Sunday 6 November 2016

ಹಬ್ಬಗಳು ಏಕೆ ?. ಹೇಗೆ ?.


~~~~~ ಎಂ. ಗಣಪತಿ. ಕಾನುಗೋಡು.
ನಮ್ಮ ಸಂಪ್ರದಾಯಗಳಲ್ಲಿ ಹಬ್ಬಗಳ ಆಚರಣೆ ತೀರಾ ಅಗತ್ಯವಾದದ್ದು ಎನ್ನಿಸಿಕೊಂಡಿದೆ. ಅವುಗಳ ಪೌರಾಣಿಕ ಹಿನ್ನಲೆ ಏನೂ ಇರಲಿ. ಅವುಗಳ ಸಾಮಾಜಿಕ ಕಳಕಳಿ ಬಹಳ ತುಂಬಾ ಮಹತ್ವದ್ದು. ನಮ್ಮ ಜೀವನದ ಜಂಜಾಟದಲ್ಲಿ ಯಾವಾಗಲೂ ಪುರುಸೊತ್ತು ಎನ್ನುವುದೇ ಇರುವುದಿಲ್ಲ. ಯಾವುದಕ್ಕೂ ಹಣಕಾಸಿನ ಅಡಚಣೆ ಬಿಟ್ಟಿದ್ದೇ ಇಲ್ಲ. ಊರು ಕೇರಿಯವರು, ಹತ್ತಿರದ ನೆಂಟರಿಷ್ಟರು ಒಂದು ದಿನ ಒಂದೆಡೆ ಸೇರಿಕೊಳ್ಳಲು ಮಾನಸಿಕ ಉದ್ದೇಶ ಮತ್ತು ವೈಯುಕ್ತಿಕ ಅನುಕೂಲತೆಗಳು ಯಾರಿಗೂ ಇರುವುದಿಲ್ಲ. ಬದುಕಿನಲ್ಲಿ ಕೆಲವು ಕಜ್ಜಾಯಗಳನ್ನು ಮಾಡಲೂ ನಮಗೆ ಉದ್ದೇಶವಾಗುವುದಿಲ್ಲ. ಇದಕ್ಕೆ ಕೆಲವರಿಗೆ ಅನುಕೂಲತೆಯೂ ಇರುವುದಿಲ್ಲ.
ಮನುಷ್ಯನ ಈ ಎಲ್ಲಾ ಅಡಚಣೆಗಳನ್ನು ನಿವಾರಿಸಲಿಕ್ಕಾಗಿಯೇ ಹಬ್ಬಗಳು ಸಂಭ್ರಮಗಳಿಂದ ನಮ್ಮಲ್ಲಿ ಆಚರಿಸಲ್ಪಡುತ್ತವೆ. ವರುಷದಲ್ಲಿ ಇಂತಿಂಥ ಹಬ್ಬಗಳನ್ನು ಆಚರಿಸಲು ಇಂತಿಂಥಹುದೇ ಮಿತಿ [ ದಿನ ] ಎಂದು ಸಾಮಾಜಿಕವಾಗಿ ಮತ್ತು ಶಾಸ್ತ್ರೀಯವಾಗಿ ನಿಗದಿ ಮಾಡಿದ್ದರಿಂದ ಆ ದಿನದಂದು ನಮ್ಮ ಎಷ್ಟೇ ತೊಂದರೆ, ಅಡಚಣೆಗಳಿದ್ದರೂ ನಾವು ಬಿಡುವು ಮಾಡಿಕೊಳ್ಳುತ್ತೇವೆ. ಅದರ ವೆಚ್ಚಕ್ಕೆ ಹಣವನ್ನು ಹೊಂದಿಸಿಕೊಳ್ಳುತ್ತೇವೆ. ಸಾಲ ಮಾಡಿಯಾದರೂ ಹೊಂದಿಸಿಕೊಳ್ಳುತ್ತೇವೆ. ನಮ್ಮಲ್ಲಿ ಹೆಚ್ಚಿನ ಹಬ್ಬಗಳಿಗೆ ಇಂಥಹುದೇ ಕಜ್ಜಾಯ ಆಗಬೇಕೆಂದು ನಿಯಮ ಇದೆ. ಬೂರೆ ಹಬ್ಬಕ್ಕೆ, ಭೂಮಿ ಹುಣ್ಣಿಮೆ ಹಬ್ಬಕ್ಕೆ ಕೊಟ್ಟೆಕಡುಬು , ದೀಪಾವಳಿಗೆ ಹೋಳಿಗೆ , ಗಣೇಶ ಚತುರ್ತಿಗೆ ಕರಿಕಡುಬು, ಪಂಚಕಜ್ಜಾಯ, ಹೀಗೆ ಹೀಗೆ. ಆಯಾ ಹಬ್ಬದಂದು ಎಷ್ಟೇ ತೊಂದರೆ, ಯಾವುದೇ ತೊಂದರೆ ಇದ್ದರೂ ಅಂಥಹ ಕಜ್ಜಾಯ, ಅಪ್ಪಚ್ಚಿಯನ್ನು ಮಾಡಿಯೇ ಮುಗಿಸುತ್ತೇವೆ. ಆ ದಿನ ನೆರೆಹೊರೆಯವರೊಂದಿಗೆ ಸಂತೋಷ , ವಿನೋದಗಳಿಂದ ಕೂಡಿ ಆಡಿಕೊಂಡಿರುತ್ತೇವೆ. ನಮ್ಮ ಅಕ್ಕ ತಂಗಿಯರು ಹೆಣ್ಣುಮಕ್ಕಳನ್ನು ಅವರ ಬಳಗವನ್ನು, ಅಂದಿನ ಹಬ್ಬದ ಆಚರಣೆಯಲ್ಲಿ ಆತಂಕವಿದ್ದ ನಮ್ಮ ಪ್ರೇಮಿಕರನ್ನು ನಮ್ಮಲ್ಲಿಗೆ ಆಮಂತ್ರಿಸಿರುತ್ತೇವೆ.
ನಮ್ಮಲ್ಲಿ ಹಬ್ಬಗಳು ಎನ್ನುವ ಪರಿಕಲ್ಪನೆ ಇಲ್ಲದೆ ಇದ್ದಿದ್ದರೆ ನಮ್ಮ ಒತ್ತಡದ ಮತ್ತು ಹರಕತ್ತಿನ ಜೀವನದಲ್ಲಿ ಇಂತಹ ಸಂಭ್ರಮಗಳು ಸಾಧ್ಯವಾಗುತ್ತಿರಲಿಲ್ಲ. ಅದರ ಪಾರಮಾರ್ಥಿಕ ಇಂಗಿತಗಳು ಏನೇ ಇದ್ದರೂ ಅವುಗಳಿಂದ ಪರಮ ಸಂತೋಷದ ಇಂಬು ದೊರಕುವುದು ಸುಳ್ಳಲ್ಲ.

ತಾರೀಖು : 30 - 10 - 2016.

No comments:

Post a Comment

Note: only a member of this blog may post a comment.