Friday 4 September 2015

$$$$$$ ಕಲಿಯುಗದ ಇಚ್ಚಾಮರಣಿ $$$$$$


~~~~ ಎಂ. ಗಣಪತಿ. ಕಾನುಗೋಡು.

ಹೌದು, ಇಲ್ಲೊಬ್ಬ ಇಚ್ಚಾಮರಣಿ ಇದ್ದಾರೆ. ಅವರೇ ದಿವಂಗತ ಶ್ರೀ ನಾರಾಯಣಪ್ಪ ಶಾನುಭೋಗ್. ಸಾಗರ ತಾಲ್ಲೂಕಿನ ನಂದಿತಳೆ ಹತ್ತಿರದ ಹೊಂಗೋಡು ಇವರ ಊರು. ಅವರ ಮರಣ ತಾರೀಖು 6 - 8 - 2015 . ವಯಸ್ಸು 94 ವರ್ಷ. ಅವರ ಹೆಂಡತಿ [ 84 ವರ್ಷ ]. ಮರಣ ಹೊಂದಿದ ಹನ್ನರಡನೆಯ ದಿನ ರಾತ್ರಿಯೇ ಇವರೂ ಮರಣ ಹೊಂದಿದರು.
ಶ್ರೀ ನಾರಾಯಣಪ್ಪನವರು ಸುಮಾರು ಹದಿನೈದು ವರ್ಷಗಳಿಂದ ತನ್ನ ಹೆಂಡತಿ ಸತ್ತ ಸ್ವಲ್ಪ ಕಾಲದಲ್ಲಿಯೇ ತಾನೂ ಮರಣ ಹೊಂದುತ್ತೇನೆ ಎಂದು ತಮ್ಮ ಮಕ್ಕಳೆದುರು ಹೇಳುತಿದ್ದರು. ಅವರದು ತುಂಬು ಕುಟುಂಬ. ಸಮಾಜದಲ್ಲಿ ಗೌರವಸ್ಥರು. ಸುಖೀ ಸಂಸಾರದವರು. ತೊಂಬತ್ತನಾಲ್ಕು ವಯಸ್ಸಿನವರೆಗೆ ತಮ್ಮ ಎಂಬತ್ತನಾಲ್ಕು ವಯಸ್ಸಿನ ಹೆಂಡತಿಯ ಜೊತೆಗೆ ತಮ್ಮ ಅವಿಭಕ್ತ ಕುಟುಂಬದಲ್ಲಿ ಬಾಳಿದವರು. ತಮ್ಮ ಮಕ್ಕಳ ನಡುವೆ ನಾಳೆ ಒಡುಕು ಬಾರದಿರಲಿ ಎಂದು ಕುಟುಂಬದೊಳಗಿನ ಎಲ್ಲಾ ವಿಷಯಗಳಲ್ಲೂ ಮುಂಜಾಗರೂಕತೆಯಿಂದ ತಕ್ಕ ವ್ಯವಸ್ಥೆ ಮಾಡಿದವರು.
ಕಳೆದ ಮೂರೂವರೆ ತಿಂಗಳಿನಿಂದ ಅವರ ಪತ್ನಿಗೆ ಆರೋಗ್ಯ ಹದಗೆಟ್ಟಿತು. ಇನ್ನೇನು ತನ್ನ ಹೆಂಡತಿ ಬದುಕಿ ಉಳಿಯುವುದಿಲ್ಲ ಎಂದು ಅವರಿಗೆ ಮನವರಿಕೆಯಾದಾಗ ಅವಳು ಸತ್ತ ಕೂಡಲೇ ತಾನೂ ಸಾಯುತ್ತೇನೆ, ಆದರೆ ಅವಳ ದಿನಕರ್ಮಕ್ಕೆ ತೊಂದರೆ ಕೊಡುವುದಿಲ್ಲ, ಅವುಗಳನ್ನು ಪೂರೈಸಿಕೊಂಡೇ ಹೋಗುತ್ತೇನೆ ಎಂದು ತಮ್ಮ ಮಕ್ಕಳೆಲ್ಲರೆದುರಿಗೆ ಹೇಳಿದರು. 
ಸುಮಾರು ಒಂದೂವರೆ ತಿಂಗಳ ಹಿಂದೆ ಅವರ ಹೆಂಡತಿ ಕಾಯಿಲೆಯಿಂದ ತೀರಿಕೊಂಡರು. ಆದರೆ ನಾರಾಯಣಪ್ಪನವರು ಘಟ್ಟಿಯಾಗಿಯೇ ಇದ್ದರು. ಅವರ ಅರೋಗ್ಯ ಸ್ವಲ್ಪವೂ ಕೆಟ್ಟಿರಲಿಲ್ಲ. ಹಾಗೆಂದು ತನ್ನ ಹೆಂಡತಿ ತೀರಿಹೋದಳೆಂದು ಅವರು ಬಹಿರಂಗವಾಗಿ ಅಳುಕಲೂ ಇಲ್ಲ.
ಪತ್ನಿಯ ಕರ್ಮಾಚರಣೆಯನ್ನು ತಾನೇ ಮುಂದೆ ನಿಂತು ಗಂಡುಮಕ್ಕಳಿಂದ ಶಾಸ್ತ್ರಬದ್ಧವಾಗಿಯೇ ನಡೆಸಿದರು. ಈ ಸೂತಕದ ದಿನಗಳಲ್ಲಿಯೇ ಮಧ್ಯೆ ಒಂದು ದಿನ ತನ್ನ ಮಕ್ಕಳನ್ನು ಮತ್ತು ಪಕ್ಕದ ಮನೆಯಲ್ಲಿರುವ ತನ್ನ ತಮ್ಮನ ಮಕ್ಕಳನ್ನು ತಮ್ಮ ಮನೆಯಲ್ಲಿ ಒಂದೆಡೆ ಕರೆದು ಸೇರಿಸಿದರು. ತಾನು ತನ್ನ ಪತ್ನಿಯ ಹನ್ನೆರಡು ಮುಗಿಸಿಕೊಂಡು ಸಾಯುತ್ತೇನೆ, ನೀವು ಯಾರೂ ದುಃಖಿಸಬಾರದು, ನಾನು ಸತ್ತಾಗ ಮನೆಯ ಇಂತಹ ಜಾಗದಲ್ಲಿ, ಈ ಕ್ರಮದಲ್ಲಿಯೇ ಭೂಷಣಕ್ಕೆ ತನ್ನ ಶವವನ್ನು ಹಾಕಬೇಕು, ತನ್ನ ಮುಂದಿನ ಕರ್ಮಾಂಗವನ್ನು ಹೀಗೆ ಹೀಗೆ ಮಾಡಬೇಕು ಎಂದು ಹೇಳಿದರು. ತನ್ನ ತಮ್ಮನ ಮಕ್ಕಳು ಮತ್ತು ತನ್ನ ಮಕ್ಕಳೊಂದಿಗೆ ' ನೀವು ಎಲ್ಲರೂ ಹಿತವಾಗಿರಬೇಕು, ಯಾವಾಗಲೂ ನಡುವೆ ಮನಸ್ತಾಪವನ್ನು ತಂದುಕೊಳ್ಳದೆ ಒಗ್ಗಟ್ಟಿನಿಂದ ಇರಬೇಕು, ಎಲ್ಲರೂ ಚೆನ್ನಾಗಿರಿ ಎಂದು ತಿಳಿವಳಿಕೆ ಹೇಳಿದರು.
ಹೆಂಡತಿಯ ಮರಣ ಕರ್ಮಾಚರಣೆಯ ಹನ್ನೊಂದನೇ ದಿನ ಆರಾಮವಾಗಿ ತಾವು ಜನಿವಾರ ಹಾಕಿಕೊಂಡು ಸೂತಕ ತೊಳೆದುಕೊಂಡಿದ್ದರು. ಚಟುವಟಿಕೆಯಿಂದ ಓಡಾಡಿಕೊಂಡು ಊಟ ಉಪಚಾರ ಮಾಡಿಕೊಂಡು ಎಂದಿನಂತೆ ಲವಲವಿಕೆಯಿಂದ ಇದ್ದರು. 
ಮರುದಿನ ಪತ್ನಿಯ ಮರಣದ ಹನ್ನೆರಡನೆಯ ದಿನ. ಅಂದು ಬೆಳಿಗ್ಯೆ ಕಷಾಯವನ್ನು ಮಾತ್ರ ಕುಡಿದರು. ನಂತರ ನಾಷ್ಟ ಮಾಡಲಿಲ್ಲ. ತನಗೆ ಸ್ವಲ್ಪ ವಿಶ್ರಾಂತಿ ಬೇಕು ಮಲಗಿಕೊಂಡಿರುತ್ತೇನೆ ಎಂದು ಮಲಗಿಕೊಂಡರು. ಮಧ್ಯಾಹ್ನ ಎರಡು ಘಂಟೆಯವರೆಗೂ ಮಲಗಿದ್ದರು. ನಡುವೆ ಯಾರು ಎಷ್ಟೇ ಒತ್ತಾಯ ಮಾಡಿದರೂ ಹೊಟ್ಟೆಗೆ ಏನನ್ನೂ ತೆಗೆದುಕೊಳ್ಳಲಿಲ್ಲ. ಹನ್ನೆರಡನೆಯ ವಿಧಿಯನ್ನು ಒಳಗೆ ವೈದಿಕರು ಸಾಗಿಸುತ್ತಿದ್ದಾರೆ. ಎರಡು ಘಂಟೆಯ ಹೊತ್ತಿಗೆ ಅಲ್ಲಿದ್ದ ಯಾರನ್ನೋ ತಮ್ಮ ಬಳಿ ಕರೆದಿದ್ದಾರೆ. ಈಗ ಘಂಟೆ ಎಷ್ಟಾಯಿತು ಎಂದು ಕೇಳಿದರು. ಅವರು ಎರಡು ಘಂಟೆ ಎಂದರು. ಭಟ್ಟರಿಗೆ ಊಟವಾಯಿತೇ ಎಂದು ಮರುಪ್ರಶ್ನೆ ಹಾಕಿದರು. ಇಲ್ಲ ಎಂದು ಅವರೆಂದರು. ಪುನಃ ಕಣ್ಮುಚ್ಚಿ ಮಲಗಿದರು.
ಅಂದರೆ ನಮ್ಮ ಗ್ರಹಿಕೆ ಪ್ರಕಾರ ಅವರು ತಮ್ಮ ಸಾವಿಗಾಗಿ ತಮ್ಮ ಪತ್ನಿಯ ಮರಣದ ಹನ್ನೆರಡನೆಯ ದಿನದ ಕರ್ಮಾಚರಣೆಯು ಮುಗಿಯುವುದನ್ನೇ ನಿರೀಕ್ಷಿಸುತ್ತಿದ್ದಾರೆ ಎಂದರ್ಥ. ಕರ್ಮಾಚರಣೆಯು ಮುಗಿದು ದಾನಮಾನಗಳೆಲ್ಲಾ ಮುಗಿದು ವೈದಿಕರೆಲ್ಲಾ ಮನೆಗೆ ಹೋದದ್ದೂ ಆಯಿತು. ಅಲ್ಲಿಯವರೆಗೆ ತಿನ್ನಲಿಕ್ಕೆ, ಕುಡಿಯಲಿಕ್ಕೆ ಯಾರು ಎಷ್ಟೇ ಒತ್ತಾಯಿಸಿದರೂ ಅದನ್ನು ಮುಟ್ಟಲಿಲ್ಲ. ಪ್ರತಿಯಾಗಿ, ಶ್ರೀಧರಸ್ವಾಮಿಗಳು [ ಸಾಗರ ತಾಲ್ಲೂಕಿನ ವರದಪುರದ ಬ್ರಹ್ಮೀಭೂತ ಸಂತರು ] ತನ್ನ ಎದುರಿಗೆ ನಿಂತಿದ್ದಾರೆ, ತಾನು ಈಗ ಅತ್ಯಾನಂದದ ಸ್ಥಿತಿಯಲ್ಲಿದ್ದೇನೆ, ನನಗೆ ವೃಥಾ ತೊಂದರೆಯನ್ನು ಕೊಡಬೇಡಿ ಎಂದು ಹೇಳುತಿದ್ದರು. ಹಾಗೆಯೇ ಕಣ್ಮುಚ್ಚಿ ಮಲಗಿಬಿಡುತ್ತಿದ್ದರು.
ಸಂಜೆ ಐದು ಘಂಟೆಗೆ ಹಠಾತ್ತನೆ ಅವರಿಗೆ ಪ್ರಜ್ಞೆ ತಪ್ಪಿತು. ಸುತ್ತಲಿದ್ದವರು, ಮಕ್ಕಳು ಅವರನ್ನು ಕೂಡಲೇ ಅಲ್ಲಿಂದ 15 ಕಿ. ಮೀ.ದೂರದ ಸಾಗರದ ವೈದ್ಯರಲ್ಲಿ ಕರೆದೊಯ್ದರು. ವೈದ್ಯರು ಅರ್ಧ ತಾಸಿನ ತಮ್ಮ ಪ್ರಯತ್ನದ ನಂತರ ಕೈಚೆಲ್ಲಿದರು. ಯಾವುದಕ್ಕೂ ನಾರಾಯಣಪ್ಪನವರಿಗೆ ಎಚ್ಚರವೇ ಇರಲಿಲ್ಲ. ಒಂದು 
ವಿಸ್ಮಯ ಎಂದರೆ ಆಸ್ಪತ್ರೆಯಲ್ಲಿ ಈ ನಡುವೆ ಒಂದು ಸಾರಿ ಅವರು ' ನನಗೆ ಮನೆಯಲ್ಲೇ ಸಾಯಲು ಅವಕಾಶ ಮಾಡಿ ' ಎಂದುಬಿಟ್ಟರು. ಅದರ ಹಿಂದೂ, ಮುಂದೂ ಮಾತು ಇರಲಿಲ್ಲ. ಕೂಡಲೇ ಮನೆಗೆ ಅವರನ್ನು ಮನೆಗೆ ತರಲಾಯಿತು. ಮನೆಗೆ ಬಂದ ಕೆಲವೇ ಘಂಟೆಗಳಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು.
ತನ್ನ ಮಕ್ಕಳಿಗೆ ಮುಂಚೆಯೇ ತಿಳಿಸಿದಂತೆ, ತನ್ನ ಇಚ್ಚೆಯಂತೆ ತನ್ನ ಪತ್ನಿ ಮರಣ ಹೊಂದಿದ ಹನ್ನೆರಡನೆ ದಿನದ ವಿಧಿಗಳನ್ನು ಪೂರೈಸಿಕೊಂಡು ಶ್ರೀ ನಾರಾಯಣಪ್ಪ ಶ್ಯಾನುಭೋಗ್ ಇವರು ಮರಣ ಹೊಂದಿದರು. ದ್ವಾಪರಯುಗದ ಭೀಷ್ಮನ ಇಚ್ಚಾಮರಣವನ್ನು ನೆನಪಿಗೆ ತಂದುಕೊಟ್ಟ ಮಹಾನುಭಾವರು. ' ಕಲಿಯುಗದ ಇಚ್ಚಾಮರಣಿ ' ಎಂಬ ಕೀರ್ತಿಗೆ ಪಾತ್ರರಾದರು. ದಿವಂಗತರಿಗೆ ಸಾಷ್ಟಾಂಗ ನಮಸ್ಕಾರ.
ಮಾಹಿತಿಯ ಕೃಪೆ : ಶ್ರೀಮತಿ ಮಧುರಾ ಮತ್ತು ಶ್ರೀ ದೇವಪ್ಪ ಪಡವಗೋಡು. ಸಾಗರ ತಾಲ್ಲೂಕು. ಮೃತರ ಮಗಳು ಮತ್ತು ಅಳಿಯ.
ತಾರೀಖು : 3 - 9 - 2015

No comments:

Post a Comment

Note: only a member of this blog may post a comment.