Friday 4 September 2015

@@@@ ರೈತ --- ದೇಶದ ಅನ್ನದಾತನ ಮೇರು- ಕೂರು. @@@@


~~~~~~ ಎಂ. ಗಣಪತಿ. ಕಾನುಗೋಡು.

ರೈತ ದೇಶದ ಬೆನ್ನೆಲುಬು. ಆತ ನಮಗೆ ಅನ್ನವನ್ನು ನೀಡುವ ಅನ್ನದಾತ. ಅವನನ್ನು ನಮ್ಮ ದೇಶದ ಹಿಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು " ಜೈ ಕಿಸಾನ್ " ಎಂದು ಶ್ಲಾಘಿಸಿದರು. " ಭೂಮಿಯನುಳುವ ನೇಗಿಲ ಯೋಗಿಯ ನೋಡಲ್ಲಿ " ಎಂದು ಅವನನ್ನು ಕವಿಗಳು ಕೊಂಡಾಡಿದರು. ಆತನನ್ನು ಯೋಗಿ ಎಂದು ಬಣ್ಣಿಸಿದ್ದೇಕೆ ಎಂದು ಎಲ್ಲರೂ ಗಮನಿಸಬೇಕು. " ಯೋಗಿ " ಎಂದರೆ ತನ್ನ ಸ್ವಾರ್ಥವನ್ನು ತ್ಯಾಗಮಾಡಿ ಸಮಾಜದ ಉದ್ಧಾರಕ್ಕಾಗಿ ತನ್ನ ಜೀವನವನ್ನು ವ್ಯಯಿಸುವವನು ಎಂದರ್ಥ. ನಮ್ಮ ದೇಶದ ರೈತ ಅದೇ ಅರ್ಥದಲ್ಲಿ ತನ್ನ ಜೀವವನ್ನು ಸವೆಸಿ ದೇಶದ ಜನತೆಗೆ ಅನ್ನ ನೀಡುತ್ತಿದ್ದಾನೆ ಎಂದರ್ಥ. ಏಕೆಂದರೆ ಇಂದು ಕೃಷಿ ಲಾಭದಾಯಕವಾಗಿಲ್ಲ. ಆದರೂ ಅವನು ತನ್ನ ಆರ್ಥಿಕ ಲಾಭದ ಧೃಷ್ಟಿಯಿಂದ ಹಳ್ಳಿಯನ್ನು, ತನ್ನ ಭೂಮಿಯನ್ನು ತೊರೆದು ನಗರಕ್ಕೆ ವಲಸೆ ಹೋಗಿಲ್ಲ. ಇಲ್ಲಿ ರೈತನ ಸ್ವಾರ್ಥರಹಿತ ಬದುಕು ನಮಗೆ ಗೋಚರಿಸುತ್ತದೆ.
ಆದರೆ ರೈತನ ವೈಯುಕ್ತಿಕ ಬದುಕು ಅತಿ ಕಷ್ಟದಿಂದ ಕೂಡಿದೆ. ಆತ ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬೆಳೆದು, ಸಾಲದಲ್ಲಿಯೇ ಮರಣ ಹೊಂದುತ್ತಾನೆ. ' ಈಗ ತನ್ನ ಕೈ ಸ್ವಲ್ಪ ಗಿಡ್ಡವಾಗಿದೆ, ಇನ್ನೊಂದು ನಾಲ್ಕು ವರ್ಷ ಕಳೆದರೆ ಅಡ್ಡಿಯಿಲ್ಲ, ತಾನು ಆರ್ಥಿಕವಾಗಿ ಸುಧಾರಿಸಿಕೊಳ್ಳುತ್ತೇನೆ ' ಎಂದು ಆತ ಹೇಳಿಕೊಳ್ಳುತ್ತಲೇ ಇರುತ್ತಾನೆ. ಅವನ ಅಜ್ಜ ಹೇಳಿದ ಮಾತು ಇದೇ. ಅವನ ಅಪ್ಪ ಹೇಳಿದ ಮಾತು ಇದೇ. ಈಗ ಅವನು ಹೇಳುತ್ತಿರುವುದು ಇದೇ. ಅವನ ಮಗ, ಮೊಮ್ಮಕ್ಕಳು ಹೇಳುವ ಮಾತು ನಾಳೆ, ನಾಡಿದ್ದು ಇದೇ.
ಅವನು ತನ್ನ ಕೃಷಿಗಾಗಿ ಮಾಡುವ ಹಣದ ವೆಚ್ಚ ಮತ್ತು ಅವನು ಬೆಳೆದ ಉತ್ಪನ್ನದಿಂದ ಬರುವ ಆದಾಯ ಇವೆರಡರ ನಡುವೆ ಇರುವ ಅಂತರ ಅತಿ ಕಡಿಮೆ. ಅವನ ಬೆಳೆಯ ಉತ್ಪಾದನೆಯ ಮತ್ತು ಬೆಳೆದ ಬೆಳೆಯ ಬೆಲೆಯ ಅನಿರ್ಧಿಷ್ಟತೆ. ತನ್ನ ಬೆಳೆಯನ್ನು ಮಾರಾಟಮಾಡುವಲ್ಲಿ ಅವನ ಅಸಹಾಯಕತೆ, ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪಿಡುಗು, ಕಾಡುಪ್ರಾಣಿಗಳು , ಹಕ್ಕಿ ಪಕ್ಷಿಗಳು , ಕಳ್ಳ ಕಾಕರು ಒಯ್ದು ಬಿಟ್ಟದ್ದು ಇವನ ಮನೆಯೊಳಗೆ ಎನ್ನುವ ಪರಿಸ್ಥಿತಿ, ಬೆಳೆಗೆ ತಗಲುವ ರೋಗರುಜಿನಗಳು, ಕೂಲಿಕಾರ ಅಭಾವದ ಸಮಸ್ಯೆ, ಸಾಲಬಾಧೆ... ಹೀಗೆ ಅನೇಕ ಸಮಸ್ಯೆಗಳು ರೈತನನ್ನು ಕಾಡುತ್ತಿವೆ.
ಸರ್ಕಾರ ಅವನನ್ನು ಸಾಕಬೇಕು. ಪ್ರಸ್ತುತ ಸರ್ಕಾರದ ಸವಲತ್ತುಗಳು ನಮ್ಮ ದೇಶದ ರೈತನಿಗೆ ಕಣ್ಣೊರೆಸುವ ತಂತ್ರವಾಗಿದೆ. ಕೆಲವು ಸಬ್ಸಿಡಿಗಳು ಕೇವಲ ಬೋಗಸ್. ಕೃಷಿ ಉಪಕರಣಗಳನ್ನು ಅದನ್ನು ತಯಾರಿಸಿದ ಮಾಲಿಕರಿಂದ ಮೂಲ ಬೆಲೆಗಿಂತ ದುಪ್ಪಟ್ಟು ಏರಿಸುವಂತೆ ಮಾಡಿಸಿ ಅದಕ್ಕೆ 50 % ಸಬ್ಸಿಡಿ ಎಂದು ಸರ್ಕಾರ ಸಾರುತ್ತದೆ. ಕೃಷಿ ಇಲಾಖೆಯಿಂದ ಅವನ್ನು ರೈತರಿಗೆ ವಿತರಿಸಲಾಗುತ್ತದೆ. ನಿಜವಾದ ಅರ್ಥದಲ್ಲಿ ರೈತನಿಗೆ ಉಪಕರಣ ದೊರಕುವುದು ಮೂಲ ಬೆಲೆಗೆ ವಿನಃ ಸಹಾಯಧನದ ಪ್ರಯೋಜನ ಅವನಿಗೆ ದೊರಕುವುದೇ ಇಲ್ಲ. ವಾಸ್ತವಿಕವಾಗಿ ಸಹಾಯಧನದ ಲಾಭ ದೊರಕುವುದು ಸರ್ಕಾರದಲ್ಲಿದ್ದವರಿಗೆ ಅಷ್ಟೇ. ಉಪಕರಣದ ಮಾಲಿಕನಿಗೆ ಸರ್ಕಾರದ ಜಾಹೀರಿನಿಂದ ತನ್ನ ಉತ್ಪಾದನೆಯ ವಸ್ತು ಹೇರಳವಾಗಿ ಮಾರಾಟವಾಗುತ್ತದೆ. ಅದು ಅವನಿಗೆ ಸಲ್ಲುವ ಪ್ರಯೋಜನ. ಇದರಂತೆ ಅನೇಕ ವಿಚಾರಗಳಲ್ಲಿ ರೈತನಿಗೆ ವಂಚನೆಯಾಗುತ್ತಿದೆ. ಕೆಲವೊಂದು ಆಮಿಷಗಳು ಗಗನ ಕುಸುಮವೂ ಆಗಿದೆ.
ರೈತನ ಇಂಥಹ ಕಠಿಣ ಪರಿಸ್ತಿತಿಯು ಒಂದು ದಿನ ಅವನನ್ನು ಸಮ್ಪೂರ್ಣವಾಗಿ ಈ ಕ್ಷೇತ್ರವನ್ನು ತ್ಯಜಿಸುವಂತೆ ಮಾಡಿ ನಗರಕ್ಕೆ ಗುಳೆ ಹೋಗುವಂತೆ ಮಾಡಿದರೂ ಆಶ್ಚರ್ಯವಿಲ್ಲ.
ತಾರೀಖು : 30 - 8 - 2015

1 comment:

Note: only a member of this blog may post a comment.