Monday 17 November 2014

ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು

~~~~~~ ಎಂ.ಗಣಪತಿ. ಕಾನುಗೋಡು
ಇಂದಿನ ತೀವ್ರಗಾಮಿ ಚಲನೆಯ ಸಮಾಜದಲ್ಲಿ ಯುವತಿಯರು ಯುವಕರಿಗೆ ಸರಿಸಮನಾಗಿ ವಿದ್ಯಾರ್ಹತೆ, ಸ್ವಂತ ದುಡಿದು ಹಣ ಗಳಿಸಬೇಕೆನ್ನುವ ಹಪಾಹಪಿ, ಗಂಡಿನ ಆಧಾರವಿಲ್ಲದೆ ಒಬ್ಬಂಟಿಯಾಗಿ ಮುನ್ನುಗ್ಗುವ ದಾಷ್ಟ್ಯ ...... ಈ ಎಲ್ಲವನ್ನು ಹೊಂದಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಿನ ಭಾಗದ ಯುವತಿಯರಿಗೆ ಜೀವನೋಪಾಯಕ್ಕಾಗಿ ಹಿಂದಿನಂತೆ ಪುರುಷನನ್ನು ಅವಲಂಬಿಸುವ ಅಗತ್ಯವಿಲ್ಲ. ಇದಕ್ಕೆಲ್ಲ ಕಾರಣ ಅವರು ಹೊಂದಿರುವ ಆರ್ಥಿಕ ಸ್ವಾವಲಂಬನೆ.
ಇಲ್ಲಿ ಒಂದು ಪ್ರಶ್ನೆ ಇದೆ. ಪುರುಷನಿಗೆ ಆಗಲಿ ಮಹಿಳೆಗೆ ಆಗಲಿ, ಹಣವೊಂದೇ ಜೀವನದ ಏಕಮೇವ ಪೂರೈಕೆಯೇ? ಅಲ್ಲ. ಬದುಕಿನ ಅನೇಕ " ಬೇಕು " ಗಳಲ್ಲಿ ಹಣವು ಒಂದು ಅಷ್ಟೆ. ಆದರೆ ಹಣವೊಂದರಿಂದಲೇ ಬದುಕಿನ ಎಲ್ಲ ಬಯಕೆಗಳನ್ನು ನಿಭಾಯಿಸಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯನ ಅನೇಕ " ಬೇಕು " [ Wants ] ಗಳಲ್ಲಿ ಒಂದು ಹೆಣ್ಣಿಗೆ ಒಂದು ಗಂಡು, ಒಂದು ಗಂಡಿಗೆ ಒಂದು ಹೆಣ್ಣು ಬೇಕು ಎನ್ನುವುದು ಪ್ರಮುಖ. ಈ 'ಬೇಕು' ಅನೇಕ ಕಾರಣಗಳಿಂದ ಒಂದು ಅಗತ್ಯ. ಇದರಿಂದಾಗಿಯೇ ' ವಿವಾಹದ ಪರಿಕಲ್ಪನೆ ' ಹುಟ್ಟಿಕೊಂಡಿದ್ದು.
ಇವತ್ತಿನ ದುಡಿಮೆಯ ಸುಪತ್ತಿಗೆಯಲ್ಲಿ ಆ ಕ್ಸೇತ್ರದಲ್ಲಿರುವ ಎಲ್ಲ ಯುವಜನರಿಗೂ ಹಣದ ಜಲದ ಬುಗ್ಗೆ [ Foutain ] ಅವರ ಅಂಗೈಯಲ್ಲೇ ಇದೆ. ಈ ಅಮಲಿನಲ್ಲಿ ದಾಂಪತ್ಯದ ಬಾಂಧವ್ಯ ಬಹುತೇಕ ಯುವಜನರಲ್ಲಿ ಶಿಥಿಲವಾಗುತ್ತಿದೆ. ಯಾರಿಗೆ ಯಾರೂ ಕೇರ್ ಮಾಡುವ ಸ್ಥಿತಿಯಲ್ಲಿಲ್ಲ. ಏಕೆಂದರೆ ತನ್ನ ಹೊಟ್ಟೆಗೆ ಯಾರೂ ಏನು ದುಡಿದು ಹಾಕುವ ಅನಿವಾರ್ಯತೆ ಇಲ್ಲ. ಹಣದ ಎದುರು ಬದುಕಿನ ಉಳಿದ ಎಲ್ಲಾ 'ಬೇಕು 'ಗಳು ಅವರಿಗೆ ಈಗ ಗೋಚರಿಸುವುದಿಲ್ಲ.
ಇದರ ಪರಿಣಾಮ ವಿಚ್ಚೇದನ . ನಂತರ ತನ್ನ ಮಾತನ್ನೇ ಕೇಳುವಂಥಹ ಸಂಗಾತಿಗಾಗಿ ಶೋಧನೆ, ಅಂಥಹವರು ಸಿಕ್ಕಿದರೆ ತನ್ನ ಕರಾರುಗಳನ್ನು ಮುಂಚೆಯೇ ಮಂಡಿಸಿ ಅದು ಓ. ಕೆ . ಆದರೆ ನಂತರ ಮದುವೆ. ಆ ಮದುವೆಯಿಂದಾದ ದಾಂಪತ್ಯವೂ ಸಾಪ್ರದಾಯಿಕವಾದುದಲ್ಲ. ಅದು " Get together " ಮಾದರಿ. ಇದೇ ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು.
ಒಮ್ಮೆ ವಿಚ್ಚೇದನವಾಗದಿದ್ದರೂ ಬಹು ದಂಪತಿಗಳಲ್ಲಿ ಸಾಮರಸ್ಯವಿರುವುದಿಲ್ಲ. ಅದು ಶಿಥಿಲ ದಾಂಪತ್ಯ. ಪರಸ್ಪರ ಭಿನ್ನಾಭಿಪ್ರಾಯ, ಬದ್ಧತೆಯ ಕೊರತೆ, ಯಾರಿಗೆ ಯಾರೂ ಸೋಲುವುದಿಲ್ಲ. ಪರಸ್ಪರರ ಮೇಲೆ ಮಕ್ಕಳನ್ನೇ ಅಸ್ತ್ರವನ್ನಾಗಿ ಪ್ರಯೋಗಿಸುವುದು, ಮಕ್ಕಳಲ್ಲಿಯೂ ತಂದೆ ಅಥವಾ ತಾಯಿಯ ಮೇಲೆ ದ್ವೇಷ ಹುಟ್ಟುವಂತೆ ಪರಸ್ಪರರು ಮಾಡುವುದು, ಇದರಿಂದಾಗಿ ಮಕ್ಕಳ ಭವಿಷ್ಯ ಅಧೋಗತಿಗೆ ಹೋಗುವುದು ಮುಂತಾದುವು ಇಂಥಹ ಶಿಥಿಲ ದಾಂಪತ್ಯದಲ್ಲಿ ಕಂಡು ಬರುತ್ತವೆ.
ಗಂಡು - ಹೆಣ್ಣು ಜೊತೆಗಿರಬೇಕು ಎಂದರೆ ಮದುವೇನೆ ಆಗಬೇಕಾ ?. ಏನೂ ಮಾಡ್ಕೊಳ್ಳದೆ ಸುಮ್ಮನೆ ಕೂಡಿಕೊಂಡಿದ್ದರೆ ಆಗಲ್ವಾ ?. ಗಂಡು ಮತ್ತು ಹೆಣ್ಣು ಸರಿಸಮಾನವಾಗಿ ಕೈತುಂಬಾ ಹಣವನ್ನು ಕಿವುಚುವ ಇಂದಿನ ಕಾಲದಲ್ಲಿ, ಎಲ್ಲರೂ ಅಲ್ಲದಿದ್ದರೂ, ಬಹಳ ಹೆಣ್ಣು - ಗಂಡುಗಳು ತಮ್ಮಲ್ಲಿಯೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳು ಇವು.
ಈ ಗೋಜಲಿನಲ್ಲಿ ವರ್ಷಗಳು ಉರುಳುತ್ತವೆ. ಯೌವನವೂ ಅದರ ಜೊತೆಗೆ ಸಾಗುತ್ತಿರುತ್ತದೆ. ಮುಪ್ಪು ಹತ್ತಿರ ಬಂದಿರುತ್ತದೆ. ಹುಳಿ ಮುಪ್ಪಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮರವಂತೂ ಮುಪ್ಪಾಗುತ್ತದೆ. ಯುವಕ ತನ್ನ ಹಳೆತನಕ್ಕೆ ತಲುಪಿ ಚರ್ಮ ಸುಕ್ಕುಗಟ್ಟುತ್ತಿರುವುದನ್ನು ಅನುಭವಿಸುತ್ತಾನೆ. ಯುವತಿಗೆ ಮುಟ್ಟು ಸಾವರಿಸುವ ಹಂತ ಬಂದಿರುತ್ತದೆ.
ಈ ಹಂತದಲ್ಲಿ ಬದುಕಿನ ವಾಸ್ತವಾಂಶ ಅರಿವಿಗೆ ಬರುತ್ತದೆ. ಈ ಸಮಯದಲ್ಲಿ ಮನುಷ್ಯನ ಬಯಕೆಗಳನ್ನು ನಿಭಾಯಿಸಿಕೊಳ್ಳಲು ' ಹಣ ' ವೊಂದೇ ಸಾಲದು. ಜೀವನದಲ್ಲಿ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಬೇಕು. ಯಾರೂ ಪರಿಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ಅದರ ಪೂರೈಕೆಗಾಗಿ ಮತ್ತೊಬ್ಬರನ್ನು ಅವಲಂಬಿಸುವುದು ಅಗತ್ಯ. ಅದರಂತೆಯೇ ಕೌಟುಂಬಿಕ ಜೀವನದಲ್ಲಿ ಒಂದು ಹೆಣ್ಣಿಗೆ ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಭೌತಿಕ ಅವಲಂಬನೆ ಎನ್ನುವುದು ಒಂದು ಅನಿವಾರ್ಯ ಸಂಗತಿ. ಸರಿಯಾದ ದಾಂಪತ್ಯವನ್ನು ರೂಪಿಸಿಕೊಳ್ಳಬೇಕು. ಬದ್ಧತೆ, ಒಡಂಬಡಿಕೆ, ನೆಮ್ಮದಿ, ಸುಗಮ ಸಾಂಗತ್ಯ ಇರಬೇಕು ಎಂದು ಅರಿವಾಗುವುದು. ಈ ಸೌಹಾರ್ದತೆಯಲ್ಲಿ ಸಂಸಾರ, ಮಕ್ಕಳು .... ಇವನ್ನೆಲ್ಲ ರೂಪಿಸಿಕೊಳ್ಳಬೇಕಾಗಿತ್ತು, ತಾವು ತಮ್ಮ ದಾಂಪತ್ಯದ ಪ್ರಥಮದಲ್ಲಿ ಮಕ್ಕಳನ್ನು ಹೊಂದಿ ನಾವು ಪೋಷಿಸಬೇಕಾಗಿತ್ತು. ತಮ್ಮ ಸುಗಮ ದಾಂಪತ್ಯದ ಮಾತ್ರದಿಂದ ಮಾಡಿದ ಪೋಷಣೆಯಿಂದ ಬೆಳೆದ ಮಕ್ಕಳು ಸಮರ್ಥರಾಗಿ ಇಳಿವಯಸ್ಸಿನಲ್ಲಿ ತಮಗೆ ಪೋಷಕರಾಗಲು ಸಾಧ್ಯವಾಗಿತ್ತು ಎಂಬ ಪ್ರಜ್ಞೆ ಕಾಲ ಮೀರಿದ ಮೇಲೆ ಅವರಿಗೆ ಬರುತ್ತದೆ. ಅಲ್ಲಿಯವರೆಗೂ ಯೌವನದ ಅವಧಿ ಅಲ್ಪ, ಅದು ಬೇಗ ಕಳೆದುಹೋಗುತ್ತದೆ, ಯಾವುದಕ್ಕೂ ಕಾಲವನ್ನೇ ಅನುಸರಿಸಿಕೊಂಡು ಜೀವನದ ಮಿತ ವಿಸ್ತಾರವನ್ನು ಅರಿತು ಮುನ್ನಡೆಯಬೇಕು ಎಂಬ ಸತ್ಯವನ್ನು ಗಮನಿಸುವ ಗೋಜಿಗೆ ಅವರು ಹೋಗಿರುವುದಿಲ್ಲ. ಈ ಸತ್ಯಗಳನ್ನು ತಿಳಿಯುವ ಹೊತ್ತಿಗೆ ಅವರಿಗೆ ಹಲ್ಲು ಬೀಳುವ ಕಾಲ ಬಂದಿರುತ್ತದೆ.
ಆದ್ದರಿಂದ " ಮದುವೆ " ಎನ್ನುವುದು ಹೆಣ್ಣು ಮತ್ತು ಗಂಡು ಈ ಎರಡು ಜೀವಗಳನ್ನು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಹೃದಯ ಪೂರ್ವಕವಾಗಿ ಬೆಸೆಯುವಂಥಹ ಒಂದು ವಿಶೇಷ ಘಟನೆ. ಇದು ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಪರಸ್ಪರ ಪರಿಪೂರ್ಣ ಸಮರ್ಪಣೆ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಬೇಕು. ಕೇವಲ "JUST GET TOGETHER " ಪದ್ಧತಿಯಲ್ಲಿ ಇದು ಸಾಧ್ಯವಾಗುವುದಿಲ್ಲ. ಸಾಂಪ್ರದಾಯಿಕ ಮದುವೆಯ ಮಹತ್ವ ಇರುವುದೇ ಇಲ್ಲಿ. ಅದನ್ನು ಹರಿದುಕೊಂಡು ಹದ್ದು ಮೀರಿದರೆ ಈಗಾಗಲೇ ಹೇಳಿದ ಗೊಂದಲಗಳನ್ನು ಅನುಭವಿಸಬೇಕಾಗುತ್ತದೆ.
ಮಾಡಿಕೊಂಡ ಮದುವೆಯನ್ನು ಮುರಿದುಕೊಂಡು ಇದಕ್ಕಿಂತ ಒಳ್ಳೆಯ ಸಂಗಾತಿಯನ್ನು ಪಡೆಯುತ್ತೇನೆ ಎಂದು ಕನವರಿಸಿ ಮತ್ತೊಬ್ಬನನ್ನು \ ಮತ್ತೊಬ್ಬಳನ್ನು ಕಟ್ಟಿಕೊಂಡರೆ ಸಾಂಗತ್ಯವನ್ನು ಪ್ರಯತ್ನ ಪೂರ್ವಕವಾಗಿ ನಿರ್ಮಿಸಿಕೊಳ್ಳದಿದ್ದರೆ ಅಲ್ಲಿಯೂ ದುರಂತವೇ.
ಇದ್ದಲ್ಲಿಯೇ ಕಾಡಿ ಕೂಡಿಕೊಂಡು ಹೋಗದವರು ಎಲ್ಲಿಯೂ ಹೊಂದಿಕೊಳ್ಳಲು ಕಷ್ಟಸಾಧ್ಯ. ಏಕೆಂದರೆ ಮನುಷ್ಯನ ಮನಸ್ಸು ಮತ್ತು ಸ್ವಭಾವ ಹೇಗಿರುತ್ತದೆಯೆಂದರೆ ಮತ್ತೊಬ್ಬನಿಗೆ ನಾವು ಹೊಂದಿಕೊಂಡು ಮುಂದೆ ಸಾಗಬೇಕೇ ವಿನಃ ಮತ್ತೊಬ್ಬನು ನಮಗೆ ಎಂದೂ, ಎಲ್ಲಿಯೂ, ಹೇಗೂ ಹೊಂದಿಕೊಳ್ಳುವುದಿಲ್ಲ.

No comments:

Post a Comment

Note: only a member of this blog may post a comment.