Tuesday 18 August 2020

## ದರ್ಭ ಸಂಗ್ರಹಣ ##

ದರ್ಭೆಯನ್ನು ಪ್ರತಿ ವರ್ಷ ಶ್ರಾವಣ ಬಹುಳ ಅಮಾವಾಸ್ಯೆಯಂದು ಕತ್ತರಿಸಿ ತರಬೇಕು. ಅಂದು ಕತ್ತರಿಸಿ ತಂದ ದರ್ಭೆಯನ್ನು ಎಷ್ಟು ದಿನ ಬೇಕಾದರೂ ಬಳಸಬಹುದು. ಬಳಸಿ ಉಳಿದರೆ ತಂದ ಮರುವರ್ಷವೂ ಬಳಸಬಹುದು. ಒಮ್ಮೆ ಶ್ರಾವಣ ಬಹುಳ ಅಮಾವಾಸ್ಯೆಯಂದು ತರಲಾಗದಿದ್ದರೆ ಬೇರೆ ದಿನಗಳಲ್ಲಿಯೂ ಕತ್ತರಿಸಿ ತರಬಾರದೆಂದಿಲ್ಲ. ಆ ದಿನವಲ್ಲದೆ ಇನ್ನೂ ಕೆಲವು ನಿಯಮಿತ ದಿನಗಳಲ್ಲಿ ಕತ್ತರಿಸಿ ತರಬಹುದು. ಆದರೆ ಅದಕ್ಕೆ ಆಯಸ್ಸು, ಪಾವಿತ್ರ್ಯತೆ ಕಡಿಮೆ. ಮಹಾಲಯ ಅಮಾವಾಸ್ಯೆಯಂದು ಕತ್ತರಿಸಿ ತಂದರೆ ಆ ದರ್ಭೆಗೆ ಆರು ತಿಂಗಳು ಆಯಸ್ಸು ಇರುತ್ತದೆ. ಅಂತೆಯೇ ಇತರೆ ಅಮಾವಾಸ್ಯೆಯಂದೂ ಕತ್ತರಿಸಿ ತರಬಹುದು. ಆ ದರ್ಭೆಗೆ ಒಂದು ತಿಂಗಳು ಮಾತ್ರ ಆಯಸ್ಸು ಇರುತ್ತದೆ. ಯಾವುದೇ ಹುಣ್ಣಿಮೆಯಂದು ಕತ್ತರಿಸಿ ತಂದರೆ ಹದಿನೈದು ದಿನಗಳು, ಭಾನುವಾರ ತಂದರೆ ಒಂದು ವಾರ, ಉಳಿದ ದಿನಗಳಲ್ಲಿ ಕತ್ತರಿಸಿ ತಂದರೆ ಆ ಒಂದು ದಿನ ಮಾತ್ರ ಆಯಸ್ಸು ಇರುತ್ತದೆ. ಇದಾವುದೇ ದಿನ ಕತ್ತರಿಸಿ ತಂದ ದರ್ಭೆಯನ್ನಾದರೂ ಶ್ರಾವಣ ಬಹುಳ ಅಮಾವಾಸ್ಯೆಯಂದು ಕತ್ತರಿಸಿ ತಂದು ಉಳಿದ ದರ್ಭೆಗೆ ಸೇರಿಸಿದರೆ ಆ ದರ್ಭೆಯ ಸಂಸರ್ಗದಿಂದ ಅವುಗಳಿಗೂ ' ಯಾತಯಾಮ ' (ಹಳೆಯದಾಗುವಿಕೆಯ ದೋಷ ) ದೋಷ ನಿವೃತ್ತಿಯಾಗಿ ಎಷ್ಟು ಕಾಲ ಬೇಕಾದರೂ ಬಳಸಬಹುದು. ನಿರ್ಧಿಷ್ಟ ದಿನದಂದು ಪೂರ್ವಾಹ್ನದಲ್ಲಿ ಕೆಲವು ಶಾಸ್ತ್ರ ರೀತಿಯಲ್ಲಿ ಹೇಳಿರುವ ಕ್ರಮಗಳನ್ನು ಅನುಸರಿಸಿ ಪೂರ್ವಾಭಿಮುಖವಾಗಿ ಕುಳಿತು ಐದು ಮುಷ್ಟಿಗೆ ಕಡಿಮೆ ಇಲ್ಲದಂತೆ ಉದ್ದವಾಗಿರುವ ದರ್ಭೆಯನ್ನು ಕತ್ತರಿಸಬೇಕು. ದರ್ಭೆಯಲ್ಲಿ ಏಳು ವಿಧಗಳಿವೆ. ವಿಶ್ವಾಮಿತ್ರ, ಕುಶ, ಕಾಶ, ಭತ್ತ, ನಸ, ವಯ, ಮತ್ತು ದೂರ್ವಾ ( ಗರಿಕೆ ಹುಲ್ಲು ) ಇವು ಏಳು ವಿಧಗಳು. ರುದ್ರ ಸಂಬಂಧವಾದ ಮತ್ತು ಆಭಿಚಾರಕ ಕೃತ್ಯಗಳಲ್ಲಿ,' ಕಾಶ ' ಎಂಬ ದರ್ಭೆಯನ್ನು, ಬ್ರಾಹ್ಮ ಸಂಸ್ಕಾರಗಳಾದ shrouta ಸ್ಮಾರ್ತಕರ್ಮಗಳಲ್ಲಿ ' ಕುಶ ' ದರ್ಭೆಯನ್ನು, ಉಪಾಕರ್ಮವೇ ಮುಂತಾದ ಋಷಿ ಪೂಜಾಕಾರ್ಯಗಳಲ್ಲಿ ' ದೂರ್ವಾ ' ದರ್ಭೆಯನ್ನು, ಸುದರ್ಶನ ಹೋಮವೇ ಮುಂತಾದ ವೈಷ್ಣವ ಕಾರ್ಯದಲ್ಲಿ ' ವಿಶ್ವಾಮಿತ್ರ ' ದರ್ಭೆಯನ್ನು ಬಳಸುವುದು ಉತ್ತಮ. ನಿರ್ದಿಷ್ಟವಾದ ದರ್ಭೆಗಳು ಸಿಗದಿದ್ದರೆ 'ಕುಶ' ವನ್ನು ಎಲ್ಲಾ ಕಾರ್ಯಗಳಲ್ಲಿ ಬಳಸಬಹುದು. ಆಯಾ ಕಾರ್ಯಗಳಿಗೆ ಹೇಳಿರುವ ನಿರ್ದಿಷ್ಟವಾದ ದರ್ಭೆಗಳು ಒಮ್ಮೆ ಸಿಗದಿದ್ದರೆ ಈ ಏಳು ವಿಧ ದರ್ಭೆಯಲ್ಲಿ ಯಾವುದೇ ದರ್ಭೆಯನ್ನಾದರೂ ಎಲ್ಲಾ ಕಾರ್ಯಗಳಲ್ಲಿಯೂ ಬಳಸಬಹುದು. ದರ್ಭೆಯಲ್ಲಿಯೂ ಲಿಂಗ ಬೇಧವಿದೆ. ದರ್ಭೆಗಳ ತುದಿಯ ಭಾಗ ( ಅಗ್ರಭಾಗ ) ಸ್ಥೂಲವಾಗಿದ್ದರೆ ಅವು ಸ್ತ್ರೀ ದರ್ಭೆ. ಬುಡದ ಭಾಗವು ( ಮೂಲ ಭಾಗ ) ದಪ್ಪನಾಗಿದ್ದರೆ ನಪುಂಸಕ ದರ್ಭೆ. ಮೂಲದಿಂದ ಅಗ್ರದವರೆಗೂ ( ಬುಡದಿಂದ ತುದಿಯವರೆಗೂ ) ಸಮವಾಗಿದ್ದರೆ ಪುಂದರ್ಭೆ ಎಂದು ಹೇಳಲಾಗಿದೆ. ಚೌಲ, ಉಪನಯನ, ಉಪಾಕರ್ಮ ವ್ರತ ಸಮಾವರ್ತನಾದಿ ಪುರುಷ ಸಂಸ್ಕಾರ ಕಾರ್ಯಕ್ರಮಗಳಲ್ಲಿ ಪುಂದರ್ಭೆಯನ್ನು ಬಳಸಬೇಕು. ಗರ್ಭಾದಾನ, ಪುಂಸವನ, ಸೀಮಂತೋನ್ನಯನ ಮುಂತಾದ ಸ್ತ್ರೀ ಸಂಬಂಧ ಕಾರ್ಯಕ್ರಮಗಳಲ್ಲಿ ಸ್ತ್ರೀ ದರ್ಭೆಯನ್ನು ಬಳಸಬೇಕು. ಸ್ತ್ರೀ ಪುರುಷ ಉಭಯ ಸಂಸ್ಕಾರ ರೂಪವಾದ ವಿವಾಹದಲ್ಲಿ ಸ್ತ್ರೀ ಪುರುಷ ಎರಡೂ ದರ್ಭೆಯನ್ನು ಬಳಸಬೇಕು. ಜಾತಕರ್ಮ, ನಾಮಕರಣ, ಅನ್ನಪ್ರಾಶನಗಳಲ್ಲಿ ಸ್ತ್ರೀ ಸಂಸ್ಕಾರವಾದರೆ ಸ್ತ್ರೀ ದರ್ಭೆಯನ್ನು, ಗಂಡು ಮಗುವಿನ ಸಂಸ್ಕಾರವಾದರೆ ಪುಂದರ್ಭೆಯನ್ನು, ಶಾಂತಿ ಕರ್ಮಗಳಲ್ಲಿ ನಪುಂಸಕ ದರ್ಭೆಯನ್ನು ಬಳಸಬೇಕು. ಒಮ್ಮೆ ಯಾವುದೇ ಕರ್ಮದಲ್ಲಿ ನಿರ್ದಿಷ್ಟವಾದ ದರ್ಭೆಯು ಸಿಗದಿದ್ದ ಸನ್ನಿವೇಶದಲ್ಲಿ ಯಾವ ದರ್ಭೆಯನ್ನು ಯಾವುದೇ ಕರ್ಮದಲ್ಲಿ ಬಳಸಬಹುದು. ಸಿಕ್ಕರೆ ಉತ್ತಮ. 

ಗ್ರಂಥಋಣ : ಸಂಸ್ಕಾರ ಮಹೋದಧಿ ---- ಮಮಹೋಪಾಧ್ಯಾಯ ಡಾ ll ಎ. ಅನಂತನರಸಿಂಹಾಚಾರ್.

No comments:

Post a Comment

Note: only a member of this blog may post a comment.