Monday 6 November 2017

ಯೋಗ ಪಟು ಕುಮಾರ ಚಂದನ್ K. R


ಕುಮಾರ ಚಂದನ್ K. R. ನಮ್ಮ ಊರಿನ ಯೋಗ ಚೆನ್ನಿಗ, ಕೀರ್ತಿಮುಕುಟ , 16 ವರ್ಷದ, PUC ಅಭ್ಯಾಸ ಮಾಡುತ್ತಿರುವ ಬಾಲಕ. ನಮ್ಮ ಊರಿನ ಮತ್ತೋರ್ವ ಯೋಗ ಪಟು ಸಂಧ್ಯಾ ಎಂ.ಎಸ್. ಇವಳ ಯೋಗಾಸನ ಹವ್ಯಾಸದ ಜೊತೆಗಾರ. ಶ್ರೀ ರಾಘವೇಂದ್ರ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಇವರ ಹೆಮ್ಮೆಯ ಪುತ್ರ.

ರಾಜ್ಯದ ಮತ್ತು ಅಂತರ ರಾಜ್ಯದ ಹಲವಾರು ಕಡೆಗಳಲ್ಲಿ ಯೋಗದ ವಿವಿಧ ಪ್ರಬೇಧಗಳನ್ನು ಪ್ರದರ್ಶಿಸಿ ಸೈ ಎನ್ನಿಸಿಕೊಂಡಿದ್ದಾನೆ. 2016 ಸಾಲಿನಲ್ಲಿ ಅಂದರೆ ಕಳೆದ ವರ್ಷ S G F I [ School Game Federation of India ] ಎನ್ನುವ ರಾಷ್ಟ್ರ ಮಟ್ಟದ ಸಂಸ್ಥೆಯು ನಡೆಸಿದ ಮತ್ತು Yoga Federation of India ಎನ್ನುವ ಮತ್ತೊಂದು ರಾಷ್ಟ್ರ ಮಟ್ಟದ ಸಂಸ್ಥೆಯು ನಡೆಸಿದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಿ ಅವಾರ್ಡನ್ನು ಪಡೆದಿರುತ್ತಾನೆ.

ಯೋಗಾಸನದಲ್ಲಿ ಹಲವಾರು ಬಗೆಗಳಿವೆ. ಎಲ್ಲವೂ ದಿನ ನಿತ್ಯ ಅಭ್ಯಾಸ ಮತ್ತು ಸಾಧನೆಯಿಂದಲೇ ದಕ್ಕಬೇಕಾದದ್ದು. ಇನ್ನು ಕೆಲವೊಂದು ಬಹಳ ಕಷ್ಟದ್ದು -- ಸಾಮಾನ್ಯ ಸಾಧನೆಗೆ ದಕ್ಕದ್ದಲ್ಲ. ಶರೀರವನ್ನು ಸಮತೋಲನದಲ್ಲಿಡಬೇಕಾದದ್ದೂ ಒಂದು ಇದರ ಸರ್ಕಸ್. ಮುಕ್ತಹಸ್ತ, ವೃಶ್ಚಿಕ , ಮುಕ್ತಹಸ್ತ-ಪದ್ಮ-ವೃಶ್ಚಿಕ , ಮುಕ್ತಹಸ್ತ- ದ್ವಿಪಾದ- ವಾಮದೇವ, ಮುಕ್ತಹಸ್ತ- ದೀಪ-ವೃಶ್ಚಿಕ, [ ಇವು ಮೂರು ಆಸನಗಳ ಸಂಯೋಗ ], ತ್ರಿಪುರಾಸನ, ತ್ರಿವಿಕ್ರಮಾಸನ, ನಟರಾಜ ಆಸನ, ಪಕ್ಷಾಸನ, ಗಂಡಬೇರುಂಡ, ಶಕುನ ಹೀಗೆ ಯೋಗದ ಹಲವಾರು ಆಸನಗಳಲ್ಲಿ ಪ್ರಸಿದ್ಧನಾಗಿದ್ದಾನೆ. ಈ ಪ್ರತಿಯೊಂದು ಆಸನಕ್ಕೂ ಅದರದ್ದೇ ಆದ ಅರ್ಥ, ಮನುಷ್ಯನ ಮಾನಸಿಕ ಮತ್ತು ದೈಹಿಕ ಚಿಕಿತ್ಸೆಯ ಉಪಯೋಗ , ಸೂಕ್ಷ್ಮ ತಂತ್ರಗಳು ಇವೆ.

'Yoga Federation of India '  ಸಂಸ್ಥೆಯವರು ತಾರೀಖು 24 -11 -2017 ರಂದು  ದೆಹಲಿಯಲ್ಲಿ ನಡೆಸಿದ  2017 ನೇ ಸಾಲಿನ  ಯೋಗಾಸನಾ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾನೆ. ಅದರಲ್ಲಿ ವಿಜೇತನಾಗಿ ಅಂತರ ರಾಷ್ಟ್ರದ ಯೋಗಾಸನಾ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಈ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲೂ ವಿಜೇತನಾಗಿ ಏಸಿಯನ್  ಯೋಗ ಫೆಡರೇಶನ್ ( ASIAN  YOGA  FEDERATION ) ನಡೆಸುವ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಇದರಲ್ಲಿ ವಿಜೇತನಾದರೆ  ಎಸಿಯನ್ ಕಪ್ ದೊರೆಯುತ್ತದೆ ಅನ್ನುವುದು ವಿಶೇಷ ಸಂಗತಿ.

S G F I ಸಂಸ್ಥೆಯು  ತಾರೀಖು 11 - 11  - 2017  ರಂದು  ಛತ್ತೀಸಗಡದಲ್ಲಿ ನಡೆಸಿದ  2017  ಸಾಲಿನ  ರಾಷ್ಟ್ರ ಮಟ್ಟದ ಯೋಗಾಸನಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುತ್ತಾನೆ. ಅಲ್ಲದೆ  ಅದರಲ್ಲಿಯೂ ವಿಜೇತನಾಗಿರುತ್ತಾನೆ ಎನ್ನುವುದು ಮತ್ತೊಂದು ಹೆಮ್ಮೆಯ ಸಂಗತಿ.

ಕಳೆದ ಜೂನ್ ತಿಂಗಳಿನಲ್ಲಿ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯದ ಆಯುಶ್ ಇಲಾಖೆಯವರು ಮೈಸೂರಿನಲ್ಲಿ ನಡೆಸಿದ 2017 -- 18 ಸಾಲಿನ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾನೆ.
ಹೊರ ರಾಜ್ಯಗಳಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಎರಡು ಸಲ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾನೆ.

ಕಳೆದ ವರ್ಷ ಅಂತರ ರಾಷ್ಟ್ರ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದರೂ 10 ನೆ ತರಗತಿಯ ಅಭ್ಯಾಸದ ಒತ್ತಡ ಇದ್ದ ಕಾರಣ ಆ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ಎಲ್ಲಾ ಸ್ಪರ್ಧೆಗಳಲ್ಲಿ ಆತ ಭಾಗವಸಿದ್ದುದರ ವಿಶೇಷವೆಂದರೆ ಆ ಸ್ಪರ್ಧೆ ಕೇವಲ 14 ವರುಷದಿಂದ 17 ವರ್ಷದ ಮಕ್ಕಳಿಗೆ ಮಾತ್ರ ಎನ್ನುವುದು. ಈ ಚಿಕ್ಕ ವಯಸ್ಸಿನಲ್ಲಿ ಇಂಥಹ ಸಾಧನೆ ಅವನದು ಎನ್ನುವುದು ಪ್ರಶಂಸನಾರ್ಹ.

ಯೋಗಾಸನದ ಪ್ರತಿಭೆಯನ್ನು ಪರಿಗಣಿಸಿ ಅವನನ್ನು ಅನೇಕ ಕಡೆ ಸನ್ಮಾನಿಸಲಾಗಿದೆ..
ಈ ತನಕ ಚಿನ್ನದ ಪದಕ 16, ಬೆಳ್ಳಿಯ ಪದಕ 6, ಕಂಚಿನ ಪದಕ 2 ಸೇರಿ ಒಟ್ಟು 24 ವಿಶೇಷ ಪದಕಗಳು, ನೂರಾರು ಪ್ರಶಸ್ತಿ ಪತ್ರಗಳನ್ನು ಕುಮಾರ ಚಂದನ್ ಯೋಗಾಸನದ ಹೆಗ್ಗಳಿಕೆಯಲ್ಲಿ ಬಾಚಿಕೊಂಡಿದ್ದಾನೆ. ಪಡೆದ ಸ್ಮರಣಿಕೆಗಳು ನೂರಾರು, ಸನ್ಮಾನ ಪತ್ರಗಳು ಹಲವಾರು. ಇವೆಲ್ಲದರ ಜೊತೆಗೆ 'ಯೋಗ ರತ್ನ' ಎನ್ನುವ ಬಿರುದು ಕೂಡಾ ಅವನ ಸಾಹಸಕ್ಕೆ ಸಂದಿದೆ.

ಇಂದು ಸಾಗರದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಗರ ಕನ್ನಡ ಸಾಹಿತ್ಯ ಪರಿಷತ್ತಿನವರು ಮತ್ತು ನಮ್ಮ ಊರಿನಲ್ಲಿ ತ್ರಿವೇಣಿ ಮಹಿಳಾ ಮಂಡಳಿಯವರು ಕುಮಾರಿ ಸಂಧ್ಯಾ ಮತ್ತು ಕುಮಾರ ಚಂದನ್ ಅವರನ್ನು ಯೋಗಾಸನ ಪ್ರತಿಭೆಗಳೆಂದು ಗುರುತಿಸಿ ಸನ್ಮಾನಿಸಿದ್ದಾರೆ.


ಯೋಗಾಸನದಲ್ಲಿ ಇಷ್ಟೆಲ್ಲಾ ಹೆಗ್ಗಳಿಕೆಯನ್ನು ಹೊಂದಿದ ಕುಮಾರ ಚಂದನ್ K. R. ನಮ್ಮ ಊರಿನ ಮಗ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.


ತಾರೀಖು : 12 - 05 - 2017.
ಕನ್ನಡ ರಾಜ್ಯೋತ್ಸವದ ದಿನ.






No comments:

Post a Comment

Note: only a member of this blog may post a comment.