ದೇವಯಾನಿಯು ಬ್ರಾಹ್ಮಣನೂ ಅಸುರರ ಗುರುವೂ ಆದ ಶುಕ್ರಾಚಾರ್ಯನ ಮಗಳು. ತನ್ನ ತಂದೆಯಿಂದ ಮೃತಸಂಜೀವಿನಿ ಮಂತ್ರ ಕಲಿಯಲು ತಮ್ಮ ಆಶ್ರಮಕ್ಕೆ ಗುರುಕುಲ ವಾಸಕ್ಕಾಗಿ ಬಂದ ಕಚನನ್ನು ಪ್ರೇಮಿಸುತ್ತಾಳೆ. ಆದರೆ ಅದು one way love ಆಗಿತ್ತು. ಕಚನು ಯಾವ ಕಾರಣಕ್ಕೂ ಅವಳನ್ನು ಪ್ರೇಮಿಸಲು ಸಿದ್ಧನಿರಲಿಲ್ಲ. ಆ ವಿಶಿಷ್ಟ ಮಂತ್ರವನ್ನು ಕಲಿತುಕೊಂಡು ಹೋಗುವುದೊಂದೇ ಅವನ ಮುಖ್ಯ ಗುರಿಯಾಗಿತ್ತು.
ಈ ಎಚ್ಚರ ಕಚನಿಗೆ ಬಹಳ ಚೆನ್ನಾಗಿ ಇತ್ತು. ಆ ಕಾರಣಕ್ಕಾಗಿ ಆತ ಶುಕ್ರಾಚಾರ್ಯರಲ್ಲಿ ಬಹಳ ಭಯ ಭಕ್ತಿಯಿಂದ ವರ್ತಿಸಿಕೊಂಡಿದ್ದ. ಯಾವ ಘಳಿಗೆಯಲ್ಲಿಯೂ ಅವರ ಮುನಿಸಿಗೆ ಕಾರಣವಾಗದಂತೆ ಅವನ ವರ್ತನೆ ಇತ್ತು. ತಾನು ಅಲ್ಲಿಗೆ ಬಂದ ಉದ್ದೇಶ ಈಡೇರಿಕೆಗಾಗಿ ತನ್ನ ದಾರಿ ತಪ್ಪದಂತೆ ಜಾಗರೂಕತೆ ವಹಿಸಿದ್ದ. ಎಷ್ಟು ಹೊತ್ತಿಗೂ ದೇವಯಾನಿಯ ಪ್ರೇಮದ ಬುಟ್ಟಿಗೆ ಅವನು ಬೀಳುವ ಪ್ರಮೇಯವೇ ಇರಲಿಲ್ಲ.
ಹಾಗಂತ ಆತ ತನ್ನ ತಂದೆಯ ಮಾತಿನಂತೆ ಅವಳನ್ನು ಸಂತೋಷಪಡಿಸುವುದರಲ್ಲೇ ನಿರತನಾಗಿದ್ದ . ಶುಕ್ರಾಚಾರ್ಯರ ಸೇವೆಯ ಜೊತೆಗೆ ಅವಳು ಹೇಳಿದ ಕೆಲಸವನ್ನೂ ಪ್ರತಿದಿನ ಮಾಡಿಕೊಡುತ್ತಿದ್ದ. ಅವಳನ್ನು ಸಂತೋಷಪಡಿಸುವುದಕ್ಕಾಗಿ ಹೂಗಳನ್ನು ಕೊಯ್ದು ತರುವುದು, ಅವುಗಳನ್ನು ಕಟ್ಟುವುದು ಹೀಗೆ... ಹೀಗೆ. ಕೆಸವಿನ ಎಲೆಯ ಮೇಲಿನ ನೀರಿನಂತೆ -- ಸ್ಪರ್ಶವಿದ್ದರೂ ಆಕರ್ಷವಿರಲಿಲ್ಲ. ದೇವಯಾನಿಯೂ ಏಕಾಂತದಲ್ಲಿ ಅವನೊಡನೆ ಆಡುವುದು, ಹಾಡುವುದು ಅಲ್ಲದೆ ಅವನ ಸೇವೆಯನ್ನು ಮಾಡುತ್ತಿದ್ದಳು -- ಒಣಹುಲ್ಲನ್ನು ಬೆಂಕಿ ಆಕರ್ಷಿಸುವ ಹಾಗೆ. ಹೊರಗಿನ ವರ್ತನೆ ಇಬ್ಬರದೂ ಒಂದೇ ಆಗಿ ಕಂಡರೂ ಒಳಗಿನ ಗುರಿ ಇಬ್ಬರದೂ ಬೇರೆ ಬೇರೆಯದೇ ಆಗಿತ್ತು. ದೇವಯಾನಿಯದು ಕಚನನ್ನು ಒಳಗೆ ಹಾಕಿಕೊಳ್ಳಬೇಕೆನ್ನುವುದು . ಕಚನದು ಮೃತಸಂಜೀವಿನಿ ವಿಶೇಷ ಮಂತ್ರವನ್ನು ಅವಳ ತಂದೆಯಿಂದ ಒಳಗೆ ಹಾಕಿಕೊಳ್ಳಬೇಕೆನ್ನುವುದು. ಅದಕ್ಕಾಗಿ ಶುಕ್ರಾಚಾರ್ಯರ ಪ್ರಿಯ ಶಿಷ್ಯನಾಗಿ ಬ್ರಹ್ಮಚರ್ಯ ವ್ರತದಲ್ಲಿಯೇ ಇದ್ದ.
ಕಚನು ಶುಕ್ರಾಚಾರ್ಯರಿಂದ ಆ ಮಂತ್ರವನ್ನು ಕಲಿಯಬಾರದು, ಅದನ್ನು ಹೇಗಾದರೂ ತಪ್ಪಿಸಬೇಕು ಎಂದು ಅಸುರರೂ ಹೊಂಚು ಹಾಕುತ್ತಿದ್ದರು. ಏಕೆಂದರೆ ಆ ಮಂತ್ರವು ತಮ್ಮ ಬಚಾವಿಗಾಗಿಯೇ ಶುಕ್ರಾಚಾರ್ಯರು ಸಂಪಾದಿಸಿಕೊಂಡಿದ್ದು. ಅದು ತಮ್ಮ ವಿರುದ್ಧದ ಒಂದು ಸನ್ನಾಹ ಎಂದು ಅವರಿಗೆ ಗೊತ್ತಿರಬೇಕು. ಅದಕ್ಕಾಗಿ ಅವರು ಅವನನ್ನು ಎರಡು ಸಾರಿ ಕತ್ತರಿಸಿ ಹಾಕಿದರು. ಆಗ ದೇವಯಾನಿಯು ತನ್ನ ತಂದೆಯ ಹತ್ತಿರ ಅವನನ್ನು ಮೃತ ಸಂಜೀವಿನಿ ಮಂತ್ರದಿಂದ ಬದುಕಿಸಿ ಎಂದು ಗೋಗರೆದಳು. ಏಕೆಂದರೆ ಅವಳು ಅಷ್ಟರ ಮಟ್ಟಿಗೆ ಅವನ ಭ್ರಮೆಯಲ್ಲಿ ಮುಳುಗಿದ್ದಳು. ಮಗಳ ಮಾತಿನಂತೆ ಶುಕ್ರಾಚಾರ್ಯ ಅವನನ್ನು ಎರಡು ಸಾರಿಯೂ ಬದುಕಿಸಿದ. ಇದನ್ನು ಕಂಡುಕೊಂಡ ರಾಕ್ಷರರು ಶುಕ್ರಾಚಾರ್ಯನ ಮೇಲೆ ಸಿಟ್ಟು ಮಾಡಿಕೊಂಡು ಮೂರನೆಯ ಸಲ ಕಚನನ್ನು ಕೊಂದು ಅವನ ದೇಹವನ್ನು ಉಳಿಸದೆ ಸುಟ್ಟು ಬೂದಿ ಮಾಡಿ ಮದ್ಯದಲ್ಲಿ ಹಾಕಿ ಶುಕ್ರಾಚಾರ್ಯರಿಗೇ ಕುಡಿಸಿದರು. ಏಕೆಂದರೆ ಆ ಮಂತ್ರದಿಂದ ಅವನನ್ನು ಬದುಕಿಸಲು ಹೊರಟರೆ ಅವರ ಹೊಟ್ಟೆ ಸೀಳಿ ಅವರೇ ಸಾಯುತ್ತಾರೆ. ಅದರಿಂದ ಅವರು ಅವನನ್ನು ಇನ್ನು ಬದುಕಿಸುವುದಿಲ್ಲ ಎನ್ನುವುದು ಅವರ ಯೋಚನೆ . ಅಂದು ಸಂಜೆ ಮನೆಗೆ ಬಾರದ ಕಚನನ್ನು ಅಂದೂ ಅವನು ಮತ್ತೆ ಸತ್ತಿರಬೇಕು ಎನ್ನುವುದನ್ನು ಗ್ರಹಿಸಿ ಅವನನ್ನು ಬದುಕಿಸಿಕೊಡಬೇಕೆಂದು ದೇವಯಾನಿ ಪುನಃ ತನ್ನ ತಂದೆಯನ್ನು ಕಟುವಾಗಿ ಒತ್ತಾಯಿಸಿದಳು. ಏಕೆಂದರೆ ಒಂದು ದಿನವೂ ಅವನನ್ನು ಬಿಟ್ಟು ಇರಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಮಗಳ ಒತ್ತಾಯಕ್ಕೆ ಮಣಿದು ಶುಕ್ರಾಚಾರ್ಯರು ಕಚನು ತನ್ನ ಹೊಟ್ಟೆಯಲ್ಲಿಯೇ ಇರುವುದನ್ನು ತಿಳಿಯದೆ ಸಂಜೀವಿನಿ ಮಂತ್ರವನ್ನು ಉಚ್ಚರಿಸುತ್ತಿರುವಾಗ ಅವರ ಹೊಟ್ಟೆಯಿಂದಲೇ ಕಚನು ' ನಾನು ನಿಮ್ಮ ಹೊಟ್ಟೆಯಲ್ಲಿಯೇ ಇದ್ದೇನೆ , ಹೇಗೆ ಹೊಟ್ಟೆಯನ್ನು ಸೀಳಿಕೊಂಡು ಬರಲಿ ' ಎನ್ನುತ್ತಾನೆ. ಆಗ ಶುಕ್ರಾಚಾರ್ಯರು ಹೊಟ್ಟೆಯಲ್ಲಿದ್ದ ಕಚನಿಗೆ ಮೃತಸಂಜೀವಿನಿ ಮಂತ್ರೋಪದೇಶ ಮಾಡಿದರು. ಆಚಾರ್ಯ ದೇಹದಿಂದ ಹೊರಬಂದು ಅವರಿಂದ ತಾನು ಪಡೆದ ಮಂತ್ರದ ಬಲದಿಂದ ಮರಳಿ ಅವರನ್ನು ಬದುಕಿಸುತ್ತಾನೆ. ಅಲ್ಲಿಗೆ ಕಚನಿಗೆ ತಾನು ಅಲ್ಲಿಗೆ ಬಂದ ಉದ್ದೇಶ ನೆರವೇರುತ್ತದೆ. ತಂದೆಯ ಮಾತಿನಂತೆ ಶುಕ್ರಾಚಾರ್ಯನುಗೆ ನಿಷ್ಟನಾಗಿದ್ದುದು ಹಾಗೆಯೇ ಅವನ ಮಗಳಿಗೆ ಸಂತೋಷವಾಗುವಂತೆ ತಾನು ನಡೆದುಕೊಂಡಿದ್ದು ಸಫಲವಾಗುತ್ತದೆ. ಮಾತಿನಂತೆ ಗಳಿಸಿದ ವಿದ್ಯೆಯ ಯಶಸ್ವಿ ಪ್ರಯೋಗವೂ ಅಲ್ಲಿಯೇ ನಡೆಯುತ್ತದೆ. ಆಚಾರ್ಯರ ಒಪ್ಪಿಗೆ ಪಡೆದು ದೇವಲೋಕಕ್ಕೆ ಮರಳಲು ಅಣಿಯಾಗುತ್ತಾನೆ.
ತಾರೀಖು : 9 - 7 - 2020
No comments:
Post a Comment
Note: only a member of this blog may post a comment.