Tuesday 15 September 2015

@@@@@ ಪೂತನಿಯ ಮೊಲೆಯಲ್ಲಿ ಹಾಲು, ಮನದಲ್ಲಿ ವಿಷ. ಪರಿಣಾಮ ಹಾಲಾಹಲ @@@@@


                                                                           ಎಂ.ಗಣಪತಿ.ಕಾನುಗೋಡು.

ಹಾಲುಣ್ಣಿಸಲು ಬಂದವರನ್ನೂ ಶಿಶುಕೃಷ್ಣ ಕೊಂದ ಎಂದಮೇಲೆಯೆ ಲೋಕಕ್ಕೆ ಗೊತ್ತಾದದ್ದು ಒಂದು ಪಾಠ. ಯಾರು ನಮಗೆ ಬಾಹ್ಯವಾಗಿ ಒಳ್ಳೆಯವರೆಂದು ಕಂಡರೂ ಅವರನ್ನು ಪೂರ್ವ್ವಾಪರವಾಗಿ ನಾವು ಗ್ರಹಿಸಿಕೊಳ್ಳಬೇಕು ಎನ್ನುವುದೇ ಆ ಪಾಠ.
ಪೂತನಿ ಒಬ್ಬಳು ರಾಕ್ಷಸಿ. ಕೃಷ್ಣನ ಮೇಲೆ ವೈರುಧ್ಯವನ್ನೇ ಸಾಧಿಸುತಿದ್ದ ಕಂಸನ ಪರಿವಾರದಳು. ಕಂಸನ ಆದೇಶದ ಮೇರೆಗೆ ತನ್ನ ರಾಕ್ಷಸ ವೇಷವನ್ನು ಮರೆಸಿ ಸುಂದರ ಸ್ತ್ರೀ ವೇಷದಿಂದ ಗೋಕುಲದಲ್ಲಿ ನಂದನ ಮನೆಯನ್ನು ಹೊಕ್ಕು ಅಲ್ಲಿ ಶ್ರೀಕೃಷ್ಣನಿಗೆ ಮೊಲೆಯ ಹಾಲನ್ನುಣಿಸತೊಡಗಿದಳು. ಮೂಲತಃ ಹಾಲು ವಿಷವಲ್ಲ. ಆದರೆ ಅವನನ್ನು ಕೊಲ್ಲಲೇಬೇಕೆಂಬ ದುರುದ್ಧೇಶದ ವಿಷ ಅವಳ ಮನಸ್ಸಿನಲ್ಲಿ ಇತ್ತು. ಉಣ್ಣಿಸುವುದು ಮೊಲೆಯ ಶುದ್ಧ ಹಾಲಾದರೂ ಮನಸ್ಸಿನಲ್ಲಿ ವಿಷವಿದ್ದರೆ ಆ ಹಾಲೂ ವಿಷಪೂರಿತವಾಗುತ್ತದೆ ಎನ್ನುವುದು ಲೋಕಕ್ಕೆ ಇನ್ನೊಂದು ಪಾಠವೂ ಹೌದು. ಹಾಗಾಗಿಯೇ ನಮ್ಮ ತಾಯಂದಿರು ತಮ್ಮ ಮಕ್ಕಳಿಗೆ ಮೊಲೆಯುಣ್ಣಿಸುವಾಗ ಪ್ರಸನ್ನತೆಯಿಂದ, ಮಕ್ಕಳ ಮೇಲಿನ ಅತಿ ಅನುರಾಗದಿಂದ ಉಣ್ಣಿಸುತ್ತಾರೆ. ಉಣ್ಣಿಸಬೇಕು. ಏಕೆಂದರೆ ನಮ್ಮ ದೇಹದಿಂದ ಹೊರಡುವ ಜೀವ ರಸಗಳು ನಮ್ಮ ಭಾವನೆಗಳಿಂದಲೂ ಪ್ರಭಾವಿತಗೊಳ್ಳುತ್ತವೆ.
ನಮ್ಮ ವಿರುದ್ಧ ಯಾರು ಎಂಥಹ ಒಳ್ಳೆಯ ರೂಪದಿಂದ ಬಂದರೂ ಅದು ಸೋಗು ಇರಬಹುದೇ ಎಂದು ನಾವು ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳಬೇಕು. ಅಂತಹವರನ್ನು ನಿರ್ಧಾಕ್ಷಿಣ್ಯವಾಗಿ ಧಿಕ್ಕರಿಸಬೇಕು. ಇಲ್ಲದಿದ್ದರೆ ನಾವು ಘೋರ ಅವಘಡಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವುದನ್ನು ಶ್ರೀಕೃಷ್ಣ ಲೋಕಕ್ಕೆ ಕಲಿಸಿಕೊಟ್ಟ ಪಾಠ.
ಸುಂದರ ರೂಪದ ಹೆಣ್ಣು ಪೂತನಿ ಒಳ್ಳೆಯವಳು, ತಾಯಿಯ ಸ್ವರೂಪಿ ಎಂದು ಗೋಕುಲದ ಜನರು ಗ್ರಹಿಸಿರಬೇಕು. ಎಷ್ಟೇ ಗುಟ್ಟಾಗಿ ಬಂದರೂ ಆಕೆಯ ಬರವು ಯಾರಿಗೂ ಗೊತ್ತಾಗದೆ ಇರಲಿಕ್ಕಿಲ್ಲ. ಆದರೆ ಕೃಷ್ಣ ಮುಂದೆ ಒಂದು ದಿನ ಸ್ನಾನ ಮಾಡುವ ಹೆಣ್ಣುಗಳೊಂದಿಗೆ ಅವರ ಉಡುಪುಗಳನ್ನು ಕದ್ದು ಮಜಾ ಮಾಡುವ ಹಗುರ ಸ್ವಭಾವದವನೆಂದು ನಮಗೆ ಮೇಲ್ನೋಟಕ್ಕೆ ಅನ್ನಿಸಿದರೂ ವಾಸ್ತವಿಕವಾಗಿ ಈ ಸುಂದರ ಹೆಣ್ಣು ಪೂತನಿ ತನ್ನೆಡೆ ಬಂದಾಗ ಆತ ಕಣ್ಮುಚ್ಚಿ ಸುಮ್ಮನೆ ಅವಳ ಮೊಲೆಯುಣ್ಣಲಿಲ್ಲ. ಅಷ್ಟರ ಮಟ್ಟಿಗೆ ಆತ ಚಿಂತನಾಶೀಲ. ಶೈಶವಾವಸ್ಥೆಯಲ್ಲಿಯೇ ಅವನಲ್ಲಿ ಆ ಶಕ್ತಿ, ಪ್ರಜ್ಞೆ ಇತ್ತು ಎನ್ನುವುದು ಒಂದು ಭಾವನಾತ್ಮಕ ಕಲ್ಪನೆ. ಆದ್ದರಿಂದ ತನ್ನ ಸುತ್ತಲಿನ ಮಂದಿ ಆಕೆಯನ್ನು ಒಳ್ಳೆಯವಳೆಂದು ಗ್ರಹಿಸಿದರೂ ಶ್ರೀಕೃಷ್ಣ ಯಥಾವತ್ತಾಗಿ ಅವಳನ್ನು ಗ್ರಹಿಸಿದ. ಮೇಲ್ನೋಟಕ್ಕೆ ಒಳ್ಳೆಯವಳೆಂದು ಕಂಡರೂ ಅವಳನ್ನು ಕೊಲ್ಲಲೇಬೇಕೆಂದು ನಿರ್ಣಯಿಸಿ ಅವಳ ಮೊಲೆಯನ್ನೇ ಕಚ್ಚಿ ಕೊಂದುಬಿಟ್ಟ. ಆ ವಯಸ್ಸಿನಲ್ಲಿ, ಆ ಹೊತ್ತಿನಲ್ಲಿ ಅವನಲ್ಲಿದ್ದ ಅವನ ಆಯುಧವೆಂದರೆ ಅವನ ಹಲ್ಲುಗಳು ಮಾತ್ರ. ನಾವು ಮನಸ್ಸು ಮಾಡಿದರೆ, ನಮಗೆ
ಇಚ್ಚಾಶಕ್ತಿ ಇದ್ದರೆ ನಮ್ಮ ಶತ್ರುಗಳನ್ನು ಎದುರಿಸಲು ಹೊರಗಿನ ಆಯುಧ, ಶಕ್ತಿ ಬೇಕಾಗಿಲ್ಲ, ನಮ್ಮಲ್ಲಿ ಅಂತರ್ಗತವಾಗಿರುವ ಅನ್ಥಶಕ್ತಿಯೇ ಸಾಕು ಎನ್ನುವುದು ಶ್ರೀಕೃಷ್ಣ ನಮಗೆ ಹೇಳಿಕೊಟ್ಟ ಪಾಠ.
ಪೂತನಿ ಮತ್ತು ಕೃಷ್ಣನ ಪ್ರಸಂಗದಿಂದ ನಾವು ಕಲಿಯಬೇಕಾದ ಪಾಠವೆಂದರೆ ಶತ್ರುಗಳು ನಮ್ಮ ದೇಹದ ಹೊರಗೆ ಇದ್ದಾರೆ. ಹಾಗೆಯೆ ನಮ್ಮ ದೇಹದ ಮತ್ತು ಮನಸ್ಸಿನ ಒಳಗೂ ಇವೆ. ಅವುಗಳನ್ನು ಯಾವಾಗ, ಎಲ್ಲಿ, ಹೇಗೆ ಮಟ್ಟ ಹಾಕಬೇಕೋ ಹಾಗೆ ಮಟ್ಟಹಾಕಬೇಕು ಎನ್ನುವ ವಿಚಾರ ಸರ್ವಕಾಲಿಕ ಸತ್ಯ.

ತಾರೀಖು : 5 - 9 - 2015

ಶ್ರೀ ಕೃಷ್ಣಾಷ್ಟಮಿಯ ದಿನ .

No comments:

Post a Comment

Note: only a member of this blog may post a comment.