Tuesday 15 September 2015

@@@@ ಬಣ್ಣ ಕಳೆದುಕೊಂಡ ಗುಂಡ ಕಟ್ಟಿದ ಬಂಗಾರದ ಮಾಂಗಲ್ಯದ ಸರ @@@@


                                                               ~~~~ ಎಂ. ಗಣಪತಿ. ಕಾನುಗೋಡು.

ನಮ್ಮೂರ ಗುಂಡ ಮದುವೆಯಾಗಿ ಈ ದಿನಕ್ಕೆ ನಾಲ್ಕು ವರ್ಷಗಳಾದುವು. ಆತ ಮನೆಯಲ್ಲಿ ಸಾಕಷ್ಟು ಶ್ರೀಮಂತ. ಮದುವೆಯಲ್ಲಿ ತನ್ನ ಮಗಳಿಗೆ ಅವನ ಆರ್ಥಿಕ ಅನುಕೂಲಕ್ಕನುಸಾರವಾಗಿ ಬಹಳ ಬಂಗಾರ ಹಾಕುತ್ತಾನೆ ಎಂದು ಭಾವಿಸಿಕೊಂಡಿದ್ದ ಅವನ ಮಾವನಿಗೆ ಭ್ರಮನಿರಸನವಾಗಿತ್ತು. ಅನಿವಾರ್ಯವಾಗಿ ಹಾಕಲೇಬೇಕಾಗಿದ್ದ ಬಂಗಾರದ ಮಾಂಗಲ್ಯದ ಸರವನ್ನು ಬಿಟ್ಟರೆ ಹೆಚ್ಚಿನದಕ್ಕೆ ಅಳಿಯನ ಶ್ರೀಮಂತಿಕೆಯನ್ನು ನೋಡಿಯಷ್ಟೇ ಸಮಾಧಾನಪಟ್ಟುಕೊಳ್ಳಬೇಕಾಯಿತು. ಏಕೆಂದರೆ ಗುಂಡನ ಹೆಂಡತಿಯ ತವರಿನಲ್ಲಿ ಆರ್ಥಿಕವಾಗಿ ಬಡವರು.
ನಮಗೆ ಊರಿನವರೂ ಇದು ಅರ್ಥವಾಗಲಿಲ್ಲ.
ಊರಿನ ಜನ, ಅವನ ಸಂಬಂಧಿಕರು ಮಾತಾಡಿಕೊಳ್ಳುತಿದ್ದರು -- ಗುಂಡನ ಪಕ್ಕದ ಮನೆಯ ಸೊಸೆಯ ಹಾಗೆ ಇವನ ಹೆಂಡತಿಯೂ ವರ್ಷಾರು ತಿಂಗಳಲ್ಲಿ ಡೈವೋರ್ಸ್ ಕೊಡದಿದ್ದರೆ ಸಾಕು, ಅವಳ ಹಾಗೆ ಗುಂಡನ ಬಂಗಾರ , ಹಣವನ್ನೆಲ್ಲ ದಾಟಿಸಿಕೊಂಡು ಇವನ ಕೈ ಬಿಟ್ಟು ಓಡಿಹೋಗದಿದ್ದರೆ ಸಾಕು ದೇವರೇ ಎಂದು ತಮ್ಮೊಳಗೆ ಅಂದುಕೊಳ್ಳುತಿದ್ದರು.
ಗುಂಡನ ದಾಂಪತ್ಯ ಯಾವ ಕುಂದೂ ಇಲ್ಲದೆ ಸುಗಮವಾಗಿದ್ದು ನಾಲ್ಕು ವರ್ಷಗಳು ಕಳೆದು ಹೋದುವು. ಅವನ ಹೆಂಡತಿ ಮದುವೆಯ ನಂತರ ಮುಟ್ಟಾಗಲೇ ಇಲ್ಲ. ಬೇಗನೆ ಮುದ್ದಾದ ಎರಡು ಮಕ್ಕಳೂ ಹುಟ್ಟಿದುವು. ಅವನ ಹೆಂಡತಿ ಗಂಡನೊಡನೆ ಅತಿ ಪ್ರೀತಿಯಿಂದ ಇದ್ದಾಳೆ . ಅಂತೂ ನಾವೆಲ್ಲಾ ಭಾವಿಸಿದಂತೆ ಅವನ ಹೆಂಡತಿ ಅವನನ್ನು ಬಿಟ್ಟು ಹೋಗಲಿಲ್ಲ.
ಆದರೆ ಹೋದದ್ದು ವಿವಾಹದಲ್ಲಿ ಅವನು ಹೆಂಡತಿಗೆ ಕಟ್ಟಿದ ಚಿನ್ನದ ಮಾಂಗಲ್ಯದ ಸರದ ಬಣ್ಣ ಮಾತ್ರ. ಸರ ಪೂರ್ತಿ ಬೆಳ್ಳಗಾಗಿತ್ತು. ನಾಲ್ಕು ವರ್ಷಗಳ ನಂತರ ಒಂದು ದಿನ ತನ್ನ ಮಕ್ಕಳೊಂದಿಗೆ ಹೆಂಡತಿಯನ್ನೊಡಗೂಡಿದ ಸುಖೀಸಂಸಾರದೊಂದಿಗೆ ಬಂಗಾರದ ಅಂಗಡಿಗೆ ಹೋಗಿ ತನ್ನ ಹೆಂಡತಿ ಕೇಳಿದ ಹೆಚ್ಚಿನ ತೂಕದ ಒಳ್ಳೆಯ ಬಂಗಾರದ
ಮಾಂಗಲ್ಯದ ಸರವನ್ನು ಅವಳಿಗೆ ಕೊಡಿಸಿ ಅಲ್ಲೇ ಕೊರಳಿಗೆ ಕಟ್ಟಿಸಿಕೊಂಡು ಮನೆಗೆ ಬಂದ.
ನಮಗೆಲ್ಲ ಅಚ್ಚರಿ. ಊರಿಗೇ ಶ್ರೀಮಂತನಾಗಿದ್ದ ಗುಂಡ ಮೊದಲು ತಂದ ಸರದ ಬಣ್ಣ ಹೋದದ್ದು ಏಕೆ ?. ಹಾಗಂತ ಅವನಿಗೆ ಸೊನಗಾರನು ಮೋಸ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಕೆ. ಜಿ. ಗಟ್ಟಲೆ ಬಂಗಾರವನ್ನು ತನ್ನ ಸಂಸಾರಕ್ಕೆ ಖರೀದಿಸಿದವನು. ಸಾಕಷ್ಟು ಬುದ್ಧಿವಂತ ಬೇರೆ. ಒಂದು ವಾರ ನಮಗೆ ನಿದ್ರೆಯೇ ಸರಿಯಾಗಿ ಬರಲಿಲ್ಲ.
ನಾವು, ಅವನ ಗೆಳೆಯರೆಲ್ಲ ಒಂದು ದಿನ ಈ ವಿಚಾರವಾಗಿ ಗುಂಡನನ್ನು ಕೇಳಿಯೇ ಬಿಟ್ಟೆವು. ಆಗ ಅವನು ಕೊಟ್ಟ ಉತ್ತರ ಹೀಗಿತ್ತು.
" ಯಾರಿಗೆ ಗೊತ್ತೋ ಮಾರಾಯರಾ. ನನ್ನ ಹೆಂಡತಿ ನನ್ನ ಜೊತೆಗೆ ಬಾಳುವೆ ಮಾಡಿಕೊಂಡು ಮುಂದುವರೆಯುತ್ತಾಳೆ ಎಂದು ಇಂದಿನ ಕಾಲದಲ್ಲಿ ಏನು ಗ್ಯಾರಂಟಿ ?. ನಮ್ಮ ಪಕ್ಕದ ಮನೆಯವನನ್ನು ನೋಡಿ ನನಗೆ ಸಾಕಾಗಿ ಹೋಗಿತ್ತು. ಒಮ್ಮೆ ಅವಳು ನನ್ನನ್ನು ಬಿಟ್ಟು ಓಡಿಹೋದರೆ ಅಷ್ಟರಲ್ಲೇ ಹೋಗಲಿ ಎಂದು ಬೆಳ್ಳಿಯ ಸರಕ್ಕೆ ಬಂಗಾರದ ನೀರನ್ನು ಹಾಕಿಸಿ ಅದಕ್ಕೆ ಐದು ನೂರು ರುಪಾಯಿ ಖರ್ಚು ಮಾಡಿದ್ದೆ ಅಷ್ಟೆ. ಸರದ ಬಣ್ಣ ಹೋದರೂ ಅವಳು ಹೋಗಲಿಲ್ಲ. ಅದಕ್ಕೆ ಖುಷಿಯಿಂದ ಅವಳ ಇಚ್ಚೆಯಂತೆ ಎರಡು ಲಕ್ಷ ರೂಪಾಯಿನ ಅಪ್ಪಟ ಬಂಗಾರದ ಮಾಂಗಲ್ಯದ ಸರವನ್ನೇ ಕೊಡಿಸಿದೆ ".


ತಾರೀಖು : 9 - 9 - 2015

No comments:

Post a Comment

Note: only a member of this blog may post a comment.