Friday 4 September 2015

%&%&%& ನೀರಂಡೆ. ನೀ.... ರಂಡೆ %&%&%&


ನಾಗಮ್ಮ ಮತ್ತು ಹುಚ್ಚಮ್ಮ ಇಬ್ಬರೂ ಹಳ್ಳಿಯಲ್ಲಿ ಹಾಲು ಮಾರುವವರು. ಅಕ್ಕಪಕ್ಕದ ಹಳ್ಳಿಯವರು. ಬೇರೆ ಬೇರೆ ಊರಿಗೆ ಹೋಗಿ ದಿನನಿತ್ಯ ಬೆಳಿಗ್ಯೆ ಎಂಟು ಘಂಟೆಗೆ ಹಾಲು ಮಾರಲು ಹೊರಡುವವರು. ಇಬ್ಬರೂ ಸ್ನೇಹಿತೆಯರೇ. ಸಾಗುವಾಗ ನಮ್ಮೂರಿನ ಒಂದು ಜಾಗದಲ್ಲಿ ಸಂಧಿಸಿ ಸ್ವಲ್ಪ ಸುಖ - ಕಷ್ಟ ಮಾತನಾಡಿಕೊಂಡು ಮುಂದೆ ಸಾಗುವವರು.
ನಮ್ಮೂರು ಭತ್ತ ಬೆಳೆಯುವ ಪ್ರದೇಶ. ಪೈರು ತುಂಬಿ ಬೆಳೆದ ದಿನಗಳು. ಆ ಒಂದು ದಿನ ಎಂದಿನಂತೆ ಅದೇ ಜಾಗದಲ್ಲಿ ಅವರಿಬ್ಬರೂ ಸಂಧಿಸಿದರು. ನಾಗಮ್ಮ ಹುಚ್ಚಮ್ಮಳನ್ನು ಕಂಡವಳೇ ' ಅದೇನೆ ಹುಚ್ಚಿ, ಅದೆಂತ ಶಬ್ದ ಆಕೈತಲೇ 'ಎಂದು ಅವಳನ್ನು ಕೇಳಿದಳು.
' ನೀರಂಡೆ ' ಎಂದಳು ಹುಚ್ಚಮ್ಮ.
ನಾಗಮ್ಮನಿಗೆ ಸಿಟ್ಟು ನೆತ್ತಿಗೇರಿತು. ಏನೇ ..... ಸ್ವಲ್ಪ ಹಲ್ಲು ಹಿಡಿದು ಮಾತಾಡೆ. ಗಂಡ ಸತ್ತವಳು ನೀನು. ಸ್ವಕಾ ಏನೋ ಕೇಳಿದರೆ ನನಗೇ ರಂಡೆ ಹೇಳ್ತೀಯಾ ?. ನನ್ನ ಗಂಡ ಇನ್ನೂ ಬದುಕಿ ಐದಾನೆ ಕಣೇ. ನಾನಲ್ಲ. ನೀನು ರಂಡೆ. ಕುಟ್ಟಿಕಾಣಿಸಿಯೇ ಬಿಟ್ಟಳು ನಾಗಮ್ಮ.
ಇಬ್ಬರಿಗೂ ಹಾಲಿನ ಬಿಂದಿಗೆ ತಲೆಯ ಮೇಲೆಯೇ ಇದೆ. ಒಂದು ಬ್ಯಾಲನ್ಸ್ ನಿಂದಾಗಿ ಬಿಂದಿಗೆಯನ್ನು ಕೈಯಲ್ಲಿ ಹಿಡಿದುಕೊಳ್ಳದೆ ತಲೆಯ ಮೇಲೆ ಇಟ್ಟುಕೊಂಡು ಇಬ್ಬರೂ ಮತ್ತೊಬ್ಬರತ್ತ ಎರಡೂ ಕೈಗಳನ್ನು ಬೀಸಿಕೊಳ್ಳುತ್ತಾ ಟಗರು ಕಾಳಗಕ್ಕೆ ಶುರುವಿಟ್ಟುಕೊಂಡರು.
' ಹೌದೆ ನಾಗಿ ನನ್ನ ಗಂಡ ಸತ್ತು ಹೋಗವ್ನೆ.ಹಾಂಗೆ ಹೇಳಿ ನಾನು ಯಾರನ್ನು ಇಟ್ಟುಕೊಳ್ಳಕ್ಕೆ ಹೋಗ್ಲಿಲ್ಲ. ನೀನು ದೊಡ್ಡ ಗರತಿಯೇನೆ ?. ನಿಂದು ಊರ್ನಾಗೆಲ್ಲಾ ನಾರಿ [ ಗಬ್ಬು ] ಹೋಗೈತೆ. ನಾನಲ್ಲ. ನೀನು ರಂಡೆ. ಮುಚ್ಕ್ಯಾ ಸಾಕು '. ಹುಚ್ಚಮ್ಮನೂ ಬಿಡಲಿಲ್ಲ. ನಾಗಮ್ಮನಿಗೆ ಸರಿಯಾಗಿಯೇ ಕಾಸಿದಳು.
ನಾನಲ್ಲ ಕಣೆ ನೀನು ರಂಡೆ. --- ನಾಗಮ್ಮ.
ಯಾವಳೇ ನೀನು, ನೀನು ದೊಡ್ಡ ಶುಭಗ್ಯನೆ ?. ನೀನು ರಂಡೆ. --- ಹುಚ್ಚಮ್ಮ.
ಜಗಳ ತಾರಕ್ಕೇರಿ ಹೊಡೆದಾಟದವರೆಗೂ ಹೋದದ್ದು ಇಡೀ ಊರಿಗೆ ತಿಳಿಯಿತು. ಗ್ರಾಮದ ಹಿರಿಯರೆಲ್ಲಾ ಅಲ್ಲಿಗೆ ಬಂದರು. ಇಬ್ಬರನ್ನೂ ಸಮಾಧಾನಪಡಿಸಿ ಮೊದಲಿನಿಂದ ವಿಷಯವೇನೆಂದು ತಿಳಿದುಕೊಂಡರು. ಇಬ್ಬರ ಹೇಳಿಕೆಯೂ ತಪ್ಪಲ್ಲ. ಇಬ್ಬರೂ ಪರಸ್ಪರ ತಿಳಿದುಕೊಂಡಿದ್ದು ತಪ್ಪಾಗಿದೆ ಅಷ್ಟೆ ಎಂದು ಇಬ್ಬರಿಗೂ ಬುದ್ಧಿ ಹೇಳಿ ಸಮಜಾಯಿಸಿ ಮಾಡಿ ಅವರಿಬ್ಬರನ್ನೂ ಆ ಜಾಗದಿಂದ ಕಳಿಸಿಕೊಟ್ಟರು.
ವಿಷಯ ಇಷ್ಟೇ. ನಮ್ಮೂರಿನ ಜಮೀನಿನ ಭತ್ತದ ಬೆಳೆಗೆ ಕಾಡುಹಂದಿಯ ಕಾಟ ಜಾಸ್ತಿಯಾಗಿತ್ತು. ಭತ್ತದ ಗದ್ದೆಗೆ ರಾತ್ರಿಯೆಲ್ಲಾ ನುಗ್ಗಿ ಪೈರನ್ನು ತುಳಿದು ಹಾಳು ಮಾಡುತ್ತಿದ್ದುವು. ಅವುಗಳನ್ನು ಬೆದರಿಸಲಿಕ್ಕಾಗಿ ನೀರು - ಅಂಡೆಯನ್ನು ಆ ದಿನ ಬೆಳಿಗ್ಯೆಯಷ್ಟೇ ಯಾರೋ ಮಾಡಿದ್ದರು. ಅದನ್ನು ಆಡುಭಾಷೆಯಲ್ಲಿ " ನೀರಂಡೆ " ಎನ್ನುತ್ತಾರೆ. ಅದನ್ನೇ ಹುಚ್ಚಮ್ಮ ನಾಗಮ್ಮನಿಗೆ ಹೇಳಿದ್ದು. ಆದರೆ ನೀರಂಡೆಯ ಮಾಹಿತಿ ನಾಗಮ್ಮನಿಗೆ ಇರಲಿಲ್ಲ. ಇಬ್ಬರಲ್ಲೂ ಜಗಳ ಕುದುರಿದ್ದು ಇದೇ ಕಾರಣಕ್ಕೆ.
{ ನೀರಂಡೆ ಎಂದರೇನು ?. ಎರಡು ಮರದ ಗೂಟಕ್ಕೆ ಒಂದು ಮರದ ರಾಟಿಯನ್ನು ಕಟ್ಟುತ್ತಾರೆ. ಆ ರಾಟಿಯ ಮೇಲೆ ಸ್ವಲ್ಪ ಎತ್ತರದಿಂದ ಸಣ್ಣದಾಗಿ ನೀರು ಧುಮುಕುವಂತೆ ವ್ಯವಸ್ಥೆ ಮಾಡಿ ಹಗಲು ರಾತ್ರಿ ಅದು ತಿರುಗುತ್ತಿರುವಂತೆ ಸಜ್ಜು ಮಾಡಿರುತ್ತಾರೆ. ಅದರ ಎದುರು ಒಂದು ಮರದ ಗೂಟಕ್ಕೆ ಉದ್ದನೆಯ ಕೊಡೆಯ ಕಡ್ಡಿಯೊಂದನ್ನು ಕಟ್ಟಿರುತ್ತಾರೆ. ಅದು ಸ್ವಲ್ಪ flexible ಆಗಿರುತ್ತದೆ. ಆ ಕೊಡೆಯ ಕಡ್ಡಿಯ ಒಂದು ತುದಿ ರಾಟಿಗೆ ತಾಗಿಕೊಂಡಿರುತ್ತದೆ. ಅದರ ಮತ್ತೊಂದು ತುದಿ ತಾಗುವ ಹಾಗೆ ಕಡ್ಡಿಯ ಎದುರಿಗೆ ಖಾಲಿ ಡಬ್ಬವೊಂದನ್ನು ಇಟ್ಟಿರುತ್ತಾರೆ. ನೀರು ರಾಟಿಯ ಮೇಲೆ ಬಿದ್ದು ತಿರುಗಿದಂತೆಲ್ಲಾ ಅದು ತಿರುಗಿ ಕೊಡೆ ಕಡ್ಡಿಯ ಒಂದು ತುದಿಯನ್ನು ಎತ್ತಿ ಹಾಕುತ್ತಾ ಇರುತ್ತದೆ. ಆಗ ಕೊಡೆ ಕಡ್ಡಿಯ ಮತ್ತೊಂದು ತುದಿ ಸಹಜವಾಗಿ ಖಾಲಿ ಡಬ್ಬದ ಮೇಲೆ ಒತ್ತಡದಿಂದ ಬಿದ್ದು ಶಬ್ದವನ್ನು ಮಾಡುತ್ತದೆ. ಆ ಶಬ್ದವನ್ನು ಕಂಡ ಹಂದಿಗಳು ಹೊಲದ ಹತ್ತಿರ ಬಂದದ್ದು ಹೆದರಿಕೊಂಡು ಪಲಾಯನ ಮಾಡುತ್ತದೆ. ಬೆಳೆ ರಕ್ಷಣೆಯಾಗುತ್ತದೆ. ಇದು ರೈತರ ಪೃಕೃತಿದತ್ತವಾದ ಒಂದು ಸರಳ ಯಂತ್ರ. }.

No comments:

Post a Comment

Note: only a member of this blog may post a comment.