಲ್ಲಿ ಇರುವ ಭಾವನೆ.
ಹೀಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ಬಹುಮತ ಬಣದ ಪ್ರತಿ ವ್ಯಕ್ತಿಯು ತನ್ನ ಸ್ವಂತ ಬುದ್ಧಿ, ತರ್ಕ, ವಿವೇಚನೆ , ಅನುಭವ, ಮಂಡಿಸಿದ ವಿಚಾರದ ಅಂತ್ಯ-ಅಪಾರ ಹಾಗೂ ಅದರ ಹಾಸು ಹೊಕ್ಕು ಇವುಗಳ ಜಿಜ್ಞಾಸೆ ..... ಹೀಗೆ ಇಂತಹ ಅಭಿಪ್ರಾಯವನ್ನು ಪ್ರಚುರಪಡಿಸುವಲ್ಲಿ ಬಳಸಿಕೊಳ್ಳಬೇಕಾದ ಅಂಶಗಳನ್ನು ಎಷ್ಟರ ಮಟ್ಟಿಗೆ ಪ್ರಯೋಗಿಸಿದ್ದಾನೆ ಎನ್ನುವುದು ಮುಖ್ಯ. ಆದರೆ ಇಂದು ಎಲ್ಲ ಪ್ರಕರಣಗಳಲ್ಲೂ ಪ್ರತಿ ವ್ಯಕ್ತಿಯು ಇಂಥಹ ಯಾವುದೇ ಪ್ರಕ್ರಿಯೆಯನ್ನು ಪ್ರಾಕೃತಗೊಳಿಸದೆ ತನ್ನ ನಿರ್ಲಿಪ್ತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಸಭೆಯಲ್ಲಿ ಪಡೆಯುವಂಥಹ ನಿರ್ಣಯವಂತೂ ಕೇವಲ ಚಪ್ಪಾಳೆ ಅಥವಾ ಧ್ವನಿಮತವನ್ನು ಆಧರಿಸಿರುತ್ತದೆ. ಇಲ್ಲಿ ' ಸಮೂಹ ಸನ್ನಿ ' ಬಹಳಷ್ಟು ತನ್ನ ಪ್ರಭಾವವನ್ನು ಬೀರುತ್ತದೆ.
ಯಾವುದೇ ವ್ಯಕ್ತಿಯು ತನ್ನ ಅಭಿಪ್ರಾಯ ಮಂಡನೆಯಲ್ಲಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ತನಗಿಂತ ಮೊದಲು ಅಥವ ತನ್ನ ಜೊತೆಗೆ ಹೆಚ್ಚು ಮಂದಿ ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೊ ಅದಕ್ಕೆ ಸ್ವರಗೂಡಿಸುತ್ತಾನೆ. ಸರ್ಕಾರ ಕೆಲವೊಮ್ಮೆ ಕಾಯಿದೆಯನ್ನು ಮಾಡುವ ಮುನ್ನ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಆಗ ಎಷ್ಟು ಮಂದಿ ಹೀಗೆ ಸ್ವತಂತ್ರ, ವಿವೇಚನಾಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ?. ಶಾಸನ ಸಭೆಯಲ್ಲಿ ಎಷ್ಟು ಮಂದಿ ಹೀಗೆ ನಡೆದುಕೊಳ್ಳುತ್ತಾರೆ?.ಸಂಘ,ಸಂಸ್ಥೆಯಲ್ಲಿ ಎಷ್ಟು ಮಂದಿ ಈ ಪರಿಧಿಯನ್ನು ಅನುಸರಿಸುತ್ತಾ
ಯಾವಾಗ ಒಂದು ಸಮೂಹದ ಸದಸ್ಯರು ಕ್ರಮವಾಗಿ ತಮ್ಮ ಮತವನ್ನು ಚಲಾಯಿಸುವುದಿಲ್ಲವೋ ಆಗ ಅದು ಒಂದು ಪ್ರಾತಿನಿಧಿಕ ಪ್ರಸಿದ್ಧವಾಗುವುದಿಲ್ಲ. ಇಂದು ಎಲ್ಲಾ ಬಹುಮತಗಳು ಜವಾಬ್ದಾರಿ ರಹಿತವಾದದ್ದು ಮತ್ತು 'ಸಮೂಹಸನ್ನಿ' ಯಿಂದ, ಅನೇಕ ರೀತಿಯ ಆಮಿಷಗಳು, ಒತ್ತಡಗಳ ಪ್ರಭಾವಗಳಿಂದ ಆವರಿಸಲ್ಪಟ್ಟಿದ್ದು . ಇಂತಹ ಬಹುಮತದ ಆಧಾರಿತ ನಿರ್ಣಯಗಳೂ ಅಷ್ಟೇ ಅರ್ಥರಹಿತವಾದದ್ದು. ಹಾಗೆಯೇ ಅಪಾಯಕರವೂ ಹೌದು.
~~~~~~~ ಎಂ. ಗಣಪತಿ. ಕಾನುಗೋಡು.

ತಾರೀಖು : 20 . 10 .2014

No comments:

Post a Comment

Note: only a member of this blog may post a comment.